ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Wednesday, February 22, 2006

ಜಯಂತ್-ಕಾರ್ನಾಡ್-ಬೇಂದ್ರೆ-ನಮಸ್ಕಾರ



ಕೆಲ ತಿಂಗಳುಗಳ ಹಿಂದಿನ ಸಂಗತಿ. ಈ ಬಾರಿಯ 'ಬೇಂದ್ರೆ ಮಾಸ್ತರ್-ಗೆ ನಮಸ್ಕಾರ' ಮಾಲಿಕೆಯಲ್ಲಿ ಗಿರೀಶ್ ಕಾರ್ನಾಡ್-ರನ್ನು ಜಯಂತ್ ಮಾತುಕತೆಯಲ್ಲಿ ತೊಡಗಿಸುತ್ತಾರೆ, ರಂಗಶಂಕರದಲ್ಲಿ ಚಿತ್ರೀಕರಿಸಲ್ಪಟ್ಟಿರುವ ಸಂಚಿಕೆಯಲ್ಲಿ ಕಾರ್ನಾಡ್ ಚೆನ್ನಾಗಿ ಮಾತನಾಡಿದ್ದಾರೆ, ಅತ್ಯುತ್ತಮವಾದ ಸಂದರ್ಶನದಲ್ಲಿ ಇದೂ ಒಂದು ಎಂಬಿತ್ಯಾದಿ ಮಾಹಿತಿಗಳಿರುವ ಈ-ಮೈಲ್ ಒಂದನ್ನು ನನ್ನ ಸ್ನೇಹಿತರು ಕಳಿಸಿದ್ದರು. ನೋಡುವ ಅವಕಾಶ ಕಳೆಯಬಾರದು ಎಂದು ನಿರ್ಧರಿಸಿಕೊಂಡಿದ್ದೆ.

ಇದೇ ಸಂದರ್ಭದಲ್ಲಿ ಜಯಂತರ ಮತ್ತು ಈ-ಟಿ.ವಿ.ಯ 'ನಮಸ್ಕಾರ' ಮಾಲಿಕೆಯ ಕುರಿತು ನಾಲ್ಕು ಮಾತು ಹೇಳಲೇಬೇಕು. ಕುವೆಂಪುರವರ ಕುರಿತಾದ ಮಾಲಿಕೆಯಿಂದ ಆರಂಭವಾದ ಕಾರ್ಯಕ್ರಮದ ಕುರಿತು ಮೊದಲು ಯಾವ ನಿರೀಕ್ಷೆಯೂ ಇರಲಿಲ್ಲ, ಭರವಸೆಯ ಬಗ್ಗೆ ತೀವ್ರವಾಗಿ ಯೋಚಿಸಿರಲಿಲ್ಲ, ಕುತೂಹಲ ಖಂಡಿತವಾಗಿ ಇತ್ತು. ಈ ತೆರನಾದ ಕಾರ್ಯಕ್ರಮವೇ ಇದು ಮೊದಲು. ೮೦-ರ ದಶಕದ ಅಂಚಿನಲ್ಲಿ ರಾಷ್ಟ್ರೀಯ ದೂರದರ್ಶನದಲ್ಲಿ ಪ್ರತಿ ಭಾನುವಾರ ಭಾರತೀಯ ಚಲನಚಿತ್ರ ರಂಗದ ಪಿತಾಮಹರ ಕುರಿತು ಒಂದು ಮಾಲಿಕೆ ಬರುತ್ತಿತ್ತು, ಇದಕ್ಕಿಂತ ಸ್ವಲ್ಪ ಭಿನ್ನವಾಗಿ. ೯೦-ರ ದಶಕವಂತೂ ಬಂಜರು ಭೂಮಿಯೇ ಸರಿ. ಹೀಗಾಗಿ, ಕುವೆಂಪು ಮಾಲಿಕೆಯನ್ನು ಇಷ್ಟಪಟ್ಟು ನೋಡಿದ್ದು ನಿಜ. ಜಯಂತರ ತಯಾರಿ ಎದ್ದು ಕಾಣುತ್ತಿತ್ತು. ಅನೇಕರು ಚೆನ್ನಾಗಿ ಪ್ರಾಮಾಣಿಕವಾಗಿ ಮಾತನಾಡಿದರು. ಆದರೂ, ದಕ್ಷಿಣ ಕರ್ನಾಟಕದವರಾದ ನಮಗೆ ಕುವೆಂಪು ಮತ್ತು ಮಾಸ್ತಿ, ಕಾರಂತ ಮತ್ತು ಬೇಂದ್ರೆಗಿಂತ ಹೆಚ್ಚು ಪರಿಚಿತರು. ಅದರಲ್ಲೂ ಕುವೆಂಪು ಕುರಿತು ದಾಖಲಾಗಿರುವ ಮಾಹಿತಿ ಬೇಂದ್ರೆಯವರಿಗಿಂತಲೂ ಹೆಚ್ಚು. ಕಾರ್ಯಕ್ರಮ ತನ್ನ ಪರಿಚಿತತೆಯನ್ನು ಮೀರಲಿಲ್ಲ, ಮುಖ್ಯವಾದ ಒಳನೋಟಗಳು ಸಿಗಲಿಲ್ಲವೆನ್ನಿಸಿತು. ಅದಕ್ಕಿಂತ ಹೆಚ್ಚಾಗಿ ಹೇಳಲು ನನ್ನ ಮಟ್ಟಿಗಂತೂ ಏನು ಇಲ್ಲ. ಈ ಮೊದಲು ಜಯಂತ್ ಈ ಟಿ.ವಿ.ಯಲ್ಲಿ ವಾರದ ೫ ದಿನಗಳೂ ಪ್ರಸಾರವಾಗುವ ಸಾಂದರ್ಶನ ಮಾಲಿಕೆಯೊಂದನ್ನು ನಡೆಸಿದ್ದರು. ಅದೂ ಸಹ ಯಶಸ್ವಿ ಎನ್ನುವ ಹಾಗಿಲ್ಲ ಸೋಲು ಎನ್ನುವ ಹಾಗಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುತ್ತಿದ್ದೇನೆ. ಪೂರ್ತಿಯಾಗಿ ಇನ್ನೂ ಸಿಕ್ಕಿಲ್ಲ. ಅರ್ಧದ ಆಲೋಚನೆಗಳು ತಪ್ಪು ವ್ಯಾಖ್ಯಾನಕ್ಕೆ ಎಡೆ ಮಾಡಿಕೊಡುವ ಅಪಾಯದ ಕಾರಣ ಇದನ್ನು ಇಷ್ಟಕ್ಕೇ ನಿಲ್ಲಿಸಿದ್ದೇನೆ. ಆದರೆ ನಿಸ್ಸಂಶಯವಾಗಿ ಈ ಕಾರ್ಯಕ್ರಮವನ್ನು ನಡೆಸಲು ಸಾಂಸ್ಕೃತಿಕವಾಗಿ ಜಯಂತ್ ಸರಿಯಾದ ವ್ಯಕ್ತಿಯಾಗಿದ್ದರು.

ಆದರೆ ನಂತರ ಬಂದ 'ಕಡಲತೀರದ ಭಾರ್ಗವನಿಗೆ ನಮಸ್ಕಾರ' ಇದಕ್ಕೆ ತದ್ವಿರುದ್ಧವಾಗಿ ವಾರದಿಂದ ವಾರಕ್ಕೆ ಬೆಳೆದು ಕಾರಂತರಷ್ಟೇ ಎತ್ತರಕ್ಕೇರುವ ಮಹತ್ವಾಕಾಂಕ್ಷೆ ಪ್ರದರ್ಶಿಸಿತು. ಕೆ.ವಿ.ಸುಬ್ಬಣ್ಣನವರ ಸಂದರ್ಶನದಿಂದ ಆರಂಭಗೊಂದು ಅವರ ಕಾರ್ ಡ್ರೈವರ್ ಆನಂದರವರೆಗೆ ಎಲ್ಲರೂ ಕಾರಂತರ ವ್ಯಕ್ತಿತ್ವದ ಅನೇಕ ತುಣುಕುಗಳನ್ನು ಅವೆಲ್ಲವುಗಳ ಒಟ್ಟು ಮೊತ್ತವಾಗಿ ಅವರಿಡೀ ವ್ಯಕ್ತಿತ್ವವನ್ನು ಅನುಭವಕ್ಕೆ ತಂದುಕೊಳ್ಳಲು ಸಾಧ್ಯವಾಯಿತು. ಒಂದೇ ರಾಗವನ್ನು ಬೇರೆ ಬೇರೆ ನೆಲೆಗಳಿಂದ ಏರುವ ರೀತಿಯಲ್ಲಿ.

ಇದರ ಪರಿಣಾಮವಾಗಿ ಮುಂದಿನ ಕಾರ್ಯಕ್ರಮಗಳಿಗೆ ಒಂದು ಬೆಂಚ್-ಮಾರ್ಕ್ ಸ್ಥಾಪಿತವಾಗಿಬಿಟ್ಟಿತು. ನನ್ನ ಮಟ್ಟಿಗಂತೂ ಬೇಂದ್ರೆ ಮಾಸ್ತರ್ ಕುರಿತ ಕಾರ್ಯಕ್ರಮದ ವಿಷಯ ಕೇಳಿ ಖುಷಿ, ಆತಂಕ ಎಲ್ಲವೂ ಆಗಲಿಕ್ಕೆ ಆರಂಭವಾಗಿತ್ತು. ಖುಷಿ ಸಹಜವೇ, ಇದೇನಾದರೂ ನಿರೀಕ್ಷೆಯ ಮಟ್ಟಕ್ಕೆ ತಲುಪದಿದ್ದರೆ ಏನು ಗತಿ ಎನ್ನುವ ಆತಂಕವಿತ್ತು. ಆದರೆ ಈವರೆಗೆ ಬಂದಿರುವ ಸಂದರ್ಶನಗಳಲ್ಲಿ ಯಾವುದೂ ತೀರಾ ತೋಪಾಗಲಿಲ್ಲ. ಎನ್.ಕೆ.ಯವರ ಸಂದರ್ಶನವಂತೂ ಅತ್ಯುತ್ತಮ ಶ್ರದ್ಧಾಂಜಲಿಯಾಗಿತ್ತು ಬೇಂದ್ರೆ-ಗೆ. ಈಗ ಅದರ ನೆನಪು ಎನ್.ಕೆ.ಯವರಿಗೆ ಶ್ರದ್ಧಾಂಜಲಿ. ಕಡೆಗೆ ಎನ್.ಕೆ. 'ನಾನೇನೋ ಮಾತಾಡಿದೆ ಜಯಂತ್, ನೀನೇ ಎಲ್ಲಾ ನೋಡ್ಕೊಂಡು ಕಾರ್ಯಕ್ರಮ ಚೆನ್ನಾಗಿ ಬರೋ ಹಾಗೆ ಮಾಡಪ್ಪ' ಎಂದದ್ದು ನೋಡಿ ನನಗೆ 'ಜಯಂತರು ಈ ದೃಶ್ಯವನ್ನೇನಾದರೂ ಎಡಿಟ್ ಮಾಡಿಬಿಟ್ಟಿದ್ದರೆ ಅವರಿಗೆ ಖಂಡಿತಾ ರೌರವ ನರಕ ಪ್ರಾಪ್ತಿಯಾಗುತ್ತಿತ್ತು' ಎಂದು ಅವರ ಮೇಲೆ ಮೆಚ್ಚುಗೆ ಮೂಡಿತು. ಸುಬ್ಬಣ್ಣ ಒಂದು ಕಡೆ 'ಮನುಷ್ಯತ್ವವನ್ನೇ ತಟ್ಟಿ ಮಾತನಾಡಿಸುವ' ಎಂದಿದ್ದಾರೆ ಬೆನೆವಿಟ್ಜ಼್ ಬಗ್ಗೆ. ನಾಣಿ ಕಾಕಾರ ಧ್ವನಿಯಲ್ಲಿ ಅಂತಹ ಕಳಕಳಿಯಿತ್ತು. ರಾಘವೇಂದ್ರ ರಾಯರು, ಜಿ.ಎಸ್.ಅಮೂರ್, ಮತ್ತಿನ್ನೂ ಅನೇಕರು, ಅಷ್ಟೇಕೆ, ಸ್ವತಃ ವಾಮನ ಬೇಂದ್ರೆ, ಸಮಾಜಪುಸ್ತಕಾಲಯದ ಸ್ಥಾಪಕರು ಎಲ್ಲರೂ ಅತ್ಯಂತ ಸಹಜವಾಗಿ, ಪ್ರಾಮಾಣಿಕವಾಗಿ ಮಾತನಾಡಿದ್ದಾರೆ.

ಹೀಗಿರುತ್ತಲ್ಲಿ, ಕಾರ್ನಾಡ್ ಬಂದರೆ ಖುಷಿಯಾಗದಿರುತ್ತದೆಯೇ. ಕಾರ್ಯಕ್ರಮದ ಕುರಿತಾಗಿ ಮತ್ತು ನೆಪವಾಗಿ ನನ್ನಲ್ಲಿ ಮೂಡಿದ ಕೆಲ ವಿಚಾರಗಳನ್ನು ಈ ಕೆಳಗೆ ಕೊಟ್ಟಿದ್ದೇನೆ. ಈ ಎಲ್ಲವನ್ನೂ ಹಿಂದೆ ಸ್ನೇಹಿತರಿಗಾಗಿ ಬರೆದದ್ದು.

ಮಾಲಿಕೆಯನ್ನು ರೂಪಿಸಿರುವ ಜಯಂತರು ಮತ್ತು ಹಿರಿಯರಾದ ಕಾರ್ನಾಡರು

ಕಾರ್ಯಕ್ರಮ ಗಮನಾರ್ಹವಾಗಿತ್ತು ಎನ್ನುವುದು ವಿಶೇಷವೇನಲ್ಲ. ಸಾಮಾನ್ಯ ವಿಶೇಷಗಳನ್ನು ಮೀರಿದ ಕೆಲ ವಿಶೇಷಗಳಿದ್ದವು. ಕಾರ್ನಾಡ್, ಜಯಂತ್ ಇಬ್ಬರೂ ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿ ಮೆಚ್ಚುವಂತಿತ್ತು. ನಮ್ಮ ಸಾಹಿತಿಗಳಲ್ಲೆಲ್ಲಾ ಕಾರ್ನಾಡರಿಗೆ ಒಂದು ಸ್ಟಾರ್ ವಾಲ್ಯೂ ಇದೆ. ಕಾರ್ಯಕ್ರಮದ ಟಿ.ಆರ್.ಪಿ. ಯಶಸ್ಸಿಗೆ ಇದು ಮುಖ್ಯವಾಗಬಹುದಾದರೂ, ಇದರ ಅಪಾಯಗಳು ನಮಗೆ ಗೊತ್ತಿಲ್ಲದ್ದೇನಲ್ಲ. ಸ್ವತಃ ಕಾರ್ನಾಡರೇ ಇದನ್ನು ಬಲ್ಲರು. [೭೦ರ ದಶಕದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಂಕಿರಣವೊಂಡರಲ್ಲಿ ಲಂಕೇಶ್ ಇದೇ ಅಪಾಯವನ್ನು ಪ್ರಸ್ತಾಪಿಸುತ್ತಾ ಸುರೇಶ್ ಅವಸ್ಥಿಯವರ ಜೊತೆಗಿನ ಸಂವಾದದಲ್ಲಿ ಕಾರ್ನಾಡರು ಇದನ್ನು ನಿರ್ವಹಿಸುವ ರೀತಿಯನ್ನು ಮೆಚ್ಚಿದ್ದಾರೆ. ಕಾರ್ನಾಡ್ ತಮ್ಮನ್ನು ತಾವೇ ಸ್ಟಾರ್ ಎಂದುಕೊಂಡಿಲ್ಲ ಎಂದು ಹೇಳಿದ್ದಾರೆ.] ಗಮನ ತಮ್ಮೆಡೆಗೆ ಹೆಚ್ಚು ಸೆಳೆಯದಂತೆ ನಿರ್ವಹಿಸಿದರು. ತಮ್ಮ ಕವಿತೆಗಳ ಕುರಿತು ಮಾತು ಬಂದಾಗ ತೇಲಿಸಿಬಿಟ್ಟರು. ಕುವೆಂಪು ಕುರಿತಾದ ಮಾಲಿಕೆಯಲ್ಲಿ ಮೊದಲ ಮಾತುಕತೆಯಾದ್ದು ಕಾರ್ನಾಡರ ಜೊತೆಯಲ್ಲೇ ಎನ್ನುವುದು ಕೂಡಾ ಅವರ ಸ್ಟಾರ್ ವಾಲ್ಯೂ-ಗೆ ನಿದರ್ಶನ. ಅಲ್ಲೂ ಕೂಡ ಕಾರ್ನಾಡ್ ತಮ್ಮ ಎಚ್ಚರ ಮೆರೆದರು. ಲಂಕೇಶ್ ಹೇಳುವಂತೆ ತಮಗಿರುವ ಸ್ಟಾರ್ ವಾಲ್ಯು-ನ ಅರಿವಿದ್ದೂ ತಮ್ಮನ್ನು ತಾವು ಸ್ಟಾರ್ ಎಂದು ಕಾರ್ನಾಡ್ ಸೀರಿಯಸ್ಸಾಗಿ ಅಂದುಕೊಂಡಿಲ್ಲ. ತುಂಬಾ ಬುದ್ಧಿವಂತರು. [ನನ್ನ ಪ್ರಕಾರ ಇಲ್ಲಿ ಬುದ್ಧಿವಂತರೆಂದರೆ ಸ್ಟಾರ್ ವಾಲ್ಯೂ ತಮ್ಮ ಬೆಳವಣಿಗೆಗೆ ಮಾರಕ ಎನ್ನುವ ಅರಿವು.]

ಇಷ್ಟೆಲ್ಲಾ ಹೇಳಿದ ಮೇಲೆ ಕಾರ್ನಾಡ್ ತುಂಬ ಇಮೇಜ್ ಕಾನ್ಸ್-ಷಿಯರ್ ಎಂದು ನನಗೆ ಯಾವಾಗಲೂ ಅನ್ನಿಸಿರುವುದನ್ನು ಹೇಳದಿರುವಂತಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ತೋರುವ ಬಿಗು, ಟರ್ನಿಂಗ್ ಪಾಯಿಂಟ್-ನಲ್ಲಿ ಅವರು ಮೆರೆದ ರೀತಿ, ರಂಗಶಂಕರದ ಪ್ರಾರಂಭ ಸಮಾರಂಭದಲ್ಲಿ ಮಾತನಾಡಿದ ರೀತಿ, ದೇಶಕಾಲದ ಬಿಡುಗಡೆ, ಟಿ.ವಿ./ಪತ್ರಿಕೆ ಸಂದರ್ಶನ ಇತ್ಯಾದಿ ಇತ್ಯಾದಿಗಳೆಲ್ಲ ಅವರು ಒಂದು ಲೆಕ್ಕಾಚಾರದ ವ್ಯಕ್ತಿತ್ವ ಪ್ರದರ್ಶಿಸುತ್ತಾರೆ. ಇದು ಹೀಗಿರಬೇಕು ಎಂದು ನಿರ್ಧರಿಸಿದರೆ ಅದನ್ನು ಮೀರುವ ಪ್ರಕ್ರಿಯೆಗಳಿಗೆ ಕಡಿವಾಣ ಹಾಕುವ ಅವರ ಪ್ರಯತ್ನ ಯಾವಾಗಲೂ ಕಂಡುಬರುತ್ತದೆ. ಅವರ ಸಾರ್ವಜನಿಕ ಸಂಕೋಚ, ವಿನಯಗಳಲ್ಲೂ ಒಂದು ಬಗೆಯ ಕಾಸ್ಮೊಪಾಲಿಟನ್ ಗತ್ತು, ಅಹಂ ಇರುತ್ತದೆ. [ಇದ್ಯಾವುದನ್ನೂ ನೇತ್ಯಾತ್ಮಕವಾಗಿ ನಾನು ಹೇಳುತ್ತಿಲ್ಲ.]

