ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Monday, May 01, 2006

ಹಣತೆಯ ದೀಪವಾದ ಕನ್ನಡ ಸೂರ್ಯ



ನೈಸರ್ಗಿಕ ನಿಯಮಾನುಸಾರವಾಗಿ ಈ ದಿನ ಬರುತ್ತದೆನ್ನುವ ಪ್ರಾಥಮಿಕ ಸತ್ಯವನ್ನೇ ಕನ್ನಡ ಭಾವಲೋಕ ಕಡೆಗಣಿಸಿಬಿಟ್ಟಿತ್ತು ಎನ್ನಿಸುತ್ತದೆ. ಡಾ|| ರಾಜ್ ತೀರಿಹೋದರು ಎನ್ನುವುದು ಅವರ ಅಮರತ್ವವನ್ನು ಸ್ಥಾಪಿಸಿಕೊಂಡಿದ್ದ ಭಾವಲೋಕಕ್ಕೆ ಕ್ಷಣದ ಸಿಡಿಲಿನ ಏಟೇ ಸರಿ. ಡಾ|| ರಾಜ್-ರ ಹೆಸರಿನ ಹಿಂದೆ ದಿವಂಗತ ಎನ್ನುವ ಪದ ಇಷ್ಟು ದಿನಗಳ ನಂತರವೂ ನನಗೆ ಅಸಂಗತವಾಗೇ ಕಾಣಿಸುತ್ತಿದೆ. ಅವರ ಭೌತಿಕ ಅಂತ್ಯದ ಹೊಡೆತವನ್ನು ಮೀರಿ ಕನ್ನಡ ಅವರ ಅಮರತ್ವನ್ನು ಕಾಯ್ದುಕೊಳ್ಳುವತ್ತ, ಅನೇಕ ವಿಧಗಳಲ್ಲಿ ಮರುಸೃಷ್ಟಿಸುವತ್ತ ನಿಧಾನವಾಗಿ ಮುಂದಡಿಯಿಡುತ್ತಿದೆಯೇನೋ. ಹೀಗೆ, ಒಟ್ಟೊಟ್ಟಿಗೆ ೫೦ ವರ್ಷಗಳ (ವೈಯಕ್ತಿಕವಾದ, ಸಾಮೂಹಿಕವಾದ, ನನ್ನದಾದ, ನನ್ನದಲ್ಲದ) ನೆನಪು ಒತ್ತರಿಸಿ ಬರುತ್ತಿರುವಾಗ ಸಾಂಸ್ಕೃತಿಕ ಲೋಕದಲ್ಲಿ ಮಹತ್ತರವಾದ್ದೇನಾದರೂ ಸಂಭವಿಸಬಹುದು ಎನ್ನಿಸುತ್ತದೆ.

ನನ್ನೆಲ್ಲಾ ಬುದ್ಧಿಯನ್ನು ಮನಸ್ಸು-ಹೃದಯಗಳಲ್ಲಿ ಕರಗಿಸಿ ಭಯ-ಭಕ್ತಿಯಿಂದ ಈ ಬಾರಿಯ ಲೇಖನದಲ್ಲಿ ತೊಡಗಿದ್ದೇನೆ. ಅನೇಕ ಕನ್ನಡಿಗರಂತೆ ನಾನು ನೋಡಿದ್ದ ಮೊದಲನೇ ಸಿನೆಮಾ ರಾಜ್-ರದ್ದು, 'ಹುಲಿಯ ಹಾಲಿನ ಮೇವು'. ನನಗಾಗ ೩ ವರ್ಷ. ಸಿನೆಮಾ ನೋಡಿದ್ದು ನೆನಪಿರುವುದು ಮುಖ್ಯವಲ್ಲ, ರಾಜ್-ರ ಯಾವ ಸಿನೆಮಾವನ್ನೂ ಮರೆಯುವುದು ಸಾಧ್ಯವಿಲ್ಲ. ಆದರೆ, ಆ ಸಿನೆಮಾ ನೋಡುವುದಕ್ಕೆ ಹೋಗುವಾಗಲೇ ನನಗೆ ರಾಜ್ ಗೊತ್ತಿದ್ದಂತಿತ್ತು ಎನ್ನುವುದು ಮುಖ್ಯ. ಮನೆ ಮಂದಿ, ನೆರೆಹೊರೆ, ಒಟ್ಟಿಡೀ ಸಮಾಜ ರಾಜ್-ರನ್ನು ಜನಪದ-ಸತ್ಯದಂತೆ ಭಾವಿಸಿ ನೆನೆಯುವಾಗ ಆ ಮಾತುಗಳು ನನ್ನ ಕಿವಿಗೆ ತಾಗಿ, ತಾಗಿ ಒಟ್ಟು ರಾಜ್ ಆಗಲೇ ಮನಸ್ಸಿನಲ್ಲಿ ಮನೆಮಾಡಿದ್ದರು ಎನ್ನಿಸುತ್ತದೆ. ಆ ಕಾಲಕ್ಕಿನ್ನೂ ಟಿವಿ ಬಂದಿರಲಿಲ್ಲವೆನ್ನುವುದು ಮುಖ್ಯ. ನಂತರದ ವರ್ಷಗಳಲ್ಲಿ ಬಂದ ಅನೇಕ ರಾಜ್ ಸಿನೆಮಾಗಳನ್ನು ಮನೆ ಮಂದಿಯೆಲ್ಲಾ 'ನಾವೆಲ್ಲರೂ ಒಟ್ಟಿಗೆ ನಡೆಸಬೇಕಿರುವ ಉತ್ಸವ'-ದಂತೆ ನೋಡುತ್ತಿದ್ದೆವು. ಒಟ್ಟು, ನಾನು ಆ ಕಾಲಕ್ಕೂ, ಯಾವ ಕಾಲಕ್ಕೂ ರಾಜ್-ರ ಭಕ್ತ.

