ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Saturday, March 22, 2008

ಭಾರತೀಯನಿಗೇ ವಿಶಿಷ್ಟವಾದ ಆಧುನಿಕತೆಯ ಶೋಧವಿರುವ 'ನವಿಲುಗಳು' ಕತೆ


ಈ ಲೇಖನವನ್ನು ಬರೆದದ್ದು ನನ್ನ ಸ್ನೇಹಿತನೊಬ್ಬನ ಪ್ರಶ್ನೆಯೊಂದಕ್ಕೆ ಉತ್ತರವಾಗಿ. ಡಾ ಅನಂತಮೂರ್ತಿಗಳ ನವಿಲುಗಳು ಕಥೆಯ ಕುರಿತು ನಾಲ್ಕು ಸಾಲುಗಳಲ್ಲಿ ಬರೆ ಎಂದಿದ್ದ. ನನ್ನ ಜಾಯಮಾನದಲ್ಲೇ ನಾಲ್ಕು ಸಾಲುಗಳಲ್ಲಿ ಬರೆಯುವುದು ಬರೆದಿಲ್ಲ. ಮನಸ್ಸಿನಲ್ಲಿ ಮೂಡುವ ಎಲ್ಲವನ್ನೂ ಮಂಡಿಸಲೇಬೇಕು ಎನ್ನುವ ಹಠ ಅದಕ್ಕೆ ಅಡ್ಡಿಯಾಗುತ್ತದೆ. ಇಷ್ಟಾಗಿಯೂ ಬರೆದೆ. ನನ್ನ ಬಹಳವಾಗಿ ಕಾಡಿದ ಈ ಕಥೆಯ ಕುರಿತಾಗಿ ನನಗೆ ಕನ್ನಡ ವಿಮರ್ಶೆಯಲ್ಲಿ ಇರುವ ಅಭಿಪ್ರಾಯಗಳಿಗಿಂತ ಭಿನ್ನವಾದ ನಿಲುವು ಇದೆ ಎಂದೆನ್ನಿಸಿದ ಕಾರಣ ಇದನ್ನು ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ.

ನನ್ನ ಗ್ರಹಿಕೆಯ ಕ್ರಮದಲ್ಲಿ ಮೂಡಿದ ಕಥಾ ಸ್ವಾರಸ್ಯ ಇಷ್ಟು. ಸಾರ್ವತ್ರಿಕ ಕಳಕಳಿಯ ಅಂಶಗಳನ್ನೊಳಗೊಂಡೂ ಭಾರತೀಯನಿಗೇ ವಿಶಿಷ್ಟವಾದ ಭಿತ್ತಿಯೊಂದನ್ನು ಮೂಡಿಸುವ ಈ ಕಥೆ ನಾಲ್ಕು ನೆಲೆಗಳಲ್ಲಿ ಹರಡಿಕೊಂಡಿದೆ: ಒಂದು - ಬಾಲ್ಯದ ಮುಗ್ಧತೆ ಮತ್ತು ಮಧ್ಯವಯಸ್ಕ ಪ್ರೌಢಿಮೆ, ಎರಡು - ಆಧುನಿಕತೆ ಮತ್ತು ಪರಂಪರೆ, ಮೂರು - ಅತಿಬೌದ್ಧಿಕತೆ ಮತ್ತು ವ್ಯಕ್ತಿತ್ವ ಸಹಜತೆ, ನಾಲ್ಕು - ಚೌಕಟ್ಟು, ಪರಿಮಿತಿ, ಬಂಧನ ಮತ್ತು ಸ್ವಾತಂತ್ರ್ಯ.


ಇಲ್ಲಿನ ಕಥಾನಾಯಕ ಒಬ್ಬ ವಿಶಿಷ್ಟ ಆಧುನಿಕ ಭಾರತೀಯ. ಭಾರತದಲ್ಲಿ ಆಧುನಿಕತೆಯ ಬೃಹತ್ ಪ್ರಕ್ರಿಯೆಯ ವಿಶಿಷ್ಟ ಕೂಸು. ಈ ಪ್ರಕ್ರಿಯೆಯ ಒಂದು ವಿಶಿಷ್ಟ ಹಂತದಲ್ಲಿ ಸ್ಟಾಕ್ ಟೇಕಿಂಗ್-ಗೆ ತೊಡಗುತ್ತಾನೆ. ತನ್ನ ಜೀವಿತಾವಧಿಯಲ್ಲಿ ತನ್ನ ಜೀವನರೀತಿಯ ವೈಶಿಷ್ಟ್ಯದಿಂದ ಪಡೆದುಕೊಂಡದ್ದೇನು ಎನ್ನುವ ಸಿಂಹಾವಲೋಕನಕ್ಕೆ, ಆತ್ಮಾವಲೋಕನಕ್ಕೆ ತೊಡಗುತ್ತಾನೆ. ಭೂತ, ವರ್ತಮಾನಗಳ ಒತ್ತಡವೊಂದು ಕಾಲದ ಬಿಂದುವೊಂದರಲ್ಲಿ ಸೃಷ್ಟಿಸಿರುವ ಈ ಆತ್ಮಾವಲೋಕನವನ್ನು ನಿರ್ದೇಶಿಸುತ್ತಿರುವುದು ಆಧುನಿಕತೆಯೋ ಪರಂಪರೆಯೋ ಎನ್ನುವುದು ಬಹುಮುಖ್ಯವಾದ ಪ್ರಶ್ನೆ.

o---------------o------------------o------------------o-----------------o-----------------o

ಕಥಾನಾಯಕ ತನ್ನ ಅಪ್ಪ ಅಮ್ಮಂದಿರನ್ನು, ಚಿಕ್ಕಂದಿನಲ್ಲಿ ತಾನು ಅವರನ್ನು ಗ್ರಹಿಸಿದ ಬಗೆಯನ್ನು ನೆನೆಯುತ್ತಾನೆ. (ಒಂದು ಬಗೆಯಲ್ಲಿ ಇದನ್ನು ಆತ್ಮಾವಲೋಕನಕ್ಕೆ ಹಿನ್ನೆಲೆಯೆಂದಾಗಿಯೂ ಪರಿಗಣಿಸಬಹುದು). ಅವನ ಕಣ್ಣಿನಲ್ಲಿ ತನ್ನ ಅಪ್ಪ ಪರಂಪರೆಯ ಪ್ರತಿನಿಧಿ. ಅಪ್ಪ ತನ್ನ ಸಹಜವಾದ ಸ್ವಾತಂತ್ರ್ಯವನ್ನು ಸಾಮಾಜಿಕ ಕಟ್ಟುಗಳಿಗೆ ಅಡವಿಡುವುದಕ್ಕೆ ಒಪ್ಪವುದಿಲ್ಲ. ಅದೇ ಕಾರಣಕ್ಕೆ ತನ್ನ ಕುಟುಂಬದ ಶ್ರೇಯಸ್ಸನ್ನು ಕಾಪಾಡಲಾಗದೇ ಹೋಗಿದ್ದಾನೆ. ಇದಕ್ಕೆ ಕಾರಣಗಳು ಸ್ಪಷ್ಟವಿಲ್ಲ. ಆಧುನಿಕ ವ್ಯವಸ್ಥೆಗಳು ಸಮಾಜವನ್ನು ಬೇಧಿಸಿ ಒಳನುಸುಳುತ್ತಿರುವ ಸಂದರ್ಭವದು. ಅದಕ್ಕೆ ಹೊಂದಿಕೊಳ್ಳಲಾಗದೇ ಅಪ್ಪ ಈ ರೀತಿಯಾಗಿದ್ದಿರಬಹುದು. ಆದರೆ, ಕಥಾನಾಯಕನ (ಬುದ್ಧಿಗೆ ಹೊಳೆದಿರಬಹುದಾದ?) ಮನಸ್ಸಿಗೆ ಈ ಯಾವ ವಿವರಣೆಗಳೂ, ಕಾರಣಗಳೂ ತಟ್ಟಿಲ್ಲ. ಅಪ್ಪನ ವರ್ತನೆಯ ಫಲವಷ್ಟೇ ಮನದುಂಬಿದೆ. ಅಪ್ಪನ ನಡೆ, ನಿಲುವುಗಳಿಂದಲೇ ಉಂಟಾದ ತನ್ನ ತಾಯಿಯ ಮತ್ತು ತನ್ನ ಪರಿಸ್ಥಿತಿ ಅಪ್ಪನಿಗೆ ತಟ್ಟಲಿಲ್ಲ ಎಂದೇ ಕಥಾನಾಯಕನ ಗ್ರಹಿಕೆ. ಅಷ್ಟೇ ಅಲ್ಲದೆ, ಕಥಾನಾಯಕನಿಗೆ ಇದು ಪರಂಪರೆಯ ಕುರಿತೇ ಮಹತ್ವದ ವಿಷಯವಾಗಿ ಕಾಣುತ್ತದೆ. ಅಪ್ಪನ ನೆರಳಲ್ಲಿರುವವರೆಗೆ ಪರಂಪರೆ ಚೌಕಟ್ಟೆನ್ನಿಸದೇ (ತನ್ನ ತಾಯಿಗೂ, ತನಗೂ?) ಬಂಧನವೆನ್ನಿಸುತ್ತದೆ. ಸಮಸ್ಯೆಗಳಿಗೆ ಪರಿಹಾರವಿಲ್ಲವೆಂದೆನ್ನಿಸುತ್ತದೆ.


ಇದೇ ಪ್ರೇರಣೆಯಾಗಿ ಆಧುನಿಕತೆಯ ಪ್ರಮುಖ ಸಂಗತಿಯಾದ ವೈಯಕ್ತಿಕತೆಯನ್ನು ಮೈಗೂಡಿಸಿಕೊಂಡಿರುವ ನಾಯಕ ಈ ಹೊಸ ಚೌಕಟ್ಟಿನಲ್ಲಿ ಅಂತಿಮವಾಗಿ ಗಳಿಸಿರುವುದು ಕೌಟುಂಬಿಕ ಸ್ವಾತಂತ್ರ್ಯ, ವಂಶಾಭಿವೃದ್ಧಿ, ಜೀವನಸ್ಥಿರತೆ ಮತ್ತು ಪ್ರಾಯಶಃ ತನಗೆ ಬೇಕಾದ ಜೀವನಸಂಗಾತಿಯನ್ನೇ ಆಯ್ಕೆ ಮಾಡಿಕೊಂಡಿದ್ದೇನೆ ಎನ್ನುವ ಅಹಂ.

o---------------o------------------o------------------o-----------------o-----------------o

ಈ ಇಂತಹ ಪರಿಸ್ಥಿತಿಯಲ್ಲಿ ಆತ್ಮಾವಲೋಕನಕ್ಕೆ ತೊಡಗಿರುವ ಕಥಾಯಕನಿಗೆ ಈಗೀಗ ಅವನಿಗೆ ತನ್ನ ಆಧುನಿಕ ಜೀವನವೂ ಬಂಧನವೆನ್ನಿಸತೊಡಗಿದೆ. ಕಥಾನಾಯಕನ ಜೀವನರೀತಿಯ ಯಶಸ್ಸನ್ನು ತನ್ನ ಅಸ್ತಿತ್ವದಿಂದಲೇ ಬಹುಮುಖ್ಯವಾಗಿ ಧ್ವನಿಸುವ ಜೀವನಸಂಗಾತಿಯೊಡನೆ ಈಗೀಗ ಘರ್ಷಣೆಯಿದೆ, ಅತೃಪ್ತಿಯಿದೆ. ಅದು ವರ್ತಮಾನದ ಸ್ಥಿತಿ. ಈ ವರ್ತಮಾನ ಕಥಾನಾಯಕನ ಭೂತದ ಕಾಲದ ಪರಿಕಲ್ಪನೆಯನ್ನೂ ಬದಲಾಯಿಸುತ್ತಿದೆ. ತಾನು ಅಪ್ಪನಲ್ಲಿ ದ್ವೇಷಿಸುತ್ತಿದ್ದ ಸ್ವಾತಂತ್ರ್ಯಪ್ರಿಯತೆ ಈಗ ಅವರ ವ್ಯಕ್ತಿತ್ವದ ಬಹುಮುಖ್ಯ ಸಂಗತಿಯಾಗಿ ಆಕರ್ಷಿಸುತ್ತಿದೆ. ತನ್ನ ಜೀವನದಲ್ಲಿ ಅದರ ಕೊರತೆ ಎದ್ದು ಕಾಣುತ್ತಿದೆ. ತನ್ನ ಜೀವನ ರೀತಿಯ ಮಹತ್ತರ ಪ್ರತಿನಿಧಿಗಳು ಈಗ ಕಥಾನಾಯಕನಿಗೆ ತನ್ನ ಜೀವನವನ್ನು ಬಂಧಿಸುತ್ತಿವೆ ಎಂದೆನ್ನಿಸುತ್ತಿದೆ. ಈ ತನ್ನ ಪ್ರತಿನಿಧಿಗಳ ಸಮಕ್ಷಮದಲ್ಲೇ ಪರಂಪರೆಯನ್ನು ಮೆಚ್ಚುವ, ಪ್ರತಿನಿಧಿಗಳನ್ನು ಚುಚ್ಚುವ ಮನಸ್ಸಾಗುತ್ತಿದೆ. ತನ್ಮೂಲಕ ಮತ್ತೆ ಹೊಸಮನುಷ್ಯನಾಗುತ್ತಿದ್ದೇನೆನ್ನುವ ತೃಪ್ತಿಗೆ ಕಥಾನಾಯಕ ಹಾತೊರೆಯುತ್ತಿದ್ದಾನೆ.

ಆದರೆ ಅದೂ ಕೂಡಾ ಹುಸಿಯೆನ್ನುವಂತಿದೆ. ಮತ್ತೆ ಹೊಸಮನುಷ್ಯನಾಗುವ ಪ್ರಕ್ರಿಯೆಗೆ ತೊಡಗಿಕೊಳ್ಳುವ ಸ್ಥೈರ್ಯವಾಗಲೀ, ನಿಜಾಕಾಂಕ್ಷೆಯಾಗಲೀ ಕಥಾನಾಯಕನಿಗೆ ಇದ್ದಂತಿಲ್ಲ. ಅದು ಕೂಡಾ ತೋರಿಕೆಯದ್ದಾಗಿದೆ, ಕೇವಲ ಬೌದ್ಧಿಕವಾಗಿದೆ. ಆತ್ಮವಂಚನೆಯಾಗಿದೆ. (ಈ ಹಂತದಲ್ಲಿ ನನಗೆ ಕಥೆ ಆಧುನಿಕತೆಯ ಬಹುದೊಡ್ಡ ಸಮಸ್ಯೆಯನ್ನು ಧ್ವನಿಸುತ್ತಿದೆ ಎಂದೆನ್ನಿಸಿತು. ಆಧುನಿಕತೆಯ ಕ್ರಮದಲ್ಲಿ ಮಹತ್ವದ್ದರ ಅರಿವಾಗುತ್ತದೆ. ಆದರೆ ಆ ಅರಿವು ಕ್ರಿಯಾಶೀಲವಾಗುವಷ್ಟು ಶಕ್ತವಾಗಿರುವುದಿಲ್ಲ. ಈ ಬರಿಯ ಬೌದ್ದಿಕತೆ ನಮ್ಮನ್ನು ಅತಂತ್ರವಾಗಿಸುತ್ತದೆಯೇ?)

ಕಥಾನಾಯಕ ತನ್ನ ಆಧುನಿಕ ಕ್ರಮದಲ್ಲೇ ಆತ್ಮಾವಲೋಕನದಲ್ಲಿ ಮತ್ತಷ್ಟು ಮುಂದುವರೆದು ಪಡೆಯುವ ಸ್ಪಷ್ಟತೆಯಿಷ್ಟು. ಎಷ್ಟೆಲ್ಲ ಹೀಗೆ ಬದಲಾಯಿಸಿಯೂ ಆಧುನಿಕತೆ ಒಂದಿಷ್ಟು ಮುಖ್ಯವಾದ ಅರಿವಿಗೇ ಬೇಕಾಗುವಷ್ಟು (ಪಾರಂಪರಿಕ?) ಸತ್ವವನ್ನು ಉಳಿಸಿದೆ. ಆದರೆ ಮತ್ತಷ್ಟು ಅನೇಕ ವಿಷಯಗಳಿಗೆ access ಅಸ್ಪಷ್ಟಗೊಳಿಸುತ್ತದೆ. ಪರಂಪರೆಯಿರಲಿ ಬಾಲ್ಯವನ್ನೇ inaccessible ಮಾಡುತ್ತದೆ. ಬಾಲ್ಯ, ಪರಂಪರೆಗಳ ಅನುಭವದ ಸೌಂದರ್ಯವನ್ನು, ಅದರ ಅಸ್ತಿತ್ವವನ್ನೇ ಅನುಮಾನಿಸುವಂತೆ ಮಾಡುತ್ತದೆ. ಇವತ್ತನ್ನು ಮಾತ್ರ ನಂಬುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗೆ ಜೀವನವನ್ನು ನಿಸ್ಸಾರಗೊಳಿಸುತ್ತದೆ. ಕಥಾನಾಯಕನಲ್ಲಿ ಈ ಅರಿವಿನಿಂದುಂಟಾಗುವ ಸಿಟ್ಟು ಕೂಡಾ ಎಷ್ಟು ಸ್ವಕೇಂದ್ರಿತವಾಗಿಬಿಟ್ಟಿದೆಯೆಂದರೆ: ತನ್ನ ಜೀವನರೀತಿಯ ಬಹುದೊಡ್ಡ ಪ್ರತಿನಿಧಿಯಾದ ತನ್ನ ಹೆಂಡತಿ ಕೂಡಾ ಇದೇ ಪ್ರಕ್ರಿಯೆಯಲ್ಲಿ ತನ್ನ ತರಹ ಆಗಿದ್ದಾಳೆ ಎನ್ನುವುದರ ಅರಿವು ಕೂಡಾ ಕಥಾನಾಯಕನಿಗೆ ಕಷ್ಟವಾಗಿದೆ. ಈ ಅರಿವು, ಬಂಡಾಯಗಳು ಆತ್ಮಹಿಂಸೆಗಷ್ಟೇ ಅನುವುಮಾಡಿಕೊಡುತ್ತಿದೆ, ಮರುಹುಟ್ಟಿಗಲ್ಲ. (ಇದು ಕೂಡಾ ಆಧುನಿಕತೆಯ ವೈಶಿಷ್ಟ್ಯವೇ?)

ಇದೆಲ್ಲವೂ ಆಧುನಿಕತೆಯ ಕುರಿತು ಥಿಯರೈಸ್ ಮಾಡುವಂತೆ ಪ್ರೇರೇಪಿಸುತ್ತದೆ. ಆಧುನಿಕತೆ ಹೊಸ ಚೌಕಟ್ಟು ತನ್ಮೂಲಕ ಹೊಸದಾದ ಜೀವನ ಸುಭದ್ರತೆ, ಸುರಕ್ಷಿತತೆಗಳ ಆಶ್ವಾಸನೆ ಕೊಡುತ್ತದೆ. ಆದರೆ ಅದರ ಗಳಿಕೆಯ ಹಾದಿ ಮತ್ತು ಕಡೆಗೆ ನಮ್ಮನ್ನು ತಲುಪಿಸುವ ನೆಲೆ, ಸ್ಥಿತಿಗಳಲ್ಲಿ ಇರುವ ಜೀವನಾನುಭವದ ಮಿತಿ ನಮ್ಮನ್ನು ಕೊಳೆಸುತ್ತದೆ. ಚೌಕಟ್ಟು ಮತ್ತೆ ಬಂಧನವೆನ್ನಿಸುತ್ತದೆ. ಸ್ವಾತಂತ್ರ್ಯವಿರಲಿ, ಸ್ವಚ್ಛಂದವನ್ನು ಬಯಸುವಂತಾಗುತ್ತದೆ.

o---------------o------------------o------------------o-----------------o-----------------o

ಈ ಹಂತದಲ್ಲಿ ಕಥೆ ಚಿಕ್ಕದಾಗಿ ಸಾರ್ವತ್ರಿಕ ನೆಲೆಗಳಿಗೆ ಹಾರುತ್ತದೆ. ಎಲ್ಲಾ ಕಾಲದಲ್ಲಿಯೂ ಸ್ವಚ್ಛಂದತೆಯ ಬಯಕೆ ಇದ್ದೇ ಇದೆ. ಅದು ಅಪಾಯಕ್ಕೆ ದಾರಿಸಿದ್ಧಪಡಿಸಿಯೇ ಇರುತ್ತದೆಯಾಗಿ ಅದರಲ್ಲಿ ವಿಹರಿಸಬಯಸುವ ಮನುಷ್ಯ ಸುರಕ್ಷಿತತೆಯತ್ತ ಗಮನವಿತ್ತೇ ಇರುತ್ತಾನೆ. ಆದರೆ ತಮ್ಮ ಸುರಕ್ಷಿತತೆಯನ್ನು ಮತ್ತೊಬ್ಬರ ಸ್ವಾತಂತ್ರ್ಯ-ಹರಣದಲ್ಲಿ ಮನುಷ್ಯರು ಗಳಿಸಿದರೂ ಅದು ಗಮನಕ್ಕೆ ಬರುವುದಿಲ್ಲ. ತಮಗಾಗುವ ಸ್ವಾತಂತ್ರ್ಯಹರಣ ಮಾತ್ರ ಅನುಭವಕ್ಕೆ ಬರುತ್ತದೆ. ಸ್ವಾತಂತ್ರ್ಯದ ಹಾದಿಯಲ್ಲಿ ಚೌಕಟ್ಟು, ಬಂಧನದಲ್ಲಿದ್ದಾಗ ಸ್ವಚ್ಛಂದ - ಇದು ಎಂದೆಂದಿಗೂ ಮುಗಿಯದ ಕತೆಯಾಗಿಬಿಡುತ್ತದೆ.

ಸಂದರ್ಭಕ್ಕೆ ವಾಪಾಸು ಬರುವ ಕಥೆ ಕಥಾನಾಯಕನ ಆತ್ಮಾವಲೋಕನವನ್ನು ಮುಂದುವರೆಸುತ್ತದೆ. ಗಮನ ಆಧುನಿಕತೆಯ ಮಾರ್ಗದಿಂದ ಆಧುನಿಕ ಬೌದ್ಧಿಕತೆಯ ಸ್ವರೂಪದತ್ತ ಹರಿಯುತ್ತದೆ. ಆಧುನಿಕ ಬೌದ್ಧಿಕತೆಯ ಸಮಸ್ಯೆಯೆಂದರೆ ಮತ್ತೊಬ್ಬರಲ್ಲಿ ಕಾಣುವ ಜೀವಂತಿಕೆಯ ಸೆಲೆಯನ್ನು ಕಾಣುವಷ್ಟು ಶಕ್ತಿ ಉಳಿಸಿರುತ್ತದೆ. ಬೌದ್ಧಿಕತೆಯನ್ನು ಮೀರಿದ ಅನುಭವವನ್ನು ಧರಿಸುವ ಶಕ್ತಿಯಿದ್ದ ಕಾಲವನ್ನು ಜ್ಞಾಪಿಸುತ್ತದೆ. ಆದರೆ ಅವೆರಡನ್ನೂ ಸಹ ನಿಜವೋ ಸುಳ್ಳೋ ಅನುಮಾನಿಸುವಂತೆ ಮಾಡುತ್ತದೆ. ಇದರಿಂದ ಸಾಧ್ಯವಾಗಿರುವ 'ಸ್ಥಿತಿಯ ಅರಿವಿಗೆ' ಮರುಹುಟ್ಟನ್ನು ಸಾಧ್ಯವಾಗಿಸುವುದಕ್ಕಿಂತ ವ್ಯಕ್ತಿತ್ವದ ಹುಸಿಯನ್ನು ಹೆಚ್ಚಾಗಿಸುವುದೇ ಸಹಜವಿರುವಂತಿದೆ. ಆಧುನಿಕ ಬೌದ್ಧಿಕತೆ ವ್ಯಾವಹಾರಿಕ ಏಳ್ಗೆಯೇ ಉದ್ದಿಶ್ಯವಾಗಿರಿಸಿಕೊಂಡಂಥದ್ದು. ಅದಕ್ಕಿಂತ ಹೆಚ್ಚಿನ ಜೀವನಾನುಭವವನ್ನು ವಂಚಿಸುತ್ತದೆ. ಆದರೆ ಅದರ ಮಂಪರಿನ ಅರಿವನ್ನು ಮಾತ್ರ ಉಳಿಸಿರುತ್ತದೆ.

o---------------o------------------o------------------o-----------------o-----------------o

ಕಥಾನಾಯಕನಿಗೆ ಈ ಸ್ಥಿತಿಯ ಹಿಂಸೆಯಿಂದ (ಪಾರಾಗುವುದಕ್ಕೆ?) ಇತಿಹಾಸಕ್ಕೆ ಹಿಂದಿರುಗಿ ತನ್ನ ಪರಂಪರೆಯ ಜೀವಂತಿಕೆಯನ್ನು ಮರಳಿ ಪಡೆಯಬೇಕೆನ್ನಿಸಿದೆ. ಆದರೆ ಈ ಮರಳುವಿಕೆ ಸುಲಭವಾಗಿಲ್ಲ. ಈ ಕ್ರಮ ಆಧುನಿಕವಾದ್ದರಿಂದ ಅದರ ಇತಿಹಾಸದ ಮುಂಚಲನೆಗೇ ಅದು ಮಹತ್ವ ಕೊಡುತ್ತದೆ. ಆಧುನಿಕತೆಯ ಮುಂಚಲನೆಯ ಪ್ರಕ್ರಿಯೆ ತನ್ನ ಜೀವನದಲ್ಲಿ ನಡೆಸಿದ ಬದಲಾವಣೆಗಳು ಕಥಾನಾಯಕನಿಗೆ ಈ ಮರಳುವಿಕೆ ಅಸಾಧ್ಯವಾಗಿಸುತ್ತದೆ. ತನ್ನದೇ ವೈಯಕ್ತಿಕ ಪಾಡು, ತಾಯಿಯ ಹರಿದ ಬಟ್ಟೆ - ಇವುಗಳು ತಂದೆಯಿಂದ ದೂರವಾಗುವುದಕ್ಕೆ ಪ್ರೇರಣೆ ಕೊಟ್ಟು, ಆಧುನಿಕತೆಯ ಹಾದಿಯನ್ನು ಕ್ರಮಿಸುವಂತೆ ಮಾಡಿದೆ.
ಕಥಾನಾಯಕನ ಆತ್ಮಾವಲೋಕನದ ಕ್ರಮ ಮತ್ತಷ್ಟು ವಿಪರ್ಯಾಸಗಳನ್ನು ಗುರುತಿಸುತ್ತದೆ. ತಾನು ಈ ಆಧುನಿಕತೆಯ ಜೀವನಕ್ರಮ ಹಿಡಿದದ್ದರ ಮುಖ್ಯ ಪ್ರೇರಣೆ ತನ್ನ ತಾಯಿಯ ಪಾಡು. ಅಂತೆಯೇ, ಆಧುನಿಕತೆಯ ಇದೇ ಕ್ರಮ ಇಂದು ತನ್ನ ಜೀವನಸಂಗಾತಿಯನ್ನು ಗಳಿಸಿಕೊಟ್ಟಿದೆ, ಇಂದು ಅವಳೇ ತನ್ನ ಜೀವನ ರೀತಿಯ ಮುಖ್ಯ ಪ್ರತಿನಿಧಿ. ಆದರೆ ಇದೇ ಜೀವನಸಂಗಾತಿಯ ಕಾರಣ, ಅದೇ ತಾಯಿಯಿಂದ ದೂರವಾಗುವಂತಾಗಿದೆ. ಆಧುನಿಕತೆ ನಾವು ಬಯಸಿದಲ್ಲಿ ನಿಲ್ಲುವುದಿಲ್ಲ, ಅದರ ಮೇಲ್ಚಲನೆ ತನ್ನಷ್ಟಕ್ಕೆ ತಾನೇ ಸ್ವತಂತ್ರ. ಇದೆಲ್ಲ ಕಥಾನಾಯಕನಿಗೆ ಆತ್ಮವಿಮರ್ಶೆಯಲ್ಲಿ ಕಾಣಿಸುತ್ತದೆ. ಆದರೆ ಆಧುನಿಕ ಬೌದ್ಧಿಕತೆಯೆನ್ನುವುದು ಆತ್ಮವಿಮರ್ಶೆಯನ್ನೂ ಕ್ಷುದ್ರವಾಗಿಸುವ ಶಕ್ತಿ ಪಡೆದಿದೆ. ಇದು ಕ್ರಿಯಾಶೀಲತೆಯಾಗಿ ಮುಂದುವರೆದಿಲ್ಲ.

o---------------o------------------o------------------o-----------------o-----------------o

ಇಷ್ಟು ನಿರಾಶಾವಾದಿಯಾಗುವ ಅವಶ್ಯಕತೆಯೂ ಇಲ್ಲ. ಆದರೆ ಆಗಾಗ್ಗೆ ಈ ಸುಳಿಯಿಂದ ತಪ್ಪಿಸಿಕೊಂಡು ನಮ್ಮ ಪಾರಂಪಾರಿಕ ಪಾವಿತ್ರ್ಯವನ್ನು ಮತ್ತೆ ಸಾಕ್ಷಾತ್ಕರಿಸಿಕೊಳ್ಳುವ ಹಾದಿಗಳೂ ಇನ್ನೂ ಇವೆಯೆನ್ನಿಸುತ್ತದೆ. ಬೌದ್ಧಿಕತೆಯನ್ನು ಮೀರಿದ ಅನುಭವಕ್ಕೆ ತೆರೆದುಕೊಂಡಾಗ (ಮಧುರವಾದ ಹಾಡೊಂದನ್ನು ಕೇಳಿದಾಗ) ಹೀಗೆನ್ನಿಸುತ್ತದೆ. ಇನ್ನೂ ಬದಲಾಗದ ಕಾಡೊಳಗಿನ ಧೂಳು ರಸ್ತೆಯಲ್ಲಿ ಶರದೃತುವಿನ ಬೋಳು ಮರಗಳು ಇನ್ನೂ ಇವೆ. ಆದರೆ 'ಪರಂಪರೆಯ ಗ್ರಹಿಕೆಯಾಗಿ ಅಪ್ಪ' ಇರುವವರೆಗೆ ನಾವು ಅತ್ತ ಇಣುಕುವುದಿಲ್ಲ. ಕಥಾನಾಯಕನೂ ಸಹ. ಅವರನ್ನು ಕಳೆದುಕೊಂಡ ನಂತರವೇ ಅದರತ್ತ ಪ್ರೇರಣೆ.

ಇಷ್ಟೆಲ್ಲಾ ಆದರೂ ಕಥಾನಾಯಕನಿಗೆ ಪರಂಪರೆಯಲ್ಲೇನೋ ಸಮಸ್ಯೆ ಕಂಡಿದೆ. ಅದನ್ನು ಸಾಂದರ್ಭಿಕ ಮತ್ತು ಸಾರ್ವತ್ರಿಕ ನೆಲೆಗಳಲ್ಲಿ ಶೋಧಿಸುವುದಕ್ಕೆ ತೊಡಗುತ್ತದೆ. ಯಾವ ಚೌಕಟ್ಟು ತನ್ನ ತಂದೆ ತನ್ನ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದಕ್ಕೆ, ತನ್ಮೂಲಕ ಒಂದು ಒಳದಾರಿಯನ್ನು ಗಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿಸಿತೋ, ಅದು ತನ್ನ ತಾಯಿಯ ಸ್ವಾಸ್ಸ್ಥ್ಯವನ್ನು, ಸುರಕ್ಷಿತತೆಯನ್ನು ಸಾಧ್ಯವಾಗಿಸಲಿಲ್ಲವಲ್ಲ! ಅಪ್ಪನ ಸ್ವಾತಂತ್ರ್ಯದ ಬಯಕೆ, ಅಮ್ಮನ ಸುಭದ್ರತೆಯ ಬಯಕೆ ಒಂದಕ್ಕೊಂದು ಘರ್ಷಿಸಿವೆ. (ಈ ಘರ್ಷಣೆಯ, ಬಿರುಕಿನ ಮಧ್ಯದಲ್ಲಿ ಆಧುನಿಕತೆ ತನ್ನ ಪ್ರಕ್ರಿಯೆಯನ್ನು ಸಾಧ್ಯವಾಗಿಸಿದೆ.)
ಅಲ್ಲೂ ಸಹ ಸ್ವಾತಂತ್ರ್ಯ-ಚೌಕಟ್ಟುಗಳ ತಿಕ್ಕಾಟದ ಮಧ್ಯದಲ್ಲಿ ತತ್ಪರತೆ (ಮಗನಾದ ಕಥಾನಾಯಕನಿಗೆ) ಆಗಾಗ್ಗೆ ಸಾಧ್ಯವಾಗಿರುವಂತಿದೆ. ಚೌಕಟ್ಟಿನತ್ತಲೇ (ತಾಯಿ) ಮನಸೆಳೆದಿರುವ ಸ್ವಾತಂತ್ರ್ಯವನ್ನು (ತಂದೆ) ಹಿಂಬಾಲಿಸಿತ್ತಲೇ ಸಾಗುವ ಈ ಹಾದಿಯಲ್ಲಿ ಕಥಾನಾಯಕನಿಗೆ ನವಿಲುಗುಡ್ಡ, ನವಿಲುಗರಿ, ತತ್ಪರತೆ, ಒಳದಾರಿಯಿಂದ ಜೀವನಸಾಫಲ್ಯ. ಅಂದೂ, ಇಂದೂ ಆ ಚೌಕಟ್ಟನ್ನು ಮೀರುವ ಕ್ರಮದಲ್ಲೇ ನವಿಲುಗುಡ್ಡ, ನವಿಲುಗರಿ ಗಳಿಕೆ ಸಾಧ್ಯ.

ಸ್ವಲ್ಪ ತಾತ್ವೀಕರಿಸುತ್ತೇನೆ. ಇಷ್ಟಕ್ಕೆ ಕಥೆ ಪ್ರೇರೇಪಿಸುತ್ತದೆ - ತನ್ನೊಳಗೆ ಈ ಆಕೃತಿಯನ್ನು ಸಾಧ್ಯವಾಗಿಸುತ್ತದೆ. ಒಂದು ಜೀವನಕ್ರಮವನ್ನು ಜೀವನ್ಮರಣದ ಪ್ರಶ್ನೆಯೆನ್ನುವಂತೆ ಬದುಕುವ ಮನುಷ್ಯನಿಗೆ (ಕಥಾನಾಯಕನ ಅಪ್ಪ) ಅದರ ಸರಿ-ತಪ್ಪು ಕಾಡುವುದಿಲ್ಲವೆಂದೆನ್ನಿಸುತ್ತದೆ. ಆದರೆ ಅದು inaccessible ಆದ ಮನುಷ್ಯನಿಗೇ (ಕಥಾನಾಯಕ) ಅದು ಹೆಚ್ಚು ಮುಖ್ಯವೆಂದೆನ್ನಿಸುತ್ತದೆ. ಒಳದಾರಿಯೊಂದು ಫಲಿಸಿದಾಗ ನೈತಿಕತೆ, ಬೌದ್ಧಿಕತೆಯ ಸಮಸ್ಯೆ ಅಷ್ಟಾಗಿರುವುದಿಲ್ಲ. ಚೌಕಟ್ಟೊಂದು ಒಳದಾರಿಯೊಂದನ್ನು ಸೃಷ್ಟಿಸಿಕೊಂಡು ಸಾಫಲ್ಯ ಕಂಡುಕೊಂಡ ನಂತರ ಮಿಕ್ಕೆಲ್ಲ ಚೌಕಟ್ಟುಗಳ ಜೊತೆಯೂ ಹೊಂದಾಣಿಕೆಗೆ ಸಿದ್ಧವಿರುತ್ತದೆ, ಘರ್ಷಣೆಯ ಭಯವಿಲ್ಲದೇ. ಒಳದಾರಿ ಕಳೆದ ಮೇಲೂ ಸಹ. ಆದರೆ ತನ್ನ ಚೌಕಟ್ಟಿನ ಅರಿವೂ ಸಹ ಗಾಢವಾಗಿರುತ್ತದೆ. ಇದು ನಮ್ಮ ಜೀವನ ರೀತಿಯೇ? ಆಧುನಿಕತೆಯಲ್ಲಿ ಇಂತಹ ಒಳದಾರಿಗಳು ಸಿಗದಂತಾಗುತ್ತಿದೆಯೇ?

o---------------o------------------o------------------o-----------------o-----------------o

ಕಥಾನಾಯಕ ತನ್ನ ಆಧುನಿಕ ಆತ್ಮಾವಲೋಕನದ ಅಂತಿಮ ಹಂತಕ್ಕೆ ಬಂದಿದ್ದಾನೆ. ಈ ವಯಸ್ಸಿನಲ್ಲಿ ತಾನು (ಸ್ವಾತಂತ್ರ್ಯಾಕಾಂಕ್ಷಿಯಾದ ತನ್ನ ಅಪ್ಪನ ಬದುಕಿಗೂ, ತನಗೂ ಹೊಸ ಚೌಕಟ್ಟೊಂದನ್ನು ಸೃಷ್ಟಿಸಿಕೊಂಡ) ಜಾನಕಮ್ಮನನ್ನು ಹುಡುಕಿಕೊಂಡು ಹೋಗುವುದು ಬಾಲ್ಯದ ತತ್ಪರತೆಯನ್ನೂ, ತಾನು ಕಳೆದುಕೊಂಡಿರುವ ಅಪ್ಪನನ್ನೂ ಗಳಿಸುವ ಕ್ರಮವೇ? ಈ ಹಿಂದೆ ಅಪ್ಪನಿಂದ ಸಿಡಿದೆದ್ದು ಹೊಸ ಚೌಕಟ್ಟೊಂದನ್ನು ಸೃಷ್ಟಿಸಿಕೊಂಡಿದ್ದೇನೆ. ಈಗ ಬಂಧನವಾಗಿರುವ ಆ ಚೌಕಟ್ಟನ್ನು ಮೀರುವುದಕ್ಕೆ ಅಪ್ಪನ ಶ್ರಾದ್ಧದ ನಂತರ ಅಪ್ಪನಿಂದ ಸಿಕ್ಕ ಹೊಸಸ್ವಾತಂತ್ರ್ಯದಿಂದ ಪ್ರೇರೇಪಣೆ ಪ್ರಯತ್ನವೇ? ಆಗಿನಂತೆ ಈಗಲೂ ಜಾನಕಮ್ಮನೇ ನವಿಲುಗುಡ್ಡಕ್ಕೆ ದಾರಿಯೇ? ಚೌಕಟ್ಟಿನ ಜೊತೆಗಿನ ತಿಕ್ಕಾಟವೇ ಮತ್ತೆ ಅದಕ್ಕೆ ಪ್ರೇರಣೆ, ಆಗ ತಾಯಿ ಈಗ ಜಾನಕಮ್ಮ.ಆದರೆ ಈಗ ತನಗೆ ತತ್ಪರನಾಗುವುದು ಸಾಧ್ಯವೇ? 'ಸಿಗರೇಟ್ ಹಚ್ಚಿ ಕಾದು' ನೋಡಾಬೇಕಾದ ಆಧುನಿಕ ಬೌದ್ಧಿಕ ಅನಿವಾರ್ಯತೆಯಿರುವ ಸ್ಥಿತಿಗೆ ತತ್ಪರತೆ ಸಾಧ್ಯವೇ, ಹಿಂದೆ ಸಾಧ್ಯವಿದ್ದ ತತ್ಪರತೆಯನ್ನು ಕನಿಷ್ಠ access ಮಾಡುವುದಾದರೂ ಸಾಧ್ಯವೇ.

ಆದರೆ ಈಗಲೂ ಕನಿಷ್ಠ ಸಾಧ್ಯತೆಯೊಂದಿದೆ. ಮಗಳಿಗೆ ನವಿಲುಗರಿಯನ್ನಾದರೂ ಆಯ್ದು ಹೋಗಬಹುದಾಗಿದೆ. ಭರವಸೆಯೇನಿದ್ದರೂ ಭವಿಷ್ಯದ್ದು ಮಾತ್ರವೇ. ಈ ಜವಾಬ್ದಾರಿಯ ಅರಿವೂ ಇದೆ. ತನ್ನ ಮಗಳಿಗೆ ತತ್ಪರತೆ ಸಾಧ್ಯವಾಗುವ ಸಾಧ್ಯತೆಯಿದೆ ಎನ್ನುವಷ್ಟರಮಟ್ಟಿಗಿನ ಅರಿವು ಆಧುನಿಕ ಕಥಾನಾಯಕನಿಗಿದೆ. ಕಥಾನಾಯಕನಿಗೆ ತನ್ನಿಂದಿನ ಸ್ಥಿತಿಯಲ್ಲೂ ಪಾವಿತ್ರ್ಯದ ಅವಶ್ಯಕತೆ ಅನುಭವಕ್ಕೆ ಬರುತ್ತದೆ. ಅದನ್ನು ನಿರಾಕರಿಸುವಷ್ಟು ಜೀವನ ಕ್ಷುದ್ರವಾಗಿಲ್ಲ. ಇವತ್ತಿನ ಪ್ರತಿ ಅನುಭವವನ್ನೂ ದಿವ್ಯಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ. ಆದರೆ ಆಧುನಿಕ ಬೌದ್ಧಿಕತೆ ಜೀವನಾನುಭವವನ್ನು ದಿವ್ಯಗೊಳಿಸುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಅಂತಹ ಅನುಭವವನ್ನು access ಮಾಡುವುದಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ಇವತ್ತಿನ ನಿಜವೆಂದರೆ 'ಹೇಳಿಕೊಳ್ಳುವಾಗ ಅಲ್ಲ, ಹೇಳಿಕೊಳ್ಳಲಾರದಂತೆ ನೋಯುತ್ತ, ಕಾರಿನ ಬಾಗಿಲು ತೆಗೆದು ಒಳಗೆ ಕೂರುತ್ತಿದ್ದಾಗ ಅನ್ನಿಸಿತ್ತಲ್ಲ ಆ ಯಾತನೆ' ಇದು ನಿಜ. (ಕಥೆಗೆ ನನಗೆ ಪ್ರವೇಶ ಒದಗಿಸಿದ ವಾಕ್ಯವಿದು). ಹೀಗೆ ಆಧುನಿಕ ಬೌದ್ಧಿಕತೆ ಪಾರಂಪರಿಕವಾಗಿ, ವ್ಯಕ್ತಿತ್ವದ ಸಹಜತೆಯಲ್ಲಿ ನಮಗಾಗುವ ಅರಿವಿನ ಬಗ್ಗೆ ಕೂಡಾ, ನಿಜಕ್ಕೂ ಆಯಿತೋ ಇಲ್ಲವೋ ಎನ್ನುವ ಅನುಮಾನವನ್ನು ಹುಟ್ಟುಹಾಕುತ್ತದೆ.

ಆಧುನಿಕತೆಯಿಂದ ನಾವು ಗಳಿಸಿರುವುದರ ಕುರಿತಾಗಿ ದಟ್ಟವಾದ ಅನುಮಾನ ಮತ್ತು ಪರಂಪರೆಯ ಕುರಿತು ಆಧುನಿಕರು ತಳೆದಿರುವ ನಿಲುವುಗಳ ಕುರಿತು ತಮ್ಮದೇ ಕ್ರಮದ ಮೂಲಕ ಉಂಟಾಗುವ ಅನುಮಾನವನ್ನೂ ಈ ಕಥೆ ಅನನ್ಯವೆನ್ನಿಸುವ ನಿರೂಪಣಾಕ್ರಮದಲ್ಲಿ, ಆತ್ಮಾವಲೋಕನದ ಧ್ವನಿಯಲ್ಲಿ ಬಿಂಬಿಸುತ್ತದೆ ಎನ್ನ್ನುವುದು ನನ್ನ ನಿಲುವು. ಸಾಮಾನ್ಯವಾಗಿ ಕಥೆಯೊಂದರಲ್ಲಿ ಆತ್ಮಾವಲೋಕನದ ಕ್ರಮ ಭೂತದ ಸೀಮಿತ ಗ್ರಹಿಕೆಯಾಗುವ ಅಪಾಯ ಯಾವತ್ತಿನದ್ದು. ಆದರೆ ಈ ಕಥೆ ಅದನ್ನೇ ತನ್ನ ವೈಶಿಷ್ಟ್ಯವನ್ನಾಗಿಸಿಕೊಂಡು, ಅಪಾಯವನ್ನು ಮೀರಿಬಿಟ್ಟಿದೆ. ಕಥಾಸಂದರ್ಭ ಮತ್ತು ಕಥೆಯ ವಸ್ತುವೈಶಾಲ್ಯತೆ ಅದನ್ನು ಸಾಧ್ಯವಾಗಿಸಿದೆ. ಆಧುನಿಕತೆಯ ದೊಡ್ಡಮಟ್ಟದ ಟೀಕೆಯಾಗಿ ನಾನು ಈ ಕಥೆಯನ್ನು ಕಂಡಿದ್ದೇನೆ.

ಈ ಕತೆಯನ್ನು ನಾನು ಓದಿರುವ ರೀತಿ ಇದು. ಡಾ ಅನಂತಮೂರ್ತಿಗಳೂ ಸೇರಿದಂತೆ ಓದುಗರು, ವಿಮರ್ಶಕರು ಈ ಕುರಿತು ಏನು ಹೇಳಬಹುದು ಎನ್ನುವುದರ ಕುರಿತು ಕುತೂಹಲಿಯಾಗಿದ್ದೇನೆ.

Saturday, February 16, 2008

ಹೊಸ ಸಂವಹನಕ್ಕೆ ಹೊಸ ಭಾಷೆಯ ಕನಸು

ಈ ಲೇಖನ ರೂಪುಗೊಂಡದ್ದು ಆವರಣ ಕಾದಂಬರಿಗೆ ಬಂದ ಪ್ರತಿಕ್ರಿಯೆಗಗಳ ಸಂದರ್ಭವಾದರೂ, ಲೇಖನದ ಒಟ್ಟು ವಿಚಾರ ಬಗಳ ದಿನಗಳಿಂದ ರೂಪೂಗೊಳ್ಳತ್ತಲಿತ್ತು. ವರ್ತಮಾನದ ಪ್ರಕ್ರಿಯೆಗಳಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುವುದು ಪ್ರತಿಯೊಬ್ಬ ಮನುಷ್ಯನಿಗೆ ಸಹಜವಾದ ವಿಚಾರ. ಅಭಿವ್ಯಕ್ತಿ ಮಾರ್ಗಗಳು ಬೇರೆ ಅಷ್ಟೆ. ನನ್ನದು ಈ ಲೇಖನದ ಮೂಲಕ ಪ್ರತಿಕ್ರಿಸುವ ಪ್ರಯತ್ನ.

ಇವತ್ತಿನ ನಮ್ಮ ಪರಿಸ್ಥಿತಿ

ಇಂದು 'ಜಾಗತೀಕರಣ' ಮತ್ತು 'ಮತೀಯತೆ' ನಮ್ಮ ಕಾಲದ ಎರಡು ಪ್ರಮುಖ ಆತಂಕಗಳೆಂದು ಪರಿಗಣಿತವಾಗಿವೆ. 'ಜಾಗತೀಕರಣದ' ಲಾಭ ಪಡೆದವರಲ್ಲಿ ಒಬ್ಬನಾದ ನಾನೂ ಸಹ ಇದನ್ನು ಒಪ್ಪುತ್ತೇನೆ. ಭಿನ್ನಧಾರೆಗಳಾಗಿಯೇ ಆತಂಕ ಸೃಷ್ಟಿಸಿರುವ ಇವೆರಡು ಒಂದೊಮ್ಮೆ ಸಂಗಮಿಸುವುದಾದರೆ? ಈ ಮಿಲನ-ಸಾಧ್ಯತೆ ಸಹಜವಾಗಿಯೇ ನಮ್ಮ ಆತಂಕವನ್ನು ಹೆಚ್ಚಿಸುವಂತಹದ್ದು. ಆದರೆ ಕೆಲವೊಮ್ಮೆ ಈ ಸಾಧ್ಯತೆಯನ್ನು ರಾವಿನಲ್ಲಿ ಗುರುತಿಸುವುದೂ ಅಪಾಯಕಾರಿಯಾದ ವಿಷಯ. ಜಾಗತೀಕರಣವನ್ನು ಪ್ರತಿನಿಧಿಸುವವರು ಮತ್ತು ಮತೀಯವಾದಿಗಳೆಂದು ಪರಿಗಣಿತರಾಗಿರುವವರ ಸಾಂದರ್ಭಿಕ ಸ್ನೇಹವನ್ನಾಗಲೀ, ಭೇಟಿಗಳನ್ನಾಗಲೀ ಆ ಧಾರೆಗಳ ಸಂಗಮವೆಂದು ಪರಿಗಣಿಸುವುದರ ಹಿಂದೆಯೂ ಅಪಾಯವಿದೆ. ಬಿಡಿಬಿಡಿಯಾದ ಸಂಗತಿಗಳು ಈ ಧಾರೆಗಳ ಮಿಲ ಸಾಧ್ಯತೆಯನ್ನು ಸೂಚಿಸುತ್ತಿರುವಂತೆ, ಇದಕ್ಕೆ ವಿರುದ್ಧವಾದ ವಾಸ್ತವಗಳನ್ನೂ ತನ್ನೊಡಲಲ್ಲಿರಿಸಿಕೊಂಡಿರುತ್ತದೆ. ಇವೆರಡರಲ್ಲಿ ಯಾವುದನ್ನೂ ಮರೆಯುವುದೂ ಅನಾಹುತಕಾರಿಯಾಗುತ್ತದೆ. ಸ್ವಲ್ಪ ತಾತ್ವೀಕರಿಸಿ ಹೇಳುವುದಾದರೆ, ಸಾಧ್ಯತೆ ಮತ್ತು ಸಾಧ್ಯತೆಯನ್ನು ಸೂಚಿಸುತ್ತಿರುವ ವಾಸ್ತವದ ಮತ್ತೊಂದು ಮುಖ್ಯ ಇವೆರಡಕ್ಕೂ ನ್ಯಾಯಸಲ್ಲಿಸಿ ತೂಗಿಸಿಕೊಂಡು ಹೋಗುವ ಸವಾಲು ನಮ್ಮೆದುರಿದೆ. ಈ ರೀತಿಯಾಗಿ ನಡೆಯುತ್ತಿರುವುದೇ ಸಮಾಜದಲ್ಲಿ ಒಂದು ತೀವ್ರತರವಾದ ಸನ್ನಿವೇಷ ಸೃಷ್ಟಿಯಾಗಿರುವುದನ್ನು ಸೂಚಿಸುತ್ತಿದೆ.

ಇದನ್ನು ಸ್ವಲ್ಪ 'ಅತಿ'-ಯಲ್ಲಿ ಗ್ರಹಿಸಿ ಮಂಡಿಸಲಿಚ್ಛಿಸುತ್ತೇನೆ. ಪ್ರಾಯಶಃ ಈಗ್ಗೆ ೩-೪ ದಶಕಗಳ ಹಿಂದೆ ಭಿನ್ನ ವಿಚಾರಧಾರೆಗಳನ್ನು ಪ್ರತಿನಿಧಿಸುತ್ತಿದ್ದ ಕನ್ನಡದ ಇಬ್ಬರು ಸಾಹಿತಿಗಳ ನಡುವೆ ಅಭಿಪ್ರಾಯ-ಭಿನ್ನಾಭಿಪ್ರಾಯಗಳನ್ನು ಹಂಚಿಕೊಳ್ಳುವಷ್ಟು ಸಂಬಂಧವಿತ್ತು. ಇಂದು ಈ ಸಂಬಂಧವಿಲ್ಲದಿರುವಂತಿದೆ. ಇದು ನಮ್ಮ ಕಾಲದ ಮುಖ್ಯವಾದ ಸಾಂಸ್ಕೃತಿಕ ಪ್ರಕ್ರಿಯೆಗೆ - ಭಾರತದ ಸಾಂಸ್ಕೃತಿಕ, ವೈಚಾರಿಕ ಪರಂಪರೆಯನ್ನು, ಚಿಂತನೆಗಳನ್ನು ಬೇರೆ ಬೇರೆ ರೀತಿಗಳಲ್ಲಿ ಗ್ರಹಿಸುತ್ತಿರುವ ಎರಡು ಸಮೂಹಗಳ ಮಧ್ಯೆ ಸಂವಾದವಿಲ್ಲದಿರುವುದಕ್ಕೆ - ರೂಪಕದಂತಿದೆ.

ಭೈರಪ್ಪನವರು ಮತ್ತು ಆವರಣ

ಇಂತಹ ಒಂದು ಸಮೂಹದಲ್ಲಿ ನಾವು ಡಾ ಎಸ್. ಎಲ್. ಭೈರಪ್ಪನವರನ್ನು ಕಾಣಬಹುದು. ಹಿರಿಯಾ ಸಾಹಿತಿಯಾದ ಭೈರಪ್ಪನವರು ಕನ್ನಡದ ಉತ್ತಮ ಕಾದಂಬರಿಕಾರರಲ್ಲಿ ಒಬ್ಬರೆನ್ನುವುದು ನನ್ನ ಪಾಲಿಗೆ ನಿಸ್ಸಂಶಯ. ಹೀಗಿದ್ದಾಗ್ಯೂ ಕನ್ನಡ ವಿಮರ್ಶೆಯಲ್ಲಿ ಒಂದು ಸಂಪ್ರದಾಯ ಬೆಳೆದಿದೆ. ಭೈರಪ್ಪನವರ ಕಾದಂಬರಿಗಳನ್ನು (ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯಿಂದ ಗ್ರಹಿತವಾಗಿರುವ) ಅವರ ವ್ಯಕ್ತಿತ್ವದ ಹಿನ್ನೆಲೆಯಲ್ಲಿ, ಅವರ ಸಾರ್ವಜನಿಕ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಓದುವುದೇ ಒಂದು ಅಭ್ಯಾಸವಾಗಿದೆ. (ಇದರಿಂದಾದ ನಷ್ಟವೆಂದರೆ, ಆವರಣವೂ ಸೇರಿದಂತೆ ಭೈರಪ್ಪನವರ ಇನ್ನಿತರ ಕಾದಂಬರಿಗಳಿಗೆ ಕೃತಿನಿಷ್ಠ ವಿಮರ್ಶೆ ನಡೆಯುತ್ತಿಲ್ಲ.) ದೌರ್ಭಾಗ್ಯಕರವಾದರೂ ಇದಕ್ಕೆ ಭೈರಪ್ಪನವರೇ ದಾರಿಮಾಡಿಕೊಟ್ಟಿದ್ದಾರೆ, ಆದ್ದರಿಂದ ತೀವ್ರವಾಗಿ ಆಕ್ಷೇಪಿಸುವಂತೆಯೂ ಇಲ್ಲ. ಉದಾಹರಣೆಗೆ ಆವರಣದ ಮುನ್ನುಡಿಯನ್ನೂ, ಕಾರ್ನಾಡರಿಗೆ ಅವರು ಬರೆದ ಪತ್ರವನ್ನೂ ತೆಗೆದುಕೊಳ್ಳಿ. ಮತ್ತಷ್ಟು ಅಗೆದರೆ ಇನ್ನೂ ಉದಾಹರಣೆಗಳು ಸಿಗುತ್ತವೆ. ಈ ಮುಖೇನ ಭೈರಪ್ಪನವರೇ ತಮ್ಮ ಕೃತಿಗಳಿಗೆ ಸಾಹಿತ್ಯೇತರ ಮಾರ್ಗಗಳನ್ನು ಕಲ್ಪಿಸಿದ್ದಾರೆ. ಅಷ್ಟಲ್ಲದೇ, ಕೃತಿಗಳನ್ನು ರೂಪಿಸಿರಬಹುದಾದ ಭೈರಪ್ಪನವರ ಆಲೋಚನಾ ಕ್ರಮಗಳ ಹಿನ್ನೆಲೆಯಲ್ಲಿಯೂ ಅವರ ಕೃತಿಗಳನ್ನು ವಿಮರ್ಶಿಸುವುದು ತಪ್ಪು ಎಂದು ಹೇಳಲಾರೆ. ಇವತ್ತಿನ ರಾಜಕೀಯ ಮತ್ತು ಸಾಂಸ್ಕೃತಿಕ ಮತ್ತು ರಾಜಕೀಯ ವಾತಾವರಣದ ಹಿನ್ನೆಲೆಯಲ್ಲಿ ಅದು ಅನಗತ್ಯ ಎಂದು ಹೇಳಲಾಗುವುದಿಲ್ಲ. ಆದರೆ ಕೃತಿನಿಷ್ಠ ವಿಮರ್ಶೆಯಲ್ಲಿ ದಕ್ಕುವುದೇನು ಎನ್ನುವುದನ್ನು ಅರಿಯುವ ಪ್ರಯತ್ನವೇ ಮಾಡದಿರುವುದು ಎಂದರೆ ಅದು ಸಾಹಿತ್ಯಕವಾಗಿಯಲ್ಲದೇ, ಸಾಂಸ್ಕೃತಿಕವಾಗಿಯೂ ಒಳ್ಳೆಯ ಸ್ಥಿತಿ ಅಲ್ಲ. ನನಗೆ ಕೆಲವೊಮ್ಮೆ ಅನ್ನಿಸುವುದು - ಭೈರಪ್ಪನವರು ತಮ್ಮ ಅಭಿಪ್ರಾಯಗಳನ್ನು ಮೀರುವಂತೆ ಬರೆಯುವುದಿಲ್ಲವೋ ಅಥವಾ ಭೈರಪ್ಪನವರ ವ್ಯಕ್ತಿತ್ವ-ಅಭಿಪ್ರಾಯಗಳನ್ನು ಬಲ್ಲ (ಅಥವಾ ಒಂದು ಬಗೆಯಲ್ಲಿ ಗ್ರಹಿಸಿರುವ) ಜನರು ಅವರ ವ್ಯಕ್ತಿತ್ವ-ಅಭಿಪ್ರಾಯಗಳನ್ನು ಮೀರಿ ಅವರ ಕಾದಂಬರಿಗಳನ್ನು ಓದುವುದಿಲ್ಲವೋ ಎಂದು. ಇದನ್ನು ಮೀರಬೇಕಿದೆ. ಭೈರಪ್ಪನವರನ್ನು ಒಪ್ಪದವರದ್ದು ಈ ತೆರವಾದರೆ, ಅವರನ್ನು ಒಪ್ಪುವವರದ್ದು ಇದಕ್ಕೆ ತದ್ವಿರುದ್ಧವಾದ ಆರಾಧಕ ಮನೋಭಾವವಾವಿದೆ. ನಷ್ಟವಾಗುತ್ತಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ.

ಭೈರಪ್ಪನವರು ಮಹತ್ವದ ಕಾದಂಬರಿಕಾರರೋ ಅಲ್ಲವೋ ಮತ್ತು ಕಾದಂಬರಿಕಾರರಾಗಿ ಅವರು ಓದುಗರನ್ನು ಯಾವ ರೀತಿ ಪರಿಭಾವಿಸಿ ಬರೆಯುತ್ತಾರೆ ಎನ್ನುವ ಚರ್ಚೆ ಮುಖ್ಯವಾದ್ದೇ. ಆದರೆ ಚರ್ಚೆ ವ್ಯಕ್ತಿ ಕೇಂದ್ರಿತವಾಗದಂತೆ, ವಿಚಾರ ಕೇಂದ್ರಿತವಾಗಿಯೇ ಸಾಗುವಂತೆ ಮುನ್ನಡೆಸಬೇಕಾದ ಕಠಿಣ ಜವಾಬ್ದಾರಿ ಇವತ್ತಿನ ತುರ್ತಾಗಿದೆ. ಆವರಣವೂ ಸೇರಿದಂತೆ ಭೈರಪ್ಪನವರ ಕೆಲ ಕಾದಂಬರಿಗಳು ಅಪಾಯಕಾರಿಯಾದರೆ, ಕೃತಿನಿಷ್ಠವಾದ ಟೀಕೆ ಮಾತ್ರ ಆವರಣದ ಅಪಾಯವನ್ನು ಮೀರುವ ದಾರಿ. ಮಿಕ್ಕ ಎಲ್ಲ ರೀತಿಯ ಟೀಕೆಗಳು ಸಾರ್ವಜನಿಕವಾಗಿ ಅಪಾರ್ಥಕ್ಕೀಡಾಗುವಂಥದ್ದೇ.

ನನಗಂತೂ ಅವರ ಅನೇಕ ಕೃತಿಗಳಲ್ಲಿ ಬಹಳ ಮೆಚ್ಚಬಹುದಾದ್ದು ಕಂಡಿದೆ. ಮಹತ್ವದ್ದೂ ಎಂದೆನ್ನಿಸಿದೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಕಾದಂಬರಿಗಳಲ್ಲಿ ನನಗೆ ಕಂಡಿರುವ ಆಕೃತಿಯೇ ಬೇರೆ. ಅವುಗಳಲ್ಲಿ, ಹಿಂದೂ ಸಂಸ್ಕೃತಿಯನ್ನು ಪ್ರಶ್ನಿಸಿದ್ದಾರೋ ಇಲ್ಲವೋ ಹೇಳಲಾರೆ. ಆದರೆ ಆಧುನಿಕತೆಯನ್ನು ಒಳಗೊಳ್ಳುತ್ತಾ ಪಯಣಿಸುತ್ತಿರುವ ಭಾರತದ ಒಂದು ವಿಶಿಷ್ಟ ಆಕೃತಿ ಈ ಕಾದಂಬರಿಗಳಲ್ಲಿ ಮೂಡುತ್ತದೆ (ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಮೀರಿ), ಒಬ್ಬ ಡಿಮೇಟರ್ ಆಗಿದ್ದಾಗ್ಯೂ. ಕಾವ್ಯಗುಣವೆನ್ನುವುದು ಅವರ ಕಾದಂಬರಿಗಳಲ್ಲಿ ಮೂಡಿರುವ ಬಗೆ ಬೇರೆ. ಈ ಕುರಿತು ನನ್ನ ಬ್ಲಾಗಿನಲ್ಲಿ ಬರೆಯುವ ಉದ್ದೇಶವಿದೆ. ಆವರಣ ಕಾದಂಬರಿಯಲ್ಲಿ ತೀವ್ರ ಚರ್ಚೆಗೆ ಒಳಪಟ್ಟಿರುವ ದೃಶ್ಯವೊಂದರಲ್ಲೂ ನನಗೆ ಇವತ್ತಿನ ಸನ್ನಿವೇಶವನ್ನು ಕಾವ್ಯಾತ್ಮಕವಾಗಿ ಧ್ವನಿಸುವ ಸಾಧ್ಯತೆಯೊಂದು ಕಂಡುಬಂದಿದೆ. ಹಿಂದೂ ಹೆಂಡತಿ ಮತ್ತು ಮುಸ್ಲಿಂ ಗಂಡ ಮದುವೆಯಾಗಿ ಹತ್ತಾರು ವರ್ಷ ಸಂಸಾರ ಮಾಡಿದರೂ ಕಡೆಗೆ ಅವರ ಹಾಸಿಗೆಯಲ್ಲೂ ಸಹ ಇತಿಹಾಸ, ಮತಧರ್ಮಗಳು ನುಸುಳಿ ಸಂಬಂಧವನ್ನು ಕ್ಷುದ್ರಗೊಳಿಸಿಬಿಡಬಲ್ಲ, ನಾಶಮಾಡುವ ಸಾಧ್ಯತೆಯಿದೆ - ಎಂದು ಹೇಳುತ್ತಿದೆಯೇ? ಹಾಗಾಗುವತ್ತ ನಾವು ಸಾಗುತ್ತಿದ್ದೇವೆಯೇ? ಭೈರಪ್ಪನವರು ಇದನ್ನು ಅನುಮೋದಿಸುತ್ತಾರೋ ಇಲ್ಲವೋ ಅದು ಬೇರೆಯ ಮಾತು. ಆದರೆ ವಾತಾವರಣ ಹಾಗಾಗುತ್ತಿರಬಹುದು. ಸ್ವಲ್ಪ ತಾತ್ವೀಕರಿಸುತ್ತೇನೆ. ದೃಶ್ಯವೊಂದು ವಾಸ್ತವದ ಪ್ರತಿನಿಧಿಯಾಗಿರದೇ, ವಾಸ್ತವದ ಸಾಧ್ಯತೆಯಾಗಿದ್ದು ಮತ್ತೇನನ್ನೋ ಪ್ರತಿನಿಧಿಸುವುದಾದರೆ ಅದೊಂದು ಪರಿಗಣಿಸಬೇಕಾದ ರೂಪಕಸಾಧ್ಯತೆ ಎಂದು ನನ್ನ ತಿಳುವಳಿಕೆ.

ನನ್ನ ಗ್ರಹಿಕೆಯಲ್ಲಿ, ಭೈರಪ್ಪನವರು ತೀವ್ರವಾದಿ ನಿಜ. ಕೋಮುವಾದಿ ಎನ್ನುವುದಕ್ಕೆ ನನಗೆ ಅರ್ಹತೆಯಿಲ್ಲ. ಆದರೆ ಅಸ್ಥಿರಭಾವ ಕಾಡಿರುವಂತಹ ಹಿಂದು ಎನ್ನುವುದು ನಿಜ. ಅವರಿಗೆ ಆಂಶಿಕ ಸತ್ಯಗಳು ಕಾಣುತ್ತಿವೆ. ಸೀಮಿತವಾದ ಒಳನೋಟದಿಂದ ಅವುಗಳ ಅಪಾಯಕಾರಿ ಹೆಣಿಗೆಯಲ್ಲಿ ತೊಡಗಿದ್ದಾರೆ. ಇದೊಂದು ದುರಂತ. ಕಮ್ಯುನಿಷ್ಟರ ತಪ್ಪು ಗ್ರಹಿಕೆಗಳನ್ನು, ನಮ್ಮ ಎಡಪಂಥೀಯರೆಂದೆನ್ನಿಸಿಕೊಂಡಿರುವವರ ವಕ್ರಗಳನ್ನು ತೀವ್ರವಾಗಿ ಪರಿಗಣಿಸಿದ್ದಾರೆ.

ಇದೇ ಕಳಕಳಿಯಿಂದ ಕಾದಂಬರಿಗಳನ್ನು ಬರೆದಿರಲೂಬಹುದು. ಆದರೆ ಅವರ ಹಲವಾರು ಕೃತಿಗಳಾದರೂ ಇವುಗಳನ್ನು ಮೀರಿದ ಸಾಹಿತ್ಯಕೃತಿಗಳಾಗಿವೆ.

ರೂಪಕ ವ್ಯಸನತೆ

ವರ್ತಮಾನದ ಆತಂಕಗಳು ವ್ಯಕ್ತಿಗಳನ್ನು (ಉದಾಹರೆಣೆಗೆ ಡಾ ಭೈರಪ್ಪ) ಸೀಮಿತವಾಗಿ ಗ್ರಹಿಸುವಂತೆ ಮತ್ತೂ ಅನೇಕ ವಾಸ್ತವಗಳನ್ನು ಅತಿಯಲ್ಲಿ, ರೂಪಕದಲ್ಲಿ ಗ್ರಹಿಸುವಂತೆ ಪ್ರೇರೇಪಿಸುತ್ತಿದೆ.