ಆದರೆ ಕಾರ್ನಾಡ್ ಕಾರ್ಯಕ್ರಮದಲ್ಲಿ ಅಲ್ಲಲ್ಲಿ ಸ್ವತಃ ಅದನ್ನು ಮೀರಿದರು. ಅವರು ವಿವರಿಸಬೇಕಾದ ಪ್ರಸಂಗಗಳು ಅದನ್ನು ಅವರಿಗೆ ಅನಿವಾರ್ಯವಾಗಿಸಿಬಿಟ್ಟವು. ಬೇಂದ್ರೆಯವರ ವ್ಯಕ್ತಿತ್ವ, ಜಯಂತರ ಸಹೃದಯತೆ, ವಿಶ್ವಾಸ ಕಾರ್ನಾಡರು ತಮ್ಮ ಎಚ್ಚರದ ನಡುವೆ ಭಿನ್ನ ಅವಸ್ಥೆಗಳನ್ನು ಮುಟ್ಟುವಂತಾಯ್ತು. ಆದ್ದರಿಂದ ಮೂವರಿಗೂ ನಮಸ್ಕಾರ. ಅಲ್ಲದೇ, ಕನ್ನಡದಲ್ಲಿ ಮಾತನಾಡುವಾಗಲೆಲ್ಲಾ ಕಾರ್ನಾಡ್ ಹೆಚ್ಚು ಅಪ್ಯಾಯಮಾನರಾಗಿ ಸ್ನೇಹಜೀವಿಗಳಾಗಿ ಕಾಣುತ್ತಾರೆ, ಇಂಗ್ಲೀಷ್-ನಲ್ಲಿ ಮಾತನಾಡಿದಾಗ ಮಾತ್ರ ಅವರು ಬೇರೆಯದೇ ವ್ಯತ್ಕಿಯೇನೋ, ಇವರಿಗೂ ನಮಗೂ ಸಂಬಂಧವೇ ಇಲ್ಲವೇನೋ ಎನ್ನುವ ಹೆದರಿಕೆಯಾಗುತ್ತದೆ. ಇದೂ ಕೂಡಾ ಕಾರ್ಯಕ್ರಮದಲ್ಲಿ ಅನುಭವಕ್ಕೆ ಬರುವಂತಿತ್ತು.

ಕಾರ್ಯಕ್ರಮದ ಅತಿ ಮುಖ್ಯ ಅಂಶವೆಂದರೆ ಕಾರ್ನಾಡ್ ಬೇಂದ್ರೆಯ ವಿವಿಧ ಮುಖಗಳನ್ನು ವಿವರಿಸಿ, ವಿವಾದಾಸ್ಪದವಾಗಬಹುದಾದ್ದನ್ನು ಹೇಳುವಲ್ಲಿ ಹಿಂಜರಿಯದೇ, ವಿವಾದವಾಗುವಷ್ಟು ಎಳೇಯದೇ ಅವುಗಳನ್ನು ನಿರ್ವಹಿಸಿದ್ದು. ಭಿನ್ನಾಭಿಪ್ರಾಯಗಳನ್ನು ಮಂಡಿಸಿದ ರೀತಿಯನ್ನೂ ಮೆಚ್ಚಿದೆ. ಯಾವುದನ್ನೂ ಅಗತ್ಯಕ್ಕಿಂತ ಹೆಚ್ಚು ವಿಸ್ತರಿಸಲಿಲ್ಲ. ಅನೇಕ ಒಳನೋಟಗಳನ್ನು ಕೊಟ್ಟರು. ಅಂತಹ ಸಮಯದಲ್ಲೂ ಬೌದ್ಧಿಕ ಅಹಂಕಾರವನ್ನು ತೋರ್ಪಡಿಸದೇ ಇರುವಲ್ಲಿ ಯಶಸ್ವಿಯಾದರು.

ಕಾರ್ಯಕ್ರಮಕ್ಕೆ ಅರ್ಧ ಘಂಟೆ ಏನೇನೂ ಸಾಲದೆನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತಾದರೂ, ಇವಿಷ್ಟರಲ್ಲಿ ಇಬ್ಬರೂ ಬೇಂದ್ರೆಯನ್ನು ದಟ್ಟವಾಗಿ ಮನಮುಟ್ಟುವಂತೆ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾದರು. ಇಲ್ಲಿ ಜಯಂತರು ಮತ್ತು ಅವರ ನಿರ್ವಹಣೆಯ ಕುರಿತು ಎರಡು ಮಾತು ಹೇಳಬೇಕಾದ್ದು ಅತ್ಯಗತ್ಯ.

ಈ-ಟಿ.ವಿ-ಯ ತಮ್ಮ ಮೊದಲ ಸಂದರ್ಶನ ಕಾರ್ಯಕ್ರಮ ಅಷ್ಟೇನೂ ಯಶಸ್ವಿಯಾಗದಿದ್ದರೂ, ಜಯಂತ್ ಅದರಿಂದ ಬಹಳ ಬೇಗ ಕಲಿತರು ಎನ್ನುವುದು ಮುಖ್ಯ ಅಂಶ. ಅಲ್ಲಿನ ಕೊರತೆಗಳನ್ನು ಇಲ್ಲಿ ಬೆಳೆಸಹೋಗುವುದಿಲ್ಲ. ನಮಸ್ಕಾರ ಮಾಲಿಕೆಯಲ್ಲಿ ಅದನ್ನೆಲ್ಲಾ ತಿದ್ದಿಕೊಂಡಿದ್ದಾರೆ. ಅತಿಥಿಗಳಿಗೆ ಜಾಸ್ತಿ ಮಾತನಾಡುವ ಅವಕಾಶ, ಕಡಿಮೆ ಮಧ್ಯಪ್ರವೇಶ ಇತ್ಯಾದಿ ಪ್ರಾಥಮಿಕ ನಿಯಮಗಳನ್ನೆಲ್ಲಾ ಚೆನ್ನಾಗಿ ಪಾಲಿಸುತ್ತಾರೆ ಎನ್ನುವುದಷ್ಟೇ ಈ ಮಾಲಿಕೆಯ ಯಶಸ್ಸಿಗೆ ಕಾರಣವಲ್ಲ. ಜಯಂತ್-ಗಿರುವ ಎದ್ದು ಕಾಣುವ ಪ್ರಾಮಾಣಿಕ ಸಹೃದಯತೆ, ಕನ್ನಡತನದ ವೈಶಿಷ್ಟ್ಯವಾದ ಒಳಗೊಳ್ಳುವಿಕೆ, ಕನ್ನಡ ಸಂಸ್ಕೃತಿ ಮತ್ತು ವ್ಯಕ್ತಿಗಳ ಜೊತೆಗಿನ ಆಳವಾದ ಸಾಂಸ್ಕೃತಿಕ ಪರಿಚಯ ಇವೆಲ್ಲ ಇಂತಹ ಮಹತ್ತರ ಮಾಲಿಕೆಯನ್ನು ಪ್ರಜ್ಞೆಯ ಮಟ್ಟದಲ್ಲಿ ನಿರ್ವಹಿಸಬಲ್ಲ ಅಪರೂಪದ, ಬೆರಳೆಣಿಕೆಯ ಜನರಲ್ಲಿ ಅವರನ್ನು ಒಬ್ಬರನ್ನಾಗಿಸಿದೆ. ಈ ಸದ್ಯಕ್ಕೆ ಬೇರೆಯವರು ನನ್ನ ಜ್ಞಾಪಕಕ್ಕೆ ಬರುತ್ತಿಲ್ಲ. ಕರಿಯರಿಸ್ಟ್-ಸಂದರ್ಶಕರು ನಮ್ಮಲ್ಲಿ ಅನೇಕರಿದ್ದಾರೆ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಬೇಕಾದ ಸಾಂಸ್ಕೃತಿಕ ಪ್ರಜ್ಞೆ ಜಯಂತರಿಗೆ ವಿಶೇಷವಾದ್ದು. ಅಲ್ಲದೇ ಅವರೊಬ್ಬ ಸೃಜನಶೀಲ ಲೇಖಕರು ಎನ್ನುವುದೂ ಸಹ ಇಲ್ಲಿ ಪಾತ್ರವಹಿಸಿದೆ, ಮಾಲಿಕೆ ನಮ್ಮ ಅನುಭವಕ್ಕೆ ಬರುವುದು ಈ ಎಲ್ಲಾ ಕಾರಣಗಳಿಂದ.

ಈ ಮಾಲಿಕೆಯನ್ನು ಮುಂದುವರೆಸಿ ಮಾಸ್ತಿ, ಗೋಕಾಕ್ ಅಲ್ಲದೇ ನಮಗಿನ್ನೂ ಸರಿಯಾಗಿ ದಕ್ಕಿಲ್ಲದ ಅನೇಕ ನವೋದಯ ಕಾರಣ ಪುರುಷರನ್ನು ಪರಿಚಯಿಸಬಹುದಾಗಿದೆ. ಜಯಂತ್ ಈ ನಿಟ್ಟಿನಲ್ಲಿ ಆಲೋಚಿಸುತ್ತಾರೆ ಎನ್ನುವುದು ನನ್ನ ಆಶಾವಾದ. ಕಾರ್ಯಕ್ರಮ ಯಶಸ್ವಿಯಾಗಿ ಒಂದು ಮಟ್ಟದ ಹೆಸರು ಬಂದಿರುವುದರಿಂದ ಅಷ್ಟೇನೂ ಹೆಸರುವಾಸಿಯಾಗಿರದ ಆದರೆ ಸಾಂಸ್ಕೃತಿಕವಾಗಿ ಮುಖ್ಯರಾದ ವ್ಯಕ್ತಿಗಳೆಡೆಗೆ ನಮ್ಮ ಗಮನ ಸೆಳೆಯಬಹುದಾಗಿದೆ. ಇದೆಲ್ಲ ನಮ್ಮ ಸಾಮುದಾಯಿಕ ಸ್ಮೃತಿಯ ಮರುಗಳಿಕೆಯಾಗಬಹುದಾಗಿದೆ.

ಈ ಎಲ್ಲಾ ಕಾರಣಗಳಿಗಾಗಿ ಜಯಂತ್ ಹಾಗೂ ಈ-ಟಿ.ವಿ.-ಗೆ ನಮಸ್ಕಾರ.

ಸಂದರ್ಶನ ನನ್ನಲ್ಲುಳಿದ ಬಗೆ

ಕಾರ್ಯಕ್ರಮ ನನ್ನಲ್ಲಿ ಉಳಿದದ್ದನ್ನು ಈ ಕೆಳಗೆ ಕೊಟ್ಟಿದ್ದೇನೆ. ಇದರ ಗೊತ್ತು ಗುರಿಯನ್ನು ಆಲೋಚಿಸಲು ಹೋಗಿಲ್ಲ. ಜನರಿಗೇನನ್ನಿಸುವುದೋ ನೋಡಬೇಕಿದೆ.

ನಮಸ್ಕಾರ ಎಂದು ಜಯಂತ್ ಆರಂಭಿಸಿ ಧಾರವಾಡದ ಮಾಯಗಾರನ ಕುರಿತು ಮತ್ತೊಬ್ಬ ಧಾರವಾಡದ ಮಾಯಗಾರನ ಮಾತುಗಳು ಎಂದು ಗಿರೀಶರನ್ನು ಸ್ವಾಗತಿಸಿದರು, ಶಂಕರ್ ನಾಗ್ ನೆನಪಿನ ರಂಗಶಂಕರದ ಆವರಣದಲ್ಲಿ. [ಉತ್ತರ ಕನ್ನಡದ ಶಂಕರ್ ಟಿ.ವಿ.ಯಲ್ಲಿ ಅದ್ವಿತೀಯವಾದ ಮಾಲ್ಗುಡಿ ಡೇಸ್ ಮಾಡಿದ್ದಷ್ಟೇ ಪ್ರಮುಖವಾದ ಕಾರ್ಯ ನಮ್ಮ ಜಯಂತರದ್ದು, ಮತ್ತವರದ್ದು ಅದೇ ಹಿನ್ನೆಲೆ. ಶಂಕರ್ ಬದುಕಿದ್ದರೆ ಜಯಂತರ ಒಂದು ಕಥೆಯನ್ನೇನಾದರೂ ಸಿನೆಮಾವೋ, ಧಾರಾವಾಹಿಯಾಗಿಯೋ ಮಾಡಿಬಿಡುತ್ತಿದ್ದರು ಎನ್ನುವ ಆಲೋಚನೆ ವಿನಾಕಾರಣ ಸುಳಿದು ಒಂದಿಷ್ಟು ದುಃಖ ಕೊಟ್ಟಿತು.]

'ಬೇಂದ್ರೆ ಎಂದರೇನು' ಎನ್ನುವ ಪ್ರಶ್ನೆಯಿಂದ ಜಯಂತ್ ಶುರುಮಾಡಿದರು. 'ಇದೇನು, ಹೊಗಳಿಕೆಯ ಹೊನ್ನಶೂಲವೋ, ಆದರೂ ಕಾರ್ನಾಡ್ ಇದ್ದಾರಲ್ಲ ಬಿಡು' ಎಂದುಕೊಂಡೆ. ಕಾರ್ನಾಡ್ ಉತ್ತರಿಸುತ್ತಾ ಧಾರವಾಡದ ಮೂರು ಜಾಗಗಳು ಮನೋಹರಗ್ರಂಥಮಾಲ, [ಮತ್ತೊಂದು] ಮತ್ತು ಬೇಂದ್ರೆ, ಅಂದರೆ ಅವರ ಮನೆ, ಸಾಹಿತ್ಯ ಪ್ರೇಮಿಗಳಿಗೆ ಪ್ರಿಯವಾದ ತಾಣಗಳಾಗಿದ್ದವು. ಅದರಲ್ಲೂ ಬೇಂದ್ರೆಯವರ ಮನೆ ಎಲ್ಲರಿಗೂ ತೆರೆದಿತ್ತು ಎಂದು ವಿವರಿಸಿದರು. ಧಾರವಾಡದ ಇಡೀ ಭೂಗೋಳ, ಭೂಪಟವನ್ನೇ ಅವರು ತಮ್ಮ ಕವಿತೆಗಳಲ್ಲಿ ಒಳಗೊಂಡಿದ್ದು, ಒಂದು ರೀತಿಯಲ್ಲಿ ಧಾರವಾಡದ ಸಂಸ್ಕೃತಿಯ ನಿರ್ಮಾತೃವಾಗಿದ್ದರು ಎಂದರು.

ಮಾತು ಮಹಾಕಾವ್ಯಗಳತ್ತ ತಿರುಗಿದವು. ಇಂತಿದ್ದ ಬೇಂದ್ರೆ ಮಹಾಕಾವ್ಯ ರಚಿಸದಿದ್ದರೂ ಅವರ ಒಟ್ಟೂ ಕವಿತೆಗಳನ್ನು ಮಹಾಕಾವ್ಯ ಎಂದು ಖಂಡಿತ ಪರಿಗಣಿಸಬಹುದು ಎನ್ನುವುದರಲ್ಲಿ ಇಬ್ಬರ ಸಹಮತವಿತ್ತು. [ಅಖಿಲಕರ್ನಾಟಕದ ಮಹಾಜನತೆಯ ಸಹಮತವಿರುತ್ತೆ - ಲೇಖಕ]. ಬೇಂದ್ರೆಯವರೂ ಇದನ್ನೇ ಸೂಚಿಸಿದ್ದರು ಎಂದು ಜಯಂತ್ ನೆನೆದರು. ಕಾರ್ನಾಡ್ ಇಲ್ಲಿ ಮಹಾಕಾವ್ಯ ರಚಿಸುವ ಇತರರಂತೆ ಬೇಂದ್ರೆ ಸಹಜ ವಾತಾವರಣದಿಂದ ಬೇರ್ಪಟ್ಟು ದೂರದ ಪರ್ಣಕುಟಿಯಲ್ಲೆಲ್ಲೋ ರಚಿಸಲಿಲ್ಲ, ಜೀವನದಿಂದ ಅವರೆಂದೂ ವಿಮುಖರಾಗಲಿಲ್ಲ ಎಂದು ಗಮನಿಸಿದರು. [ಕಾರ್ನಾಡ್ ಪ್ರಾಯಶಃ ವಾಲ್ಮೀಕಿ ಪರಂಪರೆಯ ಕುರಿತು ಈ ಮಾತು ಹೇಳಿದರೇನೋ. ನಾನು ಸೂಚಿಸುತ್ತಿರುವುದು ಓದುಗರಿಗೆ ಅರ್ಥವಾಗುತ್ತೆ. ಆದರೆ ಅವರ ಧ್ವನಿಯಲ್ಲಿ ಮ್ಯಾಟರ್-ಆಫ಼್-ಫ್ಯಾಕ್ಟ್ ಅಂಶವಿತ್ತೇ ಹೊರತು ಒಂದಿನಿತೂ ವ್ಯಂಗ್ಯವಿರಲಿಲ್ಲ ಎನ್ನುವುದು ನನಗೆ ಮೆಚ್ಚುಗೆಯಾಗಿತ್ತು.]

ಬೇಂದ್ರೆಯವರ ಜೀವನಪ್ರೇಮದ ಕುರಿತು ಮಾತು-ಹೊರಳಿ, ತಾವು ವಾಕಿಂಗ್ ಹೊರಟ ಸಂದರ್ಭದಲ್ಲಿ ಗಂಡ-ಹೆಂಡಿರ ಜಗಳಾವೊಂದು ಬೀದಿಗೆ ಬಂದಿದ್ದಾಗ ಅದರ ಪರಿಹಾರಕ್ಕೆ ಸ್ವತಃ ಬೇಂದ್ರೆಯವರೇ ನಿಂತದ್ದು, ಸಾರ್ವಜನಿಕವಾಗಿಬಿಟ್ಟಿದ್ದ ವೈಯಕ್ತಿಕ ಜಗಳವೊಂದರ ಪರಿಹಾರಾರ್ಥ ತಮ್ಮ ಮಧ್ಯಸ್ತಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು ಮಾತುಕತೆಯಲ್ಲಿ ಬಂತು. ಬೇಂದ್ರೆಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಯಾರೋ ಒಬ್ಬ ಮಾಸ್ತರು ಇವರಿಗೆ ಇನಾಮು ಬಂದಿದೆ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದಾಗ ಬೇಂದ್ರೆ ಸಿಟ್ಟಿನಿಂದ ಇನಾಮಿಗೂ ಪ್ರಶಸ್ತಿಗೂ ಇರುವ ವ್ಯತ್ಯಾಸ ವಿವರಿಸಿದ್ದು - ಇತ್ಯಾದಿ ಸರಳ-ಸಾಮಾನ್ಯ ವಿಷಯಗಳ ಜೊತೆಗೆ ಅವರಿಗಿದ್ದ ನಿಕಟ ಬಾಂಧವ್ಯದ ಪ್ರಸ್ತಾಪವಾಯಿತು.

ಬೇಂದ್ರೆಯವರ ಜೊತೆಗೆ ಗಿರೀಶರ ಸಂಬಂಧಕ್ಕೆ ಮಾತುಕತೆ ಸಹಜವಾಗಿಯೇ ಹೊರಳಿಕೊಂಡಾಗ ಗಿರೀಶರು ಆಕ್ಸ್ಫರ್ಡಿನಲ್ಲಿ ಬೇಂದ್ರೆಯವರ ಕವಿತೆಯೊಂದನ್ನು ಅನುವಾದಿಸಿ ಓದಿದ ಪ್ರಸಂಗದ ಪ್ರಸ್ತಾಪವಾಯಿತು. ಕಾರ್ನಾಡರು ಹೆಚ್ಚಿನ ಬೇಂದ್ರೆ ಪದ್ಯಗಳನ್ನು ಅನುವಾದಿಸಲಾಗುವುದಿಲ್ಲ. ಆಡ್ದರಿಂದ ಹುಡುಕಿ ಹುಡುಕಿ 'ಬೀದಿನಾಯಿ......' ಪದ್ಯವನ್ನು ಆರಿಸಿ ಓದಿದೆ ಎಂದು ಅದರ ಅನುವಾದವನ್ನು ನೆನಪಿನಿಂದ ಓದಿ ತಮಗಿನ್ನೂ ನೆನಪಿರುವುದನ್ನು ಅನುಭವಿಸಿ ಖುಷಿಪಟ್ಟರು.

