ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Saturday, November 10, 2018

kardama devahuti

ಕೃತಯುಗದಲ್ಲಿ ಮತ್ಸ್ಯಾವತಾರದ ನಂತರ ಸ್ವಾಯಂಭುವ ಮನು ಮತ್ತು ಅವನ ಪತ್ನಿ ಶತರೂಪಾ ಹೊಸಮನ್ವತಂರದ ಸ್ಥಾಪನೆಯಲ್ಲಿ ನಿರತರಾದರು. ಸ್ವಾಯಂಭುವ ಮನುವಿಗೆ ಮೂರು ಮಕ್ಕಳು - ಪ್ರಿಯವ್ರತ, ಉತ್ತಾನಪಾದ ಮತ್ತು ದೇವಹೂತಿ. ಪ್ರಿಯವ್ರತ ಮತ್ತು ಉತ್ತಾನಪಾದರು ಧರ್ಮಸಂಸ್ಥಾಪಕರಾದ ರಾಜರಾಗಿ ಇಡಿಯ ಭೂಮಂಡಲವನ್ನು ಪರಿಪಾಲಿಸುತ್ತಿದ್ದರು. ಸ್ವಾಯಂಭುವ ಮನುವಿಗೆ ತನ್ನ ಮಗಳಾದ ದೇವಹೂತಿಯ ಮೇಲೆ ವಿಶೇಷ ಮಮಕಾರ. ಅವಳಿಗೆ ಅನುರೂಪನಾದ ವರನನ್ನು ಹುಡುಕುತ್ತಿದ್ದನು. ಮಹಾತ್ಮನಾದ ಕರ್ದಮನೇ ದೇವಹೂತಿಗೆ ತಕ್ಕ ವರ ಎನ್ನುವುದು ಸ್ವಾಯಂಭುವ ಮನುವಿನ ಎಣಿಕೆ. ಚತುರ್ಮುಖ ಬ್ರಹ್ಮನ ಮಗನಾದ ಕರ್ದಮ ಪ್ರಜಾಪತಿಗೆ ತಂದೆಯು ಜಗತ್ತಿನ ಸೃಷ್ಟಿ ಕಾರ್ಯಕೈಗೊಳ್ಳುವಂತೆ ಆಜ್ಞೆ ಮಾಡಿದ್ದನು. ಸೃಷ್ಟಿಕಾರ್ಯ ಕೈಗೊಳ್ಳುವ ಮುಂಚೆ ಸರಸ್ವತೀ ತೀರದಲ್ಲಿ ಕಠಿಣವಾದ ತಪಸ್ಸಿಗೆ ಮೊದಲಾಗಿದ್ದನು ಕರ್ದಮ ಪ್ರಜಾಪತಿ.