ಸಾಫ್ಟ್‍ವೇರ್ ಕೈಗಾರಿಕೋದ್ಯಮಿಯಾದ ನಾರಾಯಣಮೂರ್ತಿಗಳು ಇಂದು ದೇಶದಲ್ಲಿ ಅತಿಹೆಚ್ಚು ಪ್ರಚಾರ ಪಡೆದಿರುವ ಕೈಗಾರಿಕೋದ್ಯಮಿ. ಸಹಜವಾಗಿ, ಅವರನ್ನು ಮೆಚ್ಚುವುದಕ್ಕೆಂತೋ ಅಂತೆಯೇ ಟೀಕಿಸುವುದಕ್ಕೆ ಸಾಕಷ್ಟು ವಿಷಯಗಳಿವೆ. ಸಾರ್ವಜನಿಕ ವ್ಯಕ್ತಿಗಳೆಲ್ಲರಲ್ಲಿ ಅಷ್ಟರಮಟ್ಟಿಗಿನ ಹುಳುಕು ಸಾರ್ವಜನಿಕವಾಗಿ ಕಂಡೇ ಕಾಣುತ್ತದೆ. ಆದರೆ, ಭಾರತದ ಕೈಗಾರಿಕಾಪ್ರಪಂಚದಲ್ಲಿ ಕೆಲ ಒಳ್ಳೆಯ ಬದಲಾವಣೆಗಳು ಅವರಿಂದಲೇ ಆದದ್ದು (ಅದು ಕನ್ನಡ ಸಂಸ್ಕೃತಿಯ ಪ್ರಭಾವ ಎಂದೇ ನಾನು ಪರಿಗಣಿಸಿದ್ದೇನೆ). ದುರಂತವೆಂದರೆ, ಒಂದೆಡೆ, ಈವರೆಗೆ ನಾರಾಯಣಮೂರ್ತಿಗಳ ಬಗ್ಗೆ ಒಂದೂ ಮೆಚ್ಚುಗೆಯ ಮಾತನ್ನಾಡದವರು ಸಾರ್ವಜನಿಕವಾಗಿ ಅವರನ್ನು ಟೀಕಿಸುತ್ತಾರೆ. ಮತ್ತೊಂದೆಡೆ, ಅವರ ಅಭಿಮಾನಿಗಳ ಕಾಳಜಿ ಅವರ ಭಜನೆಗಷ್ಟೇ ಸೀಮಿತ. ಹೀಗಿರುವಾಗ ನಷ್ಟ ದೇಶಕ್ಕೆ, ಸ್ವತಃ ಮೂರ್ತಿಗಳಿಗೆ. ಎಲ್ಲಾ ಟೀಕೆಗಳೂ ಪೂರ್ವಾಗ್ರಹದಂತೆ ಕಾಣುತ್ತದೆ. ಎಲ್ಲಾ ಮೆಚ್ಚುಗೆಯೂ ಚಮಚಾಗಿರಿಯಂತೆ ಕಾಣುತ್ತದೆ. ಒಟ್ಟಿನಲ್ಲಿ ಒಬ್ಬರ ಪ್ರತಿಕ್ರಿಯೆ ಮತ್ತೊಬ್ಬರನ್ನು ಕೆರಳಿಸುತ್ತದೆಯೇ ಹೊರತು, ಚಿಂತನೆಯ, ಆತ್ಮವಿಮರ್ಶೆಯ ಸಾಧ್ಯತೆ ಸೊನ್ನೆಯಾಗುತ್ತದೆ. ಧಾರೆಗಳ ನಡುವಣ ಸಂವಾದ ಸೊನ್ನೆ. ಇದಕ್ಕೆ ಮುಖ್ಯವಾದ ಕಾರಣ ಜಾಗತೀಕರಣದ ಹಿನ್ನೆಲೆಯಲ್ಲಿ ಅವರನ್ನು ಅತಿಯಾಗಿ ಗ್ರಹಿಸುವುದು.

ಈಗ ಕೈಗಾರಿಕೋದ್ಯಮಿಯೊಬ್ಬರು ಮೋದಿಯವರನ್ನು ದಕ್ಷತೆಗೆ ಮೆಚ್ಚುವುದಾದರೆ? ಕೈಗಾರಿಕೆಗಳಲ್ಲಿರುವವರಿಗೆ ದಕ್ಷತೆಯ ಬಗ್ಗೆ ಸಹಜವಾದ ಆಕರ್ಷಣೆಯಿರುತ್ತದೆ. ಮಿಕ್ಕೆಲ್ಲಕ್ಕೂ ಕುರುಡಾಗುವುದು ಸಾಧ್ಯವಿದೆ. ಆದರೆ ಅತಿರೇಕಗಳನ್ನು ಅನುಮೋದಿಸಬಹುದು ಎನ್ನುವ ಅರ್ಥದ ಮಾತುಗಳು ವರ್ತಮಾನದ ಅತಿ-ಗ್ರಹಿಕೆ. ಅಂತೆಯೇ, ಕೈಗಾರಿಕೋದ್ಯಮಿಯೊಬ್ಬರು ಭೈರಪ್ಪನವರ ಸಾಹಿತ್ಯವನ್ನು ಶ್ರದ್ಧೆಯಿಂದ ಓದುವುದು ಅವರಿಬ್ಬರೂ ಪ್ರತಿನಿಧಿಸುವ ಧಾರಾ-ಮಿಲನದ ಅನಾಹುತಕಾರಿ ಸಾಧ್ಯತೆಯಾಗಿ ಕಾಣುವುದು ಸರಿ. ಅಂತಹ ಸಾಧ್ಯತೆ ರೂಪಕಗಳೈ ಸಾಹಿತ್ಯದಲ್ಲಿ ಮೂಡಿಬರುವುದು ಸರಿ. ಆದರೆ ಆ ಸಾಧ್ಯತೆ ವಾಸ್ತವ-ಸತ್ಯವೆಂದು ಗ್ರಹಿತವಾಗುವುದು ದೌರ್ಭಾಗ್ಯಕರ. ಸಾರ್ವಜನಿಕ ಸಭೆಯಲ್ಲಿ ಇಂತಹ ರೂಪಕದ ಉಲ್ಲೇಖವಾದರೆ, ರೂಪಕವನ್ನು ನಿರ್ಮಿಸುವ ವಾಸ್ತವದ ದ್ರವ್ಯಗಳಿಗೆ ಅನ್ಯಾಯ ಮಾಡಿದ ಹಾಗಾಗುವ ಸಾಧ್ಯತೆ ಇದೆ. ಜೊತೆಗೆ ಇದು ಯಾವುದೇ ಸಂವಾದಕ್ಕೆ ಪ್ರೇರೇಪಿಸದೇ ಸಮಾಜದ ಬಿರುಕನ್ನು ಮತ್ತಷ್ಟು ತೀವ್ರಗೊಳಿಸುವಂತಹ ಸಾಧ್ಯತೆಯೇ ಹೆಚ್ಚು.

ಮತ್ತೆ ತಾತ್ವೀಕರಿಸಬಯಸುತ್ತೇನೆ. ರೂಪಕವೆನ್ನುವುದು ಸಾಮುದಾಯಿಕ ಸತ್ಯ. ಅದನ್ನು ನಿರ್ಮಿಸುವ ದೇಶ-ಕಾಲದ ವಾಸ್ತವದ ದ್ರವ್ಯಗಳ ವಿಷಯದಲ್ಲಿ ಅದು ಸಾಧ್ಯತೆ ಮಾತ್ರ. ಅದು ಸತ್ಯವೋ ಅರೆಸತ್ಯವೋ ಸುಳ್ಳೋ ಆಗಿರಬಹುದು. ಹೀಗಿದ್ದರೂ ರೂಪಕ ಮಾತ್ರ ಸತ್ಯವಾಗಿರಲೂಬಹುದು. ರೂಪಕವು ವಾಸ್ತವದ ಮೇಲೆ ಬೀರುವ ಪರಿಣಾಮದ ಹೊಣೆ ರೂಪಕವನ್ನು ಗ್ರಹಿಸುವ ಅಥವಾ ಸೃಷ್ಟಿಸುವವನ ಮೇಲಿದ್ದೇ ಇರುತ್ತದೆ. ಎಚ್ಚರ ತಪ್ಪಿ, ಪುರಾವೆ ಸಾಲದೇ ಹೊರಬರುವ ಮಾತು ಆ ರೂಪಕದ ವಾಸ್ತವ-ಸಾಧ್ಯತೆಗಿಂತಲೂ ಹೆಚ್ಚಿನ ಅಪಾಯ ಸೃಷ್ಟಿಸೀತು.

ನನ್ನನ್ನು ತಲ್ಲಣಗೊಳಿಸುತ್ತಿರುವ ವಿಷಯವೆಂದರೆ, ನವಭಾರತದ ನವಗುಜರಾತ್ ಈ ಬಗೆಯ ಅತಿಗ್ರಹಿಕೆಗೆ ನಮ್ಮನ್ನು ಅಣಿಗೊಳಿಸುತ್ತಿದೆಯೆನ್ನುವುದು. ಮತೀಯತೆಯ ಕರಾಳತೆಗೆ ಗುಜರಾತಿನ ಪ್ರಕ್ರಿಯೆ ಒಂದು ರೂಪಕ ನಿಜ. ಮಿಕ್ಕೆಡೆ ಅದರ ಸಾಧ್ಯತೆಯೂ ನಿಜ. ಆದರೆ ಕರ್ನಾಟಕದಲ್ಲಿ ಗುಜರಾತನ್ನು ಸೃಷ್ಟಿಸುವ ಪ್ರಯತ್ನ ಎನ್ನುವುದು ಒಂದು ಅತಿರೇಕದ ಗ್ರಹಿಕೆ. ಅದು ನಿಜವೋ ಸುಳ್ಳೊ ಹೇಳುವುದು ಕಷ್ಟ. ನಾಲ್ಕು ವರ್ಷ ಗುಜರಾತಿನಲ್ಲಿ ಕಳೆದವನಾಗಿ, ಸೂರತ್ತಿನ ಕೋಮುಹಿಂಸೆಯ ತೀರತೆಯಲ್ಲಿ ಅಲ್ಲಿದ್ದವನಾಗಿ ನನಗೆ ಈ ಚರ್ಚೆ ಕೇವಲ ಅಮೂರ್ತ ವಿಚಾರಗಳ ಜೊತೆಗಿನ ಗುದ್ದಾಟವಾಗದೇ, ಜೀವವವನ್ನು ಹಿಡಿದಲ್ಲಾಡಿಸುವ ವಿಷಯವಾಗಿದೆ.

ಭಾರತೀಯ ಸಂಸ್ಕೃತಿ, ಕೋಮುವಾದ ಮತ್ತು ಜಾಗತೀಕರಣ

ಈ ಎಲ್ಲದರ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಕೃತಿಯೆನ್ನುವುದಿದೆ. ನಮ್ಮ ಎಲ್ಲಾ ಧಾರೆಗಳೂ ಸಹ ಇದೇ ಪದವನ್ನುಚ್ಛರಿಸಿದರೂ, ಗ್ರಹಿಸಿರುವ ರೀತಿ ಮಾತ್ರ ಬೇರೆ. ಸಂಘಪರಿವಾರ, ಗಾಂಧಿವಾದಿಗಳು, ಹಳೆಯ ಎಡಪಂಥೀಯರು, ನವ ಎಡಪಂಥೀಯರು, ಸೆಕ್ಯುಲರ್-ವಾದಿಗಳೂ, ಸಂಪೂರ್ಣವಾಗಿ ಪಾಶ್ಚಾತ್ಯರಾಗಿವವರು, ಸಂಘಪರಿವಾರಿಗಳಲ್ಲದೆ ಪರಂಪರೆಯನ್ನು ಪ್ರತಿನಿಧಿಸುತ್ತೇವೆನ್ನುವವರು, ಸಮಾಜವಾದಿಗಳು - ಹೀಗೆ ಭಾರತೀಯ ಸಂಸ್ಕೃತಿಯನ್ನುವುದರ ಕುರಿತು ಎಲ್ಲರಿಗೂ ಅವರದ್ದೇ ಆದ ಪರಿಕಲ್ಪನೆಯಿದೆ. ಕಾಲಕಾಲಾಂತರದಲ್ಲಿ ಅದು ಬದಲಾವಣೆಯೂ ಆಗಿದೆ. ತಮಾಷೆಯೆಂದರೆ, ಪ್ರತಿಯೊಂದು ಧಾರೆಯೂ ಮತ್ತೊಂದು ಧಾರೆ ಯಾವ ರೀತಿಯಲ್ಲಿ ಭಾರತೀಯ ಸಂಶ್ಕೃತಿಯನ್ನು ಗ್ರಹಿಸುತ್ತಿದೆ ಎನ್ನುವುದರ ಕುರಿತು ಸರಿಯಾದ ಮತ್ತು ತಪ್ಪು ಕಲ್ಪನೆಗಳನ್ನೂ ಹಿಂದಿದೆ. ಪ್ರತಿಯೊಂದು ಧಾರೆಗೂ ಭಾರತೀಯ ಸಂಸ್ಕೃತಿಯನ್ನು ತಮ್ಮ ಇವತ್ತಿನ ಆಲೋಚನೆಗಳಿಗನುಗುಣವಾಗಿ ಪುನರ್ನಿರ್ಮಿಸಿಕೊಳ್ಳುವ ತವಕವಿದೆ. ಭಾರತೀಯ ಸಂಸ್ಕೃತಿಯ ಕುರಿತು ಅಕ್ಷೆಪವೂ ಇದೆ, ಆ ಆಕ್ಷೆಪಣೆಗಳನ್ನು ಭಾರತೀಯ ಸಂಸ್ಕೃತಿಯಲ್ಲೇ ನಿವಾರಿಸಿಕೊಳ್ಳುವ ತವಕವೂ ಇದೆ. ಎಲ್ಲರೂ ತಮ್ಮದೇ ಇತಿಹಾಸ ನಿರ್ಮಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಇದು ಪರ್ಯವಸಾನವಾಗುತ್ತಿದೆ. ಭಾರತೀಯ ಪರಂಪರೆಯಲ್ಲಿ ತಮ್ಮ ಸಮಾನಧರ್ಮಿಗಳನ್ನೂ, ತಮ್ಮ ವೈರಿಗಳನ್ನೂ ಹುಡುಕಿಕೊಳ್ಳುತ್ತಿದ್ದಾರೆ.

ಇಂದು ಸಂಘಪರಿವಾರ ಭಾರತೀಯ ಸಂಸ್ಕೃತಿಯನ್ನು ಗ್ರಹಿಸುತ್ತಿರುವ ರೀತಿ ಅನೇಕರಿಗೆ ಆತಂಕ ತಂದಿದೆ. ನನ್ನಂಥವರು ಗ್ರಹಿಸುತ್ತಿರುವ ರೀತಿಗೆ ಸಾಕಷ್ಟು ವ್ಯತಿರಿಕ್ತವೂ ಆಗಿದೆ. ಸಂಘಪರಿವಾರಕ್ಕೆ 'ಕಳೆದುಹೋಗುತ್ತಿದೆ' ಎಂದೆನ್ನಿಸುವ ಅಂಶಗಳನ್ನು 'ರಕ್ಷಿಸಬೇಕು' ಎಂದೆನ್ನಿಸುವ ವಿಚಾರಗಳ ರಕ್ಷಿಸುವ ಭರದಲ್ಲಿ, 'ನನ್ನಂಥವರಿಗೆ ಮುಖ್ಯವಾಗುವ' ಭಾರತೀಯ ಸಂಸ್ಕೃತಿಯ ನಾಶದ ಬೀಜವಿದೆ. ಈ ಕುರಿತು ಆತಂಕ ಸಹಜ. ನನ್ನ ಆಕ್ಷೇಪಣೆಯಿರುವುದು ಈ ಆತಂಕವನ್ನ್ನು ಗ್ರಹಿಸುವ ಮತ್ತು ವಿರೋಧಿಸುವ ರೀತಿ. ಇದು 'ಭಾರತೀಯ ಸಂಸ್ಕೃತಿಯ ಮುಖೀಯತೆಯನ್ನು ನಾಶಪಡಿಸುವ ಹುನ್ನಾರ' ಎಂದು ಬಣ್ಣಿಸುವ ಅನೇಕ ಚಿಂತಕರು, 'ಹುನ್ನಾರ' ಎನ್ನುವ ಪದಬಳಕೆಯ ಅನರ್ಥಕತೆಯನ್ನು, ಅಪಾಯವನ್ನೂ ಗ್ರಹಿಸಿದಂತಿಲ್ಲ. ಆ ಪದಬಳಕೆ ಸತ್ಯವನ್ನು ಪ್ರತಿನಿಧಿಸುತ್ತದೆಯೋ ಇಲ್ಲವೋ ಒಂದೆಡೆಯಾದರೆ, ಅದು ಜನರಿಗೆ ಅರ್ಥವಾಗುವುದೇ ಇಲ್ಲ ಎನ್ನುವುದು ನನ್ನ ಹೆಚ್ಚಿನ ಕಳಕಳಿ. ತಮಗರಿವಿಲ್ಲದಂತೆ ಭಾರತೀಯ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ ಎಂದರೆ ಸ್ವಲ್ಪವಾದರೂ ಅರ್ಥವಾದೀತು. ಈ ರೀತಿಯ ಅಭಿಪ್ರಾಯ ಮಂಡನೆಗಳು ಕಂದಕವನ್ನು ಹೆಚ್ಚಿಸುತ್ತಿವೆ ಎನ್ನುವುದನ್ನು ನಾನು ನನ್ನ ಬ್ಲಾಗಿನಲ್ಲಿ ಅನೇಕ ವೇಳೆ ಬರೆದಿದ್ದೇನೆ. ಆದರೆ ಇದನ್ನು ನಾನು ಇಷ್ಟಪಡುವವರಿಗೆ ಮುಟ್ಟಿಸಲು ವಿಫಲನಾಗಿದ್ದೇನೆನ್ನಿಸುತ್ತದೆ.

ಜಾಗತೀಕರಣದ ಕುರಿತಾಗಿಯೂ 'ಹುನ್ನಾರ' ಪದಬಳಕೆ ಇದೇ ರೀತಿಯಾಗುತ್ತಿದೆ. ಜಾಗತೀಕರಣವೆನ್ನುವುದು ನಮ್ಮ ದೇಶದಲ್ಲಿ ಆರಂಭವಾದುದಾದರೂ ಹೇಗೆ ಎನ್ನುವುದನ್ನು ನಾವಿನ್ನೂ ಪ್ರಶ್ನಿಸಿ ಉತ್ತರಿಸಿಲ್ಲ. ನಮ್ಮ ಸರಕಾರಗಳ ಯಾವ ವೈಫಲ್ಯದಿಂದ ಜಾಗತೀಕರಣ ಆರಂಭವಾಗುವುದು ಸಾಧ್ಯವಾಯಿತು ಎನ್ನುವ ಪ್ರಶ್ನೆ ಅದೇಕೋ ನಾವು ಕೇಳಿಕೊಳ್ಳುವುದೇ ಇಲ್ಲ. ಆದ್ದರಿಂದ 'ಹುನ್ನಾರ' ಪದಬಳಕೆ ಸರಿಯಲ್ಲವೆಂದೆನ್ನಿಸುತ್ತದೆ.

ಈ ಎರಡರ ಹಿನ್ನೆಲೆಯಲ್ಲೂ ಜಾಗತಿಕವಾದ ಪ್ರಕ್ರಿಯೆಗಳಿವೆ. ಭಾರತೀಯ ಸಂಸ್ಕೃತಿಯನ್ನು ನಾವೆಲ್ಲರೂ ಗ್ರಹಿಸುವ, ನಿರ್ಮಿಸುವ ಅನಿವಾರ್ಯತೆಗಳೂ ಸಹ ಇದರಿಂದಲೇ ಪ್ರಾಯಶಃ ಸೃಷ್ಟಿಯಾಗಿದೆ. ಈ ಜಾಗತಿಕ ಪ್ರಕ್ರಿಯೆಗಳನ್ನು ಎದುರಿಸುವ ಪ್ರತಿಭೆ ನಮಗೆ ಸಾಲದೇ ಹೋಯಿತೇನೋ.
ಸೆಕ್ಯುಲರಿಸಂ-ನ ಮತೀಯತೆ

ಕೈಗಾರೀಕರಣ, ಆಧುನಿಕತೆ, ರಾಷ್ಟ್ರೀಯತೆ ಮುಂತಾದ ಬೃಹತ್ ಪ್ರಕ್ರಿಯೆ, ಭಿತ್ತಿಗಳನ್ನೆದುರಿಸುತ್ತಿರುವ ನಮ್ಮ ದೇಶ ಮತ್ತು ಸಂಸ್ಕೃತಿ ಅನೇಕ ರೀತಿಗಳಲ್ಲಿ ಬದಲಾಗುತ್ತಿದೆ. ಈ ಬೃಹತ್ ಪ್ರಕ್ರಿಯೆಗಳು ಸಮುದಾಯಗಳನ್ನು ಒಡೆದು ಮಾಸ್-ಸೊಸೈಟಿಯನ್ನು ಸೃಷ್ಟಿಸುತ್ತಿದೆ. ಈ ಪ್ರಕ್ರಿಯೆಗಳು ಮೂಡಿಸುತ್ತಿರುವ ಬಿರುಕು ಅನೇಕ ತೀವ್ರವಾದವನ್ನೂ ಸೃಷ್ಟಿಸುತ್ತಿವೆ.

ಜಾಗತೀಕರಣ, ಮತೀಯತೆಗಳು ಒಂದು ಬಗೆ ತೀವ್ರವಾದವಾಗಿ ಗ್ರಹಿಸಲಾಗಿದೆ. ಆದರೆ, ಇವುಗಳನ್ನು ಸರಿದೂಗಿಸುತ್ತಿದೆ ಎಂದು ನಂಬಲಾಗಿರುವ ಸೆಕ್ಯುಲರಿಸಂ ಕೂಡಾ ಒಂದು ತೀವ್ರವಾದವೇ ಎಂದು ನನಗೆ ಅನೇಕ ವೇಳೆ ಅನ್ನಿಸಿದೆ. ನಮ್ಮ ದೇಶದಲ್ಲಿ ಸೆಕ್ಯುಲರಿಸಂ ಕೂಡಾ ಮತೀಯವಾದದ ಸ್ವರೂಪದಲ್ಲೇ, ತೀವ್ರತೆಯಲ್ಲೇ, ಅಸಹನೆಯಲ್ಲೇ ಮುನ್ನಡೆಸಿಕೊಂಡು ಬರಲಾಗಿದೆ ಅನ್ನಿಸುತ್ತದೆ. ಈಗ ಭೈರಪ್ಪನವರ ವಿಜಯಕರ್ನಾಟಕದ ಪತ್ರಕ್ಕೆ ಕಾರ್ನಾಡರು ಬರೆದ ಪತ್ರವನ್ನೇ ನೋಡಿ. ಅಥವಾ ಎನ್.ಎಸ್.ಶಂಕರರ ಆವರಣ ಅನಾವರಣ ಪುಸ್ತಕದ ಧ್ವನಿಯನ್ನೇ ನೋಡಿ. ಅವುಗಳ ಹಿಂದಿರುವ ಅಸಹನೆ ಮಾನವೀಯ ಕಳಕಳಿ ಎಂದು ನನಗನ್ನಿಸುತ್ತಿಲ್ಲ. ಬದಲಾಗಿ ಸೆಕ್ಯುಲರಿಸಂ ಎನ್ನುವ ಮತದ ಅಸಹನೆ ಎಂದೆನ್ನಿಸುತ್ತಿದೆ. ಸೆಕ್ಯುಲರಿಸಂ-ನಲ್ಲೂ ಒಂದು ಬಗೆಯ ಮೇಲ್ಮೆಯ ಅಹಂಕಾರವೇ ನನಗೆ ಕಾಣುತ್ತಿದೆ. ರಾಷ್ಟ್ರೀಯತೆ, ಕೈಗಾರೀಕರಣದ ಕಾರಣಗಳಿಗೋಸ್ಕರವಾಗಿ ನಮ್ಮ ದೇಶದಲ್ಲಿ ಉಂಟಾಗಿರುವ ಅಸಹಜ ವ್ಯವಸ್ಥೆಗಳಲ್ಲಿ ಸೆಕ್ಯುಲರಿಸಂ ಕೂಡಾ ಒಂದಾಗಿರಬಹುದಲ್ಲವೇ? ಯಾವುದನ್ನು ಸೆಕ್ಯುಲರಿಸಂ ವಿರೋಧಿಸುತ್ತದೆಯೂ ಅದರ ಗುಣ-ಸ್ವರೂಪಗಳನ್ನೂ ಅರಿಯದೇ ಆವಾಹಿಸಿಕೊಂಡುಬಿಟ್ಟಿದೆಯೇ?

ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ತಾತ್ವಿಕತೆಗಳಿಂದ ದೂರವಿರುವ ಸಾಮಾಜಿಕ-ಸಾಂಸಾರಿಕನನ್ನು ನಮ್ಮ ಸೆಕ್ಯುಲರಿಸ್ಟರು ತಲುಪಲಾಗಿಲ್ಲವಲ್ಲ. ಸೆಕ್ಯುಲರಿಸ್ಟರ ಪರಿಭಾಷೆ 'ಕಮ್ಯುನಲ್'-ಆದವರನ್ನಿರಲಿ, ಇದರಿಂದ ದೂರವಿರುವ ಮನುಷ್ಯನನ್ನೂ ಸಂವಾದದಲ್ಲಿ ತೊಡಗಿಸುವುದೇ ಇಲ್ಲ ಕೇವಲ ಕೆರಳಿಸುತ್ತದೆ. 'ಆವರಣ' ತಲುಪಿದಷ್ಟು ಜನರನ್ನು ಸೆಕ್ಯುಲರಿಸ್ಟರು ತಲುಪಲಾಗುತ್ತಿಲ್ಲವೆಂದರೆ ತನ್ನ ಸಂವಹನ ಮತ್ತು ಆಲೋಚಾನಾ ಕ್ರಮಗಳನ್ನು ಮರುವಿಮರ್ಶೆಪಡಿಸಿಕೊಳ್ಳುವ ಅವಶ್ಯಕತೆಯನ್ನು ಸೆಕ್ಯುಲರಿಸಂ ಮನಗಾಣಬೇಕಿದೆ.

ಜಾಗತೀಕರಣ, ರಾಷ್ಟ್ರೀಯತೆಗಳು ಭಾರತಕ್ಕೆ ಅಂತಹ ಹೊಸತೇನೂ ಅಲ್ಲವೆನ್ನಬಹುದು. ಆದರೆ ಸೆಕ್ಯುಲರಿಸಂ ಮಾತ್ರ ಹೊಸ ತಾತ್ವಿಕತೆಯಾಗಿದೆ. ಅದನ್ನು ಭಾರತೀಯ ಸಂಸ್ಕೃತಿ ನಿರ್ವಹಿಸುವ ರೀತಿಯೇ ನಾಳೆ ನಮ್ಮ ಭವಿಷ್ಯವನ್ನು ನಿರ್ಧರಿಸಲಿದೆಯೇನೋ ಎನ್ನುವ ನನ್ನೀ ಆತಂಕಕ್ಕೆ ಕಾರಣವಿದೆ.
ಇವತ್ತಿನ ನಮ್ಮ ಪರಿಭಾಷೆಯ ಸಮಸ್ಯೆ: ಸೆಕ್ಯುಲರ್ ಇಲ್ಲವೇ ಕಮ್ಯುನಲ್

ಇವತ್ತಿನ ನಮ್ಮ ಸೆಕ್ಯುಲರಿಸಮ್ಮಿನ ಒಂದು ವಿಶಿಷ್ಟತೆಯೆಂದರೆ, ಸೆಕ್ಯುಲರಿಸ್ಟರು 'ಒಂದೋ ನೀವು ಸೆಕ್ಯುಲರ್ ಇಲ್ಲವೋ ನೀವು ಕಮ್ಯುನಲ್' ಎನ್ನುವ ಅರ್ಥದಲ್ಲಿ ಮಾತನಾಡುತ್ತಾರೆ. ಇದು ಸೆಕ್ಯುಲರಿಸಮ್ಮಿನ ಮೂಲದಲ್ಲೇ ಇದೆಯೋ ಅಥವಾ ನಿವಾರಿಸಿಕೊಳ್ಳಬಹುದಾದ ಇವತ್ತಿನ ವಿಕೃತಿಯೋ ಸ್ಪಷ್ಟವಿಲ್ಲ. ಒಟ್ಟಿನಲ್ಲಿ, ಇದು ವಾಸ್ತವವನ್ನು ಎರಡು ದಿಕ್ಕಿನಲ್ಲಿ ಒಡೆದು ನೋಡುವ ಕ್ರಮ. ಅಮೇರಿಕದ ಅಧ್ಯಕ್ಷ ಬುಷ್ 'ಒಂದೋ ನೀವು ನಮ್ಮ ಪರವಿದ್ದೀರಿ, ಇಲ್ಲವೋ ನಮ್ಮ ವಿರುದ್ಧ' ಎಂದು ಹೇಳಿದ್ದನ್ನು ಸೆಕ್ಯುಲರಿಸ್ಟರು, ಪ್ರಜ್ಞಾವಂತರು ಟೀಕಿಸಿದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹಾಗಿರುತ್ತ, ನಮ್ಮ ದೇಶದ ಸೆಕ್ಯುಲರಿಸ್ಟರು ಈ ಬಗೆಯ ಅವಿಮರ್ಶಾತ್ಮಕವಾದ, ಅವೈಚಾರಿಕವಾದ ನಿಲುವನ್ನು ತಳೆದಿರುವುದು ಆತಂಕಕಾರಿಯಾದ ವಿಷಯ. ಇದು ಕಮ್ಯುನಲ್ ಅಲ್ಲದವರನ್ನು ಕಮ್ಯುನಲ್ ಮಾಡುವ ಅಭಿವ್ಯಕ್ತಿ ಕ್ರಮ. ವಿರುದ್ಧವಾಗಿ, ಹಿಂದೂಗಳಲ್ಲಿ ಜವಾಬ್ದಾರಿಯುತರಾದವರು ಮುಸಲ್ಮಾನರಲ್ಲಿ ಸೌಮ್ಯವಾದಿಗಳ ಕೈಬಲಪಡಿಸಬೇಕಾದ ರೀತಿಯ ಅಭಿವ್ಯಕ್ತಿಕ್ರಮವನ್ನು ನಾವು ಸಾಧಿಸಿಕೊಳ್ಳಬೇಕಾದ್ದು ಇಂದಿನ ತುರ್ತು. ತೀವ್ರವಾದಿಗಳನ್ನು ಟೀಕಿಸುವ ಭರದಲ್ಲಿ ಸೌಮ್ಯವಾದಿಗಳ ಕೈಸೋಲಾಗುವಂತೆ ಮಾಡಿದರೇನು ಫಲ ಎನ್ನುವ ವಾದವನ್ನು ಹಿಂದು-ಮುಸಲ್ಮಾನರಿಬ್ಬರ ಜೊತೆಗಿನ ಸಂವಾದದಲ್ಲೂ ಬಯಸುತ್ತೇನೆ. ಆದರೆ, ಹಿಂದೂಗಳ ವಿಷಯದಲ್ಲಿ ಇವತ್ತಿನ ನಮ್ಮ ಸೆಕ್ಯುಲರಿಸ್ಟರ ಅಭಿವ್ಯಕ್ತಿ ಕ್ರಮ ನನಗೆ ನಿರಾಶೆ ತಂದಿದೆ.

ಇದಕ್ಕೆ ತತ್ಕ್ಷಣದ ಒಂದು ಉದಾಹರಣೆ ಕೊಡುತ್ತೇನೆ. ಬಾಬಾಬುಡನ್-ಗಿರಿಯಲ್ಲಿ ಮೊನ್ನೆ ಡಿಸಿ ಒಂದು ಆದೇಶ ನೀಡಿದರು. ಅದು ಸಂಘ ಪರಿವಾರದ ಯಾವುದೋ ಕಾರ್ಯಕ್ರಮಕ್ಕೆ ಸಮಯ ನಿಗದಿಪಡಿಸುವಂಥದ್ದಾಗಿತ್ತು. ಅದಕ್ಕೆ ಸೆಕ್ಯುಲರಿಸ್ಟರೊಬ್ಬರ ಪ್ರತಿಕ್ರಿಯೆ ಹೀಗಿತ್ತು: 'ಇದು ಕೋಮು ಸೌಹಾರ್ದ ವೇದಿಕೆಯ ಹೋರಾಟಕ್ಕೆ ಸಂದ ಜಯ'. ಆತಂಕಕಾರಿಯಾದ ವಿಷಯವೆಂದರೆ, ಇದು ಯುದ್ಧದ ಪರಿಭಾಷೆ. ವಿಷಾದಪೂರ್ಣವಾಗಿ ಬರಬೇಕಾಗಿದ್ದ ಅಭಿವ್ಯಕ್ತಿ ಯುದ್ಧದ ಪರಿಭಾಷೆಯಲ್ಲಿ, ಸಂಘ ಪರಿವಾರವನ್ನು ಕೆಣಕುವ, ಕೆರಳಿಸುವ ರೀತಿಯಲ್ಲಿದೆ. ಇದು ನನಗೆ ಆತ್ಮಹತ್ಯಾತ್ಮಕವೆನಿಸಿದೆ.

ಗ್ರಹಿಕೆಯ ಭಾಷೆ, ಸಂವಹನದ ಭಾಷೆ ಮತ್ತು ಎಡಪಂಥೀಯ ನಿಲುವುಗಳು

ನಮ್ಮ ಪರಿಭಾಷೆಯ ಈ ಸಮಸ್ಯೆಯನ್ನು ಇದನ್ನೊಂದಿಷ್ಟು ತಾತ್ವೀಕರಿಸಿ ಮುಂದುವರೆಯುತ್ತೇನೆ.
ಸೆಕ್ಯುಲರಿಸ್ಟರ ಪರಿಭಾಷೆ ಒಂದು ಅಕ್ಯಾಡಮಿಕ್ ಐಡಿಯಾಲಜಿಯ ಗ್ರಹಿಕೆಯ ಭಾಷೆ. ಈ ಗ್ರಹಿಕೆಯ ಭಾಷೆ ಎಂದಿಗೂ ಸಂವಹನಭಾಷೆಯಾಗಿ ಪರಿಣಾಮಕಾರಿ, ಯಶಸ್ವಿಯಾಗಲಾರದು. ಇದು ತನಗೆ ತಾನೇ ಹೇಳಿಕೊಳ್ಳುವ, ತನ್ನಲ್ಲೇ ವಿಜೃಂಭಿಸುವ ಪರಿಭಾಷೆಯಾಗಿ ನನಗೆ ದುರಂತವಾಗಿ ಕಾಣುತ್ತಿದೆ. ವಸ್ತುವೊಂದನ್ನು ನಾವು ಕಾಣುವ ಕ್ರಮದಲ್ಲಿ ಅಭಿವ್ಯಕ್ತಿಸಬೇಕು ಎನ್ನುವ ಹಠ. ನಮ್ಮ ಕ್ರಮ ಪರಿಪೂರ್ಣ ಎನ್ನ್ನುವ ಅತಿಯಾದ ಆತ್ಮವಿಶ್ವಾಸ. ಅಲ್ಲದೇ, ಈ ರೀತಿಯಾದ position ತೆಗೆದುಕೊಳ್ಳುವುದು ಇಂದಿನ ಐತಿಹಾಸಿಕ ಅಗತ್ಯವೆನ್ನುವ ನಿಲುವು ಸಾಮಾನ್ಯವಾಗಿ ಎಡಪಂಥೀಯರಲ್ಲಿದೆ. ಈ ಪೊಸಿಷನ್ ಗಳಿಂದ ಏನು ಉಪಯೋಗವಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ಅನೇಕ ಸಲ ನನಗೆ ಇದು False sense of satisfaction ಕೊಡುತ್ತದೆಯೇನೋ ಎನ್ನುವ ಅನುಮಾನವಿದೆ. ಅಲ್ಲದೆ, ಗ್ರಹಿಕೆಯೇ ಅಸಮರ್ಪಕವಾಗಿದೆ ಎಂದೆನ್ನಿಸಿದಾಗ position ಮತ್ತೂ ಕಷ್ಟವಾಗುತ್ತದೆ.
ನಮ್ಮಲ್ಲಿ ಕೋಮುವಾದಿಗಳೆಂದು ಕರೆಯಿಸಿಕೊಳ್ಳಲಾಗುತ್ತಿರುವ ಬಹುತೇಕರು ನನ್ನ ಪ್ರಕಾರ ಕೋಮುವಾದಿಗಳಲ್ಲ. ಅವರನ್ನು ಸರಿಯಾದ ಬಗೆಯಲ್ಲಿ ಗ್ರಹಿಸುವುದು ಮೊದಲು. position ನಂತರವಲ್ಲವೇ. ಈ position ಪದವೂ ಯುದ್ಧದ ಪರಿಭಾಷೆಯಾಗಿರುವುದು ನನಗೆ ದಿಗ್ಭ್ರಮೆಗೊಳಿಸುವ ವಿಷಯವಾಗಿದೆ. ಎಡಪಂಥೀಯರಿಗೆ ಹಿಂದೂ-ಮುಸಲ್ಮಾನರಲ್ಲಿ liberals ಆಗಿರುವವರು minority ಎನ್ನುವ ಪರಿಕಲ್ಪನೆಯಿದೆ. ಇದು ಮತ್ತೊಂದು ತಾತ್ವಿಕವಾಗಿ ಅಸಮರ್ಪಕವಾದ ಪರಿಕಲ್ಪನೆ. ಇಲ್ಲಿ ಬಹುತೇಕರು ಸೆಕ್ಯುಲರಿಸ್ಟರು ಅಂದುಕೊಳ್ಳುವ ರೀತಿಯಲ್ಲಿ ಪೂರ್ತಿಯಾಗಿ ಕೋಮುವಾದಿಗಳಲ್ಲ. ಈ ಅಸಮರ್ಪಕ ಗ್ರಹಿಕೆ ಒಂದು ಬಗೆಯ ಅನಗತ್ಯ ಆತಂಕಕ್ಕೆ ಎಡೆ ಮಾಡಿಕೊಡುತ್ತಿದೆ. ಈ ಆತಂಕದಿಂದ ಹುಟ್ಟುತ್ತಿರುವ ಭಾಷೆ ಯಾವ ಆತಂಕದ ಸ್ಥಿತಿಯನ್ನು ನಿರ್ಮೂಲ ಮಾಡಬಯಸುತ್ತದೆಯೋ ಅದನ್ನೇ ಪರೋಕ್ಷ್ಯವಾಗಿ ಪೋಷಿಸುತ್ತಿದೆ.

ಎಡಪಂಥೀಯರ ಈ ಬಗೆಯ ಗ್ರಹಿಕೆಯ ಸ್ವರೂಪ ಮತ್ತೊಂದು ಬಗೆಯ ಅಪಾಯಕ್ಕೆ ವಿಕೃತಿಗೆ ಕಾರಣವಾಗುತ್ತಿದೆ. ಎಡಪಂಥೀಯ ನಿಲುವುಗಳಿಗೆ ವಿರುದ್ಧವಾದ ಇತಿಹಾಸ ಪಠ್ಯಗಳನ್ನು ಪ್ರಸ್ತುತ ಪಡಿಸಿದಾಗ ಸೆಕ್ಯುಲರಿಸ್ಟರು ಒಂದೋ ಮೌನ ತಳೆಯುತ್ತಾರೆ, ಇಲ್ಲವೋ 'ಈ ವಿಷಯಗಳಲ್ಲಿ ನಮಗೆ ಇತಿಹಾಸದ ಅಗತ್ಯವಿಲ್ಲ. ಸ್ಮೃತಿಯೇ ಸಾಕು' ಎನ್ನುತ್ತಾರೆ. ನನ್ನ ಪ್ರಕಾರ ಇದು ಅರ್ಧಸತ್ಯವಷ್ಟೇ. ಹೀಗೆ ನಂಬುವ ಯಾರೂ JNU-ನ ಇತಿಹಾಸ ವಿಭಾಗವನ್ನು ಮುಚ್ಚುವಂತೆ ಕೋರಿಲ್ಲ. ಹಾಗಿದ್ದ ಪಕ್ಷದಲ್ಲಿ ಎಡಪಂಥೀಯ ಇತಿಹಾಸಕಾರರ ಕೃತಿಗಳಿಗೆ, ಗ್ರಹಿಕೆಗಳಿಗೆ ವಿರುದ್ಧವಾದ ಅರ್ಥಪೂರ್ಣವಾದ ಐತಿಹಾಸಿಕ ಅಧ್ಯಯನಗಳಿದ್ದರೆ ಅವುಗಳನ್ನು ಗಮನಿಸದೇ ಗತ್ಯಂತರವಿಲ್ಲ. ಇತ್ತೀಚೆಗೆ ನಾನು ಓದಿದ ಮಹತ್ವದ ಬರಹ ಧರಮಪಾಲರ ಸಮಗ್ರ ಸಂಪುಟ. ಇದರಲ್ಲಿನ ಬಹುತೇಕ ವಿಷಯಗಳು ನನಗೆ ಅರ್ಧಂಬರ್ಧ ಗೊತ್ತಿದ್ದವೇ ಆದರೂ, ನನ್ನ ಗೊತ್ತಿರದಿದ್ದ ೧೦-೧೫ ಮಹತ್ವದ ವಿಷಯಗಳಲೂ ಇದ್ದವು. ಅದರಲ್ಲಿ ಒಂದು, ಭಾರತದಲ್ಲಿ 'Feudalistic Society' ಎನ್ನುವುದು ಬ್ರಿಟಿಷ್ ಪೂರ್ವ ಕಾಲದಲ್ಲಿ ಇದ್ದಿರಬಹುದಾದ ಸಾಧ್ಯತೆ ಬಹಳ ಕಡಿಮೆ ಎಂದು ಧರಂಪಾಲರು ವಾದಿಸುತ್ತಾರೆ. ನನ್ನ ಸ್ಮೃತಿಯಲ್ಲಂತೂ ಅದಿಲ್ಲ. ಧರಮಪಾಲರನ್ನು ಕುರಿತು ಮತ್ತೊಮ್ಮೆ ದೀರ್ಘವಾಗಿ ಬರೆಯುತ್ತೇನೆ. ಆದರೆ ಎಡಪಂಥೀಯರು ಇಂತಹ ನಿದರ್ಶನಗಳನ್ನು ಪರಿಗಣಿಸಿದ್ದಾರೆಯೇ, ಚರ್ಚಿಸಿದ್ದಾರೆಯೇ? ತಮ್ಮ ತತ್ವಕ್ಕನುಗುಣವಾದ ಇತಿಹಾಸ ನಿರ್ಮಿಸಿಕೊಳ್ಳುವ ಭರದಲ್ಲಿ ಇವರ ಕಣ್ಣಿಗೆ ಬಿದ್ದರೂ ಬಿದ್ದಂತಿರದ ಈ ವಸ್ತುಗಳು ಬಲಪಂಥೀಯರಿಗೆ ಆಹಾರವಾಗಿರುವುದು, ಈ ಎಲ್ಲದರ ಹೊರತಾಗಿರುವ ಜನರಿಗೆ ಸೆಕ್ಯುಲರಿಸ್ಟರಿಂದ ದೂರವಾಗುವುದಕ್ಕೂ ಸಾಕಷ್ಟು ಸಹಾಯಕವಾಗಿರುವುದು ಸಹಜವಾಗಿದೆ.

ನಮ್ಮ ಎಡಪಂಥೀಯ ಸೆಕ್ಯುಲರಿಸ್ಟರ ಗ್ರಹಿಕೆಯ ಕುರಿತು ಮತ್ತೊಂದು ವಿಷಾದನೀಯ ಉದಾಹರಣೆ ಕೊಡುತ್ತೇನೆ. ಈಗ ನಮ್ಮ ದೇಶದ ಒಂದು ರಾಜ್ಯದಲ್ಲಿ ಬಲಪಂಥೀಯರ ಮೇಲುಗೈ ಮತ್ತು ಗೆಲುವಿನ ವಿಚಾರವನ್ನೇ ತೆಗೆದುಕೊಳ್ಳಿ. ನಮ್ಮ ಎಡಪಂಥೀಯರು ಒಟ್ಟಿಡೀ ಚುನಾವಣೆ ಕೋಮುವಾದದ platform ನಲ್ಲಿ ಮಾತ್ರ ನಡೆಯುತ್ತಿದೆ ಎಂದು ತಿಳಿದಂತಿದೆ. ಪ್ರತಿಯೊಂದು ಚುನಾವಣೆಯಲ್ಲಿ ಅನೇಕ ಪ್ರಾದೇಶಿಕವಾದ (ಜಿಲ್ಲ್ಲೆ, ತಾಲೋಕು) ಸತ್ಯಗಳು, ವೈರುಧ್ಯಗಳು ಹೆಚ್ಚು ಕೆಲಸ ಮಾಡುತ್ತವೆ. ಕೋಮು ವೈಷಮ್ಯ ಅದರಲ್ಲೊಂದಾಗಿರುತ್ತದೆ. ಮಿಕ್ಕ ವಿಷಯಗಳ ಕುರಿತು ಸೆಕ್ಯುಲರ್ ರಾಜಕೀಯ ಪಕ್ಷಗಳೇ ಆಗಲಿ, ಎಡಪಂಥೀಯರೇ ಆಗಲಿ ಸ್ವಲ್ಪವಾದರೂ ಗಮನ ಹರಿಸಿದಂತಿಲ್ಲ. ಇದು ನಿಸ್ಸಂಶಯವಾಗಿ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುವ ಕ್ರಮವಾಗಿದೆ. ಇನ್ನು ಮಾತಿನ ರೀತಿಯಂತೂ ದೇವರಿಗೇ ಪ್ರೀತಿ. ನಮ್ಮ ಪ್ರಮುಖ ಪಕ್ಷವೊಂದರ ನೇತಾರರು ಆ ರಾಜ್ಯದ ಮುಖ್ಯಮಂತ್ರಿಯೊಬ್ಬರ ಕುರಿತು ಆಡಿದ ತೀವ್ರತರ ಮಾತು ವಿಕೋಪಕ್ಕೆ ತಿರುಗಿ ಎಲೆಕ್ಷನ್ ಕಮಿಷನ್‍ವರೆಗೆ ಹೋಯಿತು. ಇಷ್ಟು ಅವಮಾನ ಸಾಲದೆನ್ನುವಂತೆ, ನೇತಾರರು ನಿರೀಕ್ಷಿಸಿದ ಪರಿಣಾಮಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ಮುಖ್ಯಮಂತ್ರಿಗಳು ಅದನ್ನು ತಮಗೆ ಅನುಕೂಲವಾಗುವಂತೆಯೇ ಬಳಸಿಕೊಂಡರೇನೋ ಎಂದೆನ್ನಿಸುವಷ್ಟರ ಮಟ್ಟಿಗೆ - Blunder of the Decade ಆಗಿ ಇತಿಹಾಸದಲ್ಲಿ ದಾಖಲಾಗಬಹುದು. ನನ್ನ ಅಭಿಪ್ರಾಯದಲ್ಲಿ ಒಂದು ೧೫-೨೦ ಸೀಟುಗಳನ್ನಾದರೂ ಈ ಕಾರಣದಿಂದ ಮುಖ್ಯಮಂತ್ರಿಗಳು ಗೆದ್ದಿರುತ್ತಾರೆ. ಇನ್ನು ಚುನಾವಣ ವಿಷಯಗಳ ವೈವಿಧ್ಯತೆಯ ಅವಜ್ಞೆಯಿಂದ ಮತ್ತಷ್ಟು ಸೀಟುಗಳು ಕಳೆದಿವೆ. ಈ ಎಲ್ಲ ಅಂಶಗಳ ಮೇಲೆ ಕೋಮು ವೈಷಮ್ಯ ತನ್ನ ಕೆಲಸ ಸಾಧಿಸುತ್ತದೆಯೇ ಹೊರತು, ಅದು ಮಾತ್ರವೇ ಎಲ್ಲವೂ ಆಗಿರುವುದಿಲ್ಲ. ಇವತ್ತಿನ ಪ್ರಕ್ರಿಯೆಗಳ ಬಿರುಕುಗಳಲ್ಲಿ ಕೋಮುವಾದ ವಿಜೃಭಿಸುತ್ತದೆ.

ಕೋಮುವಾದವನ್ನು ವಿರೋಧಿಸುವವರು ಆ ಬಿರುಕನ್ನು ಮುಚ್ಚುವುದಕ್ಕೆ ಅಶಕ್ತರಾಗಿರುವುದಷ್ಟೇ ಅಲ್ಲದೆ, ತಮಗೆ ಗೊತ್ತಿಲ್ಲದಂತೆ ಅವೇ ಬಿರುಕುಗಳನ್ನು ಮತ್ತಷ್ಟು ತೀವ್ರಗೊಳಿಸುತ್ತಿದ್ದಾರೆ ಎನ್ನುವುದು ದುರಂತ.

ನಮ್ಮ ದೇಶದಲ್ಲಿ ಸೆಕ್ಯುಲರಿಸಂ-ನ ಪರಿಕಲ್ಪನೆ

ಇವತ್ತಿನ ವಾಸ್ತವದಲ್ಲಿ ನಾವು ಸೆಕ್ಯುಲರಿಸಮ್ಮನ್ನು ಗ್ರಹಿಸುವಂತೆ ಅದರ ಐತಿಹಾಸಿಕತೆಯಲ್ಲೂ ಗ್ರಹಿಸಬೇಕಿದೆ. ಅಂತೆಯೇ ಅದರ ಜೊತೆಗೇ ಬಳಸಲ್ಪಡುವ ಪರಿಕಲ್ಪನೆಗಳೂ ಸಹ.

ಸೆಕ್ಯುಲರಿಸಂ ಮತ್ತು ಲಿಬರಲಿಸಂ ಎರಡೂ ಪದಗಳಿಗೆ ಐತಿಹಾಸಿಕತೆಯಿದೆ, ಸಂಬಂಧಗಳಿವೆ. ಆದರೂ, ಭಾಷಿಕವಾಗಿ ಮತ್ತು ಇಂದು ನಮ್ಮ ದೇಶದಲ್ಲಿ ಬಳಕೆಯಾಗುತ್ತಿರುವ ಸ್ವರೂಪಗಳ ಹಿನ್ನೆಲೆಯಲ್ಲಿ ಹೇಳುವುದಾದರೆ - ಅವೆರಡೂ 'ಒಂದೇ' ಅಲ್ಲ. ಮೂಲಭೂತವಾಗಿ ಯೂರೋಪಿನ ರಿಲಿಜಿಯಸ್ ಸಮಾಜಗಳ ಸಂದರ್ಭದಲ್ಲಿ ಈ ಪರಿಕಲ್ಪನೆ ಹುಟ್ಟಿದ್ದರೂ, ಅದು ನಮ್ಮಲ್ಲಿ ಬೇರೆ ಬೇರೆ ರೀತಿಗಳಲ್ಲಿ ಬಳಕೆಯಾಗುತ್ತಿದೆ. ಅವುಗಳಲ್ಲಿ ಕೆಲವು ಹೀಗಿವೆ.

೧. ಧರ್ಮನಿರಪೇಕ್ಷತೆ (ರಿಲಿಜನ್ ಪದಕ್ಕೆ ಧರ್ಮ ಪದವನ್ನು ಉಪಯೋಗಿಸುವುದು ನನಗೆ ಹಿಂಸೆಯ ವಿಷಯ).

೨. ಜಾತ್ಯತೀತತೆ

೩. ಕೋಮು‍ಅಸಹನೆ ಉಳ್ಳದವನು (ಕೋಮುವಾದಿಯಲ್ಲದವನು)

೪. ಲಿಬರಲ್

೫. ಎಲ್ಲಾ ಮತಗಳನ್ನೂ ಸಮಾನವಾಗಿ ಕಾಣುವವನು.

೬. ಮತೀಯತೆಯನ್ನು ಒಪ್ಪದವನು

ಸೆಕ್ಯುಲರಿಸಂ ಯೂರೋಪಿನ ಸಂದರ್ಭದಲ್ಲಿ, ದೇಶವ್ಯಾಪಾರದ ನಿರ್ವಹಣೆಯಿಂದ ಚರ್ಚನ್ನು ದೂರವಿಡುವ ಅವಶ್ಯಕತೆಯಿಂದಾಗಿ, ಹುಟ್ಟಿದ ಪರಿಕಲ್ಪನೆ. ಅದನ್ನು ನಮ್ಮಲ್ಲಿ ಇನ್ನೂ ಸರಿಯಾದ ಅನುವಾದವನ್ನು ಮಾಡಿಕೊಳ್ಳಲಾಗಿಲ್ಲವೆನ್ನುವುದು ನನ್ನ ಅಲ್ಪ ತಿಳಿವಳಿಕೆ, ಇನ್ನೂ ಹೆಣಗುತ್ತಿದ್ದೇವೆ. ಕೆಲವೊಮ್ಮೆ ಇದು ವೈಯಕ್ತಿಕವಾದ ಒಂದು 'ಆಧುನಿಕ ಆಧ್ಯಾತ್ಮಿಕ ಅವಶ್ಯಕತೆ' ಎನ್ನುವ ಸೂಕ್ಷ್ಮದಲ್ಲೂ ಬಳಕೆಯಾಗುತ್ತಿದೆ ಎನ್ನುವುದು ನನ್ನ ಅನುಮಾನ.

ಸೆಕ್ಯುಲರ್ ಜನರು ಯಾರನ್ನು ಕೋಮುವಾದಿಗಳು ಎನ್ನುತ್ತಾರೋ ಅವರುಗಳು ಮೇಲೆ ಹೇಳಿರುವ ೩,೪,೫,೬-ಗಳನ್ನು ಒಪ್ಪುತ್ತಾರೆ (ಆದರೆ ಸೆಕ್ಯುಲರ್ ಜನರಿಗೆ ಹಾಗೆನ್ನಿಸುವುದಿಲ್ಲ). ಮತ್ತು ತಮ್ಮನ್ನು ತಾವು ಸೆಕ್ಯುಲರ್ ಎಂದು ಕರೆದುಕೊಳ್ಳುವುದಕ್ಕೆ ಒಪ್ಪುವುದೂ ಇಲ್ಲ. ಈ ಬಿರುಕನ್ನು ಅರಿಯಲು ಪ್ರಯತ್ನಿಸುತ್ತಿದ್ದೇನೆ ಅಷ್ಟೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಅನೇಕ ಗಾಂಧಿವಾದಿಗಳು ತಮ್ಮನ್ನು ತಾವು ಸೆಕ್ಯುಲರ್ ಎಂದು ಒಪ್ಪಿಕೊಳ್ಳುವುದಿಲ್ಲ. ಅವರಲ್ಲಿ ಬಹುತೇಕರು ಕೋಮುವೈಷಮ್ಯದಿಂದ ನರಳುತ್ತಿಲ್ಲ.

ಕೋಮುವಾದಿಯಂತೂ ಅಲ್ಲ, ಸೆಕ್ಯುಲರ್ ಕೂಡಾ ಅಲ್ಲ

ಈ ಅನೇಕ ಕಾರಣಗಳಿಂದ ನಾನು ಸೆಕ್ಯುಲರಿಸ್ಟ್ ಎನ್ನಿಸಿಕೊಳ್ಳಬೇಕಾದ ಅನಿವಾರ್ಯತೆ ಕಾಣುತ್ತಿಲ್ಲ. ಹಾಗಿದ್ದೂ ನಾನು ಕೋಮುವಾದಿಯಲ್ಲ. ನನ್ನ canvas ಚಿಕ್ಕದು. ನಾನೇನಿದ್ದರೂ ನನ್ನ ಸೀಮಿತವಾದ ಆವರಣದಲ್ಲಿ ಬದುಕುವವನು. ನನ್ನ ಆವರಣದಲ್ಲಿ ಅನೇಕರು ಮುಸಲ್ಮಾನರ ಕುರಿತು ತೀವ್ರವಾದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಆದರೆ ನಾನು ಅವರ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಅವರನ್ನು ಕೆರಳಿಸುವುದಿಲ್ಲ. ಆದರೆ ಮೌನದಲ್ಲೇ, ತಾಳ್ಮೆಯ ಪ್ರಶ್ನೆಗಳಲ್ಲೇ ಅವರನ್ನು ಆಲೋಚಿಸುವಂತೆ ಮಾಡುತ್ತೇನೆ. ಅವರೆಲ್ಲರಿಗೂ ನನ್ನನ್ನು convince ಮಾಡುವ ಆಸೆ. ಆದರೆ ಅವರಿಗೆ ಸಾಧ್ಯವಾಗುವುದಿಲ್ಲ. ಆ ಕಾರಣದಿಂದ ಒಂದು ಬಗೆಯ ಹಿಂಜರೆತ ಅವರಿಗೆ. ಆದರೆ ನಾನು ಮಾತ್ರ ಅವರನ್ನು ಅಭಿವ್ಯಕ್ತಿಯಲ್ಲಿ ಹಿಂಸಿಸಿವುದಿಲ್ಲ. ನಾನಾಗಿಯೇ ಅವರು ತೀವ್ರಗಾಮಿಗಳಾಗುವ ಪ್ರಕ್ರಿಯೆಗೆ ಪರೋಕ್ಷ್ಯವಾಗಿ ಕಾರಣನಾಗುವುದಿಲ್ಲ. (ಅವರು ಯಾರೂ ಮುಸಲ್ಮಾನರ ಕುರಿತು ದ್ವೇಷವುಳ್ಳವರಾಗಿ ನನಗೆ ಕಂಡಿಲ್ಲ. ಆದರೆ ತೀವ್ರವಾದ ಭಾವನೆಗಳಿರುವುದು ನಿಜ. ನಮ್ಮ ಸೆಕ್ಯುಲರಿಸ್ಟರನ್ನು ಕುರಿತುಮಾತ್ರ ನನ್ನ ಆವರಣದಲ್ಲಿ ತೀವ್ರ ಅಸಹನೆಯಿದೆ, ಸಿಟ್ಟಿದೆ, ತಿರಸ್ಕಾರವಿದೆ. ಇದು ಸೆಕ್ಯುಲರಿಸ್ಟರನ್ನು ಆತ್ಮವಿಮರ್ಶೆಗೆ ಪ್ರೇರೇಪಿಸದಿರುವುದು ನನಗೆ ಆಶ್ಚರ್ಯ ತಂದಿದೆ.) ಇದಷ್ಟೇ ನಾನು ಮಾಡುವುದು. ಇದಕ್ಕೋಸ್ಕರ ನನಗೆ ಸೆಕ್ಯುಲರಿಸ್ಟ್ ಪರಿಭಾಷೆಯನ್ನು ಒಪ್ಪಬೇಕಾದ್ದು ಅನಿವಾರ್ಯವಾಗಿ ಕಂಡಿಲ್ಲ.
ಇನ್ನೊಂದಿಷ್ಟು ಮುಂದುವರೆದು ಹೇಳುತ್ತೇನೆ. ನನಗೆ ಈ ಪ್ರಕ್ರಿಯೆಯನ್ನು ನಿಭಾಯಿಸಲು ಕೋಮುವಾದಿ, ಕೋಮುವಾದ ಪದಗಳು ಬೇಕಿಲ್ಲವೆಂದೆನ್ನಿಸುತ್ತಿದೆ. ಆ ಪದಗಳ ಬಳಕೆಯಲ್ಲೇ ಒಂದು ಹಿಂಸೆಯಿದೆ. They are very rough abstractions of people but when used as a communicative language it could be horrendous . ನನಗೆ ಕೋಮುವಾದ, ಕೋಮುವಾದಿ ಪದಗಳನ್ನು ನಿರ್ಮಿಸುತ್ತಿರುವ ಪ್ರಕ್ರಿಯೆ, ಗುಣಗಳನ್ನು ಒಂದೊಂದಾಗಿ ಬಿಡಿಬಿಡಿಯಾಗಿ ಗುರುತಿಸುತ್ತಾ ಅವುಗಳೊಡನೆ Situationally ಗುದ್ದಾಡುವುದೇ ಹೆಚ್ಚು ಸರಿಯಾದ ದಾರಿಯೆಂದೆನ್ನಿಸುತ್ತಿದೆ.

ಕೋಮುದ್ವೇಷದ ಮೂಲ

ಇಂದು ನಮ್ಮ ಸೆಕ್ಯುಲರಿಸ್ಟರ ಗ್ರಹಿಕೆಯಲ್ಲಿ 'ನಮ್ಮ ದೇಶದಲ್ಲಿ ವಿನಾಕಾರಣದ ಕೋಮು ದ್ವೇಷ'ವಿದೆ. ನನಗೆ ಹೀಗನ್ನಿಸಿಲ್ಲ. ಇದು ಸಕಾರಣವಾದ ದ್ವೇಷವಂತೂ ಅಲ್ಲವೆನ್ನುವುದು ಖಚಿತ. ದ್ವೇಷ ಎನ್ನುವುದಕ್ಕೇ ಸಕಾರಣ ಕಷ್ಟ, ಅದು ಸಾಧ್ಯವಿಲ್ಲ. ಆದರೆ ವಿನಾಕಾರಣವೆಂದೂ ಅನ್ನಿಸಿಲ್ಲ. ಇವತ್ತಿನ ಕೋಮುದ್ವೇಷಕ್ಕೆ ಹಲವಾರು ಕಾರಣಗಳಿವೆ, ಹಿಂದೂ ಮುಸಲ್ಮಾನರೆನ್ನದೇ ಹುಲುಮಾನವರ ಕೈಮೀರಿದ್ದು. ಇಲ್ಲಿ ಒಂದು ಮೂಲಭೂತವಾದ ಸಮಸ್ಯೆಯಿದೆ. ಒಂದು ಊರು ಎನ್ನುವುದು ಜೀವನದ ಒಂದು ಘಟಕವಾದ್ದಾಗ ಹಿಂದೂ, ಮುಸಲ್ಮಾನರೆಲ್ಲರೂ ಅನೇಕ ಜಾತಿಗಳ ಸ್ವರೂಪದಲ್ಲಿ ಬದುಕುವುದು ಸಾಧ್ಯವಿತ್ತು. ಯಾವುದೂ ಸಹ ಜಗಳವನ್ನು ಮೀರಿದ ದ್ವೇಷವಾಗದೇ ಉಳಿಯುವುದು ಸಾಧ್ಯವಿತ್ತು. ದೇವಚಂದ್ರನ ರಾಜಾವಳಿ ಕಥೆಯಲ್ಲಿ ಮೂಡಿ ಬರುವ ಆಕೃತಿ ಇಂಥದ್ದನ್ನು ಹೇಳುತ್ತದೆ. ಆದರೆ ರಾಷ್ಟ್ರೀಯತೆ, ಅಂತರರಾಷ್ಟ್ರೀಯತೆ, ಆಧುನಿಕ ತಂತ್ರಜ್ಞಾನಗಳು ಒಂದೆಡೆ ಒಂದು ಚಿಕ್ಕ ಊರಿನ ಸಾವಯವ ಸಂಬಂಧವನ್ನು ಕೊಲ್ಲುತ್ತಿದೆ. ದೊಡ್ಡ ಮಟ್ಟದ ಭೌಗೋಳಿಕ ಮತ್ತು ಮಾನಸಿಕ ವಲಸೆಯೆನ್ನುವುದು ತಬ್ಬಲಿತನವನ್ನು ಸೃಷ್ಟಿಸುತ್ತಿದೆ. ತಾವಿದ್ದೆಡೆಯಲ್ಲೇ ತಬ್ಬಲಿಯಂತಾಗುತ್ತಿದ್ದಾರೆ. ತಮ್ಮ ಜೀವನದ ಸೌಂದರ್ಯದ ಬಗ್ಗೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ ಜನ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ನಮ್ಮ ಧಾರಣಶಕ್ತಿಯನ್ನು ಮೀರಿದ ಐಡೆಂಟಿಟಿಗಳನ್ನು ಸೃಷ್ಟಿಸುವ ಬೃಹತ್ ಪ್ರಕ್ರಿಯೆ ಅವಿರತವಾಗಿ ಸಾಗುತ್ತಿದೆ. ಆ ಕಾರಣದಿಂದ ಹಿಂದೂಗಳು ಮತ್ತು ಮುಸಲ್ಮಾನರು ಇಬ್ಬರೂ ಸಹ ಅಪಾಯಾಕಾರಿಯಾದ ರೀತಿಯ ಸಂಘಟನೆಯ ಪ್ರಕ್ರಿಯೆಗಳಲ್ಲಿ ನಿರತರಾಗಿದ್ದಾರೆ. ನಮ್ಮೀ ಕೋಮಿನ ಧ್ರುವೀಕರಣ ಇದರ ಪ್ರತಿಫಲವೆನ್ನುವುದು ನನ್ನ ನಿಲುವು. ಈ ಪ್ರಕ್ರಿಯೆಯನ್ನು ನಾವು ನಿರ್ವಹಿಸುತ್ತಿರುವ ರೀತಿ ಮಾತ್ರ ದುರಂತಮಯವಾಗಿದೆ, ಸೆಕ್ಯುಲರಿಸ್ಟರನ್ನೂ ಸೇರಿಸಿ.

ಇದೇ ಸಂದರ್ಭದಲ್ಲಿ ಹಿಂದೂಗಳು ಮರೆಯಬಾರದ ಒಂದು ವಿಷಯವನ್ನು ನೇರವಾಗಿಯೇ ಪ್ರಸ್ತಾಪಿಸಲಿಚ್ಛಿಸುತ್ತೇನೆ. ಇಂದು ನಮ್ಮ ಜೀವನದ ಪ್ರತಿ ಅಣುವಿನಲ್ಲೂ ಇಂಗ್ಲೀಷು ಮತ್ತು ಪಾಶ್ಚೀಮಾತ್ಯ ಪರಿಕಲ್ಪನೆಗಳು ಮನೆಮಾಡಿಕೊಂಡಿವೆ. ಮಕ್ಕಳಿಗೆ ಕನ್ನಡದಂತಹ ದೇಶೀಯ ಭಾಷೆಗಳನ್ನು ಕಲಿಸುವುದು ಕಷ್ಟವಾಗಿದೆ. ನಮ್ಮ ಜೀವನ ಶೈಲಿ ಆಧುನಿಕ ವಾಣಿಜ್ಯದಿಂದ ಪ್ರಭಾವಿತವಾಗಿದೆ. ಇದರ ಪ್ರಭಾವದಿಂದ ನಾವು ಪಡೆದುಕೊಳ್ಳುತ್ತಿರುವುದು ಬಹಳವಾದರೂ ಅದೇ ಕಾರಣದಿಂದ ನಾವು ಭಾರತೀಯ ಸಂಸ್ಕೃತಿಯ ಬಹುಭಾಗವನ್ನು ಕಳೆದುಕೊಳ್ಳುತ್ತಿದ್ದೇವೆ. ಪಾಶ್ಚಾತ್ಯೀಕರಣವು ಭಾರತೀಯ ಸಂಸ್ಕೃತಿಯಿಂದ ನಮ್ಮನ್ನು ದೂರಮಾಡುತ್ತಿರುವಂತೆಯೇ, ಈ ಪ್ರಕ್ರಿಯೆಯಲ್ಲಿ ತನ್ನ ಪಾತ್ರವನ್ನು ತೋರ್ಪಡಿಸಿಕೊಳ್ಳದೇ ಮರೆಮಾಚುವಷ್ಟು ಶಕ್ತವಾಗಿರುವುದು, ನಮ್ಮ ಗಮನವನ್ನೆಲ್ಲಾ ಮುಸಲ್ಮಾನ ಕಾಲದ ವಿಕೃತಿಗಳತ್ತ ಮಾತ್ರ ಇರುವುದಕ್ಕೆ ಕಾರಣವಾಗಿದೆ. ನಮ್ಮ ಸಮಸ್ಯೆ ಸೆಕ್ಯುಲರಿಸಮ್ಮಿಗಿಂತಲೂ, ಮತ್ತಿತರ ಮತಧರ್ಮಗಳ ವಿಷಯಕ್ಕಿಂತಲೂ, ಆಧುನಿಕತೆಯ ಉತ್ಪನ್ನಗಳ ಕುರಿತಾಗಿ ನಮಗಿರುವ ಆಕರ್ಷಣೆಯೇ ಎನ್ನುವುದು ನನ್ನ ಅನುಮಾನ. ಇದನ್ನು ಗಾಂಧೀಜಿಯವರ ಆಲೋಚನಾಕ್ರಮದಲ್ಲೂ ಕಾಣಬಹುದು.