ಜಯಂತ್ ಈ ಹಂತದಲ್ಲಿ ಜಿ.ಬಿ.ಜೋಷಿಯವರ ಕುರಿತು ಪ್ರಸ್ತಾಪಿಸಿದರು. ಅವರ ಮತ್ತು ಬೇಂದ್ರೆಯವರ ನಡುವಿನ ಗುರು-ಶಿಷ್ಯ ಸಂಬಂಧವನ್ನು ಇಬ್ಬರೂ ಚರ್ಚಿಸಿದರು. ಗೆಳೆಯರ ಬಳಗ, ಕೀರ್ತಿನಾಥ ಕುರ್ತಕೋಟಿ ಮತ್ತು ಬೇಂದ್ರೆಯವರ ಸಂಬಂಧಗಳನ್ನು ನೆನೆದರು. ಕಾರ್ನಾಡ್ ತಾವು ಬೇಂದ್ರೆಯವರ ಬಗ್ಗೆ ತಯಾರಿಸಿದ ಸಾಕ್ಷ್ಯಚಿತ್ರದಲ್ಲಿ ಬೇಂದ್ರೆ ಕಡೆಗೆ ಒಂದು ಸಂದೇಶ ಓದಿದ್ದನ್ನು ನೆನಪಿಸಿ, ಅದನ್ನು ನಿಜವಾಗಿ ಬರೆದದ್ದು ಕುರ್ತಕೋಟಿ ಎನ್ನುವುದರೆಡೆಗೆ ಗಮನ ಸೆಳೆದರು. ಕೀರ್ತಿ ಬರೆದದ್ದನ್ನು ಬೇಂದ್ರೆ ಒಪ್ಪುತ್ತಿದ್ದರು ಎಂದರು. ಜಯಂತ್ ಸವೇಳೆಯಲ್ಲಿ ರಾಮಾನುಜನ್ ಹೇಳುತ್ತಿದ್ದಂತೆ ಬೇಂದ್ರೆಯವರು ಬರೆದ ಹಾಗೂ ಬರೆಯದ ಕವಿತೆಗಳೂ ಕುರ್ತಕೋಟಿಯವರಿಗೆ ತಿಳಿದಿರುತ್ತಿತ್ತು ಎಂದು ಆಶ್ಚರ್ಯಿಸಿದ್ದನ್ನು ಪ್ರಸ್ತಾಪಿಸಿದರು. ಅಷ್ಟೇ ಅಲ್ಲದೆ ಮಳೆ, ಕೊಡೆ, ಬೇಂದ್ರೆ, ಕುರ್ತಕೋಟಿ ಈ ಪ್ರತಿಮೆಗಳಿರುವ ಸಂಕೀರ್ಣ-ಪ್ರತಿಮೆಯೊಂದರ ಕುರಿತು ಏನೋ ಹೇಳಿದರು. ಕಾರ್ನಾಡ್ ಜಾಸ್ತಿ ಗಮನ ಕೊಡದೇ ಸ್ವಲ್ಪವೇ ನಕ್ಕು ಮುಂದಿನ ಮಾತಿಗೆ ಮುಂದುವರೆದದ್ದು ಕಂಡಿತು. ಆಗ ಮನೆಯಲ್ಲಿ ಮಕ್ಕಳು, ಸ್ವಲ್ಪ ಗಲಾಟೆ ಮಾಡಿದ್ದರಿಂದ ಆ ಕೆಲ ಕ್ಷಣಗಳು ಗಮನ ಮಕ್ಕಳೆಡೆಗೆ ಹರಿದು ಅವರನ್ನು ಸುಮ್ಮನಾಗಿಸಿದೆ. 'ನೋಡಿ ಅಲ್ಲಿ ಗಿರೀಶ್ ಕಾರ್ನಾಡ್ ಮಾತಾಡುತ್ತಿದ್ದಾರೆ' ಎಂದು ಅವರನ್ನೂ ಎಳೆದು ಕೂರಿಸಿದೆ.

ವಿವರಣೆ, ವಿಶ್ಲೇಷಣೆಯೆಂದಾಗ ಬೇಂದ್ರೆಯವರ 'ಪಾತರಗಿತ್ತಿ ಪಕ್ಕ' ಕವಿತೆಯ ಕಡೆಗೆ ಮಾತು ಚಿಮ್ಮಿತು. ಜಯಂತ್ ಮೈಸೂರಿನ ಜನ ಅದನ್ನು 'ಸ್ತ್ರೀ, ಸೂಳೆ' ಯೊಬ್ಬಳ ಕುರಿತಾದ್ದು ಎಂದು ಗಮನಿಸಿದ್ದು, ಆದರೆ ಬೇಂದ್ರೆ/ಕುರ್ತಕೋಟಿ ಮತ್ತು ಧಾರವಾಡದ ಇತರ ಕಡೆ ಅದು ಚಿಟ್ಟೆಗೆ ಸಂಬಂಧಿಸಿದ್ದು ಎಂದು ಹಠ ಹಿಡಿದದ್ದು, ಅದೊಂದು ಸಣ್ಣ ವಿವಾದವಾದ್ದೆಲ್ಲವನ್ನೂ ನೆನೆದರು. ಕಾರ್ನಾಡ್ ಈ ಸಂದರ್ಭದಲ್ಲಿ ಬೇಂದ್ರೆಯವರಲ್ಲಿದ್ದ ತುಂಟತನದ ಸ್ವಭಾವದ ಕಡೆಗೆ ಗಮನ ಸೆಳೆದರು. ತಮಗಂತೂ ಬೇಂದ್ರೆ ಅದನ್ನು 'ಸ್ತ್ರೀ, ಸೂಳೆ' ಕುರಿತಾಗಿ ಬರೆದದ್ದೆಂದೇ ಈಗಲೂ ಅನ್ನಿಸಿದೆ. ಕವಿತೆಯ ಧ್ವನಿ, ಬಳಸಿರುವ ಪದಗಳು, ಕವಿತೆ ಬೆಳೆಯುವ ರೀತಿ ನೋಡಿ ಎಂದರು. [ನನಗಂತೂ ಇದನ್ನು ಕೇಳಿ ಸಿಕ್ಕಾಪಟ್ಟೆ ರಿಲೀಫ್ ಆಯಿತು. ಈ ವಿವಾದ ನನ್ನನ್ನು ಬಹಳ ಕೀಳರಿಮೆಯಿಂದ ಬಳಲುವಂತೆ ಮಾಡಿತ್ತು, ಕಾವ್ಯದ ವಿಷಯದಲ್ಲಿ. ಕವಿತೆಗಳು ನನಗೆ ಗ್ರಹಿಕೆಗೆ ಸಿಗೋಲ್ಲ ಎನ್ನುವ ಭಯಕ್ಕೆ ಬಿದ್ದಿದ್ದೆ.] ಬೇಂದ್ರೆ ತುಂಬಾ ಸೆನ್ಸ್-ಷುಅಸ್ ಆದ ಕವಿ. ಆ ತೆರನಾದ್ದು ಕಂಬಾರರಲ್ಲಿ ಮಾತ್ರ ಈಗ ಕಾಣುತ್ತೇವೆ ಎಂದರು. [ಕಾರ್ನಾಡ್ ಸಮಕಾಲೀನರಿಗೆ ಅಂಜಲಿ ಅರ್ಪಿಸುವ ರೀತಿ ನೋಡಿ. ಅಲ್ಲದೇ ಕಂಬಾರ ಮತ್ತು ಬೇಂದ್ರೆ ಇಬ್ಬರಲ್ಲೂ ಗ್ರಾಮೀಣ, ಜಾನಪದದ ಪ್ರಭಾವ ಅಪಾರ ಎನ್ನುವುದೂ ಗಮನಾರ್ಹ.] ಬೇಂದ್ರೆಯವರ ಸ್ಫುರದ್ರೂಪಿತನವೂ ಪ್ರಾಸಂಗಿಕವಾಗಿ ಪ್ರಸ್ತಾಪವಾಯಿತು. ಮುಂದುವರೆದ ಕಾರ್ನಾಡ್ ಬೇಂದ್ರೆ 'ಸ್ತ್ರೀ'ಯ ವಿವಿಧ ಪ್ರತಿಮೆಗಳನ್ನು ಅನನ್ಯ ಎಂಬಂತೆ ತಮ್ಮ ಕವಿತೆಗಳಲ್ಲಿ ಚಿತ್ರಿಸಿದ್ದಾರೆ ಎಂಡರು. ವಿಷಯ ತಮಾಷೆಗೆ ಹೊರಳಿ, ಬೇಂದ್ರೆ 'ಪ್ರತಿದಿನವೂ ಸೂಳೆಯರ ಸಾಲೊಂದು, ಬ್ರಾಹ್ಮಣರ ಸ್ತ್ರೀ-ಯರ ಸಾಲೊಂದು ಧಾರವಾಡದಲ್ಲಿ ನಿಲ್ಲುತ್ತದೆ. ಸೂಳೆಯರು ಯಾವಯಾವ ಬ್ರಾಹ್ಮಣ ಗಂಡಸು ಯಾವ ಯಾವ ಸೂಳೆಯ ಮನೆಗೆ ಇಂದು ಹೋಗುತ್ತಾರೆ ಎಂದು ಲೆಕ್ಕ ಹಾಕುತ್ತಾರೆ. ಅಂತೆಯೇ ಬ್ರಾಹ್ಮಣ ಸ್ತ್ರೀಯರು ಯಾವ ಯಾವ ಮನೆಯ ಗಂಡಸು ಇಂದು ಯಾವ ಸೂಳೆಯ ಮನಗೆ ಹೋಗಬಹುದು ಎಂದು ಲೆಕ್ಕ ಹಾಕುತ್ತಾರೆ' ಎನ್ನುತ್ತಿದ್ದುದನ್ನು ಪ್ರಸ್ತಾಪಿಸಿದರು. ಇಬ್ಬರೂ ನಕ್ಕು ಮುಂದಿನ ವಿಷಯಗಳತ್ತ ನಡೆದರು.

ಈ ಎಲ್ಲಾ ವಿವರಗಳು ಸ್ವಾಭಾವಿಕವಾಗಿ ಬೇಂದ್ರೆಯವರ ಜೀವನಾಸಕ್ತಿಯನ್ನು ಮಧ್ಯಕ್ಕೆ ತಂದಿತು. ಅದಕ್ಕೆ ನಿದರ್ಶನವಾಗಿ ಕಾರ್ನಾಡ್ 'ಕಲ್ಪವೃಕ್ಷ ವೃಂದಾವನ...' ಪದ್ಯವನ್ನು ಓದಿ ಏನೆಲ್ಲ ವಿಷಯಗಳು ಪದ್ಯದಲ್ಲಿ ಬಂದಿವೆ ಎಂದು ಆಶ್ಚರ್ಯ ಪಟ್ಟು ಹರ್ಷಿಸಿದರು.

ಪಕ್ಕನೆ ವಿಷಯ ಹೊರಳಿ ಬೇಂದ್ರೆಯವರ ಪ್ರಭಾವದ ಪರಿಣಾಮಗಳೆಡೆ ಹೊರಟಿತು. ಜಯಂತ್ ಈ ಕುರಿತು ಪ್ರಸ್ತಾಪಿಸಿದರು. ಕಾರ್ನಾಡ್ ಸ್ಪಷ್ಟವಾಗಿ ಗೆಳೆಯರ ಬಳಾಗದ ಅನೇಕ ಕವಿಗಳ ಮೇಲೆ ಬೇಂದ್ರೆ ಪ್ರಭಾವ ಪ್ರತಿಕೂಲ/ಅಪಾಯಕಾರಿ ಪರಿಣಾಮ ಬೀರಿತು. ಬೇಂದ್ರೆಯವರ ಮುಂದೆ ಭಿನ್ನಾಭಿಪ್ರಾಯ ಬೆಳೆಸಿಕೊಳ್ಳಲಾಗದೇ ಹೋದವರು, ಹೆಚ್ಚು ಬೆಳೆಯದೇ ನಾಶವಾದರು. ಬೇಂದ್ರೆಯವರ ಒಂದು ಬಗೆಯ ಡಿಕ್ಟೇಟರ್ ಸ್ವಭಾವ ಮಿಕ್ಕವರನ್ನು ಅವನ್ನು ಅನುಕರಿಸಲು ಪ್ರೇರೇಪಿಸಿಬಿಟ್ಟಿತು ಎಂದರು. [ಈ ಹಂತದಲ್ಲಿ ನನಗೆ ಶಂ.ಬಾ. ಜ್ಞಾಪಕ ಬಂದು, ಅವರು ತಮ್ಮ ಬೆಳವಣಿಗೆಗೆ ಬೇಂದ್ರೆಯವರೊಡನೆ ಅಂತಹ ವಿರೋಧ ಸ್ಥಾಪಿಸಿಕೊಂಡರೋ ಅನ್ನಿಸಿತು. ಹಾಗೆಯೇ ಯಾವ ಗುಂಪಿಗೂ ಸೇರದೇ ಕಾರ್ನಾಡ್ ಒಬ್ಬಂಟಿಯಾಗಿ ನಿಂತದ್ದು ಕೂಡಾ ಜ್ಞಾಪಕ ಬಂತು. ಅದೆಲ್ಲಕ್ಕಿಂತಲೂ, ದಕ್ಷಿಣ ಕರ್ನಾಟಕದಲ್ಲಿ ಬಿ.ಎಮ್.ಶ್ರೀ ಆಗಲೀ, ಮಾಸ್ತಿಯವರಾಗಲೀ, ಟಿ.ಎಸ್.ವೆಂಕಣ್ಣಯ್ಯನವರಾಗಲೀ ಅಗಾಧ ಪ್ರತಿಭೆಗಳಾಗಿದ್ದೂ ತಮ್ಮ ಅಡಿಯಲ್ಲಿ ಮಿಕ್ಕವರು ನಾಶವಾಗದ ಹಾಗೆ ಬದುಕಿದ್ದು ಕೂಡಾ ಗಮನಾರ್ಹ ಅನ್ನಿಸಿದೆ.]

ಇದೇ ಸಂದರ್ಭದಲ್ಲಿ ಕಾರ್ನಾಡ್ ಬೇಂದ್ರೆಯವರಲ್ಲಿದ್ದ ತುಂಟತನ/ಕುಚೋದ್ಯವನ್ನು ಮತ್ತೆ ನೆನೆದು, ಅದು ತಮ್ಮ ಮೇಲೂ ಪ್ರಯೋಗವಾದ್ದನ್ನು ಪ್ರಸ್ತಾಪಿಸಿದರು. ಕಾರ್ನಾಡ್ ೧೬-ನೇ ವಯಸ್ಸಿನಲ್ಲಿ ತಮ್ಮ ಕವನವೊಂದನ್ನು ಬೇಂದ್ರೆಗೆ ತೋರಿಸಲು ಹೋದರಂತೆ. ಅದರ ತುಂಬಾ ಎಕ್ಸಿಸ್ಟೆನ್ಶಿಯಲಿಸಂ ಮುಂತಾದ ತತ್ವಜ್ಞಾನವೇ ತುಂಬಿತ್ತಂತೆ. ಅದನ್ನು ಓದಿ ಬೇಂದ್ರೆ ನಸುನಗುತ್ತಾ ಭಾಗವೊಂದನ್ನು ತೋರಿಸಿ 'ಇದನ್ನು ದಪ್ಪಕ್ಷರದಾಗೆ ಪ್ರಕಟಿಸು' ಎಂದಿದ್ದರಂತೆ. 'ಸದ್ಯ ನನಗೆ ಸ್ವಲ್ಪ ಬುದ್ಧಿಯಿತ್ತು ಹಾಗೆ ಮಾಡಲಿಲ್ಲ' ಎಂದು ಕಾರ್ನಾಡ್ ನಿರಾಳವಾಗಿ ನಕ್ಕರು. ಜಯಂತ್ ನಂತರ ಎಚ್ಚರ ತಪ್ಪಿ (ಅಥವಾ ಅತಿಯಾದ ಎಚ್ಚರದಿಂದ) 'ಆ ಮುಂದೆ ನೀವು ಪದ್ಯಗಳನ್ನೇ ಬರೆಯಲಿಲ್ಲ' ಎಂದರು. ಕಾರ್ನಾಡ್ 'ಅದಕ್ಕೆ ಬೇರೆ ಕಾರಣಗಳಾಯಿತು' ಎಂದು ಆ ಮಾತನ್ನು ಅಲ್ಲಿಗೇ ಮೊಟಕುಗೊಳಿಸಿ, ನಗುತ್ತಾ ಆ ಮಾತೇ ಬರಲಿಲ್ಲವೆಂಬಂತೆ 'ಮುಂದಿನ ವಿಷಯ' ಎಂದು ನಸು ನಕ್ಕು ನಾಚಿ ಕೂತರು. ಬೇಂದ್ರೆಯವರ ಕುಚೋದ್ಯದ ವಿಷಯಗಳು ಮುಂದುವರೆದು, ಅವರು ಕುಚೋದ್ಯದಿಂದ ಹಾಸ್ಯ ಮಾಡಿ ಬರೆದದ್ದನ್ನು ಕೆಲ ಸಾಹಿತಿಗಳು 'ಆಶೀರ್ವಾದ' ಎನ್ನುವಂತೆ ತಮ್ಮ ಪುಸ್ತಕದ ಮುನ್ನುಡಿಗಳಾಗಿ ಅಳಾವಡಿಸಿಕೊಂಡು ಪ್ರಕಟಿಸಿದ್ದನ್ನು ಕಾರ್ನಾಡ್ ನೆನೆದರು.

ಬೇಂದ್ರೆಯವರು ಪದಗಳನ್ನು ತಮ್ಮ ಕವಿತೆಗಳಲ್ಲಿ ಬಳಸುತ್ತಿದ್ದ ರೀತಿ ಪ್ರಸ್ತಾಪವಾಗಿ ಜಯಂತ್ 'ತುಂತುಂತುಂತುಂ...ಶರಣ' ದಲ್ಲಿನ ನಾಟಕೀಯ ಪ್ರಜ್ಞೆಯ ಕುರಿತು ಆಶ್ಚರ್ಯ ಪಟ್ಟರು. ಕಾರ್ನಾಡ್ ಅಗ 'ತಲೆದಂಡ' ಎನ್ನುವ ನಾಟಕವೊಂದನ್ನು ಬೇಂದ್ರೆ ಬರೆಯಲು ಬಯಸಿದ್ದರಂತೆ. ಅದಕ್ಕೋಸ್ಕರವೇ ಈ ಕವಿತೆ ಬರೆದಿದ್ದರಂತೆ ಎಂದು ಹೇಳಿ ತಮ್ಮ ನಾಟಕದ ಮೂಲ ಸ್ಫೂರ್ತಿ ಇಲ್ಲೇ ಸಿಕ್ಕಿದ್ದು ಎಂದು ಹೇಳಿದರು. ಮತ್ತೊಮ್ಮೆ ಬೇಂದ್ರೆಯವರನ್ನು 'ಒಳ್ಳೆಯ ನಟ' ಎಂದರು. ಜಯಂತ್ ಅವರ 'ಆಶುನಾಟಕ' ಪ್ರತಿಭೆಯನ್ನು ಪ್ರಸ್ತಾಪಿಸಿ ಅದರ ಕೆಲವು ನಿದರ್ಶನಗಳನ್ನು ವಿಷಯಕ್ಕೆ ತಂದರು. ಕಾರ್ನಾಡ್ ಹೆಚ್ಚು ವಿಷಯ ಬೆಳೆಸಲಿಲ್ಲ. ಜಯಂತ್ ಬೇಂದ್ರೆಯ 'ಟೂ' ಕವನ ಪ್ರಸ್ತಾಪಿಸಿ ಅವರ ಕವನಗಳಲ್ಲಿನ ನಾಟಕೀಯ ಅಂಶಗಳತ್ತೆ ಮತ್ತೆ ಹೊರಳಿದರು. ಆ ಕವನದಲ್ಲಿ ಭಾಷಾಪ್ರಯೋಗದ ನಾಟಕೀಯತೆ ಕುರಿತು ಇಬ್ಬರೂ ಒಂದೆರಡು ಮಾತಾಡಿದರು. ಈ ಹಂತದಲ್ಲಿ ಜಯಂತ್ 'ನಾಟಕಕಾರರಾಗಿ ಬೇಂದ್ರೆ' ಎಂಬ ವಿಷಯಕ್ಕೆ ಬಂದು ನಿಂತರು. ಕಾರ್ನಾಡ್ ಮತ್ತೆ ಸ್ಪಷ್ಟವಾಗಿ 'ಅವರು ಒಳ್ಳೆಯ ನಟರಿದ್ದರು. ಆದರೆ ಅವರರು ಒಳ್ಳೆಯ ನಾಟಕಕಾರರು ಎಂದು ನನಗನ್ನಿಸುವುದಿಲ್ಲ. ಕೆ.ವಿ.ಅಕ್ಷರ ಮುಂತಾದವರೆಲ್ಲಾ ಈ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ. ಆದರೆ ನನಗೆ ಹಾಗನ್ನಿಸೋಲ್ಲ' ಎಂದರು.