ಅನೇಕ ವರ್ಷಗಳ ತಪಸ್ಸಿನ ನಂತರ ಮಹಾವಿಷ್ಣು ಶಬ್ದಬ್ರಹ್ಮದ ಮೂಲಕ ಅವನಿಗೆ ಪ್ರಕಟವಾದನು. ಕರ್ದಮನಿಗೆ ತಪಸ್ಸಿನ ಸಾಕ್ಷಾತ್ಕಾರದ ಸಂತೋಷದಿಂದ ಮತ್ತೇನೂ ಬೇಡವಾಯಿತು. ಆದರೆ ತನಗಿರುವ ಜವಾಬ್ದಾರಿಯಾದ ಸೃಷ್ಟಿಕಾರ್ಯದಿಂದ ಹಿಂದೆ ಸರಿಯುವಂತಿಲ್ಲ. 'ಮಹಾವಿಷ್ಣುವೇ, ಸೃಷ್ಟಿಕಾರ್ಯ ನಡೆಸುವುದಕ್ಕಾಗಿ ನನಗೆ ತಂದೆ ಬ್ರಹ್ಮನ ಆಜ್ಞೆಯಾಗಿದೆ. ಆದರೆ ನಿನ್ನ ಮೇಲಣ ಭಕ್ತಿ ಅದಕ್ಕೆ ಮಿಗಿಲಾಗಿದೆ. ನಾನು ಸಂಸಾರಿಯಾಗಿಯೂ ನಿನ್ನ ಭಕ್ತಿಗೆ ಒಂದಿಷ್ಟೂ ಚ್ಯುತಿ ಬರದ ಹಾಗೆ ದಯವಿಟ್ಟು ಕೈಹಿಡಿದು ನಡೆಸು' ಎಂದು ಕೇಳಿಕೊಂಡನು. ಭಗವಂತನು 'ಕರ್ದಮನೇ, ನೀನು ಸಂಸಾರಿಯಾಗುವ ಬಯಕೆಯಿಂದ ತಪಸ್ಸು ಮಾಡಿದೆ. ಆದರೆ ಈಗ ನಿನಗೆ ಭಕ್ತಿ ಮಿಗಿಲಾಗಿದೆ. ನಿನ್ನ ತಪಸ್ಸನ್ನು ಮೆಚ್ಚಿದ್ದೇನೆ. ನೀನು ಸೃಷ್ಟಿಕಾರ್ಯ ಮಾಡುವುದು ಅವಶ್ಯಕ. ನಿನಗೆ ಅನುರೂಪಳಾದ ವಧುವಿನ ಸೃಷ್ಟಿಯಾಗಿದೆ. ಸ್ವಾಯಭುವ ಮನುವಿನ ಮಗಳಾದ ದೇವಹೂತಿಯನ್ನು ಮದುವೆಯಾಗು, ನಿನ್ನ ಸಕಲ ಇಷ್ಟಾರ್ಧಗಳು ಪೂರೈಕೆಯಾಗುವುದು. ಸ್ವತಃ ಸ್ವಾಯಂಭುವ ಮನುವೇ ನಿನ್ನ ಆಶ್ರಮಕ್ಕೆ ಬಂದು ವಿವಾಹಪ್ರಸ್ತಾವಕ್ಕೆ ಮೊದಲಾಗುತ್ತಾನೆ. ದೇವಹೂತಿಯಿಂದ ನಿನಗೆ ಅನೇಕ ಮಕ್ಕಳಾಗುತ್ತಾರೆ, ಸ್ವತಃ ನಾನೇ ಒಂದಂಶದಿಂದ ಬಂದು ನಿನ್ನ ಮಗನಾಗಿ ಲೋಕಕಲ್ಯಾಣಕ್ಕೆ ಮೊದಲಾಗುತ್ತೇನೆ' ಎಂದು ಅಂತರ್ಧಾನನಾದನು.