ಸಾರ್ವಜನಿಕ ವ್ಯಕ್ತಿಯಾಗಿ ರಾಜ್

ರಾಜ್-ರ ಹಿಂದಿನ ಸಿನೆಮಾಗಳ ಕುರಿತು ಕೇಳಿದ್ದೆವೇ ಹೊರತು, ಅವುಗಳನ್ನೆಲ್ಲಾ ನೋಡ ತೊಡಗಿದ್ದು, ಆ ದಿನಗಳ ಕುರಿತು ಅರಿಯತೊಡಗಿದ್ದು ನಿಧಾನವಾಗಿ. ಅದೆಲ್ಲಾ ನಟನಾಗಿ, ನಾಯಕರಾಗಿ, ಸಹೃದಯರಾಗಿ, ಸಾಮಾಜಿಕ ವ್ಯಕ್ತಿಯಾಗಿ, ನಾವೆಲ್ಲರೂ ಪ್ರೀತಿಸಬಹುದಾಗಿದ್ದ ಮನೆ-ಮಗನಾಗಿ, ರಾಜ್ ರೂಪುಗೊಂಡ ನೆಲೆಗಳನ್ನು, ಕಾರಣಗಳನ್ನು ಪರಿಚಯಿಸಿತು. ರಾಜ್-ರ ಮೊದಲ ಇಪ್ಪತ್ತು ವರ್ಷಗಳು ಅವರಿಗೆ ಕಲಾವಿದರಾಗಿ ಗಟ್ಟಿಯಾಗಿ ತಮ್ಮನ್ನು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟವು. ಈ ಸಮಯದಲ್ಲಿನ ರಾಜ್-ರ ನಟನೆಯ ಆಳವನ್ನು ನಮ್ಮಲ್ಲಿ ಯಾರೂ ಸರಿಯಾಗಿ ಅಧ್ಯಯನ ಮಾಡಿಲ್ಲ. ನಂತರದ ಹತ್ತು ವರ್ಷಗಳು ಸಮುದಾಯದ ಅಗತ್ಯವೊಂದನ್ನು ಪೂರೈಸುವುದಕ್ಕಾಗಿ ತಮ್ಮನ್ನು ತಾವೇ ಒಡ್ಡಿಕೊಳ್ಳಬೇಕಾಗಿ ಬಂದು, ಅದನ್ನು ರಾಜ್ ನಿರ್ವಹಿಸಿದ ರೀತಿ ನಮ್ಮ ಕಾಲಕ್ಕಂತೂ ಅನನ್ಯ. ಬೊಟ್ಟು ಮಾಡಿ ತೋರಿಸುವುದಕ್ಕೆ ಏನಾದರೂ ಸಿಕ್ಕೇ ಸಿಗುತ್ತದೆ, ಆದರೆ ಅವರ ಕೊಡುಗೆ ಅಂತಹವುಗಳನ್ನು ಮೀರಿಸಿದ್ದೇ ಸರಿ. ಅವರನ್ನು ಸೂಪರ್-ಸ್ಟಾರ್ ಆಗಿಸಿದ ಜನತೆ ಅವರಿಂದ ಅವರು ಅಪಾರವಾಗಿ ಪ್ರೀತಿಸುತ್ತಿದ್ದಿರಬಹುದಾದ ಪ್ರೈವಸಿಯನ್ನು ಕಿತ್ತುಕೊಂಡುಬಿಟ್ಟಿತು. (ತಮ್ಮ ೪೦-ರ ವಯಸ್ಸಿನ ಸಿನೆಮಾದ್ದಲ್ಲದ ಫೋಟೋಗಳಲ್ಲಿ ರಾಜ್ ನನಗೆ ಯಾವತ್ತೂ ಎಲ್ಲರಿಗೂ ಗೊತ್ತಿದ್ದಕ್ಕಿಂತ ಹೆಚ್ಚು ಸಂಕೀರ್ಣವಾದ ವ್ಯಕ್ತಿಯಾಗಿ ಕಾಣಿಸುತ್ತಿದ್ದರು.) ಅವರು ಹೆಚ್ಚು ಸೂಕ್ಷ್ಮವಾದ ಪಾತ್ರಗಳಲ್ಲಿ ತೊಡಗಿಕೊಳ್ಳದಂತಾಯ್ತು, ಲಕ್ಷ್ಮೀನಾರಾಯಣ್-ರಂತಹವರ ಸಿನೆಮಾಗಳಲ್ಲಿ ಮಾಡುವುದು ಇನ್ನು ಮುಂದೆ ಕಷ್ಟವಾಗಿಬಿಟ್ಟಿತು. ವಯಸ್ಸಾದವರ ಪಾತ್ರಗಳಲ್ಲಿ (ಅದೇ ಕಣ್ಣು, ತ್ರಿಮೂರ್ತಿ, ಜೀವನ ಚೈತ್ರ, ದೇವತಾ ಮನುಷ್ಯ) ಅದ್ಭುತವಾಗಿ ನಟಿಸುತ್ತಿದ್ದ ರಾಜ್ ಅಂತಹ ಪಾತ್ರಗಳನ್ನು ಹೆಚ್ಚಾಗಿ ಮಾಡಲಾಗಲಿಲ್ಲ. ಅವರೊಂದು ಸಂಸ್ಥೆಯಾದ ನಂತರ, ಒಂದು ಸಂಸ್ಥೆಗೆ ಬರಬಹುದಾದ ವೈಪರೀತ್ಯಗಳನ್ನೆಲ್ಲಾ 'ದೇವರೇ' ಎನ್ನುವ ನಿರ್ಲಿಪ್ತತೆಯಲ್ಲಿ ಎದುರುಗೊಂಡರು.

ಆದರೆ, ಅದೆಲ್ಲವನ್ನೂ ಹಸನ್ಮುಖಿಯಾಗಿ ಒಂದು ದಿವ್ಯ-ಗಾಂಭೀರ್ಯ ಮೌನದಿಂದ ನಡೆಸಿದರು. ಸೂಪರ್-ಸ್ಟಾರ್-ಗಿರಿಗೆ ಜೀವಂತಿಕೆ, ಮನುಷ್ಯತ್ವಗಳಿಂದ ಬರುವ ಪ್ರೀತಿ-ಗೌರವಗಳನ್ನು ತಂದುಕೊಟ್ಟರು. ಸೂಪರ್-ಸ್ಟಾರ್-ಗೆ ಹೇಳಿ ಮಾಡಿಸಿದ ಪಾತ್ರಗಳನ್ನೂ ತಮ್ಮ ವ್ಯಕ್ತಿತ್ವ ವಿಶೇಷದಿಂದ ಮಣ್ಣಿಗೆ ಹತ್ತಿರವಾಗಿಸಿದರು. ಸಾಧ್ಯವಿದ್ದೆಡೆಗಳಲ್ಲೆಲ್ಲಾ ತಮ್ಮ ಕಲಾನೈಪುಣ್ಯವನ್ನು ಮೆರೆದರು. ಕ್ರಮೇಣ ತೆರೆಯಿಂದ ಮರೆಯಾದರೂ, ಕನ್ನಡ ಭಾವಲೋಕವನ್ನು ಅದಾವ ಬಗೆಯಲ್ಲಿ ಶ್ರೀಮಂತಗೊಳಿಸಿದ್ದರೆಂದರೆ, ನನ್ನಂಥವರು ಪ್ರತಿದಿನವೂ ಯಾವುದಾದರೂ ಕಾರಣ, ಯಾವುದೇ ಪ್ರಜ್ಞಾಪೂರ್ವಕ ಪ್ರಯತ್ನವಿಲ್ಲದೇ, ರಾಜ್-ರ ನೆನಪು ತಂದುಕೊಳ್ಳದೇ ಇರಲು ಅಸಾಧ್ಯ ಎನ್ನುವ ರೀತಿಯಲ್ಲಿ ಬದುಕಿದ್ದರು.