ಮುಂದೆ 'ತುಘಲಕ್' ಕುರಿತು ಮಾತು ನಡೆಯಿತು. 'ತುಘಲಕ್' ಉದ್ಘಾಟನೆ ಧಾರವಾಡದಲ್ಲಿ ನಡೆದಾಗ ತುಂಬ ಪ್ರೀತಿಯಿಂದಲೇ ಬೇಂದ್ರೆ ಬಂದಿದ್ದರು. ಈ ಒಂದು ವಿಷಯದಲ್ಲಿ ಕಾರ್ನಾಡ್ ತಮ್ಮನ್ನು ಅದೃಷ್ಟಶಾಲಿ ಎಂದರು. ನವಿರಾದ ಹೆಮ್ಮೆ ಗಮನಕ್ಕೆ ಬರುತ್ತಿತ್ತು. ತುಘಲಕ್ ಓದಿದ್ದ ಬೇಂದ್ರೆ ಅದನ್ನು ತುಂಬಾ ಮೆಚ್ಚಿಕೊಂಡು ಹೊಗಳಿದ್ದರು. ಕಾರ್ನಾಡರನ್ನು ಮನಗೆ ಕರೆಸಿ ಹರಸಿದ್ದರು. ಈ ತೆರನಾಗಿ ಅವರು ಹೊಗಳಿ, ಮನೆಗೆ ಕರೆಸಿದ್ದು ಇಬ್ಬರನ್ನೇ ಒಬ್ಬರು ಕಾರ್ನಾಡ್ ಮತ್ತೊಬ್ಬರು ಪುಣೇಕರ್. ಪುಣೇಕರರ 'ಗಂಗವ್ವ ಗಂಗಾಮಾಯಿ' ಅವರಿಗೆ ತುಂಬಾ ಇಷ್ಟವಾಗಿತ್ತು ಎಂದರು.

ತುಘಲಕ್ ಬಿಡುಗಡೆ ಸಮಾರಭದಲ್ಲಿ ಧಾರವಾಡದಲ್ಲಿ ಒಂದು ಸಣ್ಣ ವಿವಾದವೂ ಆಗಿತ್ತು. ಗೋಕಾಕ್ 'ಮನೋಹರ ಗ್ರಂಥಮಾಲೆಗೆ' ಒಂದು ಪತ್ರ ಬರೆದಿದ್ದರು. ಅದಕ್ಕೆ ಉತ್ತರವನ್ನು ರಾಮ್ ಜೋಶಿ ಬರೆದಿದ್ದರು. ಆಗಿನ್ನೂ ಚಿಕ್ಕವರಾಗಿದ್ದ ರಾಮ್ ಜೋಷಿ ಪತ್ರ ಬರೆದರೆಂದು ಗೋಕಾಕ್ ಸಿಡಿಮಿಡಿಗೊಂಡಿದ್ದರು. ಉದ್ಘಾಟನೆಗೆ ಬರುವುದಿಲ್ಲವೆಂದಿದ್ದರು. ಇದು ಬೇಂದ್ರೆಯವರಿಗೆ ಅರ್ಧ ತಿಳಿದು [ಗೋಕಾಕ್-ಗೆ ಏನೋ ಅವಮಾನವಾಗಿದೆ ಎನ್ನ್ನು ರೀತಿಯಲ್ಲಿ] ತಾವೂ ಬರುವುದಿಲ್ಲವೆಂದು ಕೂತುಬಿಟ್ಟರು. ನಂತರ ಕುರ್ತಕೋಟಿಯವರ ಸಹಾಯದಿಂದ ಬೇಂದ್ರೆಯವರನ್ನು ಕಂಡು 'ಮೊದಲು ಪತ್ರ ಬರೆದದ್ದು ಗೋಕಾಕರೇ' ಎಂದಾಗ 'ಹೌದಾ, ಗೋಕಾಕ್-ನೇ ಮೊದಲು ಬರೆದದ್ದಾ, ಹಾಗಿದ್ರೆ ಬರತೇನೆ' ಎಂದು ತಕ್ಷಣ ತಯಾರಾದರು ಎಂದು ಕಾರ್ನಾಡ್ ವಿವರಿಸಿದರು. ಬೇಂದ್ರೆಯವರನ್ನು ಅನುಕರಿಸಿ ಕಾರ್ನಾಡ್ ಮಾತನಾಡಿದ ರೀತಿಯಲ್ಲಿ ತಮ್ಮ ಬಿಗುವನ್ನು ಸ್ವಲ್ಪ ಸಡಿಲಿಸಿದ್ದು ಗಮನಿಸದೇ ಇರುವಂತಿರಲಿಲ್ಲ. ಇದೇ ಸಂದರ್ಭದಲ್ಲಿ ಬೇಂದ್ರೆ ಪುಸ್ತಕಗಳ ಸಾಲಿನಲ್ಲಿ 'ತುಘಲಕ್'-ನ ಬಗ್ಗಿ ಬಗ್ಗಿ ಹುಡುಕುತ್ತಿದ್ದ ರೀತಿಯನ್ನೂ ಅಭಿನಯಿಸಿ ತೋರಿದ ಕಾರ್ನಾಡ್ ಒಂದರೆಘಳಿಗೆ ಮಗುವಾದರು.

ಮುಂದುವರೆದ ಕಾರ್ನಾಡ್ 'ಬೇಂದ್ರೆಯವರಿಗೆ ಬಹಳ ಬೇಗ ನೋವಾಗುತ್ತಿತ್ತು, ಆದ್ದರಿಂದ ಜಗಳಕ್ಕೆ ನಿಲ್ಲುತ್ತಿದ್ದರು' ಎಂದರು. ಸಾಮಾನ್ಯವಾಗಿ 'ಬೇಂದ್ರೆಯವರ ಜಗಳಗಂಟತನ ಕರ್ನಾಟಕದಲ್ಲಿ ವಿಶ್ವಪ್ರಸಿದ್ಧವಾಗಿದೆ. ಎಲ್ಲರೂ ಅದೊಂದು ಬಗೆಯ ಅವರ ಮೂಲಭೂತ ಸ್ವಭಾವ ಎನ್ನುವ ವಿಶ್ಲೇಷಣೆ ಅಥವಾ ಕಾಮ್ಪ್ರೊಮೈಸ್-ಗಷ್ಟೇ ಸೀಮಿತಗೊಂಡಿದ್ದರೆ, ಕಾರ್ನಾಡ್ ಸ್ವಲ್ಪ ಆಳಕ್ಕಿಳಿದು 'ಅವರಿಗೆ ನೋವಾಗುತ್ತಿತ್ತು' [ಯಾವ ಕಾರಣಕ್ಕಾಗಿಯಾದರೂ ಸರಿಯೇ] ಎಂದಿದ್ದು ನನಗೆ ತುಂಬಾ ಮೆಚ್ಚಿಗೆಯಾಯಿತು. ಕಾರ್ನಾಡ್ ಯಾಕೆ ನಮ್ಮ ಅತ್ಯುತ್ತಮ ನಾಟಕಕಾರರಾಗಿದ್ದಾರೆ ಎಂಬುದಕ್ಕೊಂದು ನಿದರ್ಶನ ಅಥವಾ ಒಳನೋಟ ಸಿಗುತ್ತದೆ ಇಲ್ಲಿ. [ಇದೇ ಸಂದರ್ಭದಲ್ಲಿ ಅನಂತಮೂರ್ತಿಗಳು ತಮ್ಮ ಒಂದು ಪ್ರಬಂಧದಲ್ಲಿ ವರ್ತಕರೊಬ್ಬರ ತುಂಬಾ ಸಹಜವಾದ ಮಾತಿನಿಂದ ನೊಂದ ಬೇಂದ್ರೆ ಸಿಡಿಮಿಡಿಗೊಂದು ತುಂಬಾ ರೇಗಾಡಿದ್ದನ್ನು, ಅದನ್ನೆಲ್ಲಾ ಒಂದಿಷ್ಟೂ ಬೇಜಾರಿಲ್ಲದೆ ಕೇಳಿಸಿಕೊಂಡು 'ಅಶೀರ್ವಾದ' ಎಂಬಂತಿದ್ದ ವರ್ತಕರನ್ನು ನೆನೆದು 'ನನಗೆ ತುಂಬಾ ಮೆಚ್ಚುಗೆಯಾದರೂ' ಎಂದು ಅನಂತಮೂರ್ತಿ ಪ್ರಸ್ತಾಪಿಸಿರುವುದು ಜ್ಞಾಪಕಕ್ಕೆ ಬರುತ್ತಿದೆ.]

ತುಂಬಾ ಜವಾಬ್ದಾರಿಯಿಂದ ಕಾರ್ನಾಡ್ ಮತ್ತೊಂದು ಸೂಕ್ಷ್ಮ ವಿಷಯ ಪ್ರಸ್ತಾಪಿಸಿದರು. ಬೇಂದ್ರೆಗೆ ತಾವೆಲ್ಲಿ ಹುಚ್ಚರಾಗಿಬಿಡಬಹುದೋ ಎನ್ನುವ ಆತಂಕವಿತ್ತು, ಮತ್ತು ಅವರ ಜೀನಿಯಸ್-ನ ಅಂಶದ ಮೂಲವೂ ಅದರಲ್ಲೆಲ್ಲೋ ಇತ್ತು, ಹತ್ತಿರದವರಲ್ಲಿ ತಮ್ಮ ಮನೆತನದಲ್ಲಿ ಹುಚ್ಚುತನದ ಎಳೆಯೊಂದಿದ್ದನ್ನು ಹೇಳಿಕೊಂಡಿದ್ದರು ಎನ್ನುವ ಮಾತನ್ನು ಕಾರ್ನಾಡ್ ಪ್ರಸ್ತಾಪಿಸಿದರು. ಇದನ್ನು ಚುಟುಕಾಗಿ ಹೇಳಿ ಹೆಚ್ಚು ಹೊತ್ತು ವಿಷಯದಲ್ಲಿ ನಿಲ್ಲದೇ ಕಾರ್ನಾಡ್ ಚಕ್ಕನೆ ಸಹಜ ಮುಂದುವರಿಕೆಯ ವಿಷಯಗಳತ್ತೆ ನೆಗೆದರು. ಜಯಂತರೂ ಅಷ್ಟೇ ಜವಾಬ್ದಾರಿಯಿಂದ ವಿಷಯವನ್ನು ಎಳೆಯದೇ ಮುಂದುವರೆದರು. [ಎಡಿಟಿಂಗ್ ಕೂಡಾ ಇಲ್ಲಿ ಮೆಚ್ಚಬೇಕಾದ್ದು.]

ಕಾರ್ನಾಡ್ ತಾವು ಬೇಂದ್ರೆ ಮನೆಗೆ ಹೋದಾಗಲೆಲ್ಲಾ ಕುರ್ತಕೋಟಿಯವರನ್ನು ಕರೆದುಕೊಂಡು ಹೋಗುತ್ತಿದ್ದುದನ್ನು ನೆನೆದರು. ಅವರ ಮಾತಿನ ಓಘ ತಡೆದುಕೊಳ್ಳುವುದು ಕಷ್ಟವಾಗುತ್ತಿತ್ತು. ಏನಾದರೂ ವಿಷಯ ತೆಗೆದು 'ಇದಕ್ಕೆ ನೀನೇನಂತಿ' ಎಂದುಬಿಟ್ಟರೆ ಕೈಕಾಲಾಡುತ್ತಿರಲಿಲ್ಲ. ಅವರನ್ನು ತಹಬದಿಗೆ ತರಲು ಕುರ್ತಕೋಟಿಗೆ ಮಾತ್ರ ಸಾಧ್ಯವಾಗುತ್ತಿತ್ತು ಎಂದರು. ಇದೆಲ್ಲಾ ಹೇಳುವಾಗ ಕಾರ್ನಾಡ್ ಅನೇಕ ವರ್ಷಗಳ ಹಿಂದಿನವರಂತೆ ಕಾಣುತ್ತಿದ್ದರು.

ಬೇಂದ್ರೆಯವರ ಸ್ವಾಭಿಮಾನ, ಲೌಕಿಕತನಕ್ಕೆ ವಿಷಯ ನಡೆಯಿತು. ಬೇಂದ್ರೆಗೆ ಸರ್ಕಾರ ಮಾಸಾಶನ ಪ್ರಕಟಿಸಿದಾಗ 'ಏನು ಇದು ಬಾಯ್ಮುಚ್ಚಿಕೊಂಡಿರಲಿಕ್ಕೋ ನನಗೆ' ಎಂದು ಕೋಪಗೊಂಡಿದ್ದರಂತೆ. ನಂತರ ಗೋಕಾಕ್ ಎಲ್ಲ ವಿವರಿಸಿ ಅವರನ್ನು ಒಪ್ಪಿಸಿದ್ದಾಯ್ತು. ಅದನ್ನು ತಮ್ಮ ಮಗ ವಾಮನರಿಗೆ 'ನನ್ನ ಪರವಾದ ಮನೆಯ ಎಲ್ಲಾ ಖರ್ಚು ಇದರಲ್ಲೇ ನಡೆಯಬೇಕು' ಎಂದಿದ್ದರಂತೆ.

ನಾನು ತುಂಬಾ ಕಾಯುತ್ತಿದ್ದ ಬೇಂದ್ರೆ ಕತೆ-ದಂತ ಕತೆಗಳೆಡೆಗೆ ಕೊನೆಗೂ ಪಯಣ ಬೆಳೇಯಿತು. ಕುಳ್ಳಗಿದ್ದ ಬೇಂದ್ರೆ ಕಾಣುತ್ತಿದ್ದಿಲ್ಲ, ತಮ್ಮ ದೊಡ್ಡ ದನಿಯಿಂದ ರಸ್ತೆಯಲ್ಲೆಲ್ಲಾ ಕೇಳುತ್ತಿದ್ದರು ಎನ್ನುವ ಮಾತುಗಳು ಬಂತು. ಕಾರ್ನಾಡ್ ಜಯಂತರ ತಂದೆ ಗೌರೀಶರು ಹೇಳುತ್ತಿದ್ದ ಕತೆಯೊಂದನ್ನು ಹೇಳಿದರು. ಉತ್ತರ ಕನ್ನಾಡದ ಹಳ್ಳಿಯೊಂದರಲ್ಲಿ ಗೌರೀಶ್ ಹೋಗುತ್ತಿದ್ದಾಗ ಇಬ್ಬರು ಹಳ್ಳಿಗರು ಬೇಂದ್ರೆಯವರ ಪದ್ಯಗಳ ಕುರಿತು ಗಟ್ಟಿಯಾಗಿ ಮಾತನಾಡುತ್ತಾ ಹೋಗುತ್ತಿದ್ದರು. ಖುಷಿ, ಆಶ್ಚರ್ಯಗಳಿಂದ ಗೌರೀಶರು 'ಪರವಾಗಿಲ್ಲ, ನಮ್ಮ ಹಳ್ಳಿಯವರೇ ಬೇಂದ್ರೆ ಕಾವ್ಯ ಚರ್ಚಿಸುತ್ತಾರೆ' ಎಂದು ಮೆಚ್ಚುಗೆ, ಹೆಮ್ಮೆಗಳಿಂದ ಅವರೆಡೆ ನಡೆದು ಅವರ ಪರಿಚಯ ಕೇಳಲಾಗಿ ಒಬ್ಬರು ಕುರ್ತಕೋಟಿ ಮತ್ತೊಬ್ಬರು ಸ್ವತಃ ಬೇಂದ್ರೆಯವರೇ ಆಗಿದ್ದರಂತೆ.

ಬೇಂದ್ರೆ ಮತ್ತು ನವ್ಯ ಸಾಹಿತ್ಯದ ಕುರಿತ ಪ್ರಸ್ತಾಪವಂತೂ ಆಗಲೇಬೇಕಿತ್ತು. ಅಡಿಗರು ಮತ್ತು ಬೇಂದ್ರೆ ಒಟ್ಟಾಗಿ ನಿಂತು ಒಮ್ಮೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಬಂದಾಗ ಇಬ್ಬರ ಮಧ್ಯೆ ಕೆಲವರಿದ್ದದ್ದನ್ನು ಪ್ರತಿಮೆಯಾಗಿ ಬಳಸಿ ಬೇಂದ್ರೆ ಮತ್ತು ಅಡಿಗರು ಒಬ್ಬರಿಗೊಬ್ಬರು ಹತ್ತಿರವಾಗೇ ಇದ್ದಾರೆ, ಆದರೆ ಇಬ್ಬರ ಮಧ್ಯೆ ಬೇರೆಯವರು ವಿನಾಕಾರಣ ಬಂದು ದೂರವಿದ್ದಾರೆ ಎನ್ನುವ ಭ್ರಮೆ ಹುಟ್ಟಿಸುತ್ತಿದ್ದಾರೆ ಎಂದರಂತೆ ಎಂದು ಜಯಂತ್ ಪ್ರಸ್ತಾಪಿಸಿದರು. ಅದನ್ನು ಬೆಳೆಸಿದ ಕಾರ್ನಾಡ್ ಡಿ.ಆರ್.-ರನ್ನು ಕರೆದುಕೊಂಡು ತಾವು ಬೇಂದ್ರೆ ಮನೆಗೆ ಹೋದದ್ದನ್ನು ನೆನೆದು ಅಲ್ಲಿ ಆಡಿಗರ 'ಭೂಮಿಗೀತ' ಪುಸ್ತಕ ನೋಡಿ ಕುತೂಹಲದಿಂದ ತೆರೆದಾಗ ಅದರಲ್ಲಿ ಅನಂತಮೂರ್ತಿಯವರ ಮುನ್ನುಡಿಯ ಕೆಳಗೆ 'ಇವ ಅನಂತಮೂರ್ತಿಯಲ್ಲ .........' ಎಂದು ಬರೆದಿದ್ದನ್ನು ನೆನೆದರು. ಅದು ಅನಂತಮೂತಿ-ನೋ ಅಥವಾ ಅನಂತ-ಮತಿ-ನೋ ಸರಿಯಾಗಿ ಕೇಳಲಿಲ್ಲ, ಯಾವುದೇ ಆಗಿದ್ದರೂ ಅದು ಹೊಗಳಿಕೆಯೇ ಅನ್ನಿಸುತ್ತದೆ. ಕಾರ್ನಾಡ್ ಮತ್ತೆ ತಮ್ಮ ಬಿಗುವನ್ನು ಕ್ಷಣವೊಂದರಲ್ಲಿ ಬಿಟ್ಟು ಮತ್ತೆ ಪಡೆದು ಯಥಾ ಸ್ಥಿತಿ-ಗೆ ಮರಳಿದ್ದರು.