ಅದರಂತೆ ಮರುದಿನ ಸ್ವಾಯಂಭುವ ಮನುವಿನ ರಾಜಪರಿವಾರ ಕರ್ದ್ಮನ ಆಶ್ರಮಕ್ಕ್ಕೆ ಬಂದಿಳಿಯಿತು. ಕರ್ದಮನ ಆಶ್ರಮದ ಸೌಂದರ್ಯಕ್ಕೆ ಸ್ವತಃ ಮನುವೇ ಮನಸೂರೆಗೊಂಡನು. ಕರ್ದಮನ ಭಕ್ತಿಗೆ ಮೆಚ್ಚಿದ ಮಹಾವಿಷ್ಣುವೇ ಆನಂದಬಾಷ್ಪ ಸುರಿಸಲು ಅದರ ಒಂದು ಬಿಂದುವಿನಿಂದ ಆಶ್ರಮದ ಎದುರು ಸುಂದರವಾದ 'ಬಿಂದುಸರೋವರ' ಉಂಟಾಗಿತ್ತು. ಮನೋಹರವಾದ ಮರ, ಗಿಡ, ಹೂಗಳಿಂದ ತುಂಬಿದ್ದ ಆಶ್ರಮದಲ್ಲಿ ಎಲೆಗಳಿಂದ ನಿರ್ಮಿತವಾದ ಕರ್ದಮನ ಮನೆಯಿತ್ತು. ಅದೇ ತಾನೆ ವೈದಿಕ ಕಾರ್ಯಗಳನ್ನು ಪೂರೈಸಿಕೊಂಡು ಬಂದ ಕರ್ದಮನ ದೈವೀಕ ತೇಜಸ್ಸನ್ನು ನೋಡಿ ಮನುವಿಗೆ ಗೌರವವುಂಟಾಯಿತು. ಕರ್ದಮನು ರಾಜಪರಿವಾರಕ್ಕೆ ಉಚಿತವಾದ ಸತ್ಕಾರ ಮಾಡಿ ಬರಮಾಡಿಕೊಂಡನು. ಭಗವಂತನ ಅಪ್ಪಣೆಯನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡನಾದರೂ ಗಾಂಭೀರ್ಯದಿಂದ 'ರಾಜನ್, ಸಕಲ ಭೂಮಂಡಲದ ದುಷ್ಟಶಿಷ್ಟ ರಕ್ಷಣದ ಹೊಣೆ ಹೊತ್ತಿರುವ ನೀನು ಪರಿವಾರ ಸಮೇತನಾಗಿ ಬಂದಿರುವೆಯೆಂದರೆ ಮಿಗಿಲಾದ ಲೋಕಕಲ್ಯಾಣ ಕಾರ್ಯವೇ ಇರಬೇಕು. ಅದೇನೆಂದು ಅರುಹು' ಎಂದು ಕೇಳಿಕೊಂಡನು.

ಸ್ವಾಯಂಭುವ ಮನುವು ಮಾರ್ಮಿಕವಾಗಿ ನುಡಿದನು. 'ಎಲೈ ಮುನಿಪುಂಗವನೇ, ಚತುರ್ಮುಖ ಬ್ರಹ್ಮನಾದರೋ ನಮ್ಮನ್ನು ಸೃಷ್ಟಿಸಿರುವುದು ಪ್ರಜಾಹಿತರಕ್ಷಣೆಗಾಗಿ. ಆದರೆ ನಿಮ್ಮನ್ನು ಸೃಷ್ಟಿಸುರುವುದು ವೇದಸ್ವರೂಪಿಯಾದ ತನ್ನನ್ನೇ ರಕ್ಶಿಸಿಕೊಳ್ಳುವುದಕ್ಕಾಕೆ. ಇದೀಗ ನಾನು ಬಂದಿರುವುದು ನಿಮ್ಮ ಲೋಕಕಲ್ಯಾಣದ ಧರ್ಮಾನುಸಾರಕ್ಕೆ ನನ್ನ ಕಾಣಿಕೆ ಸಲ್ಲಿಸಲು. ಈಕೆ ನನ್ನ ಮಗಳಾದ ದೇವಹೂತಿ. ಅವಳು ತನಗೆ ಅನುರೂಪನಾದ ಪತಿಯನ್ನು ಬಯಸುತ್ತಿದ್ದಾಳೆ. ಇತ್ತೀಚೆಗೆ ನಾರದ ಮಹರ್ಷಿಯಿಂದ ನಿಮ್ಮ ವಿದ್ಯೆ, ರೂಪ, ಗುಣ, ಸದಾಚಾರಗಳನ್ನು ಕೇಳಿ ನಿಮ್ಮನ್ನು ಮನಸಾ ವರಿಸಿದ್ದಾಳೆ. ನಿನಗೆ ಅನುರೂಪಳಾದ ದೇವಹೂತಿಯನ್ನು ವರಿಸಿ ನನ್ನನು ಕೃತಾರ್ಥನನ್ನಾಗಿ ಮಾಡು" ಎಂದನು. ಕರ್ದ್ಮನಿ 'ಮಹಾರಾಜ, ನಿನ್ನ ಮಗಳಾದ ದೇವಹೂತಿಯನ್ನು ವರಿಸುವುದಕ್ಕೆ ನೀನು ಇಷ್ಟಾಗಿ ಕೇಳಿಕೊಳ್ಳುವ ಅವಶ್ಯಕತೆಯಿಲ್ಲ. ದೇವಹೂತಿಯ ಬಗ್ಗೆ ನಾನು ಮಿಗಿಲಾದ ವಿಚಾರವನ್ನೇ ಕೇಳಿದ್ದೇನೆ. ಅವಳ ಲಾವಣ್ಯದ ಒಂದು ಕುಡಿನೋಟಕ್ಕೆ ಗಂಧರ್ವರಾಜನಾದ ವಿಶ್ವಾವಸು ಮೂರ್ಛೆಹೋದನಂತೆ. ದೇವಹೂತಿಯ ರೂಪ, ಗುಣ, ವಿದ್ಯೆ ತಿಳಿದಿರುವ ಯಾರೂ ಸಹ ಮೋಹಗೊಳ್ಳದೆ ಇರುವುದಿಲ್ಲ. ಅವಳನ್ನು ಸಂತೋಷದಿಂದ ವರಿಸುತ್ತೇನೆ. ಆದರೆ ನನ್ನ ಗೃಹಶ್ಥ ಧರ್ಮ ಸೃಷ್ಟಿಕಾರ್ಯಕ್ಕೆ ಮಾತ್ರ ಸೀಮಿತ. ನನ್ನ ಸೃಷ್ಟಿಕಾರ್ಯ ಮುಗಿದ ನಂತರ ನಾನು ಸನ್ಯಾಸಯಾಗಿ ಭಗವಂತ ನಾಮಸ್ಮರಣೆಯಲ್ಲಿ ಕಾಲಕಳೆಯುತ್ತೇನೆ. ಒಪ್ಪಿಗೆಯೇ' ಎಂದನು.

