ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Monday, April 09, 2007

ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೨

[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]

ಚರಿತ್ರೆ, ಆಧುನಿಕತೆಗಳ ಸೃಷ್ಟಿಗೆ ಕಾರಣ ಎಂದೆನ್ನಿಸಿಕೊಂಡಿರುವ - ಈ ಹಿನ್ನೆಲೆಯಲ್ಲಿ ನಮ್ಮ ಯಾವತ್ತಿನ ಅವಶ್ಯಕತೆಯಾಗಿರುವ - ಯೂರೋಪನ್ನು ಕುರಿತ ಡಾ. ಅನಂತಮೂರ್ತಿಗಳ ಚಿಂತನೆಯಲ್ಲಿ ರಾವಿನಲ್ಲಿ, ರಾಷ್ಟ್ರೀಯತೆಯ ನೆವದಲ್ಲಿ, ಪ್ರಗತಿಯ ಹುಂಬ ಉತ್ಸಾಹದಲ್ಲಿ, ಮತೀಯತೆಯ ಹುರುಪಿನಲ್ಲಿ. ಈ ನಾಲ್ಕೂ ಬೇರೆ ಬೇರೆ ಇರಲಾರದು ಎನ್ನುವ ಮಾತು ಅತಿ ಮುಖ್ಯ ಗ್ರಹಿಕೆ. ಇದಕ್ಕೆ ಸ್ಫೂರ್ತಿಯಾಗಿ ಟ್ಯಾಗೋರ್‌ ಮತ್ತು ಗಾಂಧಿಯಿದ್ದಾರೆ ಎಂದುಕೊಂಡಿದ್ದೇನೆ. ಈ ಕುರಿತ ನನ್ನ ಅನುಮಾನಗಳು - ಕೈಗಾರಿಕಾ ಕ್ರಾಂತಿ, ಆಧುನಿಕತೆ, ಕಮ್ಯುನಿಸಂ, ಬಂಡವಾಳಶಾಹಿ, ಮತೀಯತೆ, ಫ್ಯಾಸಿಸಂ-ಗಳೆಲ್ಲವನ್ನೂ ಸರಣಿಯಾಗಿಯೂ ಮತ್ತು ಒಂದೇ ಪ್ರಕ್ರಿಯೆಯ ಫಲವೆನ್ನುವಂತೆಯೂ ಕಂಡಿರುವ ಯೂರೋಪು, ಕಡೆಗೆ ಎರಡು ಬಗೆಯ ಅಮಾನುಷತೆಗಳಲ್ಲಿ ಒಂದನ್ನಾಯುವಂತಹ ಅನಿವಾರ್ಯತೆಗೆ ಏಕೆ ತಲುಪಿತು? ಯಂತ್ರಗಳ ಸಾಧ್ಯತೆಯನ್ನು ಎಡವಿಬಿಟ್ಟ ಯೂರೋಪು, ಆ ಕಾರಣಕ್ಕೇ ಬಂಡವಾಳಶಾಹಿಯ ಹಿಡಿತದಲ್ಲಿ ಅನಾಮತ್ತಾಗಿ ಕೈಗಾರಿಕೀಕರಣಕ್ಕೊಳಗಾಗಿ, ನಂತರ ಅದನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆಯಿಂದ ಬೃಹತ್‌ ಆರ್ಥಿಕ ವ್ಯವಸ್ಥೆಗಳನ್ನು ನಿರ್ಮಿಸಿಕೊಳ್ಳುತ್ತಾ, ಆದ್ದರಿಂದಲೇ ರಾಷ್ಟ್ರೀಯತೆಯನ್ನು ಆವಾಹಿಸಿಕೊಂಡು, ರಾಷ್ಟ್ರಿಯತೆ ಸಾಧಿಸಲು ಒಂದೋ ಪ್ರಗತಿ ಇಲ್ಲವೋ ಮತೀಯತೆಯಯನ್ನು ನವಮೌಲ್ಯಗಳನ್ನಾಗಿ ರೂಪಿಸಲು ತೊಡಗಿತೇ? ಇದು ಅಮಾನುಷತೆಯ ಹಾದಿಯಲ್ಲಿ ಸಾಗುವಂತಾಗಿದೆಯೆಂದರೆ ಮೌಲ್ಯವೊಂದು ಸಮಾಜದಲ್ಲಿ ರೂಪುಗೊಳ್ಳುವ ಬಗೆಯ ಕುರಿತು ಇದು ವಿಶೇಷವಾದ್ದೇನಾದರೂ ಹೇಳುತ್ತಿದೆಯೇ? ಮತ್ತೆ ಮೊದಲಿಗೆ ಬರುವುದಾದರೆ, ಯಂತ್ರಗಳ ಆವಿಷ್ಕಾರದ ನಂತರ ಆಯ್ಕೆಗಳು ಸೀಮಿತವಾದ್ದರಿಂದಲೇ ಹೀಗಾಯಿತೇ?

