ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Saturday, June 17, 2006

ಗಿರೀಶ್ ಕಾಸರವಳ್ಳಿಯವರ 'ಮನೆ': ನೆಲೆಯ ಹುಡುಕಾಟ: ಭಾಗ ೨



ಹಿಂದಿನ ಭಾಗದ ಲಿಂಕ್: http://jeevishivu.blogspot.com/2006/06/blog-post.html

ಪೋಲೀಸರು ಬರುತ್ತಾರೆ. ಶೆಡ್ಡಿನಲ್ಲಿರುವವರನ್ನು ಹೆದರಿಸಿ ಹೊರಕರೆಯುತ್ತಾರೆ. ಮೊದಲ ಬಾರಿಗೆ ಅವರ ಮುಖ ಕ್ಯಾಮರಾದಲ್ಲಿ ಕಾಣುತ್ತದೆ. ಈವರೆಗೆ ಮುಸುಕುಧಾರಿಗಳಾದ ವಿಲನ್‍ಗಳಂತಿದ್ದ ಅವರೆಲ್ಲಾ ಕೂಲಿಯವರು, ಬಡ ಕಾರ್ಮಿಕರು. ರಾಜಶೇಖರ ಮತ್ತು ಗೀತ ಅವರನ್ನೆಲ್ಲಾ ರಾಕ್ಷಸಂತೆ ಕಲ್ಪಿಸಿಕೊಂಡಿರುತ್ತಾರೆ. ಆದರೆ ಅವರು ನಿಸ್ಸಹಾಯಕರು. ಕೆಲ ಗಂಡಸರನ್ನು ಪೋಲೀಸರು ಸ್ಟೇಷನ್ನಿಗೆ ಕರೆದುಕೊಂಡು ಹೋಗುತ್ತಾರ್‍ಎ. ಹೊಸದೊಂದು ಮುಖದ ದರ್ಶನವಾಗುತ್ತದೆ ಇಬ್ಬರಿಗೂ. ಗೀತಳಿಗೆ ಸಹ್ಯವೆನ್ನಿಸುವುದಿಲ್ಲ. ಅಪರಾಧೀ ಭಾವ ಕಾಡುತ್ತದೆ. ಒಬ್ಬನ ಹೆಂಡತಿ ಗೀತ-ರಾಜಶೇಖರನಿಗೆ ಶಾಪ ಹಾಕುತ್ತಾಳೆ. ವಠಾರದ ಜನೂ ಕಾರ್ಮಿಕರಿಗೆ ಅನುಕಂಪ ತೋರಿಸುತ್ತಾರ್‍ಎ. ಶೆಡ್-ನ ಕೆಲಸ ಅಂದಿಗೆ ನಿಲ್ಲುತ್ತದೆ. ಸಂಜೆಯ ಮೇಲೆ ಆ ಶೆಡ್-ನಲ್ಲಿ ಮಗುವೊಂದು ಕಾಣುತ್ತದೆ. ಜೈಲಿಗೆ ಹೋದವನ ಮಗುವಿರಬೇಕು. ಗೀತಳ ಮುಖದಲ್ಲಿ ವಿಷಾದ ಭರಿತ ಆಶ್ಚರ್ಯ ಕಾಣುತ್ತದೆ. ಆ ಷೆಡ್ಡನ್ನು ಗ್ರಹಿಸುವಲ್ಲಿ ಅಲ್ಲಿ ಮಗುವೊಂದಿರಬಹುದಾದ, ಜೀವನ ನಡೆದಿರಬಹುದಾದ ಸಾಧ್ಯತೆಯೇ ಅವರಿಗೆ ಹೊಳೆದಿರುವುದಿಲ್ಲ.

ಆ ರಾತ್ರಿ ರಾಜಶೇಖರ ನಿಶ್ಯಬ್ದತೆಯನ್ನು ತೀವ್ರವಾಗಿ ಅನುಭವಿಸಲು ಪ್ರಯತ್ನಿಸುತ್ತಾನೆ. ಆದರೆ ಸ್ವಲ್ಪ ಹೊತ್ತಿನ ನಂತರ, ಬೋರಾಗುತ್ತಿದೆ ಶಬ್ದ ಬೇಕೆನ್ನುತ್ತಾನೆ. ಹಳ್ಳಿಯಲ್ಲೂ ಮನೆಯವರ ಮೂಗು ತೂರಿಸುವಿಕೆ, ಸಿಟಿಯಲ್ಲಿ ಶೆಡ್-ನ ತೊಂದರೆ ಇವುಗಳಿಂದ ನಿಶ್ಯಬ್ದತೆ, ಮೌನವನ್ನೇ ಕಾಣದ ರಾಜಶೇಖರ ಮೊದಲ ಬಾರಿಗೆ ಅದು ಸಿಕ್ಕಾಗ ಹೆಚ್ಚು ಹೊತ್ತು ಅನುಭವಿಸುವ ಪಕ್ವತೆ ಗಳಿಸಿಕೊಂಡಿಲ್ಲ, ಮೌನವನ್ನು ಸಾಧಿಸಲಾಗುವುದಿಲ್ಲ. ಆದರೆ ಗೀತಳಿಗೆ ಬೇರೆಯ ಕಾರಣಕ್ಕೆ ಈ ನಿಶ್ಯಬ್ದ ಅಸಹನೀಯವಾಗಿದೆ. ಅದನ್ನು ಸರಿಯಾದ ಮಾರ್ಗದಿಂದ ಗಳಿಸಿಕೊಂಡಿಲ್ಲ ಎಂದು. ಬೋರ್ ನಿವಾರಣೆಗೆ ಕಾಮಕ್ಕೆ ಯತ್ನಿಸುವ ರಾಜಶೇಖರನಿಗೆ, ಅದಕ್ಕೆ ಸಿದ್ಧಳಿಲ್ಲದ ಗೀತಳಿಂದ ಮೌನ ನಿರಾಕರಣೆ. ರಾಜಶೇಖರನಿಗೆ ಅದೊಂದು ಎಲ್ಲೂ ಆಗಬಹುದಾದ ಕ್ರಿಯೆ. ಆದರೆ ಗೀತಳಿಗೆ ಅದು ತಾನು ದಕ್ಕಿಸಿಕೊಂಡ ಜಾಗದಲ್ಲಿ ಮಾತ್ರ ಸಾಧ್ಯಾವಾಗಬಹುದಾದ್ದು. ಇವೆಲ್ಲಾ ಸೇರಿ ಗೀತಳಿಗೆ ಒಂಟಿತನ ಕಾಡಿದರೆ, ರಾಜಶೇಖರನಿಗೆ ಶಬ್ದ ಬೇಕು ಎನ್ನಿಸುವ ಹಾಗಾಗುತ್ತದೆ. ಬೋರ್ ನೀಗಿಸಲು ರಾಜಶೇಖರ ಕೆಟ್ಟ ಜೋಕುಗಳ ಮೊರೆ ಹೋಗುತ್ತಾನೆ, ಆಗುವುದಿಲ್ಲ. ಜಾಗ ಸಾಂಸ್ಕೃತಿಕವಾಗಿ ತಮ್ಮದಾಗಿಲ್ಲ, ಇದನ್ನು ನೈತಿಕ ಶ್ರಮದಿಂದ ಗಳಿಸಿಲ್ಲ. ಇಲ್ಲಿ ಯಾವುದೂ ಸಾಧ್ಯವಾಗುವುದಿಲ್ಲ.