ದೇವಹೂತಿಗೆ ಕರ್ದಮನ ಧಾರ್ಮಿಕತೆ, ವೈರಾಗ್ಯ, ತೇಜಸ್ಸು ಎಲ್ಲದರಿಂದ ಅನುರಾಗ ಮತ್ತೂ ಸ್ಥಿರವಾಯಿತು. ಚತುರ್ಮುಖ ಬ್ರಹ್ಮನ ಸೃಷ್ಟಿಕಾರ್ಯ ಶುರುಮಾಡಿದ ನಂತರದಲ್ಲಿ ಮೊಟ್ಟಮೊದಲ ಸಕಲ ವೇದೋಕ್ತವಾಡ ವಿವಾಹ ಕರ್ದಮ ದೇವಹೂತಿಯರದ್ದು. ವೈಭವದ ವಿವಾಹದ ನಂತರ ಸ್ವಾಯಂಭುವ ಮನು ಮತ್ತು ಶತರೂಪೆಯರು ಭಾರದ ಮನದಿಂದ ಮಗಳನ್ನು ಒಪ್ಪಿಸಿ ರಾಜಧಾನಿಗೆ ಹಿಂದಿರುಗಿದರು.

ದೇವಹೂತಿ ಅರಮನೆಯ ವೈಭವದಿಂದ ಆಶ್ರಮದ ಸಾತ್ವಿಕ ಜೀವನಕ್ಕೆ ಬಹುಬೇಗ ಹೊಂದಿಕೊಂಡಳು. ಅವಳ ಅವಿರತ ದುಡಿಮೆ, ಆಶ್ರಮ ನಿರ್ವಹಣೆಯನ್ನು ಕರ್ದಮನಿಗೆ ಅವಳ ಮೇಲೆ ಅಪಾರ ಗೌರವ, ಆದರ, ಪ್ರೇಮವುಂಟಾಯಿತು. ಒಂದು ದಿನ ಕರ್ದಮ "ದೇವಿ, ನಿನ್ನಂತಹ ಪತ್ನಿಯನ್ನು ಪಡೆದು ನಾನು ಧನ್ಯನಾದೆ. ನಿನ್ನ ಆಶ್ರಮದ ಸೇವೆಯಲ್ಲಿ ನಿನ್ನ ದೇಹವೇ ಕುಂದುತ್ತಿರುವುದನ್ನು ನೀನು ಗಮನಿಸಿದಂತಿಲ್ಲ. ತಪಶ್ಯಕ್ತಿಯಿಂದ ನನ್ನಲ್ಲಿ ದೈವೀಕವಾದ ಸಿದ್ಧಿಗಳು ವಶವಾಗಿವೆ. ನಿನ್ನೀ ಸೇವೆಯಿಂದ ನೀನೂ ಸಹ ಅವುಗಳಿಗೆ ಅಧಿಕಾರಸ್ಥಳಾಗಿರುವೆ. ನಿನಗೆ ಬೇಕಾದ ಸುಖವೇನು ಕೇಳಿಕೋ. ಅಲ್ಪದ್ದಕ್ಕೆ ಆಸೆ ಪಡಬೇಕಾದ ಅವಶ್ಯಕತೆಯಿಲ್ಲ. ಸಾಮಾನ್ಯರಿಗೆ ಎಟುಕಲಾರದ ಸಕಲಭೋಗಗಳನ್ನೂ ನೀನು ತೃಪ್ತಿಯಾಗುವಷ್ಟು ಅನುಭವಿಸಬಹುದು" ಎಂದನು. ದೇವಹೂತಿ ತನ್ನ ಮನದ ಅಪೇಕ್ಷೆಯನ್ನು