ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Thursday, November 01, 2018

ಸಾವಿತ್ರಿ


ಸಾವಿತ್ರಿ - ಭಾಗ ಎರಡು

ತಂದೆ ಅಶ್ವಪತಿ ಅರಮನೆಗೆ ಹಿಂದಿರುಗಿದ ನಂತರ ಸಾವಿತ್ರಿ ಆಶ್ರಮ ನಿವಾಸಿಯಾದಳು. ರಾಜಕುಮಾರಿಯಂತೆ ಬೆಳೆದ ಸಾವಿತ್ರಿಯನ್ನು ಅತಿಸರಳ ವೇಷದಲ್ಲಿ ನೋಡಿ ನೊಂದ ಸತ್ಯವಾನ ಸಾವಿತ್ರಿಗೆ ಉಂಗುರವೊಂದನ್ನು ಕೊಟ್ಟನು. ಅದರ ಹೊಳಪಿನಲ್ಲಿ ಅವಳ ಸೌಂದರ್ಯದ ಸೊಬಗನ್ನು ಕನ್ನಡಿಯಂತೆ ನೋಡಿಕೊಳ್ಳುವಂತೆ ಹೇಳಿದನು. ನಕ್ಕಳು ಸಾವಿತ್ರಿ. ಹೀಗೆ ಕಣ್ಮುಚ್ಚಿ ತೆರೆಯುವುದರಲ್ಲಿ ಹೀಗೆ ಅನೇಕ ದಿನಗಳು ಕಳೆದವು. ಆಶ್ರಮ ಜೀವನದ ಸೌಂದರ್ಯದಲ್ಲಿ ಸಾವಿತ್ರಿ ಮುಂದೆ ಬರಲಿರುವ ದುರಂತವನ್ನು ಸ್ವಲ್ಪ ಮರೆತಳು.

ಸ್ವಲ್ಪ ಕಾಲಾನಂತರ ಸಾವಿತ್ರಿ ಎಚ್ಚೆತ್ತಳು. ಸತ್ಯವಾನನ ಆಯಸ್ಸು ಮುಗಿಯುವುದಕ್ಕೆ ಕೇವಲ ಮೂರೇ ತಿಂಗಳುಗಳಿದ್ದವು. ಸಾವಿತ್ರಿಯ ಎದೆಬಡಿತ ದಿನದಿನಕ್ಕೆ ಏರುತ್ತಿದ್ದರು ವಿಧಿಸಂಕಲ್ಪದ ವಿರುದ್ಧ ಮಾಡುವುದೇನು ಎನ್ನುವುದು ಸಾವಿತ್ರಿಗೂ ಸ್ಪಷ್ಟವಿರಲಿಲ್ಲ. ಆದರೆ ಅವಳ ತಪಸ್ಸು, ಉಪವಾಸ, ಧ್ಯಾನ, ಪೂಜೆಗಳು ಹೆಚ್ಚುತ್ತಾ ಹೋದವು. ಅತ್ತೆ, ಮಾವ ಮತ್ತು ಪತಿ ಅವಳ ಕಠಿಣ ಜೀವನ ರೀತಿಗೆ ಗಾಬರಿಗೊಂಡರೂ ಸಾವಿತ್ರಿ ಮಾತ್ರ ತನ್ನ ದೈನಿಕ ನಿಷ್ಠೆಯನ್ನ್ನು ಸಡಿಲಿಸಲಿಲ್ಲ. ಕಟ್ಟಕಡೆಗೆ ಆದಿನ ಬಂದೇಬಂದಿತು. ಸತ್ಯವಾನನ ಆಯಸ್ಸಿಗೆ ಇನ್ನೊಂದೇ ರಾತ್ರಿಯಿತ್ತು. ಮರುದಿನ ಪೂರ್ತಿ ಸತ್ಯವಾನನ ಜೊತೆಗೇ ಕಳೆಯುವುದೆಂದು ತೀರ್ಮಾನಿಸಿದಳು.