ಕೆಲ ದಿನಗಳ ನಂತರ ಮತ್ತೆ ಶೆಡ್ಡಿನಲ್ಲಿ ಸ್ವಲ್ಪವೇ ಶಬ್ದ ಕೇಳುತ್ತದೆ. ರಾಜಶೇಖರ ಶೆಡ್ಡಿನೊಳಗೆ ಹೋಗಿ ನೋಡುತ್ತಾನೆ. ಶೆಡ್-ನ ಬಾಗಿಲು ಹಾಕಿಕೊಂಡು ರಾತ್ರಿ ಕೆಲಸ ಮಾಡುತ್ತಿರುತ್ತಾರೆ. ಕೆಲಸಗಾರ್‍ಅರೆಲ್ಲಾ ರಾಕ್ಷಸರಂತೆ ಕಾಣುತ್ತಾರ್‍ಎ ಅವನಿಗೆ. ಹೆದರಿ ವಾಪಸ್ಸು ಬಂದವನೆ ಮಾರನೇಯ ದಿವಸ ಹೆಂಡತಿಗೆ ಇನ್ಸ್‍ಪೆಕ್ಟರನ್ನು ಕಂಡು ವಿಷಯ ತಿಳಿಸುವಂತೆ ಹೇಳುತ್ತಾನೆ, ಗೀತಳಿಗೆ ಇಷ್ಟವಿಲ್ಲದಿದ್ದರೂ. ರಾಜಶೇಖರನಿಗೆ ಗೊತ್ತು ಜೊಲ್ಲುಸುರಿಸುವ ಇನ್ಸ್‍ಪೆಕ್ಟರ್ ಗೀತಳ ಮಾತನ್ನು, ಚಿಕ್ಕಮ್ಮನ ಮಾತನ್ನು ಕೇಳುತ್ತಾನೆ ಎಂದು. ರಾಜಶೇಖರ ಚಿಕ್ಕಮ್ಮ, ಇನ್ಸ್‍ಪೆಕ್ಟರ್-ರ ಸಹಾಯ ಕೇಳಬಾರದ ಸಂವೇದನೆಗಳನ್ನು ಕಳೆದಿದ್ದಾನೆ.

ನಿರೀಕ್ಷಿಸಿದ್ದಂತೆ ಇನ್ಸ್‍ಪೆಕ್ಟರ್ ಅವರನ್ನು ಗಂಟು ಮೂಟೆ ಕಟ್ಟುವಂತೆ ಮಾಡುತ್ತಾನೆ. ವಠಾರದವರೆಲ್ಲಾ ಗಂಡ ಹೆಂಡಿರನ್ನು ಬಯ್ಯುತ್ತಾರೆ. ಅತ್ತೂ ಕರೆದು ರಂಪ ಮಾಡಿ ಕಾರ್ಮಿಕರು ಹೊರಹೋಗುತ್ತಾರೆ. ಗೀತಳಿಗೆ 'ನಾವು ಪಡಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚೇನೋ' ಅನ್ನಿಸುತ್ತದೆ. ವಠಾರದವರೆಲ್ಲಾ ವಿಷಯ ಮರೆತರೂ ಅವಳಿಗೆ ಸಾಧ್ಯವಾಗಲ್ಲ. ಪಾಟಿಯ ಮನೆಯಲ್ಲಾಗುವ ಒಂದು ಶುಭ ಸಮಾಚಾರವನ್ನು ಅನುಭವಿಸುವುದಕ್ಕೂ ಸಾಧ್ಯವಾಗುವುದಿಲ್ಲ.

ಇದಕ್ಕೆಲ್ಲಾ ಕಳಶವಿಟ್ಟಂತೆ ಇನ್ಸ್ಪೆಕ್ಟರ್ ಅದೇ ಜಾಗವನ್ನು ತನ್ನ ಅಳಿಯನಿಗೆ, ಒಂದು 'ಕಂಪ್ಯೂಟರ್ ಗೇಮ್ ಪಾರ್ಲರ್' ನಡೆಸುವುದಕ್ಕಾಗಿ ಕೊಡಿಸಿರುತ್ತಾನೆ. ಇದನ್ನರಿತ ಗಂಡ-ಹೆಂಡಿರು ಶಾಕ್ ಆಗುತ್ತಾರ್‍ಎ. ಮನೆಯ ಮಾಲೀಕ ಬೀಗುತ್ತಾನೆ. ಉದ್ಘಾಟನಾ ಸಮಾರಂಭದಲ್ಲಿ ಕಾಣುವ ಇಂಗ್ಲೀಷ್, ನ್ಯೂಯಾರ್ಕ್, ಸ್ಟೇಚೂ ಆಫ಼್ ಲಿಬರ್ಟಿ -ಯ ಪ್ರತಿಮೆಗಳು ಬಲಿಷ್ಟವಾದ, ಪರಕೀಯ ತೊಂದರೆಗಳು ದೇಶೀಯವಾದ ತೊಂದರೆಗಳ ಜಾಗದಲ್ಲಿ ಬಂದು ಕೂರುವುದನ್ನು ತೋರಿಸುತ್ತದೆ. ರಾಜಶೇಖರನ ಕ್ರಿಯೆಯ ನಿಷ್ಪ್ರಯೋಜಕತನವನ್ನು ಪ್ರತಿನಿಧಿಸುತ್ತದೆ. ತಮಾಷೆಯೆಂದರೆ, ರಾಜಶೇಖರನಿಗೆ ಪಾರ್ಲರ್ ಇಷ್ಟವಾಗದಿದ್ದರೂ ಗೀತಳಿಗೆ ಇಷ್ಟವಾಗುತ್ತದೆ. ಒಂದೆರಡು ಬಾರಿ ರಾಜಶೇಖರ ಮನೆಗೆ ಫೋನ್ ಮಾಡಿದಾಗ ಗೀತ ಇರುವುದಿಲ್ಲ, ಚಿಕ್ಕಮ್ಮನ ಜೊತೆ ಹೋಗಿರುತ್ತಾಳೆ. ರಾಜಶೇಖರನಿಗೆ ಸಹ್ಯವಾಗುವುದಿಲ್ಲ. ಗಂಡ ಹೆಂಡಿರ ನಡುವೆ ವಿರಸ ತರುತ್ತದೆ. ಶೆಡ್ ಇದ್ದಾಗ ಕೇವಲ ಕಿರಿ ಕಿರಿಯಿತ್ತು ಆದರೆ ಈಗ ವಿರಸ ಮೂಡಿರುತ್ತದೆ.