ಹೇಗೆ ಹೇಳುವುದು ಎಂದು ಯೋಚಿಸುತ್ತಾ "ಮಹರ್ಷಿ, ನಿನಗೆ ತಿಳಿಯದುದೇನಿದೆ? ಸಂಸಾರಸುಖದಲ್ಲಿ ಸಂತಾನಸುಖ ಹಿರಿದಾದುದು. ಸುಂದರಾಂಗರಾದ ನಿಮ್ಮ ಅಂಗಸಂಗದಿಂದ ನಾನು ಸಂತಾನವನ್ನು ಬಯಸುತ್ತೇನೆ. ಈ ಕಾಮಸುಖಕ್ಕೆ ಅನುಗುಣವಾದ ಮಂದಿರವನ್ನೂ, ಭೋಗಸಾಮಗ್ರಿಗಳನ್ನೂ ಸೃಷ್ಟಿಮಾಡಬೇಕೆಂದು ನನ್ನಾಸೆ" ಎಂದಳು. ಕರ್ದಮನಿಗೆ ಚತುರ್ಮುಖಬ್ರಹ್ಮನ ಆಜ್ಞೆ ಜ್ಞಾಪಕಕ್ಕೆ ಬಂತು.

ಅದರಂತೆ ಕರ್ದಮನು ಒಂದು ದಿವ್ಯವಾದ ವಿಮಾನವನ್ನು ನಿರ್ಮಿಸಿ ಅದರಲ್ಲಿ ದೇವಹೂತಿಗೆ ಪ್ರಿಯವಾದ ಸಕಲ ಸಂಪತ್ತುಗಳನ್ನೂ ತುಂಬಿದನು. ಆಕಾಶಮಾರ್ಗದಲ್ಲಿ ಸಂಚರಿಸುತ್ತಿದ್ದ ವಿಮಾನ ಪತಿ-ಪತ್ನಿಯರ ಆಂತರ್ಯ ವಿಹಾರಕ್ಕೆ ಸಕಲಮನೋಹರವಾಗಿತ್ತು. ಕರ್ದಮನಿಗೇ ತನ್ನ ಸೃಷ್ಟಿಕಾರ್ಯದ ಸೊಬಗಿಗೆ ಆಶ್ಚರ್ಯವಾಯಿಗು. ಕರ್ದಮನ ಆದೇಶದಂತೆ ದೇವಹೂತಿ ಬಿಂದುಸರೋವರದಲ್ಲಿ ಮಿಂದು ವಿಮಾನವನ್ನೇರಿದಳು. ಅವಳ ಸಕಲ ಇಷ್ಟಾರ್ಧಗಳೂ ನೆರೆವೇರುವಷ್ಟು ದಿನ ಅವರಿಬ್ಬರೂ ವಿಮಾನದಲ್ಲಿ ವಿಹರಿಸಿದರು. ಕರ್ದಮನು ಅವಳಿಗೆ ಸಕಲ ಲೋಕಗಳು, ಸೃಷ್ಟಿಯ ಸಕಲಸೊಬಗುಗಳನ್ನೂ ಪರಿಚಯಮಾಡಿಕೊಟ್ಟನು. ಅನೇಕವರ್ಷಗಳು ಕ್ಷಣವೆನ್ನುವಂತೆ ಕಳೆದುಹೋದವು. ದೇವಹೂತಿಯ ಬಯಕೆ ಸಿದ್ಧಿಸಿತು. ಅವಳಿಗೆ ಪರಮಸುಂದರಿಯರಾದ ಒಂಭತ್ತು ಹೆಣ್ಣು ಮಕ್ಕಳು ಜನಿಸಿದರು.