ನಟರಾಗಿ, ಕಲಾವಿದರಾಗಿ ಕನ್ನಡ ನಾಡಿಗೆ ರಾಜ್-ರ ಕೊಡುಗೆಯೇನೆಂಬುದು ನಾಡಿಗೇ ಗೊತ್ತಿದೆ. ಜವಾಬ್ದಾರಿಯುತ ಸಾಮಾಜಿಕರಾಗಿ, ಗೋಕಾಕ್ ಚಳುವಳಿಯ ಮೂಲಕ ನಾವೆಲ್ಲರೂ ಉಸಿರಾಡುವಂತೆ ಮಾಡಿದ್ದಾರೆ. ಅವುಗಳಿಗೆ ಕಲಶವಿಟ್ಟಂತೆ ಅವರ ಮತ್ತೆರಡು ಪ್ರಮುಖ ಕೊಡುಗೆಗಳಿವೆ. ಒಂದು, ಎಷ್ಟೆಲ್ಲಾ ಆಮಿಷ, ಒತ್ತಡದ ನಡುವೆಯೂ ಅವರು ರಾಜಕೀಯಕ್ಕೆ ಬರದೇ ಕಲಾವಿದರಾಗೇ ಇದ್ದದ್ದು. ತಮ್ಮ ಕ್ಷೇತ್ರ ಯಾವುದು, ಯಾವುದು ಉಚಿತ ಎನ್ನುವುದರ ಚಿಂತನೆಯಲ್ಲಿ, ಒಂದು ಅಗ್ನಿ ಪರೀಕ್ಷೆಯಲ್ಲಿ ರಾಜ್ ಗೆದ್ದರು. [ಅದಕ್ಕೆ ಪ್ರತಿಯಾಗಿ ನೋಡಿ, ಇಂದು ಯಾವನೇ ಒಬ್ಬ ಕೈಗಾರಿಕೋದ್ಯಮಿ ತನ್ನ ಕ್ಷೇತ್ರದಲ್ಲಿ ಹಣ ಮಾಡುವಲ್ಲಿ ಯಶಸ್ವಿಯಾದನೆಂದರೆ, ತನಗೆ ಸಂಬಂಧವಿಲ್ಲದ ಮಂಡಳಿಗಳ ಸದಸ್ಯನಾಗುವುದಕ್ಕೆ ಹಿಂಜರೆಯುವುದಿಲ್ಲ]. ರಾಜ್ಯವನ್ನೂ ಗೆಲ್ಲಿಸಿದರು. ಎರಡನೇಯದು, ಅವರು ಮಿಸ್ ವರ್ಲ್ಡ್ ಕಾಂಟೆಸ್ಟ್-ನ ಅಧ್ಯಕ್ಷತೆ ವಹಿಸದೇ ಕನ್ನಡ ಸಂಸ್ಕೃತಿಯನ್ನು ಎತ್ತಿಹಿಡಿದದ್ದು. ಇವುಗಳನ್ನು ಮತ್ತಷ್ಟು ವಿವರಿಸುವ ಅಗತ್ಯವಿಲ್ಲವೆನ್ನಿಸುತ್ತದೆ.

ಪರೋಕ್ಶ್ಯವಾಗಿ ಅವರಿಂದಾದ ಒಳ್ಳೆಯದನ್ನು ನಾವ್ಯಾರೂ ಲೆಕ್ಕವಿಡಲು ಸಾಧ್ಯವಿಲ್ಲ. ತಮ್ಮ ೧೫-ನೇ ವಯಸ್ಸಿನಲ್ಲಿ ಗಂಧದ ಗುಡಿ ಸಿನೆಮಾ ನೋಡಿ ಪ್ರಭಾವಿತರಾಗಿ ಅರಣ್ಯ ಇಲಾಖೆಯನ್ನು ಸೇರಿದ ೪ ಜನರನ್ನು ನಾನೇ ಭೇಟಿಯಾಗಿದ್ದೇನೆ.

ಕನ್ನಡ ನಾಡಿಗೆ ರಾಜ್-ರ ಕೊಡುಗೆ

ಕಲಾವಿದರಾಗಿ, ಸಾಮಾಜಿಕರಾಗಿ, ಇತಿಹಾಸ ಪುರುಷರಾಗಿ ಅವರ ಮಹತ್ವ, ವೈಶಿಷ್ಟ್ಯಗಳೇನು, ಹೇಗೆ ರಾಜ್ ಪರಂಪರೆ, ಆಧುನಿಕತೆಗಳ ಒಂದು ಪ್ರಮುಖವಾದ ಕೊಂಡಿಯಾದರು ಎನ್ನುವುದನ್ನು ನಮ್ಮ ಹಿರಿಯ ಚಿಂತಕರಾದ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ ಸಮಗ್ರವಾಗಿ ಕೊಟ್ಟಿದ್ದಾರೆ. ನನಗೆ ಅಸ್ಪಷ್ಟವೆನ್ನಿಸಿದ್ದು ಹಿರಿಯರ ಮಾತುಗಳಲ್ಲಿ ತಿಳಿನೀರಿನ ಸ್ಪಷ್ಟತೆ ಪಡೆದುಕೊಂಡಿದೆಯಾದ್ದರಿಂದ, ಅವುಗಳನ್ನು ಯಥಾವಾತ್ತಾಗಿ ಇಲ್ಲಿ ಕೊಟ್ಟಿದ್ದೇನೆ.