ಮರುದಿನ - ತನ್ನ ಬೆಳಗಿನ ದೈನಿಕಗಳನ್ನು ಬಿಟ್ಟು ಇಂದು ಸಾವಿತ್ರಿ ತನ್ನ ಜೊತೆ ಕಾಡಿಗೆ ಬರಬೇಕೆಂದು ಹಠ ಹಿಡಿದದ್ದು ನೋಡಿ ಸತ್ಯವಾನನಿಗೆ ಆಶ್ಚರ್ಯ. ಸಾವಿತ್ರಿಗೋ ಮುಖ್ದದಲ್ಲಿ ಮಂದಹಾಸ ಎದೆಯಲ್ಲಿ ಡಮರುಗ . ಅವಳ ಜೊತೆ ಕಾಡಿನಲ್ಲಿ ಏಕಾಂತ ದೊರೆಯುವುದೆಂದು, ಕಾಡಿನಲ್ಲಿ ಅವಳ ಕಾಲ್ಗೆಜ್ಜೆಯ ಸಪ್ಪಳ ಮಧುರವಾಗಿರುತ್ತದೆ ಸತ್ಯವಾನನಿಗೆ ಸಂತೋಷ. ಹೆಜ್ಜೆ ಹೆಜ್ಜೆಗೂ ಏರುತ್ತಿರುವ ಆತಂಕದೊಂದಿಗೆ ಭಾರದ ಹೆಜ್ಜೆಯೊಂದಿಗೆ ಸಾವಿತ್ರಿ ನಡೆದಳು. ಕಾಡಿನ ಸೌಂದರ್ಯವನ್ನು ಸವಿಯುತ್ತಾ, ಎಲ್ಲದರ ನಶ್ವರತೆ ಬಗ್ಗೆ ದುಃಖಿಸುತ್ತಾ ಮುನ್ನಡೆದಳು. ಮಧ್ಯೆಮಧ್ಯೆ ಸತ್ಯವಾನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಳು. ಒಂದೆಡೆ ಸತ್ಯವಾನ ಕಟ್ಟಿಗೆ ಕಡಿಯುತ್ತಿರುವಾಗ ಆ ಕ್ಷಣ ಬಂದೇ ಬಿಟ್ಟಿತು. 'ಸಾವಿತ್ರಿ' ಎಂದು ಜೀವಬಿರಿಯುವ ಧ್ವನಿಯಲ್ಲಿ ಸತ್ಯವಾನ ಚೀರಿದನು.'ಸಾವಿತ್ರಿ ನನಗೆ ಎಲ್ಲೆಡೆ ಶಕ್ತಿ ಕುಸಿಯುತ್ತಿದೆ, ಸ್ವಲ್ಪ ಮಲುಗುತ್ತೇನೆ' ಎಂದು ಭೂಮಿಗೊರಗಿದ ಸತ್ಯವಾನ ಮತ್ತೆ ಮೇಲೇಳಲಿಲ್ಲ. ಕ್ರಮೇಣ ಅವನ ದೇಹ ನಿಶ್ಚಲವಾಯಿತು. 'ಇನ್ನೇನು' ಎಂದೆನ್ನುವಷ್ಟರಲ್ಲಿ ಮತ್ತೆ ವಾತಾವರಣ ಬದಲಾಯಿತು. ಕಾಡಿನಲ್ಲಿ ಕತ್ತ್ತಲೆಯಾವರಿಸಿತು. ಎಲ್ಲೆಡೆ ಭಾರವಾದ ಭಾವ ನೆಲೆಯಾಯಿತು. ತಲೆಯೆತ್ತಿ ನೋಡಿದ ಸಾವಿತ್ರಿಗೆ ದೂರದಲ್ಲಿ ಕಡುಗತ್ತಲಿನ ಒಂದು ಆಕಾರ ಕಂಡಿತು, ತಲೆಯ ಮೇಲೆ ವಿಚಿತ್ರ ಕಿರೀಟವೊಂದು ಮೆರೆಯುತ್ತಿತ್ತು. ಕ್ರಮೇಣ ಆಕಾರ ಹತ್ತಿರ ಬಂದಿತು.