ಯಂತ್ರಾಧಾರಿತ ಆರ್ಥಿಕತೆಗೆ ಬೇಕಾದ ಬೃಹತ್‌ ವ್ಯವಸ್ಥೆ ಫ್ಯಾಸಿಸಂನಂತಹ ವಿಕೃತಿಗಳನ್ನು ಸೃಷ್ಟಿಸಿ ಬೆಳೆಸುತ್ತಿದ್ದ ಕಾಲದಲ್ಲಿ ಅದನ್ನೆದುರಿಸುವ ಏಕಮಾತ್ರ ಆಯ್ಕೆಯಾಗಿ, ಅನಿವಾರ್ಯವಾಗಿ ರೂಪುಗೊಂಡಿರಬಹುದಾದ ಕಮ್ಯುನಿಸಂ, ಕಡೆಗೆ ಸ್ಟಾಲಿನ್‌ರಂಥವರನ್ನು ರೂಪಿಸಿತು. ಅಂದರೆ ವಿರೋಧ ಮಾತ್ರವೇ ಮುಖ್ಯವಾದ ಹಾದಿಯಲ್ಲಿ ವಿರೋಧಿಯ ಎಲ್ಲ ಗುಣಗಳನ್ನೂ ತನ್ನಲ್ಲೇ ಆವಾಹಿಸಿಕೊಂಡಿತೇ? ಹಿಟ್ಲರ್‌ ಪ್ರಕ್ರಿಯೆಯನ್ನೂ ಹೀಗೇ ಗ್ರಹಿಸಬಹುದೇ? ಇಷರ್ವುಡ್‌, ಸ್ಪೆಂಡರ್‌, ಆಡೆನ್‌ ಮಹನೀಯರುಗಳು ಕಮ್ಯುನಿಸಂ ಹಾದಿಯಲ್ಲೇ ಬೆಳೆದು ಮನುಷ್ಯನ ಆಧ್ಯಾತ್ಮಿಕ ಹಸಿವನ್ನು ಇಂಗಿಸಲಾರದ್ದರಿಂದ ಇವರುಗಳು ಬೆಳೆಯುವುದಕ್ಕೆ ಬೇರೆಯೇ ಹಾದಿ ಹಿಡಿದಿರುವಂತಿದ್ದರೂ ಕಮ್ಯುನಿಸಮನ್ನು ಅರಗಿಸಿಕೊಂಡ ನಂತರ ಮುನ್ನಡೆದರು ಎನ್ನುವುದು ಮುಖ್ಯ. ಕಮ್ಯುನಿಸಮನ್ನು ಮೀರಬೇಕಾದ ನೆಲೆಗಳ ಬಗ್ಗೆಯೂ ಇದು ದಾರಿತೋರಿಸುವಂತಿದೆ. ಆದರೆ ಒಳಗಿದ್ದೇ ಆ ಆಧ್ಯಾತ್ಮಿಕ ಹಸಿವಿನ ದಾರಿಯನ್ನು ತುಳಿಯಲಾಗದಾಯಿತೇ? ಜಾರ್ಜ್‌ ಥಾಂಸನ್‌ರಂಥವರೂ ಮಾವೋ, ಸ್ಟಾಲಿನ್‌ರನ್ನು ಮೆಚ್ಚುತ್ತಲೇ ಹೋದ ಅಂಶ ಕಮ್ಯುನಿಸ್ಟ್‌ ಸಿದ್ಧಾಂತದಲ್ಲೇ ಕಲ್ಟಿಸಂ ಅನ್ನು ಗುರುತಿಸಲಾಗದ ಅಂಧತೆ ತಂದೊಡ್ಡುವ ಅವಕಾಶವಿರುವುದನ್ನು ಸೂಚಿಸುತ್ತಿದೆಯೇ? ಈ ಅವಕಾಶವನ್ನು