ಹೀಗಿರುವಾಗ ಒಮ್ಮೆ ಚಿಕ್ಕಮ್ಮ ಮತ್ತು ಇನ್ಸ್‍ಪೆಕ್ಟರ್ ಬರುತ್ತಾರೆ, ಯಾವುದೋ ಒಂದು ಹುಟ್ಟು ಹಬ್ಬದ ಸಮಾರಂಭಕ್ಕೆ ಕರೆದೊಯ್ಯಲು. ರಾಜಶೇಖರನಿಗೆ ಇಷ್ಟವಾಗುವುದಿಲ್ಲ. ಚಿಕ್ಕಮ್ಮನಿಗೆ ಗಂಡ ಹೆಂಡಿರ ಮಧ್ಯೆ ಮೂಡಿರುವ ವಿರಸ ಅನುಭವಕ್ಕೆ ಬರುತ್ತದೆ. ಗೀತಳನ್ನು ಕಳಿಸಿಕೊಡು ಎಂದಾಗ ಅವಳಿಗೆ ಇಷ್ಟವಿದ್ದರೆ ಹೋಗಲಿ ಎನ್ನುತ್ತಾನೆ. ಗೀತ ಬರಲು ಒಪ್ಪುವುದಿಲ್ಲ. ಸೋತಂತಾಗುವ ಚಿಕ್ಕಮ್ಮ ಮತ್ತೆ ತನ್ನ ಕಥೆ, ತನ್ನ ಅದೃಶ್ಟವನ್ನು ಹಳಿಯುತ್ತಾಳೆ. ಅಂತರಪಿಶಾಚಿಯಾದಂತೆ ಅನ್ನಿಸುತ್ತದೆ ಎನ್ನುತ್ತಾಳೆ. ಕರುಣೆಯಿಂದ ಗೀತ ಅವಳ ಜೊತೆ ಹೋಗಲು ಒಪ್ಪುತ್ತಾಳೆ. ತೀವ್ರವಾದ ಈ ದ್ರ್‍ಇಶ್ಯದಲ್ಲಿ ಚಿಕ್ಕಮ್ಮನ ಮಾತುಗಳಿಂದ, ಇನ್ಸ್‍ಪೆಕ್ಟರನ ಪ್ರತಿಕ್ರಿಯೆಯಿಂದ ಇಬ್ಬರೂ ನೆಲೆಗೋಸ್ಕರ ತಡಕಾಡುತ್ತಿರುವವರು ಎನ್ನುವುದು ಅನುಭವಕ್ಕೆ ಬರುತ್ತದೆ.

ಸಮಾರಂಭದಲ್ಲಿ ಅಷ್ಟೇನೂ ಆಸಕ್ತಿಯಿಲ್ಲದ ಚಿಕ್ಕಮ್ಮ, ಉಪಾಯವಾಗಿ ಗೀತಳನ್ನು ಪಕ್ಕದ ಕ್ರೈಸ್ತರ ಸ್ಮಶಾನಕ್ಕೆ ಕರೆದೊಯ್ಯುತ್ತಾಳೆ. ಮತ್ತೆ ತನ್ನ ಕಥೆಯನ್ನೆಲ್ಲಾ ಹೇಳುತ್ತಾಳೆ, ಗೀತಳಿಂದ ಅನುಕಂಪ ನಿರೀಕ್ಷಿಸುತ್ತಾಳೆ. ಗೀತಳ ಸಂಪೂರ್ಣ ಅನುಕಂಪ ಸಿಗದಾದಾಗ ಅವಳನ್ನೆ ಹಂಗಿಸುವಂತೆ 'ನಿನಗಾದರೂ ಒಂದು ಮನೆ ಎಲ್ಲಿದೆ ಅದು ರಾಜಶೇಖರನ ಮನೆ, ನನಗೆ ಒಳ್ಳೆಯದೊ ಕೆಟ್ಟದೋ ನನ್ನದಾದ ಮನೆ' ಎಂದು ಗೆಲ್ಲಲು ಪ್ರಯತ್ನಿಸುತ್ತಾಳೆ. ಚಿಕ್ಕಮ್ಮನ ಮನಸ್ಥಿತಿಯ ಅತ್ಯುತ್ತಮ ಚಿತ್ರಣ ಇಲ್ಲಿ ಕಾಣುತ್ತೇವೆ. ಗೀತಳಿಗೆ ಸಿಟ್ಟು ಬಂದು ವಾಪಸ್ಸು ಹೋದರೂ ಅವಳಿಗೆ ಅದು ಸ್ವಲ್ಪ ಮಟ್ಟಿಗೆ ನಿಜ ಎನ್ನಿಸಿರುತ್ತದೆ.

ಈ ನಡುವೆ ಬರುವ ಒಂದು ದೃಶ್ಯ ಬದಲಾವಣೆಯನ್ನು ಸಿನಿಮೀಯವಾಗಿ ಹಿಡಿಯುತ್ತದೆ. ಗೋಡಿಗಳಲ್ಲಿ ಇರುವೆಯನ್ನು ಕಾಣುವ ರಾಜಶೇಖರ ಅದನ್ನು ನಿವಾರಿಸಲು ಗೋಡೆಗೆಲ್ಲಾ ಅರಿಶಿನದ ಪೇಸ್ಟನ್ನು ಬಳೆಯುತ್ತಾನೆ. ಇಲ್ಲಿಯವರೆಗೆ ಮಸುಕಾದ ಬಿಳಿಯ ಹಿನ್ನೆಲೆ ಈಗ ಅರಿಶಿನದ ಬಣ್ಣಕ್ಕೆ ತಿರುಗಿ ಪರಿಸ್ಥಿತಿಯ ತೀವ್ರತೆಯನ್ನು ಅತ್ಯುತ್ತಮವಾಗಿ ಸೆರೆ ಹಿಡಿಯುತ್ತದೆ. ರಾಜಶೇಖರ ಈ ಹಿನ್ನೆಲೆಯಲ್ಲಿ ಒಬ್ಬನೇ ಕೂತಿರುವ ದೃಶ್ಯ ಚಿತ್ರದ ಸಾರ್ಥಕ ಕ್ಷಣಗಳಲ್ಲೊಂದು.