ಪ್ರಜಾವಾಣಿಯಲ್ಲಿ ಡಾ| ಯು.ಆರ್. ಅನಂತಮೂರ್ತಿ: "ಕನ್ನಡಿಗರು ತಮ್ಮನ್ನು ಕನ್ನಡಿಗರು ಎಂದು ಗುರುತಿಸಿಕೊಳ್ಳುವಂತಾಗಲು, ಯಾವುದೇ ಸಾಹಿತಿಗಿಂತ ಹೆಚ್ಚಿನ ಕೊಡುಗೆ ನೀಡಿದವರು ರಾಜಕುಮಾರ್. ತಮ್ಮ ಚಿತ್ರಗಳಲ್ಲಿ ಅವರು ಪ್ರತಿಪಾದಿಸಿಕೊಂಡು ಬಂದ ಮಧ್ಯಮ ವರ್ಗದ ಆದರ್ಶ ಮೌಲ್ಯಗಳು ಅವರ ಈ ಕೆಲಸದಲ್ಲಿ ನೆರವಾದವೆನುವುದು ಬಹಳ ಮುಖ್ಯ. ಅವರ ಪೌರಾಣಿಕ ಚಿತ್ರಗಳಲ್ಲಿ ಸಾಮಾಜಿಕೆ ನೆಲೆ ಇರುತ್ತಿತ್ತು. ಅದೇ ರೀತಿ ಆರ ಸಾಮಾಜಿಕ ಚಿತ್ರಗಳಲ್ಲಿ ಪೌರಾಣಿಕ ಶೋಭೆ ಇರುತ್ತಿತ್ತು. ಇದು ಕಲಾವಿದನೊಬ್ಬನಲ್ಲಿ ಸಾಮಾನ್ಯವಾಗಿ ಕಾಣಿಸದ ಅಸಾಮಾನ್ಯ ಗುಣ. ರಾಜ್ ಅವರ ಇನ್ನೂ ಹೆಚ್ಚಿನ ಕೊಡುಗೆ ಎಂದರೆ ೨೦ನೇ ಶತಮಾನದ ಒಂದು ಕಾಲಘಟ್ಟದ ಎಲ್ಲ ಅಪೇಕ್ಷೆಗಳನ್ನೂ ಅವರು ಪೂರೈಸಿದರೆನ್ನುವುದು. ನಿಜಜೀವನದಲ್ಲಿ ಮುತ್ತುರಾಜ್ ಆಗಿಯೇ ಉಳಿದ ಒಂದು ಹಿರಿಮೆ ರಾಜ್ ಅವರದು. ಅವರ ಆ ಸರಳತೆಯಲ್ಲೂ ಅವರ ಅಭಿಮಾನಿಗಳು ಆರಾಧ್ಯ ದೈವವನ್ನು ಅವರಲ್ಲಿ ಕಂಡರು. ಪ್ರತಿಯಾಗಿ ಅಭಿಮಾನಿಗಳನ್ನು ದೇವರು ಎಂದೇ ಅವರು ಭಾವಿಸಿದರು. ಇದು ನಿನಯವಂತನಾದವನಿಗೆ ಮಾತ್ರವೇ ಸಿದ್ಧಿಸುವ ಗುಣ". ಇದಲ್ಲದೇ, ಅನಂತಮೂರ್ತಿಗಳು ರಾಜ್ ಅವರು ಕುವೆಂಪು-ಗೆ ಮೊದಲು ಕರ್ನಾಟಕ ರತ್ನ ಬರಬೇಕೆಂದು ಪ್ರತಿಪಾದಿಸಿದ್ದು, ಗ್ರಾಂಥಿಕ ಭಾಷೆ ಮತ್ತು ಉಚ್ಛಾರಗಳಿಂದ ಕೂಡಿದ ಕನ್ನಡವನ್ನು ಕೃತಕವಾಗದ ರೀತಿ ಬಳಸಿದ್ದು ಮುಂತಾದ ಮಹತ್ವಪೂರ್ಣ ವಿಷಯಗಳತ್ತ ನಮ್ಮ ಗಮನ ಸೆಳೆದಿದ್ದಾರೆ.

ಪ್ರಜಾವಾಣಿಯಲ್ಲಿ ಗಿರೀಶ್ ಕಾರ್ನಾಡ್: "ಬೇಡರ ಕಣ್ಣಪ್ಪ ಚಿತ್ರ ಬಂದುದು ಮತ್ತು ಕರ್ನಾಟಕ ಏಕೀಕರಣವಾದುದು ತುಸು ಹೆಚ್ಚು ಕಡಿಮೆ ಎರಡು ಮೂರು ವರ್ಷದ ಅಂತರದಲ್ಲಿ. ಕನ್ನಡದ ಮಹತ್ವದ ಅರಿವಾಗುವುದರ ಜೊತೆಜೊತೆಗೇ ತಮ್ಮ ಚಿತ್ರಗಳ ಮೂಲಕ ಕನ್ನದವನ್ನು ಜನಪ್ರಿಯಗೊಳಿಸಿದ ರಾಜ್ಕುಮಾರ್ ಕಾರ್ಯಕ್ಕೆ ಕಲಾತ್ಮಕ ಮಹತ್ವಕ್ಕಿಂತ ಐತಿಹಾಸಿಕ ಮಹತ್ವವೇ ಹೆಚ್ಚಿನದು. ಶಿಕ್ಷಿತರ ಸಂಖ್ಯೆ ಪ್ರತಿಶತ ೧೫.೨೦ರಷ್ಟಿದ್ದ ಕಾಲದಲ್ಲಿ ಕನ್ನಡ ಭಾಷೆಯನ್ನು ಹಳ್ಳಿಗಳಲ್ಲಿ, ದುಡಿಯುವ ವರ್ಗದಲ್ಲಿ, ಮಹಿಳಾ ಸಮುದಾಯದಲ್ಲಿ ಜನಪ್ರಿಯಗೊಳಿಸಿದ ಅನನ್ಯ ಸಾಧನೆ ಅವರದು. ಕನ್ನಡ ಭಾಷಾ ಸಂಬಂಧವಾಗಿ ನಡೆದ ಪ್ರತಿಯೊಂದು ಚಳುವಳಿಯಲ್ಲೂ ಅವರು 'ಸ್ಟಾರ್' ಆಗಿ ಪಾಲ್ಗೊಳ್ಳದೇ ತಮ್ಮ ಸಕ್ರಿಯ ಪಾತ್ರದಿಂದ 'ನಾಯಕನೇ' ಆದರು ಎನ್ನುವುದು ವಿಶೇಷ. ಹಾಗೆ ನೋಡಿದರೆ ನಮ್ಮ ಬಹುತೇಕ ಪ್ರಮುಖ ಬರಹಗಾರರಿಗಿಂತ ಆಳವಾದ ಕನ್ನಡತನವನ್ನು ರಾಜ್ ಮುಟ್ಟಿದ್ದರು. ಅದು ಅವರ ಚಿತ್ರಗಳಲ್ಲಿ, ಅವರ ವರ್ತನೆಯಲ್ಲಿ ಎದ್ದು ಕಾಣುತ್ತಿತ್ತು". ಇಷ್ಟೇ ಅಲ್ಲದೇ, ರಾಜ್-ಗಿದ್ದಿರಬಹುದಾದ ಕನ್ನಡ ಗ್ರಾಮೀಣ ಸಂಸ್ಕೃತಿಯ ಸಂಋದ್ಧ ಹಿನ್ನೆಲೆಯ ಕುರಿತೂ ಕಾರ್ನಾಡ್ ಬೆಳಕು ಚೆಲ್ಲಿದ್ದಾರೆ. [ಕನ್ನಡ ವಾಣಿಜ್ಯ ಮಂಡಳಿ ರಾಜ್-ಗೆ ಅರ್ಪಿಸಿದ್ದ ನುಡಿನಮನದಲ್ಲಿ ಮಾತನಾಡಿದ ಕಾರ್ನಾಡ್ ಪ್ರಪ್ರಥಮ ಬಾರಿಗೆ ಅಷ್ಟೊಂದು ಚಪ್ಪಾಳೆ ಗಳಿಸಿದರು ಎನ್ನಿಸುತ್ತದೆ. ಅವರಿಗೆ ಹೇಳಲಿಕ್ಕೆ ಮತ್ತಷ್ಟು ಇದೆಯೆನ್ನಿಸಿತ್ತು, ಆದರೆ ಸಮಯದ ಅಭಾವವಿತ್ತು ಅಲ್ಲಿ. ನಾಟಕ ಅಕ್ಯಾಡಮಿಯ ಸಮಾರಂಭದಲ್ಲಾದರೆ ಆ ಅವಕಾಶ ಸಿಗುತ್ತಿತ್ತು].