ಸ್ಪಷ್ಟವಾಗಿ ಗುರುತಿಸುವುದಕ್ಕೆ ಸಾಧ್ಯವಿದೆಯೇ? (ವ್ಯಕ್ತಿಯಾಗಿ ನೋಡಿದಾಗ ದೊಡ್ಡದಾಗಿ ಕಾಣುವ ನ್ಯೂನತೆ ಸಿದ್ಧಾಂತದಲ್ಲಿ ನೋಡಿದಾಗ ಚಿಕ್ಕದಾಗಿ ಕಂಡು, ಅದಕ್ಕೆ ನಾವು ಕುರುಡರಾಗುತ್ತೇವೆಯೇ? ಟಿಪ್ಪು ವಿಷಯದಲ್ಲಿ ನಮ್ಮ ಎಡಪಂಥೀಯರಿಗಾಗಿರುವುದು ಇದೇನೇ? ಕೃಷ್ಣದೇವರಾಯನಲ್ಲಿ ನಮ್ಮ ಬಲಪಂಥೀಯರಿಗಾಗಿರುವುದು ಇದೇನೇ? ಕಷ್ಟಕಾಲದಲ್ಲಿ ಆಪದ್ಬಾಂಧವನಾದವನ ವೈಯಕ್ತಿಕ ತೀಟೆಗಳು ನಮಗೆ ಕಾಣುವುದಿಲ್ಲವಲ್ಲವೇ?) ಮಿಕ್ಕ ಕಮ್ಯುನಿಸ್ಟರು ಒಂದೋ ಆರ್ಥಿಕತೆ ಮತ್ತು ಸಾಮಾಜಿಕತೆಗೆ ಮಿತಿಗೊಂಡ ಸಮಾನತೆಯ ರೊಮ್ಯಾಂಟಿಕ್‌ ಆಕರ್ಷಣೆ ಮಾತ್ರ ಮೀರಲಾರದವರು. ಅಥವಾ ಕಮ್ಯುನಿಸಂನ ಒಳಗಡೆಯೇ ಇರುವ ಬಿರುಕಿನಲ್ಲಿ ತಮ್ಮ ವೈಯಕ್ತಿಕ ತೀಟೆಗಳನ್ನು ತೀರಿಸಿಕೊಳ್ಳುವ ಅವಕಾಶ ಕಂಡುಕೊಂಡವರು. ಇದಕ್ಕೂ ಮಿಗಿಲಾದ ಕಮ್ಯುನಿಸಂ ಸಿದ್ಧಾ­ಂತವನ್ನಿನ್ನೂ ಅಪ್ಪಿರುವ ಕಮ್ಯುನಿಸ್ಟರಿದ್ದಾರೆಯೇ? ಅದನ್ನು ಗ್ರಹಿಸುವ ಬಗೆ ಹೇಗೆ? ಸಮಾನತೆಯ ಹಸಿವಿನಲ್ಲಿ ಬೃಹತ್‌ ವ್ಯವಸ್ಥೆಗಳತ್ತ ಗಮನ ಹರಿಸಿರುವ ಕಮ್ಯುನಿಸಂ ಒಳಗಿನಿಂದಲೇ ನಮ್ಮನ್ನು ಗುರುತಿಸಿಕೊಳ್ಳುವ ಕ್ರಮಗಳನ್ನು ಇಲ್ಲವಾಗಿಸಿದೆಯೇ? ಕಡೆಗೆ ಸಮಾನತೆಯನ್ನೂ ಸಾಧಿಸಲಾರದೇ ಕೇವಲ ರಾಷ್ಟ್ರೀಯತೆಯನ್ನಷ್ಟೇ ಸಾಧಿಸಿ, ಬಂಡವಾಳಶಾಹಿಯ ಉದ್ದೇಶವನ್ನೇ ಈಡೇರಿಸಿತೇ?