ರಾಜಶೇಖರನ ಮಾನಸಿಕ ಕ್ಷೋಭೆ ಜಾಸ್ತಿಯಾಗುತ್ತದೆ. ರಜೆ ಕೇಳಲು ಹೋದಾಗ ಬಾಸ್ 'ನಿಮ್ಮ ತೊಂದರೆ ಏನೆಂದರೆ ಪಟ್ಟಣದ ಕಂಫ಼ರ್ಟ್ಸ್ ಹಳ್ಳಿಯ ಸುಖ, ಎರಡೂ ಬೇಕು ನಿಮಗೆ' ಎನ್ನುತ್ತಾನೆ. ಗಂಡ ಹೆಂಡಿರ ವಿರಸ ಮುಂದುವರೆಯುತ್ತದೆ. ಮನೆಯ ಮಹಡಿಯ ಮೇಲೆ ಗಂಡ ಹೆಂಡಿರಿಗೆ ಮಾತು ಕತೆಯಾಗುತ್ತದೆ. ರಾಜಶೇಖರ ತನ್ನ ಕೀಳರಿಮೆ ಪ್ರದರ್ಶಿಸುತ್ತಾನೆ. ಗೀತ 'ನಂಬಿಕೆ ಮುಖ್ಯ, ಸಂಬಂಧಗಳನ್ನು ಪೂರ್ತಿಯಾಗಿ ಉಳಿಸಿಕೊಳ್ಳುವುದು ಮುಖ್ಯ. ನಿಮಗೆ ಎಲ್ಲವೂ ಕೇವಲ ಲಾಭಕ್ಕೆ ಮುಖ್ಯ' ಎನ್ನುತ್ತಾಳೆ. ಚಿಕ್ಕಮ್ಮನನ್ನು ಅನುಕಂಪದಿಂದ ಕಂಡು ಅವಳಿಗೆ ಸ್ನೇಹ ತೋರುವಂತೆ ನಾಟಕವಾಡುತ್ತಾ ಗೀತ ತನಗೆ ತಾನೆ ಮೋಸ ಮಾಡಿಕೊಂಡಿರುತ್ತಾಳೆ. ಆದರೆ ರಾಜಶೇಖರನಿಗೆ ಅವಳು ನಾಟಕವಾಡುತ್ತಿರುವುದು ತನ್ನ ಜೊತೆ ಎನ್ನಿಸುತ್ತದೆ. ಪರಿಸ್ಥಿತಿಯ ಗೋಜಲನ್ನು, ಬದಲಾದ ಬದುಕನ್ನು ದಕ್ಕಿಸಿಕೊಳ್ಳಲಾರದೆ ತೊಳಲಾಡುವುದನ್ನು ಈ ದೃಶ್ಯ ಹೇಳುತ್ತದೆ. ಮಹಡಿಯಲ್ಲಿನ ಪ್ರಖರ ಬೆಳಕಲ್ಲಿ, ವ್ಯಾಯಾಮದ ಸಲಕರಣೆಗಳ ಮಧ್ಯದಲ್ಲಿ ನಡೆಯುತ್ತದೆ ಈ ಮಾತುಕತೆ. ಪರಿಸ್ಥಿತಿಯನ್ನು ನೇರವಾಗಿ ಮುಖಾ ಮುಖಿಯಾಗುವುದಕ್ಕೆ ಬೆಳಕು ಮತ್ತು ಸಲಕರಣೆಗಳು ಪ್ರತಿಮೆಯಾಗುತ್ತವೆ. ಗೀತ ಬೆಳಕಲ್ಲಿ ನಿಲ್ಲುತ್ತಾಳೆ. ರಾಜಶೇಖರ ಮಾತ್ರ ನಿಲ್ಲಲಾರದೆ ಹೋಗುತ್ತಾನೆ. ಗೀತಳಿಗೆ ಈಗ ಹಳ್ಳಿಯ ಮನೆಯ ನೆನಪಾಗುತ್ತದೆ. ಇಬ್ಬರಿಗೂ ತಮ್ಮ ಬಗೆಗೆ ಸ್ವಲ್ಪ ಸ್ಪಷ್ಟವಾಗುತ್ತದೆ.

ರಾಜಶೇಖರ 'ಇನ್ಸ್~ಪೆಕ್ಟರ್ ಮತ್ತು ಚಿಕ್ಕಮ್ಮ ಇವರ ನೆರ್‍ಅಳು' ಇರುವ ಯಾವ ಕಡೆಯಲ್ಲೂ ನಾನು ಇರುವುದಿಲ್ಲ ಎನ್ನುವ ಸ್ಪಷ್ಟ ನಿಲುವು ತಳೆಯುತ್ತಾನೆ. ಚಿತ್ರ ಅಂತಿಮ ಹಂತ ತಲುಪುತ್ತದೆ. ಮನೆಯ ಮಾಲೀಕನನ್ನು ಎಲ್ಲರಿಗೂ ಆಶ್ಚರ್ಯವಾಗುವಂತೆ 'ಶೆಡ್-ನವರ ವಿಳಾಸ' ಕೇಳುತ್ತಾನೆ. ಶೆಡ್ ನವರ ಜೊತಿಗೆ ಗಲಾಟೆಯ ಸಂದರ್ಭದಲ್ಲಿ ಅವರು 'ನಿಮಗೆ ಬೇರೆ ಮನೆ ಬೇಕಾದರೆ ಹುಡುಕಿಸಿ ಕೊಡುತ್ತೇವೆ' ಎಂದು ಅವರಂದ ಮಾತು ರಾಜಶೇಖರನಿಗೆ ಜ್ಞಾಪಕಕ್ಕೆ ಬರುತ್ತದೆ. ಗೀತ ಹೇಳುವ ಹಾಗೆ ಎಲ್ಲರನ್ನೂ ಬಳಸಿಕೊಳ್ಳುವ ರಾಜಶೇಖರ ಇಲ್ಲಿ ಶೆಡ್-ನರವನ್ನು ಸಹಾಯ ಕೇಳಲು ಹಿಂಜರಿಯುವುದಿಲ್ಲ. ಹಾಗೆಯೇ ಜೀವನದ ಸಂಕೀರ್ಣತೆಯ ಅನುಭವವಾಗುತ್ತದೆ. ಯಾರು ತನಗೊಮ್ಮೆ ಬೇಡವಾಗಿದ್ದರೋ ಅವರ ಸಹಾಯವೇ ಇಂದು ಬೇಕಾಗಿದೆ. ಯಾರ ಸಹಾಯವೂ ಇಲ್ಲದೆ ಬದುಕುತ್ತೇವೆ ಎನ್ನುವ (ಆಧುನಿಕ?) ಅಹಂಕಾರವನ್ನೂ ಇಲ್ಲಿ ನಿರ್ದೇಶಕ ವಿಡಂಬನೆಗೆ ಗುರಿ ಮಾಡುತ್ತಿದ್ದಾನೆಯೇ? ಕನಿಷ್ಟ ಪಕ್ಷ ನಾವು ನಮ್ಮ ಅವಲಂಬನೆಗಳನ್ನು ಗುರುತಿಸುತ್ತಿದ್ದೇವೆಯೇ? ಹಾಗಿದ್ದರೆ ಮಾತ್ರ ಮಾನವೀಯ ಬಾಳು ಸಾಧ್ಯ ಎಂದು ನಿರ್ದೇಶಕ ಹೇಳುತ್ತಿದ್ದಾನೆಯೇ?