ಕಾರ್ಯಕ್ರಮದ ಕೊನೆಯ ಹಂತದಲ್ಲಿ ತಮ್ಮನ್ನು ಮತ್ತೆ ಮತ್ತೆ ಸೆಳೆದ ಬೇಂದ್ರೆಯವರ ಪದ್ಯವೊಂದನ್ನು ಓದಿ ಎಂದಾಗ ಕಾರ್ನಾಡರು 'ಊರ ತುದಿ' ಪದ್ಯ ನೆನೆದರು. ಕುರ್ತಕೋಟಿಯವರ ಪುಟಬಂಗಾರ ಒಂದಷ್ಟು ಸಾಲುಗಳನ್ನೋದಿ ನೋಡಿ ನನಗೆ ಇಷ್ಟೆಲ್ಲಾ ಬರೆದಿದ್ದಾರೆ ಎಂದು ಗೊತ್ತಿರಲಿಲ್ಲ, ಹಾಗನ್ನಿಸಲೂ ಇಲ್ಲ. ನನಗೆ ನನ್ನದೇ ಆದ ವಿವರಣೆಗಳಿವೆ ಎಂದು ಹೇಳಿದರು. ಕಾರ್ನಾಡ್ ಪದ್ಯ ಓದಿದ ರೀತಿ ಯಾವತ್ತಿನಂತೆ ಅನನ್ಯವಾಗಿತ್ತು ಎಂದು ಬೇರೆ ಹೇಳಬೇಕಿಲ್ಲ.

'ನಮಸ್ಕಾರ' ಎಂದು ಇಬ್ಬರೂ ಕಾರ್ಯಕ್ರಮ ಮುಗಿಸಿದರು.

Saturday, February 11, 2006

ಕತೆ, ಕತೆಗಾರ ಮತ್ತು ಓದುಗ



ವಿವೇಕ್ ಶಾನುಭಾಗರ ಹೊಸ ಕಥೆ ಶರವಣ ಸರ್ವಿಸಸ್ ನನ್ನಲ್ಲಿ ಹುಟ್ಟಿಸಿದ ಆಲೋಚನೆಗಳನ್ನು ಈ ಬಾರಿ ನಿಮ್ಮೊಂದಿಗೆ ಹಂಚಿಕೊಳ್ಳಲಿಚ್ಚಿಸುತ್ತೇನೆ.

ಅವರ "ಮತ್ತೊಬ್ಬನ ಸಂಸಾರ" ಕಥಾಸಂಕಲನದಲ್ಲಿನ "ಶರವಣ ಸರ್ವಿಸಸ್" ಕತೆ ಈ ಹಿಂದೆ ದೇಶಕಾಲ ಪತ್ರಿಕೆಯಲ್ಲೂ ಓದಿದ್ದೆ. ಈ ಕಥೆಯಾಗಲೀ ಅಥವಾ ಅದೇ ಸಂಕಲನದ ಇತರ ಕಥೆಗಳಾಗಲೀ ಮೊದಲ ಓದಿನ ತತ್ಕ್ಷಣಗಳಲ್ಲಿ ಯಾವುದೇ ತೀವ್ರವಾದ ಪರಿಣಾಮವನ್ನುಂಟು ಮಾಡಿರಲಿಲ್ಲ. ಅನೇಕ ವೇಳೆ ಇದು ಸಹಜವೇ ಆದರೂ ಅವರ "ಹುಲಿ ಸವಾರಿ" ಕಥಾಸಂಕಲನದ ವಿಷಯದಲ್ಲಿ ಹೀಗಾಗಿರಲಿಲ್ಲ. ಅದರ ಓದಿನ ಅನುಭವ ನನ್ನಲ್ಲಿ ಇವತ್ತಿಗೂ ಜೀವಂತವಾಗಿದೆ.

ಸ್ವಲ್ಪ ದಿನ ಸುಮ್ಮನಿದ್ದು ಮತ್ತೆ ಶರವಣ ಸರ್ವಿಸಸ್ ಓದಿದಾಗ ಆಸಕ್ತಿ ಕೆರಳಿ ನಿಂತು, ಅನೇಕ ವಿಷಯಗಳು ಹೊಳೆಯುತ್ತಾ ಬಂದವು. ಅವರ "ಹುಲಿ ಸವಾರಿ" ಸಂಕಲನದ ಗುಂಗಿನಲ್ಲೇ "ಮತ್ತೊಬ್ಬನ ಸಂಸಾರ" ಓದಿದ್ದು ಪ್ರಾಯಶಃ ಅಸಮರ್ಪಕ. ಹೊಸ ಪುಸ್ತಕ ಮುಕ್ತವಾದ ಓದನ್ನು ಬೇಡುತ್ತದೆ, ಯಾವಾಗಲೂ. ಈ ಲೇಖನದ ಉದ್ದೇಶ ಹಾಗೆ ಹೊಳೆದು ಅನ್ನಿಸಿದ್ದನ್ನು ಹಂಚಿಕೊಳ್ಳುವುದು.

ನನ್ನೀ ಬರಹದ ಕೆಲ ಅಪಾಯಗಳನ್ನೂ ಸಹ ಮೊದಲೇ ಸೂಚಿಸಿಬಿಡುವುದು ಒಳಿತೇನೋ. ಸದ್ಯದ ಆತಂಕಗಳನ್ನು ಮೈಮೇಲೆಳೆದುಕೊಂಡು ಎಲ್ಲವನ್ನೂ ಅವುಗಳ ಮೂಲಕವೇ ಪ್ರವೇಶಿಸುತ್ತಿರುವ ನಮಗೆ ಈ ಕನ್ನಡಕವಿಲ್ಲದೇ ತೆರೆದ ಮನಸ್ಸಿನಿಂದ ನೋಡುವುದು ಕಷ್ಟವಾಗಿದೆ. ಆದ್ದರಿಂದ ಈ ಲೇಖನದ ನನ್ನ ಅನಿಸಿಕೆಗಳು ಸ್ವಲ್ಪ ಅತಿ ಅನ್ನಿಸಬಹುದು. ಕಥೆಗಾರರಾದ ಮನಸ್ಸಿನಲ್ಲಿಲ್ಲದ್ದಂತೂ ಓದುಗರ ಅನಿಸಿಕೆಗಳಲ್ಲಿ ಇದ್ದೇ ಇರುತ್ತದೆ. ಆದರೆ ಕತೆಗಾರರ ಆಶಯಕ್ಕೆ ಹೊರತಾದ ಅನಿಸಿಕೆಗಳೂ ಇರಬಹುದಾದ ಸಾಧ್ಯತೆಗಳಿವೆ ಈ ಪ್ರತಿಕ್ರಿಯೆಯಲ್ಲಿ. ಅಥವಾ, ಅವರ ಕಥೆಯಲ್ಲಿ ಕಲಾತ್ಮಕವಾಗಿ ಸೂಚ್ಯವಾಗಿರುವುದು, ಈ ಪ್ರತಿಕ್ರಿಯೆಯಲ್ಲಿ ಕಸಿವಿಸಿಪಡುವಷ್ಟು ಅತಿವಾಚ್ಯತೆಯನ್ನು ಪಡೆದುಕೊಂಡುಬಿಟ್ಟಿರಬಹುದು. ಕಥೆಯ ಮುಕ್ತವಾದ ಪ್ರವೇಶಕ್ಕೆ, ವಿವಿಧ ಅನುಭವಗಳ ದರ್ಶನಕ್ಕೆ ಇಂತಹ ಬರಹಗಳು ಕಾಲಿಗೆ ತೊಡರೊಡ್ಡುತ್ತವೆ ಎಂದೆನ್ನಿಸಬಹುದು. ಪ್ರಾಮಾಣಿಕ ಕ್ಷಮೆಯನ್ನಷ್ಟೇ ಕೇಳಬಯಸುತ್ತೇನೆ, ಸದ್ಯಕ್ಕೆ.

ಮತ್ತೊಬ್ಬನ ಸಂಸಾರ ಪುಸ್ತಕದ ಹಿಂಬದಿಯಲ್ಲಿರುವ ಅಕ್ಷರರ ಕೆಲ ಮಾತುಗಳು ನನ್ನ ಒಟ್ಟು ವಿಚಾರಲಹರಿಯ ಮೂಲಪ್ರೇರಣೆಯಾದರೂ, ಸಿಕ್ಕ ಸಿಕ್ಕ ದಿಕ್ಕಿನಲ್ಲೆಲ್ಲಾ ಅರ್ಥಕ್ಕಾಗಿ ಕೈಚಾಚಿ ದಕ್ಕಿತು ಎಂದೆನ್ನಿಸಿದ್ದನ್ನೆಲ್ಲಾ ಇಲ್ಲಿ ಬರೆದಿದ್ದೇನೆ.

ವಿವೇಕ್ ಶಾನಭಾಗರ ಹೊಸ ಕಥೆ ಶರವಣ ಸರ್ವಿಸಸ್

ವಿವೇಕರ ಈ ಕಥೆಯಲ್ಲಿ ವಾಸ್ತವದ ಒಂದು ತುಣುಕಿನ ಮೂಲಕ, ವ್ಯವಸ್ಥೆ ಸೃಷ್ಟಿಸುವ ಗೋಡೆಗಳನ್ನು ಮೀರಿ ಬೆಳೆಯುವ ಇಬ್ಬರ ನಡುವಿನ ಸಂಬಂಧದ ಮೂಲಕ ಭಾರತ ಮತ್ತು ಆಧುನಿಕತೆಯ ಸಂಬಂಧ ಶೋಧಿಸುತ್ತಿರುವಂತಿದೆ. ನಮ್ಮ ಸಾಹಿತ್ಯ ಪರಂಪರೆಯಲ್ಲಿ ಇದೇನೂ ಹೊಸತಲ್ಲ. ಆದರೆ, ಈ ಚಿಕ್ಕ ಕಥೆಯಲ್ಲಿ ತೋರುತ್ತಿರುವ ವಸ್ತುಚಿತ್ರಣದ ಸಮಗ್ರತೆ ಆಶ್ಚರ್ಯ ಹುಟ್ಟಿಸುವಂತಿದೆ. ಕಥೆಯ ಶಿಲ್ಪವೇ ಇಲ್ಲಿ ಮೌಲ್ಯವೊಂದನ್ನು, ಮೆಲುದನಿಯ ಆದರೆ ಗಟ್ಟಿಯಾದ ನಿಲುವೊಂದನ್ನು ತೆಗೆದುಕೊಂಡಂತಿದೆ.

ಕಥೆಯ ಪ್ರಮುಖ ಪಾತ್ರಧಾರಿಗಳು ನಿರೂಪಕ ಮತ್ತು ಶರವಣ. ಆಧುನಿಕತೆಯತ್ತ ಪಯಣಿಸುತ್ತಿರುವ ಭರತದ ಎರಡು ಪ್ರ್‍ಅತಿನಿಧಿಕ ಚಲನ-ಬಿಂದುಗಳಾಗಿ ಇವರು ಚಿತ್ರಣಗೊಂಡಿದ್ದಾರೆ. ನಿರೂಪಕ ಇಂದು ಭಾರತದಲ್ಲಿ ಪ್ರತಿಷ್ಠೆಯನ್ನು ಗಳಿಸಿರುವ ಹೆಚ್ಚು ಜೀವನ ಭದ್ರತೆ ಪಡೆದಿರುವ, ಆಧುನಿಕತೆ ಭಾರತಕ್ಕೆ ಬಂದಮೇಲೆ ಏನೆಲ್ಲಾ ಲೌಕಿಕ ಸವಲತ್ತು ಪಡೆದಿರುವವರ ಪ್ರತಿನಿಧಿಯಾದರೆ, ಶರವಣ ಆ ಚಲನೆಯಲ್ಲಿ ಹಿಂದೆ ಬಿದ್ದಿರುವವನು, ಆದರೆ ಆ ಚಲನೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಿ ತನ್ನ ನೆಲೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವವನು. ಬಹುಜನ ಭಾರತದ ಜೀವನ ಮೌಲ್ಯ, ರೀತಿ-ಗಳಿಂದ ನಿರೂಪಕ ಬಿಡಿಸಿಕೊಂಡಂತಿದ್ದಾನೆ, ಆ ಕುರಿತ ಅವನ ಸಂಬಂಧ ಅವಕಾಶವಾದದಿಂದ ಬಂದದ್ದು. ಆದರೆ ಶರವಣ ಬಹುಜನ ಸಮಾಜದದೊಂದಿಗೆ ಹೆಚ್ಚು ಸಂಬಂಧವಿರುವ, ಸಂಬಂಧ ಸಾಧ್ಯತೆಯಿರುವ ಮನುಷ್ಯ. [ಕಥೆಯ ಓದಿನ ಸಂದರ್ಭದಲ್ಲಿ ನನಗೆ ಕನ್ನಡದ ಅತ್ಯುತ್ತಮ ಕಥೆಯಾದ 'ಸೂರ್ಯನ ಕುದುರೆ' ಜ್ಞಾಪಕಕ್ಕೆ ಬರುತ್ತಿತ್ತು. ಆದರೆ ಮೇಲಿನ ನನ್ನ ವಿವರಣೆ ಈ ಕಥೆ ಅದಕ್ಕಿಂತಾ ಹೇಗೆ ಭಿನ್ನ ಎನ್ನುವುದನ್ನು ಸೂಚ್ಯವಾಗಿ ಹೇಳುತ್ತದೆ ಎಂದು ನಂಬಿದ್ದೇನೆ, ಸದ್ಯಕ್ಕೆ 'ಸೂರ್ಯನ ಕುದುರೆ'-ಯೊಡನಿನ ಸಂಬಂಧವನ್ನು ಇಷ್ಟಕ್ಕೆ ನಿಲ್ಲಿಸಿ ಮುಂದುವರೆಯುತ್ತೇನೆ, ಮುಂದೆಂದಾದರೂ ಈ ವ್ಯತ್ಯಾಸದ ಕುರಿತೇ ಒಂದು ಲೇಖನಕ್ಕೆ ತೊಡಗಬಹುದು]. ಒಂದು ರೀತಿಯಿಂದ ನೋಡಿದಲ್ಲಿ, ಈ ಚಲನೆಯಲ್ಲಿ ಶರವಣ ಒಂದು ಅಂಚಿನಲ್ಲಿದ್ದಾನೆ ಎನ್ನಬಹುದು. ಈ ರೀತಿಯಾದ ಪಾತ್ರ ಪರಿಕಲ್ಪನೆ, ಕಥೆಯ ಶಿಲ್ಪದೊಂದಿಗೆ, ಕಥೆಯ ವಸ್ತುವಿನೊಂದಿಗೆ ಜೀವಂತ ಸಂಬಂಧ ಪಡೆದುಕೊಂಡು ಕಥೆ ಕಲಾತ್ಮಕವಾಗಿರುವಂತಿದೆ. ಪ್ರಗತಿ ಪರ ಚಿಂತನೆ ಎನ್ನುವುದು ಇದರೊಳಗೆ (ಹುಡುಕಿ ತೆಗೆದರೆ ಸ್ವಾರಸ್ಯ ಹಾಳಾಗುವಷ್ಟು) ಸಂಪೂರ್ಣವಾಗಿ ಕರಗಿಹೋಗಿದೆ. ಈ ಬರಹದಲ್ಲಿ ಮುಂದೆ ನಿರೂಪಕ ಮತ್ತು ಶರವಣ-ರನ್ನು ಉಲ್ಲೇಖಿಸಿದಾಗಲೆಲ್ಲಾ ಈ ಮೇಲಿನ ವಿವರಣೆಯ ಹಿನ್ನೆಲೆಯಲ್ಲೇ ಓದಬೇಕಾಗಿ ಕೋರಿಕೆ. ಬೇಕೆಂದೇ 'ಆಧುನಿಕ', 'ಅರೆ-ಆಧುನಿಕ' ಮುಂತಾದ ಪದಗಳ ಬಳಕೆಯ ವ್ಯಾಮೋಹವನ್ನು ಬಿಟ್ಟೇ ಬರೆದಿದ್ದೆನೆ, ಓದಿಗೆ ತ್ರಾಸವಾಗಬಾರದೆಂದು.

ಮೊದಲ ಭಾಗದಲ್ಲಿ ನಿರೂಪಕನ ಧ್ವನಿಯಲ್ಲಿ ಕಥೆಯ ನಿರೂಪಣೆಯಿದೆ. ದ್ವಿತೀಯಾರ್ಧದಲ್ಲಿ ಶರವಣನ ಧ್ವನಿಯಲ್ಲಿ ನಿರೂಪಿತವಾಗಿದೆಯಾದರೂ, ಅದು ನಿರೂಪಕ ನಿಜಶರವಣನನ್ನು ಗುರುತಿಸಿಕೊಂಡದ್ದರಿಂದಲಾದುದು ಎನ್ನುವುದುದನ್ನು ಗಮನಿಸಿ ಅಲ್ಲಿಯೂ ಕೂಡಾ ಆಳದಲ್ಲಿ ನಿರೂಪಕನದ್ದೇ ಧ್ವನಿಯಿದೆ ಎಂದೆನ್ನಿಸುತ್ತದೆ. ಕಥೆಯ ಪೂರ್ವಾರ್ಧದಲ್ಲಿ ನುಡಿಚಿತ್ರಗಳು ಕಥೆಯನ್ನು ಪ್ರಮುಖವಾಗಿ ಕಟ್ಟಿಕೊಟ್ಟಿದ್ದರೆ, ದ್ವಿತೀಯಾರ್ಧದಲ್ಲಿ ಅಮೂರ್ತವಾದ ಮನುಷ್ಯನ ಆಂತರ್ಯದ ಪಯಣದ ಮೂಲಕ ಕಥೆ ಅನಾವರಣಗೊಳ್ಳುತ್ತದೆ. ಒಟ್ಟು ಕಥೆ ವಿವೇಕರಿಗೆ ವಿಶಿಷ್ಟವಾಗಿರುವ ಮೆಲುದನಿಯಲ್ಲಿದ್ದರೂ ಖಾಚಿತತೆಯ ಧ್ವನಿ (ನಿರೂಪಕನದ್ದು) ಮತ್ತು ದ್ವಿತೀಯಾರ್ಧದ ಜೀವಪರತೆ (ನಿರೂಪಕ ಶರವಣನಲ್ಲಿ ಕಂಡುಕೊಂಡ ಸತ್ಯದಿಂದುಂಟಾದುದು) ಅನುಭವಕ್ಕೆ ಬರದೇ ಇರದು. ಈ ಬಗೆಯ ಶಿಲ್ಪದಿಂದ ವಿವೇಕರು ಒಂದು ಪ್ರಮುಖವಾದ್ದನ್ನು ಸಾಧಿಸಿದ್ದಾರೆ. ಒಟ್ಟು ಕಥೆಗಾರನ ನಿಲುವುಗಳಿಗಿಂತ ವಸ್ತುವಿನ ಶೋಧನೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಪೂರ್ವಾರ್ಧದಲ್ಲಿ ಬರುವ ನಿರೂಪಕ ಪರಂಪರೆಯ ನಂಬಿಕೆಗಳ ಅಗತ್ಯ ಬಿದ್ದಾಗ ಜೋತುಬೀಳಬಲ್ಲ ಅವಕಾಶವಾದಿ ಆಧುನಿಕನೆನ್ನುವ ಸೂಚನೆಯ ಜೊತೆಗೆ, ಜೊತೆಗೇ ಠಕ್ಕತನ, ಸುಳ್ಳುಬುರುಕುತನದ ಮನುಷ್ಯ ಎನ್ನುವ ಸೂಚನೆಯೂ ಇರುವಂತಿದೆ. ಶರವಣನ ಸಾರ್ವಜನಿಕ ವ್ಯಕ್ತಿತ್ವದ ಪರಿಚಯ ಎರಡನೇಯ ಪ್ಯಾರಾದಲ್ಲೇ ಅತ್ಯಂತ ಕಾವ್ಯಾತ್ಮಕವಾಗಿ ಮೂಡಿದೆ. ಅವನ ಅಗತ್ಯ ಮಿಕ್ಕವರಿಗೆ ದಿನವಿಡೀ ಇರುತ್ತದೆ. ಇಷ್ಟದರೂ ಅವನು ಕೆಲಸ ಉಳಿಸಿಕೊಳ್ಳಿಕೊಳ್ಳುವುದಕ್ಕೆ ತೊಟ್ಟಿರುವ ವೇಷವೈವಿಧ್ಯತೆ ಕಾಲಧರ್ಮವನ್ನು ಸೂಚಿಸುತ್ತದೆ. ಆಧುನಿಕ ಜೀವನದ ಎಲ್ಲಾ ವ್ಯಾಪಾರಗಳೂ ತಮ್ಮೆಲ್ಲಾ ವೈರುಧ್ಯಗಳಿಂದ ಶರವಣನ ಜೊತೆಗೆ ಸಂಬಂಧ ಇರಿಸಿಕೊಂಡಿದೆ. ಆದ್ದರಿಂದ ಒಟ್ಟು ಸಮಗ್ರವಾದ ಜೀವನ ದೃಷ್ಟಿ ಪ್ರಾಯಶಃ ಶರವಣನಿಗಷ್ಟೇ ಸಾಧ್ಯ, ಆಧುನಿಕತೆಯ ಮುಂಚೂಣಿಯಲ್ಲಿರುವವನಿಗಲ್ಲ. ಆದರೆ ಇದೇ ಪ್ರಕ್ರಿಯೆ (ಪ್ರಗತಿ, ಅಲೌಕಿಕ ಸಹಾಯ, ವೆಷವೈವಿಧ್ಯತೆ, ಜೀವನ ನಿರ್ವಹಣೆ) ಶರವಣನನ್ನು ಶಕ್ತಿಯನ್ನು ಹೀರಿ ನಿಜವ್ಯಕ್ತಿತ್ವದೊಂದಿಗೆ ಬದುಕಲಾರದಂತೆಯೂ ಮಾಡುತ್ತದೆ (ಅವನ ಮಾತೃಭಾಷೆ ಯಾವುದು ಎಂದೇ ಗೊತ್ತಾಗುವುದಿಲ್ಲ), ತನ್ನ ಬದುಕಿನ ಬಿಡಿಬಿಡಿ ಅನುಭವಗಳನ್ನು ಒಟ್ಟಾಗಿ ನೋಡಿಕೊಳ್ಳುವುದಕ್ಕೆ ಅವಕಾಶವೀಯುವುದಿಲ್ಲ. (ಕಥೆಯಲ್ಲಿ ಉಂಟಾಗುವ ಮುಖಾಮುಖಿ ಪ್ರಾಯಶಃ ಇದನ್ನು ಸಾಧ್ಯವಾಗಿಸುತ್ತದೆ). ಗಾಢವಾದ ಸ್ಮೃತಿಯಿರುವ ಓರೆಕೋರೆಯಿಂದ ತುಂಬಿದ್ದ ಹೆಸರು ಸಪಾಟಾಗಿ ಸರಾಗವಾಗುವುದು ಮಿಕ್ಕವರಿಗೋಸ್ಕರ. ತನಗಾದ ಲಾಭ ಆರ್ಥಿಕ, ಮಿಕ್ಕವರಿಗಾದ ಲಾಭ ಕೇವಲ ಹೆಸರು ಕರೆಯುವುದು ಸುಲಭವಾಗುವುದು. ಈ ಬದಲಾವಣೆಯಿಂದ ಸ್ಮೃತಿಯೇ ದುರ್ಬಲಗೊಳ್ಳುತ್ತಿರಬಹುದೇ. ಈ ಬದಲಾವಣೆಯಿಂದ ಸಾಂಸ್ಕೃತಿಕ ಉಪಯೋಗವೇನೂ ಆಗಿಲ್ಲದೇ ಹೋಗುತ್ತಿದೆಯೇ - ಎನ್ನುವುದರ ಸೂಚನೆ ಇರಬಹುದೇ ಎನ್ನುವುದು ನನ್ನ ಅನುಮಾನ.