ಈ ಎಲ್ಲವನ್ನೂ ಗ್ರಹಿಸಲು ಡಾ ಅನಂತಮೂರ್ತಿಗಳು ಅಪ್ವರ್ಡ್‌ರನ್ನು ಕೇಂದ್ರದಲ್ಲಿಟ್ಟು ನಡೆಸಿರುವ ಪ್ರಯತ್ನ ಅರ್ಥಪೂರ್ಣವಾಗಿದೆ. ಅಪ್ವರ್ಡ್‌ ಕಮ್ಯುನಿಸಂ ಒಳಗಡೆಯೇ ಇರಬಹುದಾದ ಅತ್ಯುತ್ತಮ ಸಾಧ್ಯತೆಯಂತಿದ್ದಾರೆ ಎಂದರೆ ನಮಗೆ ಕಮ್ಯುನಿಸಂನೊಳಗಿನ ನಿಜದ ಸಾಧ್ಯ-ಅಸಾಧ್ಯಗಳು ಅರ್ಥವಾಗುತ್ತವೆ. ಹೀಗಿದ್ದರೂ ಕಮ್ಯುನಿಸಂ ಮೇಲಣ ಅಪ್ವರ್ಡ್‌ರ ಗಟ್ಟಿ ನಂಬಿಕೆಗೆ ಕಾರಣಗಳಾದರೂ ಏನು? ಸಮಾನತೆಯ ಹಸಿವೇ? ಬೇರಿನ್ನಾವ ಸಿದ್ದಾಂತವೂ ಸಮಾನತೆಯನ್ನು ಈ ಬಗೆಯಲ್ಲಿ ಚರ್ಚಿಸಲಾರದ್ದರಿಂದಲೇ? ಈ ಮಧ್ಯೆ ಅಪ್ವರ್ಡರ ಸಾಧ್ಯತೆ ಇಷರ್ವುಡ್‌ ಗೆ ಗೊತ್ತಿತ್ತು ಎನ್ನುವುದು ಆಧ್ಯಾತ್ಮಿಕ ಹಸಿವಿಗೇ ಸಾಧ್ಯವಾಗುವ ಒಳನೋಟವೆನ್ನಿಸುತ್ತದೆ. (ಅಪ್ವರ್ಡ್‌ರ ಹೆಚ್ಚು ಕಮ್ಯುನಿಸ್ಟರಾದ ಮಿತ್ರರಿಗೆ ಆ ಸಾಧ್ಯತೆ ಕಂಡಿತ್ತೇ?) ಆಧ್ಯಾತ್ಮಿಕ ಹಸಿವು ಮಿಗಿಲಾದ ಯೇಟ್ಸ್‌, ಎಲಿಯಟ್‌, ಪೌಂಡ್‌ ಮುಂತಾದವರು ಹಿಟ್ಲರ್‌, ಮುಸ್ಸೋಲಿನಿಯರ ಮೇಲೆ ಭರವಸೆಯಿಟ್ಟದ್ದು ಸಮಾನತೆಯ ಹಸಿವಿನ ಅಭಾವವೇ? ಹಿಗ್ಗಿಸಿ ಗ್ರಹಿಸಲು ಪ್ರಯತ್ನಿಸುವುದಾದರೆ - ಆಧ್ಯಾತ್ಮಿಕ ಹಸಿವು ಸಮಾನತೆಯ ಹಸಿವಿನ ಅಭಾವದಿಂದ ಕೇವಲ ಬಲಪಂಥೀಯತೆಯಲ್ಲಿ ಮತ್ತು ಬಲಪಂಥೀಯತೆಯ ವಿರೋಧ ಆಧ್ಯಾತ್ಮಿಕ ಹಸಿವಿನ ಅಭಾವದಿಂದ ಕೇವಲ ಎಡಪಂಥೀಯವಾಗಿ ಭ್ರಮನಿರಸನಗಳಲ್ಲಿ ಪರ್ಯವಸಾನವಾದವೇ?

