ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Wednesday, January 18, 2006

ಐಐಎಂ ಸೀಮೋಲ್ಲಂಘನ


ಪ್ರಸ್ತುತ ಐ.ಐ.ಎಂ.-ನ ಸಿಂಗಾಪುರ್ ಪ್ರಸಂಗ ಎಲ್ಲರಿಗೂ ತಿಳಿದಿರುವಂಥದ್ದೇ. ಪ್ರಗತಿ, ಬೆಳವಣಿಗೆ-ಯ ಆಶೆಯಲ್ಲಿರುವ ಸಂಸ್ಥೆ ಸಾಗರೋಲ್ಲಂಘನ ಮಾಡಿ ಸಿಂಗಾಪುರದಲ್ಲಿ ಮತ್ತೊಂದು ಸಂಸ್ಥೆ ತೆರೆಯಬೇಕೆಂದಿದೆ. ಇದು ಯಾವ ರೀತಿಯ ಸೀಮೋಲ್ಲಂಘನವೋ ಎನ್ನುವುದು ಸದ್ಯಕ್ಕೆ ಸ್ಪಷ್ಟವಿಲ್ಲ.

ಈ ಹೊತ್ತಿನಲ್ಲಿ ಕೆಲ ಪ್ರಶ್ನೆಗಳನ್ನು ಕೇಳಬೇಕೆಂದೆನ್ನಿಸಿದೆ. ಒಂದು ಸಂಸ್ಥೆಯ ಸ್ವಾಯತ್ತತೆಯ ಸೀಮೆಗಳೇನು. ಅವು ಹೊಸದೊಂದು ಕ್ರಾಂತಿಕಾರಿ ವಿಚಾರವನ್ನು ಪ್ರತಿಪಾದಿಸುವಾಗ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆಯಾಗದ ಹಾಗೆ ನಡೆದುಕೊಳ್ಳಬೆಕಾದ ರೀತಿಯಾವುದು. ಸಾರ್ವಜನಿಕರ ಅಭಿಪ್ರಾಯಕ್ಕೆ ಮಾನ್ಯತೆ ನೀಡುವುದು ಬಿಡುವುದು ಹಾಗಿರಲಿ, ಒಂದು ಹೊಸವಿಚಾರದ ಚರ್ಚೆ ದೇಶದ ಯಾವ ವೇದಿಕೆಯಡಿ ಮತ್ತು ಯಾರ್ಯಾರ ಸಹಭಾಗಿತ್ವದಲ್ಲಿ ನಡೆಯಬೇಕು. ದೇಶ, ಜನರ ಬಗೆಗಿನ - ಸ್ವಾಯತ್ತೆಯ ಸೀಮೆಯನ್ನು ಮೀರಿದ - ಜವಾಬ್ದಾರಿಗಳು ಸಂಸ್ಥೆಗೆ ಇವೆಯೇ ಮತ್ತು ಅವುಗಳನ್ನು ಸಂಸ್ಥೆ ಹೇಗೆ ನಿಭಾಯಿಸಬೇಕು.ಇದೆಲ್ಲಾ ಯಾರಿಗೆ ಸಾಧಕ ಯಾರಿಗೆ ಬಾಧಕ ಎನ್ನುವುದನ್ನು ಯಾರು ಯಾರಿಗೆ ತಿಳಿಹೇಳಬೇಕು.

ಇವತ್ತಷ್ಟೇ ಅಲ್ಲದೆ ಔದ್ಯೋಗಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿಯ ಆರಂಭದ ಕಾಲದಿಂದಲೂ ನಮ್ಮ ಸಂಸ್ಥೆಗಳು ಜನರಿಂದ ರೂಪಿತಗೊಂಡಿದ್ದಲ್ಲ. ಅವುಗಳ ಸೃಷ್ಟಿಯಲ್ಲೇ ಭೀಕರವಾದ ಕೊಲೆಯ ಪಾಪ ಅಡಗಿದೆ. ಸೃಷ್ಟಿಯಾದ ನಂತರದಲ್ಲಾದರೂ ಸಮಾಜದ ಜೊತೆಗಿನ ಸಂಬಂಧ ನಾವು ನಿರೀಕ್ಷಿಸುವ ಜೀವಂತಿಕೆಯಿಂದ ಕೂಡಿಲ್ಲ.

ಜಾಗತೀಕರಣದ ಹಿನ್ನೆಲೆಯಲ್ಲಿ ಇವೆಲ್ಲಾ ಹೆಚ್ಚು ಸ್ಪಷ್ಟವಾಗಿ ಕಾಣುತ್ತಿರುವಂತೆಯೇ ಇಂತಹ ಪ್ರಶ್ನೆಗಳಿಗೆ ಉತ್ತರವೂ ಸುಲಭವಾಗಿ ಕಾಣುವುದಿಲ್ಲ. ಇಂತಹ ಸಾಂಸ್ಕೃತಿಕ ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸಿ ನಿಭಾಯಿಸಬಲ್ಲ ಪತ್ರಕರ್ತರು ಕಾಣುತ್ತಿಲ್ಲ.

ಅನುಮಾನ, ವಿಷಾದಗಳಿಗೆ ಕೊನೆಯಿಲ್ಲ.

0 Comments:

Post a Comment

<< Home