ಇದನ್ನು ನಿರ್ವಹಿಸಲಾಗದ ನಾವು ಸಂಸ್ಕೃತಿಯ ರಕ್ಷಣೆಯ ಭರದಲ್ಲಿ ಕೋಮುವಾದವನ್ನು ಪೋಷಿಸುತ್ತಿದ್ದೇವೇನೋ ಅನ್ನಿಸುತ್ತಿದೆ. ಹಿಂದೂಗಳು ಇದನ್ನು ನಿರ್ವಹಿಸದೇ, ಆತ್ಮವಿಮರ್ಶೆ ಮಾಡಿಕೊಳ್ಳದೇ ಗತ್ಯಂತರವಿಲ್ಲ.

ಮತ್ತೆ ಆವರಣದ ಕುರಿತು

ಈ ಎಲ್ಲದರ ಹಿನ್ನೆಲೆಯಲ್ಲಿ ಶುರುಮಾಡಿದಲ್ಲಿಗೆ ವಾಪಾಸು ಬರುತ್ತೇನೆ. ನನಗೆ ಆವರಣದ ಕುರಿತಾದ ಆಕ್ಷೇಪವಿರುವುದು ಅದರ ಅಭಿವ್ಯಕ್ತಿ ಕ್ರಮದಲ್ಲಿ ಮತ್ತು ಇತಿಹಾಸ ಪ್ರಕರಣ ಮತ್ತು ಧ್ವನಿಯ ಆಯ್ಕೆಯಲ್ಲಿ. ಭೈರಪ್ಪನವರಿಗೆ ಮುಸಲ್ಮಾನರ ಕುರಿತಾದ ದ್ವೇಷವಿದೆ ಎನ್ನುವ ನಿಲುವು ನನ್ನದಲ್ಲ. ಅದನ್ನು ತಿಳಿಯುವ ಕ್ರಮವೂ ಇಲ್ಲ. ಆದರೆ ನನ್ನೆದಿರಿರುವುದು ಆವರಣ ಕೃತಿಯಾದ್ದರಿಂದ, ಅದರ ಪರಿಭಾಷೆ ರಣಕಹಳೆಯದ್ದಾಗಿರುವುದರಿಂದ ಅದೊಂದು ಸಮಸ್ಯೆಯಾಗಿದೆ. ಅದು ಸೆಕ್ಯುಲರಿಸ್ಟರ ವಿರುದ್ಧವಾದ ರಣಕಹಳೆಯಾದರೂ, ಒಟ್ಟು ಸಾಂಸ್ಕೃತಿಕ ಸಂದರ್ಭದಲ್ಲಿ ಅದರ ಪರಿಭಾಷೆ ಹಿಂಸೆಯದ್ದಾಗಿದೆ. ಕೆರಳಿಸುವಂಥದ್ದಾಗಿದೆ. ಮುಸಲ್ಮಾನ ರಾಜರ ಅಥವಾ ಆಳ್ವಿಕೆಯಲ್ಲಿ ನಾಚಿಕೆಪಡುವಂಥದ್ದಾಗಿದೆ ಎಂದಿಟ್ಟುಕೊಂಡರೂ ಮುಸಲ್ಮಾನರೂ ಅದನ್ನು ಓದಿ ಕೆರಳದೇ ಇರುವ ಕ್ರಮದಲ್ಲಿಲ್ಲದೇ ಹೋದರೆ ಅದೊಂದು ಒಳ್ಳೆಯ ಸಾಹಿತ್ಯಕೃತಿಯಾಗಲಾರದು. ಬಿಟ್ಟ ಬಾಣ ಸೆಕ್ಯುಲರಿಸ್ಟರನ್ನು ಮಾತ್ರವಲ್ಲ ಮುಗ್ಧರನ್ನೂ ತಾಗುತ್ತದೆ ಎನ್ನುವುದನ್ನು ನಮ್ಮ ಕಾಲದ ಪ್ರಮುಖ ಸಾಹಿತಿಯೊಬ್ಬರು ಮನಗಾಣದೇ ಹೋದದ್ದು ದುರಂತ. ಬಾಣದಂತೆ ಸಾಹಿತ್ಯವನ್ನು ಬಳಸಬಹುದು ಎಂದು ಅವರೆಂದುಕೊಂಡದ್ದೂ ದುರಂತ.
ಹೀಗಿದ್ದಾಗ್ಯೂ, ಆವರಣದ ನಿಜವಾದ ವಿಮರ್ಶೆಯೆಂದರೆ ಅದರಲ್ಲಿ ಲಕ್ಷ್ಮಿಯ ನಿಲುವುಗಳನ್ನು ಭೈರಪ್ಪನವರು ಅನುಮೋದಿಸುತ್ತಾರೆ ಎನ್ನುವ ಆಲೋಚನೆಯನ್ನು ಬದಿಗಿಟ್ಟು ವಿಮರ್ಶಿಸುವುದು. ಆದರೆ ಆವರಣದ ಕುರಿತು ಈವರೆಗಿನ ಅವಲೋಕನ ಹಾಗಿಲ್ಲದಿರುವುದು ಸಾಹಿತ್ಯವಿಮರ್ಶೆಯ ಘನತೆಗೆ ತಕ್ಕುದಲ್ಲವಾಗಿದೆ. ಇದನ್ನೂ ಮೀರಿದ ಒಂದು ಅಪಾಯವಿದೆ. ಆವರಣದ ಕುರಿತಾದ ಟೀಕೆಗಳು ಹೇಗಿವೆಯೆಂದರೆ ಆವರಣವನ್ನು ಮೆಚ್ಚುವ ಜನರು ಈ ಟೀಕೆಗಳನ್ನು ತಮ್ಮ ಮೇಲಿರುವ ಸಿಟ್ಟು ಅಸಹನೆ ಎಂದು ಪರಿಗಣಿಸುವಷ್ಟು. ಇದರಿಂದ ಸಮಾಜದಲ್ಲಿರುವ ಕಂದಕ ಮತ್ತಷ್ಟಾಗುತ್ತಿದೆ.

ಆದ್ದರಿಂದ, ಟೀಕೆಯ ರೀತಿ, ಅದರ ಭಾಷೆ ಹೊಸತಾಗಬೇಕಿದೆ. ಸ್ವಲ್ಪ ಮಟ್ಟಿಗಿನ ಕೃತಿನಿಷ್ಠ ವಿಮರ್ಶೆ ಎನ್ನುವುದನ್ನು ಇಲ್ಲಿ ಅಭ್ಯಾಸಕ್ಕೆ ತರಬೇಕಿದೆ. ಭೈರಪ್ಪನವರು ಅನುಮೋದಿಸುತ್ತಾರೋ ಇಲ್ಲವೋ ಮುಖ್ಯವಲ್ಲ. ಆದರೆ ವಿಮರ್ಶಕ ಹಾಗಂದುಕೊಳ್ಳಬೇಕಿಲ್ಲ. ಇದರಿಂದ ಎರಡು ಒಳ್ಳೆಯದು ಸಾಧ್ಯವಾಗಬಹುದು. ಕೃತಿಯಲ್ಲಿ ಕೃತಿಕಾರನ ಅಭಿಪ್ರಾಯವನ್ನು ಮೀರಿದ ಆಕೃತಿಗಳನ್ನು ಅನ್ವೇಷಿಸಬಹುದು. ಮತ್ತು ಕೃತಿಗಿರಬಹುದಾದ ನೆಗಟಿವ್ ಅಂಶಗಳಿಂದ ಕೃತಿಯನ್ನು ದೂರತರಬಹುದು. ಈ ಮಾರ್ಗದಲ್ಲೇ ನಾವು ಲಕ್ಷ್ಮಿಯ ಹಿಂದಿರುವ ಭೈರಪ್ಪನವರನ್ನೂ ಅನಾವರಣಗೊಳಿಸಬಹುದು. ಆ ಮೂಲಕ ನಾವು ಯಾವ ಅಪಾಯವನ್ನು ಪರಿಭಾವಿಸುತ್ತಿದ್ದೇವೋ ಆ ಅಪಾಯವನ್ನು ನಿವಾರಿಸಿಕೊಳ್ಳುವ ಕ್ರಮಗಳನ್ನೂ ಗಳಿಸುವುದು. ಇದರಿಂದ ಎಲ್ಲರನ್ನೂ ಒಳಗೊಳ್ಳಬಹುದಾದ ಸಂವಾದವೊಂದು ಸಾಧ್ಯವಾಗುತ್ತದೆ, ಕೋಮುವಾದಿಗಳನ್ನೂ ಸೇರಿಸಿ.

ಆದರೆ..., ನನ್ನ ಕಳಕಳಿ

ಆದರೆ ಇವತ್ತಿನ ಎಲ್ಲಾ ಸಾರ್ವಜನಿಕ ಸಂವಾದ ಈ ಕಂದಕವನ್ನು ಹೆಚ್ಚಿಸುವಂತದ್ದು. ರಾಜಕೀಯದಲ್ಲಿ ಜನರನ್ನು ತಲುಪಬೇಕಾಗಿರುವುದು ಬಹಳ ಮುಖ್ಯ. ಅಂದರೆ ಆ ಸಂವಹನಕ್ಕೆ ತಕ್ಕುದಾದಂತಹ ವಾಹಕಗಳನ್ನು ಸೃಷ್ಟಿಸಿಕೊಳ್ಳುವುದು ಅನಿವಾರ್ಯ. ನಾವೆಲ್ಲರೂ ಮೆಚ್ಚುವ ಗಾಂಧೀಜಿ ಇದರಲ್ಲಿ ಎತ್ತಿದ ಕೈ. ಆದರೆ ನಾವು ಗಾಂಧೀಜಿಯನ್ನು ತಾತ್ವಿಕವಾಗಿ ಮೆಚ್ಚುತ್ತೇವೇ ವಿನಃ ಸಂವಹನದ ಕುರಿತಾದ ಅವರ ಎಚ್ಚರಿಕೆ, ಅವರು ಕಂಡುಕೊಳ್ಳುತ್ತಿದ್ದ ಸಂವಹನ ಸಾಧನಗಳು ನಮ್ಮನ್ನು ಅಷ್ಟಾಗಿ ಪ್ರಭಾವಿಸಿದಂತಿಲ್ಲ. ರಾಜಕೀಯದಲ್ಲಿ ಆಸಕ್ತಿಯಿರುವವರೆಲ್ಲರೂ ಸಂವಹನ ಸಾಧ್ಯತೆ ಮತ್ತು ಕ್ರಿಯೆಯ ಪರಿಣಾಮದ ಕುರಿತು ಅತೀವ ಜಾಗ್ರತರಾಗಿರುವುದು ಅತ್ಯನಿವಾರ್ಯ.

ಆವರಣದ ಸಂದರ್ಭದಲ್ಲಿ ಮತ್ತೊಮ್ಮೆ ಕನ್ನಡ ಸಾಂಸ್ಕೃತಿಕಲೋಕ ಅವಕಾಶವೊಂದನ್ನು ಕಳೆದುಕೊಂಡಿದೆ. ಮತ್ತೊಮ್ಮೆ ಇಂತಹ ಅವಕಾಶವನ್ನು ಹೆಚ್ಚು ಸೃಜನಶೀಲವಾಗಿ ಬಳಸಿಕೊಳ್ಳುವುದಕ್ಕೆ, ಹೊಸಭಾಷೆಯ ಅವಶ್ಯಕತೆಯಿದೆ. ಗ್ರಹಿಕೆ ಮತ್ತು ಅಭಿವ್ಯಕ್ತಿ ಎರಡನ್ನೂ ಒಂದು ಪ್ರಕ್ರಿಯೆಯಾಗಿ ನೋಡುತ್ತಾ, ಅದರಲ್ಲಿ ಸಮ-ಸ್ಥಿತಿಯನ್ನು ಸ್ಥಾಪಿಸಲು ಶ್ರಮಿಸಬೇಕಾದ ಅವಶ್ಯಕತೆ ಕಾಣಿಸುತ್ತಿದೆ. ಅದನ್ನು ಅಪೇಕ್ಷಿಸುವ ಸಾಂಸ್ಕೃತಿಕ ಹಕ್ಕನ್ನು ಮತ್ತೊಬ್ಬ ಪ್ರಜೆಯಾಗಿ ಪ್ರೀತಿಯಿಂದ ಪ್ರತಿಪಾದಿಸುತ್ತೇನೆ. ಆವರಣವನ್ನು ಟೀಕಿಸುವಾಗ ನಾವು ಈ ಹೊಸ ಭಾಷೆಯನ್ನು ಬಳಸಬೇಕಾಗಿರುವುದು ಇವತ್ತಿನ ಸಾಂಸ್ಕೃತಿಕ, ರಾಜಕೀಯ ತುರ್ತು ಅನ್ನಿಸುತ್ತಿದೆ.

Sunday, July 22, 2007

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ


ಈವರೆಗೆ 'ಮುಂಗಾರು ಮಳೆ' - ಎಂದರೆ ಅನೇಕರಿಗೆ ಅನೇಕ ರೀತಿಯಲ್ಲಿ ಭಾವವುಂಟಾಗುತ್ತಿತ್ತು. ರೈತರಿಗೆ ಕರುಣೆ ತೋರಬೇಕಾದ ದೈವ. ಪ್ರೇಮಿಗಳಿಗೆ ಪ್ರಾಯಶಃ ಸುಂದರ ಪರಿಸರದಲ್ಲಿ ಮೂಡಬಹುದಾದ ಕನಸುಗಳು. ಮುಂಬೈ ದ್ವೀಪದಲ್ಲಿ ಬದುಕುವ ಜನರಿಗೆ ದೈನಿಕವನ್ನು ಅಸ್ತವ್ಯಸ್ತಗೊಳಿಸಬಹುದಾದ ಭಯ - ಹೀಗೆ. ಆದರೆ ಕರ್ನಾಟಕದ ಜನತೆಗೆ ಈಗ ಮೊದಲೇ ಇದ್ದಿರಬಹುದಾದ ಅರ್ಥವೊಂದು ಹೊಸರೂಪದಲ್ಲಿ ಪರಿಷ್ಕೃತಗೊಂಡು ಮುಂದೆಬಂದಿದೆ. ಇನ್ನುಮುಂದೆ ಮುಂಗಾರು ಮಳೆಯೆಂದರೆ - ಬರಡಾಗುತ್ತಿದೆಯೇನೋ ಎನ್ನುವ ಭೂಮಿಯನ್ನು ಮತ್ತೆ ಚಿಗೊರೆಡೆಸುವಂತಹ, ಪರಂಪರೆಯೊಂದನ್ನು ಮುನ್ನಡೆಸುವಂತಹ ತಂಪಾದ ಹಿತಕರವಾದ ಪುಷ್ಪವೃಷ್ಟಿ. ೨೦ ವರ್ಷಗಳ ಹಿಂದಿನ ಸಿನೆಮಾ 'ಪ್ರೇಮಲೋಕ' ಜನತೆಯನ್ನು ತನ್ನತ್ತ ಸೆಳೆದುಕೊಂಡಂತಹ ಇತಿಹಾಸವನ್ನು ಇದು ಮರುನಿರ್ಮಿಸಿದೆ. ಮಿಕ್ಕೆಲ್ಲೆಡೆ ಮೃದುಭಾವನೆ ಮಾತ್ರ ಸಂಕೇತಿಸುವ ಈ ಸಿನೆಮಾ ಬಾಕ್ಸಾಫೀಸಿನಲ್ಲಿ ಮಾತ್ರ ಎಲ್ಲಾ ದಾಖಲೆಗಳನ್ನೂ ಮುರಿದು ಆರ್ಭಟಿಸಿದೆ. ೮-ರಿಂದ ೮೦-ರವೆರೆಗಿನ ಜನರೆಲ್ಲರಿಗೂ ಇಷ್ಟವಾಗುವಂತಹದ್ದೇನನ್ನೋ ತನ್ನೊಡಲಲ್ಲಿಟ್ಟುಕೊಂಡಿದೆ. ಕನ್ನಡಿಗರ ಒಂದು ವಿಶಿಷ್ಟ ದಾಹವನ್ನು ತಣಿಸಿದೆ. ನಗರಪ್ರದೇಶದ ಕನ್ನಡಿಗರ ಕೀಳರಿಮೆ ಕಳೆದಿದೆ. ಒತ್ತಾಯಕ್ಕೆ ಮಣಿಯುವುದು ಇಷ್ಟವಿಲ್ಲದೆ, ಕನ್ನಡ ಸಂಸ್ಕೃತಿಯ ಜೊತೆ ತಮಗೆ ಸಹಜವಾಗಿ ಸಾಧ್ಯವಾಗುವ ಪ್ರವೇಶವೊಂದಿಲ್ಲದೇ ಕಷ್ಟಪಡುತ್ತಿದ್ದ, ಕನ್ನಡವನ್ನು ಪ್ರೀತಿಸುವುದಕ್ಕೆ ಕಾರಣವನ್ನು ಕಾಯುತ್ತಿದ್ದ ಕನ್ನಡೇತರರಿಗೆ ದಿಢೀರನೆ ತೆರೆದ ಬಾಗಿಲಾಗಿದೆ. ಈ ಸಿನೆಮಾದ ಹೆಸರು 'ಮುಂಗಾರು ಮಳೆ'-ಯಾಗಿರುವುದು ಅರ್ಥಗರ್ಭಿತವಾಗಿದೆ. ಈ ಸದ್ಯಕ್ಕೆ ನಮಗೆ ಇನ್ನೂ ಅನ್ನಿಸಿರಲಾರದ ಐತಿಹಾಸಿಕ ಮಹತ್ವವೂ ಈ ಸಿನೆಮಾಕ್ಕೆ ಇನ್ನೊಂದೈದು ವರ್ಷಗಳಲ್ಲಿ ಪ್ರಾಪ್ತವಾಗಲಿದೆ.

ಸಿನೆಮಾದ ಈ ಬಗೆಯ ಯಶಸ್ಸಿಗೆ ಕಾರಣವಾದರೂ ಏನು ಎನ್ನುವ ಪ್ರಶ್ನೆಯನ್ನು ಕನ್ನಡಚಿತ್ರಪ್ರೇಮಿ ಯೋಚಿಸುವುದಕ್ಕೆ ತೊಡಗುವುದಿಲ್ಲ. ಯಶಸ್ವೀ ಸಿನೆಮಾವೊಂದರ ಮಹತ್ವವನ್ನು ಬರಹದಲ್ಲಿ ಮುಖ್ಯವಾಗಿ ಶೋಧಿಸಬೇಕು ಎನ್ನುವುದು ನಮಲ್ಲಿ ಅಷ್ಟಾಗಿ ಇಲ್ಲದ ಸಂಪ್ರದಾಯ. ಕೆಲವೊಮ್ಮೆ 'ಹಲೋ ಯಮ'-ದಂತಹ ಚಿತ್ರಗಳು ಯಶಸ್ವಿಯಾಗಿಬಿಡುತ್ತವೆ ಎನ್ನುವ ಕಾರಣದಿಂದಲೂ ಈ ಬಗೆಯ ತಾತ್ಸಾರವಿರುತ್ತದೆ. ಯಶಸ್ವಿಯಾಗದ ಉತ್ತಮ ಚಿತ್ರಗಳ ಬಗ್ಗೆ ನಮಗೆ ಹೆಚ್ಚು ವಿಶ್ಲೇಷಿಸಬೇಕೆನ್ನಿಸುತ್ತದೆ. ಉದಾಹರಣೆಗೆ, ಯೋಗರಾಜಭಟ್ಟರ 'ಮಣಿ' ಚಿತ್ರ.

ಆದರೆ 'ಮುಂಗಾರು ಮಳೆ' ಚಿತ್ರದಲ್ಲಿ ನನಗೆ ಮುಖ್ಯವೆಂದು ಕಂಡತಹ ಬಹಳ ಅಂಶಗಳಿವೆ. ಯಶಸ್ಸಿಗೆ ಪೂರಕವಾದ ಚಲನಚಿತ್ರೇತರ ಅಂಶಗಳಿವೆ. ಚಲನಚಿತ್ರದ ಯಶಸ್ಸಿಗೆ ಮುಖ್ಯವಾಗಿಲ್ಲದೆಯೂ ಸಾಂಸ್ಕೃತಿಕ ಕಾರಣಕ್ಕೆ ಮುಖ್ಯವಾದ ಮತ್ತಷ್ಟು ಅಂಶಗಳಿವೆ. ಈ ಲೇಖನ ಅದನ್ನು ಪಟ್ಟಿ ಮಾಡುವುದಕ್ಕಷ್ಟೇ ಮೀಸಲು.

೧. ಮೊದಲಿಗೆ, ಒಂದಷ್ಟು ಸರಳವಾದ ವಿಷಯಗಳು. ಚಿತ್ರ ಅಸಂಗತವಾದ ಸನ್ನಿವೇಶವೊಂದನ್ನು ಯಾವುದೇ ನೈತಿಕತೆಯ ಭಾರವನ್ನು ಹೇರಿಕೊಳ್ಳದೇ, ವೀಕ್ಷಕನ ಮೇಲೂ ಹಾಏಅದೇ ಪ್ರಸ್ತುತಪಡಿಸುತ್ತದೆ. ಚಲನಚಿತ್ರಕ್ಕಾಗಿ ದುಡಿದಿರಬಹುದಾದ ಯಾವುದೇ ತಾಂತ್ರಿಕತೆ ತನ್ನನ್ನು ತಾನೇ ವಿಜೃಂಭಿಸಿಕೊಳ್ಳಲೆತ್ನಿಸದೇ ಚಿತ್ರನಿರ್ಮಿತಿಯಲ್ಲಿ ಸೃಜನಶೀಲವಾಗಿ ತೊಡಗಿಕೊಂಡು, ತೆರೆಯ ಮೇಲೆ ಹೊಂದಿಕೊಂಡು ತಮ್ಮ ಪಾಲಿನ ಕೆಲಸವನ್ನಷ್ಟೇ ಮಾಡಿದೆ. ಹೀಗಿದ್ದೂ ಚಿತ್ರದ ಯಾವುದೇ ತಾಂತ್ರಿಕ ಅಂಶ ಕಡಿಮೆಯಾಗಿದ್ದಲ್ಲಿ ಚಿತ್ರ ಸೊರಗುತ್ತಿತ್ತು ಎನ್ನಿಸುವಂತೆ ಬಳಕೆಯಾಗಿದೆ. ಇದೇ ಮಾತನ್ನು ನಮ್ಮ ಚಲನಚಿತ್ರ ಸಂಸ್ಕೃತಿಯ ಬಹುಮುಖ್ಯ ಅಂಶವಾದ ಸಂಗೀತ, ಹಾಡು, ನೃತ್ಯ, ಛಾಯಾಗ್ರಹಣಗಳಿಗೂ ಹೇಳಬಹುದಾಗಿದೆ. ಒಂದೆರಡು ದೃಶ್ಯಗಳನ್ನು ಪ್ರೇಕ್ಷಕ 'ಇದು ಹೀಗಿರುವುದು ಅಸಹಜ, ಹಾಗಿರಬೇಕಿತ್ತು' ಎಂದೋ ಮತ್ತೊಂದೋ ಟೀಕಿಸಬಹುದೇ ಹೊರತು, ಚಿತ್ರದಲ್ಲಿ ರೇಜಿಗೆ ಹುಟ್ಟಿಸುವ ಒಂದೇ ಒಂದು ದೃಶ್ಯವಿಲ್ಲ. ಎಲ್ಲಾ ವಯಸ್ಕರಿಗೂ ಇಷ್ಟವಾಗುವ ಏನಾದರೊಂದು ಈ ಚಿತ್ರದಲ್ಲಿದೆ. ಕಥೆಯಲ್ಲಿ ಎಲ್ಲಾ ಪಾತ್ರಗಳ ಕುರಿತೂ ಒಂದು ಸಹಜ ಕರುಣೆ, ಮಾನವೀಯ ಕಳಕಳಿಯಿದೆ. ಚಿತ್ರದ ಒಂದು ಅತಿಶಯವಾಗಬಹುದಾಗಿದ್ದ ಮೊಲ 'ದೇವದಾಸ'-ನನ್ನು ಒಂದು ಸಂಕೇತವಾಗಿಸುವುದರಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಮತ್ತೊಂದು ಅತಿಶಯವಾಗಬಹುದಾಗಿದ್ದ ನಾಯಕ-ನಾಯಕಿಯ ಪ್ರೇಮಪಕರಣವೇ ಚಿತ್ರದ ಪ್ರಮುಖ ಅಂಶವಾಗಿದ್ದು, ಒಟ್ಟು ಪ್ರಕರಣ ನಡೆಯುವ ಪರಿಸರ, ಪಾತ್ರಗಳನ್ನು ಚಿತ್ರಿಸಿರುವ ರೀತಿ - ಇವುಗಳ ಮೂಲಕ ಅತಿಶಯವೆಂದು ಪ್ರೇಕ್ಷಕನಿಗೆ ಅನ್ನಿಸದ ರೀತಿಯಲ್ಲಿ, ಅತಿಶಯವನ್ನೇ ವಿಶೇಷ ಅನುಭವವೆನ್ನುವಂತೆ, ಇದೊಂದು ಅಸಂಗತವಾದ ಪ್ರಕರಣವೆನ್ನುವಂತೆ ನಿರ್ದೇಶಕರು ಎಚ್ಚರವಹಿಸಿದ್ದಾರೆ.

೨. ಚಲನಚಿತ್ರೇತರ ಕಾರಣಗಳಲ್ಲಿ ಬಹುಮುಖ್ಯ ಅಂಶವೆಂದರೆ ನಾಯಕ ಗಣೇಶ್-ಗೆ ಈಗಾಗಲೇ ಕಾಮಿಡಿ ಟೈಮಿನಿಂದ ದಕ್ಕಿದ್ದ ಖ್ಯಾತಿ ಮತ್ತು 'ಚೆಲ್ಲಾಟ' ಚಿತ್ರದಲ್ಲಿ ಗಣೇಶ್ ನಾಯಕನಾಗಬಹುದಾದ ಸಾಧ್ಯತೆಯನ್ನು ಮನಗಂಡಿದ್ದ ಕನ್ನಡ ಪ್ರೇಕ್ಷಕ. ಸಾಮಾನ್ಯವಾಗಿ ಚಲನಚಿತ್ರ ತಾರೆಯರ ಜೊತೆಗಿನ ಫೋನಿನ್ ಕಾರ್ಯಕ್ರಮಗಳಲ್ಲಿ ತಾರೆಯರ ಜೊತೆಗೆ ಮಾತನಾಡುವಾಗ ಜನರು ಅತಿಭಾವುಕತೆಯಲ್ಲಿರುತ್ತಾರೆ. ಆದರೆ ಕಾಮಿಡಿ ಟೈಮಿನಲ್ಲಿ ಜನರು ಗಣೇಶ್-ರನ್ನು 'ನೀವು ನಮ್ಮ ಮನೆಯಲ್ಲಿದ್ದಿದ್ದರೆ ಚೆನ್ನಿತ್ತು' ಎನ್ನುವ ಭಾವದಲ್ಲಿ ಮಾತನಾಡಿಸುತ್ತಾರೆ. ಇದರಿಂದ ಗಣೇಶರ ಚಿತ್ರಗಳನ್ನು ನೋಡಲೇಬೇಕಾದ ತುರ್ತಿರುವ, ಗಣೇಶರನ್ನು ಆರಾಧ್ಯ ದೈವವಾಗಿ ಕಾಣಬೇಕಾದ ಅನಿವಾರ್ಯತೆಯಿಲ್ಲದ, ಹೊಸಪ್ರೇಕ್ಷಕವರ್ಗವೊಂದು ಸೃಷ್ಟಿಗೊಂಡಿದೆಯೇನೋ. 'ಮುಂಗಾರು ಮಳೆ'-ಯ ನಂತರ ಗಣೇಶ್ ಅನೇಕರಿಗೆ ಆರಾಧ್ಯ-ದೈವವಾಗಿರಬಹುದು. ಹುಡುಗಿಯರು ಮದುವೆಯಾಗು ಎಂದು ಕಾಟಕೊಡುತ್ತಿರಬಹುದು. ಆದರೆ ಅಂತಹ ಅತಿರೇಕಗಳಿಲ್ಲದ, ಗಣೇಶರ ಮನುಷ್ಯಸಹಜ ಹುಡುಗಾಟಗಳಿಂದಲೇ ಅವರನ್ನು ಪ್ರೀತಿಸುವ ಮನೆಮಂದಿಯಿರುವ ಒಂದು ಪ್ರೇಕ್ಷಕ ವರ್ಗವಿದೆ ಎಂದು ನನ್ನ ಅನಿಸಿಕೆ. ಇದು ಹೀಗೇ ಉಳಿಯುತ್ತದೆಯೋ ಅಥವಾ ಕಳೆದ ಐವತ್ತು ವರ್ಷಗಳಲ್ಲಿ ನಾವು ಕಂಡಿರುವ ಸೂಪರ್-ಸ್ಟಾರ್ ಸಂಸ್ಕೃತಿಯಲ್ಲಿ ಕೊಚ್ಚಿಕೊಂಡು ಹೋಗುವುದೋ ಕಾದು ನೋಡಬೇಕಿದೆ.

೩. ಮತ್ತೊಂದು ಚಲನಚಿತ್ರೇತರ ಕಾರಣವೆಂದರೆ ಹಸಿದು ಬಸವಳಿದಿದ್ದ ಕನ್ನಡ ಪ್ರೇಕ್ಷಕ. ಹಾಗೆಂದು ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬಂದೇ ಇಲ್ಲವೆಂದು ನಾನು ನಂಬಿಲ್ಲ. ಎಲ್ಲಾ ಭಾಷೆಗಳಲ್ಲಿ ಹೇಗೋ ಹಾಗೆ ವರ್ಷಕ್ಕೆ ಒಳ್ಳೆಯದು ಎನ್ನಿಸುವ ೮-೧೦ ಚಿತ್ರಗಳಿದ್ದೇ ಇದ್ದಾವೆ. ಆದರೆ, ಬಹುತೇಕರಿಗೆ ಇಷ್ಟವಾಗುವ ಚಿತ್ರವೊಂದು ಬಂದಿರಲಿಲ್ಲ. ಕನ್ನಡೇತರರು ಭಾಗಿಯಾಗಬಹುದಾದಂತಹ ಚಿತ್ರವೊಂದಿರಲಿಲ್ಲ. ಒಂದು ಕಮರ್ಷಿಯಲ್ ಚಿತ್ರದ ಕಾರಣಕ್ಕೆ ಕನ್ನಡೇತರರ ಮುಂದೆ ತಲೆಯೆತ್ತು ನಿಲ್ಲಬಹುದು ಎಂದು ಇಂಗ್ಲೀಷ್ ಮೀಡಿಯಮ್ಮಿನಲ್ಲಿ ಓದಿ ವರ್ಷಗಳ ನಂತರ ಕನ್ನಡ ಪ್ರಜ್ಞೆಯ ಅವಶ್ಯಕತೆಯನ್ನು ಅನುಭವಿಸಿ, ಅವಕಾಶವಿಲ್ಲದೇ ನಾಚಿಕೆಯಿಂದ ತಲೆತಗ್ಗಿಸಿದ್ದ, ಕನ್ನಡ ಸಂಸ್ಕೃತಿಯ ಜೊತೆ ಗಟ್ಟಿಸಂಬಂಧ ಕಳೆದುಕೊಂಡಿದ್ದ ಬೆಂಗಳೂರಿನ ಕನ್ನಡಿಗನಿಗೆ ಮುಂಗಾರು ಮಳೆ ಈ ಎಲ್ಲಾ ಕಾರಣಕ್ಕೆ ವರವಾಗಿ ಪರಿಣಮಿಸಿದೆ. ಅವರಿಗೆ ಕನ್ನಡಕ್ಕೆ ಒಂದು ಪ್ರವೇಶ ದೊರಕಿಸಿದೆ. ಏಕಕಾಲದಲ್ಲಿ ಕನ್ನಡೇತರರು, ಕನ್ನಡಿಗರು ಮಾತನಾಡಬಹುದಾದ ಕನ್ನಡದ ವಿಷಯವೊಂದೆಂದರೆ 'ಮುಂಗಾರು ಮಳೆ'. ಆದ್ದರಿಂದಲೇ ಇದು ಪಿವಿಆರ್-ನಲ್ಲಿ ಇನ್ನೂ ನಾಲ್ಕು ಆಟಗಳನ್ನು ಕಾಣುತ್ತಿದೆ. ಹೀಗೆ ಬೆಂಗಳೂರಿನ ಕನ್ನಡಿಗನಿಗೇ ಕನ್ನಡಕ್ಕೆ ದೊರೆತಿರುವ ಈ ಪ್ರವೇಶ ಸಾಂಸ್ಕೃತಿಕವಾಗಿಯೂ ಶಕ್ತವಾಗಿದ್ದು ಅದರ ಕೆಲವು ಅಂಶಗಳನ್ನು ನಂತರ ಪ್ರಸ್ತಾಪಿಸುತ್ತೇನೆ.

೪. ಕನ್ನಡಸಂಸ್ಕೃತಿಯಲ್ಲಿ ಸ್ತ್ರೀಗುಣ, ಮಾತೃತ್ವದ ಗುಣ ಪ್ರಮುಖವಾದ ಅಂಶ. ಆದ್ದರಿಂದಲೇ ಇಲ್ಲಿ ಮೈಸೂರು ಅರಸರಂಥವರಾದರು. ಕನ್ನಡ ಚಲನಚಿತ್ರವಷ್ಟೇ ಅಲ್ಲದೇ ಕನ್ನಡಕ್ಕೇ ಬಹುಮುಖ್ಯ ನಾಯಕರಾದ ಡಾ ರಾಜ್‍ಕುಮಾರ್-ರಲ್ಲಿ ಆ ಗುಣವಿತ್ತು. ನಮ್ಮಲ್ಲಿ ಹೆಚ್ಚುಹೆಚ್ಚು ಪ್ರೇಕ್ಷಕವರ್ಗವನ್ನು ಪಡೆದ ಸಿನೆನಾಯಕರೆಲ್ಲರಲ್ಲೂ ಈ ಅಶವಿದೆ. ವಿಷ್ಣುವರ್ಧನ್, ಅಂಬರೀಶ್ ಕಾದಂಬರಿ ಆಧಾರಿತ ಸಿನೆಮಾಗಳಲ್ಲಿ ನಾಯಕರಾದದ್ದು ಇದೇ ಪ್ರಕ್ರಿಯೆಯ ಮುಖ್ಯ ಅಂಶ. 'ನಾಗರಹಾವು'-ನಂತಹ ಸಿನೆಮಾದಲ್ಲಿ ರಾಮಾಚಾರಿಯಲ್ಲಿ ಸ್ತ್ರೀಗುಣವಿದೆ. ೮೦-ರವರೆಗೆ ಹೀಗಿದ್ದ ಚಿತ್ರರಂಗ ನಂತರ ಬದಲಾಗಿ ಮತ್ತೊಂದೆಡೆ ಸುದೀಪ್, ದರ್ಶನ್, ಉಪೇಂದ್ರರನ್ನು ಕಂಡರೂ ಅವರೆಲ್ಲರಿಗೂ ಒಂದು ಸೀಮಿತವಾದ ಪ್ರೇಕ್ಷಕವರ್ಗವಿದ್ದು ಈ ಸುಳಿಯಿಂದ ಹೊರಬರಲು ಅವರಿಗೆ ಸಾಧ್ಯವಾಗಿಲ್ಲ. ಪುಣ್ಯಕ್ಕೆ ಗಣೇಶ್-ರಲ್ಲಿ ಈ ಸ್ತ್ರೀಗುಣವಿರುವುದಷ್ಟೇ ಅಲ್ಲದೆ ಆ ಸುಳಿಯಲ್ಲಿ ಅವರು ಸಿಕ್ಕಿಬಿದ್ದಿಲ್ಲ. ಮುಂಗಾರುಮಳೆ ಸಿನೆಮಾದ ನಾಯಕನ ಬಗ್ಗೆಯೂ ಮಾತನ್ನು ಹೇಳಬಹುದಾಗಿದೆ. ಅದಕ್ಕೆ ಅತ್ಯುತ್ತಮ ನಿದರ್ಶನವೆಂದು ಚಿತ್ರದಲ್ಲೇ ಇದೆ. ಚಿತ್ರದ ಮೊದಲಲ್ಲಿ ನಾಯಕನಿಗೂ ನಾಯಕಿಯನ್ನು ಹುಚ್ಚನಂತೆ ಪ್ರೇಮಿಸುತ್ತಿರುವ ಮತ್ತೊಬ್ಬನಿಗೂ ಹೊಡೆದಾಟವಾಗುತ್ತದೆ. ನಾಯಕ ಗೆಲ್ಲುತ್ತಾನೆ. ಚಿತ್ರದ ಕಡೆಯಲ್ಲಿ ನಾಯಕಿಯನ್ನು ಕಳೆದುಕೊಂಡಿರುವ ನಾಯಕನಿಗೂ, ಅವಳನ್ನು ಇನ್ನೂ ಪಡೆಯಲು ಯತ್ನಿಸುತ್ತಿರುವ ಅದೇ ಹುಚ್ಚುಪ್ರೇಮಿಗೂ ಮತ್ತೆ ಹೊಡೆದಾಟವಾಗುತ್ತದೆ. ಆದರೆ, ಈ ಬಾರಿ ನಾಯಕ ಅವನನ್ನು ಸೋಲಿಸಿದರೂ ಅವನ ಮನಸ್ಥಿತಿ ತನಗೆ ಅರ್ಥವಾಗುತ್ತದೆ ಎಂಬಂತೆ ಆರ್ದ್ರತೆಯಿಂದ ಮಾತನಾಡುತ್ತಾನೆ. ಈ ಬಗೆಯ ಆಸ್ಥೆಯನ್ನು ಯಾರಿಂದಲೂ ಕಂಡಿರದ ಹುಚ್ಚುಪ್ರೇಮಿ ತೀವ್ರವಾಗಿ ಅಳಲು ತೊಡಗುತ್ತಾ, ಬದಲಾಗಬಹುದಾದ ಮನುಷ್ಯನಂತೆ ಕಾಣುತ್ತಾನೆ. ಇದು ನನಗೆ ಕನ್ನಡ ಸಂಸ್ಕೃತಿ, ಪರಂಪರೆಯ ಜೊತೆಗೆ ಹೊಸದೊಂದು ಸಾತತ್ಯವನ್ನು ಗಳಿಸುವತ್ತ ಒಂದು ಹೆಜ್ಜೆಯಾಗಿ ಕಾಣುತ್ತಿದೆ. (ಸೂರಿಯವರ 'ದುನಿಯಾ'-ದಲ್ಲಿ ನಾಯಕನಿಗೆ ಇದೇ ಬಗೆಯ ಸ್ತ್ರೀಗುಣ, ಮಾತೃತ್ವದ ಗುಣವಿರುವುದರಿಂದಲೇ ಅದು ಉಪೇಂದ್ರ, ದರ್ಶನ್, ಸುದೀಪರ ಚಲನಚಿತ್ರಗಳಿಗಿಂತ ಭಿನ್ನವಾಗಿದೆ. ಇದು ಎಲ್ಲರೂ ನೋಡಬೇಕಾದ, ನನಗಂತೂ ಬರೆದು ಶೋಧಿಸಬೇಕಿರುವ ಸಿನೆಮಾ). ತೀವ್ರವಾದವನ್ನು ಎದುರಾಗಬೇಕಾದ ಬಗೆಯ ಬಗ್ಗೆಯೂ, ಅಂತಹ ಅವಕಾಶ ಸೃಷ್ಟಿಯಾಗಬಹುದಾದ ಸಾಧ್ಯತೆಯ ಬಗ್ಗೆಯೂ ಇದೊಂದು ಸಂಕೇತದಂತೆ ನನಗೆ ಕಾಣುತ್ತಿದೆ.

೫. ಹೃತಿಕ್ ರೋಶನ್ ನರ್ತಿಸಿದರೆ ಅದು ಆಕರ್ಷಕವಾಗಿರುವುದು ನಿಜ. ಆದರೆ ಹೃತಿಕ್-ನ ನೃತ್ಯ ನಮ್ಮ ಸಂಪೂರ್ಣ ಗಮನವನ್ನು ಹಠ ಹಿಡಿದು ದಕ್ಕಿಸಿಕೊಳ್ಳುತ್ತದೆ. ಹೃತಿಕ್-ನ ಪರಿಶ್ರಮ ಎದ್ದು ಕಾಣುತ್ತದೆ. ಅದರ ನೋಡುಗನಿಗೂ ಒಂದು ಶ್ರಮವಿದೆ. ಆದರೆ ಗಣೇಶ್ ಒಂದು ಹೊಸ ನೃತ್ಯ ಶೈಲಿಯನ್ನು ಆರಂಭಿಸಿದ್ದಾರೆ, ಇದರ ಶ್ರೇಯಸ್ಸು ನೃತ್ಯ ನಿರ್ದೇಶಕರಿಗೂ ಇರಲಿ. ಇದು ಮನಸ್ಸಿಗೆ ಮುದ ನೀಡುವುದಲ್ಲದೇ, ಇದು ನಮ್ಮ ಮನೆಯಲ್ಲಾಗಬಹುದು, ನಾವೂ ಸಹ ಹೀಗೆ ನರ್ತಿಸಬಹುದು ಎನ್ನುವ ಭ್ರಮೆಯನ್ನುಂಟುಮಾಡುತ್ತದೆ, ನಮ್ಮನ್ನು ಒಳಗೊಳ್ಳುತ್ತದೆ. ಸಹಜ ನಡಿಗೆ, ಆಟದ ಗುಣ ಈ ನರ್ತನದಲ್ಲಿದೆ, ಮತ್ತು ಈ ಕಾಲದ ಹುಡುಗರಿಗೆ ಇದು ನಮ್ಮದೇ ಕಾಲದ್ದು ಎಂದೂ ಅನ್ನಿಸುತ್ತದೆ.

೬. ಇದಕ್ಕೆ ಸಂಗೀತ ನೀಡಿರುವ ಮನೋಮೂರ್ತಿ ಕನ್ನಡದವರೇ ಆಗಿದ್ದು ದಶಕಗಳಿಂದ ಅಮೇರಿಕದಲ್ಲಿರುವವರು. ಇವರ ಬಳಿಯಲ್ಲಿ ಇದ್ದ ನೂರಾರು ಟ್ಯೂನ್‍ಗಳಲ್ಲಿ ಭಟ್ಟರು ಈ ಕೆಲವನ್ನು ಆಯ್ದಿರುವರೆಂದರೆ ಭಟ್ಟರು ನಿರ್ದೇಶಕರೇ ಸರಿ. ಕರ್ನಾಟಕ-ಅಮೇರಿಕ ಹಿನ್ನೆಲೆಯುಳ್ಳ ಚಿತ್ರಗಳಿಗೆ ಸಂಗೀತ ದಿಗ್ದರ್ಶಿಸಿ ಆಧುನಿಕ ಹಾಡುಗಳನ್ನೂ, ಪರಂಪರೆಯನ್ನು ನೆನೆಪಿಸುವ ಮೆಲಡಿಯನ್ನೂ ಸರಿಸಮನಾಗಿ ಕೊಟ್ಟು ಸೈ ಎನ್ನಿಸಿರುವ ಮನೋಮೂರ್ತಿ - ಇಲ್ಲಿ ದುಪ್ಪಟ್ಟು ಯಶಸ್ಸು ಗಳಿಸಿರುವುದು ಸಂಗೀತವನ್ನು ಚಿತ್ರಕ್ಕೆ ಮತ್ತು ಪಾತ್ರಗಳಿಗೆ ಸಾವಯವವೆಂಬಂತೆ ಸಂಯೋಜಿಸಿರುವುದು (ಉದಾಹರಣೆಗೆ, 'ಒಂದೇ ಒಂದು ಸಾರಿ...' ಹಾಡಿನ ಆರಂಭ ನಾಯಕನ ಆ ಕ್ಷಣದ ಮನಸ್ಥಿತಿ ಮತ್ತು ಹೊಸ ಅನುಭವದಿಂದ ಅವನೇರುವ ಮತ್ತೊಂದು ಸ್ಥಿತಿಯನ್ನು ಪರಿಣಾಮಕಾರಿಯಾಗಿ ಹಿಡಿದಿದೆ). ಕನ್ನಡ ಸಂಸ್ಕೃತಿ ಎಂದಿಗೂ ಅನ್ಯಸಂಸ್ಕೃತಿಗಳ ಜೊತೆಗಿನ ಅನುಸಂಧಾನಕ್ಕೆ ತೆರೆದುಕೊಂಡೇ, ಅವಕಾಶ ಸೃಷ್ಟಿಸುತ್ತಲೇ ಇರುವಂಥದ್ದು. ನಮ್ಮೀ ಕನ್ನಡದ ಸಂಗೀತ ನಿರ್ದೇಶಕ ಚಿತ್ರದ ಬಹುತೇಕ ಹಾಡುಗಳಿಗೆ ಪರಭಾಷಾ ಗಾಯಕರಾದ ಸೋನು ನಿಗಂ, ಉದಿತ್ ನಾರಾಯಣ್-ರಿಂದ ಹಾಡಿಸಿ ಅದು ಸಕಾರಣವೆನ್ನುವುದನ್ನು ಸಾಬೀತು ಮಾಡಿದ್ದಾರೆ. ಇವನ್ನು ಕನ್ನಡ ಗಾಯಕರು ರಾಜೇಶ್ ಕೃಷ್ಣನ್ ಮೊದಲಾದವರು ಹಾಡಿದ್ದರೂ ಚೆನ್ನಾಗಿಯೇ ಮೂಡಿಬರುತ್ತಿತ್ತು ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಆದರೆ, ಕನ್ನಡಕ್ಕೆ ಸಂಬಂಧವಿಲ್ಲದಂತಿರುವ ಪಂಜಾಬಿ ಭಾಂಗ್ರಾ ನೃತ್ಯದಿಂದ ಪ್ರೇರಿತವಾದ ಹಾಡೊಂದನ್ನು ಪರಭಾಷಾ ಗಾಯಕರಿಂದ ಸಮರ್ಥವಾಗಿ ಹಾಡಲಾಗದೇ ಕನ್ನಡದ ಗಾಯಕನೊಬ್ಬನಿಂದಲೇ ಹಾಡಿಸಬೇಕಾದ್ದು ನನಗೆ ಮಹತ್ತರವಾಗಿ ಕಾಣಿಸುತ್ತಿದೆ. ಮೊದಲಿಗೆ ಮುಖ್ಯವಾದ ವಿಷಯ ಕನ್ನಡ ಸಂಸ್ಕೃತಿ ಹೀಗೆ ಮತ್ತೊಂದು ಸಂಸ್ಕೃತಿಯ ಜೀವಕುಡಿಯನ್ನು ತನ್ನದಾಗಿಸಿಕೊಳ್ಳಲು ನಿರ್ಮಿಸಿಕೊಳ್ಳುವ ಅವಕಾಶ ಬಗೆ. ಎರಡನೆಯದು, ತನ್ನದಾಗಿಸಿಕೊಳ್ಳುವಾಗಿನ ರೂಪಾಂತರದ ರೀತಿ. ಅಪ್ಪಟ ಕನ್ನಡದ ಆಟ-ಹಾಡು-ನೃತ್ಯದಂತೆ ಭಾಸಗೊಳಿಸುತ್ತಾ, ನಗರ-ಹಳ್ಳಿಗಳೆನ್ನದೇ ಎಲ್ಲ ಬಗೆಯ, ಎಲ್ಲಾ ವಯಸ್ಕರನ್ನೂ ಆಕರ್ಷಿಸಿರುವ ಈ ಹಾಡು. ಹಳ್ಳಿಯ ಸರಳತೆ, ನಗರದ ಶೈಲಿ ಎರಡನ್ನೂ ಈ ಹಾಡಿನ ನೃತ್ಯದಲ್ಲಿ ಕಾಣಬಹುದಾಗಿದೆ. ಈ ಎಲ್ಲವೂ ಕನ್ನಡ ಮಾತಿನಿಂದ ಹೊಸಸ್ಪರ್ಷ ಪಡೆದಿರುವ ಕಾರಣ ಅದು ಪರಭಾಷಾಗಾಯಕರಿಂದ ಸಾಧ್ಯವಾಗದೇ ಕನ್ನಡದ ಗಾಯಕನಿಂದ ಮಾತ್ರ ಸಾಧ್ಯವಾದದ್ದು ನನಗೆ ಹೊಸದೊಂದು ಪ್ರಕ್ರಿಯೆಯ ಸಂಕೇತವಾಗಿ ಕಾಣಿಸುತ್ತಿದೆ.

೭. ಈ ಸಿನೆಮಾದ ಎಲ್ಲಾ ಹಾಡುಗಳೂ ಯಶಸ್ವಿಯಾಗಿವೆ. ಆದರೆ ಈ ಯಶಸ್ಸಿನ ಉತ್ಕರ್ಷದಲ್ಲಿ ಮುಳುಗಿಹೋಗಿರುವ ಮತ್ತೊಂದು ಯಶಸ್ಸು ಸಿನೆಮಾದ 'ಒಂದೇ ಒಂದು ಸಾರಿ ಕಣ್ಮುಂದೆ ಬಾರೆ' ಹಾಡನಲ್ಲಿದೆ. ಅದರಲ್ಲಿ ಒಂದೇ ಒಂದು ಆಂಗ್ಲ ಶಬ್ದವಿಲ್ಲ. 'ಇಹೆನು' ಎನ್ನುವಂತಹ ಅಪ್ಪಟ ಹಳೆಯ ಮಾತುಗಳೂ ಇವೆ. ಆದರೂ ಅದು ಒಂದು Techy Song ಎನ್ನಿಸಿಕೊಂಡಿದೆ. ಚಿತ್ರದ ನಾಯಕ ತಂತ್ರಜ್ಞಾನದ ತೀವ್ರತೆಯ ಕಾಲದಲ್ಲಿ ಹುಟ್ಟಿರುವ ಮನುಷ್ಯ. ಯಾವ ಜವಾವ್ದಾರಿಯೂ ಇಲ್ಲದ, ಸಂಪ್ರದಾಯದ ಗಂಧ-ಗಾಳಿಯಿಲ್ಲದ, ಕನ್ನಡ ಮಾತನಾಡುತ್ತಿದ್ದರೂ ಅದರ ಕುರಿತು ಒಲವೇ ಇರದಿರಬಹುದಾದ ಒಬ್ಬ ವ್ಯಕ್ತಿಯಂತೆ ಇವನನ್ನು ಊಹಿಸಿಕೊಳ್ಳಬಹುದು. ಅಂತಹವನಲ್ಲಿ ವಯೋಸಹಜವಾದ ಆಕರ್ಷಣೆಯಿಂದ ಆಗುವ ಬದಲಾವಣೆಯನ್ನು ಈ ಹಾಡು ಕನ್ನಡದಲ್ಲಿ ಅದೆಷ್ಟು ಚೆನ್ನಾಗಿ ಹಿಡಿದಿಡುತ್ತದೆಯೆಂದರೆ ಆಶ್ಚರ್ಯವಾಗುತ್ತದೆ. ನನಗೆ ಈ ಹಾಡು ಇತ್ತೀಚಿನ ದಿನಗಳಲ್ಲಿ ಒಂದು ಮಹತ್ತರ ಸಾಧನೆಯೆನ್ನಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ - ಸಂಗೀತ ಮತ್ತು ಚಿತ್ರೀಕರಣ ಈ ಪದಗಳಿಗೆ ಈ ಹೊಸ ಮನುಷ್ಯನ, ಹೊಸ ಅಭಿವ್ಯಕ್ತಿಯನ್ನು ಹಿಡಿದಿಡುವ ಶಕ್ತಿಯನ್ನು ದಯಪಾಲಿಸುತ್ತಿದೆ. ಯಾವ ವ್ಯಕ್ತಿ ಕನ್ನಡವೆಂದರೆ ಮೂಗು ಮುರಿಯಬಲ್ಲವನಾಗಿರಬಹುದಾದ ಸಾಧ್ಯತೆಯಿದೆಯೋ, ಅದೇ ವ್ಯಕ್ತಿಯ ಬಹುವಿಶಿಷ್ಟವಾದ ಅಭಿವ್ಯಕ್ತಿ ಕನ್ನಡದಲ್ಲಿ ಆಗುವಂತೆ ಸಂಗೀತ ಮತ್ತು ಚಿತ್ರೀಕರಣ ಸಾಧ್ಯ ಮಾಡಿದೆ. ಅದೇ ಕಾರಣಕ್ಕೆ ಕನ್ನಡ-ಕನ್ನಡೇತರೆಲ್ಲರಿಗೂ ಈ ಹಾಡು (ಮತ್ತು ಸಿನೆಮಾ) ಇಷ್ಟವಾಗಿದೆ. ಡಾ ಅನಂತಮೂರ್ತಿಗಳು ಕನ್ನಡದ ವಿಶಿಷ್ಟ ಬಗೆಯ ಸಾತತ್ಯವನ್ನು ಕುರಿತು ಮಾತನಾಡುತ್ತಾ - ೧೨ ಶತಮಾನದ ವಚನಸಾಹಿತ್ಯವನ್ನು ಇಂದಿಗೂ ನಾವು ಈ ಕಾಲದ್ದೇ ಎನ್ನುವಂತೆ ಓದಬಹುದಾಗಿದೆ - ಎಂದಿದ್ದನ್ನು ನೆನೆಪಿಸಿಕೊಂಡು ನನಗೆ ಇದೂ ಸಹ ಅದೇ ಪ್ರಕ್ರಿಯೆಯ ಭಾಗವಾಗಿರಬಹುದೇ ಎನ್ನಿಸುತ್ತಿದೆ.

೮. ಈ ಚಿತ್ರದಲ್ಲಿ ನಾಯಕಿ ತನ್ನ ಮದುವೆಯನ್ನು ಮುರಿಯುವ ಹಂತಕ್ಕೆ ಬರುತ್ತಾಳೆ. ಆ ಕ್ಷಣದಲ್ಲಿ ಕೂಡಾ ಚಲನಚಿತ್ರಮಂದಿರದಲ್ಲಿ ಯಾರೂ ಸಹ ಅದರ ನೈತಿಕತೆಯನ್ನು ಪ್ರಶ್ನಿಸುವಂತಹ ಮಾತನ್ನಾಡಲಿಲ್ಲ. ನಂತರವೂ ನಾನು ನೋಡಿದ ಯಾರೂ ಆ ಪ್ರಶ್ನೆಯನ್ನೆತ್ತಲಿಲ್ಲ. ಇದರ ಅರ್ಥವೆಂದರೆ ನಿರ್ದೇಶಕರು ಪಾತ್ರದ ಸ್ಥಿತಿಯನ್ನು ನಮ್ಮ ಮುಂದೆ ಮನಮುಟ್ಟುವಂತೆ ನಿಲ್ಲಿಸುವಲ್ಲಿ ಯಶಸ್ವಿಯಾದರೆಂದು. ಬೇಲಿಯನ್ನು ದಾಟಿ ನಡೆಯುವ ಮನುಷ್ಯನನ್ನು ಕಟ್ಟಿಹಾಕುವುದು ಮನುಷ್ಯನ ಒಂದು ಸಹಜ ನಡವಳಿಕೆಯಾದರೆ ದಾಟಿ ಹೋಗುತ್ತಿರುವವನ ಸ್ಥಿತಿಯನ್ನು ತನ್ನಲ್ಲೇ ನೋಡಿಕೊಳ್ಳುವುದು ಸಾಧ್ಯವಾದಾಗಲೆಲ್ಲಾ ಮನುಷ್ಯ ನೈತಿಕತೆಯನ್ನು ಅಮಾನವೀಯವಾಗಿ ಮುಂದೆ ತರುವುದಿಲ್ಲ. ಆದರೆ, ಚಿತ್ರದಲ್ಲಿ ನಾಯಕಿಯನ್ನು ನಾಯಕ ಸ್ವತಃ ಹಿಮ್ಮೆಟ್ಟುವಂತೆ ಮಾಡುತ್ತಾನೆನ್ನುವುದು ನೈತಿಕತೆಯ ಪ್ರಶ್ನೆಯನ್ನು ಹಿನ್ನೆಲೆಗೆ ಸರಿಸಿರುವ ಸಾಧ್ಯತೆಯೂ ಇದೆ.
ಒಂದು ಸಂದರ್ಶನದಲ್ಲಿ ತೇಜಸ್ವಿ ಹೇಳಿದ್ದರು. ಒಂದು ಉತ್ತಮವಾದ ಕೃತಿಯನ್ನು ಕಲಾವಿದ ರಚಿಸಬಹುದು. ಆದರೆ ಶ್ರೇಷ್ಠವಾಗುವುದಕ್ಕೆ ಇತಿಹಾಸ, ವರ್ತಮಾನಗಳು ಕಾರಣವಾಗುತ್ತವೆ. ಪ್ರಾಯಶಃ ಮುಂಗಾರು ಮಳೆಯ ಕುರಿತು ಈ ಮಾತನ್ನಾಡಬಹುದು. ಕನ್ನಡಕ್ಕೊಬ್ಬ ಗೋಲ್ಡನ್ ಸ್ಟಾರ್-ನನ್ನು ಕೊಟ್ಟಿದೆ. ಕನ್ನಡ ಸಿನೆಮಾದ ಮಾರುಕಟ್ಟೆಯನ್ನು ವಿಸ್ತರಿಸಿದೆ. ನಾಯಕನ ಪರಿಕಲ್ಪನೆಯನ್ನು ಮತ್ತೆ ಕನ್ನಡಸಂಸ್ಕೃತಿಗೆ ಹತ್ತಿರವಾಗಿಸಿದೆ. ಪರಭಾಷಾ ಗಾಯಕರನ್ನು, ನಾಯಕಿಯನ್ನು ಕನ್ನಡದವರೆನ್ನುವಂತಹ ರೀತಿಯಲ್ಲಿ ಪ್ರಸ್ತುತಪಡಿಸಿದೆ. ಎಲ್ಲವೂ ಹೊಚ್ಚಹೊಸತೆನ್ನುವ ಅನುಭವವನ್ನು ನೀಡಿದೆ. ಯೋಗರಾಜ ಭಟ್ಟರಿಗೆ ಹೊಸ ಭವಿಷ್ಯವನ್ನೂ ನಿರ್ಮಿಸಿದೆ. ಜಯಂತ ಕಾಯ್ಕಿಣಿಯವರಿಗೆ ಕನ್ನಡ ಚಲನಚಿತ್ರದಲ್ಲಿ ಭದ್ರವಾಗಿ ತಳವೂರಬಹುದು ಎನ್ನುವ ಆತ್ಮವಿಶ್ವಾಸ ತಂದುಕೊಟ್ಟಿರಲೂಬಹುದು. ಸದಭಿರುಚಿ ಸಿನೆಮಾ ಮಾತ್ರ ಮಾಡುವ ಒತ್ತಡವನ್ನು ಗೊತ್ತಿಲ್ಲದೆಯೇ ತಲೆಯಮೇಲೆ ಹಾಕಿಕೊಂಡಿರುವ ಹೊಸ ನಿರ್ಮಾಪಕನನ್ನು ಕನ್ನಡಕ್ಕೆ ತಂದಿದೆ. ಅಂದುಕೊಂಡಂತೆಯೇ, ಮುಂಗಾರು ಮಳೆ ರಾಜ್ಯಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಇದನ್ನು 'ಮುಂಗಾರು ಮಳೆ'-ಯೆನ್ನದೇ ಮತ್ತೇನೆಂದು ಕರೆದಿದ್ದರೂ ಕಡಿಮೆಯಾಗುತ್ತಿತ್ತು. ಚಿತ್ರದ ಆತ್ಮಗೀತೆ ಹೀಗಿದೆ.

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ
ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಮಳೆಯ ಜಡಿಮಳೆಗೆ
ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ
ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ
ತಿಳಿಯದಾಗಿದೆ

ಈ ಹಾಡನ್ನು ಮುಂಗಾರು ಮಳೆ ಚಿತ್ರದ ಬಗ್ಗೆಯೂ ಹೇಳಬಹುದಲ್ಲವೆ?

Monday, April 09, 2007

ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೪

[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]

ಈ ಆತಂಕಗಳ ನಡುವೆಯೇ ನಾವು ಕೆಲ ವಾಸ್ತವಗಳನ್ನು ಒಪ್ಪಬೇಕಿದೆ - ಹಿಂದೂ-ಕನ್ನಡ -ಭಾರತೀಯ ಐಡೆಂಟಿಟಿಗಳ ಉದಯಕ್ಕೆ ಐತಿಹಾಸಿಕ ಅವಕಾಶ ರೂಪುಗೊಂಡದ್ದು, ಸಮಾಜ ಆ ಅವಕಾಶವನ್ನು ಮನಗಂಡದ್ದು, ಅವಶ್ಯಕತೆಯಾಗಿ ಗ್ರಹಿಸಿದ್ದು ಮತ್ತು ಈ ಪ್ರಕ್ರಿಯೆಯನ್ನು ಒಪ್ಪುವವರು, ಒಪ್ಪಲಾರದವರೂ, ತಟಸ್ಥರೂ ಎಲ್ಲರೂ ಇದರ ವಾಸ್ತವವನ್ನು ಗುರುತಿಸಿ ನಿಭಾಯಿಸಬೇಕಾದ ಅನಿವಾರ್ಯತೆಯಿರುವುದು. ಈ ಮೂರೂ ಐಡೆಂಟಿಟಿಗಳ ಕಲ್ಪಿತವಾದ ಇತ್ಯಾತ್ಮಕ ಸಾಧ್ಯತೆಗಳನ್ನು ಇನ್ನೂ ವಾಸ್ತವಗೊಳಿಸಲಾಗಿಲ್ಲವಾದ್ದರಿಂದ ಮತ್ತು ಆ ಸಾಧ್ಯತೆಗಳಿನ್ನೂ ಉಳಿದಿವೆಯಾದ್ದರಿಂದ - ಅವುಗಳಿನ್ನೂ ವಿಸರ್ಜನೆಗೊಳ್ಳದೇ ಅಸ್ತಿತ್ವದಲ್ಲಿವೆ. ಆ ಕಾರಣಕ್ಕೇ ಈ ಐಡೆಂಟಿಟಿಗಳು ಉಂಟುಮಾಡುವ ಅಪಾಯಗಳು ಅಷ್ಟು ಸುಲಭವಾಗಿ ಅರಿವಿಗೆ ಬರುವುದಿಲ್ಲ. ಈ ನೇತ್ಯಾತ್ಮಕ ಸಾಧ್ಯತೆಗಳನ್ನು ಬಳಸಿಕೊಳ್ಳುವವರಿಗೂ ಕೊನೆಯಿರುವುದಿಲ್ಲ. ಭಾರತೀಯ ಐಡೆಂಟಿಟಿ ಯಾವ ರೀತಿಯಲ್ಲಿ ಪ್ರಾದೇಶಿಕ ಐಡೆಂಟಿಟಿಗಳಿಗೆ ಅಪಾಯ ತಂದೊಡ್ಡಿದೆ ಎನ್ನುವುದನ್ನು ನಾವು ಅರಿತಷ್ಟು ಸರಿಯಾಗಿ ಹಿಂದೂ ಐಡೆಂಟಿಟಿಯಿಂದ ಉಂಟಾಗುವ ಅಪಾಯಗಳನ್ನು ಅರಿತಿಲ್ಲ. ಇದು ಸಮುದ್ರ ಮಥನದಂತೆ. ಅಮೃತಕ್ಕಾಗಿ ಮಥಿಸಿದರೂ ಮೊದಲು ವಿಷವೇ ಹುಟ್ಟುವುದು. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ವಿಷ ನುಂಗಬಲ್ಲ ವಿಷಕಂಠರಿದ್ದರು. ಇಂದು ಪರಿಸ್ಥಿತಿ ಹಾಗಿಲ್ಲ.

ಇಲ್ಲಿನ ಕಷ್ಟವೆಂದರೆ - ಹಿಂದೂ ಐಡೆಂಟಿಟಿಯನ್ನು ನಿರಾಕರಿಸುವುದು ಅತ್ಯಂತ ಅಪಾಯಕಾರಿಯಾದ ನಿಲುವಾಗುತ್ತದೆ. ಇದರಿಂದ ಹಿಂದೂ ಮೂಲಭೂತವಾದಿಗಳಿಗೆ ಬಲಬರುತ್ತದೆ. ಅದನ್ನು ಒಪ್ಪಿಕೊಳ್ಳುವುದೆಂದರೆ ಅಲ್ಪಸಂಖ್ಯಾತರಿಗಾಗುವ ಸಹಜವಾದ ಅಸ್ಥಿರ ಭಾವವನ್ನು ಎದುರಾಗಬೇಕಾಗುತ್ತದೆ. ಹಿಂದೂ ಐಡೆಂಟಿಟಿಯನ್ನು ಅತಿಯಾಗಿ ಮೈಮೇಲೆ ಆರೋಪಿಸಿಕೊಳ್ಳುವವರನ್ನು ಮಾತ್ರ ಗಮನಿಸಿ ತಲ್ಲಣಿಸುವವರು ವಾಲ್ಟರ್‌ ಬೆಂಜಮಿನ್ನನ ಪರಂಪರೆಗೆ ಸೇರಬಹುದು. ಮೌನವಾಗಿರುವವರನ್ನು ಗಮನಿಸುವವರು ಸ್ವಲ್ಪ ಹೆಚ್ಚು-ಕಡಿಮೆ ವ್ಯತ್ಯಾಸದಲ್ಲಿ ಬೇಂದ್ರೆ/ಅಡಿಗ ಪರಂಪರೆಗೆ ಸೇರಬಹುದು. ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ನಮ್ಮ ಹಿರಿಯರು ಇದನ್ನು ಚೆನ್ನಾಗಿ ನಿಭಾಯಿಸಿದ್ದರೇನೋ. ಈಗ ನಾವು ಹದಗೆಟ್ಟ ಪರಿಸ್ಥಿತಿಯಲ್ಲಿ ಇದನ್ನು ನಿಭಾಯಿಸಬೇಕಿದೆ. ಹಿಂದೂ ಐಡೆಂಟಿಟಿಯ ಬಗ್ಗೆ ತಲೆಕೆಡಿಸಿಕೊಳ್ಳುವವರಿಗಿಂತ ಸುಮ್ಮನಿದ್ದೂ ತಮ್ಮ ಮೌನದಲ್ಲಿ ಅರಿವಿಲ್ಲದಂತೆ ಅದರ ಇತ್ಯಾತ್ಮಕ ಸಾಧ್ಯತೆಗಳನ್ನು ಅನ್ವೇಷಿಸುತ್ತಿರುವವರಲ್ಲಿ ನಾವು ಹಿಂದೂ ಐಡೆಂಟಿಟಿಯ ಇತ್ಯಾತ್ಮಕ ಸಾಧ್ಯತೆಗಳನ್ನು ಹುಡುಕಬೇಕಿರುವುದು ಸರಿಯಾದ ಮತ್ತು ಅವಶ್ಯವಾದ ವಿಷಯವಾಗಿದೆ. ಈ ಇಕ್ಕಟ್ಟು ಡಾ ಅನಂತಮೂರ್ತಿಗಳ ಲೇಖನದಲ್ಲಿ ಧ್ವನಿತವಾಗಿದೆ. ಅಭಿಮಾನ, ಅವಶ್ಯಕತೆ, ಅಸ್ಥಿರಭಾವಗಳಲ್ಲಿ ಯಾವುದು ನಮ್ಮನ್ನು ಆವರಿಸುತ್ತದೆ ಮತ್ತು ಯಾವುದನ್ನು ನಾವು ಆಯುತ್ತೇವೆ ಎನ್ನುವುದು ಎಲ್ಲವನ್ನೂ ನಿರ್ಧರಿಸುತ್ತದೆ.