ತಾನು ಕೊಟ್ಟ ಮಾತಿನಂತೆ ಕರ್ದಮನು ಸಂತಾನಭಾಗ್ಯವಾದ ನಂತರ ಸನ್ಯಾಸ ಜೀವನ ಸ್ವೀಕರಿಸುತ್ತಾನೆ ಎಂದು ದೇವಹೂತಿಗೆ ಅರಿವಿತ್ತು. ಅವನ ಅಗಲಿಕೆಯನ್ನು ತಾಳಲಾರದಾದಳು. ಸ್ವತಃ ತಾನೇ ವಿಷಯವನ್ನು ಪ್ರಸ್ತಾಪಿಸಿ "ಪತಿಯೇ, ನನಗೆ ಸಂತಾನಭಾಗ್ಯವನ್ನೇನೋ ಕಲ್ಪಿಸಿದರಿ. ಆದರೆ ನಿಮ್ಮ ಪುತ್ರಿಯರಿನ್ನೂ ಚಿಕ್ಕ ಮಕ್ಕಳು. ಅವರಿಗೆ ಅನುರೂಪರಾಡ ವರರನ್ನು ಅನ್ವೇಷಿಸಿ ವಿವಾಹ ಮಾಡುವುದೂ ತಮ್ಮ ಜವಾಬ್ದಾರಿಯಲ್ಲವೇ? ನೀವೀಗಲೇ ಸನ್ಯಾಸಿಗಳಾದರೆ ನನಗೆ ಅತಿಯಾದ ದುಃಖವಾಗುವುದು. ನನಗೆ ಸಕಲಭೋಗವನ್ನೂ ಕಲ್ಪಿಸಿದ್ದೀರಿ. ಆದರೆ ನಾನು ನಿಮ್ಮಿಂದ ವೈರಾಗ್ಯವನ್ನೂ, ಮುಕ್ತಿಮಾರ್ಗವನ್ನೂ ಇನ್ನೂ ಪಡೆದಿಲ್ಲ. ನನಗೆ ಅಂತಹ ಮಾರ್ಗವನ್ನು ಬೋಧಿಸಬಲ್ಲಂತಹ ಒಬ್ಬ ಮಗನನ್ನು ಕರುಣಿಸಿ - ಅದಲ್ಲದೆ ನನಗೆ ಮತ್ತೊಂದರ ಆಸೆಯಿಲ್ಲ" ಎಂದಳು.