ಹಾಗೆಯೇ, ಬರಗೂರು ರಾಮಚಂದ್ರಪ್ಪನವರು ಬೆವರಿನ ಮನುಷ್ಯನೇ ಬಂಗಾರದ ಮನುಷ್ಯನಾದ ಪ್ರಕ್ರಿಯೆಯನ್ನು ವಿವರಿಸಿ, ರಾಜ್-ರ ಬೆಳವಣಿಗೆಯ ಏಕಕಾಲದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಯಾಮಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಹಲವಾರು ಪ್ರಮುಖ ವಿಷಯಗಳನ್ನು ಅಗ್ನಿ ಶ್ರೀಧರ್, ರವಿ ಬೆಳಗೆರೆ, ಬಂಜಗೆರೆ ಜಯಪ್ರಕಾಶ್ ತಮ್ಮ ಶ್ರದ್ಧಾಂಜಲಿಗಳಲ್ಲಿ ಪ್ರತಾಪಿಸಿದ್ದಾರೆ. ಕಥೆಗಾರ ವಸುಧೇಂದ್ರ ರಾಜ್-ರ ಕುರಿತ ತಮ್ಮ ವೈಯಕ್ತಿಕ ಅನುಭವವನ್ನು ಒಂದು ಕಥೆಯಾಗಿಸಿ, ರಾಜ್ ಎಂಬ ಸಾಮಾಜಿಕ ಪ್ರಕ್ರಿಯೆಯ ಒಂದು ಮುಖ್ಯವಾದ ರೂಪಕವನ್ನೂ ಚಿತ್ರಿಸಿದ್ದಾರೆ. ವಿಜಯಕರ್ನಾಟಕದಲ್ಲಿ ಪ್ರಕಟವಾದ ರಾಜ್ ಕುರಿತ ಜಯಂತ ಕಾಯ್ಕಿಣಿಯವರ ಬರಹವನ್ನು ಓದಿಯೇ ಆಸ್ವಾದಿಸಬೇಕು.

ಇದೆಲ್ಲಾ ಇಲ್ಲಿ ಏಕೆ ಕೊಟ್ಟಿದ್ದೇನೆಂದರೆ, ರಾಜ್ ಎನ್ನುವ ಪ್ರಕ್ರಿಯೆಯ ಅನೇಕ ಮಹತ್ವಪೂರ್ಣ ಮಜಲುಗಳು ಇವುಗಳಲ್ಲಿ ಅರ್ಥಪೂರ್ಣವಾಗಿ ಪ್ರತಿಫಲಿತವಾಗಿದೆ ಎನ್ನುವ ಕಾರಣಕ್ಕಾಗಿ.

ರಾಜ್ ಮತ್ತು ಕನ್ನಡತನ

ಅವರನ್ನು ಬಲ್ಲ ಪ್ರತಿಯೊಬ್ಬರಿಗೂ ರಾಜ್-ರ ವ್ಯಕ್ತಿತ್ವ-ವಿಶೇಷದ ಬಗ್ಗೆ ಒಂದು ಚಿಕ್ಕದಾದರೂ ಹೊಸದಾದ ಒಳನೋಟ ಬೀರುವ ಮಾಹಿತಿಯಿದ್ದೀತು. ಈ-ಟಿಇ-ಯಲ್ಲಿ ರಾಜ್ ಆಲೂರು ಎಂಕಟರಾಯರನ್ನು ಭೇಟಿಮಾಡದ್ದನ್ನು ಸುರೇಶ್ ಹೆಬ್ಳೀಕರ್ ವರ್ಣಿಸುವಾಗ ಹಾಗೆನ್ನಿಸಿತು. ನಿಸಾರ್ ಅಹಮದ್, ಜಿ.ವಿ.ಮಾಲತಮ್ಮನವರು ಭಾವಪರವಶರಾದಾಗ ಹಾಗೆನ್ನಿಸಿತ್ತು. ೭-೮ ವರ್ಷದ ದೊಡ್ಡ ಸ್ಟಾರ್ ಎಂದರೇನೆಂದು ಗೊತ್ತಿಲ್ಲದಾಗ ಒಮ್ಮೆ ನಾನು ರಾಜ್-ರನ್ನು ಮಲ್ಲೇಷ್ವರದಲ್ಲಿ ದೂರದಿಂದ ನೋಡಿದ್ದೆ ಕೆಲ ನಿಮಿಷಗಳಷ್ಟೇ. ಅದನ್ನೇಕೆ ಇಂದಿಗೂ ಮರೆಯುವುದಕ್ಕಾಗಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವುದು ಕಷ್ಟ.