ರಾಜಶೇಖರ ಆ ವಿಳಾಸವನ್ನು ಹುಡುಕುತ್ತಾ ಹಿರಡುತ್ತಾನೆ. ದಾರಿಯಲ್ಲಿ ಒಬ್ಬ ಒಂದು ಬಂಡಿಯ ಮೇಲೆ ಒಂದೇ ಒಂದು ಹಳದಿ ಬಣ್ಣದ ಡ್ರಮ್ ಹೇರಿಕೊಂಡು, ಕಷ್ಟದಿಂದ ಗಾಡಿಯನ್ನು ನಿಯಂತ್ರಿಸುತ್ತಾ ಬರುತ್ತಾನೆ. ಹಿಂದೆ ಇದೇ ತೆರನಾದ ಬಂಡಿಯೊಂದು ಇದೇ ಬಣ್ಣದ ಅನೇಕ ಡ್ರಮ್-ಗಳನ್ನು ಹೇರಿಕೊಂಡು ರಾಜಶೇಖರನನ್ನು ರಾಕ್ಷಸ ರೀತಿಯಲ್ಲಿ ಬೆಚ್ಚಿ ಬೀಳಿಸಿರುತ್ತದೆ, ಆ ಶಬ್ದವನ್ನು ತಡೆಯದಾಗುತ್ತಾನೆ. ಆದರೆ ಇಂದು ಅದೇ ಬಂಡಿಯನ್ನು ಎಳೆಯುವವ ನಿಸ್ಸಹಾಯಕನಂತೆ ಕಾಣುತ್ತಾನೆ. ಗಾಡಿಯವನ ಕಷ್ಟ ಅರಿವಿಗೆ ಬಂದಿರುತ್ತದೆ. ಅದರ ಶಬ್ದ ರಾಜಶೇಖರನನ್ನು ಹಿಂಸಿಸುವುದಿಲ್ಲ. ರಾಜಶೇಖರನಿಗೆ ಅದು ತನ್ನದಾಯಿತೆ ಅಥವ ಅದಕ್ಕಿಂತ ದೊಡ್ಡದಾದ ತೊಂದರೆಯೊಂದನ್ನು ಅನುಭವಿಸುತ್ತಿರುವುದರಿಂದ ಅದು ಚಿಕ್ಕದಾಯಿತೆ? ನಮ್ಮದೇ ಆದ ಭೌತಿಕವಾದ ತೊಂದರೆಯೊಂದನ್ನು ನಿವಾರಿಸಲು ಹೋಗಿ, ಹೊರಗಿನಿಂದ ಮತ್ತೊಂದು ಭೌತಿಕವಾದ ಹಾಗೂ ಸಾಂಸ್ಕೃತಿಕ ತೊಂದರೆ ಆಹ್ವಾನಿಸಿಕೊಂಡೆವೆ? ಮನೆಯ ಚಿಕ್ಕ ಭೂತವನ್ನೋಡಿಸಲು ಹೊರಗಿನಿಂದ ದೊಡ್ಡ ಭೂತವನ್ನು ಆಹ್ವಾನಿಸಿದೆವೆ? ನಾವು ಯಾವುದನ್ನು ಅಭಿವೃದ್ಧಿ ಎಂದು ಇಂದು ಕರೆಯುತ್ತೇವೋ ಅದರ ಬಗ್ಗೆ ನಿರ್ದೇಶಕ ಇಲ್ಲಿ ಅಣಕಿಸುತ್ತಿದ್ದಾನೆಯೇ? ಈ ಎಲ್ಲಾ ಆಲೋಚನೆಗಳಿಗೆ ಪ್ರತಿಮೆಯಾಗಿ ಚಿತ್ರ ಇಲ್ಲಿ ನಿಲ್ಲುತ್ತದೆ. ಗಾಢವಾದ ಸಿನಿಮೀಯ ಅನುಭವವನ್ನು ಚಿತ್ರ ಇಲ್ಲಿ ಕೊಡುತ್ತದೆ.

ಆ ಶೆಡ್ ನಲ್ಲಿನ ಜನರ ವಿಳಾಸ ಒಂದು ಸ್ಲಮ್-ನದ್ದು ಎಂದು ತಿಳಿದು ರಾಜಶೇಖರ ಮತ್ತಷ್ಟು ಆಶ್ಚರ್ಯಚಕಿತನಾಗುತ್ತಾನೆ. ಸ್ಲಮ್-ಗೆ ಹೋದಾಗ ಅವನಿಗೆ ಮತ್ತೊಂದು ವಿಶ್ವರೂಪ ದರ್ಶನವಾಗುತ್ತದೆ. ಶೆಡ್-ನವರು ವಾಸವಾಗಿರುವ ಸ್ಲಮ್, ಬುಲ್ಡೋಜ಼ರ್ ಒಂದರ ಅಡಿಗೆ ಸಿಕ್ಕು ನಿರ್ನಾಮವಾಗುತ್ತಿರುತ್ತದೆ. ಆಘಾತಗೊಂಡ ರಾಜಶೇಖರ ಅಲ್ಲೇ ನಿಂತು ನೋಡುತ್ತಾನೆ. ಸ್ವಲ್ಪ ಹೊತ್ತಿನ ನಂತರ ಹಳದಿ ಬಣ್ಣದ ಆ ಬುಲ್ಡೋಜ಼ರ್ ಹತ್ತಿರ ಬರುತ್ತದೆ. ಅದು ಅವನದ್ದೇ ಕಂಪನಿಯಿಂದ ತಯಾರಾದ ಬುಲ್ಡೋಜ಼ರ್ ಆಗಿರುತ್ತದೆ. ಈ ಒಂದು ಆಯಾಮದ ಕುರಿತು ಯೋಚಿಸಿಯೇ ಇರದ ರಾಜಶೇಖರನಿಗೆ ಭಯಂಕರ ಆಘಾತವಾಗುತ್ತದೆ. ತನ್ನ ಕೆಲಸದ ಬಗ್ಗೆ ಮಿತವಾದ ಹೆಮ್ಮೆಯಿರುವ ರಾಜಶೇಖರನಿಗೆ ಅದರ ಧ್ವಂಸಾತ್ಮಕ ಆಯಾಮದ ಅಲೋಚನೆಯೇ ಇರುವುದಿಲ್ಲ. ಹಳದಿ ಬಣ್ಣದ ಬುಲ್ಡೋಜ಼ರ್ ಡ್ರಮ್-ಗಳಿಗಿಂತಾ ಹೆಚ್ಚು ಶಕ್ತಿಶಾಲಿ. ನಾವೆಲ್ಲಾ ನಡೆಸುವ ಕ್ರಿಯೆಗೆ ಅದೆಷ್ಟು ಲಯದ ಶಕ್ತಿ ಇರುತ್ತದೆ ಎನ್ನುವುದನ್ನು ನಾವು ಗಮನಿಸುವುದಿಲ್ಲ ಎನ್ನುವುದನ್ನು ಇಲ್ಲಿನ ದೃಶ್ಯ ತೀವ್ರವಾಗಿ ಬಿಂಬಿಸುತ್ತದೆ. ಯಾರನ್ನು ನಾವು ಕ್ರಿಮಿನಲ್ಲುಗಳಂತೆ ನೋಡುತ್ತೇವೋ ಅವರು ನಿಜಕ್ಕೂ ನಿಸ್ಸಹಾಯರಾಗಿದ್ದು, ಅದಕ್ಕಿಂತ ಕ್ರಿಮಿನಲ್ ಶಕ್ತಿಗಳು ನಮ್ಮ ಕಣ್ಣಿಗೆ ಕಾಣದೆ ನಮ್ಮನ್ನೇ ಬಳಸಿ ಕಾರ್‍ಯ ಸಾಧಿಸುತ್ತಿದ್ದಾವೋ, ಇಂತಹ ಅದೆಷ್ಟು ಪರಕೀಯ ಶಕ್ತಿಗಳು ಈಗ ನಮ್ಮಲ್ಲಿ ಪ್ರವೇಶ ಪಡೆಯುತ್ತಿದ್ದಾವೋ? ಜಾಗತೀಕರಣದ ನೇರ ಪ್ರಯೋಜನ ಪಡೆಯುತ್ತಿರುವವರನ್ನು ಈ ದೃಶ್ಯ ಹಂಗಿಸುವಲ್ಲಿ, ದಶಕಕ್ಕಿಂತಲೂ ಹಿಂದೆ ನಿರ್ಮಿತವಾದ ಈ ಚಿತ್ರ ಇಂದಿಗೆ ಕೂಡ ಪ್ರಸ್ತುತವಾಗಿಬಿಡುತ್ತದೆ. ನಿರ್ದೇಶಕ ಕೇವಲ ದೃಶ್ಯಗಳ ಸಹಾಯದಿಂದ ಈ ಎಲ್ಲ ಪ್ರಶ್ನೆಗಳನ್ನೇಳಿಸುವಲ್ಲಿ ಗೆದ್ದಿದ್ದಾರೆ, ಕಲಾತ್ಮಕತೆ ಮೆರೆದಿದ್ದಾರ್‍ಎ. ಕಡೆಯ ಈ ಕೆಲ ಕ್ಷಣಗಳು ತಮ್ಮ ತೀವ್ರತೆಯಿಂದ ರಾಜಶೇಖರನನ್ನು ಹಾಗೂ ವೀಕ್ಷಕನನ್ನು ಆವರಿಸಿಕೊಳ್ಳುತ್ತವೆ.