ಹೆದರದ ಸಾವಿತ್ರಿ 'ಯಾರು ನೀವು' ಎಂದು ಕೇಳಿದಳು. ಆಕಾರ ನಕ್ಕಿತು. 'ಏನು, ನನ್ನ ಗುರುತು ಸಿಗಲಿಲ್ಲವೇ ನಿನಗೆ? ನಾನೇ ಯಮಧರ್ಮರಾಜ - ಮೃತ್ಯುದೇವತೆ. ಗೊತ್ತಲ್ಲವೇ ನಿನಗೆ ಸತ್ಯವಾನನ ಆಯಸ್ಸು ಮುಗಿಯಿತೆಂದು. ಅವನ ಜೀವವನ್ನು ನನ್ನಜೊತೆ ಕೊಂಡೊಯ್ಯುವುದಕ್ಕೆ ಬಂದಿದ್ದೇನೆ' ಎಂದನು. ಇಷ್ಟು ಹೊತ್ತಿಗೆ ಕೋಣನ ಮೇಲೆ ಕೂತಿರುವ ಯಮಧರ್ಮ ಸ್ಪಷ್ಟವಾಗಿ ಗೋಚರಿಸುತ್ತಿದ್ದನು. ಸವಲ್ಪ ಸಾವರಿಸಿಕೊಂಡ ಸಾವಿತ್ರಿಗೆ ಎಲ್ಲವನ್ನೂ ನಿಧಾನಗೊಳಿಸುವ ಆಸೆ. 'ಯಮಧರ್ಮ, ಸಾಮಾನ್ಯವಾಗಿ ಈ ಕೆಲಸ ನಿನ್ನ ದೂತರದ್ದಲ್ಲವೇ, ನೀನೇ ಬಂದೆಯೇಕೆ?' ಎಂದು ಪ್ರಶ್ನಿಸಿದಳು. ಅವಸರದಲ್ಲಿದ್ದ ಯಮಧರ್ಮ 'ನಿಷ್ಕಲ್ಮಷನಾದ ಸತ್ಯವಾನ ಸಾಮಾನ್ಯನಲ್ಲವಾದ್ದರಿಂದ ನಾನೇ ಬರಬೇಕಾಯಿತು' ಎಂದನು. ಸ್ವಲ್ಪವೂ ಸಮಯಕಳೆಯದೇ ತನ್ನ ಪಾಶದಿಂದ ಸತ್ಯವಾನನ ಜೀವವನ್ನು ಹೀರಿ ಹಿಂದಿರುಗತೊಡಗಿದನು. ಸತ್ಯವಾನನ ಜೀವರಹಿತ ಮುಖನೋಡಿದ ಸಾವಿತ್ರಿಗೆ ಎಲ್ಲವೂ ವ್ಯರ್ಥವೆಂದೆನ್ನಿಸಿ ಮರುಕ್ಷಣವೇ ಸತ್ಯವಾನನ ಜೀವವಿರುವ ಯಮಧರ್ಮನನ್ನೇ ಹಿಂಬಾಲುಸುವ ಮನಸ್ಸ್ಯಾಯಿತು.