ಆದರೆ ಈ ಶರವಣಾ ತೀರ ಅಶಕ್ತನಲ್ಲ. ಆಧುನಿಕ ವಿಕೃತಿಯಾದ ಅಲೌಕಿಕದ ಅತ್ಯಾಕಾಂಕ್ಷೆ/ಅತ್ಯಾಧಾರ ಶರವಣನಿಗೆ ಇನ್ನೊಬ್ಬರ ವಿಷಯದಲ್ಲಿ ಸ್ವಾತಂತ್ರ್ಯ ವಹಿಸಿ ಅವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಷ್ಟು ಶಕ್ತಿ ಕೊಟ್ಟಿದೆ. ಸ್ವಲ್ಪ ಪ್ರಜ್ಞಾಪೂರ್ವಕ ಆಧುನಿಕನಾದ ನಿರೂಪಕನಿಗೆ ಮಾತ್ರ ಇದು ಅಸಹ್ಯ. ಇಂತಹ ಸಮಯದಲ್ಲಿ ನೈತಿಕ ವಿವರಣೆಯ ಶಕ್ತಿಯೂ ಶರವಣನಿಗಿದೆ. ಅಂತಹ ಅನೇಕ ವೇಳೆ, ನಿರೂಪಕ ಶರವಣನಿಂದ ಕೌಶಲ್ಯವನ್ನು ನಿರೀಕ್ಷಿರದೇ ಆಶ್ಚರ್ಯಚಕಿತನಾಗುತ್ತಾನೆ ಹೊರತು ಶರವಣನ ಒಳಹೊಕ್ಕು ನೋಡುವ ಪ್ರಯತ್ನ ಮಾಡುವುದಿಲ್ಲ (ನಿಜವಾದ ಮುಖಾಮುಖಿ ಇನ್ನೂ ಆಗಿಲ್ಲ).

ಅಷ್ಟಲ್ಲದೇ, ಶರವಣ ಒಳ್ಳೆಯ ಕಥೆಗಾರ ಕೂಡಾ. ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ತನ್ನದಲ್ಲದ್ದನ್ನು ನಂಬಬೇಕಾಗಿದ್ದರೂ ತಯಾರು. ನಿಜವಾಗಿಯೂ ಹಾಗೆ ನಂಬಿದ್ದಾನೋ ಇಲ್ಲವೋ ಗೊತ್ತಾಗುವುದಿಲ್ಲ. ಅವನ ಮಾತುಗಳಲ್ಲಿ ಅವನದ್ದೆಷ್ಟು, ಜೀವನ ನಿರ್ವಹಣೆಯ ಅನಿವಾರ್ಯತೆಯಿಂದ ಬಂದದ್ದೆಷ್ಟು ಗೊತ್ತಾಗುವುದಿಲ್ಲ. ಹಾಗೆ ಅವನು ಮಾತಿನ ಚಟಕ್ಕೆ ಎಂದು ಹೇಳುತ್ತಿರುವ ಕಥೆಗಳಲ್ಲಿ ಕೂಡಾ, ಶಹಾಣೆಯವರ ಕಥೆಯಲ್ಲಿರುವಂತೆ, ಒಂದು ಒಳಕಥೆಯಿರುವಂತಿದ್ದು, ಇಂದು ಸಮಾಜ ಕುರುಡಾಗಿ ಆಪರ್ಚುನಿಟಿಗಳ ಹಿಂದೆ ಬಿದ್ದಿರುವುದನ್ನು ಧ್ವನಿಸುತ್ತಿದೆಯೇ ಎನ್ನುವುದು ನನ್ನ ಅನುಮಾನ. ಇಲ್ಲಿ ವಾಸ್ತು ಎನ್ನುವುದು ಏಕಕಾಲದಲ್ಲಿ ಮೂಢನಂಬಿಕೆಯೂ, ಒಟ್ಟು ಪರಿಸರದ/ಜೀವನದ ಸಮಗ್ರತೆಯನ್ನು ಕಾಪಾಡುವ ಪರಿಕಲ್ಪನೆಯಾಗಿಯೂ ಮೂಡಿಬರುತ್ತಿದೆ ಎಂದೆನ್ನಿಸುತ್ತದೆ. ಸಮಗ್ರತೆಯ ಪರಿಕಲ್ಪನೆಯಿರದ ಚಲನೆಯ ತರುವ ದುರಂತದ ಕಥೆಯಂತೆಯೂ ಇದೆ. ಈ ಪ್ಯಾರಾವನ್ನು ಸ್ವಲ್ಪ ಹೆದರಿಕೆಯಿಂದ ಬರೆಯುತ್ತಿದ್ದೇನೆ, ಕಥೆಗಾರರಿಗೆ ಇದು ಒಪ್ಪಿಗೆಯಾಗದೇ ಅಸಮಾಧಾನ ತರಬಹುದಾದ ಸಾಧ್ಯತೆಯಿರುವುದರಿಂದ.

ಕಾಲ, ಇತಿಹಾಸ ರೂಪಿಸಿರುವ ಇಂತಹ ಪರಿಸ್ಥಿತಿಯನ್ನು ಮೀರಿದ ಕಾಣ್ಕೆ, ಚಲನೆ ಸಾಧ್ಯವಾಗುವ ರೀತಿಯನ್ನು ಬಿಂಬಿಸುವಂತಿರುವ ಪೂರ್ವಾರ್ಧದ ಕೊನೆಯ ಕೆಲಪ್ಯಾರಾಗಳು - ತಮ್ಮ ಕಾವ್ಯಾತ್ಮಕತೆಯಿಂದ ಕಥೆಯ ಅತ್ಯುತ್ತಮ ಭಾಗಗಳಾಗಿವೆ. ನಿರೂಪಕ ಆಧುನಿಕತೆಯ ಅಹಂಕಾರದಲ್ಲಿರುವವನು. ಶರವಣ ಹೇಗೋ ಜೀವನ ನಡೆಸಿಬಿಡುತ್ತೇನೆ ಎನ್ನುವ ಆತ್ಮವಿಶ್ವಾಸವುಳ್ಳವನು. ಇವರಿಬ್ಬರ ನಡುವೆ ಹಾರ್ದಿಕ ಎನ್ನಿಸುವಂತಹ ಒಂದು ಸಂಬಂಧವೇರ್ಪಟ್ಟಿದೆ. ಆಧುನಿಕತೆಯ ಸಂಕೇತವಾಗಿರುವ ರಸ್ತೆಯ ಬಳಿ ಇವರ ಮಾತುಕತೆ. ಅಂತಹ ರಸ್ತೆಗೆ 'ಬೆನ್ನು ಹಾಕಿ' ನಿಂತಿರುವವನು ಶರವಣ. ನಿರೂಪಕ ರಸ್ತೆಗೆ ಮುಖಮಾಡಿದ್ದರೂ ಅವನ ಮಾತುಕತೆ ಶರವಣನೊಂದಿಗೆ ನಡೆಯುತ್ತಿದೆ (ಆದ್ದರಿಂದ 'ರಸ್ತೆ' ಪ್ರತಿನಿಧಿಸುತ್ತಿರುವ ಪ್ರಕ್ರಿಯೆಯಿಂದ ಕ್ಷಣಕ್ಕಾದರೂ ವಿಮುಖವಾಗಿದೆ). ಆಧುನಿಕ ಜೀವನದ ಒಂದು ಮುಖ್ಯ ಸಂಕೇತವಾಗಿರುವ 'ಅತಿವೇಗ'-ದಿಂದ 'ರಸ್ತೆ'ಯ ಬರುತ್ತಿರುವ 'ಬಸ್', 'ನಿಯಂತ್ರಣ' ತಪ್ಪಿ 'ಹಠಾತ್ ಆಕ್ರಮಣ' ನಡೆಸುತ್ತದೆ. ಇದಕ್ಕಿಂತ ಹೆಚ್ಚು ವಿವರಣೆ ಅಗತ್ಯವಿರಲಾರದು ಎಂದುಕೊಳ್ಳುತ್ತೇನೆ. ಒಟ್ಟು ಇವತ್ತಿನ ಪ್ರಕ್ರಿಯೆಯನ್ನು ತನ್ನೆಲ್ಲಾ ವಿವರಗಳೊಂದಿಗೆ ಕಾವ್ಯಾತ್ಮಕವಾಗಿ ನಿರೂಪಿತವಾಗಿದೆ.

ಶರವಣನೊಂದಿಗೆ ಮಾತಿಗಿಳಿದಿರುವ 'ನಿರೂಪಕ'-ನಿಗೆ ಮಾತ್ರ ಇದು ಪ್ರಜ್ಞೆಯಲ್ಲಿ 'ದಾಖಲಾಗುತ್ತದೆ'. ಪ್ರಜ್ಞಾಪೂರ್ವಕವಾದ ಗಮನವಲ್ಲ ಎನ್ನುವುದು ಮುಖ್ಯ. ನಿರೂಪಕನ ತತ್ಕ್ಷಣದ ಕಾರ್ಯಾಚರಣೆಯಿಂದ ಶರವಣ ಬಸ್ಸಿನಿಂದ ಪಾರು. ನಿರೂಪಕನ ಈ ಸಹಾಯ ಪ್ರಜ್ಞಾಪೂರ್ವಕವಾದ ಕ್ರಿಯೆಯಲ್ಲ ಎನ್ನುವುದೂ ಗಮನಾರ್ಹ, ಅವನ ಸಂಕಲ್ಪಶಕ್ತಿಯನ್ನು ಮೀರಿ ನಡೆದದ್ದು ಇದು. ಆ ಕ್ಶಣ ಅವರಿಬ್ಬ ನಡುವೆ ವಿಶೇಷವಾದ ಸಂಬಂಧವೊಂದು ಶುರುವಾಗುತ್ತದೆ. ಬಸ್ಸು ಸ್ಕೂಟರುಗಳನ್ನು (ಆಧುನಿಕತೆಯ ಒಂದು ರೂಪ ಮತ್ತೊಂದನ್ನು) ನಾಶಮಾಡುವುದನ್ನು ಪ್ರತಿನಿಧಿಸಲು ಬಳಸಿರುವ ಪದ 'ಗದ್ದೆಯಲ್ಲಿ ಕೊಯ್ಲು ಮಾಡಿದ ಹಾಗೆ ಚಚ್ಚಿ' ದಿಗ್ಭ್ರಮೆ ಹುಟ್ಟಿಸುತ್ತದೆ. ಇಂತಹ ಪ್ರಕ್ರಿಯೆಯಲ್ಲಿ ಯಾವನೇ 'ತೂಕಡಿಸುವ ನಾಯಿ' (ಆಧುನಿಕ ಪ್ರಕ್ರಿಯೆಯೊಂದಿಗೆ ಸಂಬಂಧವಿರಿಸಿಕೊಳ್ಳದೇ ಇರುವವನು) ಖಂಡಿತಾ ನಾಶವಾಗುತ್ತಾನೆ. ಶರವಣ ಬದುಕಿಕೊಂಡದ್ದು ಆಧುನಿಕತೆಯೊಂದಿಗೆ ಅವನ ಒಂದು ಬಗೆಯ ಸಂಬಂಧದಿಂದ, ಅದೂ ಅದೃಷ್ಟದಿಂದ, ಅದಕ್ಕೂ 'ನಿಮಿತ್ತ'ನಾದವನೊಬ್ಬ ಆಧುನಿಕತೆಯ ಮುಂಚೂಣಿಯಲ್ಲಿರುವ ಮನುಷ್ಯ. ಒಟ್ಟು ಚಿಂತಾಜನಕ ಸ್ಥಿತಿಯ ಸತ್ಯ ಇಲ್ಲಿ ಸಮರ್ಥವಾಗಿ ಮೂಡಿ ಬಂದಿದೆ. ಆಧುನಿಕತೆಯ ಪ್ರತಿನಿಧಿಗಳಾಗಿ ಬಸ್, ರಸ್ತೆ, ವೇಗ, ಹಠಾತ್ ಆಕ್ರಮಣ, ನಿರೂಪಕ ಈ ಪ್ಯಾರಾಗಳಲ್ಲಿ ಸಮರ್ಥವಾಗಿ ಪ್ರಕ್ರಿಯೆಯ ಒಟ್ಟು ಚಿತ್ರಣ ಕೊಡುತ್ತಾರೆ. ಈ ಎಲ್ಲಾ ಕ್ರಿಯೆಗಳಿಂದುಂಟಾಗುವ ಪರಿಣಾಮವೂ ಅಷ್ಟೇ ಸಮರ್ಥವಾಗಿದೆ.

ಸಾವಿನ ಸಾಧ್ಯತೆ ಕಂಡ ಶರವಣ ನಿರೂಪಕನ ಕೈಹಿಡಿದು ಸಾಂತ್ವನಗೊಳ್ಳುತ್ತಾನೆ, ಆಧುನಿಕನ ಈ ಕ್ರಿಯೆಯೂ ಅಪ್ರಜ್ಞಾಪೂರ್ವಕವಾದ್ದು ಫ಼್ಲ್ಯಾಶ್-ಬ್ಯಾಕ್-ನಲ್ಲಿ ನಿರೂಪಕ ಇದನ್ನು ಗಮನಿಸಿಕೊಳ್ಳುತ್ತಾನೆ. ಆ ವಿಧ್ವಂಸವನ್ನು ಜನಪದ ಗ್ರಹಿಸಿದ್ದು 'ಅದೃಷ್ಟ'-ದ ಪರಿಕಲ್ಪನೆಯಲ್ಲಿ. ಇಷ್ಟನ್ನು ಬಿಟ್ಟರೆ ನಿರೂಪಕ ಮತ್ತು ಶರವಣ ಇಬ್ಬರದೂ ಈ ಕ್ಷಣಕ್ಕೆ ಒಂದೇ ಸ್ಥಿತಿ. ನಿರೂಪಕನಿಗೆ 'ಜೀವನದ ಕ್ಷಣಭಂಗುರತೆ'-ಯ ದರ್ಶನ. ಶರವಣನಿಗೆ ತನ್ನ ಸಾವಿನ ದರ್ಶನ. ತಮ್ಮ ಕಾಲದ ಜೀವನದ ಎಲ್ಲಾ ಕಿಡಿಸ್ಫೋಟ-ಭೋರ್ಗರೆತ-ಪ್ರವಾಹಗಳು ಕ್ಷಣವೊಂದರಲ್ಲಿ ಸಾಂದ್ರಗೊಂಡು ಇಬ್ಬರಿಗೂ ಸತ್ಯ ದರ್ಶನ ಮಾಡಿಸಿದಾಗ ಇಬ್ಬರಲ್ಲೂ ಒಂದು ಬಗೆಯ ಬದಲಾವಣೆಯುಂಟಾಗುತ್ತದೆ. ನಿಜದಲ್ಲಿ, ಅದು ನಿರಂತರ ಬಾಂಧವ್ಯ ತರುತ್ತದೋ, ಕ್ಷಣಬಾಂಧವರಾಗುತ್ತಾರೋ ಹೇಳಲಾಗದಾದರೂ, ಈ ಕಥೆಯಲ್ಲಿ ಕಾಲದಲ್ಲಿ ಗಟ್ಟಿಯಗಿ ನಿಲ್ಲಬಹುದಾದ ಬಾಂಧವ್ಯ ಸೃಷ್ಟಿಯಾಗುತ್ತದೆ, ಕಥೆಯ ಆಶಯವೂ ಪ್ರಾಯಶಃ ಅದೇ.