ಈ ದುರಂತವನ್ನನುಭವಿಸುವ ರಾಜಶೇಖರ ನಿಜ ಮನುಷ್ಯನಾಗುವ ಸಾಧ್ಯತೆಯಿದೆ, ಎನ್ನುವಲ್ಲಿಗೆ ಚಿತ್ರ ಮುಗಿಯುತ್ತದೆ.

ಚಿತ್ರದ ನಿಜವಾದ ಶಕ್ತಿ ಅದರ ಚಿತ್ರಕತೆ. ಅದಕ್ಕೆ ಛಾಯಾಗ್ರಹಣ ಮತ್ತು ಸಂಕಲನ ಪೂರಕವಾಗಿ ಕೆಲಸ ಮಾಡಿದೆ. ಆಶಯ, ಅದಕ್ಕೆ ಪೂರಕವಾದ ಪ್ರತಿಮೆಗಳ ಕಲ್ಪನೆ, ಅದರ ಅನುಕ್ರಮಣವಾದ ಜೋಡಿಕೆ, ಪಾತ್ರಗಳ ಪರಿಕಲ್ಪನೆ, ಯಾರು ಯಾವುದನ್ನು ಪ್ರತಿನಿಧಿಸುತ್ತಾರೆ, ದೃಶ್ಯಗಳು ಎಲ್ಲಿ ರಭಸವಾಗಿರಬೇಕು, ತೀವ್ರವಾಗಿರಬೇಕು, ಚಿತ್ರದ ವೆಗ ಏಶ್ಟಿರಬೇಕು ಇವೆಲ್ಲವನ್ನೂ ಅತಿಯದ ಅಚ್ಚುಕಟ್ಟುತನದಿಂದ ನಿರ್ವಹಿಸಲಾಗಿದೆ. ಚಿತ್ರದಲ್ಲಿ ಮಂಚ ಒಂದು ಪಾತ್ರವೇ ಆಗಿ ಚಿತ್ರದ ಕಲಾತ್ಮಕತೆಯನ್ನು ಹೆಚ್ಚಿಸುತ್ತದೆ.

ಈ ಹಿಂದೆ ಪ್ರಸ್ತಾಪಿಸಿದ ಮಂಚ ತೆರೆಯ ಮೇಲೆ ಬರುವಾಗಿನ ದೃಶ್ಯಗಳು ಚಿತ್ರಕಥೆಯ ಆಶಯವನ್ನು ಸಂಪೂರ್ಣವಾಗಿ ಬಿಂಬಿಸುತ್ತವೆ. ತಮ್ಮ ಮನೆಯ ಜೀವನವನ್ನು ರಾಜಶೇಖರ ಅನುಭವಿಸುವುದು ಮಂಚದ ಮೇಲೆಯೇ. ತಮ್ಮ ಸುಖ-ದುಃಖ, ಅಪನಂಬಿಕೆ, ಸರಸ-ವಿರಸ, ಕಿರಿ ಕಿರಿ, ಸಮಾಧಾನ, ಕಾಮ, ಹಿಂಸೆ, ನಾಚಿಕೆ, ಅವಮಾನ - ಏನಾದರೂ ಅವರು ಅದನ್ನು ತೀವ್ರವಾಗಿ ಅನುಭವಿಸುವುದು ಆ ಮಂಚದ ಮೇಲೆ. ಅಲ್ಲಿನ ಎಲ್ಲಾ ದೃಶ್ಯಗಳು ತುಂಬಾ ಆಳವಾಗಿ ಆಲೋಚಿತವಾಗಿದ್ದು, ಕ್ಯಾಮರಾದ ಕೋನ, ಬೆಳಕು, ಅವರು ಕುಳಿತ ಅಥವಾ ಮಲಿಗಿರುವ ಭಂಗಿಗಳು ಚಿತ್ರದ ಆ ಹಂತದ ಆಶಯವನ್ನು ಸಂಪೂರ್ಣವಾಗಿ ಬಿಂಬಿಸುತ್ತವೆ. ಚಿತ್ರದೆಲ್ಲೆಡೆ ಕ್ಯಾಮರಾ ಚಿತ್ರದ ಒಂದು ಪಾತ್ರವೇನೋ ಎನ್ನುವಷ್ಟರ ಮಟ್ಟಿಗೆ ಸಂದರ್ಭದ ಒಳಗಡೆ ನಿಂತು ಕೆಲಸ ಮಾಡುತ್ತದೆ. ದೃಶ್ಯಗಳು ತೀವ್ರವಾಗಿ ನಮಗೆ ಅನುಭವವಾಗುವಂತೆ ಮಾಡುತ್ತದೆ. ಅರಿಶಿನದ ಗೋಡೆಯ ಹಿನ್ನೆಲೆಯಲ್ಲಿ ರಾಜಶೇಖರನ ದೃಶ್ಯವಂತೂ ರಾಮಚಂದ್ರರ/ಗಿರೀಶರ ಅತ್ಯುತ್ತಮ ಕೆಲಸಗಳಲ್ಲೊಂದು ಎನ್ನಬಹುದು.

ಕೆಲವೇ ದೃಶ್ಯಗಳಲ್ಲಿ ಬರುವ ರೋಹಿಣಿ ತುಂಬಾ ಗಮನ ಸೆಳೆಯುತ್ತಾರೆ. ಪ್ರೇಕ್ಷಕರ ಅನುಕಂಪಕ್ಕೆ ನೇರವಾಗಿ ಸಿಗುವ ಪಾತ್ರ ಇದು. ಸಿಟ್ಟು, ನಿಸ್ಸಹಾಯಕತೆ, ಛಲ, ಜಿದ್ದು, ಕಪಟ, ಅಸೂಯೆ, ಪ್ರೀತಿ ಎಲ್ಲವನ್ನೂ ಅಚ್ಚುಕಟ್ಟಾಗಿ, ನಿಯಂತ್ರಣದಿಂದ ನಿರ್ವಹಿಸಿದ್ದಾರ್‍ಎ. ತೀವ್ರತೆಯಿದೆ. ದೇವಸ್ಥಾನದಲ್ಲಿ ಚಿಕ್ಕಮ್ಮ ಅನುಭವಿಸುವ ದುಃಖದಲ್ಲಿನ ಅವರ ಅಭಿನಯ ಕನ್ನಡ ಚಿತ್ರಗಳಲ್ಲಿನ ಅತ್ಯುತ್ತಮ ಕ್ಷಣಗಳಲ್ಲಿ ಕೆಲವು.