ಒಟ್ಟಿನಲ್ಲಿ ಅಮೃತದ ಗಳಿಕೆಗಾಗಿ ಅದೆಷ್ಟು ವಿಷವನ್ನು ನಾವು ತಯಾರಿಸಿ ಅನುಭವಿಸಬೇಕಾಗಿದೆಯೋ? ಈ ಅಮೃತದ ಸ್ವರೂಪ-ಸಾಧ್ಯತೆಗಳನ್ನು ಸಹ ನಾವು ಸ್ಪಷ್ಟವಾಗಿ ಸೃಷ್ಟಿಸಿಕೊಳ್ಳಲಾಗಿಲ್ಲ, ಅದು ಬದಲಾಗುತ್ತಲೇ ಇದೆ ಎನ್ನುವುದೂ ಸಹ ನಮಗೆ ಆತಂಕವನ್ನುಂಟುಮಾಡಬಹುದು.

***

ಇಷ್ಟೆಲ್ಲ ಪ್ರಜಾಪ್ರಭುತ್ವದೊಳಗೇ ನಡೆಯುತ್ತಿದೆ ಎನ್ನುವುದರಿಂದ ಆರ್ಟೆಗಾನ ಚಿಂತನೆ ಮುಖ್ಯವಾಗುತ್ತದೆ. ಹೀಗೆ ಪ್ರಜಾತಂತ್ರದ ಸವಲತ್ತುಗಳನ್ನೇ ಬಳಸಿಕೊಂಡು ಪ್ರಜಾತಂತ್ರವನ್ನೇ ನಾಶಮಾಡುವ ನಮ್ಮ ವಿನಾಶಕಾರಿ ಪ್ರವೃತ್ತಿಯ ಮೂಲದ ಕುರಿತಾದ ಆತಂಕಭರಿತ ಶೋಧ ಮುಖ್ಯವಾಗುತ್ತದೆ. ಮನುಷ್ಯನ ಸೃಜನಶೀಲತೆಯನ್ನು ಆದಷ್ಟೂ ಪೋಷಿಸಿ, ಮನುಷ್ಯನ ಸ್ವಾತಂತ್ರ್ಯವನ್ನು ಆದಷ್ಟೂ ನಾಶಮಾಡದೆ ಇರುವಂಥದ್ದು ಒಳ್ಳೆಯ ವ್ಯವಸ್ಥೆ. ಪ್ರಜಾಪ್ರಭುತ್ವ ಇದಕ್ಕೆ ಹೇಗೆ ಪೂರಕವಾಗಿದೆ, ಪ್ರಜಾಪ್ರಭುತ್ವದ ಮೂಲಕ ನಾವಿದನ್ನು ಹೇಗೆ ಸಾಧಿಸಬಯಸುತ್ತೇವೆ ಎನ್ನುವ ಪರಿಕಲ್ಪನೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಆದರೆ ನಮ್ಮ ಸೃಜನಶೀಲ ಅಭಿವ್ಯಕ್ತಿಯಲ್ಲೇ ಅದರ ಸೆಲೆಯನ್ನೂ ಬತ್ತಿಸುವ ಸಾಧ್ಯತೆ ಇದೆ. ಒಬ್ಬನ ಸೃಜನಶೀಲ ಅಭಿವ್ಯಕ್ತಿ ಮತ್ತೊಬ್ಬನ ಸ್ವಾತಂತ್ರ್ಯವನ್ನು ನಾಶಮಾಡಬಹುದು. ಈ ಅರಿವು-ಎಚ್ಚರಗಳಿಂದ ನಾವು ಮೇಲ್ನೋಟದ ಪ್ರಜಾಪ್ರಭುತ್ವ ರೀತ್ಯಾ ಸಮಾಜವನ್ನು ಅಧೋಗತಿಯಲ್ಲಿ ನಡೆಸಿಕೊಂಡು ಹೋಗದೇ, ಸಮತೋಲನದಲ್ಲಿ ಸಾಗಿಸುವ ರೀತಿಯನ್ನು ಶೋಧಿಸಿಯೇವು, ಸ್ವಾತಂತ್ರ್ಯದ ಜೊತೆ ಸಾಮರಸ್ಯ ಮತ್ತು ಸಮಾನತೆ ಪರಿಕಲ್ಪನೆಗಳ ಪ್ರಾಮುಖ್ಯತೆಯನ್ನು ಮನಗಾಣಿಸೀತು, ಗಾಂಧೀಜಿ ಮತ್ತು ಅಂಬೇಡ್ಕರ್‌ ಇಬ್ಬರನ್ನೂ ಒಟ್ಟಿಗೇ ನಮ್ಮ ನಾಯಕರನ್ನಾಗಿಸೀತು. ಆದರೆ ಸ್ವಾತಂತ್ರ್ಯದ ಪರಿಕಲ್ಪನೆ ಪ್ರಜಾಪ್ರಭುತ್ವದಿಂದ ಮೇಲ್ನೋಟಕ್ಕೇ ದಕ್ಕುವುದಾದರೂ, ಸಮಾನತೆ/ಸಾಮರಸ್ಯ ಪರಿಕಲ್ಪನೆಗಳ ಪ್ರಾಮುಖ್ಯತೆ ಸುಲಭಕ್ಕೆ ಸಿಗದೇಹೋಗುವುದು ದುರದೃಷ್ಟಕರ. ಸಮಸ್ಯೆಯೆಂದರೆ ಸಮಾನತೆ/ಸಾಮರಸ್ಯಗಳ ಆಳವಾದ ಅರಿವಿಲ್ಲದೆ ಪ್ರಜಾಪ್ರಭುತ್ವ ಸುಸ್ಥಿರವಾಗಿರಲಾರದು. ಪ್ರಜಾಪ್ರಭುತ್ವದಿಂದ ನಮಗೆ ಲಭ್ಯವಾಗುವ ದಾರಿಗಳಲ್ಲಿ ನಮ್ಮ ಆಯ್ಕೆ ಪ್ರಜಾಪ್ರಭುತ್ವದ ಧಾರಣಶಕ್ತಿಯನ್ನು ಹೆಚ್ಚಿಸಲಾಗದಿದ್ದರೂ ಕೊಲ್ಲಬಾರದು. ಮನುಷ್ಯನ ಸ್ವಾತಂತ್ರ, ಸೃಜನಶೀಲ ಅಭಿವ್ಯಕ್ತಿಯ ಸಾಧ್ಯತೆ ಇವೆಲ್ಲವೂ ಪ್ರಜಾಪ್ರಭುತ್ವಕ್ಕಿಂತ ಹೆಚ್ಚು ಮೂಲಭೂತವಾದ ವಿಷಯಗಳು, ಮೌಲ್ಯಗಳು. ಆದ್ದರಿಂದ ಪ್ರಜಾಪ್ರಭುತ್ವದ ಕುರಿತಾದ ನಮ್ಮ ಬದ್ಧತೆ ಯಾವ ಕಾರಣಕ್ಕೆ ಮತ್ತು ಪ್ರಜಾಪ್ರಭುತ್ವದ ಮೇಲಣ ವಿಮರ್ಶೆ ಯಾವ ಕಾರಣಕ್ಕೆ ಎನ್ನುವುದನ್ನು ನಾವು ಸದಾ ಶೋಧಿಸುತ್ತಲೇ ಇರಬೇಕಾಗುತ್ತದೆ. ಪ್ರಜಾಪ್ರಭುತ್ವದ ಈ ಕಷ್ಟದ ಹಾದಿಯಲ್ಲಿ ಆಧುನಿಕ ಒಟ್ಟಾರೆ ಮನುಷ್ಯ ದಾರಿತಪ್ಪಿದ ಮನುಷ್ಯ ಎನ್ನಿಸುತ್ತದೆ. ಇದನ್ನು ಕಾಲಾತೀತವಾಗಿ ಗ್ರಹಿಸಲು ಸಾಧ್ಯವೇ ಎಂದು ಆಲೋಚಿಸುತ್ತಿದ್ದೇನೆ. ಪ್ರಾಯಶಃ, ಯಾವುದೇ ಕಾಲದ ಯಾವುದೇ ಸೃಜನಶೀಲ ಪರಿಕಲ್ಪನೆಯ, ಸಾಧ್ಯತೆಯ ಹುಟ್ಟಿಗೆ ಪೋಷಕ ಮತ್ತ್ತು ಮಾರಕ ಕಾರಣಗಳಿರುತ್ತವೆ. ಅಮೃತದ ಶೋಧನೆಗೆ ದೇವ-ದಾನವರು ಒಟ್ಟಾಗಿಯೇ ತೊಡಗಿದರು. ಅಮೃತ ಸೃಷ್ಟಿಯ ನಂತರ ಅದನ್ನು ದಕ್ಕಿಸಿಕೊಳ್ಳುವುದು ದೇವತೆಗಳೋ, ದಾನವರೋ ಎನ್ನುವುದರ ಮೇಲೆ ಭವಿಷ್ಯ ನಿಂತಿದೆ. ಮನುಷ್ಯನ ಸಾರ್ವಕಾಲಿಕ ಪ್ರವೃತ್ತಿಯಾದ ಸಾಮರ್ಥ್ಯದ ಹುಡುಕಾಟ, ಮತ್ತು ಅದರ ಇವತ್ತಿನ ರೂಪಗಳಾದ ತಾಂತ್ರಿಕತೆ ಮತ್ತು ಅತಿರಾಷ್ಟ್ರೀಯತೆಗಳ ಹಿನ್ನೆಲೆಯಲ್ಲಿ ಆಧುನಿಕ ಒಟ್ಟಾರೆ ಮನುಷ್ಯನ ಹುಟ್ಟಿನ ಸಾಧ್ಯತೆ ಸಹಜವಾಗೇ ಇದೆ. ನಮ್ಮ ಹಿರಿಯರು ಇಂಥದ್ದನ್ನು ಮನಗಂಡಿದ್ದರೆಂದು ಕಾಣುತ್ತದೆ. ವಾಣಿಜ್ಯದ ಭರದಲ್ಲಿರುವಂತಿರುವ ಇವತ್ತಿನ ಚೀನದ ಉದಾಹರಣೆ ಓದುವಾಗ, ಖಾಸಗೀಕರಣ/ಜಾಗತೀಕರಣದ ಅನೇಕ ನಡೆಗಳು ಆಯ್ಕೆಯ ಸ್ವಾತಂತ್ರ್ಯವನ್ನು ಸಮರ್ಥಿಸುತ್ತಾ ನಡೆಯುತ್ತಿವೆ. ಇವು ಸ್ವಾತಂತ್ರ್ಯದ ಧಾರಣಶಕ್ತಿಯನ್ನೇ ಕೊಲ್ಲುವಂತಹ ನಡೆಗಳಾಗಿವೆಯೇ ಎನ್ನುವ ಕುರಿತು ನಾವು ಒಂದು ದೇಶವಾಗಿ ಆಳದಲ್ಲಿ ಆಲೋಚಿಸಿಲ್ಲವೆಂದೆನ್ನಿಸುತ್ತದೆ. ಕಣ್ಣಿಗೆ ಕಾಣುವ ಪ್ರಗತಿ ಸಂವೇದನಾಶೀಲ ಮನಸ್ಸು ಮಾತ್ರವೇ ಗ್ರಹಿಸಬಹುದಾದ ಆಂತರಿಕ ಸ್ವಾತಂತ್ರ್ಯವನ್ನು ನಿರ್ಲಕ್ಷಿಸುವಂತೆ ಮಾಡಬಹುದಾದ ಸಾಧ್ಯತೆಯನ್ನು ಚರ್ಚೆಯ ಮುನ್ನೆಲೆಗೆ ನಾವಿನ್ನೂ ತರಲಾಗಿಲ್ಲ.

***

ಇಷ್ಟಾದರೂ ನಮಗೆ ಅತ್ಯಗತ್ಯವಾಗಿ ಬೇಕಾದ ಆಶಾವಾದ, ಬೇಂದ್ರೆಯವರ ಮೊದಲಗಿತ್ತಿ ಕವನದ ಆಶಯದ ಜೊತೆ ಹೊಂದಿಕೊಳ್ಳುವಂಥದ್ದು, ಡಾ ಅನಂತಮೂರ್ತಿಗಳ ಟಾಯ್ನ್‌ಬೀ ಕುರಿತಾದ ಲೇಖನದಲ್ಲಿದೆ. ಗಾಂಧೀಜಿಯ ಉದಾಹರಣೆಯನ್ನು ಡಾ ಅನಂತಮೂರ್ತಿಗಳು ತರುತ್ತಿರುವ ರೀತಿ ಮುಖ್ಯವಾಗಿದೆ. ಈ ತೆರನಾದ ಸೃಜನಶೀಲ ಗುಂಪು ತನ್ನ ಮೇಲಾಗುವ ಆಕ್ರಮಣವನ್ನು, ಆಕ್ರಮಣಕಾರರನ್ನು ಸರಿಯಾದ ಕ್ರಮದಲ್ಲಿ ಗುರುತಿಸಲು ಸಾಧ್ಯವಾಗುವುದು ತನ್ನ ಆಂತರ್ಯದಲ್ಲೇ ಇರುವ ಸೃಜನಶೀಲವಾದ ಸ್ವದೇಶೀ ಬದುಕಿನ ವಿವೇಕದ ಜೊತೆಗೇ ಅಲ್ಲಿರುವ ಆಕ್ರಮಣಶೀಲ ಸಾಧ್ಯತೆಯನ್ನು ಸರಿಯಾಗಿ ಗುರುತಿಸಿದಾಗ. ಅವನತಿ ನಂತರದ ಮರುಹುಟ್ಟಿನ ಸಾಧ್ಯತೆ ಮಾತ್ರ ದೇಶೀಯವಾದ್ದು, ಪ್ರಾಂತೀಯವಾದ್ದು ಮತ್ತು ಮರುಹುಟ್ಟು ಸಹಜವೇ ಎನ್ನುವುದು ಕನ್ನಡದಂತಹ ಭಾಷೆಯ ಭವಿಷ್ಯದ ಕುರಿತಾಗಿಯೂ ಹೇಳಿದ ಆಶಾವಾದವಿರಬಹುದೇ ಎನ್ನುವುದು ನನ್ನ ಆಶಾವಾದ. ಜೊತೆಗೆ ಎಚ್ಚರಿಕೆಯೂ ಸಹ. ಸ್ವದೇಶೀ ಬದುಕಿನ ವಿವೇಕ ಬೇಡವಾಗಿರುವ ಇವತ್ತಿನ ನಮ್ಮ ಇಂಗ್ಲೀಷಿನ ಸ್ಥಿತಿ ಮತ್ತು ಜೀವಂತವಾಗಬೇಕಾದರೆ ಬೇಕಾಗುವ ಕನ್ನಡದಂತಹ ಭಾಷೆಯ ಸಂಬಂಧಗಳಿಗೂ ಈ ಪರಿಕಲ್ಪನೆಗಳನ್ನು ಒಗ್ಗಿಸಬಹುದಾಗಿದೆ. ಜೊತೆಗೆ, ಸಾಂಸ್ಕೃತಿಕ ದಣಿವು ಪರಿಕಲ್ಪನೆ ಕೂಡಾ ಅವನತಿ ಮತ್ತು ಮರುಹುಟ್ಟು ಪರಿಕಲ್ಪನೆಗಳ ಸಂಧಿ-ಬಿಂದುವೆಂದೆನ್ನಿಸುತ್ತದೆ.

ನಿಜದಲ್ಲಿ ಸಾಂಸ್ಕೃತಿಕ ದಣಿವಿನ ಸಾಧ್ಯತೆಯನ್ನು ನಂಬಿ ಕಾಣಲು, ತಮ್ಮ ಪಿಸುಮಾತುಗಳಲ್ಲಿ ಜನರು ಬದುಕುತ್ತಿರುವರೆನ್ನುವುದನ್ನು ನಂಬಲು ಒಂದು ಬಗೆಯ ಆತ್ಮವಿಶ್ವಾಸದ, ಧೈರ್ಯದ ಅಗತ್ಯವಿದೆಯೆಂದು ನನ್ನ ನಂಬಿಕೆ. ನನ್ನಂಥವರು ಬೌದ್ಧಿಕವಾಗಿ ಗ್ರಹಿಸುವ ಈ ಸಾಧ್ಯತೆ ಆಂತರ್ಯದ ಸಂವೇದನೆಯಾಗಬೇಕಾದರೆ ಈ ಆತ್ಮವಿಶ್ವಾಸ ಅದೆಷ್ಟು ಮುಖ್ಯ ಎಂದು ನೆನೆದಾಗ ಅಳುಕುಂಟಾಗುವುದೂ ಇದೆ. ನನ್ನಂಥವರು ಒಮ್ಮೊಮ್ಮೆ ಬೆಂಜಮಿನ್ನನ ಸ್ಥಿತಿಗೆ ಹತ್ತಿರವಿರುವಂತೆ ಅನ್ನಿಸುತ್ತದೆ. ಮರುಕ್ಷಣ ಬೇಂದ್ರೆಯ ಬೆಳಕಿನಿಂದ ಒಂದೆರಡು ಆಶಾಕಿರಣ ನಮ್ಮ ಮೇಲೆ ಬೀಳುತ್ತದೆ. ಹೀಗೆ ಒಂದು ದ್ವಂದ್ವದ ದಾರಿಯಲ್ಲಿ ಸಾಗುತ್ತಿದ್ದೇವೆ.

***

ಈ ನಡುವೆ-ಆಧುನಿಕತೆ, ಕೈಗಾರಿಕೀಕರಣ, ವಸಾಹತುಶಾಹಿ, ರಾಷ್ಟ್ರೀಯತೆ, ಪ್ರಾದೇಶಿಕತೆ, ಪ್ರಗತಿ ಮುಂತಾದ ಸಂಕೀರ್ಣ ಪ್ರಕ್ರಿಯೆಗಳ ಒಟ್ಟು ಮೊತ್ತದಂತಿರುವ ಕಾವೇರಿ ವಿವಾದ, ನನ್ನಂಥವರ ವಿಚಾರಗಳ ಕ್ರಿಯಾಶೀಲ ಸಾಧ್ಯತೆಗೆ ಆಮಂತ್ರಣವೋ ಎಂಬಂತೆ ಸವಾಲಾಗಿ ನಿಂತಿದ್ದು, ಇದು ನೀರಿನಂತಹ ಮೂಲಭೂತ ವಸ್ತುವಿನ ಕುರಿತಾಗಿರುವುದು ನನಗೆ ವಿಚಿತ್ರ ಪ್ರತಿಮೆಯಾಗಿ ಕಾಣುತ್ತಿದೆ. ಯಾವುದರ ಇತ್ಯಾತ್ಮಕ ಸಾಧ್ಯತೆಯನ್ನೂ ಕೊಲ್ಲದೇ, ಬೃಹತ್‌ ಭಿತ್ತಿಗಳ ಹಿನ್ನೆಲೆಯಲ್ಲಿ ಮನುಷ್ಯತ್ವವನ್ನೂ ಮರೆಯದಂತಹ ಪ್ರತಿಕ್ರಿಯೆಯನ್ನು ನೀಡುವುದು ನನ್ನಂಥವರಿಗೆ ಸಾಧ್ಯವಾಗುತ್ತಿಲ್ಲ.

ಆದರೆ, ಈ ಕಠಿಣವಾದ ಹಾದಿಗಳಲ್ಲಿ ಕ್ರಮಿಸಲು ಬೇಕಾದ ಆತ್ಮವಿಶ್ವಾಸದ ಸಾಧ್ಯತೆಯನ್ನು ಡಾ ಅನಂತಮೂರ್ತಿಗಳ ಸುಬ್ಬಣ್ಣನವರ ಲೇಖನ ತೋರಿಸುತ್ತಿದೆ. ಇದನ್ನು, ಇವೆಲ್ಲವನ್ನೂ ಏಕಕಾಲದಲ್ಲಿ ಮತ್ತು ಸದಾ ನೆನೆಯುತ್ತಾ ನಾವು ಮುಂದಡಿಯಿಡಬೇಕಿದೆ.

ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೩

[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]
ನೋಯಿಡಾ ಘಟನೆಗಳನ್ನು ಪ್ರತ್ಯೇಕವಾಗಿ ಗಮನಿಸದೇ ನಮ್ಮ ಕಾಲದ ಪ್ರಕ್ರಿಯೆಗಳ ಒಂದು ವಿಷದ ಬೈಪ್ರಾಡಕ್ಟಾಗಿ ಕಾಣುವುದಕ್ಕೆ ನಮಗೆ ಧೈರ್ಯ ಸಾಲುತ್ತಿಲ್ಲ. ಅದರಿಂದ ಏಳಬಹುದಾದ ಪ್ರಶ್ನೆಗಳನ್ನು ಎದುರಿಸುವುದಕ್ಕೆ ನಾವು ಸಿದ್ಧರಿಲ್ಲ. ನಮ್ಮ ಕಾಲದ ಜೀವನ ವಿಧಾನದ ಯಾವ ಅಂಶಗಳು ಇಂತಹ ವಿಷಯಗಳು ನಮ್ಮೆದುರಿನಲ್ಲೇ ನಡೆಯುತ್ತಿದ್ದರೂ ಕಾಣದ ಹಾಗಾಗಿದೆ ಎನ್ನುವ ಪ್ರಶ್ನೆಯನ್ನು ನಾವು ಎದುರಿಸುತ್ತಿಲ್ಲ. ನಮ್ಮ ಇಕ್ಕಟ್ಟೆಂದರೆ - ಈ ಕುರಿತು ಸಿನಿಕರಂತೆ ಮಾತನಾಡುವುದೂ ಸ್ವಿಫ್ಟ್‌ನಂತೆ ಮಾತನಾಡುವುದೂ ಏಕಕಾಲದಲ್ಲಿ ಲಂಪಟತನವಾಗುತ್ತದೆ. ಮತ್ತೊಂದೆಡೆ, ಸ್ವಿಫ್ಟ್‌ನ ಬರವಣಿಗೆಯ ತಣ್ಣನೆಯ ಮಾತಿನ ಕ್ರೌರ್ಯದಿಂದ ನಾವು ಹೇಸುವುದು ಮತ್ತು ಅದನ್ನು ನಾವು ಸಾಹಿತ್ಯಕವಾಗಿ ಮೆಚ್ಚುತ್ತೇವೆ ಎನ್ನುವುದು - ಒಂದು ದೊಡ್ಡ ನೈತಿಕತೆಯ ಪ್ರಶ್ನೆಯಾಗುತ್ತದೆ. ಯಾವ ಪ್ರತಿಕ್ರಿಯೆ ಅತಿಯಾದರೂ ಒಂದು ವಿಕೃತಿಗೆ ಕಾರಣರಾಗುತ್ತೇವೆ. ಹೀಗಿರುವ ಪಕ್ಷದಲ್ಲಿ ಚರಿತ್ರೆಯ ಕುರಿತು ಬೇಂದ್ರೆ, ಅಡಿಗ, ಬೆಂಜಮಿನ್ನರ ಗಮನ/ಗ್ರಹಿಕೆಗಳನ್ನು ನಾವು ಯಾವ ರೀತಿ ಎದುರಿಸುವುದು? ಚರಿತ್ರೆ ಬಗೆವ ಬಗೆ ಲೇಖನಕ್ಕೆ ಸುದರ್ಶನ್‌ ಪಾಟೀಲ್‌ ಕುಲಕರ್ಣಿಯವರ ಪ್ರತಿಕ್ರಿಯೆ ಕೂಡಾ ಈ ದೃಷ್ಟಿಯಿಂದ ಗಮನಾರ್ಹವಾಗಿದೆ. ಸಾಹಿತ್ಯ ಮತ್ತಿತರ ಎಲ್ಲ ಕಲೆಗಳು, ಕಲಾವಿದರು ಇದನ್ನೆದುರಿಸದೇ ಮುಂದೆ ಹೋಗುವಂತಿಲ್ಲ.

***

ಜಾಗತಿಕ ವಾಣಿಜ್ಯವೆನ್ನುವುದು ಇಂಗ್ಲೀಷ್‌ಗೆ ಯಜಮಾನಿಕೆಯನ್ನೂ, ಲಯಕಾರನ ತಾಂಡವ ಶಕ್ತಿಯನ್ನೂ ಕೊಟ್ಟಿದೆ. ಬೇರೆ ಬೇರೆ ನಡೆಗಳು ತಮ್ಮದೇ ಕಾರಣಕ್ಕೆ ಸೃಜನಶೀಲವಾದವುಗಳಾದರೂ ಜಾಗತೀಕರಣದ ಅತಂಕವನ್ನು ಅವುಗಳಲ್ಲಿ ಕೆಲವು ಮಾತ್ರ ಎದುರಿಸಬಲ್ಲವು. ಅವುಗಳನ್ನು ನಾವು ಆಯಬೇಕಿದೆ. ಚಲಿಸುವ ಭಾಷೆಯ ಸೃಜನಶೀಲತೆ ಮತ್ತು ಅದರ ಮೇಲೆ ನಮಗಿರಬೇಕಾದ ಆತ್ಮವಿಶ್ವಾಸ, ಬಡ-ಶ್ರೀಮಂತ ಮಕ್ಕಳು ಒಂದೇ ಶಾಲೆಯಲ್ಲಿ ಓದುವುದರಿಂದ ನಾವು ಸಾಧಿಸಬಹುದಾಗಿದ್ದ ಸಾಂಸ್ಕೃತಿಕ ಶ್ರೀಮಂತಿಕೆ, ಇಂಗ್ಲೀಷ್‌ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕಾಗಿರುವುದು- ಇವೆಲ್ಲ ನಿಸ್ಸಂಶಯವಾಗಿ ಮುಖ್ಯವಾದ ವಿಷಯಗಳೇ ಸರಿ. ನಿತ್ಯ-ಸದ್ಯಗಳ ಉತ್ತಮ ಮಿಶ್ರಣವಾಗಿರುವ ಡಾ ಅನಂತಮೂರ್ತಿಗಳ ಕನ್ನಡ ಚಿಂತನೆಯಲ್ಲಿ ಇದರಾಚೆಗೂ ಮುಖ್ಯವಾದ ಮಹತ್ವದ ಪರಿಕಲ್ಪನೆಗಳು, ಶಕ್ತವಾದ ವಿಚಾರಗಳಿದ್ದು ಇನ್ನಷ್ಟು ಚರ್ಚೆಯಾಗಬೇಕಾದ ಅವಶ್ಯಕತೆಯಿದೆ.

ಮೊದಲಾಗಿ, ಭಾಷೆ ಉಳಿಸುವವರು ಮತ್ತು ಭಾಷೆ ಬೆಳೆಸುವವರು ಎನ್ನುವ ಪರಿಕಲ್ಪನೆಗಳು. ನಮ್ಮ ಒಟ್ಟು ಭವಿಷ್ಯ ಪ್ರಾಯಶಃ ಈ ಗ್ರಹಿಕೆಯನ್ನು ನಾವು ಯಾವ ರೀತಿ ಸ್ವೀಕರಿಸಿ, ಚರ್ಚಿಸಿ, ಮುಂದುವರೆಸುತ್ತೇವೆ ಎನ್ನುವುದರ ಮೇಲೆ ನಿಂತಿದೆಯೆನ್ನಿಸುತ್ತದೆ. ಯಾಕೆಂದರೆ ಹೀಗೆ ನಾವು ‘ಕನ್ನಡ ಮಾತ್ರ ಬಲ್ಲಂತಹ'ವರು ಇನ್ನು ಮುಂದೆ ಇರುವುದು ನ್ಯಾಯವಲ್ಲ ಎನ್ನುವಂತಹ ಪರಿಸ್ಥಿತಿಯನ್ನು ಮುಟ್ಟಿದ್ದೇವೆ. ಪ್ರತಿಯೊಬ್ಬರಿಗೂ ಇಂಗ್ಲೀಷ್‌ ಕಲಿಸಲೇಬೇಕಾದ ಚಾರಿತ್ರಿಕ ಘಟ್ಟದಲ್ಲಿದ್ದೇವೆ. ಕನ್ನಡ ಮಾತ್ರ ಬಲ್ಲವರು ಮಾತ್ರ ಭಾಷೆ ಉಳಿಸಬಲ್ಲರು ಎನ್ನುವುದನ್ನು ಒಪ್ಪಿಕೊಂಡರೆ, ನಮ್ಮ ಕನ್ನಡ ಸಂಘಟನೆಗಳು ಮತ್ತೂ ಹೆಚ್ಚು ಮೂಲಭೂತವಾದೆಡೆಗೆ ಸಾಗುತ್ತಾವೇನೋ. ಇನ್ನೊಂದೆಡೆ, ಸ್ವೀಡಿಷ್‌-ಇಂಗ್ಲೀಷ್‌ಗೆ ಸಾಧ್ಯವಾಗಿರುವ ಆರ್ಥಿಕ-ಸಾಂಸ್ಕೃತಿಕ ಸಮಸಮದ ಸಂಬಂಧ ನಮಗೂ ಸಾಧ್ಯವಿರಬಹುದು ಎನ್ನುವುದೊಂದು ಆಶಾವಾದವೇ ಸರಿ. ಆದರೆ, ಪ್ರೊಫೆಸರ ರಾದಾ ಅವರ ಈ ವಾದ ಚರಿತ್ರೆಯ ಒಂದು ಬಿಂದುವಿನ ಕುರಿತಾಗಿದೆ. ಯಾವ ಚಾರಿತ್ರಿಕ ಚಲನೆ ಸ್ವೀಡನ್ನಿಗೆ ಇದನ್ನು ಸಾಧ್ಯವಾಗಿಸಿತು? ಇವತ್ತಿನ ಜಾಗತಿಕ ಚಾರಿತ್ರಿಕ ಚಲನೆಯೆನ್ನುವುದು ಯಾವ ದಿಕ್ಕಿನಲ್ಲಿದೆ? ಇಡಿಯ ಯುರೋಪು ಯಾವ ದಿಕ್ಕಿನಲ್ಲಿದೆ? ಸ್ಕ್ಯಾಂಡಿನೇವಿಯಾದ ದೇಶಗಳು ಯಾವ ದಿಕ್ಕಿನಲ್ಲಿವೆ? ಭಾರತ ಸದ್ಯದ ಸವಾಲುಗಳು ಯಾವ ಚಾರಿತ್ರಿಕ ಚಲನೆಯ ಪರಿಣಾಮ ಮತ್ತು ಯಾವ ಚಾರಿತ್ರಿಕ ಚಲನೆಯನ್ನೆದುರಿಸಿ ಗೆಲ್ಲಬೇಕಿದೆ? ಎನ್ನುವ ಪ್ರಶ್ನೆಗಳನ್ನು ನಾವು ಎದುರಿಸಬೇಕಿದೆ. ಸ್ವೀಡಿಷ್‌ ಭಾಷೆಯ ಕುರಿತು ಆತಂಕ ಇದ್ದಿರಲಾರದ ಒಂದು ಶಾಂತಿ ಕಾಲದಲ್ಲಿ ಇಂಗ್ಲೀಷ್‌-ಸ್ವೀಡಿಷ್‌ ಸಮತ್ವ ಸಾಧ್ಯವಾಗಿದೆ. ಭಾರತ ಆತಂಕದಲ್ಲಿ, ಘರ್ಷಣೆಯಲ್ಲಿ ಇದನ್ನು ಸಾಧಿಸಿಕೊಳ್ಳಬೇಕಿದೆ. ಸ್ವೀಡನ್‌ನ ಉದಾಹರಣೆ ನಮಗೆ ಸಹಾಯ ಮಾಡುತ್ತದೆಯೇ ಎನ್ನುವ ಕಳಕಳಿ ನನ್ನದು. ಆಸ್ಟ್ರೇಲಿಯಾದ ಬುಡಕಟ್ಟಿನ ಲೇಖಕನ ಮಾತುಗಳು ಕೂಡಾ ನನ್ನಲ್ಲಿ ಅಪಾರವಾದ ಆಶೆ ಮೂಡಿಸಿದೆ. ಆದರೆ ಇದು ಮಾರಣಹೋಮದ ನಂತರವೂ ಉಳಿಯುವ ಭರವಸೆ. ಇದನ್ನು ಗಮನದಲ್ಲಿಟ್ಟುಕೊಂಡೂ ಸದ್ಯ ಮಾರಣಹೋಮವಾಗದ ರೀತಿಗಳ ಬಗ್ಗೆ ಮಾತ್ರ ಗಮನಿಸಲು ಇಚ್ಛಿಸುತ್ತೇನೆ.

ಕನ್ನಡದ ಕುರಿತು ಆಶಾವಾದದಿಂದಿರಲು ನನ್ನ ಮನಸ್ಸಿನಲ್ಲೊಂದು ವಾದವಿದೆ, ಇದನ್ನು ಬೆಳೆಸಬೇಕಾಗಿದೆ. ಅದೇನೆಂದರೆ, ನಮ್ಮಲ್ಲಿ ಇಂಗ್ಲೀಷನ್ನು ದಕ್ಷವಾಗಿ ಬಳಸಬಲ್ಲವರ ಇಂಗ್ಲೀಷ್‌ ಕೂಡಾ ಸಾಂಸ್ಕೃತಿಕವಾಗಿ ದರಿದ್ರವಾಗಿರುತ್ತದೆ. ತಮ್ಮ ಇಂಗ್ಲೀಷ್‌ಗೆ ಸಾಂಸ್ಕೃತಿಕ ಶ್ರೀಮಂತಿಕೆ ಬೇಕಾದರೆ ಕನ್ನಡದಂತಹ ದೇಶೀಯ ಭಾಷೆಗಳ ಜೊತೆ ಸೃಜನಶೀಲ ಸಂಬಂಧ ಹೊಂದಿರಬೇಕಾಗುತ್ತದೆ. ಉದಾಹರಣೆಗೆ ರಾಜಾರಾಯರು. ಇಲ್ಲದಿದ್ದರೆ ಇವರ ಇಂಗ್ಲೀಷ್‌ ಎಂದೆಂದಿಗೂ ಗುಲಾಮವಾಗುತ್ತದೆ. ಅವರು ಔದ್ಯೋಗಿಕವಾಗಿ ಮುಂದುವರೆಯಬಹುದು. ಆದರೆ ಸಾಂಸ್ಕೃತಿಕವಾಗಿ ಮುಂದುವರೆಯಲಾರರು. ಸಂಸ್ಕೃತಿ ನಿರ್ಮಾಪಕರಿಗೆ ಗತದ ಜೊತೆಗೆ ಆಳವಾದ ಸಂಬಂಧ ಇರಲೇಬೇಕಾಗುತ್ತದೆ. ಆದರೆ ಕನ್ನಡವನ್ನು ಅಡುಗೆಮನೆ ಭಾಷೆಯಾಗಿ ಬಳಸುವವರಿಗೆ ಇದು ಸಾಧ್ಯವಾಗುವುದಿಲ್ಲ. ಈ ವಾದದ ಸತ್ಯಾಸತ್ಯತೆ ಒಂದಾದರೆ, ಮತ್ತೊಂದು- ಈ ವಾದ ಫಲನೀಡಬೇಕಾದರೆ, ಸಂಸ್ಕೃತ ಕನ್ನಡಕ್ಕೆ ದಾರಿ ಮಾಡಿಕೊಟ್ಟಂತೆ ಇವತ್ತು ಇಂಗ್ಲೀಷ್‌ ಕನ್ನಡಕ್ಕೆ ದಾರಿ ಮಾಡಿಕೊಡಬೇಕಾದರೆ, ನಮ್ಮಲ್ಲಿ ಸಾಂಸ್ಕೃತಿಕ ದಣಿವು ವ್ಯಾಪಕವಾಗಿ ಮತ್ತು ಆಳವಾಗಿ ಎಲ್ಲರಿಗೂ ಅನುಭವವಾಗಬೇಕು. ಮತ್ತು ಅದೇ ಕಾಲದಲ್ಲಿ ದಾರ್ಶನಿಕರು ಹುಟ್ಟಬೇಕು. ಹಾಗೇನಾದರೂ ಆಗಬಹುದು ಎನ್ನುವ ಒಂದು ಆಶಾವಾದ ನನ್ನಲ್ಲಿದೆ.

ಎರಡನೆಯದಾಗಿ, ಒಂದು ಭಾಷೆಯಲ್ಲೇ ಜ್ಞಾನದ ಸೃಷ್ಟಿಯಾಗುವುದು ಮತ್ತು ಭಾಷೆಯ ಉಳಿವು ಅದರ ಮೇಲೆ ಎಷ್ಟರ ಮಟ್ಟಿಗೆ ಅವಲಂಬಿತವಾಗಿದೆ ಎನ್ನುವುದು. ಇದು ನಿಜವಾದರೂ, ಹೀಗೆ ಹುಟ್ಟುವ ಜ್ಞಾನಕ್ಕೆ ಆರ್ಥಿಕ ಆಯಾಮಗಳಿರಬೇಕಾಗುತ್ತದೆ. ಅಥವ ಮತ್ತಿನ್ಯಾವ ಕಾರಣಕ್ಕಾದರೂ ಇಂಗ್ಲೀಷ್‌ಗಿಂತ ಮೇಲು ಎನ್ನುವ ಹಣೆಪಟ್ಟಿ ಪಡೆಯಬೇಕಾಗುತ್ತದೆ. ಅತ್ಯುತ್ತಮ ಸಾಹಿತ್ಯ ಸೃಷ್ಟಿ ಕೂಡ ಜ್ಞಾನದ ಒಂದು ಭಾಗವಾದರೂ ಇದಕ್ಕೆ ನಾವು ಆರ್ಥಿಕ/ಔದ್ಯೋಗಿಕ ಆಯಾಮ ಕಲ್ಪಿಸಲು ಸಾಧ್ಯವಿಲ್ಲದಿರುವುದನ್ನು ಗಮನಿಸಿದರೆ, ನಮ್ಮ ಮುಂದಿರುವ ಸವಾಲು ಸ್ಪಷ್ಟವಾಗುತ್ತದೆ. ಆದ್ದರಿಂದ ನಾವು ಇವತ್ತಿನ ವಾಣಿಜ್ಯವನ್ನು ನೇರವಾಗಿ ಎದುರಾಗಲೇಬೇಕಾಗುತ್ತದೆ. ವಾಣಿಜ್ಯ ಸೃಷ್ಟಿಸುವ ಆತಂಕಗಳ ವಿಷಯದಲ್ಲಿ ವಾಣಿಜ್ಯೋದ್ಯಮಿಗಳಿಗೆ ಹುನ್ನಾರಗಳಿರುತ್ತವೆಯೋ ಇಲ್ಲವೋ ಹೇಳುವುದು ಕಷ್ಟ. ಆದರೆ ಅವರ ಗಮನವೆಲ್ಲವೂ ಸಾಮಾರ್ಥ್ಯದ ಸೃಷ್ಟಿ, ಗಳಿಕೆ, ಹಣದ ಹರಿಯುವಿಕೆಯತ್ತ ಇರುತ್ತದೆ. ಒಳ್ಳೆಯದಾದರೂ, ಕೆಟ್ಟದಾದರೂ ಈ ಪ್ರಕ್ರಿಯೆಯ ಬೈಪ್ರಾಡಕ್ಟಾಗಿ ಆಗುತ್ತದೆ. ಈ ವ್ಯತ್ಯಾಸವನ್ನೇಕೆ ಗಮನಿಸುತ್ತಿದ್ದೇನೆಂದರೆ, ಕೆಲವರನ್ನು ಬಿಟ್ಟು ವಾಣಿಜ್ಯದ ಬಹುತೇಕರಿಗೆ ಒಳನೋಟದ ಕೊರತೆಯಿರುತ್ತದೆ, ವಾಣಿಜ್ಯೇತರ ವಿಷಯಗಳ ಕುರಿತಾದ ಇಂಡಿಫರೆನ್ಸ್‌ ಇರುತ್ತದೆ. ಇನ್ನು ಮಿಕ್ಕವರಿಗೆ ಮನುಷ್ಯತ್ವವನ್ನು ಮೀರಿದ ಮಹತ್ವಾಕಾಂಕ್ಷೆಗಳಿರುತ್ತದೆ. ನಾವು ಎರಡನೆಯವರನ್ನು ಟೀಕಿಸುವ ಭರದಲ್ಲಿ ಮೊದಲನೆಯವರನ್ನು ಕಳೆದುಕೊಳ್ಳುತ್ತೇವೆ. ಅಥವಾ ಈ ಎರಡನ್ನೂ ಬೇರೆ ಬೇರೆ ರೀತಿಗಳಲ್ಲಿ ಟೀಕಿಸಬೇಕಾಗುತ್ತದೆ. ಇದೊಂದು ದಿಕ್ಕಾದರೆ, ಮತ್ತೊಂದು ದಿಕ್ಕಿನಲ್ಲಿರಬೇಕಾದ ಎಚ್ಚರವೆಂದರೆ ಬೆಂಗಳೂರು ಕ್ಲಬ್‌ನಂತಹ ಘಟನೆಗಳನ್ನು ಪ್ರಜ್ಞಾವಂತರು ಟೀಕಿಸದೇ ಹೋದರೆ ಒಂದೋ ಕನ್ನಡ ಸಂಘಟನೆಗಳು ಇಲ್ಲವೋ ಬಲಪಂಥೀಯರು ಅದನ್ನೂ ಹೈಜಾಕ್‌ ಮಾಡುತ್ತಾರೆ.

ಇದನ್ನೆಲ್ಲಾ ಮುಂದುವರೆಸುವುದಾದರೆ, ಬೇಂದ್ರೆಯವರ ‘ಕನ್ನಡವು ಕನ್ನಡವ ಕನ್ನಡಿಸುತಿರಬೇಕು; ಕನ್ನಡವು ಹೊಸಬಾಳನ್ನು ಕನ್ನಡಿಸಬೇಕು' ಕವಿವಾಣಿಯನ್ನು ಒಟ್ಟು ಕನ್ನಡ ನಾಡು ಅರ್ಥೈಸಲು ಪ್ರಯತ್ನಿಸಬೇಕಿದೆ. ಕನ್ನಡದಲ್ಲಿ ಜ್ಞಾನದ ಸೃಷ್ಟಿ ಎನ್ನುವುದು ಹೊಸಬಾಳನ್ನು ಕನ್ನಡಿಸಬೇಕು ಎನ್ನುವದರ ಭಾಗವೇ ಆದರೂ, ಇದಕ್ಕಿರುವ ಇತರ ಆಯಾಮಗಳ ಚರ್ಚೆಯಾಗಬೇಕಿದೆ. ಈ ಆವರಣದೊಳಗೇ ಮಧ್ಯಮ ವರ್ಗಕ್ಕೆ ಕನ್ನಡದ ಮೇಲೆ ಮತ್ತಷ್ಟು ವಿಶ್ವಾಸ ಮೂಡಿಸುವ ಬಗೆ, ಕನ್ನಡ ಅತ್ಯುತ್ತಮವಾಗಿ ಬಲ್ಲ, ಇಂಗ್ಲೀಷ್‌ ಓದಿ-ಬರೆಯಲು ಬಲ್ಲ, ಮಾತನಾಡಲು ಮಾತ್ರ ಬಾರದ ಕನ್ನಡ ಮಕ್ಕಳಲ್ಲಿ ನಾವು ಆತ್ಮವಿಶ್ವಾಸ ತುಂಬುವ ಬಗೆ, ಕನ್ನಡದಿಂದ ಇಂಗ್ಲೀಷ್‌ ಕಲಿಯುವುದು ಸಾಧ್ಯ ಎನ್ನುವ ವಾತಾವರಣ ಸೃಷ್ಟಿಯಾಗುವ ಬಗೆ, ತಮ್ಮ ಸೃಜನಶೀಲತೆಗೆ ಎರವಾಗದ ಸ್ಥಿತಿಯ ನಿರ್ಮಾಣದ ಬಗೆ ಇವೆಲ್ಲವೂ ಚರ್ಚೆಯಾಗಬೇಕಿದೆ.

***

ಭಾಷಾಂತರದ ಪತ್ರಿಕೋದ್ಯಮ ಮಾತ್ರ ಕಷ್ಟದ ವಿಚಾರವಾಗಿದೆ. ವಿಷಯ ಜಟಿಲವಾಗಿರುವುದರಿಂದ ಅನುಮಾನಗಳ ಮೂಲಕವೇ ನನ್ನ ಪ್ರತಿಕ್ರಿಯೆ. ಅನುವಾದ ಪದವನ್ನು ಅನುವು+ಆದ ಎಂದು ಬಿಡಿಸಿಕೊಂಡರೆ, ಮತ್ತೊಂದು ಭಾಷೆಯಲ್ಲಿ ಅನುವು - ಎಂದರೆ ಮತ್ತೊಂದು ಭಾಷೆಯಲ್ಲಿ ತಯಾರಾದ, ಮರುಸೃಷ್ಟಿಯಾದ - ಎನ್ನುವ ಅರ್ಥವನ್ನೂ ಸೇರಿಸಬಹುದೆನ್ನಿಸುತ್ತದೆ. ಈ ಅರ್ಥವನ್ನು ಡಾ ಅನಂತಮೂರ್ತಿಗಳ ಲೇಖನದಲ್ಲಿನ 'ಅನುವಾಗು' ಪದ - ಮತ್ತೊಂದು ಭಾಷೆಯಲ್ಲಿ 'ಅನುವಾಗು' - ಧ್ವನಿಸುತ್ತದೆನ್ನಿಸುತ್ತದೆ. ಹೀಗಾದರೆ ‘ತನ್ನ ಭಾಷೆಯಲ್ಲಿ ಮೂಲಕ್ಕೆ ಆದಷ್ಟೂ ಹತ್ತಿರವಾಗು' ಎಂದು ಹೇಳಬಹುದೇ ಎಂದು ಯೋಚಿಸುತ್ತಿದ್ದೇನೆ. ಈ ಸಂಕೀರ್ಣತೆ ನನಗಿನ್ನೂ ಪೂರ್ತಿಯಾಗಿ ಅರ್ಥವಾಗಿಲ್ಲ.

ಬೇಂದ್ರೆಯವರ ಕವಿವಾಣಿಯಂತೆ ಹಿರಿಯರಿಗೆ ಇಂಗ್ಲೀಷು ಕನ್ನಡವನ್ನು ಹಸನುಗೊಳಿಸುವ ಸಾಧನವಾಯಿತು. ಇಂಗ್ಲೀಷನ್ನು ನೋಡಿದಷ್ಟೂ ಕನ್ನಡದ್ದೇ ಹೊಸ ಸಾಧ್ಯತೆಗಳ ಶೋಧನೆ ಸಾಧ್ಯವಾಯಿತು. ಆದರೆ ಇವತ್ತಿನ ಪ್ರಕ್ರಿಯೆಯನ್ನು ಸ್ವಲ್ಪ ಅತಿರೇಕದಲ್ಲಿ ಹೀಗೆ ವಿವರಿಸಬಹುದೇನೋ - ಕನ್ನಡಾಂಬೆಯಲ್ಲಿ ಸ್ವಸ್ಥವಾಗಿರುವ ಅಂಗಗಳನ್ನು ಕಿತ್ತು ಇಂಗ್ಲೀಷಿನ ಅಂಗಾಂಗಗಳನ್ನು ವಾಮಾಚಾರದಿಂದ ನಕಲು ಸೃಷ್ಟಿಮಾಡಿ ಕನ್ನಡಾಂಬೆಗೆ ಕಸಿ ಮಾಡುವುದು. ಈ ಕುರಿತು ಕನ್ನಡಿಗರಿಗೆ ಹೇಸಿಗೆಯಾಗಬೇಕು, ಆದರೆ ಹಾಗಾಗುವುದಿಲ್ಲ. (ನಮ್ಮ ಜನ ಅಷ್ಟರಮಟ್ಟಿಗೆ ಬದಲಾಗಿದ್ದಾರೆ, ಅಥವಾ ಈ ಮೊದಲೂ ಹಾಗೇ ಇದ್ದರು.) ಬೇರಿನ್ನಾವ ಪ್ರತಿಭಟನೆಯೂ ಈ ಬೆಳವಣಿಗೆಯನ್ನು ತಡೆಯುವುದಿಲ್ಲ. ಆದರೆ ಇದನ್ನು ಮೀರುವುದಕ್ಕೆ ನಮಗೆ ಎರಡು ಸಾಧ್ಯತೆಗಳಿವೆ. ಹೀಗೆ ಭಾಷಾಂತರಿಸುವವರು ಕನ್ನಡಾಂಬೆಯ ಅಂಗಾಂಗಗಳನ್ನು ಕಸಿ ಮಾಡದೇ, ತಮ್ಮ ಪರಿಮಿತ ನೆಲೆಯಲ್ಲೂ ಬೇಂದ್ರೆಯ ಕವಿವಾಣಿಗೆ ಓಗೊಡುತ್ತಾರೆಯೇ? ಈ ಹಿಂದೆ ಅನೇಕ ವಿಕೃತಿಗಳೇ ಮುಂದೆ ಸೃಜನಾತ್ಮಕ ಬೆಳವಣಿಗೆಗಳಿಗೆ ದಾರಿಯಾದ ಉದಾಹರಣೆಗಳಿವೆ. ಆದರೆ, ಇದೂ ಕೂಡಾ ಕಷ್ಟ ಸಾಧ್ಯವೇ. ಅಂಗಾಂಗ ಕಸಿಗೆ ಮಾತ್ರ ಸಂಬಳ ನೀಡಲಾಗುತ್ತದೆ. ಬೇರಿನ್ನೆಲ್ಲ ಪ್ರಕ್ರಿಯೆಗಳನ್ನು ಕೊಲ್ಲಲಾಗುತ್ತದೆ.

ಮತ್ತೊಂದು, ಕನ್ನಡದಲ್ಲಿ ಜ್ಞಾನ ಸೃಷ್ಟಿಯ ವಿಷಯ. ಇಲ್ಲೂ ಸಹ ನಾವು ಇವತ್ತು ಇಂಗ್ಲೀಷ್‌ ಸೃಷ್ಟಿಸುತ್ತಿರುವ ಜ್ಞಾನದ ಜೊತೆಗೆ ಸ್ಪರ್ಧಿಸಿದರೆ ಗೆಲುವು ಕಷ್ಟವೇ ಸರಿ. ಇಂಗ್ಲೀಷ್‌ ಸೃಷ್ಟಿಸುತ್ತಿಲ್ಲದ ವಿಷಯ-ವಸ್ತುಗಳತ್ತ ಇನ್ನಿತರ ಭಾಷೆಗಳು ಗಮನ ಹರಿಸುವುದು ಸಾಧ್ಯವೇ ಎನ್ನುವುದು ಒಂದು ಪ್ರಶ್ನೆ. ಇದಕ್ಕೊಂದು ನಿದರ್ಶನವನ್ನು ಅನಂತಮೂರ್ತಿಗಳ ಒಂದು ಲೇಖನದಲ್ಲಿ ಪ್ರಸ್ತಾಪವಾದ ವಿಷಯದ ಮೂಲಕ ಕೊಡಬಯಸುತ್ತೇನೆ. ವಾಲ್ಮೀಕಿಯ ನೆವದಲ್ಲಿ ಪುಸ್ತಕದಲ್ಲಿನ ‘ಸಂಪ್ರದಾಯ, ಆಧುನಿಕತೆ ಮತ್ತು ಪರ್ಯಾಯ ಸಂಸ್ಕೃತಿ' ಲೇಖನದಲ್ಲಿ ಒಂದು ಪ್ರಸ್ತಾಪವಿದೆ. ನೆಲದಲ್ಲಿ ಬೇರೂರಿರುವುದು ಮತ್ತು ವೈಚಾರಿಕರಾಗಿರುವುದು ಏಕಕಾಲದಲ್ಲಿ ಎರಡೂ ಆಗಿರುವುದು ಮುಖ್ಯ. ಬಹುತೇಕ ಭಾರತೀಯ ಭಾಷೆಗಳ ವಿಷಯದಲ್ಲಿ ಇದು ಸಾಧ್ಯವಾಗಿದೆ ಎನ್ನುವ ಅರ್ಥದ ಸಾಲುಗಳು (ಪುಟ 9 ಪ್ಯಾರಾ 1). ಇದನ್ನು ನಾವು ಕನ್ನಡದಲ್ಲಿ ಜ್ಞಾನದ ಸೃಷ್ಟಿ ಎನ್ನುವ ಅರ್ಥದಲ್ಲಿ ಗ್ರಹಿಸಲು ಸಾಧ್ಯವಿಲ್ಲವೆ, ಮತ್ತು ಇದನ್ನು ವಿಸ್ತರಿಸಬಲ್ಲವೆ. ತಂತ್ರಜ್ಞಾನ, ವಾಣಿಜ್ಯಗಳನ್ನು ಬಿಟ್ಟು ಮನುಷ್ಯನಿಗೆ ಮುಖ್ಯವಾದ ಅನೇಕ ವಿಷಯಗಳು ನಮ್ಮ ಜೀವನಕ್ಕೆ ನಿಜದಲ್ಲಿ ಹತ್ತಿರವಾಗಿರುವಂತೆ ಇಂಗ್ಲೀಷಿನಲ್ಲಿ ಸಿಗುವುದು ಸಾಧ್ಯವಿಲ್ಲ, ಕನ್ನಡದಲ್ಲಿ ಮತ್ತು ಇನ್ನಿತರ ಭಾಷೆಗಳಲ್ಲಿ ಸಿಗುವುದು ಸಾಧ್ಯವಿದೆ ಎನ್ನುವುದನ್ನು ಜ್ಞಾನದ ಸೃಷ್ಟಿ ಎಂದು ಗ್ರಹಿಸಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಿದ್ದೇನೆ. ಈ ಬಗೆಯ ಸಾಧ್ಯತೆಯನ್ನೂ ‘ಭಾಷಾಂತರದ ಗಂಡಾಂತರ' ಕೊಲ್ಲುವುದೇನೋ ಎನ್ನುವುದು ಡಾಅನಂತಮೂರ್ತಿಗಳ ಮುಖ್ಯ ಕಾಳಜಿ ಇರಬಹುದೇ ಎಂದೂ ಯೋಚಿಸುತ್ತಿದ್ದೇನೆ.

ನಿಜಕ್ಕೂ ಜನರಲ್ಲಿ ಜಾಗೃತಿಯಾದೀತು ಎನ್ನುವುದನ್ನು ನಂಬಲು ಸಿದ್ಧರಿಲ್ಲದ ನನ್ನಂಥವರು ಕಡೆಗೆ ದಣಿವಿಗೇ ಕಾದು ಕೂರಬೇಕೇನೋ.
ಮುಂದುವರೆಯುವುದು...

ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೨

[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]

ಚರಿತ್ರೆ, ಆಧುನಿಕತೆಗಳ ಸೃಷ್ಟಿಗೆ ಕಾರಣ ಎಂದೆನ್ನಿಸಿಕೊಂಡಿರುವ - ಈ ಹಿನ್ನೆಲೆಯಲ್ಲಿ ನಮ್ಮ ಯಾವತ್ತಿನ ಅವಶ್ಯಕತೆಯಾಗಿರುವ - ಯೂರೋಪನ್ನು ಕುರಿತ ಡಾ. ಅನಂತಮೂರ್ತಿಗಳ ಚಿಂತನೆಯಲ್ಲಿ ರಾವಿನಲ್ಲಿ, ರಾಷ್ಟ್ರೀಯತೆಯ ನೆವದಲ್ಲಿ, ಪ್ರಗತಿಯ ಹುಂಬ ಉತ್ಸಾಹದಲ್ಲಿ, ಮತೀಯತೆಯ ಹುರುಪಿನಲ್ಲಿ. ಈ ನಾಲ್ಕೂ ಬೇರೆ ಬೇರೆ ಇರಲಾರದು ಎನ್ನುವ ಮಾತು ಅತಿ ಮುಖ್ಯ ಗ್ರಹಿಕೆ. ಇದಕ್ಕೆ ಸ್ಫೂರ್ತಿಯಾಗಿ ಟ್ಯಾಗೋರ್‌ ಮತ್ತು ಗಾಂಧಿಯಿದ್ದಾರೆ ಎಂದುಕೊಂಡಿದ್ದೇನೆ. ಈ ಕುರಿತ ನನ್ನ ಅನುಮಾನಗಳು - ಕೈಗಾರಿಕಾ ಕ್ರಾಂತಿ, ಆಧುನಿಕತೆ, ಕಮ್ಯುನಿಸಂ, ಬಂಡವಾಳಶಾಹಿ, ಮತೀಯತೆ, ಫ್ಯಾಸಿಸಂ-ಗಳೆಲ್ಲವನ್ನೂ ಸರಣಿಯಾಗಿಯೂ ಮತ್ತು ಒಂದೇ ಪ್ರಕ್ರಿಯೆಯ ಫಲವೆನ್ನುವಂತೆಯೂ ಕಂಡಿರುವ ಯೂರೋಪು, ಕಡೆಗೆ ಎರಡು ಬಗೆಯ ಅಮಾನುಷತೆಗಳಲ್ಲಿ ಒಂದನ್ನಾಯುವಂತಹ ಅನಿವಾರ್ಯತೆಗೆ ಏಕೆ ತಲುಪಿತು? ಯಂತ್ರಗಳ ಸಾಧ್ಯತೆಯನ್ನು ಎಡವಿಬಿಟ್ಟ ಯೂರೋಪು, ಆ ಕಾರಣಕ್ಕೇ ಬಂಡವಾಳಶಾಹಿಯ ಹಿಡಿತದಲ್ಲಿ ಅನಾಮತ್ತಾಗಿ ಕೈಗಾರಿಕೀಕರಣಕ್ಕೊಳಗಾಗಿ, ನಂತರ ಅದನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆಯಿಂದ ಬೃಹತ್‌ ಆರ್ಥಿಕ ವ್ಯವಸ್ಥೆಗಳನ್ನು ನಿರ್ಮಿಸಿಕೊಳ್ಳುತ್ತಾ, ಆದ್ದರಿಂದಲೇ ರಾಷ್ಟ್ರೀಯತೆಯನ್ನು ಆವಾಹಿಸಿಕೊಂಡು, ರಾಷ್ಟ್ರಿಯತೆ ಸಾಧಿಸಲು ಒಂದೋ ಪ್ರಗತಿ ಇಲ್ಲವೋ ಮತೀಯತೆಯಯನ್ನು ನವಮೌಲ್ಯಗಳನ್ನಾಗಿ ರೂಪಿಸಲು ತೊಡಗಿತೇ? ಇದು ಅಮಾನುಷತೆಯ ಹಾದಿಯಲ್ಲಿ ಸಾಗುವಂತಾಗಿದೆಯೆಂದರೆ ಮೌಲ್ಯವೊಂದು ಸಮಾಜದಲ್ಲಿ ರೂಪುಗೊಳ್ಳುವ ಬಗೆಯ ಕುರಿತು ಇದು ವಿಶೇಷವಾದ್ದೇನಾದರೂ ಹೇಳುತ್ತಿದೆಯೇ? ಮತ್ತೆ ಮೊದಲಿಗೆ ಬರುವುದಾದರೆ, ಯಂತ್ರಗಳ ಆವಿಷ್ಕಾರದ ನಂತರ ಆಯ್ಕೆಗಳು ಸೀಮಿತವಾದ್ದರಿಂದಲೇ ಹೀಗಾಯಿತೇ?

ಯಂತ್ರಾಧಾರಿತ ಆರ್ಥಿಕತೆಗೆ ಬೇಕಾದ ಬೃಹತ್‌ ವ್ಯವಸ್ಥೆ ಫ್ಯಾಸಿಸಂನಂತಹ ವಿಕೃತಿಗಳನ್ನು ಸೃಷ್ಟಿಸಿ ಬೆಳೆಸುತ್ತಿದ್ದ ಕಾಲದಲ್ಲಿ ಅದನ್ನೆದುರಿಸುವ ಏಕಮಾತ್ರ ಆಯ್ಕೆಯಾಗಿ, ಅನಿವಾರ್ಯವಾಗಿ ರೂಪುಗೊಂಡಿರಬಹುದಾದ ಕಮ್ಯುನಿಸಂ, ಕಡೆಗೆ ಸ್ಟಾಲಿನ್‌ರಂಥವರನ್ನು ರೂಪಿಸಿತು. ಅಂದರೆ ವಿರೋಧ ಮಾತ್ರವೇ ಮುಖ್ಯವಾದ ಹಾದಿಯಲ್ಲಿ ವಿರೋಧಿಯ ಎಲ್ಲ ಗುಣಗಳನ್ನೂ ತನ್ನಲ್ಲೇ ಆವಾಹಿಸಿಕೊಂಡಿತೇ? ಹಿಟ್ಲರ್‌ ಪ್ರಕ್ರಿಯೆಯನ್ನೂ ಹೀಗೇ ಗ್ರಹಿಸಬಹುದೇ? ಇಷರ್ವುಡ್‌, ಸ್ಪೆಂಡರ್‌, ಆಡೆನ್‌ ಮಹನೀಯರುಗಳು ಕಮ್ಯುನಿಸಂ ಹಾದಿಯಲ್ಲೇ ಬೆಳೆದು ಮನುಷ್ಯನ ಆಧ್ಯಾತ್ಮಿಕ ಹಸಿವನ್ನು ಇಂಗಿಸಲಾರದ್ದರಿಂದ ಇವರುಗಳು ಬೆಳೆಯುವುದಕ್ಕೆ ಬೇರೆಯೇ ಹಾದಿ ಹಿಡಿದಿರುವಂತಿದ್ದರೂ ಕಮ್ಯುನಿಸಮನ್ನು ಅರಗಿಸಿಕೊಂಡ ನಂತರ ಮುನ್ನಡೆದರು ಎನ್ನುವುದು ಮುಖ್ಯ. ಕಮ್ಯುನಿಸಮನ್ನು ಮೀರಬೇಕಾದ ನೆಲೆಗಳ ಬಗ್ಗೆಯೂ ಇದು ದಾರಿತೋರಿಸುವಂತಿದೆ. ಆದರೆ ಒಳಗಿದ್ದೇ ಆ ಆಧ್ಯಾತ್ಮಿಕ ಹಸಿವಿನ ದಾರಿಯನ್ನು ತುಳಿಯಲಾಗದಾಯಿತೇ? ಜಾರ್ಜ್‌ ಥಾಂಸನ್‌ರಂಥವರೂ ಮಾವೋ, ಸ್ಟಾಲಿನ್‌ರನ್ನು ಮೆಚ್ಚುತ್ತಲೇ ಹೋದ ಅಂಶ ಕಮ್ಯುನಿಸ್ಟ್‌ ಸಿದ್ಧಾಂತದಲ್ಲೇ ಕಲ್ಟಿಸಂ ಅನ್ನು ಗುರುತಿಸಲಾಗದ ಅಂಧತೆ ತಂದೊಡ್ಡುವ ಅವಕಾಶವಿರುವುದನ್ನು ಸೂಚಿಸುತ್ತಿದೆಯೇ? ಈ ಅವಕಾಶವನ್ನು ಸ್ಪಷ್ಟವಾಗಿ ಗುರುತಿಸುವುದಕ್ಕೆ ಸಾಧ್ಯವಿದೆಯೇ? (ವ್ಯಕ್ತಿಯಾಗಿ ನೋಡಿದಾಗ ದೊಡ್ಡದಾಗಿ ಕಾಣುವ ನ್ಯೂನತೆ ಸಿದ್ಧಾಂತದಲ್ಲಿ ನೋಡಿದಾಗ ಚಿಕ್ಕದಾಗಿ ಕಂಡು, ಅದಕ್ಕೆ ನಾವು ಕುರುಡರಾಗುತ್ತೇವೆಯೇ? ಟಿಪ್ಪು ವಿಷಯದಲ್ಲಿ ನಮ್ಮ ಎಡಪಂಥೀಯರಿಗಾಗಿರುವುದು ಇದೇನೇ? ಕೃಷ್ಣದೇವರಾಯನಲ್ಲಿ ನಮ್ಮ ಬಲಪಂಥೀಯರಿಗಾಗಿರುವುದು ಇದೇನೇ? ಕಷ್ಟಕಾಲದಲ್ಲಿ ಆಪದ್ಬಾಂಧವನಾದವನ ವೈಯಕ್ತಿಕ ತೀಟೆಗಳು ನಮಗೆ ಕಾಣುವುದಿಲ್ಲವಲ್ಲವೇ?) ಮಿಕ್ಕ ಕಮ್ಯುನಿಸ್ಟರು ಒಂದೋ ಆರ್ಥಿಕತೆ ಮತ್ತು ಸಾಮಾಜಿಕತೆಗೆ ಮಿತಿಗೊಂಡ ಸಮಾನತೆಯ ರೊಮ್ಯಾಂಟಿಕ್‌ ಆಕರ್ಷಣೆ ಮಾತ್ರ ಮೀರಲಾರದವರು. ಅಥವಾ ಕಮ್ಯುನಿಸಂನ ಒಳಗಡೆಯೇ ಇರುವ ಬಿರುಕಿನಲ್ಲಿ ತಮ್ಮ ವೈಯಕ್ತಿಕ ತೀಟೆಗಳನ್ನು ತೀರಿಸಿಕೊಳ್ಳುವ ಅವಕಾಶ ಕಂಡುಕೊಂಡವರು. ಇದಕ್ಕೂ ಮಿಗಿಲಾದ ಕಮ್ಯುನಿಸಂ ಸಿದ್ಧಾ­ಂತವನ್ನಿನ್ನೂ ಅಪ್ಪಿರುವ ಕಮ್ಯುನಿಸ್ಟರಿದ್ದಾರೆಯೇ? ಅದನ್ನು ಗ್ರಹಿಸುವ ಬಗೆ ಹೇಗೆ? ಸಮಾನತೆಯ ಹಸಿವಿನಲ್ಲಿ ಬೃಹತ್‌ ವ್ಯವಸ್ಥೆಗಳತ್ತ ಗಮನ ಹರಿಸಿರುವ ಕಮ್ಯುನಿಸಂ ಒಳಗಿನಿಂದಲೇ ನಮ್ಮನ್ನು ಗುರುತಿಸಿಕೊಳ್ಳುವ ಕ್ರಮಗಳನ್ನು ಇಲ್ಲವಾಗಿಸಿದೆಯೇ? ಕಡೆಗೆ ಸಮಾನತೆಯನ್ನೂ ಸಾಧಿಸಲಾರದೇ ಕೇವಲ ರಾಷ್ಟ್ರೀಯತೆಯನ್ನಷ್ಟೇ ಸಾಧಿಸಿ, ಬಂಡವಾಳಶಾಹಿಯ ಉದ್ದೇಶವನ್ನೇ ಈಡೇರಿಸಿತೇ?