ಮುಂದುವರೆದ ಕಥೆಯ ಉತ್ತರಭಾಗದಲ್ಲಿ, ಅವರಿಬ್ಬರ ನಡುವೆ ದೇವರು ಮತ್ತು ಭಕ್ತನ ಒಂದು ಬಾಂಧವ್ಯ, ಸಂಬಂಧವೇರ್ಪಡುತ್ತದೆ. ಇದರ ಪರಿಣಾಮವಾಗಿ ನಿರೂಪಕ ಶರವಣನ ಧ್ವನಿಯಲ್ಲಿ ಪ್ರಾಮಾಣಿಕವಾದ ನಿವೇದನೆಯನ್ನು ಕಂಡುಕೊಳ್ಳುತ್ತಾನೆ, (ಅದು ಶರವಣನ ನಿಜವ್ಯಕ್ತಿತ್ವವಿರಬಹುದೇ ಎಂದು ಓದುಗರಿಗೆ ಅನ್ನಿಸದಿರದು), ನಿರೂಪಕನಿಗೆ ಮತ್ತೊಂದು ಪ್ರಪಂಚ ತೆರೆದುಕೊಳ್ಳುತ್ತದೆ. ಶ್ರವಣನ ಹಿನ್ನೆಲೆ, ಮೂಲದಿಂದ ಇವತ್ತಿನವರೆಗಿನ ಅವನ ಚಲನ-ಸ್ಥಿತಿಗಳು ಚಲನೆ ಅನಾವರಣಾಗೊಳ್ಳುತ್ತದೆ. ಆ ಚಲನೆಯ ಒಂದು ರೂಪ ಶ್ರವಣ. ಪ್ರಾಯಶಃ ಅದೇ ಬಿಂದುವಿನಿಂದಾರಂಭವಾಗಿ ಮತ್ತೆಲ್ಲೋ ಬಂದುನಿಂತಿದ್ದಾನೆ ನಿರೂಪಕ. ಆತನೆಂದೂ ಅ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವ ಸಾಧ್ಯತೆಯಿಲ್ಲವೆನ್ನಿಸುತ್ತೆ. ಶ್ರವಣನ ಕಥೆಯ ಅನಾವರಣವಣದ ಮೂಲಕ ಅದನ್ನು ಮರುಷ್ಟಿಸಿಕೊಳ್ಳಬೇಕಿರುವುದು ನಿರೂಪಕನ ಸ್ಥಿತಿಯ ವ್ಯಂಗ್ಯ. ಈ ಭಾಗ ಕಥೆಯಲ್ಲಿ ಹೆಚ್ಚು ಬೆಳೆದಿಲ್ಲದಿದ್ದರೂ ಕಥೆ ತನ್ನ ಮೌನದಲ್ಲೇ ಇದನ್ನು ಅಡಗಿಸಿಕೊಂಡಿದೆ.

ಚಿಕ್ಕ ಊರಿನಲ್ಲಿರುವ ಶ್ರವಣನ ತಂದೆ ಸಾಂಸ್ಕೃತಿಕವಾಗಿ ಗಮನಾರ್ಹರಾದ ಸಂಪ್ರದಾಯವಾದಿಗಳು ಅನ್ನಿಸುತ್ತದೆ. ಅವರ ಜ್ಯೋತಿಷ್ಯದಲ್ಲೇನಿದ್ದರೂ 'ಲಕ್ಷಣ' ಮಾತ್ರ ಪ್ರಾಮುಖ್ಯತೆ ಪಡೆಯುತ್ತದೆ, ಅನಿಶ್ಚಿತತೆಗೆ ಅವಕಾಶವಿದೆ, (ಇದನ್ನು ಪೋಷಿಸುತ್ತಿರುವ ಜೀವನದಲ್ಲಿ ಹೆಚ್ಚು ನಿಶ್ಚಿತತೆಯಿದೆ ಎಂದು ಹೇಳಬಹುದೇನೋ). ಇದರ ಮುಂದಿನ ಹಂತವಾದ ಆಧುನಿಕ ಜ್ಯೋತಿಷ್ಯ. ಅದು ಔದ್ಯೋಗಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿ ಇತ್ಯಾದಿಗಳು ನಮ್ಮ ಪರಂಪರೆಯ ಜ್ಯೋತಿಷ್ಯದ ಜೊತೆಗೂಡಿದರಿಂದ ಉಂಟಾದ ಒಂದು ಆಧುನಿಕ ವಿಕೃತಿ. ಈ ವಾದಸ್ ಸ್ವಲ್ಪ ಅತಿಯಾದರೂ, ಆ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದು ಖಚಿತವಾದ್ದನ್ನು ಅಪೇಕ್ಷಿಸುತ್ತದೆ, ನಿರೀಕ್ಷಿಸುತ್ತದೆ, ಉದ್ದೀಪಿಸುತ್ತದೆ, ಸ್ಥಾಪಿಸಬಯಸುತ್ತದೆ. ಈ ಹಿನ್ನೆಲೆಯಲ್ಲಿ, ಲಕ್ಷಣ ಜ್ಯೋತಿಷ್ಯದಿಂದ ಫಲಜ್ಯೋತಿಷ್ಯದೆಡೆಗೆ ಶ್ರವಣನ ತಂದೆಯ (ಮತ್ತು ಶ್ರವಣನ) ಪಯಣ ಕುತೂಹಲಕರವಾಗಿದೆ. ಆಧುನಿಕ ಪ್ರಕ್ರಿಯೆಗಳಿಂದ ಪ್ರಭಾವಿತರಿರಬಹುದಾದ ದೇವಸ್ಥಾನದ ಆಡಳಿತಮಂಡಳಿಯೆಂಬ (ಆಧುನಿಕ?) ವ್ಯವಸ್ಥೆಯೊಂದಿಗೆ ಹೆಚ್ಚು ಸಂಪ್ರದಾಯವಾದಿಗಳಾದ ಶ್ರವಣನ ತಂದೆಯ ಜಗಳದಿಂದ ಅವರು ಲಕ್ಷಣ ಹೇಳುವುದನ್ನಷ್ಟೇ ಅಲ್ಲದೇ ಫಲಜ್ಯೋತಿಷ್ಯಕ್ಕೆ ತೊಡಗಬೇಕಾದ್ದು ಇಲ್ಲಿ ಸೂಚಿತವಾಗಿದೆ. ಈ ವಿಕಾರಕ್ಕೆ ಅನಿಶ್ಚಿತತೆ ಬೇಕು ಒಂದೋ ಸೃಷ್ಟಿಸುತ್ತದೆ ಇಲ್ಲವೋ ಅದಿರುವಲ್ಲಿಗೆ ಅದನ್ನು ಹುಡುಕಿಕೊಂಡು ಹೋಗುತ್ತದೆ. ಆದ್ದರಿಂದಲೇ, ಅದು ಸ್ವಲ್ಪ ದೊಡ್ಡದಾದ ಶ್ರೀರಂಗಪಟ್ಟಣದಲ್ಲಿ (ಮುಂದೆ ಬೆಂಗಳೂರಿನಲ್ಲಿ) ಹೆಚ್ಚು ಬೇರೂರುವ ಸಾಧ್ಯತೆ ಇರುವುದು ಕಥೆಯಲ್ಲಿ ಸೂಚಿತವಾಗಿದೆ (ನೇರವಾಗಿ ಶ್ರೀರಂಗಪಟ್ಟಣದಲ್ಲೇ ಶ್ರವಣ-ತಂದೆ ನೆಲೆಸುತ್ತಾರೆ ಎನ್ನುವುದು ಕಥೆಯಲ್ಲಿಲ್ಲ, ಚಲನೆ ಮಾತ್ರ ಅದರೆಡೆ ಇರುವಂತಿದೆ). ಅವರು ಶ್ರೀರಂಗಪಟ್ಟಣದಲ್ಲಿ ನೆಲೆಸುವುದಾದರೆ ಅದು ಆಧುನಿಕತೆಯಿಂದುಂಟಾದ ಚಲನೆಯ ಮೊದಲ ಘಟ್ಟವನ್ನು ಸೂಚಿಸುತ್ತದೆ. ದೊಡ್ಡ ಊರಿನ ಅನಿಶ್ಚಿತತೆಯೂ ಆಧುನಿಕತೆಯ ಪರಿಣಾಮವೇ ಆಗಿದೆ ಎನ್ನುವುದು ಗಮನಾರ್ಹ. ಚಿಕ್ಕ ಊರಿನಲ್ಲಿ ಆಧುನಿಕತೆಯ ಪರಿಣಾಮ ಆಗಿರಬಹುದಾದ ವಿಕೃತಿ ದೊಡ್ಡ ಊರಿನಲ್ಲಿ ಬೇರೂರುವುದು ಕೂಡಾ ದೊಡ್ಡ ಊರಿನಲ್ಲಿ ಆಧುನಿಕತೆ ತಂದಿರುವ ಅನಿಶ್ಚಿತತೆ - ಎನ್ನುವಲ್ಲಿ ನಮ್ಮ ದೇಶದಲ್ಲಿ ಆಧುನಿಕತೆ ಮೊದಲ ಘಟ್ಟದಲ್ಲಿ ತಂದಿರುವ ಚಲನೆಯ ಒಂದು ಮುಖದ ಚಿತ್ರಣವಿದೆ. ಹಳ್ಳಿಯಿಂದ ಚಿಕ್ಕ ಪಟ್ಟಣಕ್ಕೆ ಚಲನೆ. ಗಮನಿಸಬೇಕಾದ ಮತ್ತೊಂದು ವಿಪರ್ಯಾಸವೆಂದರೆ, ಸಾಂಸ್ಕೃತಿಕವಾಗಿ ಹೆಚ್ಚು ಸುಭದ್ರವಿರುವ ಊರಿನಲ್ಲಿ ವಿಶ್ಲೇಷಣೆಯಲ್ಲಿ, ದೃಷ್ಟಿಯಲ್ಲಿ ಅನಿಶ್ಚಿತತೆಗೆ ಅವಕಾಶವಿದೆ ('ಲಕ್ಷಣ ಜ್ಯೋತಿಷ್ಯ'). ಆದರೆ ಅನಿಶ್ಚಿತತೆ ತಾಂಡವವಾಡುತ್ತಿರುವಲ್ಲಿ 'ಫಲ ಜ್ಯೋತಿಷ್ಯ'ದಂತಹ ಖಚಿತತೆಗೆ ಮನುಷ್ಯ ಶರಣಾಗುತ್ತಾನೆ.

ಆದರೆ ಚಲನೆಯ ಈ ಪ್ರಕ್ರಿಯೆಯ ಒಂದು ಬಗೆಯ ಸಂಪೂರ್ಣತೆಯನ್ನು ಅಥವಾ ಸಮಗ್ರತೆಯನ್ನು ಪಡೆದುಕೊಳ್ಳುವ ಮೊದಲೇ ದೊಡ್ಡ ನಗರಗಳ ಬೆಳವಣಿಗೆಯೂ ಸಮಾನಾಂತರದಲ್ಲಿ ನಡೆದಿತ್ತು. ಮತ್ತು ಅದು ಹಳ್ಳಿಗಳನ್ನೂ, ಚಿಕ್ಕ ಊರುಗಳನ್ನೂ ಪ್ರಭಾವಿಸುತ್ತಲೇ ಬಂದಿತ್ತು. ಇದರ ಪ್ರತಿನಿಧಿಯಾದ 'ಲಾವಣ್ಯ' ಶರವಣನಿಗೆ ದೂರದ ಸಂಬಂಧಿಯೇ ಎನ್ನುವುದು ಗಮನಾರ್ಹ. ಅವಳ ಹೆಸರಿನ ಸ್ವಾರಸ್ಯವನ್ನೂ ಕಥೆಯ ಹಿನ್ನೆಲೆಯಲ್ಲಿ ಗಮನಿಸಬೇಕದ್ದು. ಶರವಣ ಅವಳತ್ತ ಆಕರ್ಷಿತನಾಗಿದ್ದಾನೆ. ಅವನ ಮನೆಯವರಿಗಾದರೂ ಈ ಸಂಬಂಧ ಒಪ್ಪಿಗೆಯೆಂದ ಮೇಲೆ ಅವರಿಗೂ ಈ ಕುರಿತ ಆಕರ್ಷಣೆಯಿದೆ. ಇದರ ಕುರಿತು ಕಥೆಗಾರರು (ಅಥವಾ ಶರವಣ) ಏನೂ ಹೇಳದೆ ಒಂದು ದೊಡ್ಡ ಮೌನದಲ್ಲಿ ಸಾಧ್ಯತೆಯನ್ನು ಸೂಚಿಸಿದ್ದಾರೆ. ಚಲನೆಯ ಮೊದಲು ಬಿಂದು ಆಧುನಿಕತೆಯೊಂದಿಗಿನ ಜಗಳದಿಂದಾದರೆ (ದೇವಸ್ಥಾನದ ಆಡಳಿತಮಂಡಳಿ) ಚಲನೆಯ ಎರಡನೇಯ ಬಿಂದು ಆಧುನಿಕತೆಯೊಂದಿಗಿನ ಆಕರ್ಷಣೆ (ಬೆಂಗಳೂರಿನ ಲಾವಣ್ಯ). ಶರವಣ-ಲಾವಣ್ಯರ ಮೊದಲ ಘಟ್ಟದ ಸಂಬಂಧ ಜಾಗತೀಕರಣ ಪೂರ್ವ ಭಾರತವನ್ನು ಧ್ವನಿಸುವಂತಿದೆಯೇನೋ ಎಂದು ಅನುಮಾನ ಬರುತ್ತದೆ. ಭೋರ್ಗರೆತದ ಜಾಗತೀಕರಣದಂತಹ ಯಾವುದೇ ಪ್ರಕ್ರಿಯೆಗೆ ದೇಶ ಸಜ್ಜುಗೊಳ್ಳುತ್ತಿರುವಂತಿದೆ ಇಲ್ಲಿ. ಅದನ್ನು ಸ್ವಾಗಿತಿಸಿ ಮೊದಮೊದಲು ತುಳಿಸಿಕೊಳ್ಳಲು ಬೇಕಾದ ಭೂಮಿಕೆಯೊಂದು ಗುಪ್ತಗಾಮಿನಿಯಾಗಿ ತಯಾರಾಗುತ್ತಿರುವಂತೆ ಇಲ್ಲಿ ಧ್ವನಿತವಾದಂತಿದೆ. ಲಾವಣ್ಯಳೇ ಒಪ್ಪಿಕೊಳ್ಳುತ್ತಿದ್ದಳೋ ಏನೋ, ಆದರೆ ಶರವಣನೇ ಎಲ್ಲವನ್ನೂ ಬದಲಿಸಲು ಹಟ ತೊಟ್ಟವನಂತಿದ್ದ.

ಶ್ರೀಕಾಂತನ (ಎಲ್ಲಾ ಆಧುನಿಕ ವಿಕಾರಗಳನ್ನು ಹಠಾತ್ತಾಗಿ ತರುವವ) ಆಗಮನದಿಂದುಂಟಾಗುವ ಬದಲಾವಣೆಗಳ ಕೇಂದ್ರ ಬಿಂದು ಯಾರೆಂದು ಹೇಳುವುದೇ ಕಷ್ಟವಾಗುತ್ತದೆ ಕಥೆಯಲ್ಲಿ. ಇದು ಜಾಗತೀಕರಣದ ಪ್ರಕ್ರಿಯೆಯ ಸಂಕೀರ್ಣತೆಯನ್ನು ಸರಿಯಾಗಿ ಚಿತ್ರಿಸುತ್ತದೆ. ನಂತರದ ಭಾಗಗಳು, ಇತ್ತೀಚಿನ ವರ್ಷಗಳ ವಿಷಯಗಳನ್ನು ಚಿತ್ರಿಸುತ್ತವೆ. (ಅಲ್ಲಲ್ಲಿ ಮಾಸ್ತಿಯವರ 'ದೋರನ ಕಂಬಳ' ಮತ್ತು ಕೃಷ್ಣ ಆಲನಹಳ್ಳಿಯವರ 'ಪರಸಂಗದ ಗೆಂಡೆ ತಿಮ್ಮ' ಜ್ಞಾಪಕ ಬಂದಿತ್ತು ನನಗೆ, ಏಕೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾರೆ.) 'ಆ ದಿನ ಕೋಣೆಯಲ್ಲಿ ಏನೇನು ನಡೆಯಿತು ಎಂದು ಹೇಳುವುದು ಕಷ್ಟ' ಎನ್ನುವುದು ಕೂಡಾ ಪ್ರಕ್ರಿಯೆಯ ಸಂಕೀರ್ಣತೆಯನ್ನು ಧ್ವನಿಸುತ್ತದೆ. ಬೆಂಗಳೂರಿನ ಲಾವಣ್ಯಳ ಪ್ರೋತ್ಸಾಹವನ್ನು ಶ್ರೀರಂಗಪಟ್ಟಣದ ಶ್ರವಣ ಅಂದುಕೊಂಡುಬಿಟ್ಟಿರುತ್ತಾನೆ. ಅವಳಿಗೆ ಬೇಕಿತ್ತೇ ಇಲ್ಲವೇ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಎಲ್ಲವೂ 'ಊರು ಬಿಡುವುದೇ ಮುಖ್ಯ' ಎನ್ನುವಲ್ಲಿಗೆ ಬಂದು ನಿಲ್ಲುತ್ತದೆ. ಇಂತಲ್ಲಿ ಕೂಡಾ ವಾಸ್ತವ ಪ್ರಜ್ಞೆಯನ್ನು ಕಳೆದುಕೊಳ್ಳದೇ ಹೋದವರು 'ಲಕ್ಷಣ' ಜ್ಯೋತಿಷ್ಯದ ಹಿನ್ನೆಲೆಯಿದ್ದ ಶ್ರವಣನ ತಂದೆ ಮಾತ್ರ.

ನಂತರದ ಭಾಗಗಳಲ್ಲಿ, ಇತ್ತೀಚಿನ ವರ್ಷಗಳಲ್ಲಿ ಶ್ರವಣನ ಹಿನ್ನೆಲೆಯಿರುವ ಜನರು ಪಡುವ ಪಡಿಪಾಟಲುಗಳನ್ನು ಚಿತ್ರಿಸುತ್ತದೆ. ಅದೇ ರೀತಿ ಆ ಪಯಣದಲ್ಲಿ ಸಮಾಜದ ಎಲ್ಲಾ ವರ್ಗಗಳ ಛಾಯೆ ಶ್ರವಣನಂತಹವರಲ್ಲಿ ಮಾತ್ರ ಪಡಿಮೂಡುವುದನ್ನೂ ಕಥೆ ಚಿತ್ರಿಸುತ್ತದೆ. ಆ ಮೂಲಕ ಸಮಾಜದ ಬದಲಾವಣೆ, ಯಾವ ಆಧುನಿಕತೆ, ಯಾವ ಪರಂಪರೆಯ ಜೊತೆಗೆ ಬೆಸೆದುಕೊಳ್ಳುತ್ತಿದೆ ಎನ್ನುವುದೆಲ್ಲಾ ಕಥೆಯಲ್ಲಿ ಬರುತ್ತದೆ. ಅತ್ಯಾಧುನಿಕರಂತಿರುವವರು ಅಗತ್ಯ ಬಿದ್ದಾಗ ಜೋತುಬೀಳುವ ಪಾರಂಪರಿಕ ಸ್ವರೂಪಗಳು ಕೋಮುವಾದೀ ಪ್ರಕ್ರಿಯೆಗೆ ಹೆಚ್ಚಿನ ನೀರೆರೆಯುವಂತಿರುವುದರ ಸೂಚನೆಯೂ ಇದೆ, ಕಥೆಗಾರರಾಗಲಿ, ನಿರೂಪಕ ಶ್ರವಣನಾಗಲಿ, ಘೋಸ್ಟ್-ನಿರೂಪಕ ಆಧುನಿಕನಾಗಲೀ ಇದನ್ನು ನೇರವಾಗಿ ಎಲ್ಲೂ ಹೇಳುವುದಿಲ್ಲ. (ಇಷ್ಟೆಲ್ಲಾ ಆದರೂ, ಈ ಕೆಲ ಭಾಗಗಳಲ್ಲಿ ಶರವಣನ ಮೆಲುದನಿಯ ನಿರೂಪಣೆ ಸಡಿಲವಾಗಿ ಸ್ವಲ್ಪ ಭಾಷಣವಾಗಿಬಿಟ್ಟಿದೆ.) ಒಟ್ಟು ಸ್ವತಃ ನೆಮ್ಮದಿಯನ್ನು ಕಳೆದುಕೊಂಡವ ಇತರರಿಗೆ ನೆಮ್ಮದಿಯನ್ನು ಮಾರುವ ಮನುಷ್ಯನಾಗುವುದು ಮತ್ತೊಂದು ವಿಪರ್ಯಾಸ. ಅಪ್ಪನಿಂದ ಜ್ಯೋತಿಷ್ಯ ಕಲಿಯದೇ ಕೇವಲ ಭಾಷೆಯನ್ನು ಕಲಿಯುವುದು ಜ್ಞಾನದ ಛಿದ್ರವಾದ ಗ್ರಹಿಕೆಯಿಂದ ಉಂಟಾಗುವ ವಿಕೃತಿಯನ್ನು ಸೂಚಿಸುವಂತಿದೆ. ಇದೆಲ್ಲದರ ದುರಂತವಾಗಿ ಶರವಣ ಬೆಂಗಳೂರಿನ ಲಾವಣ್ಯಳನ್ನೂ ಕಳೆದುಕೊಂಡು ಏಕಾಂಗಿಯಾಗುತ್ತಾನೆ. ಆ ನಂತರ ಕಥೆಯಲ್ಲಿ ಲಾವಣ್ಯ ಮತ್ತೆ ಪ್ರತ್ಯಕ್ಷಲಾಗದೇ ಇರುವುದೂ ಒಂದು ವಿಶಿಷ್ಟವಾದ್ದನ್ನು ಧ್ವನಿಸುತ್ತದೆ. ಈ ಎಲ್ಲಾ ತಲೆಮಾರುಗಳ ದುರಂತ ಸಾಂದ್ರವಾಗಿ ಪ್ರತಿಫಲನಗೊಳ್ಳುವುದು ಶ್ರವಣ-ಲಾವಣ್ಯರ ಮಗಳಲ್ಲಿ ಅವಳ ಮೌನ ಧಾರಣೆಯಿಂದ ಎನ್ನುವುದು ನನ್ನಲ್ಲಿ ದಿಗ್ಭ್ರಮೆ ಹುಟ್ಟಿಸುತ್ತದೆ. ಆ ಹುಡುಗಿ ಸಂವೇದನಾಶೀಲಳಾಗದೇ ಹೋಗಿದ್ದರೆ ಹೇಗಿರುತ್ತಿದ್ದಳು ಎನ್ನುವುದಕ್ಕೆ ಕಥೆಯಲ್ಲಿ ಸಮಾನಾಂತರವಾದ ಪಾತ್ರವಿಲ್ಲದ್ದರಿಂದ ಅದನ್ನು ಇಲ್ಲಿ ಪ್ರಸ್ತಾಪಿಸಲು ಹೋಗುವುದಿಲ್ಲ. ಆದರೆ ಈ ಹುಡುಗಿ ಸಂವೇದನಾಶೀಲಳಂತಿದ್ದು ಅವಳ ದುರಂತ ಮುಖಕ್ಕೆ ರಾಚುತ್ತದೆ. ಶ್ರವಣ-ಲಾವಣ್ಯರ ಸಂಬಂಧಗಳು ಬಿರುಕುಬಿಡುವ ಭಾಗಗಳ ವರ್ಣನೆಗಳೆಲ್ಲಾ ಅವ್ಯಕ್ತಕ್ಕೆ ಕೈಚಾಚಿದಂತಿದ್ದು, ಅರ್ಥವಾಗದ ಪ್ರಕ್ರಿಯೆಗಳನ್ನು, ನಿಗೂಢವನ್ನು ಧ್ವನಿಸುವಂತಿದ್ದು ಕಥೆಯ ಹೆಚ್ಚುಗಾರಿಕೆಯಾಗಿದೆ.