ಒಂದಿಷ್ಟು ದೂರದಲ್ಲಿ ಯಮಧರ್ಮನಿಗೆ ಕಾಣದ ಹಾಗೆ ಹಿಂಬಾಲಿಸುತ್ತಾ ನಡೆದಳು. ಅವಳ ಗೆಜ್ಜೆಯ ಸಪ್ಪಳವಿದ್ದರೂ ಗಾಳಿ, ಹುಲ್ಲು, ನೆರೆ-ತೊರೆಗಳು ಇವುಗಳ ಧ್ವನಿಯಲ್ಲಿ ಗೆಜ್ಜೆಯ ಸಪ್ಪಳ ಕರಗಿಹೋಗುತ್ತಿತ್ತು. ಬೆಟ್ಟದ ಕಠಿಣವಾದ ನೆಲದ ಮೂಲಕ ಹಾದುಹೋಗುವಾಗ ಯಮಧರ್ಮನಿಗೆ ಗೆಜ್ಜೆಯ ಸಪ್ಪಳ ಕೇಳಿ ಯಾರೋ ತನ್ನು ಹಿಂಬಾಲಿಸುತ್ತಿರುವ ಭಾಸವಾಯಿತು. ಹಿಂದೆ ತಿರುಗಿ ಸಾವಿತ್ರಿಯನ್ನು ಕಂಡನು. ಜಾಣೆಯಾದ ಸಾವಿತ್ರಿ ಪತಿಯಿರುವೆಡೆ ತಾನೂ ಇರಬಯಸುತ್ತೇನೆಂದೂ, ಅವನಿಲ್ಲದೆ ತಾನು ಹಿಂದಿರುಗುವಿದಿಲ್ಲವೆಂದೂ ನಿಶ್ಚಯದಿಂದ ಹೇಳಿದಳು. ಸಾವಿತ್ರಿಯ ಆಸೆ ಪ್ರಕೃತಿಗೆ ವಿರುದ್ಧವಾದ್ದೆಂದೂ ನೆರೆವೇರುವುದು ಅಸಾಧ್ಯವೆಂದು ಎಷ್ಟು ವಿವರಿಸಿದರೂ ಸಾವಿತ್ರಿ ಜಗ್ಗಲಿಲ್ಲ. ಕಡೆಗೆ ಯಮಧರ್ಮ ಸ್ವಲ್ಪ ತುಂಟತನದಿಂದ 'ನಾನೇಕೆ ನಿನ್ನ ಮಾತನ್ನು ಕೇಳಬೇಕು, ನಾನೇಕೆ ನಿನ ಸಹಾಯ ಮಾಡಬೇಕು' ಎಂದು ಕುಳಿತನು. ಜಾಣೆಯಾದ ಸಾವಿತ್ರಿ ಈ ಅವಕಾಶಕ್ಕಾಗೇ ಕಾಯುತ್ತಿದ್ದಳು. 'ಯಮನೇ, ಏಳು ಹೆಜ್ಜೆಗಳನ್ನು ಯಾರ ಜೊತೆಯಾದರೂ ನಡೆದರೆ ಅವರು ನಮಗೆ ಸ್ನೇಹಿತರೆಂದು ಶಾಸ್ತ್ರ ಹೇಳುತ್ತದೆ. ನಿನ್ನೊಡನೆಯಾದರೋ ಅನೇಕ ಯೋಜನೆಗಳನ್ನೇ ಕಳೆದಿದ್ದೇನೆ. ಕಷ್ಟದಲ್ಲಿರುವ ಸ್ನೇಹತರಿಗೆ ಸಹಾಯ ಮಾಡುವುದು ಸ್ನೇಹಧರ್ಮ' ಎಂದಳು ಸಾವಿತ್ರಿ. ಅವಳ ಬುದ್ಧಿವಂತಿಕೆ, ಜ್ಞಾನವನ್ನು ಮೆಚ್ಚಿದ ಯಮ 'ಸಾವಿತ್ರಿ, ನಿನ್ನನ್ನು ಮೆಚ್ಚಿದೆ. ನಿನ್ನ ಪತಿಯ ಜೀವವೊಂದನ್ನು ಬಿಟ್ಟು ಬೇರೆ ಇನ್ನೇನಾದರೂ ವರವನ್ನು ಬೇಡು' ಎಂದನು. ಹಿಂದೆ ಮುಂದೆ ನೋಡದ ಸಾವಿತ್ರಿ 'ನಮ್ಮ ಮಾವಂದಿರ ದೃಷ್ಟಿ ಮತ್ತು ಎರಡೂ ಅವರಿಗೆ ಮತ್ತೆ ದೊರೆಯುವಂತಾಗಲಿ' ಎಂದು ಬೇಡಿದಳು. ತನನ್ಗಾಗಿ ಅವಳು ಏನನ್ನೂ ಬೇಡದೇ ಇರುವುದು ಯಮನಿಗೆ ಮಹದಾಶ್ಚರ್ಯವಾಯಿತು. 