ಈ ಎಲ್ಲವನ್ನೂ ಗ್ರಹಿಸಲು ಡಾ ಅನಂತಮೂರ್ತಿಗಳು ಅಪ್ವರ್ಡ್‌ರನ್ನು ಕೇಂದ್ರದಲ್ಲಿಟ್ಟು ನಡೆಸಿರುವ ಪ್ರಯತ್ನ ಅರ್ಥಪೂರ್ಣವಾಗಿದೆ. ಅಪ್ವರ್ಡ್‌ ಕಮ್ಯುನಿಸಂ ಒಳಗಡೆಯೇ ಇರಬಹುದಾದ ಅತ್ಯುತ್ತಮ ಸಾಧ್ಯತೆಯಂತಿದ್ದಾರೆ ಎಂದರೆ ನಮಗೆ ಕಮ್ಯುನಿಸಂನೊಳಗಿನ ನಿಜದ ಸಾಧ್ಯ-ಅಸಾಧ್ಯಗಳು ಅರ್ಥವಾಗುತ್ತವೆ. ಹೀಗಿದ್ದರೂ ಕಮ್ಯುನಿಸಂ ಮೇಲಣ ಅಪ್ವರ್ಡ್‌ರ ಗಟ್ಟಿ ನಂಬಿಕೆಗೆ ಕಾರಣಗಳಾದರೂ ಏನು? ಸಮಾನತೆಯ ಹಸಿವೇ? ಬೇರಿನ್ನಾವ ಸಿದ್ದಾಂತವೂ ಸಮಾನತೆಯನ್ನು ಈ ಬಗೆಯಲ್ಲಿ ಚರ್ಚಿಸಲಾರದ್ದರಿಂದಲೇ? ಈ ಮಧ್ಯೆ ಅಪ್ವರ್ಡರ ಸಾಧ್ಯತೆ ಇಷರ್ವುಡ್‌ ಗೆ ಗೊತ್ತಿತ್ತು ಎನ್ನುವುದು ಆಧ್ಯಾತ್ಮಿಕ ಹಸಿವಿಗೇ ಸಾಧ್ಯವಾಗುವ ಒಳನೋಟವೆನ್ನಿಸುತ್ತದೆ. (ಅಪ್ವರ್ಡ್‌ರ ಹೆಚ್ಚು ಕಮ್ಯುನಿಸ್ಟರಾದ ಮಿತ್ರರಿಗೆ ಆ ಸಾಧ್ಯತೆ ಕಂಡಿತ್ತೇ?) ಆಧ್ಯಾತ್ಮಿಕ ಹಸಿವು ಮಿಗಿಲಾದ ಯೇಟ್ಸ್‌, ಎಲಿಯಟ್‌, ಪೌಂಡ್‌ ಮುಂತಾದವರು ಹಿಟ್ಲರ್‌, ಮುಸ್ಸೋಲಿನಿಯರ ಮೇಲೆ ಭರವಸೆಯಿಟ್ಟದ್ದು ಸಮಾನತೆಯ ಹಸಿವಿನ ಅಭಾವವೇ? ಹಿಗ್ಗಿಸಿ ಗ್ರಹಿಸಲು ಪ್ರಯತ್ನಿಸುವುದಾದರೆ - ಆಧ್ಯಾತ್ಮಿಕ ಹಸಿವು ಸಮಾನತೆಯ ಹಸಿವಿನ ಅಭಾವದಿಂದ ಕೇವಲ ಬಲಪಂಥೀಯತೆಯಲ್ಲಿ ಮತ್ತು ಬಲಪಂಥೀಯತೆಯ ವಿರೋಧ ಆಧ್ಯಾತ್ಮಿಕ ಹಸಿವಿನ ಅಭಾವದಿಂದ ಕೇವಲ ಎಡಪಂಥೀಯವಾಗಿ ಭ್ರಮನಿರಸನಗಳಲ್ಲಿ ಪರ್ಯವಸಾನವಾದವೇ?

'ಉತ್ತಮ ಪ್ರಭುತ್ವ ಲೊಳಲೊಟ್ಟೆ'-ಯೆನ್ನುವುದು ಆಧ್ಯಾತ್ಮಿಕ ಹಸಿವಿನ ವ್ಯಕ್ತಿಗಳಿಗೆ ದಾರ್ಶನಿಕ ಒಳನೋಟ. ಮಾನವ ವ್ಯವಸ್ಥೆಗಳನ್ನು ನಿರ್ಮಿಸುವ ಆಕಾಂಕ್ಷೆಯಿರುವ ಕಮ್ಯುನಿಸಂ ಮತ್ತು ಬಂಡವಾಳಶಾಹಿಗಳೆರಡೂ ಪ್ರಭುತ್ವದಲ್ಲಿ ನಂಬಿಕೆಯಿಟ್ಟಂಥವು. ಅಂದರೆ ವ್ಯವಸ್ಥೆಯೊಂದನ್ನು ನಂಬುವ ಯಾರಿಗಾದರೂ ಈ ಲೊಳಲೊಟ್ಟೆ ಕಾಣ್ಕೆ ಸಾಧ್ಯವಿಲ್ಲವೇ? ಅಥವಾ ಬ್ಯಾಂಕ್‌ ಅಕೌಂಟ್‌ ಮಾತ್ರ ಬೇಕಾದ್ದಕ್ಕೆ ನಾವು ಬೃಹತ್‌ ವ್ಯವಸ್ಥೆಗಳನ್ನು ನಿರ್ಮಿಸಹೋಗಿ ಮೂಲೋದ್ದೇಶವನ್ನೇ ಮರೆಯುವುದೇ? 19 ಮತ್ತು 20ನೇ ಶತಮಾನಗಳ ಪ್ರಕ್ರಿಯೆಗಳು ಮನುಷ್ಯನನ್ನು ತನ್ನ ನೆಲೆಯಿಂದ ಬೌದ್ಧಿ­ಕವಾಗಿ, ಮಾನಸಿಕವಾಗಿ, ಭೌತಿವಾಗಿಯೂ ಕೂಡ ಉಚ್ಚಾಟಿಸಿಬಿಟ್ಟವು. ಈ ಉಚ್ಚಾಟನೆಗೆ ಪ್ರತಿಕ್ರಿಯೆಯಾಗಿ ಚಿಂತಕರು ತಮ್ಮದೇ ಆದ ಜಿಗಿತಗಳ ಮೂಲಕ ಹಲವು ವಿಕಲ್ಪಗಳನ್ನು ಕಾಣುತ್ತಾ ಮತ್ತೆಲ್ಲಿಯೋ ನೆಲೆಗಳನ್ನು ಸ್ಥಾಪಿಸಿಕೊಳ್ಳಬೇಕಾಯಿತು. ಯಶಸ್ಸು, ಸೋಲು ಎನ್ನುವ ಪರಿಕಲ್ಪನೆಗಳಿಂದ ಇದನ್ನು ಗ್ರಹಿಸಲಾಗುವುದಿಲ್ಲ. ಆದರೆ, ಅಪ್ವರ್ಡ್‌ ಈ ಜಿಗಿತದಲ್ಲಿ ತಮ್ಮತನಕ್ಕೆ ಎರವಾದರು. ಇದು ಪ್ರಕ್ರಿಯೆಗಳ ತೀವ್ರತೆಗೆ ನಿದರ್ಶನ.

ಅನೇಕ ಆಯಾಮಗಳಿರುವ ಈ ಚರ್ಚೆಯಲ್ಲಿ ಸಮಯೋಚಿತವಾಗಿದ್ದ - ಭಾರತ ಈ ಎಲ್ಲ ಆಧುನಿಕ ಪ್ರಕ್ರಿಯೆಗಳನ್ನು ತನ್ನ ಪ್ರಥಮ ಘಟ್ಟದಲ್ಲಿ ಬಹುಮುಖೀಯತೆಯಿಂದ ನಿರ್ವಹಿಸಿತ್ತೇ, ಇಲ್ಲವೇ? ಗಾಂಧಿ, ಟ್ಯಾಗೋರ್‌, ನೆಹರೂ, ಲೋಹಿಯಾ ಈ ಐರೋಪ್ಯ ಅಪಾಯಗಳಿಂದ ನಮ್ಮನ್ನು ಮುಕ್ತರನ್ನಾಗಿಸುವ ಪ್ರಕ್ರಿಯೆಗೆ ಇತ್ತ ಕಾಣಿಕೆಯೇನು? - ಎನ್ನುವ ಚಿಂತನೆ ಲೋಹಿಯಾರ ಚಿಕ್ಕ ಪ್ರಸ್ತಾಪದಲ್ಲೇ ಮುಗಿದುಹೋಗಿರುವುದು ನಿರಾಸೆಗೊಳಿಸುತ್ತದೆ. ಮತ್ತೊಂದು ದಿಕ್ಕಿನಲ್ಲಿ, ಯಾವ ವೈವಿಧ್ಯತೆಯಲ್ಲಿ ಈ ಚಿಂತನೆಗಳು ಎಡಪಂಥೀಯತೆಯನ್ನು ಹಿಡಿದಿಡಲು ಪ್ರಯತ್ನಿಸುತ್ತದೆಯೋ, ಅದೇ ಸಾಂದ್ರದಲ್ಲಿ ಬಂಡವಾಳಶಾಹಿಯನ್ನು ಗ್ರಹಿಸುವುದಕ್ಕೆ ನಮಗಿನ್ನೂ ಸಾಧ್ಯವಿಲ್ಲವಾಗಿದೆಯಲ್ಲ! ಅದನ್ನು ಏಕರೂಪಿಯಾಗಿಯೇ ಇಂದಿಗೂ ಗ್ರಹಿಸುತ್ತೇವೆ. ಬಂಡವಾಳಶಾಹಿಯ ಸಾಧ್ಯತೆಯನ್ನು ಸಮಾನತೆ ಸಾಧಿಸುವ ಕ್ರಮವಾಗಿ, ಸಮೃದ್ಧಿ­ಯನ್ನೂ ಸಾಮರಸ್ಯವನ್ನೂ ಸಾಧಿಸುವ ಸಾಧನವಾಗಿ (ಮುಗ್ಧವಾಗಿ) ನಂಬಿರುವ, ಮತ್ತನೇಕ ಬಗೆಗಳಲ್ಲಿ ಆಳವಾಗಿ ಆಲೋಚಿಸಬಲ್ಲ ಜನರೂ ಇದ್ದಾರೆ. ತಮ್ಮತನಕ್ಕೇ ಎರವಾದವರೂ ಇದ್ದಾರೆ. ಅಂಥವರ ಮೂಲಕ ಬಂಡವಾಳಶಾಹಿಯನ್ನು ಗ್ರಹಿಸಲು ನಮಗಿನ್ನೂ ಸಾಧ್ಯವಾಗಿಲ್ಲ!

ಇವೆಲ್ಲವನ್ನೂ ಹಿನ್ನೆಲೆಯಲ್ಲಿಟ್ಟೇ ನಾವು ನೋಯಿಡಾ ನರಹತ್ಯೆಯಂತಹ ಬರ್ಬರ ಕೃತ್ಯಗಳಿಗೂ , ಕನ್ನಡದಂತಹ ಭಾಷೆಯ ಮುಂದಿರುವ ಒಟ್ಟು ದೌರ್ಭಾಗ್ಯಕರ ಆತಂಕಗಳಿಗೂ, ಭಾಷಾಂತರ ಪತ್ರಿಕೋದ್ಯಮದಂತಹ ಸೂಕ್ಷ್ಮ ಕ್ರೌರ್ಯಗಳಿಗೂ ಪ್ರತಿಕ್ರಿಯಿಸಬೇಕಿದೆ.

ಮುಂದುವರೆಯುವುದು...

ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೧

[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]

ಇವತ್ತಿನ ನಮ್ಮ ಆತಂಕಗಳೆಂದರೆ - ಸಾಮಾಜಿಕ ಸ್ತರದಲ್ಲಿ ಮತೀಯತೆ ಮತ್ತು ಜಾಗತೀಕರಣ, ವೈಯಕ್ತಿಕ ಸ್ತರದಲ್ಲಿ ಯಾವುದೂ ಆಳವಾಗಿ ಅನುಭವಕ್ಕೆ ವಿಶ್ಲೇಷಣೆಗೆ ಸಿಗುತ್ತಿಲ್ಲವೇನೋ ಎನ್ನುವ ಸ್ಥಿತಿ. ಬೇರು ಸತ್ತ ಮರವನ್ನೆತ್ತಿ ಹಿಡಿದು ಬಲ್ಬುಗಳನ್ನು ಜೋಡಿಸುವುದು, ಜೀವಂತ ಮರವಾಗಲಿ, ಸತ್ತ ಮರವಾಗಲಿ ತಮಗೆ ಅನುಕೂಲವೆಂದಾದರೆ ಬಲ್ಬುಗಳನ್ನು ಜೋಡಿಸಿಯೇ ತೀರುವುದು, ಮಾರುವುದು ತೀವ್ರ ವೇಗ ಪಡೆದಿವೆ. ಇವೆರಡರ ಮಿಲನಕ್ರಿಯೆಯಲ್ಲಿ ಹುಟ್ಟುತ್ತಿರುವ ಪೀಳಿಗೆ ಇವೆರಡನ್ನೂ ಹುಟ್ಟುಕುರುಡಿನ, ಕುರುಡಿನ ಅರಿವಿರದ ತೀವ್ರತೆಯಲ್ಲಿ ಮುಂದುವರೆಸುತ್ತಿದೆ. ಈ ಬಲ್ಬಿನ ಪ್ರಖರತೆಯಲ್ಲಿ ಜೀವಂತವಿರುವ ಮರಗಳೂ ಬೇಗನೆ ಸಾಯುತ್ತಿವೆ. ಮತ್ತೊಂದು ಕಡೆಯಲ್ಲಿ ಬಲ್ಬುಗಳ ಸಹಾಯವಿಲ್ಲದೆ ಯಾವ ಮರವನ್ನೂ ಅನುಭವಿಸುವುದು, ಪುಷ್ಟಿಕರ, ರುಚಿಕರ ಹಣ್ಣು ಕಾಣುವುದು ಸಾಧ್ಯವಾಗದ ಕುರುಡಿದೆ. ಮರದ ನೆರಳಿನ ತಂಪಿನಲ್ಲಿ ವಿಶ್ರಮಿಸಬಹುದು, ನೆಮ್ಮದಿಯ ನಿದ್ರೆ ಅನುಭವಿಸಬಹುದು ಎನ್ನುವುದು ಮರೆತಿದೆ. ಸುಂದರವಾದ ಬಲ್ಬಿನ ಕೆಳಗೆ ವಿಷಪೂರಿತ ಹಣ್ಣಿದ್ದರೂ ತಿನ್ನುವುದಕ್ಕೆ ಸಿದ್ಧವಿದೆ. ಒಟ್ಟು ಪ್ರಕ್ರಿಯೆ ಆದಷ್ಟೂ ಮರಗಳನ್ನು ಸಾಯಿಸಿ, ಆದಷ್ಟೂ ಬಲ್ಬುಗಳನ್ನು ಉತ್ಪಾದಿಸಿ, ಜೀವಂತ ಮರಗಳನ್ನು ಸ್ಮೃತಿಯಿಂದಲೇ ಕಳೆದುಕೊಳ್ಳುವ ನಾಗಾಲೋಟವಾಗಿದೆ.

ಇವುಗಳ ವರ್ತಮಾನವನ್ನು ಗ್ರಹಿಸುವುದಕ್ಕೆ, ಆ ಭೂತದಿಂದ ಈ ವರ್ತಮಾನಕ್ಕೆ ತಲುಪಿದ ಬಗೆ, ನಡೆದು ಬಂದ ದಾರಿಯಲ್ಲಿ ಅನುಭವಿಸಿದ ಆತಂಕಗಳು, ಸವಾಲುಗಳು, ಅವುಗಳನ್ನು ನಿರ್ವಹಿಸಲು ತುಳಿದ ಹಾದಿಗಳು, ಅದರ ಪರಿಣಾಮ- ಇವೆಲ್ಲದರ ಕುರಿತ ಚಿಂತನೆ ಅತ್ಯವಶ್ಯ. ಡಾ. ಯು. ಆರ್‌. ಅನಂತಮೂರ್ತಿಗಳ ಋಜುವಾತು ಲೇಖನಗಳು- ಎಂದಿಗೂ ಸಲ್ಲುವಂತೆ ತಾತ್ವಿಕ ಗ್ರಹಿಕೆಯಿಂದ ಇಂದನ್ನು ಮರೆಸದ ರೀತಿಯಲ್ಲಿ-ಈ ಚಿಂತನೆಯನ್ನು ನಡೆಸುತ್ತಿವೆ, ನನ್ನಂಥವನನ್ನು ಚಿಂತನೆಗೆ ಪ್ರೇರೇಪಿಸಿವೆ. ನಾನು ಇತಿಹಾಸ, ಸಂಸ್ಕೃತಿ, ವರ್ತಮಾನ ಮುಂತಾದುವುಗಳ ಹವ್ಯಾಸೀ ವಿದ್ಯಾರ್ಥಿಯಷ್ಟೇ. ಆದ್ದರಿಂದ ನನ್ನೀ ಪ್ರತಿಕ್ರಿಯೆಯನ್ನು ನನಗೆ ನಾನೇ ಕೇಳಿಕೊಳ್ಳುತ್ತಿರುವ ಪ್ರಶ್ನೆ, ಅನುಮಾನ, ಇಬ್ಬಂದಿತನಗಳ ಮೂಲಕ ರೂಪಿಸಲೆತ್ನಿಸಿದ್ದೇನೆ. ಋಜುವಾತು ಅಂಕಣವಲ್ಲದೇ ಅವರ ಹಿಂದಿನ ಲೇಖನಗಳ ಜೊತೆಗೂ ಸಂವಾದಕ್ಕೆ ತೊಡಗಲೆತ್ನಿಸಿದ್ದೇನೆ. ಆದಷ್ಟೂ ಪ್ರತೀಕಗಳ ಮೂಲಕ ತಾತ್ವಿಕವಾಗಿ ಗ್ರಹಿಸಲು ಪ್ರಯತ್ನಿಸಿರುವುದರಿಂದ ಸಹಜವಾಗಿ ಒಂದು ಬಗೆಯ ಅತಿರೇಕವಿದೆ.

***

ಈ ಅಂಕಣದ ಕೇಂದ್ರದಂತಿರುವ - ಚರಿತ್ರೆಯನ್ನು ಬಗೆವ ಮೂರು ಪ್ರಾತಿನಿಧಿಕ ರೀತಿಗಳಾಗಿ ಬೇಂದ್ರೆ, ವಾಲ್ಟರ್‌ ಬೆಂಜಮಿನ್‌, ಅಡಿಗರನ್ನು ಗುರುತಿಸಿ ವಿಮರ್ಶಿಸುವ - ಲೇಖನದ ಒಟ್ಟು ಚಿಂತನೆ ನನ್ನ ಮನಸ್ಸಿನಲ್ಲಿ ಕೆಲ ಪಾತ್ರಗಳಾಗಿ ಪ್ರತಿಫಲನಗೊಂಡಿವೆ.

ಒಬ್ಬ ತಾಯಿ, ಒಬ್ಬ ಮಗ. ತಾಯಿ ಪರಂಪರೆಯ ಸೃಜನಶೀಲತೆಯ ಉತ್ತಮ ಪ್ರತಿನಿಧಿ. ದೇವರಲ್ಲಿ ಶರಣಾಗತಿ, ಕಾಲದ ನಿರಂತರತೆ, ಗಾಢವಾದ ಭಕ್ತಿ-ಶ್ರದೆ­ಗಳಲ್ಲಿ ಎಲ್ಲವನ್ನೂ ಮೀರುವುದು - ಆಕೆಗೆ ಸಹಜ. ಇತಿಹಾಸ ಗೊತ್ತಿಲ್ಲ, ಪುರಾಣ ಗೊತ್ತು. ಇತಿಹಾಸ ಅವಳಲ್ಲೇನೂ ಬಿಟ್ಟಿಲ್ಲ. ಆದರೆ, ಆಕೆಗೆ ಆ ಆಕ್ರಮಣದ ಅರಿವಿಲ್ಲ. ಅಥವಾ ಅದೊಂದು ನಾಟಕ. ಆಕೆ ಕೇಡಿಗೆ, ಕೊಳಕಿಗೆ ಮುಖ ತಿರುಗಿಸಿಲ್ಲ. ಅವಳಷ್ಟು ಅದೃಷ್ಟವಂತರಲ್ಲದ ಅವಳ ಹತ್ತಿರದ ಸಂಬಂಧಿಕರನೇಕರ ಅಪಾರ ಸಂಕಷ್ಟಗಳಿಗೆ, ದುರ್ಭರ ನೋವಿಗೆ ಸಹಜ ಸಂಬಂಧದ ಕಾರಣವಾಗಿಯೂ, ಮಾನವೀಯವಾಗಿಯೂ ಈಕೆ ಮಿಡಿಯುತ್ತಾಳೆ. ಆದರೆ ಈ ಅನುಭವ ಈಕೆಯ ಸೃಜನಶೀಲತೆಯನ್ನು ಕಡಿಮೆಯಾಗಿಸಿಲ್ಲ. ಶರಣಾಗತಿ, ಭಕ್ತಿಗಳೇ ಅದಕ್ಕೆ ಕಾರಣ. ಕ್ರೂರಿಗಳಲ್ಲದಿದ್ದರೂ ಪುರುಷ ಪ್ರಧಾನ ಸಮಾಜವನ್ನು ಮೀರುವ ಪ್ರತಿಭೆಯಿಲ್ಲದ ತನ್ನ ಗಂಡ, ಮಕ್ಕಳಿಂದಾಗುವ ಪರೋಕ್ಷ ಅನ್ಯಾಯಗಳನ್ನೂ ಸಹ ಈಕೆ ಅದೇ ರೀತಿಯಲ್ಲಿ ಮೀರುತ್ತಾಳೆ. ಮಾನಸಿಕವಾಗಿ ಅಸ್ವಸ್ಥರಾಗಿರುವ ತಮ್ಮ ಸಂಬಂಧಿಕರನ್ನೂ ಜೀವಂತವಾಗಿ ಕಾಣಬಲ್ಲ, ಅವರ ಜೊತೆ ಮನುಷ್ಯರಂತೆ ವರ್ತಿಸಬಲ್ಲ, ಆ ಕಾರಣಕ್ಕಾಗೇ ಅವರಲ್ಲಿ ಜೀವ ಚಿಮ್ಮಿಸಬಲ್ಲ, ಕ್ಷಣಕ್ಕಾದರೂ ಅವರಿಗೆ ಸಾಂತ್ವನ ತರಬಲ್ಲ ಶಕ್ತಿಯಿದೆ. ದುಃಖವಾದಾಗ ತೀವ್ರವಾಗಿ ಅತ್ತು, ಮರು ಕ್ಷಣದಲ್ಲಿ ಒಂದೆರಡು ದೇವರ ನಾಮಗಳನ್ನು, ಪದಗಳನ್ನು ಹೇಳಿಕೊಂಡು, ದೇವರಿಗೆ ದೀಪ ಹಚ್ಚಿ, ಧ್ಯಾನ ಮಾಡಿ ಅದನ್ನು ಮೀರಬಲ್ಲಳು. ಪಕ್ಕದ ಮನೆಯ ಮುಸ್ಲಿಮರನ್ನು ಗಣಪತಿ ಪೂಜೆಗೆ ಆಹ್ವಾನಿಸಬಲ್ಲಳಾದರೂ, ಅವರ ರಮ್ಜಾನಿಗೆ ಹೋಗುವುದಿಲ್ಲ. ಅರಬ್‌ ಮುಸ್ಲಿಮರಿಂದ ಬಂದ ಕಾಫಿ ಈಕೆಗೆ ಉಪವಾಸದ ದಿವಸದ ಮಡಿ ಆಹಾರ. ಆದರೆ ಇದು ಅರಬ್‌ ಮುಸ್ಲಿಮರಿಂದ ಬಂತು ಎನ್ನುವುದನ್ನು ಎಂದಿಗೂ ಒಪ್ಪುವುದಿಲ್ಲ. ಇವಳೊಂದಿಗೆ ವಾದ ಸಾಧ್ಯವಿಲ್ಲ. ಕೋಪಬಂತೆಂದರೆ ಅಪಾರವಾದ ಕೊಂಕುಗಳಿಂದ ಎದುರಿರುವರ ಮನಸ್ಥೈರ್ಯವನ್ನು ನಾಶ ಮಾಡಿ, ಅವರನ್ನು ರಾಕ್ಷಸತ್ವಕ್ಕೆ ತಳ್ಳಬಲ್ಲಳು. ತಾನು ಮಾತ್ರ ರಾಕ್ಷಸಿಯಾಗುವುದಿಲ್ಲ. ಮರುಕ್ಷಣ ಅದನ್ನು ಮರೆತು, ಮೊದಲಿನಂತಾಗಬಲ್ಲಳು. ಪ್ರೀತಿಸಬಲ್ಲಳು. ತನ್ನ ಪ್ರೀತಿಯಲ್ಲಿ ಮಿಕ್ಕವರನ್ನು ಉಸಿರುಗಟ್ಟಿಸುವ, ತಾನೇ ನಡೆಸುವ ಆಕ್ರಮಣಗಳು ಇವಳ ಅರಿವಿಗೆ ಇನ್ನೂ ಬಂದಿಲ್ಲ. ವೈಚಾರಿಕವಾಗಿ ಯಾವುದನ್ನೂ ಗ್ರಹಿಸಲಾರಳು. ಅವಳಲ್ಲಿ ತನ್ನ ತಪ್ಪಿಗೆ ಅಪರಾಧಿಭಾವ ಸುಳಿವುದೇ ಇಲ್ಲ. ಪಶ್ಚಾತ್ತಾಪದಲ್ಲಿ ಅದನ್ನು ಸುಟ್ಟು ಮುನ್ನಡೆವವಳು. ತನ್ನ ಪರಂಪರೆಯ ಪ್ರತೀಕಗಳ ಮೂಲಕವೇ ಇವಳ ವ್ಯವಹಾರ. ಈ ತಾಯಿ ಪ್ರಾಯಶಃ ಭೂಮಿ. ಬೇಂದ್ರೆ ಪರಂಪರೆಯ ಪೂರ್ವಜಳೂ ಸಹ. ಏಕೆಂದರೆ ಇವಳು ಆಧುನಿಕತೆಯನ್ನು ಅರಗಿಸಿಕೊಂಡವಳಲ್ಲ, ಪ್ರಯತ್ನಿಸಿದವಳಲ್ಲ.

ಈಕೆಯ ಮಗ. ಬಾಲ್ಯದಲ್ಲಿ ತಾಯಿಯ ಪ್ರಪಂಚವನ್ನು ಅನುಭವಿಸಿ ವಿಹರಿಸಿ, ವ್ಯಕ್ತಿತ್ವವನ್ನು ಬೆಳೆಸಿಕೊಂಡವನಾದರೂ, ಅದೇ ಪ್ರಪಂಚದ ನರಕವನ್ನು, ತನ್ನ ತಾಯಿಯ ಉಸಿರುಗಟ್ಟಿಸುವ ಪ್ರೀತಿಯನ್ನು ಕಂಡು ಬಂಡೆದ್ದವನು, ವೈಚಾರಿಕನಾದವನು. ತನ್ನ ವೈಚಾರಿಕತೆಯಿಂದ ತನ್ನ ಸೃಜನಶೀಲತೆಗೆ ಕ್ರಮೇಣ ದೂರವಾಗುತ್ತಾ, ಆಧುನಿಕ ಪ್ರಪಂಚದಲ್ಲಿ alienationಗೆ ಒಳಗಾದವನು. ತಾಯಿಯಿಂದ ಒಂದಿಷ್ಟು ದೂರ ಗಳಿಸಿಕೊಂಡ ನಂತರ ತಾಯಿಯ ಸೃಜನಶೀಲತೆಯನ್ನು ಗ್ರಹಿಸಿದವನು. ವೈಚಾರಿಕತೆಯ ಹಾದಿಯಲ್ಲಿ ದೊಡ್ಡ ದೊಡ್ಡ ಗೋಡೆಗಳನ್ನು ಕಂಡವನು. ಆ ಗೋಡೆಗಳ ಮಧ್ಯೆ ರೌರವ ನರಕಗಳಲ್ಲಿ ಬದುಕುತ್ತಿರುವ ಮನುಷ್ಯರನ್ನು ಕಂಡವನು. ತಾಯಿಯ ಸೃಜನಶೀಲತೆ ಜ್ಞಾಪಕಕ್ಕೆ ತಂದುಕೊಳ್ಳುವವನು. ಆದರೆ, ಅದನ್ನು ತನ್ನಲ್ಲೇ access ಮಾಡುವುದಕ್ಕೆ ಸಾಧ್ಯವಾಗದೇ ತೊಳಲಾಡುತ್ತಿರುವವನು. ಅವಳ ಭಂಗಿ, ಭಂಗಿಗಳಲ್ಲೂ, ಮಾತುಗಳಲ್ಲೂ ಜೀವಂತಿಕೆಯನ್ನು ಹಿಂದೆಂದೂ ಕಾಣದಷ್ಟು ಈಗ ಕಾಣುತ್ತಿರುವವನು. ಅನೇಕ ಬಗೆಯ ಬಿರುಕುಗಳನ್ನು ಅನುಭವಿಸುತ್ತಿರುವವನು. ಆಧುನಿಕ ವೈಚಾರಿಕ ಹಾದಿಯಲ್ಲಿ ಕಂಡ ಮನುಷ್ಯನ ಅಧಃಪತನಕ್ಕೆ ದಿಗ್ಭ್ರಾಂತನಾಗಿ ನಿಂತವನು. ತನ್ನ ಕೈಯಲ್ಲೇನೂ ಸಾಧ್ಯವಾಗದ ಅಸಹಾಯಕತೆಯಿಂದ ಕೀಳರಿಮೆ ಬೆಳೆಸಿಕೊಂಡವನು. ಈತನಿಗೆ ಎಲ್ಲವೂ ಅರ್ಥವಾಗುತ್ತದೆ, ಆದರೆ ಏನೂ ಮಾಡಲಾರ. ಸದಾ ಅಪರಾಧಿಭಾವದಲ್ಲಿ ತೊಳಲಾಡುವವನು. ತಾನು ಕಂಡ ಸತ್ಯಗಳಿಂದ ಇವನ ಜೀವಂತಿಕೆಗೆ ಅದೆಷ್ಟು ಪೆಟ್ಟು ಬಿದ್ದಿದೆಯೆಂದರೆ ಇವನಿಗೆ ಪಶ್ಚಾತ್ತಾಪವೂ ಸಾಧ್ಯವಿಲ್ಲ. ಈತ ವಾಲ್ಟರ ಬೆಂಜಮಿನ್‌ನಂಥವನು.

ಈ ತಾಯಿಯನ್ನು ಒಳಗೊಂಡು, ಆಧುನಿಕತೆಯನ್ನೂ ಅರಗಿಸಿಕೊಳ್ಳುವ ಪ್ರಕ್ರಿಯೆಗೆ ತಮ್ಮನ್ನು ಒಡ್ಡಿಕೊಂಡಿದ್ದ ಬೇಂದ್ರೆಗೆ ‘ಮೊದಲಗಿತ್ತಿ' ಪದ್ಯ ಸಾಧ್ಯವಾಗುತ್ತದೆ. ಈಕೆಯ ಮಗ- ವೈಚಾರಿಕತೆ ಮತ್ತು ಪರಂಪರೆಯನ್ನು ನಿರ್ವಹಿಸುವ ಅವನ ಪ್ರಯತ್ನಗಳ ಮೇಲೆ ಮತ್ತು ಅವನ ಜೀವನದ ಅನುಭವಗಳು ಅದೆಷ್ಟು ತೀವ್ರವಾಗಿರುತ್ತವೆ ಎನ್ನುವುದರ ಮೇಲೆ-ಅವನು ಅಡಿಗರ ಪರಂಪರೆಗೆ ಸಲ್ಲುತ್ತಾನೋ, ವಾಲ್ಟರ ಬೆಂಜಮಿನ್‌ನ ಪರಂಪರೆಗೆ ಸಲ್ಲುತ್ತಾನೋ ಎನ್ನುವುದು ಪ್ರಾಯಶಃ ನಿರ್ಧಾರವಾಗುತ್ತದೆ.

ಆದರೆ ಈ ತಾಯಿ ಅದೆಷ್ಟು ಕೌಟುಂಬಿಕ ಮತ್ತು ಸಾಮಾಜಿಕ ಒತ್ತಡಗಳನ್ನು ತನ್ನ ಅಭಿಜಾತ ಪ್ರತಿಭೆಯಿಂದಲೇ ಎದುರಿಸಬಲ್ಲಳು ಎನ್ನುವುದನ್ನು ಹೇಳಲಾಗುವುದಿಲ್ಲ. ಅವಳಷ್ಟೆಯೇ ಪ್ರತಿಭಾನ್ವಿತರಾದ ಅವಳ ಸಂಬಂಧಿಕರನೇಕ ಸ್ತ್ರೀಯರ ಜೀವನ ನಿರ್ನಾಮವಾಗಿ ಹೋಗಿದೆ. ಅವಳ ಓರಗೆಯ ಯಾರ ಮನೆಯಲ್ಲೂ ಈ ಮಗನ ಹಾಗೆ ವೈಚಾರಿಕರಿಲ್ಲ. ಅವನ ವೈಚಾರಿಕತೆ ತಾಯಿಯಿಂದ ಪೋಷಿತವಾದ್ದಲ್ಲ, ತಂದೆಯಿಂದ ದೊರೆತ ಸ್ವಾತಂತ್ರ್ಯದ ಪರಿಣಾಮ. ಬೆಂಜಮಿನ್‌ನನ್ನು ಸದಾ ಅನುಭವಿಸುವ ಈತ ತನ್ನ ಆವರಣದಲ್ಲಿ ಬೇಂದ್ರೆ, ಅಡಿಗರನ್ನು ಕಂಡರೆ ಗುರುತಿಸಬಲ್ಲವನು. ಅವಳೆದುರಿಸುತ್ತಿರುವ ಈ ಎಲ್ಲ ಒತ್ತಡಗಳನ್ನೂ, ಸ್ವತಃ ತನ್ನಿಂದಲೇ ನಡೆಯುವ ದೌರ್ಜನ್ಯಗಳನ್ನೂ ತಾಯಿಗಿಂತ ಹೆಚ್ಚಾಗಿ ಶೋಧಿಸಿಕೊಂಡು ಅರಿತಿರುವವನು ಈ ಮಗ. ಆ ಕಾರಣಕ್ಕಾಗೇ ತನ್ನ ಸುತ್ತಣ ಆವರಣದಲ್ಲಿ ಒಂದು ವಿಶಿಷ್ಟ ಪರಿಸರಕ್ಕೆ ಕಾರಣನಾದವನು. ಆದ್ದರಿಂದ ತಾಯಿಯ ಪಾರಂಪರಿಕ ಸೃಜನಶೀಲತೆ ಮಗನ ವೈಚಾರಿಕತೆಯಿಂದಲೇ ಸಂರಕ್ಷಣೆಗೊಂಡು, ಪೋಷಣೆಗೆ ಒಳಪಡುತ್ತಿರುವುದು ಸಾಧ್ಯವಿದೆ.

ಈ ಸಂಕೀರ್ಣ ಪ್ರಕ್ರಿಯೆಯ ಒಂದು ದಿಕ್ಕಿನ ಅತಿರೇಕದ ಹಂತದಲ್ಲಾಗಬಹುದಾದ ವಾಲ್ಟರ ಬೆಂಜಮಿನ್ನನ ಆತ್ಮಹತ್ಯೆಯು- ಮುಂದಣ ಬೇಂದ್ರೆ, ಅಡಿಗರನ್ನು ಸಂರಕ್ಷಿಸುವುದಕ್ಕೆ ಪೂರಕವಾದ ಕ್ರಿಯೆಯಾಗಿ, ಒಂದು ಪ್ರತಿಮೆಯಾಗಿ ನನಗೆ ಕಾಣುತ್ತಿದೆ. ಇದು ಮತ್ತೊಂದು ಬಗೆಯ ಕೆರೆಗೆ ಹಾರ. ಮತ್ತೊಂದು ದಿಕ್ಕಿನಲ್ಲಿ ಇದನ್ನು ವಿಸ್ತರಿಸಿ-ಭೂಮಿ ತಾಯಿಯ ಮೂರು ಮಕ್ಕಳಾಗಿ ಬೇಂದ್ರೆ, ಬೆಂಜಮಿನ್‌ ಮತ್ತು ಅಡಿಗರನ್ನು ಪರಿಗಣಿಸಿ ನೋಡುವುದಾದರೆ-ಬೇಂದ್ರೆಯವರು ಬರೆಯಬಹುದಾದ ಕವನ ಅಥವಾ ಅದೇ ಪ್ರತಿಭೆಯ ಕಥೆಗಾರ ಬರೆಯಬಹುದಾಗಿದ್ದ ಕಥೆ ಯಾವ ತರಹದ್ದು ಎನ್ನುವುದನ್ನು ಕಲ್ಪಿಸಲೆತ್ನಿಸುತ್ತಿದ್ದೇನೆ.
ಮುಂದುವರೆಯುತ್ತದೆ...

Saturday, December 23, 2006

ಟೀಪೂ ವಿವಾದದ ಒಳಸುಳಿಗಳಲ್ಲಿ: ಭಾಗ ೩

[ವಿವಾದಗಳ ಕುರಿತು ಪ್ರತಿಕ್ರಿಯಿಸುವುದೇ ಒಂದು ಅಭ್ಯಾಸವಾಗಿಬಿಡಬಾರದೆಂದು ನಾನು ಇಂತಹ ಬರಹಗಳು ಸ್ವಲ್ಪ ದಿವಸ ಬೇಡ ಎನ್ನುವ ನಿಲುವು ತಳೆದಿದ್ದೆ. ಆದರೆ, ಈ ಟೀಪುವಿನ ಕುರಿತಾದ ವಿವಾದ ನಿದ್ದೆಗೆಡಿಸಿದೆ. ಪ್ರತಿಕ್ರಿಯಿಸದೇ ಇರುವುದು ಸಾಧ್ಯವಿಲ್ಲ ಎನ್ನುವ ಒಂದು ಕಾರಣ ನನ್ನ ಬಳಿಯಿದೆ. ಲೇಖನ-ತ್ರಯಗಳನ್ನು ಓದುತ್ತಾ ಹೋದಹಾಗೆ ತಿಳಿಯುತ್ತದೆ. ಮೊದಲನೇಯ ಲೇಖನ ಈ ವಿವಾದದ ಕುರಿತು ಮಾತನಾಡಿರುವ ಮಹನೀಯರು, ಸಂಘಸಂಸ್ಥೆಗಳ ಹೇಳಿಕೆಗಳನ್ನು, ನಿಲುವುಗಳನ್ನು ಸಂಗ್ರಹವಾಗಿ ಒಂದೆಡೆ ಒದಗಿಸುವ ಪ್ರಯತ್ನ ಮಾಡುತ್ತದೆ. ನನ್ನ ಅಭಿಪ್ರಾಯಗಳನ್ನು ಓದುವವರಿಗೆ ಈ ಪೂರಕ ಓದಿನ ಅವಶ್ಯಕತೆಯಿದೆ. ಎರಡನೇಯ ಲೇಖನ, ಅಲ್ಲಿನ ಕೆಲ ಅಭಿಪ್ರಾಯಗಳಿಗೆ ನನ್ನ ಪ್ರತಿಸ್ಪಂದನೆಗಳು ಹಾಗೂ ನನ್ನ ಸ್ವಂತ ಅಭಿಪ್ರಾಯವನ್ನು ಹೇಳುತ್ತದೆ. ಮೂರನೇಯ ಲೇಖನ ಇಂತಹ ವಿವಾದಗಳನ್ನು ನಿರ್ವಹಿಸಬಹುದಾದ ರೀತಿಯ ಕುರಿತು ಚಿಂತಿಸುತ್ತದೆ. ಈ ಲೇಖನ-ತ್ರಯಗಳನ್ನು ಅಪಾರ ವಿಷಾದದಿಂದ ಬರೆಯುತ್ತಿದ್ದೇನೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲವೆಂದೆನ್ನಿಸುತ್ತದೆ.]

ಮಾಲಿಕೆಯ ಮೊದಲ ಭಾಗ, ಎರಡನೇಯ ಭಾಗ:

ಮಾಲಿಕೆಯ ಕಡೆಯ ಭಾಗವಾದ ಈ ಲೇಖನದಲ್ಲಿ ಈ ವಿವಾದವನ್ನು ನನ್ನ ವೈಯಕ್ತಿಕ ಸಂದರ್ಭಗಳ ಮೂಲಕ ಅಂತರ್ಗತಗೊಳಿಸಿ ಶೋಧಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಹಾಗೆಯೇ ಈ ತೆರನಾದ ಬಿಕ್ಕಟ್ಟುಗಳನ್ನು ವೈಯಕ್ತಿಕವಾಗಿ ಹಾಗೂ ಸಾಮುದಾಯಿಕವಾಗಿ ಹೇಗೆ ನಿರ್ವಹಿಸಬಹುದು ಎಂದು ಆಲೋಚಿಸಲು ಪ್ರಯತ್ನಿಸಿದ್ದೇನೆ.

ಈ ಶತಮಾನದ ಬಹುಮುಖ್ಯ ಪ್ರಕ್ರಿಯೆ (ಈ ಪ್ರಕ್ರಿಯೆ ಇನ್ನೂ ಒಂದು ಸಮಸ್ಥಿತಿಗೆ ಬಂದಿಲ್ಲವೆನ್ನಿಸುತ್ತದೆ) ರಾಷ್ತ್ರ್‍ಈಯತೆಯಾಗಿದೆ. ಇನ್ನಿತರ ಮನುಷ್ಯಕಾಳಜಿಗಳೆಲ್ಲ ಕಡೆಗೆ ನಿರ್ವಹಿಸಲ್ಪಟ್ಟದ್ದು ಈ ಭಿತ್ತಿಯಲ್ಲೇ. ಇತ್ತೀಚಿನ ದೊಡ್ಡ ವಿದ್ಯಮಾನವೆಂದರೆ ಜಾಗತೀಕರಣ. ಈ ಎರಡೂ ಪ್ರಕ್ರಿಯೆಗಳನ್ನೂ ನಾವಿನ್ನೂ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ. ಈ ದೊಡ್ಡ ಪ್ರಕ್ರಿಯೆಗಳನ್ನು ತಮ್ಮ ತಮ್ಮ ರೀತಿಗಳಲ್ಲಿ ಗ್ರಹಿಸಿದ್ದೇವೆ ಎಂದು ನಂಬಿರುವ ಒಂದು ವರ್ಗ, ಇವುಗಳಾಚೆಯಲ್ಲಿ ಬದುಕುವ ಆದರೆ ಇದರ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗದ ವರ್ಗ - ಇವು ಎರಡು ತುದಿಗಳು. ನಮ್ಮ ಸಮಾಜ ಇದರ ಮಧ್ಯೆ ಬದುಕಿದೆ. ಇದರಲ್ಲಿ, ಈ ಪ್ರಕ್ರಿಯೆಗಳಿಂದುಂಟಾಗಿರುವ ವಿಕಾರ, ಬಿರುಕುಗಳನ್ನು ಎಚ್ಚರದಿಂದ ಗ್ರಹಿಸುವ ಬೌದ್ಧಿಕತೆಯುಳ್ಳ ಸಮಾಜವಿದೆ. ಆದರೆ ಬಿರುಕುಗಳು ವಿಕಾರಗಳು ಮಾತ್ರ ನಿಜ ಮತ್ತು ಎಲ್ಲರ ಪ್ರಯತ್ನಗಳನ್ನೂ ಮೀರಿ, ಕೆಲವೊಮ್ಮೆ ಅಂತ ಪ್ರಯತ್ನಗಳಿಂದಲೇ ಉಳಿದಿವೆ, ಆಗಾಗ್ಗೆ ಬೆಳೆದಿವೆ. ಬೃಹತ್ ಪ್ರಕ್ರಿಯೆಗಳನ್ನು ನಿರ್ವಹಿಸಲೆತ್ನಿಸಿದವರು ಬಲಪಂಥೀಯರಾಗಿ, ಎಡಪಂಥೀಯರಾಗಿ, ಸಮಾಜವಾದಿಗಳಾಗಿ ಒಡೆದಿದ್ದಾರೆ. ಈ ಪ್ರಕ್ರಿಯೆಯನ್ನು ನಿರ್ವಹಿಸಲೆತ್ನಿಸದೇ ತಮ್ಮ ಆವಣಗಳಲ್ಲೇ ಬದುಕುತ್ತಿರುವ, ಆದರೆ ಆ ಪ್ರಕ್ರಿಯೆಯ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿರುವ ಆದರೆ ಸಾಧ್ಯವಾಗದಿರುವ ಸಮಾಜವೂ ಇದೆ. (ಒಟ್ಟು ಸಮಾಜವನ್ನು, ಬದುಕನ್ನು ಹೆಚ್ಚು ಆಳದಲ್ಲಿ ಶೋಧಿಸಿರುವುದು ಸಮಾಜವಾದಿಗಳೇ ಎನ್ನುವ ನನ್ನ ನಿಲುವನ್ನು ಸದ್ಯಕ್ಕೆ ಬದಿಗಿರಿಸುತ್ತೇನೆ). ಹೀಗೆ ಬಲಪಂಥೀಯರಾಗಲಿ, ಎಡಪಂಥೀಯರಾಗಲಿ, ಗಾಂಧಿವಾದಿಗಳಾಗಲಿ ಇಡೀ ಸಮಾಜವನ್ನು ಒಳಗೊಳ್ಳಲಾಗದಿದ್ದುದರಿಂದ ತಮ್ಮ ತಮ್ಮ ಕ್ರಿಯೆಗಳಿಂದ ಒಟ್ಟು ಸಮಾಜದ ಕೆಲವರ್ಗಗಳಲ್ಲಿಯಾದರೂ ಆಗಾಗ್ಗೆ ಅಸ್ಥಿರ ಭಾವವನ್ನುಂಟುಮಾಡುತ್ತಿರುತ್ತಾರೆ. ಕೆಲವೊಮ್ಮೆ ತಮ್ಮ ಆಶಯಕ್ಕೆ ವಿರುದ್ಧವಾದ ಪರಿಣಾಮವನ್ನು ಗಳಿಸುತ್ತಾರೆ. ಹಾಗಾದಾಗಲೆಲ್ಲಾ ಈ ಬೃಹತ್ ಪ್ರಕ್ರಿಯೆಗಳನ್ನು ನಿರ್ವಹಿಸದಿರುವ ಜನರೂ ಸಹ ಅದನ್ನು ನಿರ್ವಹಿಸುವ ಅನಿವಾರ್ಯತೆಗೊಳಗಾಗಿ ಎಡಪಂಥೀಯರೋ, ಬಲಪಂಥೀಯರೋ ಆಗುತ್ತಾರೆ. ಮತ್ತು ಅವುಗಳಲ್ಲಿ ಅತಿಗೂ ಇಳಿಯುತ್ತಾರೆ.

ನಮ್ಮೀ ಉದಾಹರಣೆಗೆ ಬರುವುದಾದರೆ, ನಮ್ಮಲ್ಲಿ ಬಲಪಂಥೀಯರು ಸದಾ ಕೇಳುವ ಪ್ರಶ್ನೆಯೊಂದಿದೆ. ಯಾರನ್ನು ಅಳೆಯುವಾಗಲೂ ಒಂದೇ ಮಾನದಂಡವಿರಬೇಕು. ಹಿಂದೂ ರಾಜರ ಅತ್ಯಾಚಾರ ಮತಾಂಧತೆ ಎಂದು ಕರೆಯುವುದಾದರೆ ಮುಸಲ್ಮಾನರ ರಾಜರದ್ದೂ ಹಾಗೆಯೇ ಕರೆಯಬೇಕು. ಮತ್ತು ಅದನ್ನು ಖಂಡಿಸಬೇಕು. ಅದು ಹಾಗಲ್ಲವಾದರೆ ಅದನ್ನು ಅಪಾರವಾದ ಎಚ್ಚರದಿಂದ ವಿವರಿಸಬೇಕು, ನಿರ್ವಹಿಸಬೇಕು. ರಾಷ್ಟ್ರೀಯತೆಯ ಕಾರಣದಿಂದ ನಾವೆಲ್ಲರೂ ಈ ಸಮಸ್ಯೆಗಳನ್ನೆದಿರಿಸುತ್ತಿದ್ದೇವೆ. ಹೆಚ್ಚು ನೇರವಾಗಿ ಹೇಳುವುದಾದರೆ, ಟೀಪೂ ಮಿಕ್ಕೆಲ್ಲ ವಿಷಯಗಳಲ್ಲಿ ಅನೇಕ ರಾಜರಿಗಿಂತ ಆಕರ್ಷಕವಾದ, ಪ್ರಗತಿಪರವಾದ ವ್ಯಕ್ತಿತ್ವವನ್ನು ಹೊಂದಿರುವುದನ್ನು ನಾವು ಹೊಗಳುವಾಗ, ಅವನ ವ್ಯಕ್ತಿತ್ವದ ಓರೆಕೋರೆಗಳನ್ನು ಟೀಕಿಸಲು ಹಿಂಜರೆಯಬೇಕಾದ ಅವಶ್ಯಕತೆಯಿಲ್ಲ. ಆ ಕಾರಣದಿಂದ ಅವನು ಶ್ರೇಷ್ಠ ರಾಜ ಎಂದು ಸಾರಲಾಗದೇ ಹೋದರೆ, ಅದು ಹಾಗೆಯೇ ಸರಿ. ಬಲಪಂಥೀಯರಿಗೆ ಹೆದರಿಕೊಂಡು ಟೀಪೂವಿನ ಅತಿಸಮರ್ಥನೆಗೆ ತೊಡಗಿದರೆ, ನಮ್ಮ ಉದ್ದೇಶಕ್ಕೆ ವ್ಯತಿರಿಕ್ತವಾದ ಪರಿಣಾಮವೇ ಉಂಟಾಗುವುದು. ನಾನು ಹೆಸರಿಸಿದ ಬೃಹತ್ ಪ್ರಕ್ರಿಯೆಗಳ ಹೊರಗಿರುವವರಲ್ಲಿ ಕೂಡಾ ಇದು ಅಸ್ಥಿರ ಭಾವವನ್ನುಂಟುಮಾಡುತ್ತದೆ, ಅಂಥವರು ತತ್ಕ್ಷಣದ ಬಲಪಂಥೀಯರಾಗುತ್ತಾರೆ ಮತ್ತು ಅದಕ್ಕೆ ಎಡಪಂಥೀಯರೇ ದಾರಿಮಾಡಿಕೊಟ್ಟಂತಾಗುತ್ತದೆ.

ಈ ನಿರ್ವಹಣೆಯಲ್ಲಿರುವ ಮತ್ತೊಂದು ಸೂಕ್ಷ್ಮವೆಂದರೆ ತೀವ್ರವಾದವನ್ನು, ಅತಿರೇಕವನ್ನು ಎದುರಿಸುವ ಬಗೆ. ಕನ್ನಡ ಪ್ರೇಮಿ-ವಿರೋಧಿ, ರಾಷ್ಟ್ರಪ್ರೇಮಿ-ರಾಷ್ಟ್ರವಿರೋಧಿ, ಪ್ರಗತಿಪರ-ಪ್ರತಿಗಾಮಿ, ಮತಾಂಧ-ಸೆಕ್ಯುಲರ್ ಮುಂತಾದ ಪರಿಕಲ್ಪನೆಗಳು ಕೂಡ ಬೃಹತ್ ಪ್ರಕ್ರಿಯೆಗಳ ಪರಿಣಾಮವೇ ಆಗಿದೆ. ಒಂದು ಚಿಕ್ಕ ಊರಿನ ಜನರನ್ನು ಈ ವಿಧದಲ್ಲಿ ವಿಂಗಡಿಸುವುದು ಕಷ್ಟ. ಆದ್ದರಿಂದಲೇ, ಬಹುತೇಕರು, ಈ ಪರಿಕಲ್ಪನೆಗಳ ಕುರಿತು ಮತ್ತು ಅದರ ಪರಿಣಾಮವಾಗಿರುವ ವಿವಾದಗಳ ಕುರಿತು ಒಂದು ಖಚಿತವಾದ ನಿಲುವು ತಳೆದಿರುವುದಿಲ್ಲ. ಅವರಿಗೆ ಮೊದಲಾಗಿ ಈ ವಿಷಯದಲ್ಲಿ ಆಸಕ್ತಿಯೇ ಇರುವುದಿಲ್ಲ. ಶಂಕರಮೂರ್ತಿ ಏನೋ ಹೇಳಿಕೆ ಕೊಡುತ್ತಿದ್ದರೆ ಸುಮ್ಮನಿದ್ದುಬಿಡುತ್ತಾರೆ. ಆದರೆ ಕಾರ್ನಾಡರು ಕಣಕ್ಕಿಳಿದ ತಕ್ಷಣ ಒಹೋ ಎನ್ನುತ್ತಾರೆ. ಮತ್ತೆ ಚಿಮೂ, ಇತಿಹಾಸ ತಜ್ಞರು ಬಂದ ಮೇಲೆ ಎದ್ದು ನಿಲ್ಲುತ್ತಾರೆ. ಯಾಕೆಂದರೆ ಈ ಸಾರ್ವಜನಿಕ ಚರ್ಚೆಗಳು ಅವರ ಆವರಣದ ಮತ್ಯಾವುದೋ ಅಸ್ಥಿರಭಾವದ ಜೊತೆ ಸಂಬಂಧ ಕಲ್ಪಿಸುತ್ತದೆ. ಯಾರ ವಾದ ಯಾವ ಅಸ್ಥಿರಭಾವಗಳಿಗೆ ನೀರೆರೆಯುತ್ತದೆ ಎನ್ನುವುದರ ಮೇಲೆ ಯಾವ ಬೃಹತ್ ಪ್ರಕ್ರಿಯೆಯ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ ಎನ್ನುವುದು ನಿಂತಿರುತ್ತದೆ.

ಇದಕ್ಕೆ ನನ್ನ ವೈಯಕ್ತಿಕ ಅನುಭವದಿಂದ ಒಂದು ನಿದರ್ಶನ ಕೊಡುತ್ತೇನೆ. ಈ ಹಿಂದೆ ನಮ್ಮ ಸಂಬಂಧಿಗಳೊಬ್ಬರು ಮಾತು-ಮಾತಿಗೆ ಬಂದು ವಿ.ಪಿ.ಸಿಂಘ್ ಮತ್ತಿತರರನ್ನು ಜರೆದು ಅವರನ್ನೆಲ್ಲಾ ಸೂಡೋ-ಸೆಕ್ಯುಲರಿಸ್ಟ್ ಎಂದು ಟೀಕಿಸಿದರು. ನೆರೆದಿದ್ದವರು ಅವರ ಜೊತೆ ತಲೆಯಾಡಿಸಿದರು. ಏಕೆಂದರೆ ಮಿಕ್ಕವರ ಯಾವುದೋ ಅಸ್ಥಿರ ಭಾವಕ್ಕೆ ಆ ಮನುಷ್ಯ ನೀರೆರೆದಿದ್ದರು. ನಾನು ತಣ್ಣಗೆ ಯಾಕೆ ವಿ.ಪಿ.ಸಿಂಘ್ ಮತ್ತಿತರರು ಸಮರ್ಥನೀಯರೆಂದು ನನ್ನ ಅಭಿಪ್ರಾಯಗಳನ್ನು ಮುಂದಿಟ್ಟಾಗ ಮಿಕ್ಕವರೆಲ್ಲರೂ ಇರಬಹುದು ಎಂದರು. ಮಾತಿಗೆ ಮೊದಲು ತೊಡಗಿದ್ದ ನನ್ನ ಸಂಬಂಧಿಯನ್ನು ನಾನು ಬದಲಾಯಿಸಲಾಗಲಿಲ್ಲ. ಮಿಕ್ಕವರು ಮಾತ್ರ ನನ್ನ ವಾದವನ್ನು ಅರ್ಥಮಾಡಿಕೊಂಡರು. ಆದರೆ ನಾನೇದರೂ ಆ ನನ್ನ ಸಂಬಂಧಿಯನ್ನು ಕೋಪದಿಂದ ಎದುರಾಗಿದ್ದರೆ ನನ್ನ ಮಿಕ್ಕ ಸಂಬಂಧಿಗಳು ಅವರತ್ತಲೇ ವಾಲುತ್ತಿದ್ದುದು ಖಚಿತ. ಏಕೆಂದರೆ ನನ್ನ ಕೋಪ ಅವರ ಅಸ್ಥಿರ ಭಾವವನ್ನು ಹೆಚ್ಚಿಸುತ್ತಿದ್ದಿತು.

ಇದೇ ಬಗೆಯ, ನಾನೆಂದಿಗೂ ಮರೆಯಲಾಗದ ಮತ್ತೊಂದು ನಿದರ್ಶನ ಕೊಡುತ್ತೇನೆ. ಹೈಸ್ಕೂಲಿನ ಮೊದಲನೇಯ ವರ್ಷದಲ್ಲಿ ನಾನೊಂದು ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ವಿಷಯದ ಕಡೆಯಲ್ಲಿ ಸಂದರ್ಭಕ್ಕೆ ಪೂರಕ ಎಂಬ ನನ್ನ ಮುಗ್ಧ-ಹುಂಬ ಹುಮ್ಮಸ್ಸಿನಲ್ಲಿ 'ನಾವೆಲ್ಲ ಹಿಂದು ನಾವೆಲ್ಲ ಒಂದು ನಾವೆಲ್ಲ ಬಂಧು' ಎನ್ನುವ ಸ್ಲೋಗನ್ನೊಂದನ್ನು ಸ್ವಲ್ಪ ತಣ್ಣನೆಯ ಧ್ವನಿಯಲ್ಲಿಯೇ ಹೇಳಿ ಮಾತುಗಳನ್ನು ಮುಗಿಸಿದ್ದೆ. ಫಲಿತಾಂಶ ಹೊರಬಿದ್ದಾಗ ನನಗೆ ಎರಡನೇಯ ಬಹುಮಾನ ದೊರೆತಿತ್ತು. ತೀರ್ಪುಗಾರರ ಪರವಾಗಿ ಮಾತನಾಡಿದ ಎಳೆಯ ವಯಸ್ಸಿನವರೊಬ್ಬರು (ಇವರು ಅಲ್ಲಿನ ಪ್ರಗತಿಪರ ವಿಚಾರಧಾರೆಯ ಸಂಘಟನೆಯೊಂದರ ನೇತಾರರಾಗಿದ್ದರು) ನನ್ನ ಮಾತುಗಳನ್ನು ಮೆಚ್ಚುತ್ತಾ ನನ್ನ ಸ್ಲೋಗನ್ನು ತೀವ್ರವಾಗಿ ಟೀಕಿಸಿ ಈ ದೇಶದಲ್ಲಿ ಹಿಂದೂಗಳಲ್ಲದವರೂ ಬದುಕಿದ್ದಾರೆ ಎನ್ನುವುದನ್ನು ಮರೆಯಲಾಗದು ಎಂದರು. ೧೮ ವರ್ಷಗಳ ನಂತರವೂ ನನಗೀ ಮಾತುಗಳನ್ನು ಮರೆಯಲಾಗಿಲ್ಲ. ಆ ಹೊತ್ತು ನಾನು ಆ ಸ್ಲೋಗನ್ನನ್ನು ಏಕೆ ಬಳಸಿದೆನೆಂಬುದಕ್ಕೆ ವಿಶೇಷವಾದ ಕಾರಣವಿರಲಿಲ್ಲ. ಅದಿಲ್ಲದಿದ್ದರೂ ಆ ವಯಸ್ಸಿಗೆ ನನ್ನ ಮಾತುಗಾರಿಕೆ ಚೆನ್ನಾಗಿತ್ತು ಎಂದೆನ್ನಿಸುತ್ತದೆ. ಅಲ್ಲದೆ, ಆ ತೀವ್ರವಾದಕ್ಕೆ ನನಗೇನೂ ದೀಕ್ಷೆಯಾಗಿರಲಿಲ್ಲ. ವ್ಯವಸ್ಥೆ ಗಾಳಿಯಲ್ಲಿ ತೂರಿಬಿಡುವ ವಿಚಾರಗಳನ್ನು ಮುಗ್ಧಮನಸ್ಸುಗಳು ಗೊತ್ತಿಲ್ಲದಂತೆ ಉಸಿರಾಡುತ್ತಿರುತ್ತವೆ. ಆದರೆ ಇಲ್ಲಿ ಮುಖ್ಯವೆಂದರೆ, ನನ್ನ ಸ್ಲೋಗನ್ನನ್ನು ಟೀಕಿಸಿದ ವ್ಯಕ್ತಿ ನನ್ನ ಮಾತುಗಾರಿಕೆಯ ಇನ್ನಿತರ ಅಂಶಗಳನ್ನು ಮೆಚ್ಚಿ ನನಗೆ ಬಹುಮಾನ ಕೊಡುವುದರಲ್ಲಿ ಹಿಂದೆ ಮುಂದೆ ನೋಡದೇ ಇದ್ದದ್ದು. ಈ ಸೌಮ್ಯವಾದ ನನ್ನನ್ನು ಈ ಕುರಿತು ಆಲೋಚಿಸುವಂತೆ ಪ್ರೇರೇಪಿಸಿತು. ಹಾಗಾಗದೇ ಅದೇ ಕಾರಣಕ್ಕೆ ನನಗೆ ಬಹುಮಾನ ದೊರೆಯದೇ ಹೋಗಿದ್ದ ಪಕ್ಷದಲ್ಲಿ ನಾನು ತೀವ್ರಪಂಥದ ಹಾದಿಯಲ್ಲೇನಾದರೂ ಮುನ್ನಡೆಯುತ್ತಿದ್ದೇನೆ? ಇದಕ್ಕೆ ನನ್ನಲ್ಲಿ ಉತ್ತರವಿಲ್ಲವಾದರೂ, ಅಪಾಯವಂತೂ ಇದ್ದೇ ಇತ್ತು.

ಹೀಗೆ ಚಿಕ್ಕದಾದ ರೀತಿಗಳಲ್ಲಿ ಯಾವ ದೊಡ್ಡ ಪ್ರತಿಭಟನೆಗೂ ಇಳಿಯದೇ ನಮ್ಮ ನಮ್ಮ ವಲಯಗಳಲ್ಲಿ ಪ್ರಾಮಾಣಿಕ ಮಾತುಗಳಿಂದ, ಪ್ರೀತಿಯಿಂದ ಪ್ರಭಾವ ಬೀರುತ್ತಿದ್ದೇವೆ (ಎನ್ನುವ ಕನಿಷ್ಠ ಭ್ರಮೆಯಲ್ಲಾದರೂ ಬದುಕಿದ್ದ) ನನ್ನಂಥವರ ಪರಿಸ್ಥಿತಿ ಈಗ ಕಷ್ಟವಾಗಿದೆ. ಮೇಲೆ ಹೇಳಿದ ನನ್ನ ಸಂಬಂಧಿಗಳು 'ನೋಡಿದೆಯಾ ಹೇಗೆ ನಮ್ಮ ಭೈರಪ್ಪನವರು ನಿಮ್ಮ ಕಾರ್ನಾಡರ ನೀರಿಳಿಸಿದರು, ನಾಡಿಗರ ಲೇಖನ, ಶತಾವಧಾನಿಗಳು ಏನು ಬರೆದಿದ್ದಾರೆ, ಗೊತ್ತಾಯಿತೇ?' ಎಂದರು. ಮಿಕ್ಕವರು 'ಬೇಜಾರು ಮಾಡ್ಕೋಬೇಡಪ್ಪ, ಆದರೆ ಇವರೆಲ್ಲಾ ಬರೆದಿರೋದನ್ನು ನೋಡಿದರೆ ಭೈರಪ್ಪನವರು ಹೇಳುತ್ತಿರುವುದು ಸರಿ ಎನ್ನಿಸುತ್ತೆ' ಎಂದರು. ನನಗೆ ಮಾತೇ ಹೊರಡಲಿಲ್ಲ. ನನಗೆ ನಿಜಕ್ಕೂ ಬೇಜಾರಾಗಿತ್ತು. ನನ್ನ ಯಾವ ವಿವರಣೆಗಳಿಗೂ ನನ್ನ ಸಂಬಂಧಿಯಲ್ಲಿ ಕಾರ್ನಾಡ್ ಮತ್ತಿರರು ಎಸಗಿದ ಪ್ರಮಾದಗಳನ್ನಾಧರಿಸಿದ ಮೂದಲಿಕೆ ತಯಾರಾಗಿತ್ತು.

ಇದರಿಂದ ಕಾರ್ನಾಡರ ಪ್ರತಿಷ್ಠೆ ಹಾಳಾಗುತ್ತದೆಯೋ ಇಲ್ಲವೋ ಮುಖ್ಯವಲ್ಲ. ಆದರೆ ಬಹುಕಾರಣಗಳಿಂದ ಅಸ್ಥಿರಭಾವವನ್ನೆದಿರುಸುತ್ತಿರುವ ಜನರ ವಿಷಯದಲ್ಲಿ ಇದು ದುಷ್ಪರಿಣಾಮವನ್ನುಂಟು ಮಾಡುತ್ತದೆ. ಅವರಿಗೆ ಭೈರಪ್ಪ, ಚಿಮೂರ ತಣ್ಣನೆಯ ಅಕ್ಯಾಡಮಿಕ್ ವಿವರಗಳು ಕಾರ್ನಾಡರ ಪ್ರಕೋಪಕ್ಕಿಂತ ಹೆಚ್ಚು ತಟ್ಟುತ್ತವೆ. ಈ ಮೊದಲು ಯಾವುದೇ ತೀವ್ರವಾದ ನಂಬಿಕೆಗಳಿಲ್ಲದವರು ಈಗೀಗ ಹೆಚ್ಚು ತೀವ್ರವಾದ ನಿಲುವುಗಳತ್ತ ಸಾಗುವುದನ್ನು ನೋಡಿದ್ದೇನೆ. ಈ ಪ್ರಕ್ರಿಯೆಗೆ ಕಾರ್ನಾಡರ ಇಂತಹ ಪ್ರತಿಕ್ರಿಯೆಗಳು ಹೆಚ್ಚು ಚಾಲನೆ ನೀಡುತ್ತದೆ. ಬಲಪಂಥೀಯರಿಗೆ ಎಚ್ಚರದ ಅವಶ್ಯಕತೆ ಚೆನ್ನಾಗಿ ಮನಗಂಡಿದೆ. ಅದನ್ನು ವಿರೋಧಿಸುವವರಿಗೆ ಅದಿಲ್ಲವಾಗಿದೆ. ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಂತಾಗಿದೆ ಕಾರ್ನಾಡರ ಸ್ಥಿತಿ, ನಮ್ಮನ್ನೂ ಬೀಳಿಸುತ್ತಿದ್ದಾರೆ.

ನಮ್ಮ ಪ್ರಗತಿಪರರಿಗೆ ಕೆಲವು ಎಚ್ಚರಗಳು, ಆಶಾವಾದ ಇರಬೇಕಾಗುತ್ತದೆ. ನಿದರ್ಶನವಾಗಿ ಈ ಪ್ರಸಂಗ. ನಮ್ಮ ಪರಿಚಯದ ಮನೆಯೊಬ್ಬರಲ್ಲಿ ಹೀಗಾಯಿತು. ಮನೆಯೊಡತಿ ತರಕಾರಿ ಹೆಚ್ಚುತ್ತಾ, ದೇವರನಾಮಗಳನ್ನು ಹೇಳುತ್ತಾ ಮಗ್ನರಾಗಿದ್ದರು. ಮನೆಯ ಯಜಮಾನರು ಟಿವಿಯಲ್ಲಿ ವಾರ್ತೆಗಳನ್ನು ನೋಡುತ್ತಾ, ವೃತ್ತಪತ್ರಿಕೆಗಳನ್ನೋದುತ್ತಿದ್ದರು. ಸಂಸಾರದ ಸ್ನೇಹಿತರೊಬ್ಬರ ಪ್ರವೇಶವಾಯಿತು. ಉಭಯಕುಶಲೋಪರಿಯಾದ ನಂತರ ಚರ್ಚೆಯ ವ್ಯಸನದಲ್ಲಿ ಇದ್ದಕ್ಕಿದ್ದಂತೆ ಸುಭಾಶ್ ಚಂದ್ರ ಬೋಸ್, ನೆಹರೂರತ್ತ ಮಾತು ತಿರುಗಿತು. ಸ್ನೇಹಿತರು ನೆಹರೂರನ್ನು ವಾಚಾಮಗೋಚರವಾಗಿ ಬಯ್ಯುತ್ತಾ ಅವರಿಂದಲೇ ದೇಶ ಹಾಳಾದದ್ದು, ಸುಭಾಷ್ ಚಂದ್ರ ಬೋಸ್-ರ ಸಾವಿನ ರಹಸ್ಯ ಅವರಿಗೆ ತಿಳಿದಿರುವುದು ಇತ್ಯಾದಿ ಆರೋಪಗಳನ್ನು ಅವ್ಯಾಹತವಾಗಿ ಮಾಡತೊಡಗಿದರು. ಮನೆಯ ಯಜಮಾನರು 'ಹೌದು, ಅಲ್ಲವೆ' ಎನ್ನುತ್ತಾ ಅವರಿಗೆ ಸಾಥಿ ನೀಡುತ್ತಿದ್ದರು. ಇಷ್ಟುದ್ದ ಭಾಷಣದ ನಂತರ ಅನುಮೋದನೆಗಾಗಿ ಮನೆಯೊಡತಿಯತ್ತ ನೋಡಿದ ಸ್ನೇಹಿತರಿಗೆ ಒಡತಿ 'ಮೊಮ್ಮಕ್ಕಳೆಲ್ಲ ಹೇಗಿದ್ದಾರೆ?' ಎಂದು ಮುಗ್ಧವಾಗಿ ಒಂದಿಷ್ಟೂ ರಾಜಕೀಯವಿಲ್ಲದೆ, ದೇವರನಾಮದ ನಡುವೆ ತರಕಾರಿ ಹೆಚ್ಚುತ್ತಿರುವಂತೆಯೇ ವಿಚಾರಿಸಿಕೊಂದರು. ಅಪ್ರತಿಭರಾದ ಸ್ನೇಹಿತರು ೫-೬ ಕ್ಷಣಗಳ ದಿಗ್ಭ್ರಮೆಪೂರಿತ ಮೌನದ ನಂತರ 'ಎಲ್ಲಾ ಆರೋಗ್ಯ' ಎಂದರು. ಮಾತು ಮತ್ತೆ ನೆಹರೂ, ಬೋಸ್-ರತ್ತ ಚಲಿಸಲಿಲ್ಲ. ನಮ್ಮ ಜನರ ಈ ತೆರನಾದ ಶಕ್ತಿಯನ್ನು ಕಡೆಗಣಿಸಲಾಗದು. ಇದನ್ನು ಮರೆತು ಅತಿರೇಕಕ್ಕಿಳಿದರೆ, ನಮ್ಮ ಆಶಯಕ್ಕೆ ವ್ಯತಿರಿಕ್ತವಾಗಿ ಇಂತಹ ಮನೆಯೊಡತಿಯರೂ ಬದಲಾಗುತ್ತಾರೆ.