ರಾಜ್-ರ ಕುರಿತು ಸ್ನೇಹಿತರ ಜೊತೆ ಚರ್ಚಿಸುತ್ತಿದ್ದಾಗ, ನನ್ನ ಸ್ನೇಹಿತರೊಬ್ಬರಾಡಿದ ಮಾತುಗಳು ಮತ್ತೆ ನನ್ನದೇ ಎನ್ನುವಷ್ಟು ಮನತಟ್ಟಿತು. ಅವರ ಅನುಮತಿಯಂತೆ ಇದನ್ನಿಲ್ಲಿ ದಾಖಲಿಸುತ್ತಿದ್ದೇನೆ. "ರಾಜ್ ಒಂದು ಇಮೇಜ್ ಆಗೇ ನನಗೆ ಗೊತ್ತಿರುವುದು. ಆ ಇಮೇಜ್ ಅವರ ಸಾರ್ವಜನಿಕ ಇಮೇಜ್ ಅಲ್ಲ. ಅದು ನನ್ನ ಭಾವಲೋಕಕ್ಕಷ್ಟೆ ಸೀಮಿತವಾದ ಒಂದು ಖಾಸಗಿ ಇಮೇಜ್. ಅವರ ಸಾರ್ವಜನಿಕ ಇಮೇಜ್-ಗೂ, ನನ್ನ ಮನಸ್ಸಿನಲ್ಲಿರುವ ರಾಜ್‍ಗೂ, ನಿಜವಾದ ರಾಜ್‍ಗೂ ಅಗಾಧ ವ್ಯತ್ಯಾಸಗಳಿದ್ದರೆ ನನಗಂತೂ ಆಶ್ಚರ್ಯವಾಗುವುದಿಲ್ಲ. ನನ್ನ ಭಾವಲೋಕದಲ್ಲಿ, ನೆನಪುಗಳ ಸಂಗ್ರಹದಲ್ಲಿ ಹುದುಗಿರುವ ರಾಜ್ ಎಂಬ ಇಮೇಜ್ ನನ್ನ ಭಾವಲೋಕವನ್ನು ಸಾಕಷ್ಟು ಶ್ರೀಮಂತಗೊಳಿಸಿದೆ ಎಂದು ನಿಸ್ಸಂಕೋಚವಾಗಿ ಹೇಳಬಲ್ಲೆ." ಇದು ನನ್ನನ್ನು ತೀವ್ರವಾಗಿ ಆಲೋಚನೆಗೆ ಈಡು ಮಾಡಿತು.

ಇತ್ತೀಚಿಗೆ, ರಾಜ್-ರನ್ನು ನೆನೆದಾಗಲೆಲ್ಲಾ ನನಗೆ ಒಂದು ಘಟನೆ ಜ್ಞಾಪಕ ಬರುತ್ತಿರುತ್ತದೆ. ಬಿ.ವಿ.ಕಾರಂತರ ಆತ್ಮಕಥೆಯಾದ (ವೈದೇಹಿ ಸಂಪಾದಿಸಿರುವ) 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಗುಬ್ಬಿ ಕಂಪನಿಯಲ್ಲಿ ರಾಜ್ ಒಮ್ಮೆ ಘಾಸಿಗೊಂಡಿದ್ದ ಅಳಿಲೊಂದನ್ನು ಉಪಚರಿಸಿ ಸಾಕಿದ್ದು, ಇವರು ಊರಲ್ಲಿಲ್ಲದಾಗ ಅದು ಸತ್ತಿದ್ದು, ವಿಷಯ ತಿಳಿದ ರಾಜ್ ಭೋರೆಂದು ಅಳುತ್ತಾ ಬಂದು, ಒಂದು ವಾರ ಅಳುತ್ತಾ ಮಲಿಗಿದ್ದರಂತೆ. ರಾಜ್ ತಮ್ಮ ಕಡೆಯ ಕ್ಷಣದವರೆಗೂ ತಮ್ಮ ಈ 'ಮುತ್ತುರಾಜ್' ಸಂವೇದನೆಗಳನ್ನು ಬಿಟ್ಟುಕೊಡಲೇ ಇಲ್ಲ. ಕನ್ನಡಿಗರ ಮನದಾಳದಲ್ಲಿ ರಾಜ್ ಮನೆಮಾಡಲು ಇದೇ ಎಲ್ಲಕ್ಕಿಂತ ಹೆಚ್ಚು ಕಾರಣ ಎಂದು ನನ್ನ ಗ್ರಹಿಕೆ.