'ಸರಿ, ನೀನಿನ್ನು ಹಿಂದಿರುಗು. ಇಲ್ಲಿಂದ ಮುಂದಿನ ದಾರಿ ದುರ್ಗಮ ಅದು ನಿನಗಲ್ಲ' ಎಂದನು. ಸಾವಿತ್ರಿಗೆ ಮಾತ್ರ ಈ ಸಂಭಾಷಣೆಯಿಂದ ಹೆಚ್ಚಿನ ಸ್ಥರ್ಯ ಬಂಡಿತ್ತು. 'ಬದುಕೋ ಸಾವೋ ಅದು ಸತ್ಯವಾನನ ಜೊತೆಯಲ್ಲೇ ಎಂದು ನಾನು ಎಂದೋ ನಿರ್ಧರಿಸಿಯಾಯಿತು ಯಮಧರ್ಮ' ಎಂದಳು. 'ನೋಡು ಮಗಳೇ ನಿನ್ನ ಪತಿ ಅಲ್ಲಿ ಕಾಡಿನಲ್ಲಿ ನಿರ್ಜೀವವಾಗಿದ್ದಾನೆ. ಅವನ ಅಂತ್ಯಸಂಸ್ಕಾರ ನಡೆಯಬೇಕಲ್ಲವೇ' ಎಂದು ಮನಸ್ಸನು ತಿರುಗಿಸಲು ಪ್ರಯತ್ನಿಸಿದ ಯಮ. 'ಯಮನೇ, ದೇಹಕ್ಕೂ ಜೀವಾತ್ಮನಿಗೂ ವ್ಯತ್ಯಾಸವನ್ನು ನಾನು ನಿನಗೆ ಹೇಳಿಕೊಡಬೇಕೇ' ಎಂದಳು. ಹೀಗೇ ನಡೆದ ಮಾತುಕತೆಯಿಂದ ಕಾಡು ವಿಶೇಷ ಜೀವಪಡೆದಿತ್ತು. ಯಮನಿಗೇ ತನ್ನ ಉಸಿರು ಹೆಚ್ಚು ಹಿತವಾದಂತೆ ಅನ್ನಿಸಿತು. ಮತ್ತೆ ನಿಧಾನದಿಂದ ಮುಂದುವರೆಯುತ್ತಾ 'ನೋಡು ಸಾವಿತ್ರಿ. ನಿನ್ನ ಪತಿಯ ಜೀವ ಇನ್ನು ಮರಳುವುದು ಅಸಾಧ್ಯ. ಆದರೆ ನಿನ್ನ ಶ್ರದ್ಧೆ, ಅಚಲ ಮನಸ್ಸು, ಕಠಿಣ ಪರಿಶ್ರಮ ಮತ್ತು ಅಸಾಧಾರಣ ಬುದ್ಧಿವಂತಿಕೆಗೆ ನಾನು ಮನಸೋತಿದ್ದ್ದೇನೆ. ಇನ್ನೆರಡು ವರಗಳನ್ನು ಬೇಡಿಕೊ' ಎಂದನು. ಸಾವಿತ್ರಿಯ ಮನಸ್ಸು ಸಿದ್ಧವಾಗಿತ್ತು. 'ನಾನು ಮದುವೆಯಾಗಿ ಮತ್ತೊಂದು ರಾಜ್ಯಕ್ಕೆ ಹೋಗುವೆನಾಗಿ ನಮ್ಮ ತಂದೆಯ ರಾಜ್ಯವನ್ನು ಮುಂದುವರೆಸುವುದಕ್ಕೆ ಯಾರೂ ಇಲ್ಲ. ದಯವಿಟ್ಟು ನನ್ನ ತಂದೆಗೆ ಮಕ್ಕಳನ್ನು ಕರುಣಿಸು' ಎಂದಳು. 'ತಥಾಸ್ತು' ಎಂದನು ಯಮ. ಇಷ್ಟು ಹೊತ್ತಿಗೆ ಯಮ ಸಾವಿತ್ರಿಯ ಮಾತಿನ ಮೋಡಿಗೆ ಮರುಳಾಗಿದ್ದನು. ಸಂದರ್ಭ ನೋಡಿದ ಸಾವಿತ್ರಿ 'ಮೂರನೇಯ ವರವಾಗಿ ನನಗೆ ನೂರು ಮಕ್ಕಳನ್ನು ಕರುಣಿಸು' ಎಂದಳು. ಹಿಂದೆ ಮುಂದೆ ನೋಡದ ಯಮ 'ತಥಾಸ್ತು' ಎಂದುಬಿಟ್ಟನು. 'ಧನ್ಯೋಸ್ಮಿ' ಎಂದ ಸಾವಿತ್ರಿ ಮತ್ತೆ ಯಮನ ಜೊತೆ ನಡೆದಳು.