ನಾವು ಚಿಕ್ಕವರಾಗಿದ್ದಾಗ ನಮ್ಮ ಹತ್ತಿರದವರೊಬ್ಬರು ತೀವ್ರವಾದಿ ಸಂಘಟನೆಯೊಂದು ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದರು. ಭಾರತದ ಭೂಪಟದ ಹಿನ್ನೆಲೆಯಲ್ಲಿ ಭಾರತಮಾತೆಯ ಚಿತ್ರವಿರುವ ಫೋಟೋ. ಜೊತೆಗೆ ಸಂಘಟನೆಯ ಹೆಸರು ಕೂಡಾ ಎದ್ದುಕಾಣುವಂತೆ ಮುದ್ರಿತವಾಗಿತ್ತು. ಅದೀಗಲೂ ಅವರಿಗೆ ಹೆಮ್ಮೆಯ ಗಳಿಕೆಯಾಗಿದೆ. ದಿನವೂ ಪೂಜಿಸುತ್ತಾರೆ. ಆಗಸ್ಟ್ ೧೫, ಜನವರಿ ೨೬-ಕ್ಕೂ ಅದಕ್ಕೆ ಪೂಜೆ. ಕನ್ನಡ ರಾಜ್ಯೋತ್ಸವಕ್ಕೂ ಅದಕ್ಕೇ ಪೂಜೆ. ಕೇಳಿದರೆ 'ಕನ್ನಡಾಂಬೆ, ಭಾರತಾಂಬೆ, ಎರಡೂ ಒಂದೆ ಅಲ್ಲವೇನೋ' ಎನ್ನುವ ಉತ್ತರ. ಇದೇನು ಜಾರಿಕೊಳ್ಳುವ ಉತ್ತರವೋ, ಸೌಮ್ಯವಾದಿಗಳ ನಿಜತಾತ್ವಿಕ ಹೊಳಹೋ ಗೊತ್ತಾಗುವುದಿಲ್ಲ. ಆ ಸಂಘಟನೆಯ ಯಾವ ತೀವ್ರವಾದ ನಿಲುವೂ ಇವರಿಗೆ ಅರ್ಥವಾಗಿಲ್ಲ. ಆ ಕುರಿತು ತಲೆ ಕೆಡೆಸಿಕೊಂಡೇ ಇಲ್ಲ. ಅವರ ಮನೆಗೆ ಆಗಾಗ್ಗೆ ಹೋಗಬೇಕಾದ ಪ್ರಸಂಗ ಬರುತ್ತದೆಯಾದ್ದರಿಂದ ಆ ಫೋಟೋ ನೋಡಿದಾಗಲೆಲ್ಲಾ ನನಗೆ ಮುಜುಗರ. ಭಾರತಾಂಬೆಯಿರುವ ಬೇರೆ ಫೋಟೋ ತರುತ್ತೇನೆಯೆಂದರೂ ಅವರಿಗಾಗುವುದಿಲ್ಲ. ವಿಪರ್ಯಾಸವೆಂದರೆ, ನನ್ನೆಲ್ಲಾ ವಿಚಾರಗಳ ನಡುವೆ ನನಗೆ ಅವರ ರಂಗೋಲಿ ಸ್ಪರ್ಧೆಯ ಗಳಿಕೆಯ ಮಹತ್ವ ತಟ್ಟುತ್ತಿಲ್ಲ. ಅವರಿಗೆ ಮಾತ್ರ ಫೋಟೋ ಇಟ್ಟುಕೊಂಡೂ ಸಹ ಸಂಘಟನೆಯ ತೀವ್ರತೆ ತಟ್ಟಿಲ್ಲ. ಈ ಸಂದರ್ಭದಲ್ಲಿ ನನಗೆ ಎಸ್ ಮಂಜುನಾಥರ ಕವಿತೆಯೊಂದು ನೆನಪಾಗುತ್ತಿದೆ. ಆತಂಕಕಾರಿ ರಥವೊಂದು ಹಳ್ಳಿಯ ವಯಸ್ಸಾದ ಮುದುಕಿಯನ್ನು ತನ್ನೆಡೆಗೆ ಸೆಳೆದುಕೊಂಡುಬಿಡುತ್ತದೆಯೇನೋ ಎನ್ನುವ ಕಸಿವಿಸಿಯಲ್ಲಿರುವ ಕವಿ, ಮುದುಕಿ ಅದನ್ನು ನಿರ್ಲಕ್ಷಿಸಿ ತನ್ನ ಕಾರ್ಯದಲ್ಲಿ ಮಗ್ನವಾಗುವುದನ್ನೂ, ರಥ ಮುಂದೆ ಚಲಿಸಿದ್ದನ್ನೂ ಕಂಡು ನಿರುಮ್ಮಳನಾಗುತ್ತಾನೆ. ಈ ಆತ್ಮವಿಶ್ವಾಸದ ಅವಶ್ಯಕತೆಯೂ ನಮಗಿದೆ.

ನಮ್ಮ ಜನರ ಮೇಲಣ ಆತ್ಮವಿಶ್ವಾಸ ಒಂದು ಕಡೆಯಾದರೆ, ಈ ಕ್ಷಣಕ್ಕೆ ಮತ್ತೊಂದು ಆಯಾಮವಾಗಿ ನನಗೆ ರಾಜಾರಾಮ ಹೆಗಡೆಯವರ 'ಗತಕಥನ' ಪುಸ್ತಕ, ಇತಿಹಾಸವನ್ನು ವಿವರಿಸುವ ಅದರ ಮಾದರಿ ಹೆಚ್ಚು ಪ್ರಸ್ತುತ, ಅವಶ್ಯವೆನ್ನಿಸುತ್ತಿದೆ. ನಮ್ಮಲ್ಲಿ ಇತಿಹಾಸಗಳು ಬೆಳೆದು ಬಂದ ಬಗೆ ಅದಕ್ಕಿದ್ದ ತುರ್ತುಗಳು, ಅದಕ್ಕೆ ಒದಗಿದ ದ್ರವ್ಯಗಳು, ಅದರಿಂದಾದ ಪರಿಣಾಮ ಇವುಗಳನ್ನೆಲ್ಲಾ ಹೆಗಡೆಯವರು ವಿವರವಾಗಿ ಬಿಚ್ಚಿಟ್ಟಿದ್ದಾರೆ. 'ಗತಕಥನ' ಸಾಹಿತ್ಯದಲ್ಲಿ ಒಲವಿರುವ ಇತಿಹಾಸ ತಜ್ಞರಿಂದ ನಿರೀಕ್ಷಿಸಬಹುದಾದ ಒಂದು ಪುಸ್ತಕವಾಗಿದೆ. ಬ್ರಿಟಿಷರು, ಹಿಂದೂ ಬಲಪಂಥೀಯರು, ಮುಸಲ್ಮಾನ ಬಲಪಂಥೀಯರು, ಎಡಪಂಥೀಯರು - ಅವರಲ್ಲಿ ಕಮ್ಯುನಿಷ್ಟರು, ಹಿಂದುಳಿದ-ದಲಿತ ವರ್ಗಗಳು ಹೀಗೆ ಇವರೆಲ್ಲರ 'ಸದ್ಯ'ಗಳು ಯಾವ ರೀತಿಯಲ್ಲಿ ಇತಿಹಾಸಗಳ ನಿರ್ಮಾಣಕ್ಕೆ ದಾರಿಮಾಡಿಕೊಟ್ಟಿತು ಎನ್ನುವ ವಿವರಣೆಯಲ್ಲಿ, ಓದುಗನಿಗೆ ಇದೆಲ್ಲವನ್ನೂ ಮೀರಬೇಕಾದ ಅವಶ್ಯಕತೆ ಧ್ವನಿಸುತ್ತದೆ.

ಹೆಗಡೆಯವರು ತಮ್ಮ ಪುಸ್ತಕದಲ್ಲಿ ದೇವಚಂದ್ರನ ರಾಜಾವಳಿ ಕಥೆಯ ಕುರಿತು ಒಂದು ಸುದೀರ್ಘ ಪ್ರಬಂಧವನ್ನು ಬರೆದಿದ್ದಾರೆ. (ಹಂಪಿ ವಿಶ್ವವಿದ್ಯಾಲಯ ರಾಜಾವಳಿ ಕಥೆಯ ಬಗ್ಗೆ ಭಿನ್ನ ಚಿಂತಕರ ಬರಹಗಳಿರುವ ಒಂದು ಪುಸ್ತಕ ಪ್ರಕಟಿಸಿದೆ). ೧೮೨೦-ರ ಸುಮಾರು ಬರೆಯಲಾದ ರಾಜಾವಳಿ ಕಥೆಯ ಒಂದು ಅಚ್ಚರಿಯ ಅಂಶ ಹೀಗಿದೆ. ದೇವಚಂದ್ರನಿಗೆ ತನ್ನ ಕಾಲದ ತುರ್ತೆನ್ನುವುದು ಜೈನ ಮತಪ್ರಚಾರ ಮತ್ತು ಅದರ ಎದುರಾಳಿಗಳಾದ ವೈದಿಕ, ವೀರಶೈವ ಮತಗಳ ಖಂಡನೆ. ಆ ಕಾರಣಕ್ಕೆ ಮುಸಲ್ಮಾನರು ಅವನಿಗೆ ಮತ್ತೊಂದು ಜಾತಿ. ಅವನು ಸೃಷ್ಟಿಸಿರುವ ಇತಿಹಾಸ ಈ ಅಂಶವನ್ನೊಳಗೊಂಡಿದೆಯೇ ಹೊರತು ಹಿಂದೂ-ಮುಸಲ್ಮಾನ ಎನ್ನುವ ರಾಷ್ಟ್ರೀಯ ಚಳುವಳಿ ಕಾಲದ ಸಮಸ್ಯೆ ಅವನನ್ನು ಕಾಡಿಯೇ ಇಲ್ಲ. ಇದು ನಮ್ಮನ್ನು ಗಟ್ಟಿಯಾದ, ಏಕರೂಪಿಯಾದ, ಏಕಮುಖಿಯಾದ ಇತಿಹಾಸದ ಲೊಳಲೊಟ್ಟೆಯನ್ನು ಅರ್ಥಮಾಡಿಸುತ್ತದೆ. ಟೀಪೂ ಇತಿಹಾಸದ ಕುರಿತು ಬಲಪಂಥೀಯರು, ಎಡಪಂಥೀಯರೆಲ್ಲರೂ ಈ ಹಿನ್ನೆಲೆಯಲ್ಲಿ ಚಿಂತಿಸಬೇಕಿದೆ.

ಇದರ ಹಿನ್ನೆಲೆಯಲ್ಲಿ ಟೀಪು ಇತಿಹಾಸದ ಮರುಸೃಷ್ಟಿಯಾಗಬೇಕಿದೆ. ಟೀಪೂವನ್ನು ರಾಷ್ಟ್ರವೀರನನ್ನಾಗಿ ಎತ್ತಿಹಿಡಿದ ಇತಿಹಾಸ ಸೃಷ್ಟಿಯಾದ ಬಗೆ, ಅವನನ್ನು ಮತಾಂಧನೆಂದು ಜರೆದು ಅಂಚಿಗೆ ತಳ್ಳಬಯಸುವ ಇತಿಹಾಸ ನಿರ್ಮಾಣಕ್ಕೆ ಇರುವ ತುರ್ತು - ಇವುಗಳನ್ನು ತಣ್ಣನೆಯ ಧ್ವನಿಯಲ್ಲಿ, ಎಲ್ಲ ವಿವರಗಳಿಂದ ಬಿಚ್ಚಿಡಬೇಕಿದೆ. ನಮ್ಮ ಯಾವ ಸದ್ಯಗಳು ಟೀಪುವನ್ನು ನಿರ್ಮಿಸುತ್ತಿವೆ ಎನ್ನುವುದರ ಶೋಧನೆಯ ಮಾರ್ಗದಲ್ಲೇ, ಮತ್ಯಾವ ಸದ್ಯಗಳು ಟೀಪುವನ್ನು ನಮಗೆ ಆರೋಗ್ಯಕರವಾಗಿ ಕಟ್ಟಿಕೊಡಬಹುದು ಎನ್ನುವುದರ ಶೋಧದತ್ತ ನಡೆಯಬೇಕಾದ ಅವಶ್ಯಕತೆಯಿದೆ. ಇದೇ ಕಾರಣಗಳಿಗೆ ಎಸ್ ಚಂದ್ರಶೇಖರ್-ರ 'ಗಾಂಧಿ ಮತ್ತು ಅಂಬೇಡ್ಕರ್' ಪುಸ್ತಕಕ್ಕೆ ಕೆವಿಸುಬ್ಬಣ್ಣನವರ ಮುನ್ನುಡಿ ಕೂಡಾ ಇಲ್ಲಿ ಪ್ರಸ್ತುತವಾಗಿದೆ.

ಇದೀಗ ನಮ್ಮ ಇತಿಹಾಸತಜ್ಞರಾದ ರಾಜಾರಾಮ ಹೆಗಡೆ, ಚಂದ್ರಶೇಖರ್, ಶೆಟ್ಟರ್ ಮುಂತಾದವರು, ಹಂಪಿ ವಿಶ್ವವಿದ್ಯಾಲಯ - ಇವರೆಲ್ಲರೂ ಮಾಡಬಹುದಾದ ಒಂದು ಪ್ರಮುಖವಾದ ಕೆಲಸವಿದೆ. ಆಳವಾದ ತಯಾರಿಯಿಂದ ಯೋಜಿತವಾದ ಒಂದು ಸಂವಾದವನ್ನು ಟೀಪು ಕುರಿತು ಏರ್ಪಡಿಸಬೇಕಾಗಿದೆ. ಇದರಲ್ಲಿ ನಾಡಿನ ಎಲ್ಲ ಬಗೆಯ ಚಿಂತಕರು, ಎಡಪಂಥೀಯರು, ಬಲಪಂಥೀಯರು, ಇತಿಹಾಸ-ತಜ್ಞರು, ಜಾನಪದರು - ಹೀಗೆ ಅಪಾರ ವೈವಿಧ್ಯತೆಯಿಂದ ಕೂಡಿದ ತಜ್ಞ, ಚಿಂತಕ, ವಿದ್ವಾಂಸರಿಂದ ಟೀಪೂ ಕುರಿತು ಒಂದು ಸಂಕಿರಣವನ್ನೇರ್ಪಡಿಸಿ ಅದರ ಮುದ್ರಿತ ಆವೃತ್ತಿಯನ್ನು ಪ್ರಕಟಿಸಬೇಕಿದೆ. ಕನ್ನಡ ವಿಶ್ವವಿದ್ಯಾಲಯ ಈಗಾಗಲೇ ಈ ಮಾದರಿಯಲ್ಲಿ ಪ್ರವೃತ್ತವಾಗಿದೆ. ಅನೇಕ ಸಾಂಸ್ಕೃತಿಕ ಮುಖಾಮುಖಿ ಪುಸ್ತಕಗಳನ್ನು ಪ್ರಕಟಿಸಿದೆ. ಅದಕ್ಕೆ ಟೀಪೂ ಸೇರ್ಪಡೆಯಾಗಬೇಕಿದೆ. ಬಸವಣ್ಣನ ಕುರಿತಾದ ತಮ್ಮ ಒಂದು ಲೇಖನದಲ್ಲಿ ರಾಜೇಂದ್ರ ಚೆನ್ನಿಯವರು 'ಬಸವಣ್ಣ ಮತ್ತು ಟೀಪು' ಇವರಿಬ್ಬರ ಸಾವು ಕನ್ನಡಿಗರನ್ನು ಕಾಡಿದಷ್ಟು ಬೇರಾರ ಸಾವೂ ಕಾಡಿಲ್ಲ ಎಂದು ಗಮನಿಸಿದ್ದಾರೆ. ಇದು ಎಷ್ಟು ತಲಸ್ಪರ್ಶಿಯಾದ ಹೇಳಿಕೆ. ಈ ವಸ್ತುವನ್ನಿಟ್ಟುಕೊಂಡೇ ಚಿಂತಕರು ಮಹತ್ತರವಾದ ಪುಸ್ತಕ ತರಬಹುದು. ಅದರ ಬದಲು, ಬಿಕೆ ಚಂದ್ರಶೇಖರರು ಇತ್ತೀಚೆಗೆ ಪ್ರಜಾವಾಣಿಯಲ್ಲಿ ಬರೆದಿರುವಂತೆ ಅಳುಮುಂಜಿಯ ತೆರನಾದ ಡಿಫೆನ್ಸ್-ಗೆ ಇಳಿಯಬಾರದು. ಅದರಿಂದ ಸ್ವಲ್ಪವಷ್ಟೇ ಲಾಭವಾಗಲಿದೆ. ನಿಜ, ಭೈರಪ್ಪನವರು ಮತ್ತಿತರ ವಾದದಲ್ಲಿ ಅನೇಕ ತಪ್ಪುಗಳಿವೆ. ಕೆಲವು ವೈಚಾರಿಕ ತಪ್ಪುಗಳನ್ನು ಎತ್ತಿತೋರಿಸುವ ತೀವ್ರತೆ ನನ್ನಲ್ಲಿತ್ತಾದರೂ ಅದನ್ನು ಪ್ರಯತ್ನಪೂರ್ವಕ ತಡೆಹಿಡಿದಿದ್ದೇನೆ. (ಕಾರ್ನಾಡರ ವಾದದಲ್ಲಿಯೂ ಅನೇಕ ತಪ್ಪುಗಳಿದ್ದು ಮೂಲಭೂತ ಎಂದೆನ್ನಿಸಿದ್ದಷ್ಟನ್ನೇ ಇಲ್ಲಿ ತಂದಿದ್ದೇನೆ.) ಆ ದಾರಿ ಮಾತ್ರವೇ ಆದರೆ ಅನೇಕ ಅಪಾಯಗಳಿವೆ. ಆ ರೀತಿಗಳನ್ನು, ವಿವರಗಳನ್ನರಗಿಸಿಕೊಂಡು ಹೊಸ ರೀತಿಗಳನ್ನು ಹುಡುಕಬೇಕಿದೆ. ಪೌರಾಣಿಕ ಪ್ರಜ್ಞೇಯೇ ಮುಖ್ಯವಾಗಿದ್ದ ಭಾರತೀಯರಾದ ನಾವು, ಮನುಕುಲದ ಈ ಒಂದು ಘಟ್ಟದಲ್ಲಿ ಇತಿಹಾಸ ಪ್ರಜ್ಞೆಯನ್ನು ಎದುರಿಸಿ ಅರಗಿಸಿಕೊಳ್ಳಲೇಬೇಕಾದ ಸವಾಲಿದೆ. ಸದ್ಯಕ್ಕೆ ಸಿದ್ಧ-ಮಾದರಿಗಳಲ್ಲಿ ನಡೆದಿರುವ ನಾವು, ಹೊಸಮಾದರಿಗಳತ್ತ ನಡೆದು, ಟೀಪುವಿನ ಇತಿಹಾಸವನ್ನು ರಚಿಸಬೇಕಿದೆ. ಇದು ಟೀಪೂ ಇತಿಹಾಸವಷ್ಟೇ ಅಲ್ಲದೇ, ನಮ್ಮ ಇತಿಹಾಸ ಪ್ರಜ್ಞೆಯನ್ನೇ ಪರಿಷ್ಕರಿಸುವಂತೆ ಇರಬೇಕಾಗಿರುವುದು, ಹೊಸಪ್ರಜ್ಞೆಯ ಗಳಿಕೆಯತ್ತ ಸಾಗಬೇಕಾಗಿರುವುದು ವರ್ತಮಾನದ ಅಗತ್ಯವಾಗಿದೆ. 'ಗತಕಥನ'-ದಂತಹ ಪುಸ್ತಕಗಳು ಈ ದಿಸೆಯಲ್ಲಿ ಒಂದು ಪ್ರಯತ್ನವೆನ್ನಬಹುದು.

ನನಗೆ ಟೀಪು ಹೇಗೆ ಕಾಣಿಸುತ್ತಾನೆ ಎನ್ನುವುದನ್ನು ಇಲ್ಲಿ ನನಗೇ ಸ್ಪಷ್ಟಗೊಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ. ನಾನು ಟೀಪುವನ್ನು ಮೊದಲು ಓದಿದ್ದು ಅಮರ ಚಿತ್ರ ಕಥೆಯಲ್ಲಾದ್ದರಿಂದ ಆ ರಮ್ಯ ಕಲ್ಪನೆಯನ್ನು ಮತ್ಯಾವ ವೈಚಾರಿಕ ವಿವರವೂ ತೊಡೆದುಹಾಕಲಾಗಲಿಲ್ಲ. ಆ ಕಾಲಕ್ಕೆ ಅವನು ನನಗೆ ಸ್ವಾತಂತ್ರ್ಯವೀರ ಮತ್ತು ಅತ್ಯುತ್ತಮ ರಾಜ. ಈ ಕುರಿತಾದ ವಿವಾದಗಳು ನನಗೆ ಮೊದಲ ೨೦ ವರ್ಷಗಳು ತಟ್ಟಲೇ ಇಲ್ಲ, ಅದೇನಿದ್ದರೂ ಕಳೆದ ದಶಕದ ಒಂದು ಬೆಳವಣಿಗೆ, ಆದರೆ ಸಂಜಯ್ ಖಾನನ ಟೀಪು ಧಾರಾವಾಹಿಯಲ್ಲಿ ಮೈಸೂರು ಅರಸನನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದರಿಂದ ಕುಪಿತನಾಗಿದ್ದೆ. ಅದೇನಾದರೂ ಟೀಪುವಿನ ಮೇಲಣ ಪ್ರೀತಿಯನ್ನು ಕಡೆಮೆಯಾಗಿಸಿತೋ ಎಂದು ಒಮ್ಮೊಮ್ಮೆ ಆತಂಕಗೊಂಡಿದ್ದೇನೆ. ಅದು ಸ್ಪಷ್ಟವಿಲ್ಲ. ನಂತರದ ದಿನಗಳಲ್ಲಿ 'ಸ್ವಾತಂತ್ರ್ಯ ವೀರ' ಎನ್ನುವ ತೀವ್ರವಾದ ಕಲ್ಪನೆಯೇ ಸಡಿಲಗೊಂಡದ್ದರಿಂದ, ಕ್ರಮೇಣ ಅದು ಟೀಪುವಿಗೂ ಅನ್ವಯವಾಯಿತು. ಬಲಪಂಥೀಯರು ಕೂಗಿ ಕೂಗಿ ಹೇಳಿರುವ ವಿವರಗಳಿಂದ ಅವನನ್ನು ವಿಲನ್-ನಾಗಿ ನೋಡದೇ ಹೋದರೂ, ಮನುಷ್ಯ ಸಹಜ ದೌರ್ಬಲ್ಯಗಳನೇಕವನ್ನು ಅವನು ಮೀರಲಾಗಲಿಲ್ಲ ಎನ್ನುವ ಅಂಶ ಮನದಟ್ಟಾಗಿ ನನ್ನ ಮೊದಲಿನ ರಮ್ಯ ಕಲ್ಪನೆ ಸ್ವಲ್ಪ ಮಸುಕಾಯಿತು, ಆದರೆ ತೊಡೆದುಹೋಗಲಿಲ್ಲ. ಟೀಪುವನ್ನು ಮತಾಂಧನೆನ್ನಲು ನನಗೆ ನೈತಿಕ ಹಕ್ಕಾದರೂ ಏನು? ನನ್ನ ದೌರ್ಬಲ್ಯದ ಘಳಿಗೆಗಳಲ್ಲಿ ನಾನು ನನ್ನದೇ ಚಿಕ್ಕ ಪ್ರಭಾವ-ವಲಯದಲ್ಲಿ ಮತಾಂಧನಾಗದೇ ಉಳಿದೆನೇ - ಎನ್ನುವ ಪ್ರಶ್ನೆಗೆ ತಲೆಯೆತ್ತಿ ಹೌದು ಎಂದು ಹೇಳುವಷ್ಟು ದನಿಯಿಲ್ಲ. ಹೀಗಿರುವಾಗ, ರಾಜನಾದ ಅವನ ತಪ್ಪು-ಒಪ್ಪುಗಳೆರಡೂ ಸ್ಪಷ್ಟವಾಗಿ ಕಾಣುವುದಂತೂ ದಿಟವೇ. (ಆದ್ದರಿಂದ, ಟೀಪುವಿನ ದೌರ್ಬಲ್ಯದ ಕುರಿತು ಸ್ಪಷ್ಟವಾಗಿ ಮಾತನಾಡದೇ, ಅದನ್ನು ಒಪ್ಪಿಕೊಳ್ಳದೇ ಅವನನ್ನು ಹೊಗಳುವವರನ್ನೂ, ಅವನ ತೇಜಸ್ಸನ್ನು ಹೊಗಳದೇ ಅವನನ್ನು ತೆಗಳುವವರನ್ನೂ ನಾನು ನಂಬುವುದಿಲ್ಲ). ಆದರೆ ತನ್ನ ಸ್ವಪ್ರಯತ್ನದಿಂದಲೋ, ಅದೃಷ್ಟವಶದಿಂದಲೋ ಟೀಪು ಬೇರೆಯ ಅನೇಕ ರಾಜರಿಗಿಂತ ಕೆಲ ಅಂಶಗಳಲ್ಲಿ ದೂರದೃಷ್ಟಿಯುಳ್ಳವನಾಗಿದ್ದ. ಆ ಕಾಲದಲ್ಲಿ ಬೇರೆ ಯಾವ ರಾಜನೂ ಕಾಣದ ರೀತಿಯಲ್ಲಿ ವಸಾಹತುಶಾಹಿಯನ್ನು ಗ್ರಹಿಸಿದ್ದ. ಈ ಕಾಲದಲ್ಲಿ ನಾವು 'ಸುಧಾರಣೆ' ಎನ್ನುವ ಪರಿಕಲ್ಪನೆಯಡಿಯಲ್ಲಿ ಹೇಳುವುದನ್ನು ಟೀಪು ಸಾಧಿಸಿ ತೋರಿದ್ದ. ನಿಸ್ಸಂಶಯವಾಗಿ ಇದರಿಂದ ಮೈಸೂರು ಆರೋಗ್ಯಕರ ಆಧುನಿಕ ಸಮಾಜವಾಗುವತ್ತ ದಾಪುಗಾಲನ್ನಿಟ್ಟಿತು. (ಮೈಸೂರು ಅರಸರು ಕೂಡಾ ಇದಕ್ಕಿತ್ತ ಕಾಣಿಕೆ ಕಡಿಮೆಯಲ್ಲ). ಇದು ಪ್ರತಿಯೊಬ್ಬ ಕನ್ನಡಿಗನೂ ಸಂಭ್ರಮಿಸಬೇಕಾದ ವಿಷಯ. ಅದೇ ಕಾಲಕ್ಕೆ ತನ್ನ ಅಸ್ಥಿರತೆಯ ಕಾಲದಲ್ಲಿ ಮತಾಂಧತೆಯತ್ತ ಟೀಪು ನಡೆದುಬಿಟ್ಟನೇ, ಅಥವಾ ಗೊತ್ತಿಲ್ಲದೇ ಅ ಬಗೆಯ ಪ್ರಮಾದಗಳನ್ನೆಸಗಿಬಿಟ್ಟನೇ ಎಂದು ಪ್ರತಿಯೊಬ್ಬ ಕನ್ನಡಿಗನೂ ದುಃಖಿಸಬೇಕಾಗುತ್ತದೆ. ಅದಕ್ಕೆ ಜವಾಬ್ದಾರಿಯನ್ನು ಕೇವಲ ಟೀಪುವಿನ ಮೇಲೆ ಎತ್ತಿಹಾಕದೇ, ಸ್ವತಃ ತಾನೇ ಅದನ್ನು ಹೊರಬೇಕಾಗುತ್ತದೆ. ನಾನೇನೂ ಇತಿಹಾಸಕಾರನಲ್ಲ, ಜೀವಂತ ಮನುಷ್ಯನಾದ ನನಗೆ ಗೊತ್ತಿರುವ ವಿವರಗಳಿಂದ ನಾನು ಕಟ್ಟಿಕೊಂಡಿರುವ ಕಲ್ಪನೆಯಿದು. ವರ್ತಮಾನವನ್ನು ನಿರ್ವಹಿಸಲಿಕ್ಕೆ ನನಗಿಷ್ಟು ಸದ್ಯಕ್ಕೆ ಸಾಕು.

ಈ ಲೇಖನದಲ್ಲಿ ನನಗೆ ಗೊತ್ತೇ ಇಲ್ಲದಿರುವ ಕಾರ್ನಾಡರನ್ನು, ಬಿಕೆ ಚಂದ್ರಶೇಖರ್-ರನ್ನು ತೀವ್ರವಾಗಿ ಟೀಕಿಸಿದ್ದೇನೆ. ಕ್ಷಮೆಯಿರಲಿ ಎಂದು ಹೇಳಿದರೂ, ಪ್ರೀತಿ, ನಿರೀಕ್ಷೆ ಇರುವಲ್ಲಿ ಇಂಥದ್ದು ಸಹಜ ಎನ್ನ್ನುವುದು ಅನುಭವಸ್ಥರಾದ ಅವರಿಗೆ ತಿಳಿದೇ ಇರುತ್ತದೆ.

ಟೀಪೂ ವಿವಾದದ ಒಳಸುಳಿಗಳಲ್ಲಿ: ಭಾಗ ೨

[ವಿವಾದಗಳ ಕುರಿತು ಪ್ರತಿಕ್ರಿಯಿಸುವುದೇ ಒಂದು ಅಭ್ಯಾಸವಾಗಿಬಿಡಬಾರದೆಂದು ನಾನು ಇಂತಹ ಬರಹಗಳು ಸ್ವಲ್ಪ ದಿವಸ ಬೇಡ ಎನ್ನುವ ನಿಲುವು ತಳೆದಿದ್ದೆ. ಆದರೆ, ಈ ಟೀಪುವಿನ ಕುರಿತಾದ ವಿವಾದ ನಿದ್ದೆಗೆಡಿಸಿದೆ. ಪ್ರತಿಕ್ರಿಯಿಸದೇ ಇರುವುದು ಸಾಧ್ಯವಿಲ್ಲ ಎನ್ನುವ ಒಂದು ಕಾರಣ ನನ್ನ ಬಳಿಯಿದೆ. ಲೇಖನ-ತ್ರಯಗಳನ್ನು ಓದುತ್ತಾ ಹೋದಹಾಗೆ ತಿಳಿಯುತ್ತದೆ. ಮೊದಲನೇಯ ಲೇಖನ ಈ ವಿವಾದದ ಕುರಿತು ಮಾತನಾಡಿರುವ ಮಹನೀಯರು, ಸಂಘಸಂಸ್ಥೆಗಳ ಹೇಳಿಕೆಗಳನ್ನು, ನಿಲುವುಗಳನ್ನು ಸಂಗ್ರಹವಾಗಿ ಒಂದೆಡೆ ಒದಗಿಸುವ ಪ್ರಯತ್ನ ಮಾಡುತ್ತದೆ. ನನ್ನ ಅಭಿಪ್ರಾಯಗಳನ್ನು ಓದುವವರಿಗೆ ಈ ಪೂರಕ ಓದಿನ ಅವಶ್ಯಕತೆಯಿದೆ. ಎರಡನೇಯ ಲೇಖನ, ಅಲ್ಲಿನ ಕೆಲ ಅಭಿಪ್ರಾಯಗಳಿಗೆ ನನ್ನ ಪ್ರತಿಸ್ಪಂದನೆಗಳು ಹಾಗೂ ನನ್ನ ಸ್ವಂತ ಅಭಿಪ್ರಾಯವನ್ನು ಹೇಳುತ್ತದೆ. ಮೂರನೇಯ ಲೇಖನ ಇಂತಹ ವಿವಾದಗಳನ್ನು ನಿರ್ವಹಿಸಬಹುದಾದ ರೀತಿಯ ಕುರಿತು ಚಿಂತಿಸುತ್ತದೆ. ಈ ಲೇಖನ-ತ್ರಯಗಳನ್ನು ಅಪಾರ ವಿಷಾದದಿಂದ ಬರೆಯುತ್ತಿದ್ದೇನೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲವೆಂದೆನ್ನಿಸುತ್ತದೆ.]

ಲೇಖನದ ಮೊದಲ ಭಾಗ ಇಲ್ಲಿದೆ.

ಈ ಲೇಖನವನ್ನು ಇಷ್ಟು ದಿನಗಳ ನಂತರ, ವಿವಾದ ತಣ್ಣಗಾಗಿದೆ ಎಂದೆನ್ನಿಸುವ ನಂತರ, ಏಕೆ ಬರೆಯುತ್ತಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೇನೆ. ಈ ವಿವಾದ ಒಂದು ವಿರಾಟ್-ಪ್ರಕ್ರಿಯೆಯ ಚಿಕ್ಕ ಬೈ-ಪ್ರಾಡಕ್ಟ್ ಅಷ್ಟೆ. ಇದು ಆಗಾಗ ಬೇರೆ ಬೇರೆ ಸ್ವರೂಪಗಳನ್ನು ಪಡೆಯುವುದು ಖಂಡಿತ, ಒಂದು. ಇದನ್ನು ನಿರ್ವಹಿಸುತ್ತಿರುವ ರೀತಿಯಲ್ಲಿ ಕೆಲ ಮೂಲಭೂತವಾದ ಅಂಶಗಳತ್ತ ಓದುಗರ ಗಮನ ಸೆಳೆಯುವುದು ಮತ್ತೊಂದು. ಮಾಲಿಕೆಯ ಈ ಎರಡನೇಯ ಲೇಖನದಲ್ಲಿ ವಿವಾದದ ಕೆಲ ಅಂಶಗಳನ್ನು ಕೇಂದ್ರದಲ್ಲಿಟ್ಟು ಒಟ್ಟು ವಿವಾದವನ್ನು ನನ್ನ ರೀತಿಯಲ್ಲಿ ಗ್ರಹಿಸಿ ನನ್ನ ಅಭಿಪ್ರಾಯಗಳನ್ನು ಮಂಡಿಸಿದ್ದೇನೆ.

ಟೀಪುವಿನ್ನು ಟೀಕಿಸಿ ಶಂಕರಮೂರ್ತಿಗಳು ಶಾಲಾ ಮಕ್ಕಳ ವೇದಿಕೆಯಲ್ಲಿ ತಾವಾಡಿದಂತಹ ಮಾತುಗಳನ್ನಾಡಬೇಕು ಎಂದು ತಯಾರಿ ನಡೆಸಿದ್ದರೋ ಇಲ್ಲವೋ ಹೇಳಲಾಗದು. ನಡೆಸಿದ್ದರೆ ಆಶ್ಚರ್ಯವಿಲ್ಲ, ಅಲ್ಲದೇ ಅವರ ಹಿನ್ನೆಲೆ ಮತ್ತು ಸದ್ಯಗಳು ಅವರನ್ನು ಈ ಕುರಿತು ಸದಾ ತಯಾರಾಗಿರುವಂತೆ ರೂಪಿಸಿದೆ. ಆದರೆ ಅವರಿಗೆ ನಿರ್ದಿಷ್ಟವಾದ ಗುರಿಯಿತ್ತೆಂದೆನ್ನಿಸುವುದಿಲ್ಲ. ಮಕ್ಕಳಿಗೆ ಅವರ ಮಾತುಗಳು ಅರ್ಥವಾಗಿತ್ತೋ ಇಲ್ಲವೋ. ಪತ್ರಿಕೆಗಳಲ್ಲಿ ಬರದೇ ಹೋಗಿದ್ದರೆ ಯಾವುದೂ ಏನೂ ಆಗುತ್ತಿರುಲಿಲ್ಲವೇನೋ. ಕತ್ತಲಲ್ಲೊಂದು ಬಾಣ ಬಿಟ್ಟಿದ್ದರು ಎಲ್ಲಿಗಾದರೂ ತಾಗಲಿ ಎಂದು. ನಮ್ಮ ಜನ ಮೌನವಾಗಿ ಇದನ್ನು ನಿರ್ಲಕ್ಷಿಸಿ ಯಥಾಪ್ರಕಾರ ಟೀಪುವನ್ನು ಎದೆಯಲ್ಲಿಟ್ಟುಕೊಂಡೆ ಇರುತ್ತಿದ್ದರೇ?

ಆದರೆ ಮೇಲಿನ ನಿಲುವಿಗೂ ಸುಲಭವಾಗಿ ಬರಲಾಗದು. ನಮ್ಮ ಕಾಲದಲ್ಲಿ ಮೌನಕ್ಕೆ ಬೆಲೆಯಿದೆ ಎನ್ನುವುದರ ಬಗ್ಗೆಯೇ ಕೆಲವೊಮ್ಮೆ ನಂಬಿಕೆ ಹೋಗಿಬಿಟ್ಟಿರುವಂತಿದೆ. ಹೀಗಾಗಿ ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯಿಸದೇ ಇರುವುದು ಕೂಡಾ ಸಂದಿಗ್ಧದ ವಿಷಯವೇ ಸರಿ. ಅಂತೆಯೇ ನನ್ನ ಹಿಂದಿನ ಲೇಖನದಲ್ಲಿ ಪಟ್ಟಿ ಮಾಡಿರುವ ಬಹುತೇಕ ಪ್ರತಿಕ್ರಿಯೆಗಳನ್ನು, ಅದರ ಸ್ವರೂಪವನ್ನು ನಾನು ನಿರೀಕ್ಷಿಸಿದ್ದೆ. ಆದರೆ ಕಾರ್ನಾಡ್, ಮರುಳಸಿದ್ದಪ್ಪ ಮುಂತಾದ ಹಿರಿಯರ ಪ್ರತಿಕ್ರಿಯೆಯನ್ನು ಗಮನಿಸಿದ ಮೇಲೆ ನನಗೆ ಇವರು - ಎತ್ತಲೋ ಬಿಟ್ಟು, ಎತ್ತಲೋ ಹೋಗಿ ಬೀಳುತ್ತಿದ್ದ ಬಾಣವನ್ನು ವೀರಾವೇಶದಿಂದ ಅಟ್ಟಿಸಿಕೊಂಡು ಹೋಗಿ ಎದೆಯೊಡ್ಡಿದ್ದಲ್ಲದೇ ಜನರನ್ನೂ ಎದೆಯೊಡ್ಡಿ ಎಂದು ಪ್ರಚೋದಿಸುತ್ತಿದ್ದಾರೆ - ಎಂದೆನ್ನಿಸಿತು.

ಇಷ್ಟೆಲ್ಲ ಜನರ ಮಧ್ಯೆ ಕಾರ್ನಾಡರ ಹೇಳಿಕೆಯನ್ನೇ ಆಯ್ದು ತೆಗೆದುಕೊಂಡಿರುವುದಕ್ಕೆ ಕಾರಣವಿದೆ. ಸಾರ್ವಜನಿಕವಾಗಿ ಹೆಚ್ಚು ಮಾತನಾಡದೆಯೂ ಅವರಿಗಿರುವಷ್ಟು ಸಾರ್ವಜನಿಕತೆ ಅನೇಕ ಹಿರಿಯರಿಗಿಲ್ಲ. ಅವರ ಮಾತಿಗೆ ದೇಶಾದ್ಯಂತ ಒಂದು ಬೆಲೆಯಿದೆ. ಕನ್ನಡ/ಇಂಗ್ಲೀಷ್ ಪತ್ರಿಕೆಗಳಾದಿಯಾಗಿ ಅವರು ಹೇಳಿದ್ದನ್ನು ಯಥಾವತ್ತಾಗಿ ಪ್ರಕಟಿಸಿಬಿಡುತ್ತವೆ. ಈ ಕಾರಣಕ್ಕೆ, ಅವರಾಡುವ ಮಾತುಗಳ ಪರಿಣಾಮ ತೀವ್ರಸ್ವರೂಪದ್ದಾಗಿರುತ್ತದೆ. ಈ ಜವಾಬ್ದಾರಿಯನ್ನು ಅವರು ಹೊರದೇ ಗತ್ಯಂತರವಿಲ್ಲ. ನನ್ನಿಡೀ ಲೇಖನದಲ್ಲಿ 'ಕೋಮುವಾದದ ವಿರುದ್ಧದ ಒಂದು ಬಗೆಯ ಪ್ರತಿಭಟನೆ'-ಗೆ ಕಾರ್ನಾಡರನ್ನು ಪ್ರತಿನಿಧಿಯಾಗಿಸಿ ಬರೆಯುತ್ತಿದ್ದೇನೆ. ಸಾಮಾನ್ಯವಾಗಿ ಕಾರ್ನಾಡರು ಕೋಮುವಾದದ ವಿಷಯವೊಂದನ್ನು ಹೊರತುಪಡಿಸಿ ಮಿಕ್ಕವಕ್ಕೆ ಪ್ರತಿಕ್ರಿಯಿಸುವುದಿಲ್ಲ. (ಶಂಕರಮೂರ್ತಿಗಳು ಟೀಪೂವನ್ನು ಕನ್ನಡವಿರೋಧಿ ಎಂದಿದ್ದರೇ ಹೊರತು ಮತಾಂಧನೆಂದು ಹೇಳಿರಲಿಲ್ಲ, ಪ್ರಾಯಶಃ ಹೆಚ್ಚು ಎಚ್ಚರಿಕೆ ವಹಿಸಿದ್ದರು ಅನ್ನಿಸುತ್ತೆ.) ಆದರೆ, ಈ ಹಿಂದೆ ಕಾರ್ನಾಡರು ಸಾರ್ವಜನಿಕವಾಗಿ ತಮ್ಮ ಟೀಪೂ ಪ್ರೇಮ ಮೆರೆದಿದ್ದಿದ್ದರಿಂದ ಕಣಕ್ಕಿಳಿಯುವುದು ಅನಿವಾರ್ಯವಾಯಿತು. ಟೀಪೂವನ್ನು ಕಾರ್ನಾಡರು 'ಕರ್ನಾಟಕದ ಅತ್ಯಂತ ಶ್ರೇಷ್ಠ ಪುತ್ರ, ಮಹಾರಾಷ್ಟ್ರದಲ್ಲಿ ಟಿಳಕರಿಗೆ ಸಮಾನವಾಗಿ ಕರ್ನಾಟಕದಲ್ಲಿ ಅವನ ಸ್ಥಾನ' ಇತ್ಯಾದಿಯಾಗಿ ಹಿಂದೆ ಹೊಗಳಿದ್ದರು. ಲೇಖಕಿ ಶಶಿ ದೇಶಪಾಂಡೆಯವರಂತೂ ಪುಳಕಿತರಾಗಿ 'ಕಾರ್ನಾಡರು ಏಕಕಾಲದಲ್ಲಿ ಕನ್ನಡ ರಾಷ್ಟ್ರೀಯತೆ ಹೋರಾಟಗಾರರನ್ನೂ, ಮತೀಯವಾದಿಗಳನ್ನೂ ಎದುರುಹಾಕಿಕೊಂಡಿದ್ದಾರೆ' ಎಂದು ಸಂಭ್ರಮಿಸಿದ್ದರು. ನನಗೆ ಏಕಕಾಲಕ್ಕೆ ತಮಾಷೆ ಮತ್ತು ದುಃಖವೆನ್ನಿಸಿದ್ದು ಕಾರ್ನಾಡರು ತಮ್ಮ ಟೀಪು ನಾಟಕದ ಗ್ರಂಥಸೂಚಿಯಲ್ಲಿ ಹಯವದನರಾಯರ ಪುಸ್ತಕವನ್ನೂ ಆಧರಿಸಿದ್ದನ್ನು ಹೆಸರಿಸಿ, ಅದರ ಜೊತೆಯಲ್ಲೇ ಬ್ರಿಟಿಷರ ಮೂಗಿನ ನೇರಕ್ಕೆ ಬರೆದ ಇತಿಹಾಸ ಎಂದು ಗಮನಿಸಿರುವುದು. ಕಾರ್ನಾಡರಂತಹ ಧೀಮಂತರಿಗೂ ಹಾಗೆ ವಿವರಿಸಬೇಕಾದ ಅಗತ್ಯ ಕಂಡಿತೇ! ಇರಲಿ.

ಈ ಹಿಂದೆ ಚಿಮೂಗಳು ಟೀಪೂ ಕುರಿತು ಏನೋ ಹೇಳಿಕೆ ನೀಡಿದ್ದಾಗ, ಎಚ್ಚರದಿಂದ ಕಾರ್ನಾಡರು ಪ್ರಜಾವಾಣಿ ವಾಚಕರ ವಾಣಿಗೆ ಒಂದು ಪತ್ರ ಬರೆದಿದ್ದರು. ಇದರಿಂದ ಚರ್ಚೆ ಬೀದಿಗೆ ಬಂದಿರಲಿಲ್ಲ. ಈಗಲೂ ಅದೇ ಆಗಿದ್ದಿದ್ದರೆ ಚೆನ್ನಿತ್ತು. ಆದರೆ ಸಮರದ ಮನಸ್ಥಿತಿಯಲ್ಲಿದ್ದ ಕಾರ್ನಾಡರು, ಮರುಳಸಿದ್ದಪ್ಪನವರು ಪ್ರೆಸ್ ಕಾನ್ಫರೆನ್ಸ್-ಗಿಳಿದರು. ಹತ್ತು ಪತ್ರಿಕೆಗಳಲ್ಲಿ ಹತ್ತು ರೀತಿಯಲ್ಲಿ ಪ್ರಕಟವಾಯಿತು. ಅತಿರೇಕದ ಮಾತುಗಳೆಲ್ಲವೂ ಆದವು. ಎಚ್ಚರದ ಮನಸ್ಥಿತಿ ಜಾರಿ ಮುಂದೆ ತಹಬದಿಗೆ ಬರುವುದಕ್ಕೆ ಸಾಧ್ಯವೇ ಆಗದೆ ವಿವಾದ ರಾಡಿಯಾಯಿತು.

ಆ ನಂತರದ ಪತ್ರಿಕಾ ವರದಿಗಳನ್ನು ಸಂಗ್ರಹಿಸಿ ಕೊಟ್ಟಿದ್ದೇನೆ. ಅವುಗಳಲ್ಲಿ ಈ ವಿಷಯಕ್ಕೇ ನೇರವಾಗಿ ಸಂಬಂಧಿಸಿರದೇ ಇದ್ದರೂ ಮುಖ್ಯವಾದ್ದೊಂದಿದೆ. ಪ್ರಜಾವಾಣಿ ಮತ್ತು ವಿಜಯಕರ್ನಾಟಕಗಳಲ್ಲಿ ಚಿ.ಮೂ. ಹೇಳಿಕೆಯ ಎರಡು ಆವೃತ್ತಿಗಳು ಪ್ರಕಟವಾಗಿವೆ. ಪ್ರಜಾವಾಣಿಯಲ್ಲಿ ಟೀಪುವನ್ನು ಕನ್ನಡವಿರೋಧಿ ಎಂದು ಕರೆಯಲಾಗದು, ಅವನ ಕಾಲದಲ್ಲಿ ಕನ್ನಡದ ಅಭಿವೃದ್ಧಿಯಾಗಲಿಲ್ಲ ಎನ್ನುವುದು ನಿಜ ಎಂದಿದೆ. ಆದರೆ ವಿಜಯಕರ್ನಾಟಕದಲ್ಲಿ ಇದು ತೀವ್ರವಾಗಿ ಪ್ರಕಟವಾಗಿವೆ. ಆ ನಂತರದ ಅವರ ನಿಲುವುಗಳು ವಿಜಯಕರ್ನಾಟಕದ ಮೊದಲ ಹೇಳಿಕೆಗಳಿಗೆ ಹೆಚ್ಚು ಹತ್ತಿರವಾಗಿದೆ. ವಿವಾದದಲ್ಲಿ ನನ್ನನ್ನು ಅಧೀರನಾಗಿಸಿದ ಮತ್ತೊಂದು ಸಂಗತಿ ಇದೇ - ಹೀಗೆ ಪತ್ರಿಕಾಹೇಳಿಕೆಗಳಲ್ಲಿರುವ ವ್ಯತ್ಯಾಸ, ಅದನ್ನು ಪ್ರತಿಭಟಿಸಲಾಗದಿರುವ ನಮ್ಮ ಪರಿಸ್ಥಿತಿ, ಇದರಿಂದುಂಟಾಗಬಹುದಾದ ಪ್ರಮಾದಗಳು.

ಭೈರಪ್ಪನವರ ಪ್ರವೇಶವಾದನಂತರ ಎರಡು ಮುಖ್ಯವಾದ ಪರಸ್ಪರ ವೈರುಧ್ಯದ ಪರಿಣಾಮಗಳಾದವು. ಅವರು ತಾತ್ವಿಕವಾಗಿ ಬಹುಮುಖ್ಯವಾದ ಪ್ರಶ್ನೆಯೆಂದನ್ನೆತ್ತಿದರು. ಅದೇ ಸಮಯಕ್ಕೆ ಚರ್ಚೆ ವೈಯಕ್ತಿಕವಾಗಿಬಿಟ್ಟಿತು. ಎರಡಕ್ಕೂ ಅವರೇ ಕಾರಣವೆನ್ನಬಹುದು. ಭೈರಪ್ಪನವರು ತಮ್ಮ ಲೇಖನದಲ್ಲಿ ತುಘಲಕ್-ನನ್ನು ಎಳೆದು ತರಬಾರದಿತ್ತು ಎಂದು ನನಗೆ ಮೊದಲು ಅನ್ನಿಸಿದ್ದು ನಿಜ. ವಿವಾದ ಟೀಪುವಿನ ಕುರಿತಾಗಿದ್ದಿದ್ದರಿಂದ ಅದೇ ಆವರಣದಲ್ಲೇ ತಮ್ಮ ವಾದವನ್ನು ಮಂಡಿಸಬಹುದಿತ್ತು. ಹೋಗಲಿ, ಅವರು ಕಾರ್ನಾಡರನ್ನು ವಿಶೇಷವಾಗಿ ಚರ್ಚೆಗೆ ಆಹ್ವಾನಿಸಿದ್ದರಿಂದ ತಮ್ಮ ವಿಷಯಮಂಡನೆಯ ಹೆಚ್ಚಿನ ಸಮರ್ಥನೆಗೆ ತುಘಲಕ್-ನನ್ನು ಮಧ್ಯಕ್ಕೆಳೆತಂದರು ಎನ್ನೋಣವೆಂದರೆ, ಕಾರ್ನಾಡರಿಗೆ ಚರ್ಚೆಯನ್ನು ಬೇರೆಯೆಡೆಗೆ ತಿರುಗಿಸಲು ಇದು ಸಾಕಾದದ್ದೊಂದು ದುರಂತ. ತಾತ್ವಿಕವಾದ ಚರ್ಚೆಯೊಂದನ್ನು ನಡೆಸಿ ವಿವಾದವನ್ನು ಕ್ಷುದ್ರತ್ವದಿಂದ ಮುಕ್ತಗೊಳಿಸುವುದಕ್ಕೆ ಸಿಕ್ಕ ಅವಕಾಶವನ್ನು ಕಾರ್ನಾಡರು ಬಳಸಿಕೊಳ್ಳಲಿಲ್ಲ. ಅದಕ್ಕೆ ಪ್ರತಿಯಾಗಿ ಕಾರ್ನಾಡರು ತುಘಲಕ್ ನಾಟಕದ ಅನೈತಿಹಾಸಿಕತೆಯನ್ನು ಜೋರು ಧ್ವನಿಯಲ್ಲಿ ಪ್ರತಿಪಾದಿಸಿತ್ತಾ, ಸ್ವಲ್ಪ ಟಿಟ್ ಫಾರ್ ಟ್ಯಾಟ್ ಎನ್ನುವಂತೆ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆಗಳನ್ನು ಉಲ್ಲೇಖಿಸಿ ಭೈರಪ್ಪನವರನ್ನು ಜರೆಯಲು ಪ್ರಯತ್ನಿಸಿದ್ದು ಮಾತ್ರ ನಾಚಿಕೆಗೇಡಿನ ವಿಷಯ. ಕನಿಷ್ಠ ಭೈರಪ್ಪನವರಿಗೆ ತುಘಲಕ್, ಟೀಪುಗಳನ್ನು ಈ ಪ್ರಸ್ತುತ ವಿವಾದದ ವಿವರಣೆಗೆ ದುಡಿಸಿಕೊಳ್ಳುವುದು ಮುಖ್ಯವಾಗಿತ್ತು. ಆದರೆ ಕಾರ್ನಾಡರಿಗೆ ಭೈರಪ್ಪನವರ ವೈಯಕ್ತಿಕ ನಿಲುವುಗಳನ್ನು ಮೀರಿ ಅವರ ಕಾದಂಬರಿಗಳನ್ನು ಗ್ರಹಿಸಲಾಗದೇ ಹೋದದ್ದು, ತೀರಾ ಕಳಪೆಮಟ್ಟದಲ್ಲಿ ಅವುಗಳನ್ನು ಭೈರಪ್ಪನವರನ್ನು ಜರೆಯಲು ಉಪಯೋಗಿಸಿಕೊಂಡದ್ದು ಮಾತ್ರ ಶೋಚನೀಯ, ದುರಂತ ಎನ್ನದೇ ವಿಧಿಯಿಲ್ಲ. ಬಲಪಂಥೀಯರೆಂದೆನ್ನಿಸಿರುವ ಭೈರಪ್ಪನವರ ಸಂಯಮದ ಪತ್ರಕ್ಕೆ ಉದಾರವಾದಿ ಎಡಪಂಥೀಯರೆಂದೆನ್ನಿಸಿರುವ ಕಾರ್ನಾಡರ ಅಸಹನೆ, ಅಸಹ್ಯದ ಉತ್ತರಗಳು ನನ್ನನ್ನು ದಿಗ್ಭ್ರಾಂತನನ್ನಾಗಿಸಿತು. ಸಾಮಾನ್ಯವಾಗಿ, ನಾವು ಇದಕ್ಕೆ ತದ್ವಿರುದ್ಧವಾದ್ದನ್ನು ನಿರೀಕ್ಷಿಸಿರುತ್ತೇವೆ. ಬಹುತೇಕ ಎಚ್ಚರದ ಮನುಷ್ಯರಾದ ಕಾರ್ನಾಡರು ಪತ್ರಿಕಾಗೋಷ್ಠಿಯ ಅವಿವೇಕತನದಿಂದ ಕಂಗೆಟ್ಟು ಮತ್ತೊಂದು ತಪ್ಪನ್ನೆಸಗಿದರು. ಜಾರಿಬಿದ್ದ ಜಾಣರಾದರು. ತಮ್ಮ ಕಾದಂಬರಿಗಳ ಚಲನಚಿತ್ರಾವೃತ್ತಿಗಳಲ್ಲಿ ತಮ್ಮ ವಿಚಾರಧಾರೆಗೆ ಭಿನ್ನವಾದ ವ್ಯಾಖ್ಯಾನಗಳನ್ನು ಒಪ್ಪುವ ಭೈರಪ್ಪನವರು ಪ್ರಜಾಪ್ರಭುತ್ವದಲ್ಲಿ ಹೆಚ್ಚು ಮುಖ್ಯರೋ, ತಮ್ಮ ಕೃತಿಗಳ ಒಂದು ಎಳೆಯನ್ನು ಎಳೆದದ್ದಕ್ಕೇ ಅತ್ತು, ಚೀರಾಡಿ, ರಂಪ ಮಾಡುತ್ತಿರುವ ಕಾರ್ನಾಡರು ಪ್ರಜಾಪ್ರಭುತ್ವದಲ್ಲಿ ಮಾದರಿಯೋ - ಎಂದು ಗಾಬರಿಯಾಗುತ್ತದೆ. ಈಗಲೂ ಇದನ್ನೇ ಮುಂದುವರೆಸಿರುವ ಭೈರಪ್ಪನವರು, ತಮ್ಮ ಕೃತಿಗಳ ಬೇರೆಯದೇ ತೆರನಾದ ವ್ಯಾಖ್ಯಾನಗಳಿಗೆ ಕಾಸರವಳ್ಳಿಯವರಿಗೆ ಅವಕಾಶವಿತ್ತಿದ್ದಾರೆ. ಹೀಗೆ ವ್ಯಾಖ್ಯಾನಿಸುವುದನ್ನು ಮುಂದುವರೆಸಿರುವ ಕಾಸರವಳ್ಳಿಯವರೂ ಅಭಿನಂದನಾರ್ಹರು. ಅವರಾದರೂ ಮುಂದೆ ತಮ್ಮ ಕೃತಿಗಳನ್ನು ಈ ಕಾರಣಕ್ಕೆ ನಿರಾಕರಿಸದಿರಲಿ.

ನನ್ನ ಹಿಂದಿನ ಒಂದು ಲೇಖನದಲ್ಲಿ ನಮ್ಮ ಪ್ರತಿಕ್ರಿಯೆಗಳ ಸಂಕೀರ್ಣತೆಯನ್ನು ಶೋಧಿಸಿಕೊಳ್ಳುತ್ತಾ ವಸ್ತು-ವಿಷಯಕ್ಕಿಂತ ವ್ಯಕ್ತಿಯ ಮೇಲೇ ಅವು ಹೆಚ್ಚು ಅವಲಂಬಿತವಾಗಿರುವುದಕ್ಕೆ ತಲ್ಲಣಿಸಿದ್ದೆ. ಇಲ್ಲಿ ಅಂತಹುದೇ ಮತ್ತೊಂದು ನಿದರ್ಶನವಿದೆ. ಕೆಲ ತಿಂಗಳುಗಳ ಹಿಂದೆ ಕಾರ್ನಾಡರ ಟೀಪು ನಾಟಕದ ಕುರಿತು ಮಾತನಾಡುತ್ತಾ ಸಿ.ಎನ್.ರಾಮಚಂದ್ರನ್-ರವರು ಕಾರ್ನಾಡರ ಟೀಪು ಧೀರೋದಾತ್ತನಂತೆ ಕಂಡುಬರುತ್ತಾನಾದರೂ ನಿಜದಲ್ಲಿ ಅವನು ಮತಾಂಧನಾಗಿದ್ದಿರಬಹುದಾದ ಸಾಧ್ಯತೆಯತ್ತ ಗಮನಸೆಳೆದಿದ್ದರು (ಪತ್ರಿಕೆಗಳಲ್ಲಿ ಪ್ರಕಟವಾದಂತೆ - ರಂಗಶಂಕರದಲ್ಲಿ ಕಾರ್ನಾಡರ ನಾಟಕಗಳ ಕುರಿತಾದ ಸಂವಾದದ ಸಂದರ್ಭ). ಆಗ ವಿವಾದವೇನೂ ಉಂಟಾಗಿರಲಿಲ್ಲ. ಸ್ವತಃ ಕಾರ್ನಾಡರು ಪ್ರತಿಭಟಿಸಿರಲಿಲ್ಲ, ಮರುಳಸಿದ್ದಪ್ಪರು, ಗೋವಿಂದರಾಯರ ಕಿವಿಗೆ ಬಿದ್ದಿರಲಿಲ್ಲವೇನೋ. ಆದರೆ ಶಂಕರಮೂರ್ತಿಗಳು, ಚಿಮೂಗಳು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಮೇಲ್ನೋಟಕ್ಕೆ ಇದೇ ಸರಿ ಅಥವಾ ತಪ್ಪೇನೂ ಇಲ್ಲವೆಂದೆನ್ನಿಸಿದರೂ, ಇದು ಅಷ್ಟೊಂದು ಆರೋಗ್ಯಕರ ವಿಷಯವಲ್ಲ. ಒಂದು ವಿಷಯದ ಕುರಿತಾದ ವಿವಾದ ಯಾರು ಹೇಳಿದರು ಎನ್ನುವ ಕಾರಣಕ್ಕಾದರೆ ಅದು ಪ್ರಜಾಪ್ರಭುತ್ವದ ಪರಿಸರಕ್ಕೆ ಒಳ್ಳೆಯದಲ್ಲ. ಇದೇ ಸಮಯದಲ್ಲಿ ಶಂಕರಮೂರ್ತಿಗಳು ಭಗತ್ ಸಿಂಘ್ ಇತ್ಯಾದಿಗಳನ್ನು ಇತಿಹಾಸದಲ್ಲಿ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಎನ್ನುವುದನ್ನು ಪ್ರತಿಭಟಿಸಿ ಹೇಳಿಕೆ ಕೊಟ್ಟಿದ್ದರು. ಟೀಪೂ ಹೇಳಿಕೆಗೆ ಪ್ರತಿಕ್ರಿಯಿಸಿದ ಎಲ್ಲ ಸಾರ್ವಜನಿಕ ಹೋರಾಟಗಾರರು ಇದಕ್ಕೆ ಪ್ರತಿಕ್ರಿಯಿಸಿಬೇಕಾದ ತುರ್ತನ್ನು ಗ್ರಹಿಸಲಿಲ್ಲವೇಕೆ? ತನ್ನ ಆವರಣದಲ್ಲೇ ಬದುಕುವ ಸಾಮ್ಸಾರಿಕನಿಗೆ ಈ ಏಕರೂಪತೆ ತಟ್ಟುತ್ತದೆ, ತನ್ನ ಆವರಣದಲ್ಲೇ ಅಸ್ಥಿರಭಾವವೊಂದರ ಅನುಭವವಾಗುತ್ತದೆ. ಆ ಅಸ್ಥಿರಭಾವವನ್ನು ಗುರುತಿಸುವ ಇನ್ಯಾವುದೇ ಪ್ರಕ್ರಿಯೆಯಲ್ಲಿ ತಾತ್ಕಾಲಿಕವಾಗಿಯಾದರೂ ಪಾಲ್ಗೊಳ್ಳುತ್ತಾನೆ. ಆ ಪ್ರಕ್ರಿಯೆಯ ತೀವ್ರಸ್ವರೂಪ ಎಷ್ಟೋ ವರ್ಷಗಳ ನಂತರವಷ್ಟೇ ಅನಾವರಣವಾಗುತ್ತದೆ. ಪ್ರಗತಿಪರ ಹೋರಾಟಗಾರರಿಗೆ ಇದೇಕೆ ಅರ್ಥವಾಗುವುದಿಲ್ಲ? ಈ ಪ್ರಶ್ನೆಯೇ ಹಿಂದಿನ ಕಳಕಳಿ ಈ ಸರಣಿಯ ಮುಖ್ಯ ಕಾಳಜಿಯಾಗಿದೆ.

ಭೈರಪ್ಪನವರ ಪತ್ರಕ್ಕೆ ಕಾರ್ನಾಡರ ಉತ್ತರದಲ್ಲಿ ಈ ಅಸಹನೆಯನ್ನು ಕಡೆಗಣಿಸಿಯೂ ಒಂದು ದುರದೃಷ್ಟಕರವಾದ ಅಂಶವಿದೆ. ತುಘಲಕ್ ಒಂದು ಮನರಂಜಾನಾತ್ಮಕ ನಾಟಕವಾಗಿದ್ದು, ತುಘಲಕನ ಐತಿಹಾಸಿಕತೆಯಲ್ಲಿ ತಮಗೆ ಯಾವುದೇ ಆಸಕ್ತಿಯಿಲ್ಲ ಎಂದಿದ್ದಾರೆ. ಆದರೆ ಇದು ಹೀಗೆ ಸಾರಾಸಗಟಾಗಿ ತಿರಸ್ಕರಿಸಬಹುದಾದ ಪ್ರಶ್ನೆಯಲ್ಲವೆಂದೆನ್ನಿಸುತ್ತದೆ. ಭೈರಪ್ಪನವರು ತಾತ್ವಿಕವಾದ ಪ್ರಶ್ನೆಯೊಂದನ್ನೆತ್ತಿದ್ದಾರೆ. ಇತಿಹಾಸದಿಂದ ದ್ರವ್ಯಗಳನ್ನು ಬಳಸಿಕೊಳ್ಳುವಾಗ, ಕಲಾವಿದನಿಗೆ ಇತಿಹಾಸದ ಕುರಿತು ಯಾವ ನಿಷ್ಠೆಯಿರಬೇಕು? - ಎನ್ನುವುದೇ ಆ ಪ್ರಶ್ನೆ. ಇದೊಂದು ಸಂದಿಗ್ಧತೆಯ ಪ್ರಶ್ನೆ. ಎತ್ತಿರುವವರು ಸಮರ್ಥ ಕಾದಂಬರಿಕಾರರು. ಅದಕ್ಕೊಂದು ತಾತ್ವಿಕವಾದ ಉತ್ತರದ ಅವಶ್ಯಕತೆಯಿದೆ. ಅಂತಹ ಪ್ರಶ್ನೆಯೊಂದನ್ನು ಸಮರ್ಥವಾಗಿ ಎದುರಿಸುವ ಅಪೂರ್ವ ಅವಕಾಶವನ್ನು ಕಾರ್ನಾಡರು ಕಳೆದಿದ್ದಾರೆ. ಇತಿಹಾಸದ ಕುರಿತು ಹಂಗಿಲ್ಲದೇ ಬರೆಯುವುದು ಕಲಾವಿದನ ಸ್ವಾತಂತ್ರ್ಯವಾದರೆ ಅದು ಯಾವ ಕಾರಣಕ್ಕೆ ಲಭಿಸುತ್ತದೆ, ಅದರ ಇತಿ-ಮಿತಿಗಳೇನು, ಸಾಧಕ-ಬಾಧಕಗಳೇನು, ಜವಾಬ್ದಾರಿಗಳೇನು - ಎನ್ನುವ ಪ್ರಶ್ನೆಗಳನ್ನೆಲ್ಲಾ ಕಾರ್ನಾಡಾರು ಎತ್ತಿಕೊಂಡು ವಿವರಿಸಬಹುದಿತ್ತು. (ಅವರ ಅಕ್ಯಾಡಮಿಕ್ ಎನ್ನಿಸಬಹುದಾದ ಕಾಕನಕೋಟೆ ವಿಮರ್ಶೆಯನ್ನು ಓದಿರುವ ನನಗೆ ಇಂತಹ ಸವಾಲಿಗೆ ತಮ್ಮನ್ನೊಡ್ಡಿಕೊಳ್ಳುತ್ತಾರೆ ಎಂದೆನ್ನಿಸಿತ್ತು). ದುರಾದೃಷ್ಟವಶಾತ್ ಎಲ್.ಕೆ.ಜಿ. ಮಕ್ಕಳು 'ನೀನು ಮಾತ್ರ ಹಾಗೆ ಮಾಡಬಹುದಾ?' ಎಂದು ಕ್ಯಾತೆ ತೆಗೆಯುವ ರೀತಿಯಲ್ಲಿ, ಅಳುಮುಂಜಿಯಂತೆ ವರ್ತಿಸಿ ನಿರಾಸೆಗೊಳಿಸಿದರು. ಮತ್ತೆ ಭೈರಪ್ಪನವರ ಪತ್ರದ ದಾಳಿಗೆ ಸಿಕ್ಕು ಧೂಳೀಪಟವಾದರು. ಇತಿಹಾಸವನ್ನು ಬಳಸಿಕೊಳ್ಳುವಾಗ ಅದರಿಂದ ಇತಿಹಾಸದ ಮೇಲಾಗುವ ಪರಿಣಾಮಗಳಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ, ಕಲಾವಿದ ಅದನ್ನೆದುರಿಸಿಯೇ ತೀರಬೇಕು, ಅದಕ್ಕೆ ಜವಾಬ್ದಾರನಾಗಲೇಬೇಕು. ಆ ಹಂಗೇ ಇಲ್ಲದಿರಬೇಕಾದರೆ ಐತಿಹಾಸಿಕ ತುಘಲಕ್-ನಿಂದ ದ್ರವ್ಯಗಳನ್ನು ತೆಗೆದುಕೊಂಡು, ನಾಟಕದ ಎಲ್ಲಾ ಪಾತ್ರಗಳಿಗೆ ಇತಿಹಾಸಪುರುಷರ ಹೆಸರುಗಳನ್ನಿಡದೇ ಬೇರೆಯ ಹೆಸರಿಟ್ಟುಕೊಳ್ಳಬಹುದಿತ್ತು - ಎನ್ನುವ ಮಾತನ್ನು ವಾದಕ್ಕಾದರೂ ಪರಿಗಣಿಸಬೇಕಾಗುತ್ತದೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ - ಇತಿಹಾಸವನ್ನು ಬಳಸಿ ಉತ್ಕೃಷ್ಟವಾದ ಕಲಾಕೃತಿಯೊಂದು ಮೂಡಿದಾಗ ಸಮಾಜ ಸಹೃದಯತೆಯಿಂದ ಕಲಾವಿದನಿಗೆ ಆ ಕ್ಷಣಕ್ಕೆ ಕೊಡುವ ಮಾರ್ಜಿನ್ - ಇಷ್ಟನ್ನು ನಿರೀಕ್ಷಿಸಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯದ ಹಿಂದೆ ಸದಾ ಬಚ್ಚಿಟ್ಟುಕೊಳ್ಳುವುದು ಕಲಾವಿದನಿಗೆ ಶೋಭಿಸುವುದಿಲ್ಲ. ಆ ಸ್ವಾತಂತ್ರ್ಯವನ್ನು ಸಮಾಜದಿಂದ ಸದಾ ಕೋರುತ್ತಾ, ಜವಾಬ್ದಾರಿಯನ್ನು ಮೆರೆಯಬೇಕಾಗುತ್ತದೆ. ತುಘಲಕ್ ನಾಟಕದಲ್ಲಿ ಕಾರ್ನಾಡರು ಅದನ್ನು ಮೆರೆದಿದ್ದಾರೆ, ಅವರ ಟೀಪು ನಾಟಕದ ಬಗ್ಗೆ ಈ ಮಾತನ್ನು ಹೇಳುವುದಕ್ಕೆ ಸಾಧ್ಯವೇ - ಅದನ್ನಿನ್ನೂ ಶೋಧಿಸುತ್ತಿದ್ದೇನೆ. ಆದರೆ ಇದ್ಯಾವುದೂ, ತಾತ್ವಿಕವಾದ ಪ್ರಶ್ನೆಯನ್ನು ಎದುರಿಸದಿರುವುದಕ್ಕೆ ನೆಪವಾಗಬಾರದು.