ರಾಜ್ ಬರಿಯ ನಟರಾಗಿದ್ದಿದ್ದರೆ, ಸೂಪರ್ ಸ್ಟಾರ್ ಆಗಿದ್ದರೆ ಅವರನ್ನು ನಾವು ಈ ಬಗೆಗಳಲ್ಲಿ ನೆನೆಯುತ್ತಿರಲಿಲ್ಲ. ರಾಜ್ ಕನ್ನಡ ಸಂಸ್ಕೃತಿಯ ಒಂದು ಮಹತ್ತರವಾದ ಸಾಧ್ಯತೆಯ ಮನುಷ್ಯರೂಪವಾಗಿದ್ದರು. ಬದುಕಿನ ಕಷ್ಟ, ಅಸಂಗತಗಳ ಜೊತೆಗೆ ಅವಿನಾಭಾವ ಸಂಬಂಧವಿದ್ದ ಭಕ್ತಿ-ಶ್ರದ್ಧೆಗಳನ್ನು ರಾಜ್ ಕಾಪಾಡಿಕೊಂಡು ಬಂದಿದ್ದರೆನ್ನಿಸುತ್ತದೆ. ಅವರಿಗೆ ಬೀರಪ್ಪ ದೇವರಿಗೂ, ರಾಮ ಕೃಷ್ಣರಿಗೂ, ಭೂಮಿ ತಾಯಿಗೂ, ಕನ್ನಡ ತಾಯಿಗೂ ನಡುವೆ ವ್ಯತ್ಯಾಸವಿರಲಿಲ್ಲ. ಕನಕದಾಸ, ಕಾಳಿದಾಸ, ರಾಘವೇಂದ್ರ-ಸ್ವಾಮಿ, ಕಣ್ಣಪ್ಪ, ಪುಲಿಕೇಶಿ, ಮಯೂರ, ತುಕಾರಾಂ, ಗೋರಾ, ಹಿರಣ್ಯಕಷಿಪು - ಇವೆಲ್ಲವುಗಳನ್ನು (ತೋರಿಕೆಯಲ್ಲದ, ವ್ಯಾವಹಾರಿಕವಲ್ಲದ) ಏಕರೂಪವಾದ ಭಕ್ತಿಯಿಂದ, ಶ್ರದ್ಧೆಯಿಂದ ನಿರ್ವಹಿಸಬಲ್ಲವರಾಗಿದ್ದರು. ಕನ್ನಡ ನಾಡಿನಲ್ಲಿ ಜಾತಿಯ ಕಾರಣಕ್ಕೆ ವಿವಾದಕ್ಕೊಳಗಾಗದ ಕೆಲವೇ ಕೆಲವು ಅಪ್ರತಿಮರಲ್ಲಿ ರಾಜ್ ಒಬ್ಬರಾಗಿದ್ದರು. ಅವರು ಕಂಡ ಕೂಡಲೇ ಮನಸ್ಸಿನಲ್ಲಿ ಒಂದಿಷ್ಟಾದರೂ ಸಾಮಾನ್ಯಕ್ಕಿಂತ ಮಿಗಿಲಾದ ಭಕ್ತಿ-ಗೌರವ ಹುಟ್ಟಿರದೇ ಇದ್ದ ಕನ್ನಡಿಗ ವಿರಳ. ಕನಿಷ್ಠ ತಮ್ಮೆಲ್ಲಾ ನಾಯಕ ಪಾತ್ರಗಳನ್ನು ತಮ್ಮ ವ್ಯಕ್ತಿತ್ವ ವಿಶೇಷವಾದ ತಾಯ್ತನದಿಂದ ನಿರ್ವಹಿಸಿದರು (೫೦-ರ ೬೦-ರ ದಶಕದ ಅವರ ನಾಯಕಿಯರಿಗೆ ರಾಜ್-ರ ಜೊತೆ ನಟಿಸುವಾಗ ಅವರ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ ನೆನಪಾಗುತ್ತಿದ್ದರೇ ಎಂದು ಸ್ವಲ್ಪ ಅತಿಶಯವಾಗಿ ನಾನು ಆಗಾಗ ಅಚ್ಚರಿಪಡುತ್ತಿದ್ದುದುಂಟು). ಕನ್ನಡ ಸಂಸ್ಕೃತಿಯಲ್ಲಿ ಸಾಧ್ಯವಾಗಿದ್ದ ಮನುಷ್ಯತ್ವದ ಧಾರೆಗಳ ಆವಾಹನೆಯಿಂದ, ಆ ಪಾತ್ರಗಳೆಲ್ಲವೂ ನಮ್ಮ ಪಕ್ಕದ ಮನೆಯಲ್ಲಿ ಇದ್ದಿರಬಹುದು ಎನ್ನುವಂತೆ ಸಾಧ್ಯವಾಗಿಸಿದರು, ಪಾತ್ರಗಳಿಗೆ ಮಣ್ಣಿನ ಲೇಪನವನ್ನು ಇತ್ತರು. ಸಾಮಾನ್ಯವಾಗಿ ನಮ್ಮ ಹಬ್ಬ-ಹರಿದಿನಾಚರಣೆಗಳಲ್ಲಿ ಗಂಡಸರ ಸ್ವಪ್ರದರ್ಶನದ ಮಂತ್ರಘೋಷಗಳ ನಂತರ, ಹೆಂಗಳೆಯರು ಮನೆವಾರ್ತೆಯಷ್ಟೇ ಸಹಜವಾಗಿ ದೇವರಿಗೆ ಆರತಿಯೆತ್ತಿ ಹಾಡುವ ತೆರದಲ್ಲಿ ರಾಜ್ ತಮ್ಮ ಪಾತ್ರಗಳನ್ನು ನಿರ್ವಹಿಸಿದರು. ಅತಿಶಯೋಕ್ತಿಯೇ ಮುಖ್ಯವಾಗಿದ್ದ, ಆ ಕಾಲದ ಪ್ರಭುತ್ವದ ಜೊತೆಗಿನ ಅನುಸಂಧಾನವೂ ಕಾರಣವಾಗಿ ಸೃಷ್ಟಿಗೊಂಡಿರಬಹುದಾದ ಕಂಪನಿ ನಾಟಕಗಳ ಅಭಿವ್ಯಕ್ತಿ ಮಾರ್ಗವೊಂದಕ್ಕೆ ಭೂಮಿಯ ಸಂಪರ್ಕ ಸಾಧ್ಯವಾಗಿಸಿ ಜೀವಂತಿಕೆಯನ್ನು ತಂದಿಟ್ಟರು. ಆ ಮಾರ್ಗದ ಒಟ್ಟೂ ಸಾಧ್ಯತೆಯನ್ನು ಸೃಷ್ಟಿಸಿದವರಿಗಿಂತಾ ಹೆಚ್ಚಿನ ರೀತಿಯಲ್ಲಿ ಜೀವಿಸಿದರು. ಈ ಎಲ್ಲಾ ಸಂವೇದನೆಗಳಿಂದಲೇ ಗೀತೆಗಳನ್ನು ಹಾಡಿದರು, ಗಾಯನದ ಸಹಜ ಇಂಪಿಗೆ ಮಾತಿನ ಸಂವೇದನೆಗಳನ್ನು ಬೆಸೆದರು. ಒಟ್ಟು ವ್ಯಕ್ತಿತ್ವವನ್ನು ಎಲ್ಲದರಲ್ಲಿ ತೊಡಗಿಸಿಕೊಂಡರು. ಈ ಕಾರಣಕ್ಕೇ ಅವರ ಪಾತ್ರಗಳು ತಂದೆ, ತಾಯಿ, ದೈವಭಕ್ತಿ, ಪ್ರೀತಿ ಎಂದೆಲ್ಲಾ ಮಾತುಗಳನ್ನಾಡಿದರೆ ನಮಗದು ನಿಜವೆನ್ನುವಂತಾಯ್ತು.