'ಸಾವಿತ್ರಿ, ಆಯಿತಲ್ಲ ಮೂರು ವರಗಳು. ಇನ್ನು ವಾಪಸ್ಸು ನಡೆ' ಎಂದನು. ವಿನೀತಳಾಗಿ ಸಾವಿತ್ರಿ 'ಯಮನೇ, ಪತಿಯಿಲ್ಲದೇ ನಾನು ನೂರು ಮಕ್ಕಳನ್ನು ಹೇಗೆ ಪಡೆಯುವುದು' ಎಂದು ಕೈಮುಗಿದು ಕೇಳಿದಾಗ ಯಮನಿಗೆ ಎಚ್ಚರವಾಯಿತು. ಸಾವಿತ್ರಿಯ ಮಾತಿನ ಮೋಡಿದ ಮರುಳಾದ ಪರಿಣಾಮ ಗೋಚರಿಸಿತು. 'ಎಲಾ ಸಾವಿತ್ರಿ, ಕಡೆಗೂ ನೀನೇ ಗೆದ್ದೆ' ಎಂದು ಮನದಲ್ಲೇ ಮೆಚ್ಚಿಕೊಂಡನು. 'ಸಾವಿತ್ರಿ, ನಿನ್ನ ಅಪರಿಮಿತ ಶ್ರದ್ಧೆ ಮತ್ತು ಏಕಾತ್ಮತೆಗೆ ನಾನು ಮೆಚ್ಚಿದೆ. ಇಗೋ, ನಿನ್ನ ಪತಿಯ ಪ್ರಾಣವನ್ನು ಹಿಂದಿರುಗಿಸುತ್ತಿದ್ದೇನೆ, ಹೋಗು' ಎಂದನು. ಸಾವಿತ್ರಿ ಒಂದೇ ಉಸಿರಿಗೆ ಹಿಂದಿರುಗಿ ಓಡಿ ಸತ್ಯವಾನನ ಬಳಿ ಬಂದಳು. ಸತ್ಯವಾನನಿಗೆ ನಿಧಾನವಾಗಿ ಜೀವ ವಾಪಾಸು ಬರುತ್ತಿರುವಂತಿತ್ತು. 'ಇದೇನು ಅದೆಷ್ಟು ಹೊತ್ತು ನಾನು ಮಲಗಿದ್ದೆ' ಎಂದು ಸತ್ಯವಾನ ಏನೂ ಆಗಿಲ್ಲದವನಂತೆ ಎದ್ದನು. ಸಾವಿತ್ರಿ ಅತಿಸಂತೋಷದಿಂದ ಆದರೆ ಮೌನವಾಗಿ ತಲೆಯಾಡಿಸಿ ಸತ್ಯವಾನನ ಜೊತೆ ಹೆಜ್ಜೆ ಹಾಕುತ್ತಾ 'ನೂರು ಮಕ್ಕಳು, ಇದು ಯಮನ ವರ' ಎಂದು ಮೆಲುಕು ಹಾಕುತ್ತಾ ಆಶ್ರಮಕ್ಕೆ ನಡೆದಳು. ನಡೆದದ್ದೊಂದೂ ಸತ್ಯವಾನನಿಗೆ ತಿಳಿಯಲಿಲ್ಲ.