ಮುಂದುವರೆಯುವುದು...

Sunday, November 05, 2006

ಟೀಪೂ ವಿವಾದದ ಒಳಸುಳಿಗಳಲ್ಲಿ: ಭಾಗ ೧

[ವಿವಾದಗಳ ಕುರಿತು ಪ್ರತಿಕ್ರಿಯಿಸುವುದೇ ಒಂದು ಅಭ್ಯಾಸವಾಗಿಬಿಡಬಾರದೆಂದು ನಾನು ಇಂತಹ ಬರಹಗಳು ಸ್ವಲ್ಪ ದಿವಸ ಬೇಡ ಎನ್ನುವ ನಿಲುವು ತಳೆದಿದ್ದೆ. ಆದರೆ, ಈ ಟೀಪುವಿನ ಕುರಿತಾದ ವಿವಾದ ನಿದ್ದೆಗೆಡಿಸಿದೆ. ಪ್ರತಿಕ್ರಿಯಿಸದೇ ಇರುವುದು ಸಾಧ್ಯವಿಲ್ಲ ಎನ್ನುವ ಒಂದು ಕಾರಣ ನನ್ನ ಬಳಿಯಿದೆ. ಲೇಖನ-ತ್ರಯಗಳನ್ನು ಓದುತ್ತಾ ಹೋದಹಾಗೆ ತಿಳಿಯುತ್ತದೆ. ಮೊದಲನೇಯ ಲೇಖನ ಈ ವಿವಾದದ ಕುರಿತು ಮಾತನಾಡಿರುವ ಮಹನೀಯರು, ಸಂಘಸಂಸ್ಥೆಗಳ ಹೇಳಿಕೆಗಳನ್ನು, ನಿಲುವುಗಳನ್ನು ಸಂಗ್ರಹವಾಗಿ ಒಂದೆಡೆ ಒದಗಿಸುವ ಪ್ರಯತ್ನ ಮಾಡುತ್ತದೆ. ನನ್ನ ಅಭಿಪ್ರಾಯಗಳನ್ನು ಓದುವವರಿಗೆ ಈ ಪೂರಕ ಓದಿನ ಅವಶ್ಯಕತೆಯಿದೆ. ಎರಡನೇಯ ಲೇಖನ, ಅಲ್ಲಿನ ಕೆಲ ಅಭಿಪ್ರಾಯಗಳಿಗೆ ನನ್ನ ಪ್ರತಿಸ್ಪಂದನೆಗಳು ಹಾಗೂ ನನ್ನ ಸ್ವಂತ ಅಭಿಪ್ರಾಯವನ್ನು ಹೇಳುತ್ತದೆ. ಮೂರನೇಯ ಲೇಖನ ಇಂತಹ ವಿವಾದಗಳನ್ನು ನಿರ್ವಹಿಸಬಹುದಾದ ರೀತಿಯ ಕುರಿತು ಚಿಂತಿಸುತ್ತದೆ. ಈ ಲೇಖನ-ತ್ರಯಗಳನ್ನು ಅಪಾರ ವಿಷಾದದಿಂದ ಬರೆಯುತ್ತಿದ್ದೇನೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲವೆಂದೆನ್ನಿಸುತ್ತದೆ.]

ಶಂಕರಮೂರ್ತಿ ಉವಾಚ ಮತ್ತು ಮೊದಲ ಪ್ರತಿಕ್ರಿಯೆಗಳು
ಒಂದು ಬೆಳಿಗ್ಗೆ ವೃತ್ತಪತ್ರಿಕೆಗಳನ್ನು ತೆರೆಯುತ್ತಿದ್ದಂತೆ, ಮಿಕ್ಕ ಸಾಮಾನ್ಯ ವಿಷಯಗಳ ಹೊರತಾಗಿ ಬೆಚ್ಚಿಬೀಳಿಸಿದ್ದು ಶಿಕ್ಷಣ ಸಚಿವರಾದ ಶಂಕರಮೂರ್ತಿಯರ ಹೇಳಿಕೆ. ಅಂದು ಮತ್ತು ಮುಂದೆ ಹೇಳಿದ ಅವರ ಮಾತುಗಳ ತಾತ್ಪರ್ಯವಿಷ್ಟು. ಮೈಸೂರು ಸಂಸ್ಥಾನದಲ್ಲಿ ಹಿಂದೆ ಆಡಳಿತ ಭಾಷೆಯಾಗಿದ್ದ ಕನ್ನಡ ಭಾಷೆಗೆ ಬದಲಾಗಿ ಪರ್ಶಿಯನ್ ಭಾಷೆಯನ್ನು ಬಳಕೆಗೆ ತಂದ ಟೀಪುಗೆ ಕನ್ನಡಾಭಿಮಾನವಿರಲಿಲ್ಲ, ಕನ್ನಡ ವಿರೋಧಿಯಾಗಿದ್ದ ಮತ್ತು ಅವನಿಗೆ ಇತಿಹಾಸದಲ್ಲಿ ಮಹತ್ತರವಾದ ಸ್ಥಾನದ ಅವಶ್ಯಕತೆಯಿಲ್ಲ. ವಿನಾಕಾರಣ ಅಕ್ಬರ್, ಔರಂಗಜ಼ೇಬ್ ಮುಂತಾದವರನ್ನು ವೈಭವೀಕರಿಸುವ ಇತಿಹಾಸ ಭಗತ್ ಸಿಂಘ್, ಆಜ಼ಾದ್ ಮುಂತಾದವರನ್ನು ಉಗ್ರಗಾಮಿಗಳಂತೆ ಚಿತ್ರಿಸಿ ಅಪಚಾರವೆಸಗಿದೆ. ವಿಶ್ವೇಶ್ವರಯ್ಯ ಮತ್ತು ಕೃಷ್ಣರಾಜ ಒಡೆಯರರಿಗೆ ಇತಿಹಾಸದಲ್ಲಿ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ. ಇದನ್ನು ಒಂದೆರಡು ಬಾರಿ ಸಮರ್ಥಿಸಿಕೊಂಡ ನಂತರ ವಿರೋಧಗಳು ಜಾಸ್ತಿಯೆಂದೆನ್ನಿಸಿದ ಮೇಲೆ, ಜಾತ್ಯತೀತ ಜನತಾ ದಳದ ಮುಜುಗರವೂ ಒತ್ತಡವಾಗಿ ಪರಿವರ್ತಿತವಾದಾಗ 'ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ, ಇದು ನನ್ನ ವೈಯಕ್ತಿಕ ಅಭಿಪ್ರಾಯ' ಎಂದು ಸ್ವಲ್ಪ ಧ್ವನಿಯನ್ನು ಬದಲಿಸಿಕೊಂಡರು. ಇಷ್ಟೆಲ್ಲ ಅವರು ಶಾಲಾ ವಿದ್ಯಾರ್ಥಿಗಳ ಮುಂದೆ ಹೇಳಿದ್ದು ಎನ್ನುವುದನ್ನು ಮರೆಯಲಾಗದು. ಮಾತಾಂತರ ಮುಂತಾದುವುದನ್ನು ಅವರು ಉಲ್ಲೇಖಿಸಿರದಿವುದು ಕೂಡಾ ಗಮನಾರ್ಹವಾದ ಸಂಗತಿಯಾದರೂ ಹೇಳಿಕೆಯ ಉದ್ದಿಶ್ಯ, ಅವರ ಹಿನ್ನೆಲೆ ಇವುಗಳನ್ನು ಕಡೆಗಣಿಸಲಾಗದು.

ಇದನ್ನು ವಿರೋಧಿಸಿ ಯಾರ್ಯಾರು ಏನೇನು ಹೇಳಬಹುದು ಎನ್ನುವುದನ್ನು ಊಹಿಸುವುದು ಕಷ್ಟವೇನೂ ಅಲ್ಲ. ಕಾರ್ನಾಡ್, ಮರುಳಸಿದ್ದಪ್ಪ, ಗೋವಿಂದರಾವ್ ಮುಂತಾದವರು ಖಂಡಿತವಾಗಿ ಕಣಕ್ಕಿಳಿಯುತ್ತಾರೆ ಎಂದುಕೊಂಡೆ. ಮೊದಲ ಪ್ರತಿಕ್ರಿಯೆ ಅಖಿಲ ಕರ್ನಾಟಕ ಮಹಮ್ಮದೀಯರ ವೇದಿಕೆಯಿಂದ - ಶಂಕರಮೂರ್ತಿಯವರ ಹೇಳಿಕೆಯನ್ನು ವಿರೋಧಿಸುತ್ತಾ ಟೀಪು ಕೆಳದಿಯ ಅರಸರಿಗೆ ಬರೆದ ಕನ್ನಡ ಪತ್ರಗಳನ್ನು ಉಲ್ಲೇಖಿಸಿ ಈ ಕುರಿತಾದ ಸಂವಾದಕ್ಕೆ ಆಹ್ವಾನವಿತ್ತಿದ್ದಾರೆ. ಪ್ರತಿಕ್ರಿಯೆಯ ಧ್ವನಿ ನನ್ನನ್ನು ಚಕಿತಗೊಳಿಸಿತಲ್ಲದೇ ಗೌರವ ಮೂಡಿಸಿತು. ತಲಕಾಡು ಚಿಕ್ಕರಂಗೇಗೌಡರೆನ್ನುವವರು ಟೀಪುವಿನ ಇತ್ಯಾತ್ಮಕ ಚಿತ್ರಣವಿರುವ ಲಾವಣಿಗಳನ್ನು ಉಲ್ಲೇಖಿಸಿ, ಗಾಂಧೀಜಿಯವರು ಟೀಪುವನ್ನು 'ಉತ್ತಮ ದೊರೆ' ಎಂದಿರುವುದನ್ನು ನೆನಪಿಸಿದ್ದಾರೆ. ರಾಜಕಾರಣಿಯಾದ ಎಸ್. ಬಂಗಾರಪ್ಪನವರು ಟೀಪುವಿನ ಕಾಲದಲ್ಲಿ ಕನ್ನಡಿಗರು ಉನ್ನತ ಸ್ಥಾನಮಾನದಲ್ಲಿದ್ದರು, ಯುದ್ಧದ ಸಮಯದಲ್ಲಿ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದನು ಎನ್ನುವುದನ್ನೆಲ್ಲೆ ನೆನ್ಪಿಸಿ, ಒಂದು ಹೆಜ್ಜೆ ಮುಂದೆ ಹೋಗಿ ಶಂಕರಮೂರ್ತಿಯವರನ್ನು ಕೈಬಿಡಿ ಎಂದು ಆಗ್ರಹಿಸಿದ್ದಾರೆ. ಪತ್ರಿಕೆಯೊಂದರಲ್ಲಿ ಬಂದ ಪ್ರೊ|| ಶಿವರಾಮಯ್ಯನವರ ಪತ್ರವಂತೂ ಮತ್ತಷ್ಟು ವಿಶೇಷವಾಗಿತ್ತು. ಟೀಪು ಕನ್ನಡ ರಾಷ್ಟ್ರೀಯತೆಗಾಗಿ ರಣರಂಗದಲ್ಲಿ ಮಡಿದವನು (ಇದಕ್ಕೆ ಪೂರಕವಾಗಿ ಯಾವುದೇ ಐತಿಹಾಸಿಕ ವಿವರಗಳೆಲ್ಲವನ್ನು ಅವರು ಕೊಟ್ಟಿರಲಿಲ್ಲ), ಅವನ ಕಾಲದ ಸುಧಾರಣಾ ಕ್ರಮಗಳು ಅತ್ಯಾಧುನಿಕವೆಂಬಂತಿದ್ದವು (ಇದಕ್ಕೆ ಪೂರಕವಾಗಿ ಅನೇಕ ವಿವರಗಳನ್ನು ಒದಗಿಸಿದ್ದರು - ಬಿಡಿ ಪಾಳೇಗಾರಿಕೆಯ ನಿಯಂತ್ರಣ, ಬ್ರಾಹ್ಮಣ-ಊಳಿಗಮಾನ್ಯ ಪದ್ಧತಿಯ ಹಿಡಿತ ಸಡಿಲ, ದೇಸಿ ಮಾರುಕಟ್ಟೆಯ ವರ್ಧನೆ). ಇದೆಲ್ಲವೂ ಚರ್ಚೆಯನ್ನು ಅನೇಕ ದಿಕ್ಕಿನಲ್ಲಿ ಒಯ್ಯುವಂತಿದ್ದವು.

ದಿಗ್ಗಜರ ಪ್ರವೇಶ
ದಿಗ್ಗಜರ ಪ್ರವೇಶವಾದದ್ದೇ ಈ ಹಂತದಲ್ಲಿ. ಹಿರಿಯರಾದ ಗಿರೀಶ ಕಾರ್ನಾಡ, ಪ್ರೊ|| ಮರಳುಸಿದ್ದಪ್ಪ, ಪ್ರೊ|| ಬಿ ಕೆ ಚಂದ್ರಶೇಖರ್, ಪ್ರೊ|| ರವಿಕುಮಾರ್ ವರ್ಮ (ಪ್ರಜಾವಾಣಿಯಲ್ಲಿ ವರದಿಯಾದಮ್ತೆ) ಶಂಕರಮೂರ್ತಿಯವರ ಹೇಳಿಕೆಯನ್ನು ಖಂಡಿಸುತ್ತಾ - ಟೀಪು ರಾಷ್ಟ್ರ ಪ್ರೇಮಿ, ಕನ್ನಡ ಪ್ರೇಮಿ ಎನ್ನುವುದು ನಿರ್ವಿವಾದ, ಶಂಕರಮೂರ್ತಿಯವರ ವಿರುದ್ಧ ಚಳವಳಿ ಹಮ್ಮಿಕೊಳ್ಳುತ್ತೇವೆ, ಟೌನ್ ಹಾಲ್-ನಲ್ಲಿ ಧರಣಿ ಸತ್ಯಾಗ್ರಹ ಏರ್ಪಡಿಸುತ್ತೇವೆ ಎನ್ನುವ ಜಂಟಿ ಹೇಳಿಕೆಯನ್ನು ಕೊಟ್ಟರು. ಮತ್ತೊಂದೆಡೆ ಕಾರ್ನಾಡರು ಹೇಳಿದ್ದಾರೆ ಎಂದು ವರದಿಯಾಗಿದ್ದು - ಶಂಕರಮೂರ್ತಿಯವರ ಹೇಳಿಕೆಗಳು ನಿರಾಧಾರ, ಇದೆಲ್ಲಾ ಬಿಜೆಪಿಯ ರಹಸ್ಯ ಕಾರ್ಯಸೂಚಿಯನ್ನೇ ತೋರಿಸುತ್ತದೆ. ತಮ್ಮ ಬಳಿಯಿರುವ ಸಾಕ್ಷಿಗಳೊಂದಿಗೆ ಚರ್ಚೆಗೆ ಬರಲಿ - ಎಂದು. (ಇದಾದ ಬಹಳ ದಿನಗಳ ನಂತರ ಕಾರ್ನಾಡರು ಶಿಕ್ಷಣ ಸಚಿವರ ನಡವಳಿಕೆಯ ಕುರಿತಾದ ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿದ್ದು, ಇತಿಹಾಸದ ಕುರಿತ ಚರ್ಚೆಗಲ್ಲ ಎಂದು ಹೇಳಿದ್ದು ನೋಡಿ ಆಶ್ಚರ್ಯವಾಯಿತು. ತಪ್ಪು ಪತ್ರಿಕೆಗಳದ್ದೋ ಕಾರ್ನಾಡರದ್ದೋ ತಿಳಿಯಲಿಲ್ಲ.)

ಪ್ರೊ|| ಬಿ ಕೆ ಚಂದ್ರಶೇಖರ್ ಅದೇಕೋ ಬುದ್ಧಿಜೀವಿ ರಾಜಕಾರಣಿಗೇ ವಿಶೇಷವಾದ ಧ್ವನಿಯಲ್ಲಿ ಮಾತನಾಡತೊಡಗಿದ್ದರು. (ಎನ್ ಡಿ ಟಿವಿಯಲ್ಲಿ ಇತ್ತೀಚೆಗೆ ಬೆಳಗಾವಿ ಅಧಿವೇಶನದ ಕುರಿತು ಅವರು ಮಾತನಾಡುತ್ತಿದ್ದಾಗ ಅವರ ಧ್ವನಿಯಲ್ಲಿನ ಕೃತಕತೆಯನ್ನು ನೋಡಿ ಮರುಕವುಂಟಾಯಿತು. ಇದಕ್ಕೆ ಪ್ರತಿಯಾಗಿ ಚಿರಂಜೀವಿ ಸಿಂಘ್ ಅದೆಷ್ಟು ಆಪ್ಯಾಯಮಾನವಾಗಿ ಮಾತನಾಡುತ್ತಿದ್ದರು - ಅದಿರಲಿ ಇದು ಇಲ್ಲಿ ಮುಖ್ಯವಲ್ಲ). ಅವರ ವ್ಯಂಗ್ಯ ಅವ್ಯಾಹತವಾಗಿ ಸಾಗಿತ್ತು. ಶಂಕರಮೂರ್ತಿಯವರನ್ನು ಹಂಗಿಸುತ್ತಾ ಟೀಪು ಯಾರೆಂದು ಶ್ರ್‍ಇಂಗೇರಿ ಗುರುಗಳನ್ನು ಕೇಳಿ, ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವ ಶಂಕರಮೂರ್ತಿಗಳ ವಿರುದ್ಧ ಧರಣಿ ನಡೆಸಬೇಕಾಗುತ್ತದೆ ಎಂದಿದ್ದಾರೆ. ಅದೇನೇ ವ್ಯಂಗ್ಯ-ಪ್ರತಿಷ್ಠೆಗಳಿರಲಿ ಕಡೆಯ ಮಾತು ಮಾತ್ರ ಅನುಮೋದಿಸಬೇಕಾದದ್ದೇ. ಪ್ರೊ|| ಮರುಳಸಿದ್ದಪ್ಪನವರು ಶಂಕರಮೂರ್ತಿಯವರ ಈ ಹೇಳಿಕೆ ಕನ್ನಡಿಗರ ಆತ್ಮಗೌರವಕ್ಕೇ ಚ್ಯುತಿ ತರುವಂತಹದ್ದು ಎನ್ನುವ ಮಾತನಾಡಿದ್ದಾರೆ (ಇದು ಮುಖ್ಯವಾದ ಚರ್ಚೆಯಾಗಬೇಕಾದ ವಿಷಯ). ಇದನ್ನು ಪ್ರತಿಭಟಿಸಿ ಟೌನ್ ಹಾಲ್-ನಲ್ಲಿ ಪ್ರತಿಭಟನೆ ಎನ್ನುವುದನ್ನು ಮರು ಉಚ್ಛರಿಸಿದ್ದಾರೆ. ಪ್ರೊ|| ಎನ್ ವಿ ನರಸಿಂಹಯ್ಯನವರು ಸಚಿವರನ್ನು ಖಂಡಿಸಿ ಅವರನ್ನು ಸಂಪುಟದಿಂದ ಕೈಬಿಡಿ ಎಂದಿದ್ದಾರೆ. ಅನೇಕ ಕನ್ನಡ ಪರ ಸಂಘಟನೆಗಳು ಸಚಿರವನ್ನು ಖಂಡಿಸಿ ಬಿಜೆಪಿಯ ಮತಾಂಧತೆ ಮತ್ತು ಹಿಂದಿ ಹೇರಿಕೆಗಳನ್ನು ನೆನಪಿಸಿ ವಿರೋಧಿಸಿದ್ದಾರೆ.

ಕಣಕ್ಕಿಳಿದ ಭೈರಪ್ಪನವರು
ಇಲ್ಲಿಯವರಿಗಿನ ವಾದ ಹೆಚ್ಚಾಗಿ ವಸ್ತುವಿನ ಕುರಿತಾಗಿಯೇ ಇದ್ದರೆ, ಚರ್ಚೆಗೆ ವೈಯಕ್ತಿಕವಾದ ಆಯಾಮವೊಂದನ್ನು ತಂದಿದ್ದು ಕಾದಂಬರಿಕಾರರಾದ ಭೈರಪ್ಪನವರು. ವಿಜಯಕರ್ನಾಟಕಕ್ಕೆ ಬರೆದ ಸುದೀರ್ಘವಾದ ಪತ್ರವೊಂದರಲ್ಲಿ ಅವರು ಸಾಹಿತಿ-ಕಲಾವಿದರಾಗಿ ಕಾರ್ನಾಡರನ್ನು ಪರಿಗಣಿಸಿ, ಅವರ ತುಘಲಕ್ ನಾಟಕವನ್ನು ರಂಗಕೃತಿಯಾಗಿ ಮೆಚ್ಚುತ್ತಾ, ನಾಟಕದ ಬೆನ್ನುಡಿಯಲ್ಲಿ ಕಾರ್ನಾಡರು ತಮ್ಮ ನಾಟಕ ಐತಿಹಾಸಿಕವಲ್ಲ ಎಂದಿರುವುದನ್ನು ಉಲ್ಲೇಖಿಸುತ್ತಾರೆ. ಇಷ್ಟಾದರೂ ಅವರಿಗೆ ಇತಿಹಾಸದ ತುಘ್ಲಕ್ ಹಿನ್ನೆಲೆಯಲ್ಲಿ ನಾಟಕದ ಒಂದಿಷ್ಟು ವಿವರಗಳನ್ನು ಅನಾವರಣಗೊಳಿಸುವ ತುರ್ತು ಕಂಡಿದೆ. ಈ ನಾಟಕ ಐತಿಹಾಸಿಕ ತುಘಲಕ್-ನ ವೈಭವೀಕರಣವೆಂದು ವಾದಿಸಿ, ಅದೇ ಮಾದರಿಯಲ್ಲಿ ಕಾರ್ನಾಡರ ಟೀಪು ನಾಟಕವನ್ನು ವಿವರಿಸಿ ಟೀಪೂ-ಗೆ ಬಿಳಿಬಣ್ಣ ಬಳೆದು ಧೀರೋದಾತ್ತ ನಾಯಕನಾಗಿ ಚಿತ್ರಿಸಿದ್ದಾರೆ. ಕಾರ್ನಾಡರಿಗಿರಬಹುದಾದ ಇತಿಹಾಸದ ಕುರಿತ ನಿಷ್ಠೆ ಎಷ್ಟರಮಟ್ಟಗಿನದ್ದು ಎಂಬ ಶೋಧನೆಯಾಗಿದೆ ಭೈರಪ್ಪನವರದ್ದು. ಪತ್ರದಲ್ಲಿ ಟೀಪು, ಔರಂಗಜೇಬ್ ಇನ್ನಿತರ ಮುಸಲ್ಮಾನ ದೊರೆಗಳ ಕ್ರೌರ್ಯದ ವಿವರಣೆ ಕೊಟ್ಟಿದ್ದಾರೆ. ಟೀಪುವಿನ ಕಾಲದಲ್ಲಾದ ಪರ್ಶಿಯನ್ ಬದಲಾವಣೆಗಳ ಪಟ್ಟಿ, ಮತಾಂತರದ ಪಟ್ಟಿ ಕೊಡುತ್ತಾ ಟೀಪುವನ್ನು ಮತಾಂಧನೆಂದು ಘೋಶಿಸಿದ್ದಾರೆ. ಇನ್ನಿತರ ರಾಜ್ಯಗಳಿಲ್ಲದಂತೆ ಕರ್ನಾಟಕದ ಮುಸಲ್ಮಾನರು ಉರ್ದು ಮಾತನಾಡುವುದಕ್ಕೆ ಟೀಪುವಲ್ಲದೇ ಮತ್ತಿನ್ಯಾವ ಕಾರಣವಿದೆ ಎಂದು ಪ್ರಶ್ನಿಸಿದ್ದಾರೆ. ಟಿಪುವಿನ ಇತ್ಯಾತ್ಮಕ ಚಿತ್ರಣ ನೀಡುವ ಲಾವಣಿಗಳಿಗೆ ಐತಿಹಾಸಿಕತೆಯಿಲ್ಲವೆಂದು ಅಪ್ಪಣೆ ಕೊಡಿಸಿದ್ದಾರೆ (ಇದಕ್ಕೆ ಬೇಕಾದ ವಿವರಗಳನ್ನು ಒದಗಿಸಿಲ್ಲ). ಇಷ್ಟೆಲ್ಲಾ ಆದ ನಂತರ ಒಂದು ಮುಖ್ಯ ಪ್ರಶ್ನೆಯನ್ನೆತ್ತಿದ್ದಾರೆ - 'ಸಾಹಿತಿಗೆ ಇತಾಹಸವನ್ನು ಬಳಸುವಾಗ ಎಷ್ಟರಮಟ್ಟಿಗಿನ ಸ್ವಾತಂತ್ರ್ಯವಿದೆ?' - ಎನ್ನುವ ಪ್ರಶ್ನೆ. ಕಾರ್ನಾಡರ ಈ ರೀತಿಯ ಚಿತ್ರಣಗಳಿಗೆ ಅವರಿಗಿರಬಹುದಾದ ಮಾರ್ಕ್ಸಿಸ್ಟ್-ಕಮ್ಯುನಿಸ್ಟ್ ಹಿನ್ನೆಲೆಯನ್ನು ಉಲ್ಲೇಖಿಸಿದ್ದಾರೆ (ಇದು ಏಕಕಾಲದಲ್ಲಿ ಕಾರ್ನಾಡರ ಮತ್ತು ಕಮ್ಯುನಿಸ್ಟರ ಕೆಂಗಣ್ಣಿಗೆ ಗುರಿಯಾದೀತು!). ಕಡೆಯಲ್ಲಿ ಒಂದಿಷ್ಟು ದಿಸ್ಕ್ಲೈಮರ್-ಗಳನ್ನು ಕೊಡುತ್ತಾ - ತಾವು ಶಂಕರಮೂರ್ತಿಗಳ ಹೇಳಿಕೆಗೆ ಬೆಂಬಲ ಕೊಡುತ್ತಿಲ್ಲ, ಈಗಿರುವುದ್ದಕ್ಕಿನ ಭಿನ್ನವಾದ ರೀತಿಯಲ್ಲಿ ಮುಸಲ್ಮಾನ ದೊರೆಗಳ ಕಾಲದ ವಾಸ್ತವಾಂಶಗಳ ಚಿತ್ರಣ ಕೊಡಬೇಕು ಎಂದಿದ್ದರೆ.

ಈ ಪತ್ರವನ್ನೋದಿ ದೀರ್ಘವಾದ ಉಸಿರೊಂದನ್ನೆಳೆದು ಬಿಟ್ಟೆ. ಇನ್ನು ಆಯಿತು, ವಿವಾದ ವಸ್ತುವಿನಿಂದ ದೂರವಾಗಿ ವ್ಯಕ್ತಿಗಳತ್ತಲೇ ಇನ್ನು ಮುಂದೆ ಸುತ್ತುತ್ತದೆ ಎಂದು. ಅಷ್ಟರಲ್ಲೇ ಚಂಪಾರ ಹೇಳಿಕೆ ಬಿಡುಗಡೆಯಾಗಿತ್ತು. ಶಂಕರಮೂರ್ತಿಯವರನ್ನು ಖಂಡಿಸಿದ್ದಲ್ಲದೇ ಅನಂತಮೂರ್ತಿ, ಕಾರ್ನಾಡರನ್ನೂ ಕನ್ನಡದ್ರೋಹಿಗಳೆಂದು ಜರೆಯಲು ಮರೆಯಲಿಲ್ಲ. ಅನಂತಮೂರ್ತಿಯವರಿನ್ನೂ ಮಾತಾಡೇ ಇಲ್ಲವಲ್ಲ ಎಂದು ನೋಡಿದರೆ ಪತ್ರಿಕೆಯಲ್ಲಿ ಅವರ ಹೇಳಿಕೆ ಕೆಳಕಂಡಂತೆ ವರದಿಯಾಗಿತ್ತು - ಇಂತಹ ಸೂಕ್ಷ್ಮವಾದ ವಿಚಾರಗಳ ಕುರಿತು ಎಚ್ಚರದ ಅವಶ್ಯಕತೆಯಿದೆ, ವಸಾಹತುಶಾಹಿ ವಿರುದ್ಧ ಹೋರಾಡಿದ ಹೋರಾಟಗಾರ ಟೀಪು, ಅವನ ಕಾಲದಲ್ಲಿ ಅನೇಕ ಭಾಷೆಗಳ ಬಳಕೆಯಿತ್ತು - ಎಂದು.

ಕಮ್ಯುನಿಸ್ಟ್ ಪಕ್ಷಗಳು ಶಂಕರಮೂರ್ತಿಗಳ ವಜಾಕ್ಕೆ ಆಗ್ರಹಿಸಿವೆ. ವಾಚಕರವಾಣಿಗೆ ಬಂದಿರುವ ಕೆಲ ಪತ್ರಗಳು ಮತ್ತಷ್ಟು ಕೆಲ ಅಂಶಗಳಿಗೆ ಚರ್ಚೆಗೆ ತಂದಿವೆ. ಪತ್ರವೊಂದು ಕರ್ನಾಟಕ ಗೆಜ಼ೆಟಿಯರ್-ಅನ್ನು ಉಲ್ಲೇಖಿಸುತ್ತಾ ಶಂಕರಮೂರ್ತಿಯವರ ಹೇಳಿಕೆಯನ್ನು ಸಮರ್ಥಿಸಿವೆ. ಮತ್ತೊಂದು ಪತ್ರ ಟೀಪುವು ಸಾಮಾನ್ಯರೊಡನೆ ಕನ್ನಡ ಮಾತನಾಡುತ್ತಿದ್ದನ್ನೂ, ಸೈನಿಕರ ಎದೆಯ ಕವಚದ ಮೇಲೆ 'ಟೀಪು ಸುಲ್ತಾನರು' ಎಂದು ಕನ್ನಡದಲ್ಲಿದ್ದನ್ನೂ, ತನ್ನ ನಾಡನ್ನು 'ಕನ್ನಡ ನಾಡು' ಎಂದು ಕರೆಯುತ್ತಿದ್ದನೂ ಉಲ್ಲೆಖಿಸಿದ್ದಾರೆ.

ತಜ್ಞರ ದಿಂಡಿಮ
ಚರ್ಚೆ ಮತ್ತೊಂದು ದಿಕ್ಕೆನೆಡೆ ಸರಿದದ್ದು ಇತಿಹಾಸ ತಜ್ಞರು, ಸಂಶೋಧಕರು ಪ್ರತ್ಯಕ್ಷರಾದಾಗ. ಸಂಶೋಧಕರಾದ ಚಿದಾನಂದ ಮೂರ್ತಿಗಳ ಹೇಳಿಕೆಗಳು ಪ್ರಜಾವಾಣಿಯಲ್ಲಿ ಮತ್ತು ವಿಜಯಕರ್ನಾಟಕದಲ್ಲಿ ವರದಿಯಾದದ್ದು - ಎರಡೂ ಸ್ವಲ್ಪ ಭಿನ್ನಧ್ವನಿಗಳನ್ನು ಹೊಂದಿದ್ದು ನೋಡಿ ಯಾರಿಗಾದರೂ ಗಾಬರಿಯಾಗದಿರದು. ಪ್ರಜಾವಾಣಿಯಲ್ಲಿ ಅವರ ಹೇಳಿಕೆ ವರದಿಯಾದಂತೆ - ಟೀಪು ಕನ್ನಡದ ಪರವಾಗಿರಲಿಲ್ಲ, ಪರ್ಷಿಯನ್ ಭಾಷೆಯನ್ನು ಆಡಳಿತಭಾಷೆಯಾಗಿ ಜಾರಿಗೊಳಿಸಿದ, ಎಲ್ಲೆಲ್ಲಿ ಕನ್ನಡ ಬಳಸಿದನೋ ಅದೆಲ್ಲಾ ಭಕ್ತಿ ಅಥವಾ ಅಭಿಮಾನಗಳಿಂದಲ್ಲದೇ ಕೇವಲ ಅನುಕೂಲಕ್ಕಾಗಿ ಬಳಸಿದ, ಅನ್ಯಮತಗಳ ಕುರಿತು ಸೇಡಿನ ಭಾವವನ್ನು ಹೊಂದಿದ್ದ, ಕ್ರೌರ್ಯ ಹೊಂದಿದ್ದ, ತನ್ನ ಮತದ ಕುರಿತು ಅತಿಯಾದ ಅಭಿಮಾನ ಹೊಂದಿದ್ದ - ಎಂದಿದ್ದಾರೆ, ಪೂರಕವಾಗಿ ಇತಿಹಾಸಕಾರ ಹಯವದನರಾವ್-ರನ್ನು ಉಲ್ಲೇಖಿಸಿದ್ದಾರೆ (ಕಾರ್ನಾಡ್ ತಮ್ಮ ಟೀಪು ನಾಟಕದಲ್ಲಿ ಇದನ್ನು ಬ್ರಿಟಿಷರ ಪರವಾಗಿ ಪೂರ್ವಗ್ರಹಪೀಡಿತವಾದ ಪುಸ್ತಕ ಎಂದಿದ್ದಾರೆ). ಅತ್ಯಾಶ್ಚರ್ಯಕರ ರೀತಿಯಲ್ಲಿ ಅವರ ಹೇಳಿಕೆ ಮುಂದುವರೆದು - "ಆದರೆ ಅವನನ್ನು ಕನ್ನಡ ವಿರೋಧಿ ಎಂದು ಕರೆಯಲಾರೆ" ಎಂದಿದ್ದಾರೆ - ಎಂದು ವರದಿಯಾಗಿದೆ. ಆದರೆ ವಿಜಯಕರ್ನಾಟಕದಲ್ಲಿ ಮಾತ್ರ ಚಿಮೂ ಹೇಳಿಕೆ ಮಿಕ್ಕ ಸಾಮಾನ್ಯ ವಿವರಗಳನ್ನು ಬಿಟ್ಟು "ಟೀಪು ಕನ್ನಡವಿರೋಧಿಯಷ್ಟೇ ಅಲ್ಲ, ಉಗ್ರಗಾಮಿ, ಅತಾಂಧ, ಅವನ ಕಾಲದಲ್ಲಿ ಕನ್ನಡದ ಅಭಿವೃದ್ಧಿಯಾಗಿರಲಿಲ್ಲ - ಎಂದು ಚೀಮೂ ದೂರಿದ್ದಾರೆ" ಎಂದು ವರದಿಯಾಗಿದೆ. ಚಿಮೂ ವರದಿಗಳಲ್ಲಿನ ಈ ಭಿನ್ನತೆಗಳನ್ನು ಖಂಡಿಸಿಲ್ಲ ಎನ್ನುವುದು ಕೂಡಾ ದುರ್ದೈವದ ಸಂಗತಿ.

ಇತಿಹಾಸಕಾರರಾದ ಸೂರ್ಯನಾಥ ಕಾಮತ್ - ಭೈರಪ್ಪ ಹೇಳಿಕೆಯಲ್ಲಿ ತಪ್ಪಿಲ್ಲ, ಟೀಪುವನ್ನು ಕನ್ನಡ ದ್ರೋಹಿ ಎಂದು ನಾನು ಹೇಳುವುದಿಲ್ಲ. ಆದರೆ, ೧೭೯೨ರ ನಂತರ ಆತ ಕನ್ನಡ ಪ್ರೇಮಿ ಎನ್ನುವುದಕ್ಕೆ ದಾಖಲೆ ಸಿಗುವುದು ಕಷ್ಟ, ಅವನ ಕಾಲದ ಆಡಳಿತ ಭಾಷೆಯ ಬದಲಾವಣೆಯಿಂದ ಆರ್ಥಿಕ ಆದಾಯ ಕುಸಿಯಿತು ಎಂದು ಹೇಳಿದ್ದಾರೆ. ಇದಕ್ಕೆಲ್ಲಾ ದಾಖಲೆಗಳಿವೆ ಎಂದಿದ್ದಾರೆ (ಗೋವಿಂದರಾವ್ ಮುಂತಾದವರು ಸೂರ್ಯನಾಥ ಕಾಮತರು ಇತಿಹಾಸವನ್ನು ತಿರುಚಿ ಗೆಜ಼ೆಟಿಯರನ್ನು ವಿಕೃತಿಗೊಳಿಸಿದ್ದಾರೆ ಎಂದು ದೂರಿದ್ದಾರೆ, ಅದಕ್ಕೆ ಪೂರಕವಾದ ದಾಖಲೆಗಳನ್ನು, ವಿವರಗಳನ್ನು ಒದಗಿಸಿಲ್ಲ). ಪ್ರೊ|| ಶೆಟ್ಟರ್ ಅಪಾರವಾದ ಎಚ್ಚರಿಕೆಯ ಹೇಳಿಕೆ ಕೊಟ್ಟಿದ್ದಾರೆ. ಟೀಪು ಅನೇಕ ತಪ್ಪುಗಳನ್ನು ಮಾಡಿರಬಹುದು ಅಷ್ಟರಿಂದಲೇ ಅವನ ಸಂಪೂರ್ಣ ವ್ಯಕ್ತಿತ್ವವನ್ನು ಅಳೆಯಲಾಗದು. ಹಿಂದೆ ಯಾರೂ ಮಾಡಿಲ್ಲದ ಒಳ್ಳೆಯ ಕೆಲಸಗಳು ಅವನ ಕಾಲದಲ್ಲಾಗಿದೆ. ತೆಲೆಗು ತಮಿಳುಗಳನ್ನು ಅಪಾರವಾಗಿ ಪ್ರೋತ್ಸಾಹಿಸಿರುವ ಕೃಷ್ಣದೇವರಾಯನನ್ನು ಕನ್ನಡ ದ್ರೋಹಿ ಎಂದು ಕರೆಯಲಾಗುತ್ತದೆಯೇ? ಎಂದಿದ್ದಾರೆ. (ಒಟ್ಟಿಡೀ ವಿವಾದದಲ್ಲಿ ನನಗೆ ಕಂಡ ವಿವೇಕಯುತವಾದ ನಿಲುವು ಶೆಟ್ಟರ್-ರದ್ದೇ). ಕೋ ಚೆನ್ನಬಸಪ್ಪನವರು ಭೈರಪ್ಪನವರ ಹೇಳಿಕೆಗಳು ನಾಗೆಪಾಟಲಿನ ಮಾತುಗಳು, ತಿತಾ ಶರ್ಮರ 'ಮೈಸೂರಿನ ಇತಿಹಾಸದ ಹಳೇಯ ಪುಟಗಳು' ಎಲ್ಲರೂ ತೆಗೆದು ನೋಡಬೇಕು (ಈ ಪುಸ್ತಕ ನನ್ನ ಕೈಗೆ ಸಿಕ್ಕಿಲ್ಲ). ವಾಟಾಳ್ ನಾಗರಾಜರು ತಮ್ಮದೇ ಆದ ಶೈಲಿಯಲ್ಲಿ 'ಶಂಕರಮೂರ್ತಿಗಳನ್ನು ನಾನೇ ಆಸ್ಪತ್ರೆಗೆ ಸೇರಿಸುತ್ತೇನೆ' ಎಂದು ಒಂದಿಷ್ಟು ಮನರಂಜನೆ ಒದಗಿಸಿದ್ದಾರೆ. ಬರಗೂರರೂ ಸಹ 'ಇಂದಿನ ಮಾನದಂಡಗಳಿಂದ ಅಂದಿನ ವಿದ್ಯಮಾನಗಳನ್ನು ಅಳೆಯಬಾರದು' (ಇದನ್ನು ಈ ವಿಷಯವಲ್ಲದೇ ಮಿಕ್ಕ ವಿಷಯಗಳಿಗೆ ಅನ್ವಯಿಸುವುದಕ್ಕೆ ಬರಗೂರು ಸಿದ್ಧರೆ ಎನ್ನುವುದು ನನಗೆ ಮನವರಿಕೆಯಾಗಿಲ್ಲ). - ಸುಮಾರು ತೂಕದ ಮಾತುಗಳನ್ನೇ ಆಡಿದ್ದರೆ. ಆದರೆ 'ಟೀಪು ಕನ್ನಡವನ್ನು ಹತ್ತಿಕ್ಕಲಿಲ್ಲ ಎನ್ನುವುದು ಮುಖ್ಯ' ಎಂದಿದ್ದಾರೆ. (ಆಡಳಿತ ಭಾಷೆಯಾಗಿ ಪರಿಶಿಯನ್ ಭಾಷೆ ಜಾರಿಗೆ ತಂದದ್ದು ಕನ್ನಡವನ್ನು ಹತ್ತಿಕ್ಕಿದಂತಾಗಲಿಲ್ಲವೇ ಎನ್ನುವುದನ್ನು ಅವರು ವಿವರಿಸಿಲ್ಲ). ಪ್ರೊ|| ಶೇಷಗಿರಿರಾಯರು ಮೇಲ್ನೋಟಕ್ಕೆ ಎಚ್ಚರದಿಂದ ಮಾತನಾಡುತ್ತಿದ್ದಾರೆ ಎನ್ನುವಂತಿದ್ದರೂ ಅವರು ಏನನ್ನೋ ಹೇಳುವುದನ್ನು ಮರೆಮಾಚುತ್ತಿದ್ದಾರೆ ಅನ್ನಿಸುತ್ತಿದೆ. ಅವರು 'ಇತಿಹಾಸವನ್ನು ದಾಖಲೆ ಆಧಾರಗಳಿಂದಲ್ಲದೇ ಕೋಪತಾಪಗಳಿಂದ ತೀರ್ಮಾನಿಸಬಾರದು, ವೋಟ್ ಬ್ಯಾಂಕ್ ಜೊತೆ ಸಾಂಬಂಧ ಕಲ್ಪಿಸಬಾರದು, ಯಾವ ಸಮುದಾಯದವರಾದರೂ ತಾವು ಸತ್ಯವನ್ನು ಸ್ವೀಕರಿಸುವುದಕ್ಕೆ ಶಕ್ತರು ಎಂದು ತೋರಿಸಿಕೊಡಬೇಕು' ಎಂದಿದ್ದಾರೆ. ಈ ನಡುವೆ ವಿಶ್ವ ಮುಸ್ಲಿಂ ಪರಿಶತ್ ಎನ್ನುವ ಹೆಸರಿನಡಿಯ ಲೇಖನವೊಂದು ಶಂಕರಮೂರ್ತಿಗಳ ವಿರುದ್ಧ ಮೊಕದ್ದಮೆ ಹೂಡುವ ಮಾತನ್ನಾಡಿದೆ. ಹಿಂದೂ ಪತ್ರಿಕೆಯಲ್ಲಿರುವ ಲೇಖನವೊಂದು ಟೀಪುವಿನ ಕಾಲದಲ್ಲಾದ ಆಧುನಿಕವೆನ್ನಬಹುದಾದ ಬೆಳವಣಿಗೆಗಳು, ಮೇಲ್ವರ್ಗದವರ ಹಿಡಿತದಿಂದ ಹೆಚ್ಚಿನ ಬಿಡುಗಡೆ ಪಡೆದುಕೊಂಡ ಕೆಳವರ್ಗಗಳು ಮತ್ತು ಆ ಪ್ರಕ್ರಿಯೆಗಳನ್ನು ವಿವರಿಸಿದೆ.

ಕಾರ್ನಾಡರ ಎದಿರೇಟಿನ ಪ್ರಯತ್ನ
ಈ ಮೊದಲು ಪತ್ರಿಕಾ ಹೇಳಿಕೆ ಇತ್ಯಾದಿಗಳಿಗೆ ತೊಡಗಿದ್ದ ಕಾರ್ನಾಡರು ಭೈರಪ್ಪನವರ ಪತ್ರಕ್ಕೆ ಪ್ರತಿಕ್ರಿಸಿದ್ದಾರೆ. ನಿರಾಸೆ ಮೂಡಿಸುವಂತಹ ಉತ್ತರವಾದರೂ ಪತ್ರದಿಂದಲೇ ಉತ್ತರಿಸಿದ್ದು ವಿವೇಕಯುತವಾದ್ದಾಗಿತ್ತು. ಪತ್ರದ ಸಾರಾಂಶ ಇಷ್ಟು. ತಮ್ಮ ನಾಟಕಗಳನ್ನೋದಿ ಭೈರಪ್ಪನವರು ದಿಢೀರ್ ಇತಿಹಾಸಜ್ಞರಾಗುವಂತಹ ಪರಿಣಾಮ ಬೀರಿರುವುದನ್ನು ನೋಡಿ ಕಾರ್ನಾಡರು ದಿಗಿಲಾಗಿದ್ದಾರೆ. ತಮಗೆ ಇತಿಹಾಸದ ಮೊಹಮ್ಮದ್-ನಲ್ಲಿ ಆಸಕ್ತಿಯಿಲ್ಲ, ಒಂದು ಮನರಂಜನಾತ್ಮಕ ನಾಟಕ ಬರೆಯುವುದಿತ್ತು, ಸಂಕೀರ್ಣವಾದ ಪಾತ್ರವೊಂದರ ರಚನೆಗೆ ತುಘಲಕ್-ನಲ್ಲಿ ಎಷ್ಟು ಸಾಮಗ್ರಿ ಸಿಕ್ಕಿತೋ ಅಷ್ಟನ್ನು ಬಳಸಿಕೊಂಡಿದ್ದೇನೆ, ನನ್ನ ತುಘಲಕ್ ಒಂದು ಕಾಲ್ಪನಿಕ ಪಾತ್ರ, ಐತಿಹಾಸಿಕವಲ್ಲ ಎಂದಿದ್ದಾರೆ (ಭೈರಪ್ಪನವರು ಇದನ್ನು ಗಮನಿಸಿಯೂ ಕಲಾವಿದನ ಐತಿಹಾಸಿಕ ನಿಷ್ಠೆಯ ಕುರಿತು ಎತ್ತಿರುವ ಪ್ರಶ್ನೆ ಮುಖ್ಯವೇ ಅಲ್ಲವೆಂಬಂತೆ ಸುಮ್ಮನಿದ್ದುಬಿಟ್ಟಿದ್ದಾರೆ). ಮುಂದುವರೆದು, ಭೈರಪ್ಪನವರ ಇತಿಹಾಸದ ಕುರಿತು ಮಾತನಾಡುವ ಧಾರ್ಷ್ಟ್ಯವನ್ನು ಟೀಕಿಸಿದ್ದಾರೆ. ಈ ಅವಕಾಶವನ್ನು ಬಳಸಿ ಭೈರಪ್ಪನವರ ಕಾದಂಬರಿಯಲ್ಲಿರುವ ಹಿಂದೂತ್ವದ ವಿಚಾರಧಾರೆಯ ಅನಾವರಣಗೊಳಿಸಿದ್ದಾರೆ. ಬಾಬರಿ ಮಸೀದಿಯ ಸಮಯದಲ್ಲಿ ಭೈರಪ್ಪನವರಾಡಿದ ಸಂವೇದನಾರಹಿತ ಮಾತನ್ನು ಉಲ್ಲೇಖಿಸಿ, ಹಂಗಿಸಿ, ಇತಿಹಾಸ ಟೀಪು ಕುರಿತು ಮಾತನಾಡುವ ನೈತಿಕ ಅಧಿಕಾರವಿದೆಯೇ ಎಂದು ಪ್ರಶ್ನಿಸಿದ್ದಾರೆ. ಕಡೆಯಲ್ಲಿ ತಾವೇ ನಿರ್ದೇಶಿಸಿದ ವಂಶ-ವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ ಚಿತ್ರಗಳ ಕುರಿತು ತಮಗಿರುವ ತಾತ್ವಿಕ ಅಸಹನೆಯನ್ನು ಮೊದಲಬಾರಿಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ (ಈ ಚಿತ್ರಗಳಲ್ಲಿ ಕಾರ್ನಾಡ್ ಮಾಡಿರುವ ಬದಲಾವಣೆಗಳೇ ನನಗೆ ಹೆಚ್ಚು ಇಷ್ಟ!). ಇಷ್ಟಾಗಿಯೂ ಭೈರಪ್ಪನವರನ್ನು ಸಮರ್ಥ ಕಾದಂಬರಿಕಾರ ಎಂದು ಒಪ್ಪಿಕೊಳ್ಳುವಷ್ಟು ಎಚ್ಚರ ಹೊಂದಿದ್ದಾರೆ ಕಾರ್ನಾಡರು. ಇಷ್ಟೆಲ್ಲ ಪ್ರತಿಕ್ರಿಯೆಗಳು, ಹೇಳಿಕೆಗಳು ಇತ್ಯಾದಿಗಳನ್ನು ಓದುವಾಗ ಕನ್ನಡ ಭಾಷೆಯ ಅತ್ಯುತ್ತಮ ಬಳಕೆ ನನಗೆ ಕಂಡದ್ದು ಕಾರ್ನಾಡರ ಪತ್ರದಲ್ಲೇ! ಇದಕ್ಕೆ ಸಮಯವಲ್ಲವಾದ್ದರಿಂದ ಈ ಕುರಿತು ಮುಂದುವರೆಸುವುದಿಲ್ಲ.

ಮತ್ತೊಂದಿಷ್ಟು ಸಂವಾದಗಳು
ಈ ನಡುವೆ 'ಟೀಪು ಕನ್ನಡ ಪ್ರೇಮಿಯೇ?' ಎನ್ನುವ ಒಂದು ವಿಚಾರ ಸಂಕಿರಣ ನಡೆದಿದೆ. ಚಿಮೂ ತಮ್ಮ ಮೊದಲ ಹೇಳಿಕೆಗಳನ್ನೇ ಮತ್ತೆ ವಿವರಿಸಿ ಟೀಪುವನ್ನು ಕನ್ನಡ ಪ್ರೇಮಿ ಅಥವಾ ದೇಶಪ್ರೇಮಿ ಎಂದು ಕರೆಯಲಾಗದು ಎಂದಿದ್ದಾರೆ. ಪ್ರೊ|| ಶೆಟ್ಟರ್ ಮಾತನಾಡಿ ಟೀಪು ದೇಶದ ಅಗ್ರಗಣ್ಯ ರಾಜ ಎನ್ನುವುದರಲ್ಲಿ ಅನುಮಾನ ಬೇಡ, ಆತನ ಕೆಲ ತಪ್ಪು ತೀರ್ಮಾನಗಳಿಂದ ಇಡಿಯ ವ್ಯಕ್ತಿತ್ವವನ್ನು ಅಳೆಯುವುದು ಬೇಡ, ಕನ್ನಡ ವಿರೋಧಿಯಾದ ಆದೇಶ ಹೊರಡಿಸಿದ ನಿದರ್ಶನಗಳಿಲ್ಲ, ಕಾಲಕ್ಕನುಗುಣವಾಗಿ ನಡೆದಿದ್ದಾನೆ, ಈ ದಾರಿ ಹಿಡಿದರೆ ನಾವು ಕೃಷ್ಣದೇವರಾಯ, ಅಶೋಕರಲ್ಲೂ ತಪ್ಪು ಕಂಡುಹಿಡಿಯುವುದು ಸಾಧ್ಯವಿದೆ ಎಂದಿದ್ದಾರೆ. ಇವೆಲ್ಲಾ ಹೆಚ್ಚು ಕಡಿಮೆ ಈ ಮೊದಲೇ ಅವರು ಕೊಟ್ಟು ಹೇಳಿಕೆಗಳಾಗಿವೆ. ಪ್ರೊ|| ಮಮ್ತಾಜ್ ಅಲಿ ಖಾನ್ ಮಾತನಾಡಿ ಇದೆಲ್ಲಕ್ಕಿಂತ ನಾವು ಎಷ್ಟರಮಟ್ಟಿಗೆ ಕನ್ನಡಾಭಿಮಾನಿಗಳಾಗಿದ್ದೇವೆ ಎನ್ನುವುದು ಮುಖ್ಯವೆಂದಿದ್ದಾರೆ. ಹಾರನಹಳ್ಳಿ ರಾಮಸ್ವಾಮಯ್ಯನವರು ಯಾರನ್ನೂ ಓಲೈಸುವುದಕ್ಕಾಗೇ ಚರಿತ್ರೆ ಬರೆಯುವ ಅಗತ್ಯವಿಲ್ಲ ಎಂದಿದ್ದಾರೆ.

ಮತ್ತಷ್ಟು ಎದಿರೇಟು
ಈಗ ಈ ಚರ್ಚೆ ಒಂದು ವಿಚಿತ್ರ ಸ್ಥಿತಿಯನ್ನು ತಲುಪಿದೆ. ವಿಜಯಕರ್ನಾಟಕದ ಕಾರ್ನಾಡರ ಪತ್ರಕ್ಕೆ ಸುಮತೀಂದ್ರ ನಾಡಿಗರ ಪ್ರತಿಕ್ರಿಯೆ ಅದೇ ಪತ್ರಿಕೆಯಲ್ಲಿ ಬಂದಿದೆ. ಅದರ ಮುಖ್ಯ ಉದ್ದೇಶ ಕಾರ್ನಾಡರ ನಿಲುವುಗಳನ್ನು ಟೀಕಿಸುವುದಾಗಿದೆ. ಭೈರಪ್ಪನವರ ನಿಲುವುಗಳನ್ನು ಸಮರ್ಥಿಸಿದ್ದಾರೋ ಇಲ್ಲವೋ ತಿಳಿಯುವುದಿಲ್ಲವಾದರೂ, ಹಾಗೆ ಇರಬಹುದು ಎಂದು ಹೇಳಬಹುದಾಗಿದೆ. ನೆಹರೂಪ್ರಣೀತ ಎಡಪಂಥೀಯತೆಯನ್ನು ತೀವ್ರವಾಗಿ ಟೀಕಿಸುತ್ತಾ ಆ ಪರಂಪರೆಯಲ್ಲಿ ಕಾರ್ನಾಡರನ್ನು ಗುರುತಿಸಿದ್ದಾರೆ. ಪರಮಹಂಸ, ವಿವೇಕಾನಂದ-ರ ಪರಂಪರೆಯನ್ನು ಅಭ್ಯಸಿಸುವುದು ಆ ಪರಂಪರೆಯಲ್ಲಿ ಮುಂದುವರೆದವರನ್ನು ಗುರುತಿಸುವುದು ಇವರಿಗೆ ಸಾಧ್ಯವಿಲ್ಲವೆನ್ನುವುದು ನಾಡಿಗರ ಅಳಲು. ಭೈರಪ್ಪನವರ ಕುರಿತು ಅಪಮೌಲ್ಯೀಕರಣಾ, ನಿಂದನೆ, ಬೈಗುಳದ ದಾರಿಯನ್ನು ಹಿಡಿದಿರುವ ಕಾರ್ನಾಡರನ್ನು ಟೀಕಿಸಿದ್ದಾರೆ. ಭೈರಪ್ಪನವರ ಕಾದಂಬರಿಗಳ ಕುರಿತಾದ ವಿರೋಧಾಭಾಸಕರ ಗ್ರಹಿಕೆಯನ್ನು ಕಾರ್ನಾಡರ ಪ್ರತಿಕ್ರಿಯೆಯಲ್ಲಿ ಗುರುತಿಸಿದ್ದಾರೆ. ಕಾರ್ನಾಡರನ್ನು ನಮ್ಮ ಸಂಸ್ಕೃತಿಯ ಹೊರಗಿನವರಾಗಿ ಗುರುತಿಸುವಂತಹ ಕಷ್ಟದ ಕೆಲಸಕ್ಕೆ ಇಳಿದಿದ್ದಾರೆ. ಶಂಕರಮೂರ್ತಿಗಳು ಅಂತಹ ಹೇಳಿಕೆಯನ್ನು ಕೊಡುವುದಕ್ಕೆ ಇರಬಹುದಾದ ತಾತ್ವಿಕ, ಬೌದ್ಧಿಕ ಸಮರ್ಥನೆಯನ್ನು ಶೋಧಿಸಿದ್ದಾರೆ. ಒಂದು ಮುಖ್ಯವಾದ ಪ್ರಶ್ನೆಯನ್ನು ಎತ್ತಿ ಬುದ್ಧಿಜೀವಿಗಳೆಲ್ಲಾ ಈ ಕುರಿತು ಚರ್ಚಿಸುವಂತೆ ಶಂಕರಮೂರ್ತಿಗಳು ಮಾಡಿರುವುದು ಒಂದು ಗಮನಾರ್ಹವಾದ ಕೆಲಸ ಎನ್ನುವ ಧ್ವನಿ ಅವರ ಬರಹದಲ್ಲಿದೆ. ಭೈರಪ್ಪನವರು ಸಾಹಿತಿಯ ಐತಿಹಾಸಿಕ ಬದ್ಧತೆ ಮತ್ತು ಸ್ವಾತಂತ್ರ್ಯದ ಕುರಿತು ಎತ್ತಿರುವ ಪ್ರಮುಖವಾದ ಪ್ರಶ್ನೆಯನ್ನು ಕಾರ್ನಾಡರು ಉತ್ತರಿಸಿಲ್ಲದಿರುವುದನ್ನು ಗಮನಿಸಿದ್ದಾರೆ. ಕಾರ್ನಾಡರ 'ಟೀಪು ಕಂಡ ಕನಸುಗಳು' ನಾಟಕಕ್ಕೆ ಸಿ‍ಎನ್‍ಆರ್ ಬರೆದಿರುವ ವಿಮರ್ಶೆಯನ್ನು ಉಲ್ಲೇಖಿಸಿದ್ದಾರೆ. ಭೈರಪ್ಪನವರು ಇತಿಹಾಸದ ಕುರಿತು ಮಾತನಾಡುವ ನೈತಿಕತೆಯನ್ನು ಪ್ರಶ್ನಿಸಿರುವ ಕಾರ್ನಾಡರು ಭೈರಪ್ಪನವರು ಸಾಹಿತಿಯ ಹೊಣೆಗಾರಿಕೆಯನ್ನು ಪ್ರಶ್ನಿಸಿರುವುದನ್ನು ಉತ್ತರಿಸಿಲ್ಲದಿರುವುದನ್ನು ಗಮನಿಸಿದ್ದಾರೆ. ಕಡೆಗೆ ಸಾಂಸ್ಕೃತಿಕ ಲೋಕದ ಗುಂಪುಗಾರಿಕೆ, ಸ್ವಪ್ರತಿಷ್ಠೆಗಳ ಕುರಿತು ವಿಷಾದಿಸಿದ್ದಾರೆ. ಭಾರತದಲ್ಲಿಯೇ ಹುಟ್ಟಿ ಹೊರಗಿನವರಾದ ಕಾರ್ನಾಡರನ್ನೂ ಅಮೇರಿಕದಲ್ಲಿ ಹುಟ್ಟಿ ಭಾರತಕ್ಕೆ ಒಳಗಿನವರಾದ ದೇವಿಡ್ ಫ್ರಾಲಿಯವರನ್ನೂ ಹೋಲಿಸಿ ತಮ್ಮ ಲೇಖನವನ್ನು ಮುಗಿಸಿದ್ದಾರೆ.

ಇಷ್ಟನ್ನೆಲ್ಲಾ ನಾನು ೨೦೦೬ ಅಕ್ಟೋಬರ್ ೨ - ಗಾಂಧಿ ಜಯಂತಿಯಂದು ಬರೆಯುವುತ್ತಿರುವುದು ಕೇವಲ ಆಕಸ್ಮಿಕ. ಆ ನಂತರವೂ ಸಹ ಶತಾವಧಾನಿ ಗಣೇಶರು ಒಂದು ವಿವರವಾದ ಪತ್ರ ಬರೆದಿದ್ದಾರೆ. ವಿಜಯಕರ್ನಾಟಕದಲ್ಲಂತೂ ಕಾರ್ನಾಡರ ಪತ್ರವನ್ನು ಟೀಕಿಸಿ ಬಂದ ಪತ್ರಗಳು ಎರಡು ದಿನ ಒಂದು ಸಮ್ಪೂರ್ಣ ಪುಟದಷ್ಟು ಬಂದಿವೆ. ಅದೆಲ್ಲವನ್ನೂ ಸಂಗ್ರಹಿಸಲು ನನಗೆ ಸಾಧ್ಯವಾಗಿಲ್ಲ. ಮಹನೀಯರೆಲ್ಲರ ಹೇಳಿಕೆಗಳಲ್ಲಿ ನನಗೆ ಅನೇಕ ಸರಿ, ಕೆಲ ತಪ್ಪುಗಳು ಕಂಡಿವೆ. ಬೌದ್ಧಿಕವಾದದ್ದಲ್ಲದೇ, ನಡವಳಿಕೆ, ಅಭಿವ್ಯಕ್ತಿ ರೂಪಗಳಲ್ಲಿ ತಪ್ಪುಗಳು ನನ್ನಂತಹ ಅನಾಮಧೇಯನಿಗೆ ಸ್ಪಷ್ಟವಾಗಿ ಕಾಣುತ್ತಿರುವುದು ಮಾತ್ರ ದುಃಖದ ವಿಷಯ. ಲೇಖನದ ಮೊದಲಲ್ಲಿ ನಾನುಪ್ರಸ್ತಾಪಿಸಿದ ವಿಷದದ ಈ ಕಾರಣದಿಂದಲೇ.

ಮುಂದುವರೆಯುವುದು...