'ಉತ್ತಮ ಪ್ರಭುತ್ವ ಲೊಳಲೊಟ್ಟೆ'-ಯೆನ್ನುವುದು ಆಧ್ಯಾತ್ಮಿಕ ಹಸಿವಿನ ವ್ಯಕ್ತಿಗಳಿಗೆ ದಾರ್ಶನಿಕ ಒಳನೋಟ. ಮಾನವ ವ್ಯವಸ್ಥೆಗಳನ್ನು ನಿರ್ಮಿಸುವ ಆಕಾಂಕ್ಷೆಯಿರುವ ಕಮ್ಯುನಿಸಂ ಮತ್ತು ಬಂಡವಾಳಶಾಹಿಗಳೆರಡೂ ಪ್ರಭುತ್ವದಲ್ಲಿ ನಂಬಿಕೆಯಿಟ್ಟಂಥವು. ಅಂದರೆ ವ್ಯವಸ್ಥೆಯೊಂದನ್ನು ನಂಬುವ ಯಾರಿಗಾದರೂ ಈ ಲೊಳಲೊಟ್ಟೆ ಕಾಣ್ಕೆ ಸಾಧ್ಯವಿಲ್ಲವೇ? ಅಥವಾ ಬ್ಯಾಂಕ್‌ ಅಕೌಂಟ್‌ ಮಾತ್ರ ಬೇಕಾದ್ದಕ್ಕೆ ನಾವು ಬೃಹತ್‌ ವ್ಯವಸ್ಥೆಗಳನ್ನು ನಿರ್ಮಿಸಹೋಗಿ ಮೂಲೋದ್ದೇಶವನ್ನೇ ಮರೆಯುವುದೇ? 19 ಮತ್ತು 20ನೇ ಶತಮಾನಗಳ ಪ್ರಕ್ರಿಯೆಗಳು ಮನುಷ್ಯನನ್ನು ತನ್ನ ನೆಲೆಯಿಂದ ಬೌದ್ಧಿ­ಕವಾಗಿ, ಮಾನಸಿಕವಾಗಿ, ಭೌತಿವಾಗಿಯೂ ಕೂಡ ಉಚ್ಚಾಟಿಸಿಬಿಟ್ಟವು. ಈ ಉಚ್ಚಾಟನೆಗೆ ಪ್ರತಿಕ್ರಿಯೆಯಾಗಿ ಚಿಂತಕರು ತಮ್ಮದೇ ಆದ ಜಿಗಿತಗಳ ಮೂಲಕ ಹಲವು ವಿಕಲ್ಪಗಳನ್ನು ಕಾಣುತ್ತಾ ಮತ್ತೆಲ್ಲಿಯೋ ನೆಲೆಗಳನ್ನು ಸ್ಥಾಪಿಸಿಕೊಳ್ಳಬೇಕಾಯಿತು. ಯಶಸ್ಸು, ಸೋಲು ಎನ್ನುವ ಪರಿಕಲ್ಪನೆಗಳಿಂದ ಇದನ್ನು ಗ್ರಹಿಸಲಾಗುವುದಿಲ್ಲ. ಆದರೆ, ಅಪ್ವರ್ಡ್‌ ಈ ಜಿಗಿತದಲ್ಲಿ ತಮ್ಮತನಕ್ಕೆ ಎರವಾದರು. ಇದು ಪ್ರಕ್ರಿಯೆಗಳ ತೀವ್ರತೆಗೆ ನಿದರ್ಶನ.