ರಾಜಶೇಖರನ(ನಾಸೀರ್) ಪಾತ್ರಕ್ಕಿಂತಾ ಆಳವಾದ ಕಷ್ಟವಾದ ಪಾತ್ರ ಗೀತಾಳದ್ದು (ದೀಪ್ತಿ). ನಾಸೀರ್-ರ ಪಾತ್ರ ಕಡೆಯ ತನಕ ಒಂದು ಹಾದಿಯಲ್ಲಿ ಹೋಗಿ ಕಡೆಯಲ್ಲಿ ನಿಜವಾದ ಬೆಳವಣಿಗೆಯನ್ನು ಕಾಣುತ್ತದೆ. ಕಡೆಯ ಕ್ಷಣಗಳು ಮಾತ್ರ ನಾಸೀರ್-ರ ಅಭಿನಯಕ್ಕೆ ಸವಾಲಾಗುತ್ತವೆ. ಇಡೀ ಚಿತ್ರದಲ್ಲಿ ಒಮ್ಮೆಯೂ ನಾಸೀರ್ ಅನಗತ್ಯವಾದ ಒಂದು ನಡೆ ನಡೆದಿಲ್ಲ. ಆದರೆ, ನಾಸೀರ್-ರ ಧ್ವನಿ-ಗೆ ಒಗ್ಗಿಹೋಗಿರುವ ನಾವು, ರಾಮಕೃಷ್ಣರ ಧ್ವನಿಯಲ್ಲಿ ನಾಸೀರ್-ರನ್ನು ಹುಡುಕುವುದು ಸ್ವಲ್ಪ ಕಿರಿ-ಕಿರಿ ಉಂಟು ಮಾಡುತ್ತದೆ.

ಗೀತಾಳ (ದೀಪ್ತಿ) ಪಾತ್ರ ಅನೇಕ ಏರಿಳಿತ ಕಾಣುತ್ತದೆ. ಪ್ರಬುದ್ಧತೆ, ನಿಸ್ಸಹಾಯಕತೆ, ಸಂವೇದನಾಶೀಲತೆ, ಗಟ್ಟಿಯಾದ ಬೇರಿನ ಸಾಂಸ್ಕೃತಿಕ ಪ್ರಜ್ಞ್ನೆ, ಮುಗ್ಧತೆ, ಅವಮಾನ, ತಾಯ್ತನ - ಎಲ್ಲವನ್ನೂ ಅನುಭವಿಸುವ ಪಾತ್ರ ಇದು. ದೀಪ್ತಿ ಅಚ್ಚುಕಟ್ಟಾಗಿ ನಿರ್ವಹಿಸಿ ಚಿತ್ರದ ಅತ್ಯುತ್ತಮ ನಟರಾಗಿ ಹೊರಹೊಮ್ಮುತ್ತಾರೆ. ಆದರೆ, ಮತ್ತೆ, ಇವರ ಧ್ವನಿಗೆ ಪರಿಚಿತರಾದ ನಮಗೆ ವೈಶಾಲಿಯ ಧ್ವನಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ.

ಚಿತ್ರದ ಮತ್ತೊಬ್ಬ ಹೀರೋ ಹಿನ್ನೆಲೆ ಸಂಗೀತ. ಅತಿಯಾಗಿ ನಮ್ಮ ಗಮನ ಸೆಳೆಯದೆ, ಚಿತ್ರದ ಆಶಯಕ್ಕೂ ಧಕ್ಕೆಯೂ ಬಾರದಂತೆ, ದೃಶ್ಯಗಳು ಹೇಳದಿರುವುದನ್ನು ತಾನೂ ಹೇಳದೆ, ಚಲನ ಚಿತ್ರದಲ್ಲಿ ಹಿನ್ನೆಲೆ ಸಂಗೀತದ ಪಾತ್ರವೇನು ಎನ್ನುವುದಕ್ಕೆ ಉದಾಹರಣೆಯಾಗಿ ನಿಂತಿದೆ. ಆದರೆ, ಟೈಟಲ್ ಕಾರ್ಡ್ ಜೊತೆ ಬರುವ ಸಂಗೀತ ಮಾತ್ರ ನನ್ನನ್ನು ದಿಕ್ಕುತಪ್ಪಿಸಿತು. ಆದರೆ ಚಿತ್ರದಾದ್ಯಂತ ಕೇಳಿಬರುವ ಹಿನ್ನೆಲೆ ಸಂಗೀತದ ಬಗ್ಗೆ ಹಾಗೆ ಹೇಳುವಂತಿಲ್ಲ.

ಕೆಲವೇ ಕೆಲವೆಡೆ, ಮಾತುಗಳು ಚಿತ್ರದ ಆಶಯವನ್ನು ಅಗತ್ಯಕ್ಕಿಂತಾ ಜಾಸ್ತಿ ಒತ್ತಿ, ದೃಷ್ಯದ ತೀವ್ರತೆಯನ್ನನುಭವಿಸಲು ಅಡ್ಡಿಯಾಗುತ್ತದೆ, ಕಲಾತ್ಮಕತೆಯನ್ನು ಕಡಿಮೆಯಾಗಿಸುತ್ತದೆ.