Tuesday, August 29, 2006

ಕತೆ, ಕತೆಗಾರ ಮತ್ತು ಓದುಗ


ವಿವೇಕ್ ಶಾನುಭಾಗರ ಹೊಸ ಕಥೆ ಶರವಣ ಸರ್ವಿಸಸ್ ನನ್ನಲ್ಲಿ ಹುಟ್ಟಿಸಿದ ಆಲೋಚನೆಗಳನ್ನು ಈ ಬಾರಿ ನಿಮ್ಮೊಂದಿಗೆ ಹಂಚಿಕೊಳ್ಳಲಿಚ್ಚಿಸುತ್ತೇನೆ.ಅವರ "ಮತ್ತೊಬ್ಬನ ಸಂಸಾರ" ಕಥಾಸಂಕಲನದಲ್ಲಿನ "ಶರವಣ ಸರ್ವಿಸಸ್" ಕತೆ ಈ ಹಿಂದೆ ದೇಶಕಾಲ ಪತ್ರಿಕೆಯಲ್ಲೂ ಓದಿದ್ದೆ. ಈ ಕಥೆಯಾಗಲೀ ಅಥವಾ ಅದೇ ಸಂಕಲನದ ಇತರ ಕಥೆಗಳಾಗಲೀ ಮೊದಲ ಓದಿನ ತತ್ಕ್ಷಣಗಳಲ್ಲಿ ಯಾವುದೇ ತೀವ್ರವಾದ ಪರಿಣಾಮವನ್ನುಂಟು ಮಾಡಿರಲಿಲ್ಲ. ಅನೇಕ ವೇಳೆ ಇದು ಸಹಜವೇ ಆದರೂ ಅವರ "ಹುಲಿ ಸವಾರಿ" ಕಥಾಸಂಕಲನದ ವಿಷಯದಲ್ಲಿ ಹೀಗಾಗಿರಲಿಲ್ಲ. ಅದರ ಓದಿನ ಅನುಭವ ನನ್ನಲ್ಲಿ ಇವತ್ತಿಗೂ ಜೀವಂತವಾಗಿದೆ.ಸ್ವಲ್ಪ ದಿನ ಸುಮ್ಮನಿದ್ದು ಮತ್ತೆ ಶರವಣ ಸರ್ವಿಸಸ್ ಓದಿದಾಗ ಆಸಕ್ತಿ ಕೆರಳಿ ನಿಂತು, ಅನೇಕ ವಿಷಯಗಳು ಹೊಳೆಯುತ್ತಾ ಬಂದವು. ಅವರ "ಹುಲಿ ಸವಾರಿ" ಸಂಕಲನದ ಗುಂಗಿನಲ್ಲೇ "ಮತ್ತೊಬ್ಬನ ಸಂಸಾರ" ಓದಿದ್ದು ಪ್ರಾಯಶಃ ಅಸಮರ್ಪಕ. ಹೊಸ ಪುಸ್ತಕ ಮುಕ್ತವಾದ ಓದನ್ನು ಬೇಡುತ್ತದೆ, ಯಾವಾಗಲೂ. ಈ ಲೇಖನದ ಉದ್ದೇಶ ಹಾಗೆ ಹೊಳೆದು ಅನ್ನಿಸಿದ್ದನ್ನು ಹಂಚಿಕೊಳ್ಳುವುದು.ನನ್ನೀ ಬರಹದ ಕೆಲ ಅಪಾಯಗಳನ್ನೂ ಸಹ ಮೊದಲೇ ಸೂಚಿಸಿಬಿಡುವುದು ಒಳಿತೇನೋ. ಸದ್ಯದ ಆತಂಕಗಳನ್ನು ಮೈಮೇಲೆಳೆದುಕೊಂಡು ಎಲ್ಲವನ್ನೂ ಅವುಗಳ ಮೂಲಕವೇ ಪ್ರವೇಶಿಸುತ್ತಿರುವ ನಮಗೆ ಈ ಕನ್ನಡಕವಿಲ್ಲದೇ ತೆರೆದ ಮನಸ್ಸಿನಿಂದ ನೋಡುವುದು ಕಷ್ಟವಾಗಿದೆ. ಆದ್ದರಿಂದ ಈ ಲೇಖನದ ನನ್ನ ಅನಿಸಿಕೆಗಳು ಸ್ವಲ್ಪ ಅತಿ ಅನ್ನಿಸಬಹುದು. ಕಥೆಗಾರರಾದ ಮನಸ್ಸಿನಲ್ಲಿಲ್ಲದ್ದಂತೂ ಓದುಗರ ಅನಿಸಿಕೆಗಳಲ್ಲಿ ಇದ್ದೇ ಇರುತ್ತದೆ. ಆದರೆ ಕತೆಗಾರರ ಆಶಯಕ್ಕೆ ಹೊರತಾದ ಅನಿಸಿಕೆಗಳೂ ಇರಬಹುದಾದ ಸಾಧ್ಯತೆಗಳಿವೆ ಈ ಪ್ರತಿಕ್ರಿಯೆಯಲ್ಲಿ. ಅಥವಾ, ಅವರ ಕಥೆಯಲ್ಲಿ ಕಲಾತ್ಮಕವಾಗಿ ಸೂಚ್ಯವಾಗಿರುವುದು, ಈ ಪ್ರತಿಕ್ರಿಯೆಯಲ್ಲಿ ಕಸಿವಿಸಿಪಡುವಷ್ಟು ಅತಿವಾಚ್ಯತೆಯನ್ನು ಪಡೆದುಕೊಂಡುಬಿಟ್ಟಿರಬಹುದು. ಕಥೆಯ ಮುಕ್ತವಾದ ಪ್ರವೇಶಕ್ಕೆ, ವಿವಿಧ ಅನುಭವಗಳ ದರ್ಶನಕ್ಕೆ ಇಂತಹ ಬರಹಗಳು ಕಾಲಿಗೆ ತೊಡರೊಡ್ಡುತ್ತವೆ ಎಂದೆನ್ನಿಸಬಹುದು. ಪ್ರಾಮಾಣಿಕ ಕ್ಷಮೆಯನ್ನಷ್ಟೇ ಕೇಳಬಯಸುತ್ತೇನೆ, ಸದ್ಯಕ್ಕೆ.ಮತ್ತೊಬ್ಬನ ಸಂಸಾರ ಪುಸ್ತಕದ ಹಿಂಬದಿಯಲ್ಲಿರುವ ಅಕ್ಷರರ ಕೆಲ ಮಾತುಗಳು ನನ್ನ ಒಟ್ಟು ವಿಚಾರಲಹರಿಯ ಮೂಲಪ್ರೇರಣೆಯಾದರೂ, ಸಿಕ್ಕ ಸಿಕ್ಕ ದಿಕ್ಕಿನಲ್ಲೆಲ್ಲಾ ಅರ್ಥಕ್ಕಾಗಿ ಕೈಚಾಚಿ ದಕ್ಕಿತು ಎಂದೆನ್ನಿಸಿದ್ದನ್ನೆಲ್ಲಾ ಇಲ್ಲಿ ಬರೆದಿದ್ದೇನೆ.ವಿವೇಕ್ ಶಾನಭಾಗರ ಹೊಸ ಕಥೆ ಶರವಣ ಸರ್ವಿಸಸ್ವಿವೇಕರ ಈ ಕಥೆಯಲ್ಲಿ ವಾಸ್ತವದ ಒಂದು ತುಣುಕಿನ ಮೂಲಕ, ವ್ಯವಸ್ಥೆ ಸೃಷ್ಟಿಸುವ ಗೋಡೆಗಳನ್ನು ಮೀರಿ ಬೆಳೆಯುವ ಇಬ್ಬರ ನಡುವಿನ ಸಂಬಂಧದ ಮೂಲಕ ಭಾರತ ಮತ್ತು ಆಧುನಿಕತೆಯ ಸಂಬಂಧ ಶೋಧಿಸುತ್ತಿರುವಂತಿದೆ. ನಮ್ಮ ಸಾಹಿತ್ಯ ಪರಂಪರೆಯಲ್ಲಿ ಇದೇನೂ ಹೊಸತಲ್ಲ. ಆದರೆ, ಈ ಚಿಕ್ಕ ಕಥೆಯಲ್ಲಿ ತೋರುತ್ತಿರುವ ವಸ್ತುಚಿತ್ರಣದ ಸಮಗ್ರತೆ ಆಶ್ಚರ್ಯ ಹುಟ್ಟಿಸುವಂತಿದೆ. ಕಥೆಯ ಶಿಲ್ಪವೇ ಇಲ್ಲಿ ಮೌಲ್ಯವೊಂದನ್ನು, ಮೆಲುದನಿಯ ಆದರೆ ಗಟ್ಟಿಯಾದ ನಿಲುವೊಂದನ್ನು ತೆಗೆದುಕೊಂಡಂತಿದೆ.ಕಥೆಯ ಪ್ರಮುಖ ಪಾತ್ರಧಾರಿಗಳು ನಿರೂಪಕ ಮತ್ತು ಶರವಣ. ಆಧುನಿಕತೆಯತ್ತ ಪಯಣಿಸುತ್ತಿರುವ ಭರತದ ಎರಡು ಪ್ರ್‍ಅತಿನಿಧಿಕ ಚಲನ-ಬಿಂದುಗಳಾಗಿ ಇವರು ಚಿತ್ರಣಗೊಂಡಿದ್ದಾರೆ. ನಿರೂಪಕ ಇಂದು ಭಾರತದಲ್ಲಿ ಪ್ರತಿಷ್ಠೆಯನ್ನು ಗಳಿಸಿರುವ ಹೆಚ್ಚು ಜೀವನ ಭದ್ರತೆ ಪಡೆದಿರುವ, ಆಧುನಿಕತೆ ಭಾರತಕ್ಕೆ ಬಂದಮೇಲೆ ಏನೆಲ್ಲಾ ಲೌಕಿಕ ಸವಲತ್ತು ಪಡೆದಿರುವವರ ಪ್ರತಿನಿಧಿಯಾದರೆ, ಶರವಣ ಆ ಚಲನೆಯಲ್ಲಿ ಹಿಂದೆ ಬಿದ್ದಿರುವವನು, ಆದರೆ ಆ ಚಲನೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಿ ತನ್ನ ನೆಲೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವವನು. ಬಹುಜನ ಭಾರತದ ಜೀವನ ಮೌಲ್ಯ, ರೀತಿ-ಗಳಿಂದ ನಿರೂಪಕ ಬಿಡಿಸಿಕೊಂಡಂತಿದ್ದಾನೆ, ಆ ಕುರಿತ ಅವನ ಸಂಬಂಧ ಅವಕಾಶವಾದದಿಂದ ಬಂದದ್ದು. ಆದರೆ ಶರವಣ ಬಹುಜನ ಸಮಾಜದದೊಂದಿಗೆ ಹೆಚ್ಚು ಸಂಬಂಧವಿರುವ, ಸಂಬಂಧ ಸಾಧ್ಯತೆಯಿರುವ ಮನುಷ್ಯ. [ಕಥೆಯ ಓದಿನ ಸಂದರ್ಭದಲ್ಲಿ ನನಗೆ ಕನ್ನಡದ ಅತ್ಯುತ್ತಮ ಕಥೆಯಾದ 'ಸೂರ್ಯನ ಕುದುರೆ' ಜ್ಞಾಪಕಕ್ಕೆ ಬರುತ್ತಿತ್ತು. ಆದರೆ ಮೇಲಿನ ನನ್ನ ವಿವರಣೆ ಈ ಕಥೆ ಅದಕ್ಕಿಂತಾ ಹೇಗೆ ಭಿನ್ನ ಎನ್ನುವುದನ್ನು ಸೂಚ್ಯವಾಗಿ ಹೇಳುತ್ತದೆ ಎಂದು ನಂಬಿದ್ದೇನೆ, ಸದ್ಯಕ್ಕೆ 'ಸೂರ್ಯನ ಕುದುರೆ'-ಯೊಡನಿನ ಸಂಬಂಧವನ್ನು ಇಷ್ಟಕ್ಕೆ ನಿಲ್ಲಿಸಿ ಮುಂದುವರೆಯುತ್ತೇನೆ, ಮುಂದೆಂದಾದರೂ ಈ ವ್ಯತ್ಯಾಸದ ಕುರಿತೇ ಒಂದು ಲೇಖನಕ್ಕೆ ತೊಡಗಬಹುದು]. ಒಂದು ರೀತಿಯಿಂದ ನೋಡಿದಲ್ಲಿ, ಈ ಚಲನೆಯಲ್ಲಿ ಶರವಣ ಒಂದು ಅಂಚಿನಲ್ಲಿದ್ದಾನೆ ಎನ್ನಬಹುದು. ಈ ರೀತಿಯಾದ ಪಾತ್ರ ಪರಿಕಲ್ಪನೆ, ಕಥೆಯ ಶಿಲ್ಪದೊಂದಿಗೆ, ಕಥೆಯ ವಸ್ತುವಿನೊಂದಿಗೆ ಜೀವಂತ ಸಂಬಂಧ ಪಡೆದುಕೊಂಡು ಕಥೆ ಕಲಾತ್ಮಕವಾಗಿರುವಂತಿದೆ. ಪ್ರಗತಿ ಪರ ಚಿಂತನೆ ಎನ್ನುವುದು ಇದರೊಳಗೆ (ಹುಡುಕಿ ತೆಗೆದರೆ ಸ್ವಾರಸ್ಯ ಹಾಳಾಗುವಷ್ಟು) ಸಂಪೂರ್ಣವಾಗಿ ಕರಗಿಹೋಗಿದೆ. ಈ ಬರಹದಲ್ಲಿ ಮುಂದೆ ನಿರೂಪಕ ಮತ್ತು ಶರವಣ-ರನ್ನು ಉಲ್ಲೇಖಿಸಿದಾಗಲೆಲ್ಲಾ ಈ ಮೇಲಿನ ವಿವರಣೆಯ ಹಿನ್ನೆಲೆಯಲ್ಲೇ ಓದಬೇಕಾಗಿ ಕೋರಿಕೆ. ಬೇಕೆಂದೇ 'ಆಧುನಿಕ', 'ಅರೆ-ಆಧುನಿಕ' ಮುಂತಾದ ಪದಗಳ ಬಳಕೆಯ ವ್ಯಾಮೋಹವನ್ನು ಬಿಟ್ಟೇ ಬರೆದಿದ್ದೆನೆ, ಓದಿಗೆ ತ್ರಾಸವಾಗಬಾರದೆಂದು.ಮೊದಲ ಭಾಗದಲ್ಲಿ ನಿರೂಪಕನ ಧ್ವನಿಯಲ್ಲಿ ಕಥೆಯ ನಿರೂಪಣೆಯಿದೆ. ದ್ವಿತೀಯಾರ್ಧದಲ್ಲಿ ಶರವಣನ ಧ್ವನಿಯಲ್ಲಿ ನಿರೂಪಿತವಾಗಿದೆಯಾದರೂ, ಅದು ನಿರೂಪಕ ನಿಜಶರವಣನನ್ನು ಗುರುತಿಸಿಕೊಂಡದ್ದರಿಂದಲಾದುದು ಎನ್ನುವುದುದನ್ನು ಗಮನಿಸಿ ಅಲ್ಲಿಯೂ ಕೂಡಾ ಆಳದಲ್ಲಿ ನಿರೂಪಕನದ್ದೇ ಧ್ವನಿಯಿದೆ ಎಂದೆನ್ನಿಸುತ್ತದೆ. ಕಥೆಯ ಪೂರ್ವಾರ್ಧದಲ್ಲಿ ನುಡಿಚಿತ್ರಗಳು ಕಥೆಯನ್ನು ಪ್ರಮುಖವಾಗಿ ಕಟ್ಟಿಕೊಟ್ಟಿದ್ದರೆ, ದ್ವಿತೀಯಾರ್ಧದಲ್ಲಿ ಅಮೂರ್ತವಾದ ಮನುಷ್ಯನ ಆಂತರ್ಯದ ಪಯಣದ ಮೂಲಕ ಕಥೆ ಅನಾವರಣಗೊಳ್ಳುತ್ತದೆ. ಒಟ್ಟು ಕಥೆ ವಿವೇಕರಿಗೆ ವಿಶಿಷ್ಟವಾಗಿರುವ ಮೆಲುದನಿಯಲ್ಲಿದ್ದರೂ ಖಾಚಿತತೆಯ ಧ್ವನಿ (ನಿರೂಪಕನದ್ದು) ಮತ್ತು ದ್ವಿತೀಯಾರ್ಧದ ಜೀವಪರತೆ (ನಿರೂಪಕ ಶರವಣನಲ್ಲಿ ಕಂಡುಕೊಂಡ ಸತ್ಯದಿಂದುಂಟಾದುದು) ಅನುಭವಕ್ಕೆ ಬರದೇ ಇರದು. ಈ ಬಗೆಯ ಶಿಲ್ಪದಿಂದ ವಿವೇಕರು ಒಂದು ಪ್ರಮುಖವಾದ್ದನ್ನು ಸಾಧಿಸಿದ್ದಾರೆ. ಒಟ್ಟು ಕಥೆಗಾರನ ನಿಲುವುಗಳಿಗಿಂತ ವಸ್ತುವಿನ ಶೋಧನೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.ಪೂರ್ವಾರ್ಧದಲ್ಲಿ ಬರುವ ನಿರೂಪಕ ಪರಂಪರೆಯ ನಂಬಿಕೆಗಳ ಅಗತ್ಯ ಬಿದ್ದಾಗ ಜೋತುಬೀಳಬಲ್ಲ ಅವಕಾಶವಾದಿ ಆಧುನಿಕನೆನ್ನುವ ಸೂಚನೆಯ ಜೊತೆಗೆ, ಜೊತೆಗೇ ಠಕ್ಕತನ, ಸುಳ್ಳುಬುರುಕುತನದ ಮನುಷ್ಯ ಎನ್ನುವ ಸೂಚನೆಯೂ ಇರುವಂತಿದೆ. ಶರವಣನ ಸಾರ್ವಜನಿಕ ವ್ಯಕ್ತಿತ್ವದ ಪರಿಚಯ ಎರಡನೇಯ ಪ್ಯಾರಾದಲ್ಲೇ ಅತ್ಯಂತ ಕಾವ್ಯಾತ್ಮಕವಾಗಿ ಮೂಡಿದೆ. ಅವನ ಅಗತ್ಯ ಮಿಕ್ಕವರಿಗೆ ದಿನವಿಡೀ ಇರುತ್ತದೆ. ಇಷ್ಟದರೂ ಅವನು ಕೆಲಸ ಉಳಿಸಿಕೊಳ್ಳಿಕೊಳ್ಳುವುದಕ್ಕೆ ತೊಟ್ಟಿರುವ ವೇಷವೈವಿಧ್ಯತೆ ಕಾಲಧರ್ಮವನ್ನು ಸೂಚಿಸುತ್ತದೆ. ಆಧುನಿಕ ಜೀವನದ ಎಲ್ಲಾ ವ್ಯಾಪಾರಗಳೂ ತಮ್ಮೆಲ್ಲಾ ವೈರುಧ್ಯಗಳಿಂದ ಶರವಣನ ಜೊತೆಗೆ ಸಂಬಂಧ ಇರಿಸಿಕೊಂಡಿದೆ. ಆದ್ದರಿಂದ ಒಟ್ಟು ಸಮಗ್ರವಾದ ಜೀವನ ದೃಷ್ಟಿ ಪ್ರಾಯಶಃ ಶರವಣನಿಗಷ್ಟೇ ಸಾಧ್ಯ, ಆಧುನಿಕತೆಯ ಮುಂಚೂಣಿಯಲ್ಲಿರುವವನಿಗಲ್ಲ. ಆದರೆ ಇದೇ ಪ್ರಕ್ರಿಯೆ (ಪ್ರಗತಿ, ಅಲೌಕಿಕ ಸಹಾಯ, ವೆಷವೈವಿಧ್ಯತೆ, ಜೀವನ ನಿರ್ವಹಣೆ) ಶರವಣನನ್ನು ಶಕ್ತಿಯನ್ನು ಹೀರಿ ನಿಜವ್ಯಕ್ತಿತ್ವದೊಂದಿಗೆ ಬದುಕಲಾರದಂತೆಯೂ ಮಾಡುತ್ತದೆ (ಅವನ ಮಾತೃಭಾಷೆ ಯಾವುದು ಎಂದೇ ಗೊತ್ತಾಗುವುದಿಲ್ಲ), ತನ್ನ ಬದುಕಿನ ಬಿಡಿಬಿಡಿ ಅನುಭವಗಳನ್ನು ಒಟ್ಟಾಗಿ ನೋಡಿಕೊಳ್ಳುವುದಕ್ಕೆ ಅವಕಾಶವೀಯುವುದಿಲ್ಲ. (ಕಥೆಯಲ್ಲಿ ಉಂಟಾಗುವ ಮುಖಾಮುಖಿ ಪ್ರಾಯಶಃ ಇದನ್ನು ಸಾಧ್ಯವಾಗಿಸುತ್ತದೆ). ಗಾಢವಾದ ಸ್ಮೃತಿಯಿರುವ ಓರೆಕೋರೆಯಿಂದ ತುಂಬಿದ್ದ ಹೆಸರು ಸಪಾಟಾಗಿ ಸರಾಗವಾಗುವುದು ಮಿಕ್ಕವರಿಗೋಸ್ಕರ. ತನಗಾದ ಲಾಭ ಆರ್ಥಿಕ, ಮಿಕ್ಕವರಿಗಾದ ಲಾಭ ಕೇವಲ ಹೆಸರು ಕರೆಯುವುದು ಸುಲಭವಾಗುವುದು. ಈ ಬದಲಾವಣೆಯಿಂದ ಸ್ಮೃತಿಯೇ ದುರ್ಬಲಗೊಳ್ಳುತ್ತಿರಬಹುದೇ. ಈ ಬದಲಾವಣೆಯಿಂದ ಸಾಂಸ್ಕೃತಿಕ ಉಪಯೋಗವೇನೂ ಆಗಿಲ್ಲದೇ ಹೋಗುತ್ತಿದೆಯೇ - ಎನ್ನುವುದರ ಸೂಚನೆ ಇರಬಹುದೇ ಎನ್ನುವುದು ನನ್ನ ಅನುಮಾನ.ಆದರೆ ಈ ಶರವಣಾ ತೀರ ಅಶಕ್ತನಲ್ಲ. ಆಧುನಿಕ ವಿಕೃತಿಯಾದ ಅಲೌಕಿಕದ ಅತ್ಯಾಕಾಂಕ್ಷೆ/ಅತ್ಯಾಧಾರ ಶರವಣನಿಗೆ ಇನ್ನೊಬ್ಬರ ವಿಷಯದಲ್ಲಿ ಸ್ವಾತಂತ್ರ್ಯ ವಹಿಸಿ ಅವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಷ್ಟು ಶಕ್ತಿ ಕೊಟ್ಟಿದೆ. ಸ್ವಲ್ಪ ಪ್ರಜ್ಞಾಪೂರ್ವಕ ಆಧುನಿಕನಾದ ನಿರೂಪಕನಿಗೆ ಮಾತ್ರ ಇದು ಅಸಹ್ಯ. ಇಂತಹ ಸಮಯದಲ್ಲಿ ನೈತಿಕ ವಿವರಣೆಯ ಶಕ್ತಿಯೂ ಶರವಣನಿಗಿದೆ. ಅಂತಹ ಅನೇಕ ವೇಳೆ, ನಿರೂಪಕ ಶರವಣನಿಂದ ಕೌಶಲ್ಯವನ್ನು ನಿರೀಕ್ಷಿರದೇ ಆಶ್ಚರ್ಯಚಕಿತನಾಗುತ್ತಾನೆ ಹೊರತು ಶರವಣನ ಒಳಹೊಕ್ಕು ನೋಡುವ ಪ್ರಯತ್ನ ಮಾಡುವುದಿಲ್ಲ (ನಿಜವಾದ ಮುಖಾಮುಖಿ ಇನ್ನೂ ಆಗಿಲ್ಲ).ಅಷ್ಟಲ್ಲದೇ, ಶರವಣ ಒಳ್ಳೆಯ ಕಥೆಗಾರ ಕೂಡಾ. ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ತನ್ನದಲ್ಲದ್ದನ್ನು ನಂಬಬೇಕಾಗಿದ್ದರೂ ತಯಾರು. ನಿಜವಾಗಿಯೂ ಹಾಗೆ ನಂಬಿದ್ದಾನೋ ಇಲ್ಲವೋ ಗೊತ್ತಾಗುವುದಿಲ್ಲ. ಅವನ ಮಾತುಗಳಲ್ಲಿ ಅವನದ್ದೆಷ್ಟು, ಜೀವನ ನಿರ್ವಹಣೆಯ ಅನಿವಾರ್ಯತೆಯಿಂದ ಬಂದದ್ದೆಷ್ಟು ಗೊತ್ತಾಗುವುದಿಲ್ಲ. ಹಾಗೆ ಅವನು ಮಾತಿನ ಚಟಕ್ಕೆ ಎಂದು ಹೇಳುತ್ತಿರುವ ಕಥೆಗಳಲ್ಲಿ ಕೂಡಾ, ಶಹಾಣೆಯವರ ಕಥೆಯಲ್ಲಿರುವಂತೆ, ಒಂದು ಒಳಕಥೆಯಿರುವಂತಿದ್ದು, ಇಂದು ಸಮಾಜ ಕುರುಡಾಗಿ ಆಪರ್ಚುನಿಟಿಗಳ ಹಿಂದೆ ಬಿದ್ದಿರುವುದನ್ನು ಧ್ವನಿಸುತ್ತಿದೆಯೇ ಎನ್ನುವುದು ನನ್ನ ಅನುಮಾನ. ಇಲ್ಲಿ ವಾಸ್ತು ಎನ್ನುವುದು ಏಕಕಾಲದಲ್ಲಿ ಮೂಢನಂಬಿಕೆಯೂ, ಒಟ್ಟು ಪರಿಸರದ/ಜೀವನದ ಸಮಗ್ರತೆಯನ್ನು ಕಾಪಾಡುವ ಪರಿಕಲ್ಪನೆಯಾಗಿಯೂ ಮೂಡಿಬರುತ್ತಿದೆ ಎಂದೆನ್ನಿಸುತ್ತದೆ. ಸಮಗ್ರತೆಯ ಪರಿಕಲ್ಪನೆಯಿರದ ಚಲನೆಯ ತರುವ ದುರಂತದ ಕಥೆಯಂತೆಯೂ ಇದೆ. ಈ ಪ್ಯಾರಾವನ್ನು ಸ್ವಲ್ಪ ಹೆದರಿಕೆಯಿಂದ ಬರೆಯುತ್ತಿದ್ದೇನೆ, ಕಥೆಗಾರರಿಗೆ ಇದು ಒಪ್ಪಿಗೆಯಾಗದೇ ಅಸಮಾಧಾನ ತರಬಹುದಾದ ಸಾಧ್ಯತೆಯಿರುವುದರಿಂದ.ಕಾಲ, ಇತಿಹಾಸ ರೂಪಿಸಿರುವ ಇಂತಹ ಪರಿಸ್ಥಿತಿಯನ್ನು ಮೀರಿದ ಕಾಣ್ಕೆ, ಚಲನೆ ಸಾಧ್ಯವಾಗುವ ರೀತಿಯನ್ನು ಬಿಂಬಿಸುವಂತಿರುವ ಪೂರ್ವಾರ್ಧದ ಕೊನೆಯ ಕೆಲಪ್ಯಾರಾಗಳು - ತಮ್ಮ ಕಾವ್ಯಾತ್ಮಕತೆಯಿಂದ ಕಥೆಯ ಅತ್ಯುತ್ತಮ ಭಾಗಗಳಾಗಿವೆ. ನಿರೂಪಕ ಆಧುನಿಕತೆಯ ಅಹಂಕಾರದಲ್ಲಿರುವವನು. ಶರವಣ ಹೇಗೋ ಜೀವನ ನಡೆಸಿಬಿಡುತ್ತೇನೆ ಎನ್ನುವ ಆತ್ಮವಿಶ್ವಾಸವುಳ್ಳವನು. ಇವರಿಬ್ಬರ ನಡುವೆ ಹಾರ್ದಿಕ ಎನ್ನಿಸುವಂತಹ ಒಂದು ಸಂಬಂಧವೇರ್ಪಟ್ಟಿದೆ. ಆಧುನಿಕತೆಯ ಸಂಕೇತವಾಗಿರುವ ರಸ್ತೆಯ ಬಳಿ ಇವರ ಮಾತುಕತೆ. ಅಂತಹ ರಸ್ತೆಗೆ 'ಬೆನ್ನು ಹಾಕಿ' ನಿಂತಿರುವವನು ಶರವಣ. ನಿರೂಪಕ ರಸ್ತೆಗೆ ಮುಖಮಾಡಿದ್ದರೂ ಅವನ ಮಾತುಕತೆ ಶರವಣನೊಂದಿಗೆ ನಡೆಯುತ್ತಿದೆ (ಆದ್ದರಿಂದ 'ರಸ್ತೆ' ಪ್ರತಿನಿಧಿಸುತ್ತಿರುವ ಪ್ರಕ್ರಿಯೆಯಿಂದ ಕ್ಷಣಕ್ಕಾದರೂ ವಿಮುಖವಾಗಿದೆ). ಆಧುನಿಕ ಜೀವನದ ಒಂದು ಮುಖ್ಯ ಸಂಕೇತವಾಗಿರುವ 'ಅತಿವೇಗ'-ದಿಂದ 'ರಸ್ತೆ'ಯ ಬರುತ್ತಿರುವ 'ಬಸ್', 'ನಿಯಂತ್ರಣ' ತಪ್ಪಿ 'ಹಠಾತ್ ಆಕ್ರಮಣ' ನಡೆಸುತ್ತದೆ. ಇದಕ್ಕಿಂತ ಹೆಚ್ಚು ವಿವರಣೆ ಅಗತ್ಯವಿರಲಾರದು ಎಂದುಕೊಳ್ಳುತ್ತೇನೆ. ಒಟ್ಟು ಇವತ್ತಿನ ಪ್ರಕ್ರಿಯೆಯನ್ನು ತನ್ನೆಲ್ಲಾ ವಿವರಗಳೊಂದಿಗೆ ಕಾವ್ಯಾತ್ಮಕವಾಗಿ ನಿರೂಪಿತವಾಗಿದೆ.ಶರವಣನೊಂದಿಗೆ ಮಾತಿಗಿಳಿದಿರುವ 'ನಿರೂಪಕ'-ನಿಗೆ ಮಾತ್ರ ಇದು ಪ್ರಜ್ಞೆಯಲ್ಲಿ 'ದಾಖಲಾಗುತ್ತದೆ'. ಪ್ರಜ್ಞಾಪೂರ್ವಕವಾದ ಗಮನವಲ್ಲ ಎನ್ನುವುದು ಮುಖ್ಯ. ನಿರೂಪಕನ ತತ್ಕ್ಷಣದ ಕಾರ್ಯಾಚರಣೆಯಿಂದ ಶರವಣ ಬಸ್ಸಿನಿಂದ ಪಾರು. ನಿರೂಪಕನ ಈ ಸಹಾಯ ಪ್ರಜ್ಞಾಪೂರ್ವಕವಾದ ಕ್ರಿಯೆಯಲ್ಲ ಎನ್ನುವುದೂ ಗಮನಾರ್ಹ, ಅವನ ಸಂಕಲ್ಪಶಕ್ತಿಯನ್ನು ಮೀರಿ ನಡೆದದ್ದು ಇದು. ಆ ಕ್ಶಣ ಅವರಿಬ್ಬ ನಡುವೆ ವಿಶೇಷವಾದ ಸಂಬಂಧವೊಂದು ಶುರುವಾಗುತ್ತದೆ. ಬಸ್ಸು ಸ್ಕೂಟರುಗಳನ್ನು (ಆಧುನಿಕತೆಯ ಒಂದು ರೂಪ ಮತ್ತೊಂದನ್ನು) ನಾಶಮಾಡುವುದನ್ನು ಪ್ರತಿನಿಧಿಸಲು ಬಳಸಿರುವ ಪದ 'ಗದ್ದೆಯಲ್ಲಿ ಕೊಯ್ಲು ಮಾಡಿದ ಹಾಗೆ ಚಚ್ಚಿ' ದಿಗ್ಭ್ರಮೆ ಹುಟ್ಟಿಸುತ್ತದೆ. ಇಂತಹ ಪ್ರಕ್ರಿಯೆಯಲ್ಲಿ ಯಾವನೇ 'ತೂಕಡಿಸುವ ನಾಯಿ' (ಆಧುನಿಕ ಪ್ರಕ್ರಿಯೆಯೊಂದಿಗೆ ಸಂಬಂಧವಿರಿಸಿಕೊಳ್ಳದೇ ಇರುವವನು) ಖಂಡಿತಾ ನಾಶವಾಗುತ್ತಾನೆ. ಶರವಣ ಬದುಕಿಕೊಂಡದ್ದು ಆಧುನಿಕತೆಯೊಂದಿಗೆ ಅವನ ಒಂದು ಬಗೆಯ ಸಂಬಂಧದಿಂದ, ಅದೂ ಅದೃಷ್ಟದಿಂದ, ಅದಕ್ಕೂ 'ನಿಮಿತ್ತ'ನಾದವನೊಬ್ಬ ಆಧುನಿಕತೆಯ ಮುಂಚೂಣಿಯಲ್ಲಿರುವ ಮನುಷ್ಯ. ಒಟ್ಟು ಚಿಂತಾಜನಕ ಸ್ಥಿತಿಯ ಸತ್ಯ ಇಲ್ಲಿ ಸಮರ್ಥವಾಗಿ ಮೂಡಿ ಬಂದಿದೆ. ಆಧುನಿಕತೆಯ ಪ್ರತಿನಿಧಿಗಳಾಗಿ ಬಸ್, ರಸ್ತೆ, ವೇಗ, ಹಠಾತ್ ಆಕ್ರಮಣ, ನಿರೂಪಕ ಈ ಪ್ಯಾರಾಗಳಲ್ಲಿ ಸಮರ್ಥವಾಗಿ ಪ್ರಕ್ರಿಯೆಯ ಒಟ್ಟು ಚಿತ್ರಣ ಕೊಡುತ್ತಾರೆ. ಈ ಎಲ್ಲಾ ಕ್ರಿಯೆಗಳಿಂದುಂಟಾಗುವ ಪರಿಣಾಮವೂ ಅಷ್ಟೇ ಸಮರ್ಥವಾಗಿದೆ.ಸಾವಿನ ಸಾಧ್ಯತೆ ಕಂಡ ಶರವಣ ನಿರೂಪಕನ ಕೈಹಿಡಿದು ಸಾಂತ್ವನಗೊಳ್ಳುತ್ತಾನೆ, ಆಧುನಿಕನ ಈ ಕ್ರಿಯೆಯೂ ಅಪ್ರಜ್ಞಾಪೂರ್ವಕವಾದ್ದು ಫ಼್ಲ್ಯಾಶ್-ಬ್ಯಾಕ್-ನಲ್ಲಿ ನಿರೂಪಕ ಇದನ್ನು ಗಮನಿಸಿಕೊಳ್ಳುತ್ತಾನೆ. ಆ ವಿಧ್ವಂಸವನ್ನು ಜನಪದ ಗ್ರಹಿಸಿದ್ದು 'ಅದೃಷ್ಟ'-ದ ಪರಿಕಲ್ಪನೆಯಲ್ಲಿ. ಇಷ್ಟನ್ನು ಬಿಟ್ಟರೆ ನಿರೂಪಕ ಮತ್ತು ಶರವಣ ಇಬ್ಬರದೂ ಈ ಕ್ಷಣಕ್ಕೆ ಒಂದೇ ಸ್ಥಿತಿ. ನಿರೂಪಕನಿಗೆ 'ಜೀವನದ ಕ್ಷಣಭಂಗುರತೆ'-ಯ ದರ್ಶನ. ಶರವಣನಿಗೆ ತನ್ನ ಸಾವಿನ ದರ್ಶನ. ತಮ್ಮ ಕಾಲದ ಜೀವನದ ಎಲ್ಲಾ ಕಿಡಿಸ್ಫೋಟ-ಭೋರ್ಗರೆತ-ಪ್ರವಾಹಗಳು ಕ್ಷಣವೊಂದರಲ್ಲಿ ಸಾಂದ್ರಗೊಂಡು ಇಬ್ಬರಿಗೂ ಸತ್ಯ ದರ್ಶನ ಮಾಡಿಸಿದಾಗ ಇಬ್ಬರಲ್ಲೂ ಒಂದು ಬಗೆಯ ಬದಲಾವಣೆಯುಂಟಾಗುತ್ತದೆ. ನಿಜದಲ್ಲಿ, ಅದು ನಿರಂತರ ಬಾಂಧವ್ಯ ತರುತ್ತದೋ, ಕ್ಷಣಬಾಂಧವರಾಗುತ್ತಾರೋ ಹೇಳಲಾಗದಾದರೂ, ಈ ಕಥೆಯಲ್ಲಿ ಕಾಲದಲ್ಲಿ ಗಟ್ಟಿಯಗಿ ನಿಲ್ಲಬಹುದಾದ ಬಾಂಧವ್ಯ ಸೃಷ್ಟಿಯಾಗುತ್ತದೆ, ಕಥೆಯ ಆಶಯವೂ ಪ್ರಾಯಶಃ ಅದೇ.ಮುಂದುವರೆದ ಕಥೆಯ ಉತ್ತರಭಾಗದಲ್ಲಿ, ಅವರಿಬ್ಬರ ನಡುವೆ ದೇವರು ಮತ್ತು ಭಕ್ತನ ಒಂದು ಬಾಂಧವ್ಯ, ಸಂಬಂಧವೇರ್ಪಡುತ್ತದೆ. ಇದರ ಪರಿಣಾಮವಾಗಿ ನಿರೂಪಕ ಶರವಣನ ಧ್ವನಿಯಲ್ಲಿ ಪ್ರಾಮಾಣಿಕವಾದ ನಿವೇದನೆಯನ್ನು ಕಂಡುಕೊಳ್ಳುತ್ತಾನೆ, (ಅದು ಶರವಣನ ನಿಜವ್ಯಕ್ತಿತ್ವವಿರಬಹುದೇ ಎಂದು ಓದುಗರಿಗೆ ಅನ್ನಿಸದಿರದು), ನಿರೂಪಕನಿಗೆ ಮತ್ತೊಂದು ಪ್ರಪಂಚ ತೆರೆದುಕೊಳ್ಳುತ್ತದೆ. ಶ್ರವಣನ ಹಿನ್ನೆಲೆ, ಮೂಲದಿಂದ ಇವತ್ತಿನವರೆಗಿನ ಅವನ ಚಲನ-ಸ್ಥಿತಿಗಳು ಚಲನೆ ಅನಾವರಣಾಗೊಳ್ಳುತ್ತದೆ. ಆ ಚಲನೆಯ ಒಂದು ರೂಪ ಶ್ರವಣ. ಪ್ರಾಯಶಃ ಅದೇ ಬಿಂದುವಿನಿಂದಾರಂಭವಾಗಿ ಮತ್ತೆಲ್ಲೋ ಬಂದುನಿಂತಿದ್ದಾನೆ ನಿರೂಪಕ. ಆತನೆಂದೂ ಅ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವ ಸಾಧ್ಯತೆಯಿಲ್ಲವೆನ್ನಿಸುತ್ತೆ. ಶ್ರವಣನ ಕಥೆಯ ಅನಾವರಣವಣದ ಮೂಲಕ ಅದನ್ನು ಮರುಷ್ಟಿಸಿಕೊಳ್ಳಬೇಕಿರುವುದು ನಿರೂಪಕನ ಸ್ಥಿತಿಯ ವ್ಯಂಗ್ಯ. ಈ ಭಾಗ ಕಥೆಯಲ್ಲಿ ಹೆಚ್ಚು ಬೆಳೆದಿಲ್ಲದಿದ್ದರೂ ಕಥೆ ತನ್ನ ಮೌನದಲ್ಲೇ ಇದನ್ನು ಅಡಗಿಸಿಕೊಂಡಿದೆ.ಚಿಕ್ಕ ಊರಿನಲ್ಲಿರುವ ಶ್ರವಣನ ತಂದೆ ಸಾಂಸ್ಕೃತಿಕವಾಗಿ ಗಮನಾರ್ಹರಾದ ಸಂಪ್ರದಾಯವಾದಿಗಳು ಅನ್ನಿಸುತ್ತದೆ. ಅವರ ಜ್ಯೋತಿಷ್ಯದಲ್ಲೇನಿದ್ದರೂ 'ಲಕ್ಷಣ' ಮಾತ್ರ ಪ್ರಾಮುಖ್ಯತೆ ಪಡೆಯುತ್ತದೆ, ಅನಿಶ್ಚಿತತೆಗೆ ಅವಕಾಶವಿದೆ, (ಇದನ್ನು ಪೋಷಿಸುತ್ತಿರುವ ಜೀವನದಲ್ಲಿ ಹೆಚ್ಚು ನಿಶ್ಚಿತತೆಯಿದೆ ಎಂದು ಹೇಳಬಹುದೇನೋ). ಇದರ ಮುಂದಿನ ಹಂತವಾದ ಆಧುನಿಕ ಜ್ಯೋತಿಷ್ಯ. ಅದು ಔದ್ಯೋಗಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿ ಇತ್ಯಾದಿಗಳು ನಮ್ಮ ಪರಂಪರೆಯ ಜ್ಯೋತಿಷ್ಯದ ಜೊತೆಗೂಡಿದರಿಂದ ಉಂಟಾದ ಒಂದು ಆಧುನಿಕ ವಿಕೃತಿ. ಈ ವಾದಸ್ ಸ್ವಲ್ಪ ಅತಿಯಾದರೂ, ಆ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದು ಖಚಿತವಾದ್ದನ್ನು ಅಪೇಕ್ಷಿಸುತ್ತದೆ, ನಿರೀಕ್ಷಿಸುತ್ತದೆ, ಉದ್ದೀಪಿಸುತ್ತದೆ, ಸ್ಥಾಪಿಸಬಯಸುತ್ತದೆ. ಈ ಹಿನ್ನೆಲೆಯಲ್ಲಿ, ಲಕ್ಷಣ ಜ್ಯೋತಿಷ್ಯದಿಂದ ಫಲಜ್ಯೋತಿಷ್ಯದೆಡೆಗೆ ಶ್ರವಣನ ತಂದೆಯ (ಮತ್ತು ಶ್ರವಣನ) ಪಯಣ ಕುತೂಹಲಕರವಾಗಿದೆ. ಆಧುನಿಕ ಪ್ರಕ್ರಿಯೆಗಳಿಂದ ಪ್ರಭಾವಿತರಿರಬಹುದಾದ ದೇವಸ್ಥಾನದ ಆಡಳಿತಮಂಡಳಿಯೆಂಬ (ಆಧುನಿಕ?) ವ್ಯವಸ್ಥೆಯೊಂದಿಗೆ ಹೆಚ್ಚು ಸಂಪ್ರದಾಯವಾದಿಗಳಾದ ಶ್ರವಣನ ತಂದೆಯ ಜಗಳದಿಂದ ಅವರು ಲಕ್ಷಣ ಹೇಳುವುದನ್ನಷ್ಟೇ ಅಲ್ಲದೇ ಫಲಜ್ಯೋತಿಷ್ಯಕ್ಕೆ ತೊಡಗಬೇಕಾದ್ದು ಇಲ್ಲಿ ಸೂಚಿತವಾಗಿದೆ. ಈ ವಿಕಾರಕ್ಕೆ ಅನಿಶ್ಚಿತತೆ ಬೇಕು ಒಂದೋ ಸೃಷ್ಟಿಸುತ್ತದೆ ಇಲ್ಲವೋ ಅದಿರುವಲ್ಲಿಗೆ ಅದನ್ನು ಹುಡುಕಿಕೊಂಡು ಹೋಗುತ್ತದೆ. ಆದ್ದರಿಂದಲೇ, ಅದು ಸ್ವಲ್ಪ ದೊಡ್ಡದಾದ ಶ್ರೀರಂಗಪಟ್ಟಣದಲ್ಲಿ (ಮುಂದೆ ಬೆಂಗಳೂರಿನಲ್ಲಿ) ಹೆಚ್ಚು ಬೇರೂರುವ ಸಾಧ್ಯತೆ ಇರುವುದು ಕಥೆಯಲ್ಲಿ ಸೂಚಿತವಾಗಿದೆ (ನೇರವಾಗಿ ಶ್ರೀರಂಗಪಟ್ಟಣದಲ್ಲೇ ಶ್ರವಣ-ತಂದೆ ನೆಲೆಸುತ್ತಾರೆ ಎನ್ನುವುದು ಕಥೆಯಲ್ಲಿಲ್ಲ, ಚಲನೆ ಮಾತ್ರ ಅದರೆಡೆ ಇರುವಂತಿದೆ). ಅವರು ಶ್ರೀರಂಗಪಟ್ಟಣದಲ್ಲಿ ನೆಲೆಸುವುದಾದರೆ ಅದು ಆಧುನಿಕತೆಯಿಂದುಂಟಾದ ಚಲನೆಯ ಮೊದಲ ಘಟ್ಟವನ್ನು ಸೂಚಿಸುತ್ತದೆ. ದೊಡ್ಡ ಊರಿನ ಅನಿಶ್ಚಿತತೆಯೂ ಆಧುನಿಕತೆಯ ಪರಿಣಾಮವೇ ಆಗಿದೆ ಎನ್ನುವುದು ಗಮನಾರ್ಹ. ಚಿಕ್ಕ ಊರಿನಲ್ಲಿ ಆಧುನಿಕತೆಯ ಪರಿಣಾಮ ಆಗಿರಬಹುದಾದ ವಿಕೃತಿ ದೊಡ್ಡ ಊರಿನಲ್ಲಿ ಬೇರೂರುವುದು ಕೂಡಾ ದೊಡ್ಡ ಊರಿನಲ್ಲಿ ಆಧುನಿಕತೆ ತಂದಿರುವ ಅನಿಶ್ಚಿತತೆ - ಎನ್ನುವಲ್ಲಿ ನಮ್ಮ ದೇಶದಲ್ಲಿ ಆಧುನಿಕತೆ ಮೊದಲ ಘಟ್ಟದಲ್ಲಿ ತಂದಿರುವ ಚಲನೆಯ ಒಂದು ಮುಖದ ಚಿತ್ರಣವಿದೆ. ಹಳ್ಳಿಯಿಂದ ಚಿಕ್ಕ ಪಟ್ಟಣಕ್ಕೆ ಚಲನೆ. ಗಮನಿಸಬೇಕಾದ ಮತ್ತೊಂದು ವಿಪರ್ಯಾಸವೆಂದರೆ, ಸಾಂಸ್ಕೃತಿಕವಾಗಿ ಹೆಚ್ಚು ಸುಭದ್ರವಿರುವ ಊರಿನಲ್ಲಿ ವಿಶ್ಲೇಷಣೆಯಲ್ಲಿ, ದೃಷ್ಟಿಯಲ್ಲಿ ಅನಿಶ್ಚಿತತೆಗೆ ಅವಕಾಶವಿದೆ ('ಲಕ್ಷಣ ಜ್ಯೋತಿಷ್ಯ'). ಆದರೆ ಅನಿಶ್ಚಿತತೆ ತಾಂಡವವಾಡುತ್ತಿರುವಲ್ಲಿ 'ಫಲ ಜ್ಯೋತಿಷ್ಯ'ದಂತಹ ಖಚಿತತೆಗೆ ಮನುಷ್ಯ ಶರಣಾಗುತ್ತಾನೆ.ಆದರೆ ಚಲನೆಯ ಈ ಪ್ರಕ್ರಿಯೆಯ ಒಂದು ಬಗೆಯ ಸಂಪೂರ್ಣತೆಯನ್ನು ಅಥವಾ ಸಮಗ್ರತೆಯನ್ನು ಪಡೆದುಕೊಳ್ಳುವ ಮೊದಲೇ ದೊಡ್ಡ ನಗರಗಳ ಬೆಳವಣಿಗೆಯೂ ಸಮಾನಾಂತರದಲ್ಲಿ ನಡೆದಿತ್ತು. ಮತ್ತು ಅದು ಹಳ್ಳಿಗಳನ್ನೂ, ಚಿಕ್ಕ ಊರುಗಳನ್ನೂ ಪ್ರಭಾವಿಸುತ್ತಲೇ ಬಂದಿತ್ತು. ಇದರ ಪ್ರತಿನಿಧಿಯಾದ 'ಲಾವಣ್ಯ' ಶರವಣನಿಗೆ ದೂರದ ಸಂಬಂಧಿಯೇ ಎನ್ನುವುದು ಗಮನಾರ್ಹ. ಅವಳ ಹೆಸರಿನ ಸ್ವಾರಸ್ಯವನ್ನೂ ಕಥೆಯ ಹಿನ್ನೆಲೆಯಲ್ಲಿ ಗಮನಿಸಬೇಕದ್ದು. ಶರವಣ ಅವಳತ್ತ ಆಕರ್ಷಿತನಾಗಿದ್ದಾನೆ. ಅವನ ಮನೆಯವರಿಗಾದರೂ ಈ ಸಂಬಂಧ ಒಪ್ಪಿಗೆಯೆಂದ ಮೇಲೆ ಅವರಿಗೂ ಈ ಕುರಿತ ಆಕರ್ಷಣೆಯಿದೆ. ಇದರ ಕುರಿತು ಕಥೆಗಾರರು (ಅಥವಾ ಶರವಣ) ಏನೂ ಹೇಳದೆ ಒಂದು ದೊಡ್ಡ ಮೌನದಲ್ಲಿ ಸಾಧ್ಯತೆಯನ್ನು ಸೂಚಿಸಿದ್ದಾರೆ. ಚಲನೆಯ ಮೊದಲು ಬಿಂದು ಆಧುನಿಕತೆಯೊಂದಿಗಿನ ಜಗಳದಿಂದಾದರೆ (ದೇವಸ್ಥಾನದ ಆಡಳಿತಮಂಡಳಿ) ಚಲನೆಯ ಎರಡನೇಯ ಬಿಂದು ಆಧುನಿಕತೆಯೊಂದಿಗಿನ ಆಕರ್ಷಣೆ (ಬೆಂಗಳೂರಿನ ಲಾವಣ್ಯ). ಶರವಣ-ಲಾವಣ್ಯರ ಮೊದಲ ಘಟ್ಟದ ಸಂಬಂಧ ಜಾಗತೀಕರಣ ಪೂರ್ವ ಭಾರತವನ್ನು ಧ್ವನಿಸುವಂತಿದೆಯೇನೋ ಎಂದು ಅನುಮಾನ ಬರುತ್ತದೆ. ಭೋರ್ಗರೆತದ ಜಾಗತೀಕರಣದಂತಹ ಯಾವುದೇ ಪ್ರಕ್ರಿಯೆಗೆ ದೇಶ ಸಜ್ಜುಗೊಳ್ಳುತ್ತಿರುವಂತಿದೆ ಇಲ್ಲಿ. ಅದನ್ನು ಸ್ವಾಗಿತಿಸಿ ಮೊದಮೊದಲು ತುಳಿಸಿಕೊಳ್ಳಲು ಬೇಕಾದ ಭೂಮಿಕೆಯೊಂದು ಗುಪ್ತಗಾಮಿನಿಯಾಗಿ ತಯಾರಾಗುತ್ತಿರುವಂತೆ ಇಲ್ಲಿ ಧ್ವನಿತವಾದಂತಿದೆ. ಲಾವಣ್ಯಳೇ ಒಪ್ಪಿಕೊಳ್ಳುತ್ತಿದ್ದಳೋ ಏನೋ, ಆದರೆ ಶರವಣನೇ ಎಲ್ಲವನ್ನೂ ಬದಲಿಸಲು ಹಟ ತೊಟ್ಟವನಂತಿದ್ದ.ಶ್ರೀಕಾಂತನ (ಎಲ್ಲಾ ಆಧುನಿಕ ವಿಕಾರಗಳನ್ನು ಹಠಾತ್ತಾಗಿ ತರುವವ) ಆಗಮನದಿಂದುಂಟಾಗುವ ಬದಲಾವಣೆಗಳ ಕೇಂದ್ರ ಬಿಂದು ಯಾರೆಂದು ಹೇಳುವುದೇ ಕಷ್ಟವಾಗುತ್ತದೆ ಕಥೆಯಲ್ಲಿ. ಇದು ಜಾಗತೀಕರಣದ ಪ್ರಕ್ರಿಯೆಯ ಸಂಕೀರ್ಣತೆಯನ್ನು ಸರಿಯಾಗಿ ಚಿತ್ರಿಸುತ್ತದೆ. ನಂತರದ ಭಾಗಗಳು, ಇತ್ತೀಚಿನ ವರ್ಷಗಳ ವಿಷಯಗಳನ್ನು ಚಿತ್ರಿಸುತ್ತವೆ. (ಅಲ್ಲಲ್ಲಿ ಮಾಸ್ತಿಯವರ 'ದೋರನ ಕಂಬಳ' ಮತ್ತು ಕೃಷ್ಣ ಆಲನಹಳ್ಳಿಯವರ 'ಪರಸಂಗದ ಗೆಂಡೆ ತಿಮ್ಮ' ಜ್ಞಾಪಕ ಬಂದಿತ್ತು ನನಗೆ, ಏಕೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾರೆ.) 'ಆ ದಿನ ಕೋಣೆಯಲ್ಲಿ ಏನೇನು ನಡೆಯಿತು ಎಂದು ಹೇಳುವುದು ಕಷ್ಟ' ಎನ್ನುವುದು ಕೂಡಾ ಪ್ರಕ್ರಿಯೆಯ ಸಂಕೀರ್ಣತೆಯನ್ನು ಧ್ವನಿಸುತ್ತದೆ. ಬೆಂಗಳೂರಿನ ಲಾವಣ್ಯಳ ಪ್ರೋತ್ಸಾಹವನ್ನು ಶ್ರೀರಂಗಪಟ್ಟಣದ ಶ್ರವಣ ಅಂದುಕೊಂಡುಬಿಟ್ಟಿರುತ್ತಾನೆ. ಅವಳಿಗೆ ಬೇಕಿತ್ತೇ ಇಲ್ಲವೇ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಎಲ್ಲವೂ 'ಊರು ಬಿಡುವುದೇ ಮುಖ್ಯ' ಎನ್ನುವಲ್ಲಿಗೆ ಬಂದು ನಿಲ್ಲುತ್ತದೆ. ಇಂತಲ್ಲಿ ಕೂಡಾ ವಾಸ್ತವ ಪ್ರಜ್ಞೆಯನ್ನು ಕಳೆದುಕೊಳ್ಳದೇ ಹೋದವರು 'ಲಕ್ಷಣ' ಜ್ಯೋತಿಷ್ಯದ ಹಿನ್ನೆಲೆಯಿದ್ದ ಶ್ರವಣನ ತಂದೆ ಮಾತ್ರ.ನಂತರದ ಭಾಗಗಳಲ್ಲಿ, ಇತ್ತೀಚಿನ ವರ್ಷಗಳಲ್ಲಿ ಶ್ರವಣನ ಹಿನ್ನೆಲೆಯಿರುವ ಜನರು ಪಡುವ ಪಡಿಪಾಟಲುಗಳನ್ನು ಚಿತ್ರಿಸುತ್ತದೆ. ಅದೇ ರೀತಿ ಆ ಪಯಣದಲ್ಲಿ ಸಮಾಜದ ಎಲ್ಲಾ ವರ್ಗಗಳ ಛಾಯೆ ಶ್ರವಣನಂತಹವರಲ್ಲಿ ಮಾತ್ರ ಪಡಿಮೂಡುವುದನ್ನೂ ಕಥೆ ಚಿತ್ರಿಸುತ್ತದೆ. ಆ ಮೂಲಕ ಸಮಾಜದ ಬದಲಾವಣೆ, ಯಾವ ಆಧುನಿಕತೆ, ಯಾವ ಪರಂಪರೆಯ ಜೊತೆಗೆ ಬೆಸೆದುಕೊಳ್ಳುತ್ತಿದೆ ಎನ್ನುವುದೆಲ್ಲಾ ಕಥೆಯಲ್ಲಿ ಬರುತ್ತದೆ. ಅತ್ಯಾಧುನಿಕರಂತಿರುವವರು ಅಗತ್ಯ ಬಿದ್ದಾಗ ಜೋತುಬೀಳುವ ಪಾರಂಪರಿಕ ಸ್ವರೂಪಗಳು ಕೋಮುವಾದೀ ಪ್ರಕ್ರಿಯೆಗೆ ಹೆಚ್ಚಿನ ನೀರೆರೆಯುವಂತಿರುವುದರ ಸೂಚನೆಯೂ ಇದೆ, ಕಥೆಗಾರರಾಗಲಿ, ನಿರೂಪಕ ಶ್ರವಣನಾಗಲಿ, ಘೋಸ್ಟ್-ನಿರೂಪಕ ಆಧುನಿಕನಾಗಲೀ ಇದನ್ನು ನೇರವಾಗಿ ಎಲ್ಲೂ ಹೇಳುವುದಿಲ್ಲ. (ಇಷ್ಟೆಲ್ಲಾ ಆದರೂ, ಈ ಕೆಲ ಭಾಗಗಳಲ್ಲಿ ಶರವಣನ ಮೆಲುದನಿಯ ನಿರೂಪಣೆ ಸಡಿಲವಾಗಿ ಸ್ವಲ್ಪ ಭಾಷಣವಾಗಿಬಿಟ್ಟಿದೆ.) ಒಟ್ಟು ಸ್ವತಃ ನೆಮ್ಮದಿಯನ್ನು ಕಳೆದುಕೊಂಡವ ಇತರರಿಗೆ ನೆಮ್ಮದಿಯನ್ನು ಮಾರುವ ಮನುಷ್ಯನಾಗುವುದು ಮತ್ತೊಂದು ವಿಪರ್ಯಾಸ. ಅಪ್ಪನಿಂದ ಜ್ಯೋತಿಷ್ಯ ಕಲಿಯದೇ ಕೇವಲ ಭಾಷೆಯನ್ನು ಕಲಿಯುವುದು ಜ್ಞಾನದ ಛಿದ್ರವಾದ ಗ್ರಹಿಕೆಯಿಂದ ಉಂಟಾಗುವ ವಿಕೃತಿಯನ್ನು ಸೂಚಿಸುವಂತಿದೆ. ಇದೆಲ್ಲದರ ದುರಂತವಾಗಿ ಶರವಣ ಬೆಂಗಳೂರಿನ ಲಾವಣ್ಯಳನ್ನೂ ಕಳೆದುಕೊಂಡು ಏಕಾಂಗಿಯಾಗುತ್ತಾನೆ. ಆ ನಂತರ ಕಥೆಯಲ್ಲಿ ಲಾವಣ್ಯ ಮತ್ತೆ ಪ್ರತ್ಯಕ್ಷಲಾಗದೇ ಇರುವುದೂ ಒಂದು ವಿಶಿಷ್ಟವಾದ್ದನ್ನು ಧ್ವನಿಸುತ್ತದೆ. ಈ ಎಲ್ಲಾ ತಲೆಮಾರುಗಳ ದುರಂತ ಸಾಂದ್ರವಾಗಿ ಪ್ರತಿಫಲನಗೊಳ್ಳುವುದು ಶ್ರವಣ-ಲಾವಣ್ಯರ ಮಗಳಲ್ಲಿ ಅವಳ ಮೌನ ಧಾರಣೆಯಿಂದ ಎನ್ನುವುದು ನನ್ನಲ್ಲಿ ದಿಗ್ಭ್ರಮೆ ಹುಟ್ಟಿಸುತ್ತದೆ. ಆ ಹುಡುಗಿ ಸಂವೇದನಾಶೀಲಳಾಗದೇ ಹೋಗಿದ್ದರೆ ಹೇಗಿರುತ್ತಿದ್ದಳು ಎನ್ನುವುದಕ್ಕೆ ಕಥೆಯಲ್ಲಿ ಸಮಾನಾಂತರವಾದ ಪಾತ್ರವಿಲ್ಲದ್ದರಿಂದ ಅದನ್ನು ಇಲ್ಲಿ ಪ್ರಸ್ತಾಪಿಸಲು ಹೋಗುವುದಿಲ್ಲ. ಆದರೆ ಈ ಹುಡುಗಿ ಸಂವೇದನಾಶೀಲಳಂತಿದ್ದು ಅವಳ ದುರಂತ ಮುಖಕ್ಕೆ ರಾಚುತ್ತದೆ. ಶ್ರವಣ-ಲಾವಣ್ಯರ ಸಂಬಂಧಗಳು ಬಿರುಕುಬಿಡುವ ಭಾಗಗಳ ವರ್ಣನೆಗಳೆಲ್ಲಾ ಅವ್ಯಕ್ತಕ್ಕೆ ಕೈಚಾಚಿದಂತಿದ್ದು, ಅರ್ಥವಾಗದ ಪ್ರಕ್ರಿಯೆಗಳನ್ನು, ನಿಗೂಢವನ್ನು ಧ್ವನಿಸುವಂತಿದ್ದು ಕಥೆಯ ಹೆಚ್ಚುಗಾರಿಕೆಯಾಗಿದೆ.ಈ ಎಲ್ಲಾ ದುರಂತಗಳು ಹೀಗಿದ್ದೂ, ಇಂತಲ್ಲೇ, ಒಟ್ಟು ಸಮುದಾಯವನ್ನು ಗಮನಿಸಬಲ್ಲ ಮನುಷ್ಯನ ಮಾದರಿಯೊಂದು ಸಿದ್ಧಗೊಳ್ಳುತ್ತಲಿರುವುದೂ ಶ್ರವಣನ ಬದುಕಿನ ಚಲನೆಯ ವಿವರಗಳಲ್ಲಿ ದೊರೆಯುತ್ತದೆ. ಪ್ರಜ್ಞಾಪೂರ್ವಕ ಸಿದ್ಧತೆಯಲ್ಲ ಇದು, ದಾಳಿಯ ನಡುವೆಯೂ ಪ್ರಕೃತಿ ಮನುಷ್ಯನಿಗೋಸ್ಕರ ಗುಟ್ಟಾಗಿ ಬಚ್ಚಿಟ್ಟಿರುವ, ಅಗತ್ಯ ಬಿದ್ದಾಗ ಒದಗಿಸುವ ಕ್ರಮ. ಆದರೆ ಅದನ್ನು ಬಳಸಿಕೊಳ್ಳುವಷ್ಟು ಶರವಣನಲ್ಲಿ ಸದ್ಯಕ್ಕೆ ಶಕ್ತಿಯಿಲ್ಲ.ಶ್ರವಣನ ನಿವೇದನೆಯಲ್ಲಿ ನಿರೂಪಕನಿಗೆ ಒಂದು ಪ್ರಪಂಚದ ಪರಿಚಯವಾಗಿ ಅದರ ಜೊತೆ ಸಂಬಂಧ ಬೆಳೆಯುತ್ತದೆ. ಅದರ ಫಲವಾಗಿ ಶ್ರವಾಣನ ಮನೆಗೆ ಹೋದಾಗ ತನ್ನ ಸಹೋದ್ಯೋಗಿಗೂ, ಯು.ಜಿ. ವಿಚಾರಧಾರೆ, ಕಲ್ಟ್-ಗೂ ಸಂಬಂಧವಿರುವುದು ಗೊತ್ತಾಗುತ್ತದೆ. ಶರವಣನ ಸಂಪರ್ಕವಿರದೇ ಇದ್ದರೆ ಇದು ತಿಳಿಯುವ ಸಾಧ್ಯತೆ ಕಡಿಮೆಯಾಗಿರುತ್ತಿತ್ತು ಎನ್ನುವ ಧ್ವನಿಯಿದೆಯೇ ಇಲ್ಲಿ? ಆಧುನಿಕತೆಯ 'ಅತಿ'-ಯೆನ್ನುವುದು ಪರಂಪರೆಯನ್ನು ಸ್ಪರ್ಷಿಸಿ ಮತ್ತಷ್ಟು ವಿಕೃತಿಯಲ್ಲಿ ಪರ್ಯವಸಾನವಾಗುತ್ತಿದೆ ಎನ್ನುವುದು ಈ ಆಧುನಿಕನ ನಿಲುವೋ? ಈ ಭಾಗದ ಕಥೆಗೆ ನನಗೆ ಇನ್ನೂ ಅಷ್ಟಾಗಿ ದಕ್ಕಿಲ್ಲ.ಈಗ ಶ್ರವಣನ ಮಗಳ ಜೀವನ ಸಾರ್ಥಕಗೊಳ್ಳಬೇಕಿದೆ. ಶ್ರವಣನ ಜೀವನವೂ. ಹಿಂದಿನ ತಲೆಮಾರಿನ ಶ್ರವಣನ ತಾಯಿಗೆ ನಂಬಿಕೆಯಿರುವುದು ಈ ಎಲ್ಲಾ ಅನುಭವಗಳಿಂದ ಹೆಚ್ಚು ಮಾರ್ದವಗೊಂಡಿರಬಹುದಾದ, ಶ್ರವಣನ ಮನೆಯವರೆಗೂ ಬರುವಷ್ಟು ಸಂಬಂಧ ಬೆಳೆಸಿಕೊಂಡಿರುವ, ಸ್ವಲ ಹೆಚ್ಚು ಪ್ರಾಮಾಣಿಕನಾಗಿರಬಹುದಾದ ಆಧುನಿಕನಾದ ನಿರೂಪಕನಲ್ಲಿ. ದುರಂತಗಳಿಂಡ ಝರ್ಝರಿತಳಾಗಿರುವ ಅತ್ಯಾಧುನಿಕ ಜೀವನದತ್ತ ಮುಖಮಾಡಿರುವ ಶ್ರವಣನ ಮಗಳಿಗೂ ಈ ಇದೇ ಆಧುನಿಕನ ಮೇಲೆ ನಂಬಿಕೆ, ಆಟೋಗ್ರಾಫ಼್ ಕೇಳುತ್ತಾಳೆ. ಹೀಗೆ ಭವಿಷ್ಯದತ್ತ ಮುಖ ಮಾಡಿ ಕಥೆ ಸಾರ್ಥಕವಾಗಿ ಮುಗಿಯುತ್ತದೆ.ಇಷ್ಟೆಲ್ಲಾ ಹೇಳಿದ ಮೇಲೂ ಒಂದು ಮಾತನ್ನು ಹೇಳಬೇಕಿದೆ. ಕಥೆಯನ್ನು ಮುಂದಿಟ್ಟುಕೊಂಡು ಅದನ್ನು ಗಳಿಸಲೇಬೇಕೆನ್ನುವ ಹಠದಿಂದ ನನಗೆ ಈ ಬರಹ ಸಾಧ್ಯವಾದದ್ದು. ಹುಲಿಸವಾರಿಯ ಓದಿನ ಅನುಭವದಿಂದ ಪ್ರೇರೇಪಿತನಾಗಿ ನಾನು ಆ ಸಂಕಲನದ ಕಥೆಗಳನ್ನು ಮತ್ತೆ ಮತ್ತೆ ಓದಿ ನನ್ನದಾಗಿಸಿಕೊಳ್ಳುವುದು ಸಾಧ್ಯವಾಯಿತು. ಆದರೆ ಈ ಬರಹ ಅನುಭವದಿಂದ ಹೆಚ್ಚಾಗಿ ಬೌದ್ಧಿಕ ಸಾಧನೆಯಾಗಿದೆಯೆಂದರೆ ಒಂದೋ ಅದು ಕಥೆಯ ಕುರಿತ ಟೀಕೆಯಾಗುತ್ತದೆ ಇಲ್ಲವೋ ನನ್ನ ಸಂವೇದನೆಯ ಅಸಮರ್ಪಕತೆಯ ಕುರಿತ ಮಾತಾಗುತ್ತದೆ. ಎರಡನೇಯದ್ದೇ ಹೆಚ್ಚು ನಿಜವೆನ್ನಿಸುತ್ತದೆ. ಹುಲಿಸವಾರಿಯ ಹೆಚ್ಚಿನ ಕಥೆಗಳಲ್ಲಿ ನುಡಿಚಿತ್ರಗಳಿಂದ ಕಥೆ ನಿರೂಪಿತವಾಗಿರುವುದಕ್ಕೂ, ಈ ಸಂಕಲನದ ಹಾದಿ ಸಂಪೂರ್ಣ ಭಿನ್ನವಾಗಿರುವುದರಿಂದ ಹೀಗಾಗಿರಬಹುದು. ಕಥೆಯಲ್ಲಿ ಸೂಚ್ಯತೆಯೆನ್ನುವುದನ್ನು ಧರ್ಮ ಎನ್ನಿಸುವಷ್ಟು ಜತನದಿಂದ ಕಾಯ್ದುಕೊಳ್ಳಲಾಗಿದೆ. ಕಥೆಗೆ ಇದರಿಂದ ಕಾವ್ಯಾತ್ಮಕತೆ ಪ್ರಾಪ್ತವಾಗಿದೆ ಎಂದೆನ್ನಿಸದಿರದು. ಈವತ್ತಿನ ಯಾವುದೇ ಪ್ರಕ್ರಿಯೆಯನ್ನು ಇದು ಹೀಗೇ ಎನ್ನುವ ಖಚಿತವಾಗಿ ಹೇಳುವುದು ಕಷ್ಟವಾಗಿರುವುದರಿಂದಲೂ ಕಥೆಯ ಈ ಅತಿಸೂಚ್ಯತೆ ವಸ್ತುವಿನೊಂದಿಗೆ ಸಾವಯವ ಸಂಬಂಧ ಹೊಂದಿರುವ ತಂತ್ರ ಎಂದು ವಾದಿಸುವುದಕ್ಕೆ ಅವಕಾಶವಿದೆ. ಅದೇ ಸಮಯದಲ್ಲಿ, ಇದೊಂದು ನೀಳ್ಗತೆಯಾಗಿದ್ದಿದ್ದರೆ (ವಸ್ತು ಅದಕ್ಕೆ ತಕ್ಕುದಾಗಿದೆ ಎಂದೆನ್ನಿಸುತ್ತದೆ) ಅಥವಾ ಕಿರುಕಾದಂಬರಿಯಾಗಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತೇ ಎನ್ನುವ ಆಲೋಚನೆಗಳೂ ನನಗೆ ಬಂದವು. ಈ ಕುರಿತು ಯಾವುದೇ ನಿಲುವಿಗೆ ಬರಲು ಸಾಧ್ಯವಾಗಿಲ್ಲ.ಇದೆಲ್ಲಾ ಅರ್ಥ-ಅಪಾರ್ಥಗಳ ಸರಣಿಯಂತೆ ಓದುಗರಿಗೆ ಮತ್ತು ಕಥೆಗಾರರಿಗೂ ತೋರಬಹುದು. ಅರ್ಥ-ಅಪಾರ್ಥಗಳ ಪೋಣಿಸಿದ ಮಾಲೆಯೊಂದನ್ನು ಕಥೆಗೆ ತೊಡಿಸುವುದಷ್ಟೇ ನನ್ನ ಉದ್ದೇಶ ಎನ್ನುವುದನ್ನು ವಿನಯದಿಂದ ಹೇಳುವುದಕ್ಕೆ ಬಯಸುತ್ತೇನೆ.