ಅನೇಕ ಆಯಾಮಗಳಿರುವ ಈ ಚರ್ಚೆಯಲ್ಲಿ ಸಮಯೋಚಿತವಾಗಿದ್ದ - ಭಾರತ ಈ ಎಲ್ಲ ಆಧುನಿಕ ಪ್ರಕ್ರಿಯೆಗಳನ್ನು ತನ್ನ ಪ್ರಥಮ ಘಟ್ಟದಲ್ಲಿ ಬಹುಮುಖೀಯತೆಯಿಂದ ನಿರ್ವಹಿಸಿತ್ತೇ, ಇಲ್ಲವೇ? ಗಾಂಧಿ, ಟ್ಯಾಗೋರ್‌, ನೆಹರೂ, ಲೋಹಿಯಾ ಈ ಐರೋಪ್ಯ ಅಪಾಯಗಳಿಂದ ನಮ್ಮನ್ನು ಮುಕ್ತರನ್ನಾಗಿಸುವ ಪ್ರಕ್ರಿಯೆಗೆ ಇತ್ತ ಕಾಣಿಕೆಯೇನು? - ಎನ್ನುವ ಚಿಂತನೆ ಲೋಹಿಯಾರ ಚಿಕ್ಕ ಪ್ರಸ್ತಾಪದಲ್ಲೇ ಮುಗಿದುಹೋಗಿರುವುದು ನಿರಾಸೆಗೊಳಿಸುತ್ತದೆ. ಮತ್ತೊಂದು ದಿಕ್ಕಿನಲ್ಲಿ, ಯಾವ ವೈವಿಧ್ಯತೆಯಲ್ಲಿ ಈ ಚಿಂತನೆಗಳು ಎಡಪಂಥೀಯತೆಯನ್ನು ಹಿಡಿದಿಡಲು ಪ್ರಯತ್ನಿಸುತ್ತದೆಯೋ, ಅದೇ ಸಾಂದ್ರದಲ್ಲಿ ಬಂಡವಾಳಶಾಹಿಯನ್ನು ಗ್ರಹಿಸುವುದಕ್ಕೆ ನಮಗಿನ್ನೂ ಸಾಧ್ಯವಿಲ್ಲವಾಗಿದೆಯಲ್ಲ! ಅದನ್ನು ಏಕರೂಪಿಯಾಗಿಯೇ ಇಂದಿಗೂ ಗ್ರಹಿಸುತ್ತೇವೆ. ಬಂಡವಾಳಶಾಹಿಯ ಸಾಧ್ಯತೆಯನ್ನು ಸಮಾನತೆ ಸಾಧಿಸುವ ಕ್ರಮವಾಗಿ, ಸಮೃದ್ಧಿ­ಯನ್ನೂ ಸಾಮರಸ್ಯವನ್ನೂ ಸಾಧಿಸುವ ಸಾಧನವಾಗಿ (ಮುಗ್ಧವಾಗಿ) ನಂಬಿರುವ, ಮತ್ತನೇಕ ಬಗೆಗಳಲ್ಲಿ ಆಳವಾಗಿ ಆಲೋಚಿಸಬಲ್ಲ ಜನರೂ ಇದ್ದಾರೆ. ತಮ್ಮತನಕ್ಕೇ ಎರವಾದವರೂ ಇದ್ದಾರೆ. ಅಂಥವರ ಮೂಲಕ ಬಂಡವಾಳಶಾಹಿಯನ್ನು ಗ್ರಹಿಸಲು ನಮಗಿನ್ನೂ ಸಾಧ್ಯವಾಗಿಲ್ಲ!

ಇವೆಲ್ಲವನ್ನೂ ಹಿನ್ನೆಲೆಯಲ್ಲಿಟ್ಟೇ ನಾವು ನೋಯಿಡಾ ನರಹತ್ಯೆಯಂತಹ ಬರ್ಬರ ಕೃತ್ಯಗಳಿಗೂ , ಕನ್ನಡದಂತಹ ಭಾಷೆಯ ಮುಂದಿರುವ ಒಟ್ಟು ದೌರ್ಭಾಗ್ಯಕರ ಆತಂಕಗಳಿಗೂ, ಭಾಷಾಂತರ ಪತ್ರಿಕೋದ್ಯಮದಂತಹ ಸೂಕ್ಷ್ಮ ಕ್ರೌರ್ಯಗಳಿಗೂ ಪ್ರತಿಕ್ರಿಯಿಸಬೇಕಿದೆ.

ಮುಂದುವರೆಯುವುದು...

0 Comments:

Post a Comment

<< Home