ಇತ್ತ ಆಶ್ರಮದಲ್ಲಿ ದ್ಯುಮತ್ಸೇನನಿಗೆ ದೃಷ್ಟಿ ವಾಪಸಾಗಿ ದಂಪತಿಯರಿಬ್ಬರೂ ಆಶ್ಚರ್ಯಗೊಂಡಿದ್ದರು. ಸಾವಿತ್ರಿ ಸತ್ಯವಾನರು ಏಕಿಷ್ಟು ತಡಮಾಡಿದರು ಎಂದು ಕಾಯುತ್ತಿದ್ದ ಅವರನ್ನು ನೋಡಲು ಅವರ ಸೈನಿಕರು ನೋಡುವುದಕ್ಕೆ ಬಂದರು. ಶತ್ರುಗಳು ಮತ್ತೊಂದು ಯುದ್ಧದಲ್ಲಿ ಸೋತು ಈಗ ಸಾಲ್ವ ರಾಜ್ಯ ಮತ್ತೆ ತಮ್ಮ ವಶವಾದ ಶುಭವಾರ್ತೆ ತಿಳಿಸಿದರು. ಅದೇ ಹೊತ್ತಿನಲ್ಲಿ ಸಾವಿತ್ರಿ ಸತ್ಯವಾನರು ಕಾಡಿನಿಂದ ಹಿಂದಿರುಗಿದರು. ದ್ಯುಮತ್ಸೇನನಿಗೆ ಮಾತ್ರ ಇದೆಲ್ಲದರ ಹಿಂದೆ ಸಾವಿತ್ರಿಯ ಪುಣ್ಯಶಕ್ತಿಯಿರುವ ಹಾಗೆ ಭಾಸವಾಯಿತು. 'ಮಗಳೇ, ನೋಡು ನೀನು ಬಡವನ ಮನೆಗೆ ಸೊಸೆಯಾಗಿ ಬಂದೆ, ಆದರೆ ಈಗ ರಾಣಿಯಾಗಿ ಮುಂದೆ ನಿನ್ನ ಮಕ್ಕಳು ರಾಜಯೋಗ ಪಡೆಯುವರು' ಎಂದು ಮಾರ್ಮಿಕವಾಗಿ ನುಡಿದನು. ಎಲ್ಲರೂ ಸಾಲ್ವ ದೇಶಕ್ಕೆ ಹಿಂದಿರುಗಿ ದ್ಯುಮತ್ಸೇನ ಮತ್ತೆ ರಾಜನಾದನು. ಹೀಗೆ, ಸಾವಿತ್ರಿ ತನ್ನ ಜಾಣ್ಮೆ, ಜ್ಞಾನ, ಧೀಶಕ್ತಿಯಿಂದ ಯಮನನ್ನೇ ಗೆದ್ದಳು.


ಈ ಕಥೆ ಮಹಾಭಾರತದ ವನಪರ್ವದಲ್ಲಿ ಬರುತ್ತದೆ. ದ್ರೌಪದಿಗಿಂತ ಮಿಗಿಲಾದ ಶ್ರದ್ದ್ಯೆ, ತಪಸ್ಸು ಇರುವ ಸ್ತ್ರೀ ಹಿಂದೆ ಯಾರಾದರೂ ಇದ್ದರೆ ಎಂದು ಯುಧಿಷ್ಠಿರನು ಕೇಳಿದ ಪ್ರಶ್ನೆಗೆ ಉತ್ತರವಾಗಿ ಮಾರ್ಕಂಡೇಯ ಮುನಿಗಳು ಸಾವಿತ್ರಿಯ ಕಥೆಯನ್ನು ವಿವರಿಸುತ್ತಾರೆ.

0 Comments:

Post a Comment

<< Home