ಈ ಎಲ್ಲಾ ದುರಂತಗಳು ಹೀಗಿದ್ದೂ, ಇಂತಲ್ಲೇ, ಒಟ್ಟು ಸಮುದಾಯವನ್ನು ಗಮನಿಸಬಲ್ಲ ಮನುಷ್ಯನ ಮಾದರಿಯೊಂದು ಸಿದ್ಧಗೊಳ್ಳುತ್ತಲಿರುವುದೂ ಶ್ರವಣನ ಬದುಕಿನ ಚಲನೆಯ ವಿವರಗಳಲ್ಲಿ ದೊರೆಯುತ್ತದೆ. ಪ್ರಜ್ಞಾಪೂರ್ವಕ ಸಿದ್ಧತೆಯಲ್ಲ ಇದು, ದಾಳಿಯ ನಡುವೆಯೂ ಪ್ರಕೃತಿ ಮನುಷ್ಯನಿಗೋಸ್ಕರ ಗುಟ್ಟಾಗಿ ಬಚ್ಚಿಟ್ಟಿರುವ, ಅಗತ್ಯ ಬಿದ್ದಾಗ ಒದಗಿಸುವ ಕ್ರಮ. ಆದರೆ ಅದನ್ನು ಬಳಸಿಕೊಳ್ಳುವಷ್ಟು ಶರವಣನಲ್ಲಿ ಸದ್ಯಕ್ಕೆ ಶಕ್ತಿಯಿಲ್ಲ.

ಶ್ರವಣನ ನಿವೇದನೆಯಲ್ಲಿ ನಿರೂಪಕನಿಗೆ ಒಂದು ಪ್ರಪಂಚದ ಪರಿಚಯವಾಗಿ ಅದರ ಜೊತೆ ಸಂಬಂಧ ಬೆಳೆಯುತ್ತದೆ. ಅದರ ಫಲವಾಗಿ ಶ್ರವಾಣನ ಮನೆಗೆ ಹೋದಾಗ ತನ್ನ ಸಹೋದ್ಯೋಗಿಗೂ, ಯು.ಜಿ. ವಿಚಾರಧಾರೆ, ಕಲ್ಟ್-ಗೂ ಸಂಬಂಧವಿರುವುದು ಗೊತ್ತಾಗುತ್ತದೆ. ಶರವಣನ ಸಂಪರ್ಕವಿರದೇ ಇದ್ದರೆ ಇದು ತಿಳಿಯುವ ಸಾಧ್ಯತೆ ಕಡಿಮೆಯಾಗಿರುತ್ತಿತ್ತು ಎನ್ನುವ ಧ್ವನಿಯಿದೆಯೇ ಇಲ್ಲಿ? ಆಧುನಿಕತೆಯ 'ಅತಿ'-ಯೆನ್ನುವುದು ಪರಂಪರೆಯನ್ನು ಸ್ಪರ್ಷಿಸಿ ಮತ್ತಷ್ಟು ವಿಕೃತಿಯಲ್ಲಿ ಪರ್ಯವಸಾನವಾಗುತ್ತಿದೆ ಎನ್ನುವುದು ಈ ಆಧುನಿಕನ ನಿಲುವೋ? ಈ ಭಾಗದ ಕಥೆಗೆ ನನಗೆ ಇನ್ನೂ ಅಷ್ಟಾಗಿ ದಕ್ಕಿಲ್ಲ.

ಈಗ ಶ್ರವಣನ ಮಗಳ ಜೀವನ ಸಾರ್ಥಕಗೊಳ್ಳಬೇಕಿದೆ. ಶ್ರವಣನ ಜೀವನವೂ. ಹಿಂದಿನ ತಲೆಮಾರಿನ ಶ್ರವಣನ ತಾಯಿಗೆ ನಂಬಿಕೆಯಿರುವುದು ಈ ಎಲ್ಲಾ ಅನುಭವಗಳಿಂದ ಹೆಚ್ಚು ಮಾರ್ದವಗೊಂಡಿರಬಹುದಾದ, ಶ್ರವಣನ ಮನೆಯವರೆಗೂ ಬರುವಷ್ಟು ಸಂಬಂಧ ಬೆಳೆಸಿಕೊಂಡಿರುವ, ಸ್ವಲ ಹೆಚ್ಚು ಪ್ರಾಮಾಣಿಕನಾಗಿರಬಹುದಾದ ಆಧುನಿಕನಾದ ನಿರೂಪಕನಲ್ಲಿ. ದುರಂತಗಳಿಂಡ ಝರ್ಝರಿತಳಾಗಿರುವ ಅತ್ಯಾಧುನಿಕ ಜೀವನದತ್ತ ಮುಖಮಾಡಿರುವ ಶ್ರವಣನ ಮಗಳಿಗೂ ಈ ಇದೇ ಆಧುನಿಕನ ಮೇಲೆ ನಂಬಿಕೆ, ಆಟೋಗ್ರಾಫ಼್ ಕೇಳುತ್ತಾಳೆ. ಹೀಗೆ ಭವಿಷ್ಯದತ್ತ ಮುಖ ಮಾಡಿ ಕಥೆ ಸಾರ್ಥಕವಾಗಿ ಮುಗಿಯುತ್ತದೆ.

ಇಷ್ಟೆಲ್ಲಾ ಹೇಳಿದ ಮೇಲೂ ಒಂದು ಮಾತನ್ನು ಹೇಳಬೇಕಿದೆ. ಕಥೆಯನ್ನು ಮುಂದಿಟ್ಟುಕೊಂಡು ಅದನ್ನು ಗಳಿಸಲೇಬೇಕೆನ್ನುವ ಹಠದಿಂದ ನನಗೆ ಈ ಬರಹ ಸಾಧ್ಯವಾದದ್ದು. ಹುಲಿಸವಾರಿಯ ಓದಿನ ಅನುಭವದಿಂದ ಪ್ರೇರೇಪಿತನಾಗಿ ನಾನು ಆ ಸಂಕಲನದ ಕಥೆಗಳನ್ನು ಮತ್ತೆ ಮತ್ತೆ ಓದಿ ನನ್ನದಾಗಿಸಿಕೊಳ್ಳುವುದು ಸಾಧ್ಯವಾಯಿತು. ಆದರೆ ಈ ಬರಹ ಅನುಭವದಿಂದ ಹೆಚ್ಚಾಗಿ ಬೌದ್ಧಿಕ ಸಾಧನೆಯಾಗಿದೆಯೆಂದರೆ ಒಂದೋ ಅದು ಕಥೆಯ ಕುರಿತ ಟೀಕೆಯಾಗುತ್ತದೆ ಇಲ್ಲವೋ ನನ್ನ ಸಂವೇದನೆಯ ಅಸಮರ್ಪಕತೆಯ ಕುರಿತ ಮಾತಾಗುತ್ತದೆ. ಎರಡನೇಯದ್ದೇ ಹೆಚ್ಚು ನಿಜವೆನ್ನಿಸುತ್ತದೆ. ಹುಲಿಸವಾರಿಯ ಹೆಚ್ಚಿನ ಕಥೆಗಳಲ್ಲಿ ನುಡಿಚಿತ್ರಗಳಿಂದ ಕಥೆ ನಿರೂಪಿತವಾಗಿರುವುದಕ್ಕೂ, ಈ ಸಂಕಲನದ ಹಾದಿ ಸಂಪೂರ್ಣ ಭಿನ್ನವಾಗಿರುವುದರಿಂದ ಹೀಗಾಗಿರಬಹುದು. ಕಥೆಯಲ್ಲಿ ಸೂಚ್ಯತೆಯೆನ್ನುವುದನ್ನು ಧರ್ಮ ಎನ್ನಿಸುವಷ್ಟು ಜತನದಿಂದ ಕಾಯ್ದುಕೊಳ್ಳಲಾಗಿದೆ. ಕಥೆಗೆ ಇದರಿಂದ ಕಾವ್ಯಾತ್ಮಕತೆ ಪ್ರಾಪ್ತವಾಗಿದೆ ಎಂದೆನ್ನಿಸದಿರದು. ಈವತ್ತಿನ ಯಾವುದೇ ಪ್ರಕ್ರಿಯೆಯನ್ನು ಇದು ಹೀಗೇ ಎನ್ನುವ ಖಚಿತವಾಗಿ ಹೇಳುವುದು ಕಷ್ಟವಾಗಿರುವುದರಿಂದಲೂ ಕಥೆಯ ಈ ಅತಿಸೂಚ್ಯತೆ ವಸ್ತುವಿನೊಂದಿಗೆ ಸಾವಯವ ಸಂಬಂಧ ಹೊಂದಿರುವ ತಂತ್ರ ಎಂದು ವಾದಿಸುವುದಕ್ಕೆ ಅವಕಾಶವಿದೆ. ಅದೇ ಸಮಯದಲ್ಲಿ, ಇದೊಂದು ನೀಳ್ಗತೆಯಾಗಿದ್ದಿದ್ದರೆ (ವಸ್ತು ಅದಕ್ಕೆ ತಕ್ಕುದಾಗಿದೆ ಎಂದೆನ್ನಿಸುತ್ತದೆ) ಅಥವಾ ಕಿರುಕಾದಂಬರಿಯಾಗಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತೇ ಎನ್ನುವ ಆಲೋಚನೆಗಳೂ ನನಗೆ ಬಂದವು. ಈ ಕುರಿತು ಯಾವುದೇ ನಿಲುವಿಗೆ ಬರಲು ಸಾಧ್ಯವಾಗಿಲ್ಲ.

ಇದೆಲ್ಲಾ ಅರ್ಥ-ಅಪಾರ್ಥಗಳ ಸರಣಿಯಂತೆ ಓದುಗರಿಗೆ ಮತ್ತು ಕಥೆಗಾರರಿಗೂ ತೋರಬಹುದು. ಅರ್ಥ-ಅಪಾರ್ಥಗಳ ಪೋಣಿಸಿದ ಮಾಲೆಯೊಂದನ್ನು ಕಥೆಗೆ ತೊಡಿಸುವುದಷ್ಟೇ ನನ್ನ ಉದ್ದೇಶ ಎನ್ನುವುದನ್ನು ವಿನಯದಿಂದ ಹೇಳುವುದಕ್ಕೆ ಬಯಸುತ್ತೇನೆ.

Sunday, February 05, 2006

ಮಣ್ಣ ಮನೆ ಕಲ್ಲು ಗುಡಿ




ಈ ಬಾರಿಯ ನಾನು ಗದ್ಯದಲ್ಲಿ ಏನೊಂದನ್ನೂ ಬರೆಯದೇ ಕೇವಲ ಪದ್ಯದಲ್ಲಿ ಪ್ರಸಕತಕ್ಕೆ ಪ್ರತಿಕ್ರಯಿಸಲು ತೀರ್ಮಾನಿಸಿದ್ದೇನೆ.

ಮಣ್ಣ ನೆಲವ ಉತ್ತು ಬಿತ್ತು
ತೋಡಿ ಪಡೆದು ನೀರು ಅನ್ನ
ಹಳ್ಳ ಕಡೆದು ಪಾಯ ಮಾಡಿ
ಬಗೆದು ಗೋಡೆ ಸೂರು ಕಟ್ಟಿ
ಸಗಣಿ ಬಳಿದು ಸ್ವಚ್ಛಗೊಳಿಸಿ
ಬರಿಗಾಲಿನ ನಡಿಗೆಯಲ್ಲೆ
ನೆಲವ ಊರಿ ರಸವ ಹೀರಿ
ಬೆಳೆದ ನೀವು ಮಣ್ಣ ಮಕ್ಕಳು
ಕಲ್ಲು-ಕೋಟೆ ಗರ್ಭ-ಗುಡಿ
ಬಂಡೆ ಕೆಳಗೆ ಹೂತ ಒಡವೆ
ನಿಮಗೆ ಅದನ ಧರಿಸುವಾಸೆ
ತಪ್ಪಲಿಲ್ಲ, ಸಹಜ ಬಿಡಿ
ಮನೆಗೆ ಚಿನ್ನ-ಸಿಂಗಾರ ಬೇಕು
ಗುಡಿಯ ಕಲ್ಲು ಮಂತ್ರದಿಂದ
ಅಥವ ಕಲ್ಲಿನಿಂದ ಸರಿಯೆ
ಮನೆಯ ಕೆಡವಬಲ್ಲನೆಂಬ
ಭಯವು ಸುಳ್ಳು ಅಲ್ಲವಲ್ಲ

ಒಡವೆಯಾಸೆ ಕಾಲುದಾರಿ
ಸುಲಭವಲ್ಲ, ಮನೆಯ ನೆಲವ
ಸಗಣಿಯಿಂದ ಸಾರಿಸಿಲ್ಲ
ಅಂಗಳದ ಗಿಡಗಳ್ಗಂತು
ನೀರನುಣಿಸಲಿಲ್ಲವಲ್ಲ
ನೀರು ಬಿಟ್ಟ ಮನೆಯು ಕಡೆಗೆ
ಕಣ ಕಣ ಗಟ್ಟಿಯಾಗಿ
ಬಂಡೆಮನೆಯ ಕೋಟೆ ಕೊನೆಗೆ

ಪೂಜೆಕೋಣೆಯಲ್ಲಿ ಕುಂಬಾರ
ಕೊಟ್ಟ ಮನೆಯ ದೇವ ಮೂರ್ತಿ
ಭಿನ್ನವಡೆದು ಗಮನವಿಲ್ಲ
ಮನೆಯೊಳಗೆ ಮಣ್ಣೊಡೆಯನಿಲ್ಲ
ಗುರಿಯೆ ಮುಖ್ಯ ಹಾದಿಯಲ್ಲಿ
ಮನೆಯ ಮಗು, ಜಾಣ ಕುರುಡೋ
ದೂರದೊಡವೆ ಕಲ್ಲುದಾರಿ
ಬಿಟ್ಟು ಏನು ಕಾಣದವಗೆ

ಗರ್ಭಗುಡಿಯ ಆಸೆ ಬೀಜ
ಹಾದರದ ಕುಣಿತ ಕುಣಿತ
ವಿಷದ ಗಿಡ ಬೇರನೂರಿ
ಕಲ್ಲು ಬಂಡೆ ಹೂವು ಚಿಗುರಿ
ಬಂಡೆಯೆಲ್ಲಾ ದೇವರಾಗಿ
ಕಾಣತೊಡಗಿ ಮಂಪರಾಗಿ
ಗರ್ಭಬುಡಿಯ ಒಳಗೆಪೋಗಲ್
ಕಲ್ಲಿನುರುಳು ಬಂಡೆಯುರುಳು
ವಿಷದ ಹೂವು ತಾನೆ ಗರ್ಭ
ಗುಡಿಯ ದೇವರಾಗಬಯಸು
ವುದನ ನೆಲವನೂರಿನಿಂತ
ಸುತಗೆ ತಿಳಿಯಲಿಲ್ಲವಲ್ಲ

ಗಾಳಿಬೆಳಕು ನೀರು ಇರುವ
ಮನೆಯ ಒಳಗೆ ಊರಿನಿಂತ
ಗುಡಿಯ ಮನೆಯ ತೇವದಾರಿ
ಯಿಂದ ಸವೆಸ ಸಂಕಲ್ಪಬಲದ
ಮಕ್ಕಳ್ ನಿಜಕ್ಕೂ ಯಾರು ಇಲ್ಲ
ಇರಲೆ ಇಲ್ಲ ಎಂದಿಗೂನು
ಕಲ್ಲ ದೇವನಾದರಿಹನೆ
ಗೊತ್ತಿಲ್ಲ, ದೇವರಂತು ಅಲ್ಲ

ಮನೆಯೊಳಗೆ ಮಣ್ಣೊಡೆಯನಿಲ್ಲ
ಎಲ್ಲೂ ಅವನ ಮಕ್ಕಳಿಲ್ಲ
ಗರ್ಭಗುಡಿಯ ದೇವರಿಲ್ಲ
ಕಲ್ಲು ಹೂವು, ವಿಷದ ಬೀಜ
ವಿಷದ ಒಡವೆ ಗಟ್ಟಿ ಹಾದಿ
ಅಷ್ಟೆ ಸದ್ಯ ನಮಗೆ ಇರುವುದು

ಆದರೂನೂ ಚಿಂತೆಯಿಲ್ಲ
ಕಾಲ ದೇಶ ವರ್ತಮಾನ
ಯಾವಾಗಲೂ ಹೀಗೆ ಏನೋ
ಮಳೆಯು ಸುರಿಯೆ ಕಾಯುತಿರುವೆ
ಕುಂಬಾರನನ್ನು ಹುಡುಕುತಿರುವೆ
ಎರೆಯ ಹುಳುವ ಕರೆಯುತಿರುವೆ
ಗಿಡದ ಪಾತಿ ಮಾಡುತಿರುವೆ
ಗಿಡಗಳಿಗೆ ಕೈಮುಗಿದೆ ಇರುವೆ
ಹೂ-ಹಣ್ಣು ಹಂಬಲಿಸುತಿರುವೆ
ಸಗಣಿ ರಂಗೋಲಿ ಕೇಳುತಿರುವೆ
ಮನದಿ ಪ್ರಾರ್ಥಿಸುತ್ತಲಿರುವೆ