ನಮ್ಮ ಕಾಲದಲ್ಲಿ, ಕೆ.ವಿ.ಸುಬ್ಬಣ್ಣನವರು ಎಲ್ಲವೂ ಕಾಣುವಂತಹ ಜಾಗವೊಂದನ್ನು ತಮಗಾಗಿ ಸೃಷ್ಟಿಸಿಕೊಂಡರೆ, ರಾಜ್ ಎಲ್ಲರಿಗೂ ಕಾಣುವಂತಹ ರೀತಿಯಲ್ಲಿ ಬೆಳೆದರು, ಅದಕ್ಕೆ ತಮ್ಮನ್ನು ಒಡ್ಡಿಕೊಂಡರು. ಹೀಗೆ ಎಲ್ಲರೂ ಇವರಲ್ಲಿ ತಮ್ಮವರೊಬ್ಬರ ಗುಣ ಕಾಣುವ ಹಾಗೆ ಬದುಕುವುದು ಸಾಮಾನ್ಯವಾದ ವಿಷಯವಲ್ಲ. ನಮ್ಮ ಕಾಲದಲ್ಲಿ, ಎಲ್ಲರಿಗೂ ದಕ್ಕುವಂತಹ ಶ್ರೇಷ್ಠತೆಯ ಮಾದರಿಯೊಂದನ್ನು ಸೃಷ್ಟಿಸಿದ ಕೆಲವರಲ್ಲಿ ರಾಜ್ ಅಗ್ರಗಣ್ಯರು. ಇಷ್ಟಾದರೂ, ನಮ್ಮ ಸಾಂಸ್ಕೃತಿಕ ಲೋಕದ ಮಿಕ್ಕ ಪ್ರಮುಖ ಧಾರೆಗಳು ರಾಜ್-ರ ಜೊತೆಗೆ ಅಂತಹ ಸಂವಾದಕ್ಕೆ ತೊಡಗದೇ ಹೋದ್ದು ಕನ್ನಡಕ್ಕಾದ ನಷ್ಟವೆನ್ನಬೇಕು. ಮಿಕ್ಕವರು ಹೋಗಲಿ. ಜನಪ್ರಿಯ ಧಾರೆಗಳಲ್ಲಿ ಬದುಕುತ್ತಿದ್ದ ಮಹನೀಯರ ಬಗ್ಗೆ ಕೆ.ವಿ.ಸುಬ್ಬಣ್ಣನವರು ವಿಶೇಷವಾದ ಆಸಕ್ತಿ, ಗೌರವಗಳನ್ನು ಇಟ್ಟುಕೊಂಡಿದ್ದರು. ಅವರಿಗೂ ರಾಜ್ ಜೊತೆಗೆ ಇದು ಸಾಧ್ಯವಾಗದೇ ಹೋದದ್ದು ನಾನು ಎಂದಿಗೂ ದುಃಖಿಸುವ ವಿಷಯ. ಪ್ರಾಯಶಃ ೭೦-ರ ದಶಕದಲ್ಲಿ ರಾಜ್ ಸಮುದಾಯದ ಅಗತ್ಯವಾಗಿದ್ದ ಸೂಪರ್ ಸ್ಟಾರ್ ಆಗದೇ ವರನಟರಾಗಿ ಮಾತ್ರ ಉಳಿದಿದ್ದರೆ ಸಾಧ್ಯವಿತ್ತೇನೋ. ಆದರೆ, ಹೀಗಾಗಿದ್ದರೆ ಕನ್ನಡ ಸಾಂಸ್ಕೃತಿಕ ಲೋಕ ಏನನ್ನು ಗಳಿಸುತ್ತಿತ್ತು ಮತ್ತು ಕಳೆದುಕೊಳ್ಳುತ್ತಿತ್ತು ಎನ್ನುವುದು ಜಟಿಲವಾದ ವಿಚಾರ. ಗೋಕಾಕ್ ಚಳುವಳಿಯ ಯಶಸ್ಸಿಗೆ ರಾಜ್ ಸೂಪರ್ ಸ್ಟಾರ್ ಆಗಿದ್ದುದು ಕೂಡಾ ಒಂದು ಮುಖ್ಯವಾದ ಕಾರಣ ಎನ್ನುವುದನ್ನು ಮರೆಯದಿರೋಣ.

ಮನುಷ್ಯನ ಜೀವನದಲ್ಲಿ ಒಟ್ಟಾಗಿ ಬದುಕುವ ಆಸೆ, ಬೇರೆಯಾಗುವಾಸೆ ಜೊತೆಜೊತೆಯಲ್ಲೇ ಇರುತ್ತದೆ. ಎರಡಕ್ಕೂ ಅರ್ಥಪೂರ್ಣವೆಂದೆನ್ನಿಸುವ ಕಾರಣಗಳು ಬೇಕಿರುತ್ತವೆ. ನಮ್ಮ ಕಾಲದಲ್ಲಿ, ಹೀಗೆ ನಾವೆಲ್ಲರೂ ಯಾವುದಾದರೂ ಒಂದರ ಕುರಿತು ಭಾವುಕರಾಗುವುದರ ಮೂಲಕ ಒಟ್ಟಾಗುವುದಕ್ಕೆ ರಾಜ್ ಕಾರಣರಾಗಿದ್ದಾರೆ. ನನಗಿದು ಮಹತ್ತರವಾದ್ದೆನ್ನಿಸುತ್ತದೆ. ರಾಜ್-ರ ನೆನಪು ಸದಾ ಕಾಲ ಮನಸ್ಸು-ಹೃದಯಗಳನ್ನು ತುಂಬಿಸುತ್ತದೆ, ಕಣ್ಣು ತೇವವಾಗುವುದನ್ನು ತಡೆಯುವುದು ಕಷ್ಟ. ಕನ್ನಡಕ್ಕಂತೂ ರಾಜ್ ಪ್ರಾತಃಸ್ಮರಣೀಯರಲ್ಲಿ ಪ್ರಮುಖರು.

ಕೊನೆಯ (ಕಣ್ಣೀರ) ಹನಿ

ಆದರೆ, ರಾಜ್-ರನ್ನು ಕಳಿಸಿಕೊಟ್ಟ ರೀತಿ ಮಾತ್ರ...ಅವರ ಕ್ಷಮೆ ಕೇಳುವುದಕ್ಕೂ ಸಾಧ್ಯವಿಲ್ಲವಲ್ಲ. ಬೆಂಗಳೂರಿನೆಲ್ಲೆಡೆ ರಾಜ್-ರ ಕಟ್ ಔಟ್ ಗಳ ಕೆಳಗೆ 'ಅಣ್ಣಾ, ಮತ್ತೆ ಹುಟ್ಟಿಬಾ' ಎನ್ನುವ ಪ್ರಾರ್ಥನೆಯಿದೆ. ಆದರೆ, ಆ ನೈತಿಕ ಹಕ್ಕನ್ನೇ ನಾವು ಕಳೆದುಬಿಟ್ಟಿದ್ದೀವೇನೋ ಅನ್ನಿಸುತ್ತಿದೆ. ಅಣ್ಣನಿಗೆ ನಮ್ಮ ಪ್ರಾರ್ಥನೇ ಮುಟ್ಟಲಾರದೇನೋ, ಮುಟ್ಟಿದರೂ ಕಿವಿಗೊಟ್ಟಾರು ಎಂದೇನು ಗ್ಯಾರಂಟೀ. ಆದದ್ದನ್ನು ನೋಡಿದ ಮೇಲಂತೂ, ಜನ್ಮ ಜನ್ಮಾಂತರಕ್ಕೂ ನಾವು ಕ್ಷಮೆಗೆ ಅರ್ಹರಲ್ಲ ಎನ್ನಿಸತೊಡಗಿದೆ.

1 Comments:

At 8:32 AM, Blogger . said...

Shivu, Blog nalli photo haaku, illdidre vodake tumba kashta aguthe mathu "context specific" photographs idre artha kooda spashta agutte.

 

Post a Comment

<< Home