ಕರ್ದಮನಿಗೆ ಮಹಾವಿಷ್ಣು ಪ್ರತ್ಯಕ್ಷನಾಗಿದ್ದಾಗ ಕೊಟ್ಟ ವರ ನೆನಪಾಯಿತು. ಸ್ವತಃ ತಾನೇ ಲೋಕೋದ್ಧಾರಕ್ಕಾಗಿ ನನ್ನ ಮಗನಾಗಿ ಜನ್ಮತಾಳುವೆನೆಂದು ಹೇಳಿದ್ದನಲ್ಲವೇ. ಆ ಘಳಿಗೆ ಬಂದುದಾಗಿದೆ. ಕರ್ದಮನು "ದೇವಹೂತಿ, ನಿನ್ನ ಭಾಗ್ಯ ಮಿಗಿಲಾದುದು. ಸ್ವತಃ ಶ್ರೀಹರಿಯೇ ನಿನ್ನ ಉದರದಲ್ಲಿ ಜನಿಸುವನು. ಇಂದಿನಿಂದ ಕಠಿಣವ್ರತಾಧಾರಿಯಾಗಿ ತಪಸ್ಸನ್ನಾಚರಿಸು. ಶ್ರೀಹರಿಯೇ ನಿನಗೆ ಪರಮಾರ್ಧ ಜ್ಞಾನವನ್ನು ಕರುಣಿಸುತ್ತಾನೆ" ಎಂದು ಅನುಗ್ರಹಿಸಿದನು. ಅದರಂತೆ ದೇವಹೂತಿ ದೀರ್ಘ ತಪಸ್ಸಾನಚರಿಸಿದಳು. ಶುಭಘಳಿಗೆಯೊಂದರಲ್ಲಿ ಅವಳಿಗೆ ಪುತ್ರನೊಬ್ಬನ ಜನನವಾಯಿತು. ಸಕಲಲೋಕಗಳಲ್ಲಿ ಶುಭಶಕುನಗಳಾದವು. ದೇವದುಂದಿಭಿಗಳು ಮೊಳಗಿದವು.ಸ್ವತಃ ಚತುರ್ಮುಖ ಬ್ರಹ್ಮನ ಧರೆಗಿಳಿದು ಬಂದು ದೇವಹೂತಿ-ಕರ್ದಮರನ್ನು ಅಭಿನಂದಿಸಿ ಆಶೀರ್ವದಿಸಿದನು. ಮಗುವಿಗೆ ಬ್ರಹ್ಮನೇ 'ಕಪಿಲ'ನೆಂದು ನಾಮಕರಣ ಮಾಡಿದನು.

ಪತ್ನಿಗೆ ಕೊಟ್ಟ ಮಾತಿನಂತೆ ಕರ್ದಮನು ಪುತ್ರಿಯರಕ್ಕೆ ವಿವಾಹಕ್ಕೆ ಮೊದಲಾದನು. ಮರೀಚಿ ಮಹರ್ಷಿ ಕಲಾದೇವಿಯನ್ನೂ, ಅತ್ರಿಮುನಿ ಅನಸೂಯೆಯನ್ನೂ, ಆಂಗಿರಸ ಮಹರ್ಷಿ ಶ್ರದ್ಧಾದೇವಿಯನ್ನೂ, ಪುಲಸ್ತ್ಯನು ಹವಿರ್ಭೂದೇವಿಯನ್ನೂ, ಪುಲಹನು ಗತಿಯನ್ನೂ, ಕ್ರತು ಕ್ರಿಯಾದೇವಿಯನ್ನೂ, ಭೃಗು ಖ್ಯಾತಿಯನ್ನೂ, ವಸಿಷ್ಟನು ಅರುಂಧತಿಯನ್ನೂ, ಅಥರ್ವನು ಶಾಂತಿದೇವಿಯನ್ನೂ ಮದುವೆಯಾದರು. ತದನಂತರ ಕರ್ದಮನು ಪತ್ನಿ, ಪುತ್ರರನ್ನು ಬೇಳ್ಕೊಟ್ಟು ವಿರಕ್ತಪುರುಷನಾಗಿ ಕಠಿಣ ತಪಸ್ಸಾನಚರಿಸಿ ಮೋಕ್ಷಪಡೆದನು.       


0 Comments:

Post a Comment

<< Home