ಚಿತ್ರದ ಮೂಲ ಆಶಯ ಮನುಷ್ಯನ 'ನೆಲೆ ಕಂಡುಕೊಳ್ಳುವ' ಪ್ರಯತ್ನದ ವಿಶ್ಲೇಷಣೆಯಿರಬಹುದೇ? ಇದನ್ನು ಮೂಲವಾಗಿಟ್ಟುಕೊಂಡು ಮನುಷ್ಯನ ಚಲನಶೀಲತೆ, ದುರಾಸೆ, ಸ್ವಾತಂತ್ರ್ಯದ ತುಡಿತ, ಅದರ ಕುರಿತಾದ ಸ್ಪಷ್ಟವಾದ ಪರಿಕಲ್ಪನೆಯ ಅಭಾವ, ಹುಡುಕಾಟ, ಅದಕ್ಕೆ ತೆರಬೇಕಾದ ಬೆಲೆ, ಸಾಂಸ್ಕ್ರ್‍ಇತಿಕ ಆಘಾತಗಳು, ರಾಜಕೀಯ, ಸಮಯಸಾಧಕತನ, ಗಟ್ಟಿಯಾದ ಬೇರಿನ ಅವಶ್ಯಕತೆ, ಕ್ರಿಯಾಶೀಲತೆಯ ಅರ್ಥವಂತಿಕೆ ಹಾಗೂ ಅರ್ಥಹೀನತೆ-ಧ್ವಂಸಾತ್ಮಕ ಗುಣ, ಮೇಲ್ನೋಟಕ್ಕೆ ಒಂದೇ ಮುಖ ಕಾಣುವ ಪರಿಸ್ಥಿತಿಯಲ್ಲೇ ಅನೇಕ ಮುಖಗಳಿರುವುದು, ಇವುಗಳೆಲ್ಲದರ ವಿರೋಧಾಭಾಸ, ಇವೆಲ್ಲಾ ಸೇರಿ ಉಂಟಾಗುವ ಗೋಜಲುಗಳು, ಬೆಳವಣಿಗೆ, ಸಂಕೀರ್ಣವಾದ ಮನುಷ್ಯ ಸಂಬಂಧಗಳು, ಜೀವನ - ಇವೆಲ್ಲವುದರ ಕಲಾತ್ಮಕ ಚಿತ್ರಣವನ್ನು ನಿರ್ದೇಶಕ ಕೊಡುತ್ತಾ ಜೊತೆಗೆ ಈ ಮೊದಲೇ ವಿವರಿಸಿರುವಂತೆ ಕೆಲವು ಪ್ರಶ್ನೆಗಳನ್ನೇಳುವಂತೆ ಮಾಡಿ, ಸೂಚ್ಯವಾಗಿ ಅವುಗಳ ಕುರಿತಾದ ರಾಜಕೀಯ ನಿಲುವುಗಳನ್ನು ತೆಗೆದುಕೊಳ್ಳುತ್ತಾರೆ. ಮನುಷ್ಯನ ಬಗೆಗೆ ಒಳನೋಟಗಳನ್ನು ಕೊಡುತ್ತಲೇ, ಕೆಲವು ಮುಖ್ಯವಾದ ಸಾಮಾಜಿಕ ವಿಚಾರಗಳನ್ನೆತ್ತುತ್ತಾರೆ. ಅವು ಯಾವುವೂ ಕಲಾತ್ಮಕತೆಗೆ ಒಂದಿಷ್ಟೂ ಭಂಗ ತರದಿರುವುದರಿಂದ, ಕಾಲಾಂತರದಲ್ಲಿ ಹೊಸ ಪ್ರಶ್ನೆಗಳನ್ನೇಳಿಸುವ ಸೃಷ್ಟಿಶೀಲತೆಯಿರುವುದರಿಂದ ಚಿತ್ರ ಒಂದು ಅಪರಪೂಪದ ಕಲಾಕೃತಿಯಾಗಿ ನಿಲ್ಲುತ್ತದೆ.

2 Comments:

At 1:20 AM, Blogger Saamaanya Jeevi said...

ಯಶಸ್ವಿನಿಯವರೆ,

ನೀವು ಹೇಳುತ್ತಿರುವುದು ಒಂದು ರೀತಿಯಲ್ಲಿ ಸರಿ.

ದೃಶ್ಯಗಳ ಪ್ರಭಾವದಿಂದ, ಸೂಕ್ಷ್ಮ ಅವಲೋಕನದಿಂದ ನೋಡುಗ ಮರುಸೃಷ್ಟಿಗೊಳಿಸಿಕೊಳ್ಳಬಹುದಾದ ಕಥೆ, ಅದರ ಮೂಲಕ ಚಿತ್ರದ ವೈಶಿಷ್ಟ್ಯದ ಕುರಿತು ಬರೆಯುವುದು ನನ್ನ ಉದ್ದೇಶವಾಗಿತ್ತು. ಓದುಗನಿಗೆ ಕೇವಲ ಕಥೆಯ ನಿರೂಪಣೆಯೆನ್ನಿಸಿದರೆ ನನ್ನ ಬರಹ ನಾನು ಸಾಧಿಸಬೇಕೆಂದಿದ್ದ ವಿಷಯದಲ್ಲಿ ಸೋತಿದೆ ಎಂದರ್ಥ.

ಇದೇ ಬರಹವನ್ನು ಮತ್ಯಾವ ರೀತಿಯಲ್ಲಿ ಮರುಸೃಷ್ಟಿಗೊಳಿಸಬೇಕು ಎಂದು ಆಲೋಚಿಸಬೇಕಿದೆ.

ಇದೇ ತೆರನಾದ ಪ್ರಯತ್ನಗಳನ್ನು ಸ್ವಲ್ಪ ಮಟ್ಟಿಗೆ ದ್ವೀಪದ ಕುರಿತಾದ ಬರಹದಲ್ಲಿ, ಇನ್ನೊಂದಿಷ್ಟು 'ಶರವಣ ಸರ್ವಿಸಸ್' ಕಥೆಯ ಕುರಿತಾದ ಬರದಲ್ಲಿ ಪ್ರಯತ್ನಿಸಿದ್ದೆ. ಅಲ್ಲಿ ಇದಕ್ಕಿಂದ ಯಶಸ್ವಿಯಾಗಿದೆಯೇನೋ ಓದುಗರೇ ಹೇಳಬೇಕು.

ಇಂತಿ
ಶಿವು

 
At 12:24 AM, Blogger Saamaanya Jeevi said...

ಯಶಸ್ವಿನಿಯವರೆ,

ದ್ವೀಪ, ಶರವಣ ಸರ್ವಿಸಸ್ ಕುರಿತು ನೀವು ಹೇಳುತ್ತಿರುವುದು ಅರ್ಥವಾಗುತ್ತೆ. ನಿಮ್ಮ ಸ್ನೇಹಿತೆಯ ಆಕ್ಷೇಪಣೆಯೂ ನನಗೆ ಅರ್ಥವಾಗುತ್ತದೆ.

ಆದರೆ, ಮನೆ ಕುರಿತು ಬರೆದಾಗ, ಕಥೆಯನ್ನು ನಾನು ಗ್ರಹಿಸಿರುವ ರೀತಿಯಲ್ಲೇ ನನ್ನ ಅಭಿಪ್ರಾಯಗಳು ಇವೆ, ಪ್ರಾಯಶಃ ಕರಗಿಹೋಗಿವೆ. ದೃಶ್ಯ ಸಂಪತ್ತಿನಿಂದ, ವಿವರಗಳಿಂದ ದೊರಕುವ ಕಥೆಯನ್ನು ನಾನು ಲೇಖನದಲ್ಲಿ ಇಳಿಸಿದ್ದೇನೆ.

ಮುಂದೆ ಯಾವಾಗಲಾದರೂ ಈ ಲೇಖನದ ಕಥಾಭಾಗದಲ್ಲಿ ಕರಗಿಹೋರುವ ನನ್ನ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ದಾಖಲಿಸಲು ಪ್ರಯತ್ನಿಸುತ್ತೇನೆ. ಹಾಗೆ ಮಾಡುವಾಗ ಸಂಕೇತಗಳನ್ನು ಅತಿಯಾಗಿ ವಿವರಿಸಬೇಕಾಗುತ್ತದಲ್ಲ ಎನ್ನುವುದು ನನ್ನ ಕಳಕಳಿ (ಶರವಣ ಸರ್ವಿಸಸ್ ಮತ್ತು ದ್ವೀಪ ಕುರಿತ ಲೇಖನದಲ್ಲಿ ಮಾಡಿದ ಹಾಗೆ).

ಇರಲಿ
ಶಿವು

 

Post a Comment

<< Home